Wednesday, July 30, 2025

ಕುಸುಮ ಷಟ್ಪದಿ (ಗೀತೋಪದೇಶ)

ಗೀತೆಯನು ನೀಡಿರುವ
ದಾತನವ ಪರಮಾತ್ಮ
ನೀತಿಯನು ಬೋಧಿಸಿಹ ಬುವಿಯ ಧರ್ಮ |
ಆತುರದ ಮನಗಳಿಗೆ
ಕಾತುರದ ಸಮಯಕ್ಕೆ
ನಾಥ ನೀಡಿದ ನಮಗೆ ಬದುಕೊ ಮಾರ್ಗ ||

ಯುದ್ಧ ಭೂಮಿಯ ಬದುಕು
ಗೆದ್ದು ಬಾಯೆಂದಿಹನು
ಬುದ್ಧಿ ಮಾತನು ಹೇಳಿ ಭಗವಂತನು |
ಮದ್ದು ಗುಂಡುಗಳಿಲ್ಲ
ಯುದ್ಧ ಮನದಾಳದಲಿ
ಬುದ್ಧಿ ನಿಗ್ರಹಿಸಲೀ ಪೆದ್ದು ಮನವ ||

ಕೆಲಸವನು ಮಾಡುತಿರು
ಫಲ ಕೊಡುವ ಪಾತ್ರನಿರೆ
ಕೆಲಸ ಮಾಡದೆ ಬೇರೆ ದಾರಿಯಿಲ್ಲ |
ಕೆಲವರಿರೆ ಸಾತ್ವಿಕರು
ಕೆಲ ರಾಜ ತಾಮಸಿಕ
ಬೆಳೆಸು ಸಾತ್ವಿಕತೆ ಮುಕ್ತಿಯನು ಪಡೆಯೆ ||

ಕಾಯವಿದು ನಶ್ವರವು
ಸಾಯುದಿಹ ಆತ್ಮ ನೀ
ಕಾಯುವುದು ನಿನಗೆ ಮತ್ತೊಂದು ಕಾಯ |
ಮಾಯೆಯಾ ಪರದೆಯನು
ಹಾಯಾಗಿ ತೊಲಗಿಸುವ
ಜೀಯ ನಮಿಸುವೆ ನಿನಗೆ ಪರಮಾತ್ಮನೆ ||