Saturday, December 26, 2020

ಪಕ್ಷಗಳು

 ಪೂರ್ವಜರು ನಿಪುಣರು ರಾಜಕೀಯದಲಿ,

ಕಟ್ಟಿದರು ಪಕ್ಷಗಳ ದೇವರ ಹೆಸರಿನಲಿ!

ಮೂಕ ದೇವರುಗಳು ಆದರು ಮುಖಂಡರು,

ಸೂತ್ರದ ಬೊಂಬೆಗಳ ಆಡಿಸಿದರು ಪ್ರಚಂಡರು!


ಪಕ್ಷದ ಚಿನ್ಹೆಗಳು ಹಣೆಹಣೆಗಳ ಮೇಲೆ,

ಆಚಾರ, ಸಂಪ್ರದಾಯಗಳು ಎಲ್ಲಕ್ಕಿಂತ ಮೇಲೆ!

ಉಡುಗೆತೊಡುಗೆಗಳಲ್ಲೂ ಪಕ್ಷದ್ದೇ ಪ್ರಭಾವ

ಚಿಂತನೆಯ ಮಂಥನಕ್ಕಷ್ಟೇ ಅಭಾವ!


ಪಕ್ಷ ಪಕ್ಷಗಳ ನಡುವೆ ದೊಡ್ಡ ಗೋಡೆಗಳು,

ಪಕ್ಷಾಂತರಿಸಲು ಬಿಡದ ಭದ್ರ ಕೋಟೆಗಳು!

ಹಣೆಯ ಮೇಲಿನ ಚಿನ್ಹೆ ಬದಲಿಸುವುದು ಕಷ್ಟ,

ದೇವರು ಮುನಿದರೆ ಆಗುವುದು ನಷ್ಟ!


ಕಾಲಕ್ರಮೇಣ ಚಿನ್ಹೆಗಳು ಇಳಿದರೂ ಹಣೆಯಿಂದ

ಮನೆಯ ಮಾಡಿವೆ ಮನಸಿನಲಿ ಸ್ವಚ್ಛಂದ!

ಅಂದಿನ ಪಕ್ಷಗಳೇ ಇಂದಿನ ಜಾತಿಧರ್ಮಗಳು,

ಅವುಗಳ ನೆರಳಲೇ ರಾಜಕೀಯ ಪಕ್ಷಗಳು!

ಗುರುದರ್ಶನ

ದರುಶನವ ನನಗೆಂದು ಕೊಡುವೆ?

ನಿನಗಾಗಿ ಕಾಯುತಿಹೆ ಗುರುವೆ

ನೀ ಬಂದೇ ಬರುವೆ ಎಂದು, ಬಂದು

ದಾರಿ ತೋರುವೆ ಎಂದು!


ಕಗ್ಗಂಟು ಬದುಕಿದು, ಕಾಡಂಥ ಜಗವಿದು,

ಕಣ್ಣಿಗೆ ಬಟ್ಟೆ ಕಟ್ಟಿದ ಪಾಡು ನನ್ನದು!

ದಾರಿ ಕಾಣದು, ಸಮಯ ನಿಲ್ಲದು,

ಕೈ ಇಡಿದು ನಡೆಸುವ ಭಾರ ನಿನ್ನದು. 


ಬಂದೆನೇಕೋ ನಾ ಈ ಬುವಿಗೆ,

ತಿಳಿಯಡಿಸು ಬಾ ಇಂದು ನನಗೆ,

ಅಂಧಕಾರದಿ ನಾ ಕಳೆಯುತಿಹೆ ವರುಷಗಳ,

ಮೂಡಿಸು ಚಿತ್ತದಲಿ ಬೆಳಕಿನ ಕಿರಣಗಳ!

 

ಕಣ್ಣು ತೆರೆಯುವೆ ಆಗ ಅರಿವಿನ ಬೆಳಕಿಗೆ,

ತಲೆ ಬಾಗುವೇ ನಾ ನಿನ್ನಯ ಕೊಡುಗೆಗೆ,

ಸಾರ್ಥಕವಾಗಲಿ ನಾ ಪಡೆದ ಜನ್ಮ,

ನಿರಂತರವಾಗಲಿ ಅರ್ಥಪೂರ್ಣ ಕರ್ಮ!


ತೊಲಗಾಚೆ ದೂರ 2020!

 ತುಂಬಿದ ಕಂಗಳ ವಿದಾಯ ನಿನಗೆ, 

ಮತ್ತೆ ಕಾಣದಿರು, ಕಾಡದಿರು ಓ 2020!


ದುಡಿವ ಕೈಗಳ ಕನಸಿನ ಕೆಲಸ ಕಸಿದೆ,

ದಿನದುಡಿಮೆಯವರ ಹೊಟ್ಟೆಗೆ ಹೊಡೆದೆ,

ಬದುಕನು ಭರಿಸಲಾಗದ ಬವಣೆಯಾಗಿಸಿದೆ,

ಮಿನಗುವ ಕಂಗಳಲಿ ಕಂಬನಿಯ ತುಂಬಿದೆ,

ತೊಲಗಾಚೆ ಪಾಪಿ ಓ 2020!


ಹಿರಿಯ ಜೀವಗಳು ಬೆಂದು ಬವಳಿ,

ನೋಡು ನೋಡುತಲೇ ಅಂತರ್ಧಾನರಾದರು,

ಮಿಡಿವ ಮನದಲಿ ಕಂಬನಿ ಮಡುಗಟ್ಟಿತು,

ತುಡಿವ ಎದೆಯಲಿ ನೋವು ತುಂಬಿತು,

ತೊಲಗಾಚೆ ಪಾಪಿ ಓ 2020!


ನೆನ್ನೆ ಮೊನ್ನೆ ಕಂಡ ಗೆಳೆಯರು, 

ಮನಬಿಚ್ಚಿ ಬೆರೆತು ನಕ್ಕವರು,

ತಿರುಗಿ ನೋಡುವಷ್ಟರಲಿ ಮರೆಯಾದರು,

ನಿನ್ನ ಕ್ರೂರನೋಟಕೆ ಬಲಿಯಾದರು,

ತೊಲಗಾಚೆ ಪಾಪಿ ಓ 2020!


ಕಂದಮ್ಮಗಳ ಕಲಿವ ಶಾಲೆ ಮುಚ್ಚಿಸಿದೆ,

ಹೊರಗೆ ಕಾಲಿಡುವ ಧೈರ್ಯ ಕಸಿದೆ,

ಗೆಳೆಯರೊಡನೆ ಬೆರೆಯದಂತೆ ಬಂಧಿಯಾಗಿಸಿದೆ,

ಮೃದುಮನಗಳ ಮೇಲೆ ಮಾಯದ ಬರೆಯೆಳೆದೆ, 

ತೊಲಗಾಚೆ ಪಾಪಿ ಓ 2020!


ವ್ಯಾಪಾರಗಳ ದೀವಾಳಿ ತೆಗೆದೆ,

ವ್ಯಾಪಾರಿಗಳ ಬೆನ್ನಿಗೆ ಚೂರಿ ಇಟ್ಟೆ,

ಹೊಟ್ಟೆಗೆ ಉರಿವ ಕಿಚ್ಚನ್ನಿಟ್ಟೆ,

ಉಳಿದದ್ದು ಕೇವಲ ತಣ್ಣೀರ ಬಟ್ಟೆ,

ತೊಲಗಾಚೆ ಪಾಪಿ ಓ 2020!


ಹುಚ್ಚಾದೆವು, ಪೆಚ್ಚಾದೆವು, ಬೆಚ್ಚಿದೆವು, 

ಎಲ್ಲ ಮು‌ಚ್ಚುವ ಮುಂಗೋಟಿಯ ಮರೆಯಲ್ಲಿ,

ನೋವು, ನಿರಾಸೆಗಳ ಅಡಗಿಸಿಕೊಂಡೆವು,

ತಲೆತಗ್ಗಿಸಿ ಅಸಹಾಯಕರಾಗಿ ನಿಂತೆವು,

ತೊಲಗಾಚೆ ಪಾಪಿ ಓ 2020!


ಈಗ ಹೇಳುತಿರುವೆವು ನಿನಗೆ ವಿದಾಯ,

ನೀ ಮರೆಯಾಗುತಿರುವುದು ಅಭಯಪ್ರದಾಯ,

ಶೋಕದ ಕಣ್ಣಿರು ಆವಿಯಾಗುತಿದೆ,

ಆನಂದಭಾಷ್ಪ ಮೂಡುತಿದೆ ನಿನ್ನ ಬೆನ್ನ ಕಂಡು,

ತೊಲಗು, ಇನ್ನು ನೀ ಬರಬೇಡ 2020!

Tuesday, December 1, 2020

ಲೇಖನಿ (ಹಾಯ್ಕು)

ಇತಿಹಾಸದ
ಆಗುಹೋಗುಗಳಿಗೆ
ಸಾಕ್ಷಿಪ್ರಜ್ಞೆ ನೀ

ನಿನ್ನ ಒಡಲ
ವರ್ಣಜಲವು ಎಲ್ಲ
ದಾಖಲಿಸಿದೆ!

ಆ ಖಡ್ಗಕಿಂತ
ಬಹಳ ಹರಿತ ಈ
ನಿನ್ನ ನಾಲಿಗೆ

ನನಸಾದ ಕನಸು

ಭೂಮಿಯಿಂದ ಚಿಮ್ಮಿ ಹಾರುವ,
ಚಂದ್ರ, ತಾರಾಲೋಕ ಸೇರುವ!

ನಮ್ಮ ಪ್ರೀತಿ ಗೆಲುವು ಕಂಡಿದೆ,
ಸ್ವರ್ಗಕಿನ್ನು ಮೂರೇ ಗೇಣಿದೆ!
ಕನಸುಗಳಿಗೆ ರೆಕ್ಕೆ ಮೂಡಿದೆ,
ಮನದ ಹಕ್ಕಿ ಗರಿ ಗೆದರಿದೆ!

ಕಣ್ಣಿನಲ್ಲಿ ಕಣ್ಣನಿಟ್ಟು,
ಎದೆಯ ಭಾಷೆ ನೀಡುವೆ,
ಕಣ್ಣ ಬಿಂದು ಜಾರದಂತೆ,
ರೆಪ್ಪೆಯಾಗಿ ಕಾಯುವೆ!

ತಡವು ಏಕೆ ಇನ್ನು ಗೆಳತಿ,
ಬಂದಿಹಿದು ನಮ್ಮ ಸರತಿ,
ಪ್ರೇಮಲೋಕ ಸೃಷ್ಟಿಸಲು,
ಹೊಸ ಸ್ವರ್ಗ ನಿರ್ಮಿಸಲು!

ಬಾನನೆಲ್ಲ ತೋಟ ಮಾಡುವ,
ಪ್ರೀತಿಯೆಲ್ಲ ಧಾರೆ ಎರೆಯವ,
ಬಿರಿದ ಕೆಂಪು ಗುಲಾಬಿಗಳ,
ಪ್ರೇಮಿಗಳಿಗೆ ಹಂಚಿ ಬಿಡುವ!

ಪರಮಾಪ್ತ ಹೇ ಸುಬ್ರಮಣ್ಯ

ಶ್ರೀ ಬಾಲಸುಬ್ರಮಣ್ಯಂ ಅವರಿಗೆ ಮತ್ತೊಂದು ಗೀತನಮನ.
ಅವರೇ ಹಾಡಿರುವ ಇನ್ನೊಂದು ಹಾಡಿನ ಮೂಲಕ ಅವರಿಗೆ
ಮತ್ತೊಮ್ಮೆ ನನ್ನ ನುಡಿನಮನ



ಮಲಗು ನೀ ಪರಮಾಪ್ತ ಹೇ ಸುಬ್ರಮಣ್ಯ
ಹಾಡೆಂಬ ಗಾಂಧರ್ವ ದಿವ್ಯ ತಲ್ಪದ ಮೇಲೆ
ಮಲಗು ನೀ ಪರಮಾಪ್ತ ಬಾಲ ಸುಬ್ರಮಣ್ಯ - ಆಪ್ತರೆದೆರಾಜ

ಕೃಷ್ಣನಿಗೆ ಯಶೋದೆ ಲಾಲಿ ಹಾಡಿದ ರೀತಿ
ಮಹಾತಾಯಿ ಜೋಗುಳವ ಹಾಡಿ ನಲಿದಾ ರೀತಿ
ನಿನ್ನ ಹಾಡನೆ ಹಾಡಿ ... ಗಾನ ಸೇವೆಯ ನೀಡಿ ...
ನಿನ್ನ ಹಾಡನೆ ಹಾಡಿ ... ಗಾನ ಸೇವೆಯ ನೀಡಿ ...
ಧನ್ಯನಾಗುವೆ ಇಂದು ಕೇಳು ನೀ ದಯಮಾಡಿ
ಮಲಗು ನೀ ಪರಮಾಪ್ತ ಹೇ ಸುಬ್ರಮಣ್ಯ
ಹಾಡೆಂಬ ಗಾಂಧರ್ವ ದಿವ್ಯ ತಲ್ಪದ ಮೇಲೆ
ಮಲಗು ನೀ ಪರಮಾಪ್ತ ಬಾಲ ಸುಬ್ರಮಣ್ಯ - ಆಪ್ತರೆದೆರಾಜ

ಕಥೆಯು ಮುಗಿಯದೆ ಇರಲಿ, ವೈಥೆಯು ಮೂಡದೆ ಇರಲಿ...
ಅನುಗಾಲ ಈ ಸೇವೆ ಸಾಗುತಲೇ ಇರಲಿ
ಗಾನ ಅರಿತವನಲ್ಲ...ಮೆಚ್ಚುಗೆ ಬೇಕಿಲ್ಲ
ಗಾನ ಅರಿತವನಲ್ಲ...ಮೆಚ್ಚುಗೆ ಬೇಕಿಲ್ಲ
ದನಿಯ ಕೇಳದೆ ಜೀವ ಕ್ಷಣ ಕಾಲ ನಿಲ್ಲದಯ್ಯ
ಮಲಗು ನೀ ಪರಮಾಪ್ತ ಹೇ ಸುಬ್ರಮಣ್ಯ
ಹಾಡೆಂಬ ಗಾಂಧರ್ವ ದಿವ್ಯ ತಲ್ಪದ ಮೇಲೆ
ಮಲಗು ನೀ ಪರಮಾಪ್ತ ಬಾಲ ಸುಬ್ರಮಣ್ಯ - ಆಪ್ತರೆದೆರಾಜ
ಬಾಲ ಸುಬ್ರಮಣ್ಯ - ಆಪ್ತರೆದೆರಾಜ

ಈ ಕಂಠ

ಆರ್ಧಶತಮಾನಕ್ಕೂ ಹೆಚ್ಚುಕಾಲ ನಾವೆಲ್ಲ 
ಗಂಧರ್ವಲೋಕದಲ್ಲಿ ತೇಲಾಡುವಂತೆ ಮಾಡಿದ 
ಗಾನಮಾಂತ್ರಿಕ ಎಸ್ಪಿಬಿ ಅವರಿಗೆ
ನನ್ನ ಹೃದಯಾಳದ ನಮನಗಳು. ಅವರು ಮತ್ತೊಮ್ಮೆ 
ಹುಟ್ಟಿಬಂದು ಮುಂದಿನ ಪೀಳಿಗೆಗಳನ್ನೂ ಹೀಗೆಯೇ 
ರಂಜಿಸಲಿ ಎಂದು ಹಾರೈಸಿ, ಅವರಿಗೆ ನನ್ನ ಭಕ್ತಿಪೂರ್ವಕ 
ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇನೆ.

ಅವರೇ ಹಾಡಿರುವ ಶ್ರೀಗಂಧದ ಚಿತ್ರದ ಹಾಡನ್ನು
ಅವರಿಗಾಗಿ ಬದಲಿಸಿ ಬರೆದಿದ್ದೇನೆ. ಇದು ನಾನು ಅವರಿಗೆ
ಅರ್ಪಿಸುತ್ತಿರುವ ಒಂದು ಪುಟ್ಟ ಕಾಣಿಕೆ.

ಹಾಡಲು ಮನಸ್ಸಿದ್ದವರು ಅದೇ ರಾಗದಲ್ಲಿ ಹಾಡಿದರೆ
ಅವರಿಗೆ ನನ್ನ ಈ ಅರ್ಪಣೆ ಸಾರ್ಥಕವಾಯಿತೆಂದು ಭಾವಿಸುತ್ತೇನೆ.



ಒಂದು ಅಪರೂಪದ ಕಾವ್ಯ ಈ ಕಂಠ,
ಕಂಠದಾ ಮೈಯ ತುಂಬೆಲ್ಲ ಶ್ರೀಗಂಧ!
ಒಂದು ಅಭಿಮಾನದ ಗಣಿಯು ಈ ಬಂಧ
ಗಣಿಯಾಳದ ತುಂಬೆಲ್ಲ ಶ್ರೀಗಂಧ!

ಶ್ರೀಗಂಧ, ಶ್ರೀಗಂಧ, ಶ್ರೀಗಂಧ,
ಈ ಬಂಧ, ಈ ಅಂದ ಶ್ರೀಗಂಧ!
ಶ್ರೀಗಂಧ, ಶ್ರೀಗಂಧ, ಶ್ರೀಗಂಧ,
ಈ ಬಂಧ, ಈ ಅಂದ ಶ್ರೀಗಂಧ!

ಒಂದು ಅಪರೂಪದ ಕಾವ್ಯ ಈ ಕಂಠ,
ಕಂಠದಾ ಮೈಯ ತುಂಬೆಲ್ಲ ಶ್ರೀಗಂಧ!

ಸರಳವಾಗಿ ಹಾಡುವ,
ಹೃದಯ ತುಂಬಿ ಅರಳುವ,
ಪರಮ ಪೂಜ್ಯ ಭಾವುಕ!
ಒಂದು ಚಿಕ್ಕ ಶಬ್ದದೆ,
ಕೋಟಿ ಭಾವ ನೀಡುವ,
ಚತುರ ನಮ್ಮ ಗಾಯಕ!

ಹಾಡಿದರೆ ಹಾರೈಸುವ,
ಕೇಳಿದರೆ ಪೂರೈಸುವ,
ಮೆಚ್ಚಿದರೆ ಮಗುವಾಗುವ,
ಚುಚ್ಚಿದರೆ ಮನ್ನಿಸುವ,
ದೈವ ಕೊಟ್ಟ ಕಾಣಿಕೆ!

ಶ್ರೀಗಂಧ, ಶ್ರೀಗಂಧ, ಶ್ರೀಗಂಧ,
ಈ ಬಂಧ, ಈ ಅಂದ ಶ್ರೀಗಂಧ!
ಶ್ರೀಗಂಧ, ಶ್ರೀಗಂಧ, ಶ್ರೀಗಂಧ,
ಈ ಬಂಧ, ಈ ಅಂದ ಶ್ರೀಗಂಧ!

ಒಂದು ಅಪರೂಪದ ಕಾವ್ಯ ಈ ಕಂಠ,
ಕಂಠದಾ ಮೈ ಮನವೆಲ್ಲ ಶ್ರೀಗಂಧ!

ಕುಸುಮದಲ್ಲಿ ಕಂಪಿದೆ,
ತಾಯಿಯಲ್ಲಿ ತಂಪಿದೆ,
ಎರಡು ನಿನ್ನಲಡಗಿದೆ!
ಹಣ್ಣಿಗೊಂದು ಸೊಗಸಿದೆ,
ಮಣ್ಣಿಗೊಂದು ಸೊಗಡಿದೆ,
ಎರಡು ನಿನಗೆ ಒಲಿದಿದೆ!

ಕೋಗಿಲೆಯ ಕಂಠವಿದೆ,
ಕಸ್ತೂರಿಯ ಕಂಪು ಇದೆ,
ತಂಗಾಳಿಯ ತಂಪು ಇದೆ,
ಹಸುರಿನಾ ಸೊಂಪು ಇದೆ,
ಈ ಭಾಗ್ಯ ನಮ್ಮದೇ!

ಶ್ರೀಗಂಧ, ಶ್ರೀಗಂಧ, ಶ್ರೀಗಂಧ,
ಈ ಬಂಧ, ಈ ಅಂದ ಶ್ರೀಗಂಧ,
ಶ್ರೀಗಂಧ, ಶ್ರೀಗಂಧ, ಶ್ರೀಗಂಧ,
ಈ ಬಂಧ, ಈ ಅಂದ ಶ್ರೀಗಂಧ!

ಒಂದು ಅಪರೂಪದ ಕಾವ್ಯ ಈ ಕಂಠ,
ಕಂಠದಾ ಮೈಯ ತುಂಬೆಲ್ಲ ಶ್ರೀಗಂಧ!
ಒಂದು ಆಭಿಮಾನದ ಗಣಿಯ ಸಂಬಂಧ,
ಗಣಿಯಾಳದ ತುಂಬೆಲ್ಲ ಶ್ರೀಗಂಧ!





ದೀಪಾವಳಿ

ಬಂದಿತೋ ಬಂದಿತೋ ಬೆಳಕಿನ ಹಬ್ಬ,
ಸಾರಿತೋ ಸಾರಿತೋ ಸಡಗರದ ಕಬ್ಬ!

ಗರಗರಿಯ ಹೊಸವಸ್ತ್ರ, ಥಳಥಳಿಸುವ ಆಭರಣ,
ನವಶೋಭೆ ಬಂದಿದೆ ಹೆಂಗಳೆಯರ ವದನದಲಿ.
ಲಕುಮಿತಾಯಿ ಆಗಮಿಸು, ಸೇವೆಗಳ ಸ್ವೀಕರಿಸು,
ಸಿದ್ಧವಾಗಿ ಕಾಯುತಿಹೆವು ಎಮ್ಮ ಆಶೀರ್ವದಿಸು!

ಅಮಾವಾಸ್ಯೆ ಕತ್ತಲಲೂ ಆನಂದದ ಜ್ಯೋತಿಯಿದೆ,
ಸಡಗರದ ಬೆಳಕಿನಲಿ ಊರೆಲ್ಲ ತೊಯ್ದಿದೆ!
ಬಾದಾಮಿ, ಗೋಡಂಬಿ, ಮೆರವಣಿಗೆ ಸಾಗಿದೆ,
ಸಿಹಿತಿನಿಸಿನ ಸವಿರುಚಿಯು ನಾಲಿಗೆಯ ಗೆದ್ದಿದೆ!

ಅಜ್ಞಾನದ ಅಂಧಕಾರ ಹೊಸಬೆಳಕಲಿ ಮರೆಯಾಗಲಿ,
ದೀಪಗಳ ಮಾಲೆಯಲ್ಲಿ ಜ್ಞಾನಜ್ಯೋತಿ ಬೆಳಗಲಿ.
ಬೆಳಕಿನ ಹೊಳೆ ಹರಿದು ಕೊಳೆಯನ್ನು ತೊಳೆಯಲಿ,
ಸಡಗರವು ಘಮಘಮಿಸಿ ಊರೆಲ್ಲ ಹಬ್ಬಲಿ!

ಹೂಮತಾಪಿನ ಚಿಟಚಿಟಕೆ ಕಸಿವಿಸಿಗಳು ಮರೆಯಲಿ,
ಹೂಕುಂಡದ ಹೂಮಳೆಗೆ ತಳಮಳಗಳು ತೊರೆಯಲಿ,
ಬಡಿದೆಬ್ಬಿಸೊ ಸಿಡಿಮದ್ದಿಗೆ ದಶಕಂಠರು ಬೆದರಲಿ,
ಆನಂದದ ಕ್ಷಿಪಣಿಗಳು ಆಗಸದೆಡೆಗೆ ಹಾರಲಿ!

Monday, July 27, 2020

Privacy Policy

Privacy Policy

Krishnamurthy Seetharama built the Rasaprashne app as a Free app. This SERVICE is provided by Krishnamurthy Seetharama at no cost and is intended for use as is.

This page is used to inform visitors regarding my policies with the collection, use, and disclosure of Personal Information if anyone decided to use my Service.

If you choose to use my Service, then you agree to the collection and use of information in relation to this policy. The Personal Information that I collect is used for providing and improving the Service. I will not use or share your information with anyone except as described in this Privacy Policy.

The terms used in this Privacy Policy have the same meanings as in our Terms and Conditions, which is accessible at Rasaprashne unless otherwise defined in this Privacy Policy.

Information Collection and Use

For a better experience, while using our Service, I may require you to provide us with certain personally identifiable information. The information that I request will be retained on your device and is not collected by me in any way.

The app does use third party services that may collect information used to identify you.

Link to privacy policy of third party service providers used by the app

Log Data

I want to inform you that whenever you use my Service, in a case of an error in the app I collect data and information (through third party products) on your phone called Log Data. This Log Data may include information such as your device Internet Protocol (“IP”) address, device name, operating system version, the configuration of the app when utilizing my Service, the time and date of your use of the Service, and other statistics.

Cookies

Cookies are files with a small amount of data that are commonly used as anonymous unique identifiers. These are sent to your browser from the websites that you visit and are stored on your device's internal memory.

This Service does not use these “cookies” explicitly. However, the app may use third party code and libraries that use “cookies” to collect information and improve their services. You have the option to either accept or refuse these cookies and know when a cookie is being sent to your device. If you choose to refuse our cookies, you may not be able to use some portions of this Service.

Service Providers

I may employ third-party companies and individuals due to the following reasons:

  • To facilitate our Service;
  • To provide the Service on our behalf;
  • To perform Service-related services; or
  • To assist us in analyzing how our Service is used.

I want to inform users of this Service that these third parties have access to your Personal Information. The reason is to perform the tasks assigned to them on our behalf. However, they are obligated not to disclose or use the information for any other purpose.

Security

I value your trust in providing us your Personal Information, thus we are striving to use commercially acceptable means of protecting it. But remember that no method of transmission over the internet, or method of electronic storage is 100% secure and reliable, and I cannot guarantee its absolute security.

Links to Other Sites

This Service may contain links to other sites. If you click on a third-party link, you will be directed to that site. Note that these external sites are not operated by me. Therefore, I strongly advise you to review the Privacy Policy of these websites. I have no control over and assume no responsibility for the content, privacy policies, or practices of any third-party sites or services.

Children’s Privacy

These Services do not address anyone under the age of 13. I do not knowingly collect personally identifiable information from children under 13. In the case I discover that a child under 13 has provided me with personal information, I immediately delete this from our servers. If you are a parent or guardian and you are aware that your child has provided us with personal information, please contact me so that I will be able to do necessary actions.

Changes to This Privacy Policy

I may update our Privacy Policy from time to time. Thus, you are advised to review this page periodically for any changes. I will notify you of any changes by posting the new Privacy Policy on this page.

This policy is effective as of 2020-07-27

Contact Us

If you have any questions or suggestions about my Privacy Policy, do not hesitate to contact me at .

This privacy policy page was created at privacypolicytemplate.net and modified/generated by App Privacy Policy Generator

Wednesday, July 1, 2020

ಕನ್ನಡಾಂಬೆ




















ಅಮ್ಮ ಅಮ್ಮ ಕನ್ನಡದಮ್ಮ,
ಮುದ್ದು ಭಾಷೆಯ ಕೊಟ್ಟಿಹೆಯಮ್ಮ,
ನಮ್ಮಯ ನಾಲಿಗೆ ಪಾವನವಮ್ಮ,
ಕೋಟಿ ನಮನವು ನಿನಗೆ ಅಮ್ಮ.

ಮುತ್ತಿನ ಮಣಿಗಳ ಲಿಪಿಯನು ಇತ್ತೆ,
ಸವಿ ಸವಿ ಜೇನಿನ ಪದಗಳ ಕೊಟ್ಟೆ,
ಕತ್ತುರಿಯಂತಹ ಕಂಪನು ತುಂಬಿದೆ,
ಕುತ್ತಿಗೆಯಾಣೆ ನಿನ್ನನೇ ನಂಬಿದೆ!

ರನ್ನ, ಜನ್ನ, ಪಂಪರು ಎಲ್ಲರೂ,
ಹೊನ್ನಿನ ಸಿಂಹಾಸನವನೇ ಇತ್ತರು,
ಮಹಾದೇವಿ ಅಕ್ಕ, ಬಸವೇಶ್ವರರು,
ವಚನದ ಕುಸುಮವ ಪೂಜೆಗೆ ತಂದರು!

ಕುವೆಂಪು, ಬೇಂದ್ರೆ, ಮಾಸ್ತಿಯವರು,
ರೇಶಿಮೆ ಕನ್ನಡ ಸೀರೆಯ ನೇಯ್ದರು,
ನರಸಿಂಹ ಸ್ವಾಮಿ ನಗುತ  ಬಂದರು,
ಮುಡಿಗೆ ಮೈಸೂರು ಮಲ್ಲಿಗೆ ತಂದರು!

ಬಂದರು ಬಂದರು ಸೂಟಲಿ ನಿಸ್ಸಾರು,
ನಿತ್ಯೋತ್ಸವಕೆ ಚಾಲನೆ ಕೊಟ್ಟರು!
ಅರಿಶಿನ, ಕುಂಕುಮ ಬಾವುಟ ಹಿಡಿದೆವು,
ನಿನ್ನಯ ಪೂಜಿಸೊ ಭಕ್ತರು ನಾವು!

Saturday, June 27, 2020

ಬೆಂಗಳೂರಲಿ ಕೊರೋನಾ

ಅಟ್ಟಹಾಸವ ಗೈಯುತಿದೆ ಕೊರೋನಾ,
ಬೆಂಗಳೂರನು ಮಟ್ಟ ಹಾಕುತಿದೆ ಈ  ದಿನ!

ನನಗೇನಾಗದು ಎಂದು ಬೀಗುತ್ತಿದ್ದವರಿಗೆ
ತಾನಾರೆಂದು ತೋರುತಿದೆ ಕೊರೋನಾ!
ತನ್ನ ನಿರ್ಲಕ್ಷಿಸಿ ಮೋಜು ಮಾಡಿದವರ,
ಬೆನ್ನು ಹತ್ತಿ ಕೇಕೆ ಹಾಕುತಿದೆ ಈ ದಿನ!

ಪರದೆಯ ಮುಂದೆ ಕುಳಿತು ದೇಶ ವಿದೇಶಗಳ,
ದೂರದೂರುಗಳ ವ್ಯಥೆಗಳ ನೋಡುತ್ತಿದ್ದೆವು.
ಈಗ ನಮ್ಮೂರಲೇ, ನಮ್ಮ ಗಲ್ಲಿಯಲೇ ಗೆಜ್ಜೆಕಟ್ಟಿ,
ತಾಂಡವವಾಡುತಿದೆ ನಿರ್ದಯಿ ಕೊರೋನಾ!

ಎಚ್ಚರವಿರಲಿ, ಎಚ್ಚರವಿರಲಿ ಬಂಧುಗಳೇ,
ಜಿಹ್ವಾಚಾಪಲ್ಯವ ಮನೆಗೆ ಸೀಮಿತಗೊಳಿಸಿ,
ಹೊಸ ಒಡವೆ ವಸ್ತ್ರಗಳು ಬೇಕೆ ಈಗ?
ಸತ್ತರೆ ಹೆಣದ ಮೇಲೂ ಹಾಕಲಾಗದು!

ಮಂಗಳಾರತಿಯ ಕರ್ಪೂರ ಕಾರಗಿದಂತೆ
ಮಾಯವಾಗುವ ಮನುಜ ಸದ್ದಿಲ್ಲದಂತೆ!
ಮುಖದರ್ಶನವಿಲ್ಲ, ದೇಹದಧಿಕಾರವಿಲ್ಲ,
ಬೇಕೆ ಇಂತಹ ಸಾವು? ಬೇಡ, ಬೇಡ!

Monday, June 22, 2020

ನಕ್ಕರೆ ಬೆಳದಿಂಗಳು

ಪುಟ್ಟ ಚಂದ್ರನ ಹೊಳೆವ ಕಂಗಳು,
ನಕ್ಕರೆ ಬೆಳದಿಂಗಳು!
ಅತ್ತರಂತೂ ಕಿವಿಗೆ ಇಂಪಿನ,
ನಾದಸ್ವರದ ಸ್ವರಗಳು!

ಪುಟ್ಟ ಪಾದವು ಎದೆಯ ಮೇಲೆ,
ಭರತನಾಟ್ಯವ ಮಾಡಲು,
ಥೈಯ ಥಕ್ಕ ಎಂದು ಕುಣಿದವು,
ಮನದ ಗೆಜ್ಜೆಯ ಕಾಲ್ಗಳು!

ನನ್ನ ಸ್ವರಕೆ ಕಂಗಳರಳಿ,
ನಿನ್ನ ತುಟಿಗಳು ಬಿರಿಯಲು,
ಹರಿಯಿತಿಲ್ಲಿ ನನ್ನ ಎದೆಯಲಿ,
ತಿಳಿಯ ನೀರಿನ ತೊರೆಗಳು!

ನಿನ್ನನಪ್ಪಿ ಎದೆಗೆ ಅವಚಲು,
ಏನೋ ತೃಪ್ತಿಯ ಸಾಧನೆ,
ನನ್ನ ನಾನೇ ಅಪ್ಪಿದಂತಹ,
ಮರೆಯಲಾಗದ ಭಾವನೆ!

ಮುಗ್ಧ ಮುಖದ ಮಂದಹಾಸವು,
ಕೋಟಿ ಸೂರ್ಯ ಸಮಪ್ರಭ!
ದಂತ ಮೂಡದ ನಿನ್ನ ಪೊರೆಯಲಿ,
ಏಕದಂತನು ಸರ್ವದಾ!

(ಮೊಮ್ಮಗ ಅವ್ಯಾನ್‌ ಹುಟ್ಟಿದಾಗ ರಚಿಸಿದ್ದು)

ಬಲಿಪಶುಗಳು

ಸಾಗರದ ಅಲೆಯಿಲ್ಲ, ಸುನಾಮಿಯಿಲ್ಲ,
ಆದರೂ ಕೊಚ್ಚಿಹೋಗುತ್ತಿದ್ದೇವಲ್ಲ!
ಸೆಳವ ಸುಳಿಯಿಲ್ಲ, ಪ್ರಳಯವಿಲ್ಲ,
ಆದರೂ ಮುಳುಗಿಹೋಗುತ್ತಿದ್ದೇವಲ್ಲ!

ಏನೂ ತಿಳಿಯದೇನಿಲ್ಲ, ಅರಿವಿಲ್ಲದಿಲ್ಲ,
ಆದರೂ ತಪ್ಪು ಹೆಜ್ಜೆ ಹಾಕುತ್ತಿದ್ದೇವಲ್ಲ!
ತಲೆಕಡಿವ ಕಟುಕನಿಲ್ಲ, ರಕ್ಕಸನೂ ಇಲ್ಲ,
ಆದರೂ ಬಲಿಯಾಗುತ್ತಿದ್ದೇವಲ್ಲ!

ಕರ್ತವ್ಯದ ಅರಿವಿದೆ, ಜವಾಬ್ದಾರಿಯಿದೆ,
ಆದರೂ ನಿಭಾಯಿಸುತ್ತಿಲ್ಲವಲ್ಲ!
ಸಂಬಂಧಗಳ ಬೆಸೆಯಿದೆ, ಪ್ರೀತಿಯಿದೆ,
ಆದರೂ ವಿಮುಖರಾಗುತ್ತಿದ್ದೇವಲ್ಲ!

ವಾಟ್ಸಾಪ್‌ನ ಸುನಾಮಿಯಲಿ,
ಫೇಸ್‌ಬುಕ್‌ನ ಸುಳಿಯಲ್ಲಿ,
ಟ್ವಿಟ್ಟರ್‌ನ ಅಲೆಗಳಲಿ, ಬಲೆಗಳಲಿ,
ರಕ್ಕಸರಿಗೆ ಬಲಿಶುಗಳು ನಾವೆಲ್ಲ!

ಕವಿಯ ಬಯಕೆ

ಕುಣಿಯಲಿ ನಾಲಿಗೆ ಪದಗಳ ಮೋಡಿಗೆ,
ತೂಗಲಿ ತಲೆಯು ಪ್ರಾಸದ ಸೊಂಪಿಗೆ,
ನಿಮಿರಲಿ ಕಿವಿಯು ರಾಗದ ಇಂಪಿಗೆ,
ಅರಳಲಿ ಮನವು ಸಾರದ ಬೆಳಕಿಗೆ.

ಓದಲು ಕವಿತೆ ಹಾಡದು ಹೊಮ್ಮಲಿ,
ಹಾಡಲು ಕವಿತೆ ನಾದವು ಚಿಮ್ಮಲಿ,
ಸಂಗೀತ ಬೆರೆತು ಗಾಂಧರ್ವವಾಗಲಿ,
ಎದೆಯನು ತಾಕಿ ಚೈತನ್ಯ ತುಂಬಲಿ.

ಕವಿಯ ಆಶಯ ಬೆಳಕನು ಕಾಣಲಿ,
ಓದುವ ಮನಕೆ ಮುದವನು ನೀಡಲಿ,
ಕತ್ತಲ ಕನಸಿಗೆ ಬೆಳಕನು ತುಂಬಲಿ,
ಬೆಳಕಿನ ಪಯಣಕೆ ಮುನ್ನುಡಿ ಬರೆಯಲಿ.

ಬರೆಯಲು ಆಸೆ ಇಂತಹ ಕವಿತೆ,
ನೀಡೆಯ ಶಾರದೆ ಜ್ಞಾನದ ಹಣತೆ?
ಹಚ್ಚಲು ಬೆಳಗುವ ದೀಪವನು,
ಸರಿಸಲು ಕತ್ತಲ ಪರದೆಯನು!

Sunday, June 21, 2020

ನನ್ನಪ್ಪ

ನಾ ಹುಟ್ಟುವ ಮೊದಲೇ,
ನನ್ನ ಭವಿಷ್ಯದ 
ಕನಸನು ಕಂಡವ ನನ್ನಪ್ಪ!

ನಾ ಹುಟ್ಟಲು, ಪುಟ್ಟ 
ತನ್ನನು ಕಂಡು
ಆನಂದದ ಕಡಲು ನನ್ನಪ್ಪ.

ಹೆಜ್ಜೆಯ ಹಾಕಲು 
ಕಲಿಸುತ ನನಗೆ 
ಓಡುವ ಕನಸನು ಕೊಟ್ಟಪ್ಪ.

ಆಟಕೆ, ಊಟಕೆ,
ಕೊರತೆಯ ಕಾಟವು
ಇಲ್ಲದೆ ಹಾಗೆ ಇತ್ತಪ್ಪ.

ಕೋಪದೆ ಊಟವ
ತೊರೆದರೆ ನಾನು,
ರಮಿಸಿ ಉಣಿಸಿದ ನನ್ನಪ್ಪ.

ವಿದ್ಯೆಗೆ, ಬುದ್ಧಿಗೆ, 
ನಾಲಿಗೆ ಶುದ್ಧಿಗೆ,
ಒತ್ತನು ಕೊಟ್ಟವ ನನ್ನಪ್ಪ.

ಮಕ್ಕಳು ಬೆಳೆದು
ಸತ್ಪ್ರಜೆಗಳಾಗುವ
ಕ್ರಮಶಿಕ್ಷಣವ ಕೊಟ್ಟಪ್ಪ.

ಹೇಗೆ ಮರೆಯಲಿ
ನಿನ್ನಯ ಪ್ರೀತಿಯ?
ಮನಸಲಿ ಎಂದೂ ನೀನಪ್ಪ!

Friday, June 19, 2020

ಹೀಗೇಕೆ? ನಾವು ಹೀಗೇಕೆ?

ಭರ್ಜರಿ ಸೋಫಾ ಸೆಟ್ಟು,
ಕಾಸ್ಟ್ಲಿ ಮೇಜು ಕಪಾಟು,
ಮನೆ ಪೂರ್ತಿ ನೀಟ್ನೀಟು,
ಕಸವನು ಬೀದೀಲಿ ಹಾಕ್ಬಿಟ್ಟು!
ಹೀಗೇಕೆ? ನಾವು ಹೀಗೇಕೆ?

ವಾಟ್ಸ್ಯಾಪ್ ವೀರ ಎನ್ನುವ ಶೋಕಿ,
ಬೀದಿಯ ಕಸವ ಜಗಲಿಗೆ ಹಾಕಿ,
ಗೆಳೆಯರ ಕೋರಿಕೆ ಪಕ್ಕಕ್ಕೆ ನೂಕಿ,
ಹಾಕಿದ್ದೆ ಹಾಕಿ, ಹಾಕಿದ್ದೆ ಹಾಕಿ,
ಹೀಗೇಕೆ? ನಾವು ಹೀಗೇಕೆ?

ಟಿವಿಯ ಪರದೆಯ ನಿತ್ಯವೂ ನೋಡಿ,
ಆಗಿದೆ ನಮಗೆ ಮಾಸದ ಮೋಡಿ,
ಮನೆಯವರೆಲ್ಲ ಜೊತೆಯಲಿ ಕೂಡಿ,
ಬೆರೆಯಲು ಈಗ ಆಗದು ನೋಡಿ.
ಹೀಗೇಕೆ? ನಾವು ಹೀಗೇಕೆ?

ಎಲ್ಲರ ಕೈಲೂ ಮಾಯಾ ಗೊಂಬೆ,
ಅದರ ಪ್ರಭಾವ ಹೇಗಿದೆ ಅಂಬೆ?
ಕೊಟ್ಟರೂ ಬೇಡ ಇಂದ್ರನ ರಂಭೆ,
ಗೊಂಬೆಯ ಮುಂದದು ಗೋಸುಂಬೆ!
ಹೀಗೇಕೆ? ನಾವು ಹೀಗೇಕೆ?

ಏನಾಯಿತೆಲ್ಲರ ಸಂಬಂಧ,
ಹೃದಯದ, ಮನಸಿನ ಅನುಬಂಧ,
ಮಾಯಾಲೋಕದ ಪದಬಂಧ,
ಬಿಡಿಸಲು ಆಗದ ಘಟಬಂಧ,
ಹೀಗೇಕೆ? ನಾವು ಹೀಗೇಕೆ?

ಹೀಗೇಕೆ? ನಾವು ಹೀಗೇಕೆ?

Saturday, June 13, 2020

ಸಗ್ಗಸೀಮೆ

ಇಳೆಯ ತಳದ ದೇಶದಲ್ಲಿ,
ಭೂಮಿತಾಯಿ ನಲಿದಳು.
ಜೋಡಿದ್ವೀಪದ ನಾಡಿನಲ್ಲಿ
ದೇವಸನ್ನಿಧಿ ತಂದಳು!

ಸಗ್ಗಸೀಮೆಯ ನಾಡಿನಲ್ಲಿ,
ಭಾವ ಬುಗ್ಗೆಯು ಚಿಮ್ಮಿದೆ. 
ಕಣ್ಣ ಮುಂದಿನ ಅಂದ ಕಂಡು,
ಹೃದಯ ತುಂಬಿ ಬಂದಿದೆ. 
 
ನೀಲಿ ನಭದ ಬೆಳಕಿನಲ್ಲಿ,
ಎದೆಯ ಕಲ್ಮಶ ಕರಗಿದೆ. 
ಅರಳೆ ಮೋಡದ ಸುರುಳಿಯಿಂದ,
ಮನಸು ಹಗುರ ಎನಿಸಿದೆ. 

ಎಲ್ಲಿ ನೋಡಿದರಲ್ಲಿ ಕಾಣಿರಿ,
ಹಸಿರ ಬುಗ್ಗೆಯು ಚಿಮ್ಮಿದೆ. 
ಬುವಿಯ ಒಡಲಿನ ಪ್ರೀತಿಯಿಲ್ಲಿ,
ಬಣ್ಣದಲಿ ಹೊರ ಹೊಮ್ಮಿದೆ. 

ಧವಳ ಗಿರಿಗಳ ಶಿಖರಗಳು,
ತಲೆಯೆತ್ತಿ ಆಗಸ ಮುಟ್ಟಿವೆ.
ನೀಲಿ ನೀರಿನ ಕೊಳಗಳಿಲ್ಲಿ,
ಗಿರಿಯ ಪಾದವ ತೊಳೆದಿವೆ!

ಹಸಿರು ರೇಷಿಮೆ ಹಾಸಮೇಲೆ,
ಮೇಯೋ ಕುರಿಯ ಮರಿಗಳು,
ಹೆಣ್ಣುಮಕ್ಕಳು ಇಟ್ಟಿರುವಂತೆ,
ಬಿಳಿಯ ರಂಗೋಲಿ ಚುಕ್ಕೆಗಳು!

ಗಾಳಿಯಾಡುವ ಮಾತಿನಲ್ಲಿ,
ಮಧುರ ರಾಗವು ಮೂಡಿದೆ. 
ಎದೆಯ ನವಿರು ಭಾವಗಳಿಗೆ,
ಭಾಷೆಯೊಂದು ದೊರಕಿದೆ!

Thursday, June 11, 2020

ನೆನಪಿನ ಅಲೆಗಳು

ಸಾಗರ ತಟದೊಲು ಎನ್ನಯ ಮನವು,
ಸವೆದಿದೆ ಅಲೆಗಳ ಹೊಡೆತಕೆ ದಿನವೂ.

ಮರೆಯಬೇಕಿದೆ ದುಃಖದ ದಿನಗಳ,
ನೋವನು ಕೊಡುವ ನೆನಪಿನ ಅಲೆಗಳ!
ಪುಡಿಯಾಗುತಿದೆ ಅಲೆಗಳ ಹೊಡೆತಕೆ,
ಎದೆಯಾಗುತಿದೆ ಮರಳಿನ ಮಡಕೆ!

ನೆನಪಿಸಿಕೊಂಡು ನೋವಿನ ಕಥೆಯ,
ಸುರಿಸಿದೆ ಎದೆಯು ಕಣ್ಣೀರಿನ ವ್ಯಥೆಯ!
ಕಾಣುವುದಿಲ್ಲ ಕಣ್ಣೀರಿನ ಬಿಂದು,
ಕರಿಗಿಹೋಗಿದೆ ಜಲದಲಿ ಮಿಂದು!

ಕಣ್ಣೀರ ಕೋಡಿ ಹರಿದಿದೆ ಇಲ್ಲಿ,
ಮರಳಿನ ಕಣಗಳ ಸಾಕ್ಷಿಯಲ್ಲಿ!
ಹೆಪ್ಪುಗಟ್ಟಿದ ಹೃದಯವು ಕರಗಿದೆ,
ಸಾಗರ ಜಲವನು ಉಪ್ಪಾಗಿಸಿದೆ!

ನೆನಪಿನ ಅಲೆಗಳ ನೆರಳಿನ ಜೊತೆ,
ಮರೆಯಲು ಆಗದು ನೋವಿನ ಕಥೆ!
ಅಲೆಗಳು ನಿಂತರೆ ಪುನರ್ಜನ್ಮ,
ಗಾಳಿಯ ನಿಲ್ಲಿಸೋ ಪರಮಾತ್ಮ!

Sunday, June 7, 2020

ನಮ್ಮ ಲೋಕ

ನಮ್ಮಯ ಲೋಕ, ಹೆಮ್ಮಯ ಲೋಕ,
ಎಲ್ಲವ ಮೀರಿದ ಮಾಯಾಲೋಕ!

ಕೋಟಿ ಗ್ರಹಗಳಿಗೆ ಮುಕುಟಪ್ರಾಯ,
ನಿತ್ಯನೂತನ ಹರಯದ ಪ್ರಾಯ!
ಜೀವವ ಧರಿಸಿ, ಪ್ರೀತಿಯ ಉಣಿಸುವ,
ಬಣ್ಣದುಡುಗೆಯ ಚೆಲುವರಸಿ!

ವಿಶಾಲ ನಭದಲಿ ಹರಡಿದೆ ಹತ್ತಿ,
ಬಿಸಿಲನು ತಡೆದು ತಣಿಸುವ ಭಿತ್ತಿ.
ದಣಿದ ಬುವಿಗೆ ಕರುಣೆಯ ತೋರಿ,
ದಾಹವ ನೀಗುವ ಅಂಬರ ಪೋರಿ!

ನೀಲಿಯ ಬಾನು, ಹಸುರಿನ ಕಾನು,
ಕಾಡಿನ ಮರದಲಿ ತುಂಬಿದೆ ಜೇನು!
ಕಿವಿಯಲಿ ಗುನುಗಿದೆ ಹಕ್ಕಿಯ ಹಾಡು,
ಹೂಗಳ ಪರಿಮಳ ಸೆಳೆದಿದೆ ನೋಡು!

ಬೆಳಗಿಗೆ ಒಂದು, ರಾತ್ರಿಗೆ ಒಂದು,
ಬಾನನು ಬೆಳಗಿದೆ ಜೋಡಿದೀಪ.
ಏಳು ಬಣ್ಣಗಳ ಬೆಡಗಿನ ರೂಪ,
ರಂಗೋಲಿ‌ ಇಲ್ಲಿ ಇಂದ್ರಛಾಪ!

ಏಳುವ ದಿನಕರ ನಸುಕಿನಲಿ,
ಕುಂಚವು ಸಾವಿರ  ಕರಗಳಲಿ,
ಕೋಟಿ ಚಿತ್ರಗಳ ಬಿಡಿಸುತಲಿ,
ನಿದ್ದೆಗೆ ಜಾರುವ ಸಂಜೆಯಲಿ!

ಬಂದ, ಬಂದ, ರಾತ್ರಿಯ ರಾಜ,
ಬುವಿಗೆ ತಂದ ಹೊಸ ತೇಜ!
ಹಾಲನು ಹೊಯ್ದು, ಎದೆಯನು ತೊಯ್ದು,
ಮರೆಯಾದನು ಮನವನು ಕದ್ದೊಯ್ದು!

ಬಳಕುವ ನದಿಗಳ ಮೈಮಾಟ,
ಸಾಗರದಲೆಗಳ ಜಿದ್ದಿನ ಓಟ!
ಗಿರಿ, ಮೋಡಗಳ ಪ್ರೇಮ ಸಂಘರ್ಷ,
ತಂದಿದೆ ಕೊನೆಗೆ ಹರ್ಷದ ವರ್ಷ!

ಎಲ್ಲಿದೆ ಇಂತಹ ಮಾಯಾಲೋಕ?
ಕಾಣದ ಸ್ವರ್ಗವು ಬೇಕೇಕ?
ಇದ್ದರೂ ಗ್ರಹಗಳು  ಕೋಟಿ, ಕೋಟಿ,
ಸುಂದರ ಬುವಿಗೆ ಯಾರು ಸಾಟಿ?!


Saturday, June 6, 2020

ನಿಸರ್ಗ ಮಾತೆಯ ವ್ಯಥೆ

ನಿಸರ್ಗ ಮಾತೆಯ ಕಥೆಯ ಏನು ಹೇಳಲಿ?
ಕಣ್ಣೀರಿನ ವ್ಯಥೆಯೇ ಪ್ರತಿನಿತ್ಯ ಬಾಳಲಿ.
ಪರಿಸರಕೆ ಸಾಕೇ ಒಂದು ದಿನದ ಉತ್ಸವವು?
ಪ್ರಾಣವಾಯುವಿಲ್ಲದೆ ಹೇಗೆ ತಾನೆ ಬದುಕುವೆವು?

ನಿತ್ಯಪೂಜೆಗಿಲ್ಲಿ ಕೊಳಕುಗಳು, ಕಸಗಳು,
ಬುದ್ಧಿಮಾಂದ್ಯರಮ್ಮನಿಗೆ ಇನ್ನೆಂಥ ಬಾಳು!
ವಿಷದ ಧೂಪ ಹಾಕಿದರು ಧೂರ್ತರು, ಪಾಪಿಗಳು,
ಪ್ಲಾಸ್ಟಿಕ್ಕಿಂದ ಮುಚ್ಚಿವೆ ಶ್ವಾಸದ ನಳಿಕೆಗಳು!

ಕೊಡಲಿಯೇಟು ನಿತ್ಯವೂ ದೇಹದ ಮೇಲೆ,
ಇವರಿಗೆ ಕಲಿಸಲು ಎಲ್ಲೂ ಇಲ್ಲ ಶಾಲೆ!
ಔಷಧಿ ಆಗಿದೆ ಬಹುದೂರದ ನಂಟು,
ಗಾಯಕ್ಕೆ ಬಿದ್ದಿದೆ ಬರೆಯಂತೆ ಕಾಂಕ್ರೀಟು!

ಕಣ್ಣುತೆರೆಯಬೇಕಿದೆ ಎಲ್ಲ ಧೃತರಾಷ್ಟ್ರರು,
ಕಾಪಾಡಲು ಬರಲಿ ಪಾಂಡುವಿನ ಪುತ್ರರು!
ನಿಸರ್ಗ ಮಾತೆಗೆ ನಿತ್ಯವೂ ವೇದನೆ,
ನಿತ್ಯೋತ್ಸವವಾಗಬೇಕು ಪರಿಸರ ರಕ್ಷಣೆ!

ಬನ್ನಿ, ಎಲ್ಲ ಬನ್ನಿ, ಸೇರಿ ಮಾಡೋಣ ಶಪಥ,
ಭೂತಾಯ ರಕ್ಷಣೆಗೆ ಹುಡುಕೋಣ ಶತ ಪಥ!
ಆಗೋಣ ಬನ್ನಿ ಸ್ವಚ್ಛ ನಾಗರಿಕರು,
ನಿಸರ್ಗ ಮಾತೆಯ ಹೆಮ್ಮೆಯ ಪುತ್ರರು!

Tuesday, June 2, 2020

ತಾಯಿ-ತವರು

ತವರು ತಂಪು, ತಣ್ಗಂಪು, ತಣ್ಬನಿ,
ತಾಯಿ ತಂಬುಳಿ, ತಂಗಾಳಿ, ತಣ್ಗೊಳ.

ತಳಿರ ತಲ್ಪವು ತಾಯ ತೊಡೆಯು,
ತರುಣಾತಪವು ತಾಯ ತೆಕ್ಕೆಯು.
ತಾಯಿಲ್ಲದರೆಲ್ಲಿ ತವರು?
ತೋಂಟಿಗನಿಲ್ಲದೆಲ್ಲಿ ತೋಟವು?

ತಂತಿ ತಂಬೂರಿ, ತೊಗಲು ತಮಟೆ,
ತಳಿರು ತೋರಣ, ತುಹಿನ ತಂಪು,
ತಾವರೆ ತಟಾಕ, ತುಡುಪು ತೆಪ್ಪ,
ತಾಯಿ ತವರು, ತಾಯಿ ತವರು.

ತಂಗಳಿರಲಿ, ತುಪ್ಪವಿರಲಿ,
ತಿಮಿರವಿರಲಿ, ತಿಂಗಳಿರಲಿ,
ತಾಪವಿರಲಿ, ತಲ್ಪವಿರಲಿ,
ತುಡಿವ ತವರಿನ ತಂಪಿರಲಿ ತರಳೆಗೆ!

Monday, June 1, 2020

ಜೋಗ

ಜನಪ, ಜೋರುರವ, ಜವನ, ಜವ್ವನೆ,
ಜೊತೆಜೊತೆಯಲಿ ಜಿದ್ದಿನ ಜಲಕೇಳಿ!

ಜ್ಯೋತಿರ್ಲತೆಗಳ ಜಳಕವೋ,
ಜಾಜಿಮಲ್ಲೆಗಳ ಜಲಪಾತವೋ?
ಜುಮ್ಮೆನಿಸಿದೆ ಜೋಗದ ಜಂಪೆ,
ಜಂಬೂದ್ವೀಪದ ಜಲಜಿಂಕೆ!

ಜಟಾಜೂಟದಿಂ ಜಾರಿದ ಜಾಹ್ನವಿ,
ಜಿಗಿದಳು, ಜಿಗಿದಳು ಜುಮ್ಮನೆ.
ಜನಿಸಿದ ಜ್ಯೋತಿಯ ಜಗಮಗದಲಿ,
ಜಗದಲಿ ಜೀವನ ಜೋರಿನ ಜಲಸಾ!

ಜೀಮೂತಗಳು ಜಿನುಗಲಿ ಜಿನುಗಲಿ,
ಜಲವೃಷ್ಟಿಯು ಜೀಕಲಿ ಜೀಕಲಿ.
ಜನಿಸಲಿ ಜೀವಂತ ಜನಕರಾಗ,
ಜನುಮಕ್ಕಿರಲೊಮ್ಮೆ ಜೋಗದ ಜೋಗ!

Friday, May 29, 2020

ಮುಂದಿದೆ ಮಾರಿಹಬ್ಬ!

ನೀ ಬಂದೆ, ವಾಮನನಂತೆ,
ಜಗವನಾಕ್ರಮಿಸಿದೆ.
ಭಯಭೀತರಾದರು,
ಪ್ರಜೆಗಳೂ, ರಾಜರೂ, ಎಲ್ಲರೂ!

ಅಸ್ತ್ರಗಳೆಲ್ಲ ನಿಷ್ಪ್ರಯೋಜಕ,
ನಿನ್ನ ಶಕ್ತಿಯ ಮುಂದೆ.
ನೀನೇತಕೆ ಇಲ್ಲಿಗೆ ಬಂದೆ?
ಜಗವಾಗಿದೆ ಕುರಿಗಳ ಮಂದೆ!

ಮುಟ್ಟಿದರೆ ನಿನ್ನ,
ಕತ್ತು ಹಿಸುಕುವೆಯಲ್ಲ!
ಉರುಳುತಿವೆ ತಲೆಗಳು,
ನಿನ್ನ ನೆರಳು ಬಿದ್ದಲ್ಲೆಲ್ಲ!

ಅಡಗುದಾಣಗಳಲ್ಲಿ ನಡೆಯುತಿದೆ,
ಹೊಸ ಅಸ್ತ್ರಗಳ ಶೋಧ,
ನಿನಗಾಗಿ ಬರಲಿದ್ದಾನೆ,
ಬಲಶಾಲಿ ಯೋಧ!

ಕೊರೋನಾ, ಮುಂದಿದೆ ನಿನಗೆ,
ಕಂಡರಿಯದ ಮಾರಿಹಬ್ಬ!
ಹೆದರದೆ ನಿನ್ನೆದುರು,
ಎದ್ದು ನಿಲ್ಲುವನು ಪ್ರತಿಯೊಬ್ಬ!

Thursday, May 28, 2020

ಮನೆಯಲ್ಲೇ ಮಜಾ (ಮಕ್ಕಳ ಕವನ)



ಆಗಿದೆ, ಆಗಿದೆ, ಬೆಳ್ಳಂಬೆಳಗು,
ಮುಗಿದಿದೆ ನಿದ್ದೆಯ ಸೊಬಗು!

ಏಳು ಸ್ಕೂಲಿಗೆ ಟೈಮಾಯ್ತು,
ಸ್ನಾನಕೆ ನೀರು ಬಿಸಿಯಾಯ್ತು,
ಡಬ್ಬಿಗೆ ತಿಂಡಿ ರೆಡಿಯಾಯ್ತು,
ಎನ್ನುವ ಸದ್ದಿಲ್ಲ ಏನಾಯ್ತು?

ಓಹೋ! ಶಾಲೆಗೆ ರಜಾ!
ನಮಗೆಲ್ಲ ಈ ದಿನ ಮಜಾ!
ಚೌಕಾಬಾರಾ, ಕೇರಮ್ಮು,
ಆಡಲು ಬಂದಿದೆ ಹೊಸ ದಮ್ಮು!

ಪಾನಿ ಪೂರಿ, ಖಾರ ಪಕೋಡ,
ಅಮ್ಮನೇ ಕೊಟ್ಟರೆ ಯಾರಿಗೆ ಬೇಡ!
ಅಪ್ಪ, ಅಮ್ಮ ಜೊತೆಯಲ್ಲಿ,
ಬೇರೇನೂ ಬೇಡ ನನಗಿಲ್ಲಿ!

ಓಹೋ! ಶಾಲೆಗೆ ರಜಾ!
ನಮಗೆಲ್ಲ ಈ ದಿನ ಮಜಾ!

Monday, May 25, 2020

ಬಾರೋ ಚಂದಿರ (ಮಕ್ಕಳ ಕವನ)

ಬಾ ಬಾ ಚಂದಿರ, ಬಾರೋ ಚಂದಿರ,
ನಮ್ಮಯ ಕಂದಗೆ ಮುಖ ತೋರೋ!

ಬೆಳ್ಳಿಯ ಚೆಂದುಳ್ಳಿ ಚೆಲುವ ನೀನು,
ಚುಕ್ಕಿಗಳೊಡನೆ ಆಡುವೆಯೇನು?
ಆಡಲು ಮುದ್ದು ಕಾಯುತಿಹ,
ನಮಗೂ  ನಾಲ್ಕು ಚುಕ್ಕಿಯ ತಾ!

ಆಡಲು ಬಾರೋ, ಹಾಡಲು ಬಾರೋ,
ಕಂದನ ಜೊತೆಗೆ ಉಣ್ಣಲು ಬಾ!
ಸೊರಗುವೆ ಏಕೆ ಉಣ್ಣದೆ ನೀನು,
ಹಾಲನ್ನವ ನಾ ನೀಡುವೆ ಬಾ!

ಶಿವನ ಹತ್ತಿ ನೀ ಕುಳಿತಿಹೆಯೆಂದು,
ಮಗುವೂ ಹತ್ತಿತು ತಲೆ ಮೇಲೆ!
ನಿನ್ನನು ನೋಡಿ ಕಲಿಯುವ ಆತುರ,
ತುಂಟಾಟವು ಬೇಡ ಓ ಚತುರ!

ಓಣಿಗೆ ಬಂದೆ, ಬೆಳಕನು ತಂದೆ,
ಕಂದಗೆ ಮುದವನು ನೀ ತಂದೆ,
ಹೋಗಲು ಏಕೆ ಆತುರ ನಿನಗೆ,
ನಿನ್ನ ಒಡನಾಟ ಇರಲಿ ನಮಗೆ.

ಆಟವ ಮುಗಿಸಿ, ಊಟವ ಮುಗಿಸಿ,
ಟಾ ಟಾ ಹೇಳು ನಮ್ಮ ಪುಟಾಣಿಗೆ,
ನಾಳೆ ಮತ್ತೆ ಸೇರುವ ರಾತ್ರಿಗೆ,
ಇರುಳ ದೀಪವು ಮೂಡುವ ಹೊತ್ತಿಗೆ!

(ಕರುನಾಡು ಸಾಹಿತ್ಯ ಪರಿಷತ್ತಿನ ಮೇ ೨೦೨೦ರ  ರಾಜ್ಯಮಟ್ಟದ ಅಂತರ್ಜಾಲ ಶಿಶುಗೀತೆ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ಕವನ)

Friday, May 22, 2020

ಮುಂಜಾನೆಯ ಮಳೆ

ಧರೆಗಿಳಿದಿದೆ ಸುರಲೋಕದ,
ಅಮೃತ ಬಿಂದು.
ನವಚೇತನ, ಉಲ್ಲಾಸದ,
ರಾಗವು ಇಂದು.

ಹಸಿರುಟ್ಟಿದೆ ಭೂತಾಯಿಯು,
ನಸುಬೆಳಕಲಿ ಮಿಂದು.
ನವಪಲ್ಲವ ಚಿಗುರೊಡೆದಿದೆ,
ಹೊಸಲೋಕಕೆ ಬಂದು.

ತಂಗಾಳಿಯ ಕುಳಿರಲ್ಲಿದೆ,
ಬಿಸಿಯೇರುವ ಮತ್ತು.
ಮಗದೊಮ್ಮೆ ಮೈಮರೆತರೆ,
ಕರ್ತವ್ಯಕೆ ಕುತ್ತು.

ಪಲ್ಲಂಗವ ತೊರೆದುಬಿಡಿ,
ಧನ್ಯವಾದ ಇತ್ತು.
ಮುಂಜಾನೆಯ ಹೊಂಗಿರಣವು,
ಪಲ್ಲವಿಸುವ ಹೊತ್ತು.

Thursday, May 21, 2020

ಬಣ್ಣದ ನವಿಲು (ಮಕ್ಕಳ ಕವನ)

ನವಿಲೇ ನವಿಲೇ ಬಣ್ಣದ ನವಿಲೇ,
ಕುಣಿಯುವ ಬಾರೇ ಓ ನವಿಲೇ!

ಹಸಿರು, ನೀಲಿ, ಹೊನ್ನಿನ ಬಣ್ಣ,
ನಿನಗಾರಿತ್ತರು ಹೇಳಣ್ಣ?
ಕಾಮನ ಬಿಲ್ಲನು ನಾಚಿಸಿದೆ,
ನಿನ್ನಯ ಬಣ್ಣ ರಂಜಿಸಿದೆ!

ತಲೆಯ ಮೇಲೆ ಕಿರೀಟ ನೋಡು,
ತಾಳಕ್ಕೆ ತಕ್ಕಂತೆ ಬಳುಕಾಡು.
ಸಾವಿರ ಕಣ್ಣಿನ ಸುಂದರ ನೀನು,
ಏನೆಲ್ಲ ಕಂಡೆ ಹೇಳೆಯ ನೀನು?

ಮಳೆಯನು ತರುವ ಮೋಡವ ಕಂಡರೆ,
ಕುಣಿಯುವೆ, ನಲಿಯುವೆ, ಮನಸಾರೆ!
ನಿನ್ನ ಕುಣಿತದ ಸಂಭ್ರಮ ಕಂಡು,
ಇಳಗೆ ಇಳಿದಿದೆ ಹನಿಗಳ ದಂಡು!

ಚಾಮರವಾಗಿದೆ ನಿನ್ನಯ ಗರಿಗಳು,
ದೇವನ ಸೇವೆಗೆ ತಂಪಿನ ಅಲೆಗಳು!
ಕೃಷ್ಣನ ಕಿರೀಟ ಏರಿದೆ ನೀನು,
ಮನಸಿನ ಕೋರಿಕೆ ತೀರಿದೆಯೇನು?

ನಮ್ಮಯ ದೇಶದ ರಾಷ್ಟ್ರಪಕ್ಷಿ,
ನಮ್ಮೆಲ್ಲರ ಹೆಮ್ಮೆಗೆ ನೀ ಸಾಕ್ಷಿ!
ದೇಶದ ಜನರಿಗೆ ಸಂತಸ ತಂದೆ,
ಹರುಷವ ಹರಡಲು ನೀ ಬಂದೆ!


Wednesday, May 20, 2020

ಮನದನ್ನ




















ಮಾತಿಲ್ಲದ ಮೌನಿ ಮಾಂತ್ರಿಕನೀತ,
ಮುಟ್ಟಿದ ಮಾತ್ರಕೆ ಮೈನವಿರೇಳಿಸಿದ!

ಮುಂಗುರುಳ ಮುಟ್ಟಿ ಮುದಗೊಳಿಸಿ,
ಮುಗುಳ್ನಗೆಯ ಮೂಡಿಸಿದನಲ್ಲ!
ಮೈಸವರಿ ಮುತ್ತಿಟ್ಟ ಮೋಡಿಯಲಿ,
ಮೊಗವೆಂಬ ಮೊಗ್ಗನರಳಿಸಿದನಲ್ಲ!

ಮಲ್ಲೆ, ಮಂದಾರಗಳ ಮೇಲುರುಳಾಡಿ,
ಮಧುರ ಮಕರಂದಗಳ ಮೂಸಿ,
ಮಾಗಿದ ಮಾವುಗಳ ಮೈದಡವಿ,
ಮೇರೆಯಿಲ್ಲದೆ ಮೆರೆಯುತಿಹನಲ್ಲ!

ಮನೆಯಲ್ಲಿ ಮರೆಮಾಡಿ ಮುಚ್ಚಿಡಲಾರಳು,
ಮಿಕ್ಕವರ ಮೈಮನವ ಮೀಟದಿರಲೆಂದು.          .
ಮುಗ್ಧ ಮಂಗಳೆಯರ ಮನದನ್ನನೀತ,
ಮುಂಜಾನೆಯ ಮಧುರ ಮಂದಮಾರುತ!

(ಎಲ್ಲ ಪದಗಳೂ ʻಮʼ ದಿಂದ ʻಮಂʼ ವೆರೆಗಿನ ಗುಣಿತಾಕ್ಷರಗಳಿಂದ ಪ್ರಾರಂಭ)

Friday, May 15, 2020

ಕೊರೋನಾ ಕಲ್ಯಾಣ


ಕೂಡಿದ ಹೃದಯಗಳೆರಡು,
ಹಡೆದಾ ಜೋಡಿಗಳೆರಡು,
ಹತ್ತಿರದವರೊಂದಿಪ್ಪತ್ತು,
ಬೇರೆ ಬೇಡ ಮದುವೆಯ ಹೊತ್ತು!

ಮೂರ್ಗಂಟಿಗೆ ಬೇಕೆ ಸಾವಿರ ಸಾಕ್ಷಿ?
ಹೂಂ ಎಂದರೆ ಸಾಕು ಮನಸಿನ ಪಕ್ಷಿ!
ನೂರಾರು ಅತಿಥಿಗಳು ಬೇಕಿಲ್ಲ,
ಸಹೃದಯರು ಹತ್ತೇ ಸಾಕಲ್ಲ!

ಕಾಣಿಕೆ ಬೇಡ, ತೋರಿಕೆ ಬೇಡ,
ದುಡಿದ ಗಂಟಿನ ಸೋರಿಕೆ ಬೇಡ!
ಊಟಕೆ ಇರಲಿ ಉಪ್ಪಿನಕಾಯಿ,
ಮದುವೆಲಿ ಇರಲಿ ಮನಸಿಗೆ ಹಾಯಿ!

ಕಳಿಸಲಿ ಎಲ್ಲರೂ ಶುಭಹಾರೈಕೆ,
ವೈಫೈ ಮಾಡಲಿ ಪೂರೈಕೆ.
ಹೀಗೇ ಆಗಲಿ ಮದುವೆಗಳು,
ನಗುತಾ ಇರಲಿ ಬದುಕುಗಳು.

ಸಮಾಜ ಸುಧಾರಕ ಕೊರೋನಾ,
ಹಿಡಿತಕೆ ತಂದಿದೆ ಖರ್ಚನ್ನ!
ಪಾಯಸ, ಹೋಳಿಗೆ, ಚಿತ್ರಾನ್ನ,
ಆಗೇ ಹೋಯಿತು ಕಲ್ಯಾಣ!

Thursday, May 14, 2020

ವಿಶ್ವ ದಾದಿಯರ ದಿನ

ಮಾತೆಯ ಮಮತೆ,
ಸೋದರಿ ಕ್ಷಮತೆ,
ಮಡದಿಯ ಕಾಳಜಿ,
ಎಲ್ಲವೂ ನಿಮ್ಮಲಿ ದಾದಿ!

ತಾ ಉರಿದು ಬೆಳಕನೀವ,
ಮೇಣದ ಬತ್ತಿಯ ತರಹ,
ರೋಗಿಯ ಬಳಲಿ ಬಂದ,
ಆರದ ಬೆಳಕಿನ ಬಂಧ!

ಮಮತೆಯ ಕರದಲಿ,
ಕರುಣೆಯ ಸ್ವರದಲಿ,
ಅಡಗಿದೆ ಅಮೂಲ್ಯ ಸೇವೆ,
ಅದೃಷ್ಟವಂತರು ನಾವೇ!

ಇಂದಿನ ದಿನವೇ ಸುದಿನವು,
ಕರುಣೆಯು ಹುಟ್ಟಿದ ದಿನವು!
ಸ್ವೀಕರಿಸಿ ಪ್ರೀತಿಯ ಸಲಾಮ್,
ಹಚ್ಚುತ್ತಿರಿ ನಗೆಯ ಮುಲಾಮ್!

Wednesday, May 13, 2020

ನನ್ನಮ್ಮ

ಬೇಡಿದ್ದನ್ನು ನೀಡುವವಳು,
ಏನನ್ನೂ ನಿರೀಕ್ಷಿಸದವಳು,
ಮಮತೆಯ ಮಡಿಲಿವಳು,
ಪ್ರೀತಿಯ ಕೊಡ ಇವಳು!

ಅನ್ನ ನೀಡಿ ಪೊರೆಯುವಳು,
ಜಲವನಿತ್ತು ಹರಸುವಳು,
ಅಕ್ಷಯ ಪಾತ್ರೆ ಇವಳು,
ಕಾಮಧೇನುವೇ ಇವಳು!

ನಮ್ಮೆಲ್ಲ ಕೋಪಗಳ,
ನಗುತ ನುಂಗಿಬಿಡುವಳು.
ನಮ್ಮ ತಪ್ಪು ಕ್ಷಮಿಸುವಳು,
ಮೂಕಳಾಗಿ ಮರಗುವಳು,

ಹಸಿರು ಸೀರೆ ಉಟ್ಟವಳು,
ಬಣ್ಣದ ನಗ ತೊಟ್ಟವಳು,
ಕ್ಷಮಯಾಧರಿತ್ರಿ ನನ್ನಮ್ಮ,
ಭೂಮಿತಾಯಿ ಇವಳಮ್ಮ.

Monday, May 11, 2020

ಅಮ್ಮ

ನನ್ನ ಮೊದಲ ಸ್ಪರ್ಶ ನೀನಮ್ಮ,
ನನ್ನ ಮೊದಲ ಪರಿಚಯ ನೀನಮ್ಮ,
ನಿನ್ನೆದೆಯ ಬಡಿತ ಜೋಗುಳವಮ್ಮ,
ನನ್ನ ಮೊದಲ ತೊದಲು "ಅಮ್ಮ"!

ನನ್ನ ಮೊದಲ ಆಟ ನಿನ್ನೊಟ್ಟಿಗೆ,
ನನ್ನ ಮೊದಲ ಪಾಠ ನಿನ್ನ ನಡೆ,
ನನ್ನ ಮೊದಲ ತುತ್ತು ನೀನಿಟ್ಟೆ,
ನನ್ನ ಮೊದಲ ಮುತ್ತು ನೀ ಕೊಟ್ಟೆ!

ನನ್ನ ಗೆಲುವೇ ನಿನ್ನ ಗೆಲುವೆಂದೆ,
ನಾನೇ ನಿನ್ನ ಜಗವೆಂದೆ.
ಜಗಕೆ ನನ್ನ ಪರಿಚಯಿಸಿದೆ,
ನನ್ನ ಜಗವ ನೀ ಸೃಷ್ಟಿಸಿದೆ!

ನಾ ಬಿದ್ದಾಗಲೆಲ್ಲ ನೀನತ್ತೆ,
ನಾ ನಕ್ಕಾಗಲೆಲ್ಲ ನೀ ನಕ್ಕೆ,
ನನ್ನ ಮೊದಲ ಏಟು ನೀ ತಿಂದೆ,
ನಿನಗಾಗಿ ನಾನೇನು ತಂದೆ?


Sunday, May 10, 2020

ಸದವಕಾಶ

ಅವಕಾಶವಿದು, ಅವಕಾಶವಿದು,
ನಮಗೆಲ್ಲ ಸದವಕಾಶವಿದು!

ತೊರೆದ ಬಂಧುಗಳ ಆಲಂಗಿಸಲು,
ಮುರಿದ ಸಂಬಂಧಗಳ ಬೆಸೆಯಲು,
ಸವಿಕುಟುಂಬದಲ್ಲಿ ಕಲೆಯಲು,
ಹಾಲು, ಜೇನಿನಂತೆ ಬೆರೆಯಲು!

ಮನೆಯ ಆಹಾರ ಮೆಚ್ಚಲು,
ಶಾಖಾಹಾರವ ಒಪ್ಪಲು,
ವಿಷಾಹಾರವ ತೊರೆಯಲು,
ಹಂಸಕ್ಷೀರ ನ್ಯಾಯದೊಲು!

ಧಾರಾವಾಹಿಗಳ ಮರೆಯಲು,
ಮುಚ್ಚಿಟ್ಟ ಪುಸ್ತಕ ತೆರೆಯಲು,
ಸದಭಿರುಚಿಗಳ ಬೆಸಿಕೊಳ್ಳಲು,
ಚಾತಕಪಕ್ಷಿಯ ಆಯ್ಕೆಯೊಲು!

ಹಸಿದ ಹೊಟ್ಟೆಗಳ ತುಂಬಲು,
ನತದೃಷ್ಟರಿಗೆ ಸಹಾಯ ಮಾಡಲು,
ಕರುಣೆ, ಮಮತೆ, ಬೆಳಸಿಕೊಳ್ಳಲು,
ಮಾತೆಯ ಪ್ರೀತಿಯ ಹೃದಯದೊಲು!

ಪರದೇಶದ ಮೋಹವ ಬಿಡಲು,
ಚೀನಿಯ ವಸ್ತು ತ್ಯಜಿಸಲು,
ಭಾರತದಲ್ಲೇ ಸೃಜಿಸಲು,
ಸ್ವಾವಲಂಬನೆಯ ಕೃಷಿ ಮಾಡಲು!

ಕೊರೋನಾ ಕೊಟ್ಟಿದೆ ಅವಕಾಶ,
ಮಾಡೋಣ ರಂಗಕೆ ಪ್ರವೇಶ,
ಹರಸುತಿಹ  ನಮ್ಮ ಪರಮೇಶ,
ಈಗ, ಎಲ್ಲೆಯೇ ಅಲ್ಲ ಆಕಾಶ!







Wednesday, May 6, 2020

ಪುಂಡ ಮಕ್ಕಳು























ನಿಸರ್ಗ ತಾಯ ಮಕ್ಕಳಿವರು
ತುಂಟರು, ತುಡುಗರು,
ಪುಂಡಾಟದಲಿ ಮಗ್ನರು,
ಮೊಂಡಾಟದಲಿ ಶ್ರೇಷ್ಠರು!

ಮಾತೆ ಇತ್ತ ಊಟದಲ್ಲಿ,
ವಿಷವ ಬೆರೆಸಿಕೊಂಡರು.
ದಾಹ ನೀಗೋ ನೀರಿನಲ್ಲಿ,
ಕಸವ ಕಲೆಸಿಕೊಂಡರು.

ಮನಬಂದಂತೆ ಆಡುವರು,
ಪರಿಣಾಮಗಳ ನೋಡರು.
ಆಟ ಆಡುತಲೇ ತಾಯ,
ಎದೆಗೆ ಲಗ್ಗೆಯಿಟ್ಟರು!

ತಾವೇ ಒಡೆಯರೆಂದು ಭ್ರಮಿಸಿ,
ಎಲ್ಲೆ ಮೀರಿ ಕುಣಿದರು,
ಮಾತೆ ಇತ್ತ ಸೂಚನೆಗಳ,
ಧಿಕ್ಕರಿಸಿ ನಡೆದರು.

ಅಗೋ ಗುಮ್ಮ ಎಂದಳು,
ಹೆದರಲಿಲ್ಲ ಮಕ್ಕಳು.
ಕೆಂಗಣ್ಣ ಬಿಟ್ಟಳು,
ಬೆದರಲಿಲ್ಲ ಮಕ್ಕಳು!

ಎನೂ ತೋಚದಾಗಿ ಅವಳು,
ಪಾಠ ಕಲಿಸೆ ಬಯಸಿದಳು.
ಕೊರೋನಾ ಗುಮ್ಮನವಳು,
ಛೂ ಎಂದು ಬಿಟ್ಟಳು!

Sunday, May 3, 2020

ನಗುವ ನೀರಾಜನ

ನಿನ್ನ ನಯನದಿ ನೋವೇಕೆ ನಲ್ಲೆ?
ನನ್ನ ನಗುವೇ ನಗಬಾರದೇ?

ನನ್ನ ನಗುವಲಿ ನಿನ್ನ ನಗುವು,
ನಂಬಿಕೆಯಿಟ್ಟು ನಕ್ಕು ನಗಲಿ,
ನಂಜು ನಶಿಸಿ, ನೋವನಳಿಸಿ,
ನಸುನಗಲಿ ನಗುವಿನ ನಸುಕಿಗೆ.

ನವವಧುವಿನೊಲು ನಗುವು ನಾಚಿದೆ,
ನಲ್ನುಡಿಗೆ ನಳಿನ, ನಗುತ ನಕ್ಕಿದೆ.
ನಳನಳಿಸುವ ನಯನದ್ವಯಗಳು,
ನಗೆಯ ನಾದವ ನುಡಿಸಿವೆ.

ನಗೆಯ ನಗವ ನನಗಿತ್ತು ನಲ್ಲೆ,
ನನ್ನ ನಗುವನು ನಗಿಸು ನೀ!
ನನ್ನ ನಗುವಿನ ನರ್ತನವಿಲ್ಲಿ,
ನಿನ್ನ ನಗುವಿನ ನೆರಳಲಿ!

ನನ್ನ ನಗುವಿಗೆ, ನಿನ್ನ ನಗುವಿಗೆ,
ನಕ್ಕು ನಲಿಯಲಿ ನಿಕೇತನ.
ನಮ್ಮ ನಗುವಿಗೆ ನಿಷ್ಪತ್ತಿಯಾಗಲಿ,
ನೂರು ನಗೆಗಳ ನೀರಾಜನ!

Friday, May 1, 2020

ಎರಡು ನೂಲು

ಋಣಧನಗಳ, ಪಾಪಪುಣ್ಯಗಳ,
ನೂಲೆರಡು ಹೆಣಿಕೆಯ ಲೋಕವಿದು!

ಹೊಳೆವ ಚಿನ್ನವೋ?
ಮಸಣದ ಬೂದಿಯೋ?
ಋಣಧನಗಳ ಜೋಡಣೆಯ,
ಕಥೆಯಲ್ಲವೇನು?

ಲಕ್ಷ್ಮೀಕಾಂತನೋ?
ದರಿದ್ರನಾರಾಯಣನೋ?
ಪಾಪಪುಣ್ಯಗಳು,
ತಂದ ವ್ಯತ್ಯಾಸವೇನೋ?!

ನೂಲೆರಡಾದರೂ,
ಹೆಣಿಕೆಯ ಕ್ಲಿಷ್ಟತೆ,
ಬಿಡಿಸಲಾಗದ ಗಂಟು,
ನಮಗಿಲ್ಲ ಸ್ಪಷ್ಟತೆ.

ಅರಿಯಹೋದಂತೆಲ್ಲ,
ಹೆಚ್ಚುವುದು ಗೋಜಲು,
ಅರಿತಿದ್ದು ಕೇವಲ,
ಅಷ್ಟೋ, ಇಷ್ಟೋ!

ಈ ಹೆಣಿಕೆಯಲ್ಲಡಗಿದೆ,
ನಾವರಿಯದ ರಹಸ್ಯ,
ಸಮಯಾಕಾಶಗಳ ರಂಗದಲಿ,
ಆಡುತಿದೆ ಲಾಸ್ಯ!

ಸಮಯದ ಗೊಂಬೆಗಳು,
ನಾವೇನು ಬಲ್ಲೆವು?
ಸೃಷ್ಟಿರಹಸ್ಯದ ಕಗ್ಗಂಟಲಿ,
ಸಿಕ್ಕಿಬಿದ್ದಿಹೆವು!

Thursday, April 30, 2020

ನಮಗಿನ್ನಾರು?













ಹುಟ್ಟಿಸಿದ ದೇವನು,
ಹುಲ್ಲು ಮೇಯಿಸನಂತೆ!
ಶಾಸ್ತ್ರ ಹೇಳುವುದಕ್ಕೆ,
ಬದನೇಕಾಯಿ ತಿನ್ನುವುದಕ್ಕೆ!

ದೇವರಿಗೂ ತಿಳಿಯದಲ್ಲ,
ನಮ್ಮ ವ್ಯಥೆಯ ಕಥೆಯು!
ಇನ್ನಾರು ಬರುವರು, ಬಂದು
ಕಣ್ಣೀರ ಒರೆಸುವರು?

ಹುಲ್ಲೂ ಇಲ್ಲ ತಿನ್ನಲು,
ಬೊಗಸೆ ನೀರಿಲ್ಲ ಕುಡಿಯಲು.
ದೇವರೇ ಕೈಬಿಟ್ಟ ಹಾಗಿದೆ,
ಆಧಾರ ಇನ್ನು ನಮಗೇನಿದೆ?

ಪ್ರತಿದಿನದ ಗಳಿಕೆಯಲಿ,
ತುತ್ತು ನಾಲ್ಕು ಹೊಟ್ಟೆಯಲಿ,
ಬದುಕ ಬಂಡಿಯ ಗಾಲಿ,
ತಿರುಗುತ್ತಿತ್ತು, ಮುಂದೆ ಸಾಗುತ್ತಿತ್ತು.

ಯಾರೋ ಸೋಂಕಿತರಾದರೆ,
ನಮ್ಮ ಹೊಟ್ಟೆಗೇಕೆ ಬರೆ?
ಮಾರಿಯು ರಂಗಕ್ಕಿಳಿದರೆ,
ನಮ್ಮ ಜೀವನಕ್ಕೇಕೆ ತೆರೆ?

ಬಂದಿದ್ದರೆ ಸೋಂಕು ನಮಗೂ,
ಇರುತ್ತಿತ್ತೇನೋ ಬೆಲೆ  ನಮ್ಮ ದನಿಗೂ,
ಕೇಳುತ್ತಿತ್ತೇನೋ ನಮ್ಮದೂ ಕೂಗು!
ಸಿಗುತ್ತಿತ್ತೇನೋ ಅನ್ನ ಕೊನೆಗೂ!



Wednesday, April 29, 2020

ಕಾಲಚಕ್ರ



















ಯುಗದ ಅಂತ್ಯದ ಬೀಜಕೆ,
ಯುಗದ ಆದಿಯ ಮೊಳಕೆ.
ಜಗಕೆ ಹಸಿರು, ಮನಕೆ ಹಸಿರು,
ಹುರುಪು ಹುರುಪಿನ ಉಸಿರು.

ಪ್ರಭವ ವಿಭವಗಳ  ಕಾಲಚಕ್ರ,
ಕುಂಬಾರ ನಿನ್ನಯ ಪ್ರಿಯಚಕ್ರ.
ವಿಕಾರಿಯ ಮಾಡಿ ಹಸಿಮುದ್ದೆ,
ಶಾರ್ವರಿಯ ರೂಪಿಸಿ ನೀ ಗೆದ್ದೆ.

ಅದೇ ಮಣ್ಣು, ಅದೇ ಬೇರು,
ಕಾಲಕಾಲಕೆ ಹೂಸ ಚಿಗುರು.
ಅಳಿಸಿದೆ ಕಾಲವು ಹೆಜ್ಜೆಯ ಗುರುತು,
ಕಾಲಕಾಲಕೆ ಹೊಸ ತಿರುವು.

ಹಳೆಯದ ಕಳಿಚಿದೆ ಸಮಯ,
ಹೊಸತನು ಧರಿಸುವ ಸಮಯ.
ಬುವಿಗಿತ್ತಿದೆ ಹಸಿರಿನ ಸೀರೆಯ,
ಬಣ್ಣ ಬಣ್ಣದ ಹೂಗಳೊಡವೆಯ.

ತಪ್ಪದ ಅನುಕರಣೆ ನಮ್ಮಗಳದು,
ಜೀವಂತ ಸಮಯದ ಗೊಂಬೆಗಳದು.
ಹೊಸ ಬಟ್ಟೆಯ, ಒಡವೆಯ ಆನಂದ,
ಕಾಯೋ ನಮ್ಮನು ಗೋವಿಂದ! 

ಮಹಾಯುದ್ಧ
















ಕತ್ತಿ ಗುರಾಣಿಗಳಿಲ್ಲ,
ಆದರೂ ಇದು ಯುದ್ಧ!
ಮದ್ದು ಗುಂಡುಗಳಿಲ್ಲ,
ಆದರೂ ಇದು ಯುದ್ಧ!

ಹೊರಗೆ ಓಡಾಡದಿರು,
ಇದು ಮಹಾಯುದ್ಧ!
ವ್ಯಕ್ತಿ ಸ್ವಾತಂತ್ರ್ಯವೆನದಿರು,
ಇದು ಮಹಾಯುದ್ಧ!

ಬರಿಗಣ್ಣಿಗೆ ಕಾಣದ ವೈರಿ,
ಯಾರದೋ ಬೆನ್ನೇರಿ ಬರಬಹುದು!
ಕರುಣೆಯೇ ಇಲ್ಲದ ಮಾರಿ,
ಯಾರನ್ನೇ ಬಲಿ ಹಾಕಬಹುದು!

ಸೋತು ತಲೆ ಬಾಗಿದರೂ ನಿಲ್ಲದು,
ಕಥೆಯ ಮುಗಿಸದೇ ಬಿಡದು!
ಮರಣ ಮೃದಂಗವ ಬಾರಿಸುತ್ತ,
ಹುರುಪಲಿ ಮುಂದೆ ಸಾಗುವುದು!

ಸಾಬೂನೇ ಕತ್ತಿ, ಮುಸುಕೇ ಗುರಾಣಿ,
ನಮ್ಮೆಲ್ಲರ  ಆತ್ಮರಕ್ಷಣೆಗೆ!
ವೈದ್ಯನೇ ಸೈನಿಕ, ಔಷಧಿಯೇ ಗುಂಡು,
ಆಸ್ಪತ್ರೆಯ ರಣರಂಗಕೆ!

ಕೂಡು ಮನೆಯಲಿ, ಬೇಡು ದೇವರನು,
ಎಲ್ಲರ ಜೀವ ಉಳಿಯಲಿ ಎಂದು,
ಜಿದ್ದಿನ ಯುದ್ಧ ಮುಗಿಯಲಿ ಎಂದು,
ವೈರಿ ಸರ್ವನಾಶವಾಗಲಿ ಇಂದು!

Tuesday, April 28, 2020

ಅಕ್ಷಯ






















ಅಕ್ಷಯ ಅಕ್ಷಯ ಅಕ್ಷಯ
ಆಸೆಗಳಿಂದು ಅಕ್ಷಯ

ದೇವರ ತಲಪುವ ಮೊರೆಗಳು ಅಕ್ಷಯ.
ಪಾದಕೆ ಬೀಳುವ ಕಾಣಿಕೆ ಅಕ್ಷಯ!

ಪತಿಯನು ಕಾಡುವ ಬೇಡಿಕೆಗಳಕ್ಷಯ.
ಮಕ್ಕಳ ಕೋರಿಕೆ ತೀರದ ಅಕ್ಷಯ!

ರಾಜಕಾರಣಿಗಳ ದಾಹವು ಅಕ್ಷಯ.
ಕುರ್ಚಿಯ ಮೇಲಿನ ಮೋಹವು  ಅಕ್ಷಯ!

ವ್ಯಾಪಾರಿಗಳ ಲೋಭವು ಅಕ್ಷಯ.
ದಲ್ಲಾಳಿಗಳ ಲಾಭವು ಅಕ್ಷಯ.

ನಿಲ್ಲಲಿ ಇಂದೇ, ಬೇಡುವ ಅಕ್ಷಯ,
ಆಗಲಿ ಇಂದು, ನೀಡುವ ಅಕ್ಷಯ!

ಆಗಲಿ ಕರುಣೆ, ಪ್ರೇಮಗಳಕ್ಷಯ,
ಆಗಲಿ ರೀತಿ, ನೀತಿಗಳಕ್ಷಯ,

ಅಕ್ಷಯವಾಗಲಿ ಕೊಡುಗೆ,
ಅಕ್ಷಯವಾಗಲಿ ಮುನ್ನಡೆಗೆ!

Sunday, April 26, 2020

ಬಂಗಾರದ ಮನುಷ್ಯ


ಮುತ್ತಿನಂಥ ಮಾತ ನೀ ಬಲ್ಲೆ,
ತಾಳಕ್ಕೆ ತಕ್ಕಂತೆ  ನೀ ಕುಣಿದೆ ,
ನಮ್ಮ ಅದೃಷ್ಟವೋ ಏನೋ,
ಕಾಲಕ್ಕೆ ತಕ್ಕಂತೆ ಬದಲಾಗಲಿಲ್ಲ!

ಹಾಲಿನಂಥ ಕನ್ನಡವನ್ನು,
ಜೇನಿನಂಥ ಕಂಠದಲ್ಲಿ ಬೆರೆಸಿ,
ಸಿಹಿಯ ಕನ್ನಡದ ಸವಿನುಡಿಯ,
ಸುಧೆಯನ್ನು ಉಣಬಡಿಸಿದೆ!

ಒತ್ತಡಗಳಿಗೆ ಮಣಿಯಲಿಲ್ಲ,
ರಾಜಕಾರಣಕೆ ಇಳಿಯಲಿಲ್ಲ,
ಕನ್ನಡವೊಂದೇ ಸಾಕೆಂದೆ,
ನೆಚ್ಚಿನ ರಾಜಕುಮಾರನಾದೆ!


ಕನ್ನಡಕ್ಕೋಸ್ಕರ ಹೋರಾಡಿದ,
ರಣಧೀರ ಕಂಠೀರವ ನೀನು!
ಸಂಪತ್ತಿಗೆ ಸವಾಲೆಸೆದ,
ಬಹದ್ದೂರ್‌ ಗಂಡು ನೀನು!

ಬೀದಿ ಬಸವಣ್ಣನೆಂದರು,
ಚೂರಿ ಚಿಕ್ಕಣ್ಣನೆಂದರು,
ತಲೆ ಕೆಡಸಿಕೊಳ್ಳದೆ ಆದೆ,
ನೀ ದೇವತಾ ಮನುಷ್ಯ!

ನಮ್ಮ ಕನ್ನಡ ನಾಡಿನಲ್ಲಿ,
ಮತ್ತೊಮ್ಮೆ ಹುಟ್ಟಿ ಬಾ,
ಬಂಗಾರದ ಮನುಷ್ಯನೇ,
ಕಾಯುತಿದೆ ಗಂಧದಗುಡಿ!

Saturday, April 25, 2020

ಆತ್ಮಾವಲೋಕನ



ದೇವರು ಕರಣಾ ಮೂರ್ತಿ,
ಸೋಲಲು ಬಿಡನು ಪೂರ್ತಿ.
ಮುಚ್ಚಿದರೆ ಹೋಗುವ ದಾರಿ,
ತೋರುವ ಬೇರೆ ರಹದಾರಿ.

ಮುಚ್ಚಿ ಮನೆಯ ಬಾಗಿಲನು,
ತೆರೆಯೋಣ ಮನದ ಕದವನ್ನು.
ಹೊರಗಿನ ಕೆಲಸವ ಮರೆತು,
ಚಿಂತಿಸೋಣ ಒಳಗಿನ ಕುರಿತು.

ಹೊರಗಿನ ಓಟದ ಓಘದಲಿ,
ಆಗಿದೆ ಸ್ವವಿಮರ್ಶೆಯ ಬಲಿ.
ಕುಳಿತು ಚಿಂತಿಸೊ ಸುಸಮಯ,
ಮತ್ತೆ ಸಿಗುವುದೇ ಈ ಸಮಯ?

ನೆನೆದು ಹಿಂದಿನ ನಡೆನುಡಿಯ,
ಗುರುತಿಸಿ ಮಾಡಿದ ಗಡಿಬಿಡಿಯ,
ಸಂಭಾಷಿಸಿ ಒಳಗಿನ ಗೆಳೆಯನೊಡೆ,
ತಿದ್ದೋಣ ನಮ್ಮ ತಪ್ಪು ನಡೆ.

ಉಳಿಯಲಿ, ಬೆಳೆಯಲಿ ಸಂಬಂಧ,
ಬಿಗಿಯಾಗಲಿ ಪ್ರೀತಿಯ ಅನುಬಂಧ.
ನಗುನಗುವ ನಲಿವ ಕುಟುಂಬಗಳು,
ದೇಶದ ಆಧಾರ ಸ್ತಂಭಗಳು!


Friday, April 24, 2020

ಅಗಲಿಕೆ



ಸಂಗ ತೊರೆದರೂ ನೀವು,
ಸಂಗ ಮರೆಯೆವು ನಾವು.

ಎಲ್ಲಿ ಹೋದಿರಿ ನೀವು,
ಇಲ್ಲೇ ಉಳಿದೆವು ನಾವು.
ನಾಳೆ ಬರುವೆ ಎಂದು,
ಹೇಳಿ ಕಣ್ಮರೆ ಇಂದು!


ಇಂಥ ಅವಸರ ಏಕೆ?
ಬಂಧು, ಮಿತ್ರರು ಸಾಕೇ?
ಮರೆತ ಮಾತುಗಳುಂಟು,
ಮೊಗ್ಗು ಭಾವಗಳುಂಟು.

ಸಾಲು ನಿಂತೆವು ನಾವು,
ಹಾಲು, ಹಣ್ಣಿಗೆ ಎಂದು.
ಸಾಲು ನಿಂತಿರಿ ನೀವು,
ಕಾಲ ದೇವನ ಮುಂದು.

ಏಕೆ ಬಿದ್ದಿರಿ ನೀವು,
ಮಾರಿ ದುಷ್ಟೆಯ ಕಣ್ಗೆ?
ದುಷ್ಟ, ದುರುಳರು ಹೇಗೆ,
ದೌಡು ಸಿಕ್ಕದೆ ಕೈಗೆ?

ಖಾಲಿ ರಸ್ತೆಗಳಿಲ್ಲಿ,
ಕಾಲ ನಿಂತಿದೆ ಇಲ್ಲಿ,
ಕಾಲು ಇಟ್ಟರೆ ಹೊರೆಗೆ,
ಲಾಠಿ ದೂಡಿತು ಒಳಗೆ!

ಸದ್ದು ಇಲ್ಲದೆ ನೀವು,
ಕಾಲು ಕಿತ್ತಿರಿ ಹೇಗೆ?
ಲೋಕ ತೊರೆದಿರಿನೀವು,
ಲಾಠಿ ತಡೆಯದ ಹಾಗೆ!

ಏಕೆ ಅಗಲಿಕೆ ನಮಗೆ?
ಯಾವ ಸಲ್ಲದ ನೆವಕೆ?
ನಾವು ಮಾಡದ ಪಾಪ,
ನೀವು ಮಾಡಿದುದುಂಟೆ?









Thursday, April 23, 2020

ಬೇಡ ಇಂಥ ಸಾವು!




ರಕ್ಕಸಿ ತರುವ ಅನಾಥ ಸಾವು,
ವೈರಿಗೂ ಬೇಡ ಇಂಥ ನೋವು!

ಸುಳಿವು ಕೊಡದೆ, ಕೈಯ ಹಿಡಿದು,
ಎದೆಯ ಗೂಡು ಸೇರಿದವಳು,
ಮಧುರ ಭಾವ ಅರಿಯದವಳು,
ಬಕಾಸುರನ ಹಸಿವಿನವಳು!

ಎದೆಯ ಹತ್ತಿ ಕುಳಿತಳವಳು,
ಶ್ವಾಸಕೋಶ ಬಗೆದಳು!
ಕತ್ತು ಹಿಸುಕಿ ಕೊಂದಳು,
ಮತ್ತೊಬ್ಬರ  ಕೈಯ ಹಿಡಿದಳು!

ಹೊರಲು ಹೆಗಲು ಸಾಲದೇ,
ಹೂಳಲು ಎಡೆಯೇ ಇಲ್ಲದೇ,
ಸುಡಲು ಸೌದೆ ಎಲ್ಲಿದೆ?
ದೇಹಗಳುರುಳಿವೆ ನಿಲ್ಲದೇ!

ಕೊನೆಗೂ ಇಲ್ಲ ದರ್ಶನವು,
ಪ್ರೀತಿಪಾತ್ರ ಬಂಧುಗಳಿಗೆ.
ಸಂಸ್ಕಾರ ಇಲ್ಲ ದೇಹಕೆ,
ಅನಾಥವಾಗಿ ಮಸಣಕೆ.

ಆಸ್ತಿ ಸಿಕ್ಕರೇನು ಬಂತು,
ಸಿಗಲೇ ಇಲ್ಲ ಅಸ್ತಿಯು.
ಕನಸಿನ ಕಥೆಯ ಹಾಗೆ,
ವ್ಯಕ್ತಿ ಮಂಗ ಮಾಯವು!

ಯಾರಿಗೂ ಬೇಡ ಇಂಥ ಗತಿ,
ಬಹುಸಂಕಷ್ಟದ ದುರ್ಗತಿ.
ಬರುವುದೆಂದು ಹತೋಟಿಗೆ?
ಕಾಯುತಿಹೆವು ಬಿಡುಗಡೆಗೆ!

Wednesday, April 22, 2020

ಯಾರೇ ನೀ ಕೊರೋನಾ?



ಹೇ ಕೊರೋನಾ, ಯಾರೇ ನೀನು?
ನಿನಗೆ ಕರುಣೆಯೇ ಇಲ್ಲವೇನು?

ಹೆಸರಿನಲಿ ಇದ್ದರೂ ಕಿರೀಟ,
ಮರೆಯದಿರು, ನೀನೊಂದು ಕೀಟ!
ರಾಣಿ ಮಹಾರಾಣಿ ಅಲ್ಲ ನೀನು,
ಸಿಂಹಾಸನ ಇಲ್ಲ ಬಲ್ಲೆಯೇನು?



ಹೇಳೇ, ನಿನ್ನ ಕುಲಗೋತ್ರವ,
ಜನ್ಮ ನೀಡಿದ ಜನಕನ ಪಾತ್ರವ.
ಹುಟ್ಟೂರಲೇ ಇದ್ದು, ಸಾಯದೆ,
ನೀ ವಿಮಾನಗಳ ಏಕೆ ಹತ್ತಿದೆ?

ಎಲೈ, ಕಾಲಿಲ್ಲದ  ಕಳ್ಳ ಕುಂಟಿ,
ಬಿಡದ ಬೇತಾಳನಂತೆ ಬೆನ್ನಿಗಂಟಿ,
ಕಾಲಿಲ್ಲದಿರೂ ಓಡುತಲಿರುವೆ,
ಶಿಷ್ಟಸಂಹಾರ ಮಾಡುತಲಿರುವೆ!

ಇನ್ನೂ ಬೇಕೆ ಬಲಿಗಳು ನಿನಗೆ?
ಏನು ಸಾಧಿಸಬೇಕಿದೆ ಕೊನೆಗೆ?
ಮುಗಿದರೆ ನಮ್ಮೆಲ್ಲರ ಜಾತ್ರೆ,
ಅದು ನಿನಗೂ ಕೊನೆಯ ಯಾತ್ರೆ!

ಅಬ್ಭಾ! ಅದೆಷ್ಟು ಕೈಗಳು ನಿನಗೆ?
ನಾಚಿಕೆ ಆಗುತಿದೆ ಅಷ್ಟಪದಿಗೆ.
ಮಣ್ಣಾದನಲ್ಲ ದಶಕಂಠನು ಕೂಡ,
ಖಂಡಿತ, ಕಾಲನು ನಿನ್ನನ್ನೂ ಬಿಡ!

Monday, April 20, 2020

ವಿಧಿಯಾಟ



ಈ ವಿಧಿಯಾಟದ ಮರ್ಮವೇನು?
ನಾವು ಮಾಡಿದ ಕರ್ಮವೇನು?

ನಾಡಲಿ ಸ್ವಚ್ಛಂದದ ಪ್ರಾಣಿಗಳು,
ದಾರಿಕಾಣದೆ ಬೋನು ಸೇರಿದವಲ್ಲ!
ಹಾರಾಡೋ ಹಕ್ಕಿಗಳು ನೆಲಕಚ್ಚಿ,
ಬಾಯಿಮುಚ್ಚಿ, ಗೂಡು ಸೇರಿದವಲ್ಲ!

ಮನೆಯ ಮೂವರದು ಮೂರು ದಾರಿ,
ಈಗವರದು ಒಂದೇ ಕೂಡುಕುಟುಂಬ!
ಒಟ್ಟಿಗೆ ಊಟ, ಒಟ್ಟಿಗೆ ಆಟ, ನೋಟ,
ಹಿಂದೆಂದೂ ಕಾಣದ ವಿಧಿಯ ಆಟ!

ನೆರೆತ ಕೂದಲು ಕಪ್ಪಾಗುತ್ತಿಲ್ಲ,
ಬೆಳೆದ ಕೂದಲು ಕಟ್ಟಾಗುತ್ತಿಲ್ಲ!
ಕೆಲಸದವಳ ಮೇಲೆ ಸಿಟ್ಟಾಗುತ್ತಿಲ್ಲ!
ಅವಳಿಲ್ಲದವರಿಗೆ ಇರುವ ನಲ್ಲ!

ಕುಳಿತು ಕುಳಿತು ಸಾಕಾಯಿತು,
ಮಲಗಿ ಮಲಗಿ ಬೋರಾಯಿತು.
ಅಡುಗೆ ಒಲ್ಲದ ಲಲನೆಯರೂ ಹಿಡಿದರು,
"ಮಾಡು ಇಲ್ಲವೇ ಮಡಿ" ಮಂತ್ರ!

ಜಗವನೆಲ್ಲ ಕಾಯವ ದೈವವೂ ಒಂದೇ,
ಎಲ್ಲರನು ಕಾಡುವ ಭಯವೂ ಒಂದೇ!
ಎಲ್ಲರ ಕಾತುರದ ನಿರೀಕ್ಷೆಯೂ ಒಂದೇ,
ಮುಗಿವುದೆಂದು ಲಾಕ್ಡೌನ್‌ ಎನ್ನುವುದೊಂದೇ!

Monday, April 13, 2020

ನಿಮಗೊಂದು ಸಲಾಮ್!


ತಾ ಸಾವೆದು ಗಂಧವೀವ,
ಸಿರಿಗಂಧದ ಕೊರಡು ನೀವು.

ಮನೆ ಮಠಗಳ ಮರೆತುಬಿಟ್ಟು,
ಸತಿ ಸುತರನು ದೂರವಿಟ್ಟು,
ಸೌಖ್ಯವನ್ನೇ ಪಣಕೆ ಇಟ್ಟು,
ನಿಸ್ವಾರ್ಥದ ಸೇವೆ ಕೊಟ್ಟೆ ವೈದ್ಯನಾರಾಯಣ!

ನಿಮ್ಮ ಹೆಗಲಿಗೆ ಹೆಗಲ ಕೊಟ್ಟ,
ಇಚ್ಛೆಗಳ ಅದುಮಿ ಇಟ್ಟ,
ರೋಗಿಗಳಿಗೆ ಅಭಯವಿತ್ತ,
ಸಿಬ್ಬಂದಿಯ ಸೇವೆ, ಚಿತ್ತ, ದೈವಸಹಾಯವು!

ಬಿಸಿಲಿನಲ್ಲಿ ತಿರುಗಿ ತಿರುಗಿ,
ಅಲೆಮಾರಿಗಳ ಹಿಂದಕಟ್ಟಿ,
ಮಾತೆ ಮಕ್ಕಳ ಕಾಪುವಂತೆ
ಎಲ್ಲರನೂ ಕಾಯುತಿರುವ ಪ್ರಾಣ ರಕ್ಷಕರು!

ಬೀದಿ ಹೊಲಸ ಗುಡಿಸಿಕೊಂಡು,
ನಮ್ಮ ಕಸವ ತುಂಬಿಕೊಂಡು,
ನಿಮ್ಮ ಸ್ವಾಸ್ಥ್ಯ ಕಾಯ್ದುಕೊಂಡು,
ಸೇವೆ ಮಾಡುತಿರುವ ನೀವೇ ನಿಜಕೂ ಮಾನ್ಯರು!

ರುಚಿ ಶುಚಿಯ ಪಾಕವಿಳಿಸಿ,
ಹೊಟ್ಟೆಗಿಲ್ಲದವರ ಹುಡುಕಿ,
ಹಸಿದ, ಕುಸಿದ ಪ್ರಾಣಗಳಿಗೆ,
ಅನ್ನಭಾಗ್ಯ ನೀಡುತಿರುವ ನೀವೇ ಧನ್ಯರು!

ನಿಮ್ಮ ಮಹಿಮೆ, ನಿಮ್ಮ ದುಡಿಮೆ,
ಎಷ್ಟು ಹೇಳಿದರೂ ಕಡಿಮೆ.
ನಮಗಿತ್ತಿರಿ ನೀವು ಮುಲಾಮ್‌,
ನಿಮಗೆಲ್ಲರಿಗೆ ನಮ್ಮ ಸಲಾಮ್!

Saturday, April 11, 2020

ಹನುಮ ನೀನೇ ಬರಬೇಕು




ಬೇಕು ಸಂಜೀವಿನಿ ಬೇಕು,
ದಿವ್ಯ ಸಂಜೀವಿನಿ ಬೇಕು.

ಕೀಟ ಕಾಟ ತೊಲಗಿಸುವ,
ಮದ್ದುಸಂಜೀವಿನಿ ಬೇಕು.
ಮೃತ್ಯು ಬಾಧೆ ನೀಗಿಸುವ,
ಪ್ರಾಣಸಂಜೀವಿನಿ ಬೇಕು.

ಧರೆಯು ನಳನಳಿಸಲು,
ನವಸಂಜೀವಿನಿ ಬೇಕು.
ವಿಷಗಾಳಿಯ ಹಿತವಾಗಿಸಲು,
ಅಮೃತಸಂಜೀವಿನಿ ಬೇಕು.

ಮಾತಲಿ ಪ್ರೀತಿ ತುಂಬುವ,
ಪ್ರೇಮಸಂಜೀವಿನಿ ಬೇಕು.
ನೋಟಕ್ಕೆ ಪಾವಿತ್ರ್ಯತೆಯನೀವ,
ದೃಷ್ಟಿಸಂಜೀವಿನಿ ಬೇಕು.

ಸಂಬಂಧಗಳ ಬೆಸೆಯುವ,
ಬಂಧಸಂಜೀವಿನಿ ಬೇಕು.
ಆಸೆಗಳಿಗೆ ಕಡಿವಾಣಕ್ಕೆ,
ಅಂಕೆಸಂಜೀವಿನಿ ಬೇಕು.

ಮನುಜಗೆ ಸದ್ಗುಣಗಳನೀವ,
ಮನೋಸಂಜೀವಿನಿ ಬೇಕು.
ಇವನೆಲ್ಲ ತಂದು ಕೊಡಲು,
ಹನುಮ ನೀನೇ ಬರಬೇಕು!


Monday, April 6, 2020

ಹೊಸ ನಸುಕು















ಕೊರೋನಾ ನಿನ್ನ ಕರುಣೆ ಅಪಾರ,
ಮನುಜನ ಒಳಿತಿಗೆ ಇಟ್ಟೆ ಶ್ರೀಕಾರ!

ಪತಿಪತ್ನಿಯರ, ಪಿತಸುತರ,
ನಡುವೆ ಇತ್ತು ಅವಾಂತರ.
ಸಂಬಂಧಗಳ ಬೆಸೆಯಲು,
ಕೊಟ್ಟೆ ಹೊಸದೊಂದು ಟಿಸಿಲು!

ವಿಷಭರಿತ ಭೂಜಲ ವಾಯುಗಳು,
ಮತ್ತೊಮ್ಮೆ ಪರಿಶುದ್ಧವಾದುವಲ್ಲ!
ಪ್ರಾಣಿ, ಪಕ್ಷಿಗಳು ಆನಂದದಿಂದ,
ವಿಹರಿಸುವ ಭಾಗ್ಯ ತಂದೆಯಲ್ಲ!

ಮಾನವತೆಯೇ ಕಾಣದ ಕಣ್ಗಳಿಗೆ,
ನಿಲ್ಲದೇ ಓಡುತ್ತಿದ್ದ ಕಾಲ್ಗಳಿಗೆ,
ದುರಾಸೆಯೇ ತುಂಬಿದ್ದ ಮನಗಳಿಗೆ,
ಬದುಕಿನ ನಿಜಭಾಷ್ಯ ತಿಳಿಸಿದೆಯಲ್ಲ!

ನೋಟುಗಳು ಪ್ರಾಣಗಳ ಉಳಿಸುತ್ತಿಲ್ಲ,
ಅಧಿಕಾರದ ಹಮ್ಮು ಉಪಯೋಗಕ್ಕಿಲ್ಲ.
ಹಣದಿಂದಲೇ ಎಲ್ಲ ಎಂದವರನ್ನೂ,
ಹಣತೆ ಹಚ್ಚುವ ಹಾಗೆ ಮಾಡಿದೆಯಲ್ಲ!

ಮುದುಡಿ ಮಲಗಿದ್ದ ಮಾನವೀಯತೆ,
ಮತ್ತೆ ಚಗುರೊಡೆದು ನಗುತಿದೆ!
ಕಳೆದುಹೋಗಿದ್ದ ಸಂಬಂಧಗಳೆಲ್ಲವೂ,
ದೀಪದ ಬೆಳಕಲ್ಲಿ ಕಾಣಿಸಿಕೊಂಡಿವೆ!

ಬಂತೆಲ್ಲಿಂದ ನಿನಗೆ ಈ ಪರಿಯ ಶಕ್ತಿ?
ಮಾನವರನು ಮಣಿಸುವ ಯುಕ್ತಿ!
ಈ ಬದಲಾವಣೆಗಳು ಕ್ಷಣಿಕವಾಗದಿರಲಿ,
ಹೊಸ ನಸುಕಿಗೆ ಮುನ್ನುಡಿಯಾಗಲಿ!







Thursday, April 2, 2020

ನೀನಾಗುವೆ ಬಲಿ!

ಏಕೆ ನಿನಗೆ ಎಲ್ಲದರ ಗೊಡವೆ?
ಈಗ, ಕೈಕಟ್ಟಿ ಕುಳಿತೆಯಲ್ಲ ಮಗುವೆ!

ಗಗನಚುಂಬಿಗಳ ಕಟ್ಟಿ ನೀ ಬೀಗುತಿದ್ದೆ,
ಹಿಮಪರ್ವತಗಳ ಒಮ್ಮೆ ನೋಡು ಪೆದ್ದೆ.
ಹರಿವ ನದಿಗಳಿಗೆ ಕಟ್ಟಿದೆ ಕಟ್ಟೆ,
ಸುನಾಮಿಯ ನೋಡಿ ಹೆದರಿಬಿಟ್ಟೆ!

ಲೋಹದಕ್ಕಿಗಳ ನೀ ಹಾರಿಬಿಟ್ಟೆ,
ಆಗಸದಲಿ ಸಂಚರಿಸುವುದ ಕಲಿತುಬಿಟ್ಟೆ.
ಚಂದ್ರ, ಮಂಗಳಗಳ ತಲುಪಿಬಿಟ್ಟೆ!
ವ್ಯೋಮದಂಗಳದಲಿ ಅದು ಪುಟ್ಟ ಹೆಜ್ಜೆ!

ಹುಲಿ, ಸಿಂಹ, ಆನೆಗಳ ಪಳಗಿಸಿಟ್ಟೆ,
ಕಾಣದ ಕೀಟಗಳ ಕಂಡು ಓಟ ಕಿತ್ತೆ!
ನಿಸರ್ಗವ ಮನಬಂದಂತೆ ಬಳಸಿಬಿಟ್ಟು,
ಬುಡಕೆ ಬಂದರೂ ನೀನು ಬಿಡೆಯ ಪಟ್ಟು?

ಭೂರಮೆಯ ನೀನು ಬರಡಾಗಿಸಿದೆ,
ಗಂಗಾ ಮಾತೆಗೆ ವಿಷವನಿತ್ತೆ,
ಅನಿಲ ದೇವನ ಧೂಮವಾಗಿಸಿದೆ,
ಮಾಡಲು ಇದೆ ಇನ್ನೇನು ಬಾಕಿ?

ನೀ ಪಡೆದು ವರವ, ನೀನಿತ್ತೆ ಜ್ವರವ.
ಪ್ರಕೃತಿ ಮಾತೆ ಸರ್ವಶಕ್ತಳು ತಾನು,
ತನ್ನ ರೋಗವ ಪರಿಹರಿಸಿಕೊಳ್ಳಲು,
ನಿನ್ನ ನಾಶವ ನೆನೆದು ನಿಧಾನಿಸುತಿಹಳು!

ಇನ್ನಾದರೂ ಕಲಿ, ಇನ್ನಾದರೂ ಕಲಿ,
ನಿಸರ್ಗದ ಎದುರಲಿ ನೀನಿನ್ನೂ ಇಲಿ!
ನಿಸರ್ಗ ಮಾತೆಯ ವರವ ಕೇಳು, ಆಕೆ,
ಒಲಿದರೆ ಬಾಳು, ಮುನಿದರೆ ಹಾಳು!

Thursday, March 26, 2020

ಏನು ಮಾಡ್ಲಿ ದೇವ್ರೇ

ಕರೋನಾ ಕರೋನಾ ಕರೋನಾ,
ಹೇಗೆ ಕಳೆಯಲಿ ನಾ ಸಮಯಾನಾ!

ಹೊರಗೆ ಹೋದರೆ ಪೋಲೀಸ್‌ ಕಾಟ,
ಮನೇಲೇ ಕುಳಿತರೆ ಹೆಂಡತಿ ಪಾಠ.
ವಾಟ್ಸಾಪ್‌ ನೋಡಿದ್ರೆ ಜ್ವರ ಬರುತ್ತೆ,
ಟಿವಿ ನೋಡಿದ್ರೆ ಹೆದ್ರಿಕೆ ಆಗುತ್ತೆ!

ಕೆಮ್ಮು ಬಂದರೆ ಭಯ ಆಗುತ್ತೆ,
ಸೀನು ಬಂದರೆ ಪ್ರಾಣ ಹೋಗುತ್ತೆ.
ಗುಡಿಯಲಿ ಕೂತು ಬೇಡೋಣಾಂದ್ರೆ,
ಅದಕ್ಕೂ ಇದೆಯಲ್ಲ ತೊಂದ್ರೆ!

ಗೆಳೆಯರು ಮಕ್ಕಳು ಮೊಮ್ಮಕ್ಳೆಲ್ಲ,
ವಿಡಿಯೋದಲ್ಲೇ ಹಾಯ್‌ ಬಾಯೆಲ್ಲ .
ಮುಂಜಾನೆ ಪಾರ್ಕಲಿ ಸುತ್ತಾಟವಿಲ್ಲ,
ಹಾಟ್‌ ಕಾಫಿಯಲಿ ಮೀಟಿಂಗಿಲ್ಲ.

ಪುಸ್ತಕ ಹಿಡಿದರೂ ಓದೋಕಾಗಲ್ಲ,
ಏನೋ ಯೋಚನೆ ಬರುತ್ತಲ್ಲ.
ಮನಸ್ಸಿಗಂತೂ ನೆಮ್ಮದಿಯಿಲ್ಲ,
ಸುಮ್ನೆ ಕೂರೋಕೆ ಆಗ್ತಾ ಇಲ್ಲ.

ಹಾಲು ಪ್ಯಾಕೆಟ್‌ ಮೇಲೇನಿರುತ್ತೋ,
ನ್ಯೂಸ್‌ ಪೇಪರಿಗೆ ಸೋಂಕಾಗಿರುತ್ತೋ,
ತರಕಾರಿ ತರೋದೆ ಬೇಡ ಅನ್ಸುತ್ತೆ,
ತಿಂಗಳ ದಿನಸಿ ಸಾಕಾಗುತ್ತೆ.

ಚೀನಾಲಿ ಯಾರೋ ಏನೋ ತಿಂದ್ರೆ,
ಪ್ರಪಂಚಕೆಲ್ಲ ದೊಡ್ಡ ತೊಂದ್ರೆ!
ಕೈ ತೊಳೆದೂ ತೊಳೆದೂ ಸುಸ್ತಾಯ್ತು,
ಟ್ಯಾಂಕಿನ ನೀರೆಲ್ಲ ಖರ್ಚಾಯ್ತು!

ಮನೇಲೆ ಸ್ವಲ್ಪ ವಾಕಿಂಗ್‌ ಮಾಡ್ದೆ.
ಅಲ್ಲೇ ಸ್ವಲ್ಪ ಜಾಗಿಂಗ್‌ ಮಾಡ್ದೆ.
ಏನು ಮಾಡ್ಲಿ ದೇವ್ರೆ, ಅಯ್ಯೋ!
ಇನ್ನೇನು ಮಾಡ್ಲಿ ದೇವ್ರೆ!

Tuesday, March 24, 2020

ಕೊರೋನಾ ಪುರಾಣ

ಕಣ್ಣಿಗೆ ಕಾಣದ ಕೊರೋನಾ,
ಜಗವನು ಕಾಡಿದ ಪುರಾಣ.

ಹುಟ್ಟಿತು, ಎದ್ದಿತು, ವುಹಾನಿನಲ್ಲಿ,
ಬೆಳೆಸಿತು ಪಯಣ ವಿಮಾನದಲ್ಲಿ.
ಕೆಲವೇ ದಿನಗಳ ವಾಸದಲಿ,
ಹಾಹಾಕಾರವು ಜಗದಲ್ಲಿ.

ಬೆನ್ನನ್ನು ಹತ್ತಿತು ಬೇತಾಳ,
ತಪ್ಪಿತು ಎಲ್ಲರ ಬದುಕಿನ ತಾಳ.
ಹೆದರಿದೆ, ಬೆದರಿದೆ, ಜಗವೆಲ್ಲ,
ಬೇತಾಳನ ಇಳಿಸಲು ತಿಳಿವಿಲ್ಲ.

ಕೈಗಳ ಕುಲುಕಿಗೆ, ಮೈಗಳ ಸನಿಹಕೆ,
ಎಂದೂ ಇಲ್ಲದ ಬಿಗುಮಾನ.
ಕೈಗಳ ಜೋಡಿಸಿ, ನಸುನಗೆ ಸೂಸಿ,
ನಮಿಸಿದರಾಯಿತು ಸಮ್ಮಾನ.

ಶಿಸ್ತು ಮೀರಿದರೆ ಶಿಕ್ಷೆ ತಪ್ಪದು,
ಅತ್ತುಕರೆದರೆ ಏನೂ ಆಗದು!
ಕರುಣೆಯೇ ಇಲ್ಲದ ಕೊರೋನಾ,
ಹೀರಿದೆ ಎಲ್ಲ ಹಿರಿಯರ ಪ್ರಾಣ.

ಹೆಣಗಳು ಉರುಳಿವೆ ಸಾವಿರಗಳಲಿ,
ಮಣ್ಣು ಮಾಡಲು ಎಡೆಯೆಲ್ಲಿ?
ಇಲ್ಲವೇ ಇಲ್ಲ ಕಣ್ಣೀರಿಗೆ ಅಂಕೆ,
ಒರೆಸುವ ಬೆರಳಿಗೂ ಸೋಂಕಿನ ಶಂಕೆ!

ಜಗದ ಪುಪ್ಪಸ ಪುಸ್ಸಾಗಿಸಿತು,
ವೈದ್ಯಕುಲಕೇ ಸವಾಲು ಒಡ್ಡಿತು,
ಆರ್ಥಿಕತೆಯ ಸೊಂಟವ ಮುರಿಯಿತು,
ಬಡಬಗ್ಗರ ಹೊಟ್ಟೆಗೆ ಹೊಡೆಯಿತು!

ಬೀದಿಗೆ ಇಳಿಯಲು ಹೆದರಿದರೆಲ್ಲ,
ಹೆದರಿ ಮನೆಯಲಿ ಅಡಗಿದರಲ್ಲ,
ಯುಗಾದಿಗಿಲ್ಲ ಬೇವು, ಬೆಲ್ಲ!
ಕರೋನಾ ಇದುರು ಯಾರೂ ಇಲ್ಲ!

ರಕ್ತಬೀಜಾಸುರನ ಸಂತತಿಯಂತೆ,
ಹರಡಿದೆ ಜಗದಲಿ ಇದರಾ ಸಂತೆ.
ಕಾದಿಹೆ ಕಾಳಿ ಬರುವಳು ಎಂದೇ,
ಕೊರೋನಾ ಛಿದ್ರವಾಗಲಿ ಇಂದೇ!

Monday, March 9, 2020

ಬಾಳ ಪಯಣ

ಬಾಳ ದೋಣಿಯ ಪಯಣ ಸಾಗಿದೆ,
ಆಳ ಕಡಲಿನ ಮೇಲೆ ತೇಲಿದೆ.

ನೀಲಿ ನೀರಿನ ಕಡಲು ಹರಡಿದೆ,
ತಿಳಿಯ ಬಿಸಿಲಿನ ಕಾವು ಹಿತವಿದೆ.
ತಂಪು ಗಾಳಿಯ ಸೊಂಪು ಸೊಗಡಿಗೆ,
ಮನವು ಮುಗಿಲಿಗೆ ಹಾರಿ ಹೋಗಿದೆ.

ಎಲ್ಲ ಸೊಗಸಿದೆ, ಬೆಲ್ಲ ಸಿಹಿಯಿದೆ,
ಕಣ್ಣು ಮುಚ್ಚಲು ಕನಸು ಹತ್ತಿದೆ.
ಒಂದೇ ಚಣದಲಿ ಮೋಡ ಕವಿದಿದೆ,
ಬಿರುಸು ಗಾಳಿಗೆ ಅಲೆಯು ಎದ್ದಿದೆ.

ಮೋಡ ಗುಡುಗಿದೆ, ದೋಣಿ ನಡುಗಿದೆ,
ಭಯದ ಬೆಂಕಿಯು ಮನವ ಸುಡುತಿದೆ.
ದೋಣಿ ಮುಗುಚಿದೆ, ನೀರ ಸೇರಿದೆ,
ಕೊರೆವ ನೀರಿನ ಚಳಿಯು ಕಚ್ಚಿದೆ.

ನೀರ ಅಲೆಗಳು ಹೊಡೆತ ಕೊಡುತಿವೆ,
ನೆಲೆಯು ಇಲ್ಲದೆ ದೇಹ ಮುಳುಗಿದೆ,
ಉಸಿರು ಕಟ್ಟಿದೆ, ಜೀವ ಬೆಚ್ಚಿದೆ,
ಉಳಿವ ಆಸೆಯು ನೆಲವ ಕಚ್ಚಿದೆ.

ಕೊನೆಯ ಉಸಿರಿನ ಸಮಯ ಬಂದಿದೆ.
ಬೇರೆ ದಾರಿಯು ಈಗ ಕಾಣದೆ.
ದೇವ ದೇವನ ಮನದೆ ಬೇಡಿದೆ.
"ಒಡನೆ ನನ್ನನು ಕಾಯೊ ಒಡಯನೆ".

ತೇಲಿ ಬಂದಿತು ಮರದ ದಿಮ್ಮಿಯು,
ದೈವ ನೀಡಿದ ನನ್ನ ಕುದುರೆಯು,
ಶೃತಿಯ ಹಿಡಿಯಿತು ಎದೆಯ ನಾಡಿಯು,
ಎದೆಯ ತುಂಬಿದ ಪೊರೆದ ಸ್ವಾಮಿಯು.

ಕನಸು ಒಡೆಯಿತು, ಕಣ್ಣು ತೆರೆಯಿತು,
ತಿಳಿಯ ಬಿಸಿಲದು ಕಣ್ಣು ಹೊಡೆಯಿತು,
ನೀಲಿ ಕಡಲದು ನೋಡಿ ನಕ್ಕಿತು,
ಒಂದು ಜನುಮವು ಕಳದು ಹೋಯಿತು!


Friday, March 6, 2020

ದೇವರ ಕಣ್ಣು

ಭರ್ಜರಿ ರಸ್ತೆಯಲಿ ಭಾರೀ ಮಳಿಗೆ,
ಭರಪೂರ ಜೇಬಿನ ಮಂದಿ ಒಳಗೆ.
ಕಣ್ಣು ಕೋರೈಸುವ ದೀಪಗಳ ಬೆಳಕು,
ಪತಂಗಗಳ ಸೆಳೆಯಲು ಇನ್ನೇನು ಬೇಕು?

ಕೈಗೆಟಕುತಿವೆ ಬೆಲೆಯ ಒಡವೆ ವಸ್ತ್ರಗಳು,
ಮುಟ್ಟಿದರೆ ಸಾಕು ಅರಳುತಿವೆ ಮನಗಳು,
ಎಲ್ಲ ಬೇಕೆನ್ನುವ  ಮನದ ಕಾಮನೆಗಳು,
ಸಾಕಾಗದಾಗಿದೆ ಕಿಸೆಯ ಕಾಂಚಾಣಗಳು.

ಇರುವರೆಲ್ಲರೂ ಅವರವರ ಲೋಕದಲಿ,
ಯಜಮಾನ, ಸಿಬ್ಬಂದಿ ಅವರವರ ಕೆಲಸದಲಿ.
ಮನವ ಕಾಡುತಿವೆ ನೂರು ಬಯಕೆಗಳು,
ಕಣ್ತಪ್ಪಿಸಿ ಕದಿಯಲು ಸುಲಭ ಸಂದರ್ಭಗಳು.

ಯಜಮಾನನಿಗೆ ಇಲ್ಲ ಚಿಂತೆಗಿಂತೆಗಳು,
ಇಲ್ಲವೇ ಕಾವಲಿಗೆ  ನೂರೆಂಟು ನಯನಗಳು?
ಕಾಯುತಿವೆ ಎಲ್ಲೆಡೆ ಕ್ಯಾಮೆರಾ ಕಣ್ಣುಗಳು,
ಗಮನದಲ್ಲಿದೆ ಎಲ್ಲರ ಚಲನ ವಲನಗಳು!

ಭಗವಂತ ಬುದ್ಧಿವಂತ ಈ ಯಜಮಾನನಂತೆ,
ನಿಯುತ ಕಣ್ಣುಗಳ ಜಗದಿ ಅಳವಡಿಸಿಹನಂತೆ,
ತಪ್ಪು ಒಪ್ಪುಗಳ ನಡೆಯುತ್ತಿದೆ ಚಿತ್ರಣ,
ಸಂದೇಶ ಹೋಗುತಿದೆ ಅನುದಿನ ಅನುಕ್ಷಣ!

ನಮ್ಮ ಕಂಗಳೇ ಅವನ ಕ್ಯಾಮೆರಾಗಳು!
ನಮ್ಮ ತಪ್ಪನ್ನು ಚಿತ್ರಿಸಿವೆ ನಮ್ಮವೇ ಕಂಗಳು!
ಕಥೆಯ ಹೇಳುತಿವೆ ನಮ್ಮವೇ ಮನಗಳು!
ಚಿತ್ರಗುಪ್ತನ ತಾಣವೇ ನಮ್ಮ ಜೀವಕಣಗಳು!

ಸಕಲ ಜೀವರಾಶಿಯೇ ಅವನ ಸಂಪರ್ಕ ಜಾಲ!
ನಮಗೆ ನಮ್ಮನೇ ಕಾವಲಿಟ್ಟು ನಗುತಿಹನು ಕಳ್ಳ!

370 ಎಂಬ ವಿಷ

ನಾ ತಾಯಿ ಭಾರತಾಂಬೆ,
ಆದೆ ಕೆಲ ಮಕ್ಕಳ ಕೈಗೊಂಬೆ.
ಸ್ವಾರ್ಥದಾಟದಲಿ ಅವರು,
370 ಎಂಬ ವಿಷವನುಣಿಸಿದರು!

ವಿಷ ಬೆರೆತು, ಕಹಿ ಸುರಿದು,
ಅರ್ಬುದವಾಗಿ ಬೆಳೆದು,
ರಕ್ತ ಹರಿಯಿತು ಕೋಡಿ,
ಇದಾವ ಪುರುಷಾರ್ಥ ನೋಡಿ.

ಮಕ್ಕಳು ಮಕ್ಕಳ ನಡುವೆ,
ಬಡಿದಾಟದಲಿ ಆದೆ ಬಡವೆ.
ಯಾರಿಗೆ ಹೇಳಲಿ ನನ್ನ ಕಥೆಯ,
ಮನದಾಳದ ಮಾಸದ ವ್ಯಥೆಯ?

ಏಳು ದಶಕಗಳ ನೋವು,
ಸಹಿಸಲಾಗದ ಕಹಿ ಬೇವು.
ಆಗ ಹುಟ್ಟಿದ  ಹಸಿ ಹುಣ್ಣು,
ಕೆಲವರಿಗೆ ಮಾತ್ರ ಸಿಹಿ ಗಿಣ್ಣು.

ಎದ್ದು ನಿಂತನೊಬ್ಬ ಹೆಮ್ಮೆಯ ಪುತ್ರ,
ಛಾತಿ ಛಪ್ಪನ್ನಿಂಚಿನ ಗಾತ್ರ!
ಅರ್ಬುದವ ಛೇದಿಸಿ, ಮುಲಾಮು ಹಚ್ಚಿ,
ತಪ್ಪಿಸಿದ ನಾ ಆಗುವುದ ಹುಚ್ಚಿ!

ಇಂದು ಸುರಿದ ಆನಂದ ಭಾಷ್ಪದೆ,
ಆರ್ದ್ರವಾಯಿತು ಒಣಗಿದೆದೆ.
ಚಿರಕಾಲ ಸುಖವಾಗಿ ಬಾಳಿ,
ಹೊಂಗಿರಣದ ಬೆಳಗಾಗಲಿದೆ ತಾಳಿ.



ಹೊಸ ವರ್ಷ

ಬಂತಿದೋ ಮತ್ತೊಂದು ಬುತ್ತಿ,
ಹೊಚ್ಚ ಹೊಸದೆಂದು ಸುದ್ದಿ.

ಬುತ್ತಿಯಲಿ ಹೊಸರುಚಿಯ ನಿರೀಕ್ಷೆ,
ಉಂಟೇನೋ ಬಿಸಿಬಿಸಿಯ ದೋಸೆ.
ಕಹಿಯ ಮರೆಯುವ ಆಕಾಂಕ್ಷೆ,
ಸಿಹಿಯ ಮೂಟೆಯ ಆಸೆ.

ಜಿಹ್ವೆಯಲ್ಲಿ ಜಿನುಗಿದೆ ತೇವ,
ಕಾತುರದೆ ಸಂಭ್ರಮಿಸಿದೆ ಜೀವ.
ಪ್ರತಿ ಸಾರಿಯೂ ಹೀಗೇ,
ಅಮೃತವೇ ಸಿಕ್ಕ ಹಾಗೆ.

ಆಶಿಸುವುದು ಸಹಜ ಗುಣ,
ಮನುಜನ ಮನದ ತಾನ.
ಕನಸಿನ ಲೋಕದ ಸೀಮೆ,
ಆಗದಿರಲಿ ಬರಿಯ ಭ್ರಮೆ.

ಅಡುಗೆ ಆಕೆಯದೇ ಉಂಟು,
ಸರಕಿಗೆ ನನ್ನದೇ ಗಂಟು,
ನನ್ನ ಸಂಪಾದನೆಗೆ ತಕ್ಕದ್ದು,
ನನ್ನ ಪರಿಶ್ರಮಕ್ಕೆ ದಕ್ಕಿದ್ದು.

ಆದರೂ ಇದೆಯಿಲ್ಲಿ ನಿರೀಕ್ಷೆ,
ಹೊಸದನ್ನು ಪಡೆಯುವ ಕಾಂಕ್ಷೆ.
ಆಗದಿರಲಿ ಯಾರಿಗೂ ನಿರಾಶೆ,
ಎಲ್ಲರಿಗೂ ಪ್ರೀತಿಯ ಶುಭಾಕಾಂಕ್ಷೆ!

ಮಧುರ ಮಧುರವೀ ಮಂಜುಳ ಗಾನ

ಕವಿಯ ಭಾವಗಳು,
ಸುಂದರ ಸ್ವಪ್ನಗಳು.
ಪದಗಳು ಹುಟ್ಟುತಿವೆ,
ಹಂದರವ ಕಟ್ಟುತಿವೆ,
ಹಾಡಿಗೆ ಅಸ್ತಿಪಂಜರವ ಕಟ್ಟುತಿವೆ!

ಬಂದನಿಗೋ ಮಾಯಗಾರ,
ಸರಿಗಮದ  ಜಾದೂಗಾರ.
ದಂಡವನ್ನು ಆಡಿಸಿದ,
ರಕ್ತಮಾಂಸ ಕೂಡಿಸಿದ,
ಹಾಡಿಗೆ ಸುಸ್ವರೂಪವ ನೀಡಿದ!

ಸುಸ್ವರದ ಮಾಂತ್ರಿಕ,
ಕಂಠೀರವ ಗಾಯಕ.
ಗುಂಡಿಗೆಯ ತೆರೆದ,
ಉಸಿರನ್ನು ಹೊಸೆದ,
ಹಾಡಿಗೆ ಪ್ರಾಣವನು ತುಂಬಿದ!

ಕೇಳುತಿವೆ ಕಿವಿಗಳು,
ಮಧುರತಮ ಸ್ವರಗಳು.
ಮಕರಂದದ ಝರಿಗಳು,
ಗಂಧರ್ವರ ವರಗಳು,
ಮಧುರ ಮಂಜುಳ ಗಾನಗಳು!

ಸೌರಮಂಡಲಾಧಿಪ

ಸ್ವರ್ಣ ಹಸ್ತ, ವರ್ಣ ಜನಕ,
ಆತ್ಮಕಾರಕ, ಕರ್ಮಯೋಗಿ.
ಅಂಬರ ತಿಲಕ, ದಿವ್ಯ ಚೇತನ,
ನಿತ್ಯ ನೂತನ ದಿನಕರ.

ಸಹಸ್ರ ದೀಪ, ಸಹಸ್ರ ಹಸ್ತ,
ನವ ಗ್ರಹಗಳ ನಾಯಕ.
ಸರ್ವ ಪೂಜಿತ, ಚಂದ್ರ ಸ್ನೇಹಿತ,
ಉಷಾ, ಸಂಧ್ಯಾ ಪ್ರಿಯಕರ.

ಛಾಯಾ ಪ್ರಿಯಪತಿ, ಪುತ್ರ ವೈರಿ,
ಸಪ್ತಾಶ್ವ ರಥನಾಯಕ.
ಅಸ್ತಿ ಕಾರಕ, ಅಸ್ತು ಹಸ್ತ,
ವೃಕ್ಷ ಸಂಕುಲ ರಕ್ಷಕ.

ದಿವ್ಯ ಜ್ಯೋತಿ, ಭವ್ಯ ಬಂಧು,
ಮಾಣಿಕ್ಯ ರತ್ನ ಭೂಷಿತ.
ಕ್ರೂರ ಹಸ್ತ, ಅಂಬರ ನೇತ್ರ,
ಮನುಕುಲ ಸಂಪೂಜಿತ.

ಭೂಮಂಡಲ ಭಾಗ್ಯಜ್ಯೋತಿ,
ಸೌರಮಂಡಲಾಧಿಪ.
ವಂದೇ ದೇವ, ವಂದೇ ದೇವ,
ರಥಸಪ್ತಮಿಯ ಶುಭದಿನ.



ಸಪ್ತಾಶ್ವನ ಸಂದಿಗ್ಧತೆ


(ಜ್ಯೋತಿಷ್ಯ ತಿಳಿದವರಿಗಾಗಿ, ಸಂಕ್ರಾಂತಿ 2020)

ಇಳೆಯು ನೋಡು ನಲಿಯುತಿಹಳು,
ಬೆಳೆಯ ಕೊಟ್ಟು ಹರಸುತಿಹಳು,
ನಿನ್ನ ಬೆಳಕಿನ ವರವ ಪಡೆದು,
ತನ್ನ ಮಕ್ಕಳ ಹಸಿವ ತೊಡೆದು.

ಮಿಹಿರ ಹೇಳು ಏಕೀ ತಳಮಳ,
ಎದೆಯ ಗೂಡಲಿ ಏನು ಕಳವಳ?
ಮಗನ ಮನೆಯಲಿ ಇಟ್ಟೆ ಹೆಜ್ಜೆಯ,
ಸುತನ ನೋಡುವ ಇಷ್ಟ, ಆಶಯ.

ಶನಿಯ ಮುನಿಸಿನ ನೆನಪು ಕಾಡಿತೆ?
ಮತ್ತೆ ಜಗಳದ ಭಯವು ಮೂಡಿತೆ?
ಬದುಕಿನಂಚಿನ ದಿನವು ಬಾರದೆ,
ತಂದೆ ಮಕ್ಕಳ ಋಣವು ಮುಗಿವುದೆ?

ಪುತ್ರಮೋಹವ ತೊರೆಯಲಾರೆ,
ಅವನ ಕೋಪವ ಸಹಿಸಲಾರೆ.
ನಿಮ್ಮ ಘರ್ಷಣೆ ನಮಗೆ ತೊಂದರೆ,
ಮುನಿಸು ತೊರೆದು ನಿಲ್ಲಿ ಆದರೆ.

ಮಕರ ಗೃಹದಲಿ ನಿಮ್ಮ ಭೇಟಿ,
ನಿಮ್ಮ ಶಕ್ತಿಗೆ ಯಾರು ಸಾಟಿ?
ಇರಲಿ ಸಂಯಮ ಇಬ್ಬರಲ್ಲಿ,
ಕರುಣೆ ಇರಲಿ ಇತರರಲ್ಲಿ.

ಗುರುಕುಲದಲಿ ಕುವರನಿರುವ,
ಹತ್ತೇ ದಿನದಲಿ ಬಂದು ಸೇರುವ.
ಎದೆಗೆ ಎದೆಯ ಕೊಟ್ಟು ಅಪ್ಪಿಕೋ,
ಮನದ ಮುನಿಸು ಬಿಟ್ಟು ಒಪ್ಪಿಕೊ!


ಬಣ್ಣಗಳ ಹೋಳಿ

ಅಣ್ಣ ತಮ್ಮ, ಅಕ್ಕ ತಂಗಿ,
ತಾಯಿ ತಂದೆ, ಅಜ್ಜಿ ತಾತ,
ಗೆಳೆಯ ಗೆಳತಿ, ಒಲಿದ ಜೋಡಿ,
ಬಂಧ ಹಲವು, ಬಣ್ಣ ಹಲವು.

ಕೆಂಪು, ಹಸಿರು, ಹಳದಿ, ನೀಲಿ,
ಬಂಧ ತಳೆವ ರಂಗು ಹಲವು,
ರಂಗು ಗುಂಗು, ಹೋಳಿ ಇಲ್ಲಿ,
ಬನ್ನಿ ತೋರಿ, ನಿಮ್ಮ ಒಲವು.

ಮನದ ಕಾಮವ ಸುಡುವ ಬನ್ನಿ,
ಸುಡುವ ನೆನಪನು ಸುಟ್ಟು ಬಿಡುವ.
ಮೂಲೆ ಮೂಲೆ ಹುಡುಕಿ ತನ್ನಿ,
ಹಳೆಯ, ಹರಿದ, ತೊರೆದು ಬಿಡುವ.

ನಮ್ಮ ಅಹಂ ನಮಗೆ ವೈರಿ,
ಬೆಂಕಿ ಹಚ್ಚಿ ಸುಟ್ಟು ಬಿಡುವ.
ಧ್ಯಾನ ಮಾಡಿ, ಎಲ್ಲ ಸೇರಿ,
ಶಿವನ ಪಾದ ಹಿಡಿದು ಬಿಡುವ.

ಸುಟ್ಟ ಮೇಲೆ ಹಗುರ ಮನವು,
ಸ್ನಾನ ಮಾಡಿ ಶುದ್ಧ ತನುವು,
ಮತ್ತೆ ಸಜ್ಜು ಬಾಳ ಯಾತ್ರೆಗೆ,
ಜೀವನ ಎನ್ನುವ ಜಾತ್ರೆಗೆ!


ಆದಿ, ಅಂತ್ಯ

ಯುಗದ ಅಂತ್ಯದ ಬೀಜಕೆ,
ಯುಗದ ಆದಿಯ ಮೊಳಕೆ.
ಜಗಕೆ ಹಸಿರು, ಮನಕೆ ಹಸಿರು,
ಹುರುಪು ಹುರುಪಿನ ಉಸಿರು.

ಪ್ರಭವ ವಿಭವಗಳ  ಕಾಲಚಕ್ರ,
ಕುಂಬಾರ ನಿನ್ನ ಪ್ರಿಯಚಕ್ರ.
ವಿಳಂಬಿಯ ಮಾಡಿ ಹಸಿಮುದ್ದೆ,
ವಿಕಾರಿಯ ರೂಪಿಸಿ ನೀ ಗೆದ್ದೆ.

ಅದೇ ಮಣ್ಣು, ಅದೇ ಬೇರು,
ಕಾಲಕಾಲಕೆ ಹೂಸ ಚಿಗುರು.
ಅಳಿಸಿದೆ ಕಾಲವು ಹೆಜ್ಜೆಯ ಗುರುತು,
ಕಾಲಕಾಲಕೆ ಹೊಸ ತಿರುವು.

ಹಳೆಯದ ಕಳಚಿದೆ ಸಮಯ,
ಹೊಸತನು ಧರಿಸುವ ಸಮಯ.
ಬುವಿಗಿತ್ತಿದೆ ಹಸಿರಿನ ಸೀರೆಯ,
ಬಣ್ಣ ಬಣ್ಣದ ಹೂಗಳೊಡವೆಯ.

ತಪ್ಪದ ಅನುಕರಣೆ ನಮ್ಮಗಳದು,
ಜೀವಂತ ಸಮಯದ ಗೊಂಬೆಗಳದು.
ಹೊಸ ಬಟ್ಟೆಯ, ಒಡವೆಯ ಆನಂದ,
ಕಾಯೋ ನಮ್ಮನು ಗೋವಿಂದ!




ಕೃಷ್ಣ

ದೇವಕಿನಂದನ, ವಾಸುದೇವ,
ಮನುಕುಲ ತಿಲಕ, ಯಾದವ.
ಅಷ್ಟಮ ಸಂಜಾತ, ಅಷ್ಟಮಿ ಜನನ,
ಗುಢಾಕೇಶ, ಕೇಶವ.

ನಳಿನ ನಯನ, ಹಸಿತ ವದನ,
ಗೋಪೀಜನಪ್ರಿಯ, ಮೋಹನ.
ಕೋಮಲಾಂಗ, ಶ್ಯಾಮಸುಂದರ,
ನವನೀತಪ್ರಿಯ, ಮಾಧವ.

ಯಶೋದಾನಂದನ, ಮುರಳಿಮೋಹನ,
ಕಾಳಿಂಗಮರ್ದನ, ಗೋಪಾಲ.
ಬಲರಾಮಾನುಜ, ರಾಧಾ ಪ್ರಿಯಸಖ,
ಪೂತನಮರ್ದನ, ಅಚ್ಯುತ.

ಗೋವರ್ಧನಧಾರಿ, ಪ್ರಜಾರಕ್ಷಕ,
ಪಾಪನಾಶಕ, ಮಧುಸೂದನ.
ದುಷ್ಟನಿಗ್ರಹ, ಶಿಷ್ಟ ರಕ್ಷಣ,
ಮಿತ್ರರಂಜನ, ಸಂಕರ್ಷಣ.

ರುಕ್ಮಿಣೀನಾಥ, ಭಾಮಾಪ್ರಿಯಕರ,
ಬಹುಪತ್ನೀ ಪ್ರಿಯವಲ್ಲಭ.
ಚಿತ್ತಚೋರ, ಲಲನಾರಕ್ಷಕ,
ಸರ್ವಾಕರ್ಷಕ ಸುಂದರ.

ಪಾಂಡವಪ್ರಿಯ, ಪಾರ್ಥಸಾರಥಿ,
ದ್ರೌಪತಿ ಮಾನ ರಕ್ಷಕ,
ಕೌಶಲಮತಿ, ಯುದ್ಧಚತುರ,
ವಿಶ್ವರೂಪ ನಿರಂತರ.

ಪುಣ್ಯದಾಯಕ, ಪಾಪಹಾರಿ,
ಪರಮಾತ್ಮ ಚೇತನ, ತ್ರಿವಿಕ್ರಮ.
ಜಗನ್ನಾಥ, ಜಗದ್ರಕ್ಷಕ,
ಪರಮಪಾವನ ಪರುಷೋತ್ತಮ.

ಆದಿಪುರುಷ, ಪುಣ್ಯಪಾದ,
ಮೋಕ್ಷದಾಯಕ, ಚಿನ್ಮಯ.
ಜ್ಞಾನದೀಪಕ, ವಿಶ್ವಪೂಜಿತ,
ಸರ್ವವ್ಯಾಪೀ ಚೇತನ.



ನೆರೆ-ಹೊರೆ

ವರ್ಷಧಾರೆಯ ಬಿರುಸಿಗೆ,
ಹರ್ಷಧಾರೆಯೇ ಬೆದರಿದೆ!
ಕಂಗೆಟ್ಟು, ಬಸವಳಿದು,
ಪ್ರವಾಹದಲಿ ಕೊಚ್ಚಿ ಹೋಗಿದೆ!

ನೆರೆಹೊರೆಯೆಲ್ಲವೂ ನೆರೆಯಲ್ಲಿ
ಮರೆಯಾಗಿ, ಹೊರೆಯಾಗಿದೆ ಎದೆಯಲ್ಲಿ.
ಕಣ್ಣೀರಕೋಡಿ ಪ್ರವಾಹವಾಗಿದೆ,
ನೆತ್ತರು ಕೆಸರ ಕೆಂಪಾಗಿಸಿದೆ!

ಮೇಲೆ ಕರಿ ಮೋಡ,
ಕೆಳಗೆ ಕೆನ್ನೀರು,
ಮಾಯವಾಗಿದೆ ಹಸಿರು,
ನಿಂತಂತಾಗಿದೆ ಉಸಿರು!

ನೀರು ನೀರೆಂದು ಕೂಗಿದ ಜೀವವು,
ಕೊಚ್ಚಿ ಹೋಗುತಿದೆ ಇಂದು ನೀರಲಿ.
ಸಾಕೆಂದು ಹೇಳಲು ಸಮಯವಿಲ್ಲದೆ,
ಜೀವಗಳು ಮರೆಯಾಗುತ್ತಿವೆ ನಿಲ್ಲದೆ!

ದಿಕ್ಕು ತೋಚದಾಗಿದೆ ಇಂದು,
ಎಲ್ಲ ದಿಕ್ಕುಗಳೂ ನೀರಲಿ!
ಇನ್ನೇನು ಕಾದಿದೆಯೋ,
ಕಾಣದ ಕಾಲದ ಗರ್ಭದಲಿ.

ಕೈಹಿಡಿದೆತ್ತುವ ಕೆಲಸಕೆ,
ಹಸ್ತಗಳು ಚಾಚಿ ಬರಲಿ.
ಕಣ್ಣೊರೆಸುವ ಕೈಗಳು,
ಹೊಸ ಹರುಷವ ತರಲಿ.


ಅಜರಾಮರ ಅನುರಾಗ

ಪ್ರತಿದಿನದ ಪ್ರೇಮವಿದು,
ಅಜರಾಮರ ಅನುರಾಗ.

ಮುಂಜಾನೆ ಮಂಜಿನಲಿ,
ಮಿಂದೆದ್ದ ಕುಸುಮಗಳ,
ರೇಷಿಮೆಯ ದಳಗಳ,
ತಲ್ಪದಲ್ಲಿ ಮುತ್ತುಗಳು.

ಅರೆದಿನದ ವಿರಹದಲಿ,
ಸೊರಗಿಹಳು ಭೂರಮೆಯು.
ಇನಿಯನಿಗೆ ಮುತ್ತನೀವ,
ಬಯಕೆಯಲಿ ಮೇದಿನಿಯು.

ಒಡಲಲ್ಲಿ ಜೀವವನು,
ತುಂಬಿದ ನೇಸರಗೆ,
ಭೂತಾಯ ಪ್ರೀತಿಯ,
ಸ್ವಾಗತದ ಕಾಣಿಕೆ.

ಮೇಘಗಳ ಸರಿಸುತ್ತ,
ಬಂದನಿಗೋ ರವಿರಾಜ!
ನಸುಗೆಂಪು ಅವಳ ಗಲ್ಲ,
ಚೈತನ್ಯವು ಜಗಕೆಲ್ಲ!


ಸಿರಿಗನ್ನಡದ ಸೊಬಗು

ಚಿಲಿಪಿಲಿಗಳ ಕಲರವದಲಿ,
ಕಾವೇರಿಯ ಜುಳುರವದಲಿ,
ಶೇಷಣ್ಣನ ವೀಣೆಯಲಿ,
ಕನ್ನಡದ ಇಂಪಿದೆ,
ಸವಿಗನ್ನಡದ ಇಂಪಿದೆ!

ಸಿರಿಗಂಧದ ಒಡಲಿನಲಿ,
ಮಲ್ಲಿಗೆಯ ಮಡಿಲಿನಲಿ,
ಕಸ್ತೂರಿಯ ಘಮಘಮದಲಿ,
ಕನ್ನಡದ ಕಂಪಿದೆ,
ನರುಗನ್ನಡದ ಕಂಪಿದೆ!

ಮಡಿಕೇರಿಯ ಮಂಜಿನಲಿ,
ಆಗುಂಬೆಯ ಸಂಜೆಯಲಿ,
ಅಕ್ಕರೆಯ ಗಂಜಿಯಲಿ,
ಕನ್ನಡ ತಂಪಿದೆ,
ತನಿಗನ್ನಡದ ತಂಪಿದೆ!

ಹಸಿರು ಗಿರಿಶ್ರೇಣಿಯಲಿ,
ಪಸರಿಸಿಹ ಕಾನಿನಲಿ,
ಮುಗಿಲೆತ್ತರ ತೆಂಗಿನಲಿ,
ಕನ್ನಡದ ಸೊಂಪಿದೆ,
ಚೆಲುಗನ್ನಡದ ಸೊಂಪಿದೆ!

ವರಕವಿಯ ಹಾಡಿನಲಿ,
ಗುಂಡಪ್ಪನ ಕಗ್ಗದಲಿ,
ಪುಟ್ಟಪ್ಪನ ಕಾವ್ಯದಲಿ,
ಕನ್ನಡವು ಅರಳಿದೆ,
ಸುಮಗನ್ನಡವು ಅರಳಿದೆ!

ಹಂಪೆಯ ಕೊಂಪೆಯಲಿ,
ಬೇಲೂರಿನ ಶಿಲೆಗಳಲಿ,
ಬಾದಾಮಿಯ ಗುಹೆಗಳಲಿ,
ಕನ್ನಡದ ಕಥೆಯಿದೆ,
ಸಿರಿ ಕರುನಾಡ ಕಥೆಯಿದೆ!

ಜೋಗದ ಬಿರು ಧಾರೆಯಲಿ,
ರಾಯಣ್ಣನ ಖಡ್ಗದಲಿ,
ಓಬವ್ವನ ಒನಕೆಯಲಿ,
ಕನ್ನಡದ ಸೊಲ್ಲಿದೆ,
ಕಲಿ ಕನ್ನಡಿಗನ ಸೊಲ್ಲಿದೆ!

ಜಯ ಕರ್ನಾಟಕ ಮಾತೆ!
ಜಯ ಕರ್ನಾಟಕ ಮಾತೆ!
ಜಯ ಕರ್ನಾಟಕ ಮಾತೆ!

ಧನ ಪುರಾಣ

ಇದ್ದರೆ ಚಿಂತೆ, ಇಲ್ಲದಿದ್ದರೆ ತೊಂದರೆ,
ಬಲ್ಲೆಯಾ ಧನದ ಈ ಮೂಲ ಮಂತ್ರ?
ಇದ್ದರೆ ಮತ್ತಷ್ಟು ಸೇರುವುದು ನೋಡು,
ಇಲ್ಲದಿರೆ ಗಳಿಸಲು ಪಡಬೇಕು ಪಾಡು!

ಬೆಟ್ಟದಲ್ಲೆಲ್ಲೋ ಹುಟ್ಟಿದಾ ನದಿಯು,
ಹರಿಹರಿದು ಸಾಗರವ ಸೇರುವಂತೆ,
ಬಡವರ ಕಿಸೆಯಿಂದ ಹಾರಿ ಬಂದು,
ದೊಡ್ಡ ಬೊಕ್ಕಸಗಳ ತುಂಬಿತಂತೆ.

ಹೊನ್ನು, ಮಣ್ಣು, ಅಧಿಕಾರಗಳ ಬಹುರೂಪಿ,
ಹಲವರಿಗೆ ಇದು ದೇವತಾ ಸ್ವರೂಪಿ.
ಅತಿಯಾದ ಆಸೆ ಮನುಜನ ಖಾಯಿಲೆ,
ಇದಕ್ಕೆ ಮದ್ದಿಲ್ಲ, ಅಳಿಯುವುದು ಸುಟ್ಟಾಗಲೇ!

ಧನಕ್ಕಿದೆ ಧನವನ್ನು ಸೃಷ್ಟಿಸುವ ಶಕ್ತಿ,
ಜೀವ ಜಂತುಗಳಂತೆ ಬೆಳೆಸುವುದು ಸಂತತಿ!
ಸಮಾಧಿ ಮಾಡಿದರೂ ಭೂಮಿ ಅಗೆದು,
ಎದ್ದುಬರುವುದು ನೋಡು ಮರುಜನ್ಮ ಪಡೆದು!

Wednesday, March 4, 2020

ಹೂದೋಟ

ಹೂವ ತೋಟದಿ ನಿಂತೆ ಮೂಕವಿಸ್ಮಿತನಾಗಿ,
ಏಸು ಬಗೆಯ ಹೂಗಳು! ಏನೆಲ್ಲ ಬಣ್ಣಗಳು!
ಚಂಚಲದ, ಸಡಗರದ ಚಿಟ್ಟೆ ದುಂಬಿಗಳಷ್ಟೋ!
ಚಿಟ್ಟೆಗಳ ಮೈಮೇಲಿನ ಚಿತ್ತಾರಗಳೆಷ್ಟೋ!

ಗುಲಾಬಿಯಂದಕೆ ಸರಿಸಾಟಿಯುಂಟೇ?
ಸಂಪಿಗೆಯ ಪರಿಮಳಕೆ ಮರುಳಾಗದುಂಟೇ?
ದಾಸವಾಳದ ರಂಗಿಗೆ ದಾಸ ನಾನಮ್ಮ,
ಮಲ್ಲಿಗೆಯು ಮಾಡಿದೆ ಮನಸನ್ನು ಘಮಘಮ!

ಪ್ರಕೃತಿಯ ಮಡಿಲೆಲ್ಲ ವೈವಿಧ್ಯಪೂರ್ಣ,
ಜೀವನದ ಕನಸುಗಳು ಅರಳಿವೆ ಸಂಪೂರ್ಣ.
ಪ್ರತಿಯೊಂದು ಜೀವಕಿದೆ ಸ್ವಂತಿಕೆಯ ಗಾನ,
ಪ್ರಕೃತಿಯಲಿ  ಇಲ್ಲ ಎಲ್ಲೂ ಏಕತಾನ!

ಅಚ್ಚು ಅರಗಿನ ಗೊಂಬೆಗಳು ನಾವಲ್ಲ,
ತನ್ನತನವ ಯಾರೂ ಬಿಟ್ಟುಕೊಡಬೇಕಿಲ್ಲ.
ಒಂದೊಂದು ಹೃದಯಕಿದೆ ತನ್ನದೇ ಮಿಡಿತ,
ಒಂದೊಂದು ಮನಸಿಗಿದೆ ತನ್ನದೇ ತುಡಿತ.

ಬೆರೆಯೋಣ, ಅರಿಯೋಣ ಎಲ್ಲರ ಮನಸುಗಳ,
ಬೆನ್ನು ತಟ್ಟೋಣ ಸಾಧಿಸಲು ಕನಸುಗಳ.
ಲೋಕವಾಗಲಿ ಸುಂದರ ಹೂದೋಟದಂತೆ,
ಬೇಕಿಲ್ಲ ಇನ್ನು ಮಾಲಿ, ಬೇಲಿಗಳ ಚಿಂತೆ! 

Tuesday, February 25, 2020

ಮುನಿಸೇಕೆ ಮನದನ್ನೆ?






ಮುನಿಸೇಕೆ ಮನದನ್ನೆ, ಮನದರಸಿ
ಕಾತುರದಿ ಬಂದಿರುವೆ ನಿನ್ನನರಸಿ

ಕಲ್ಲಾಯಿತೇಕೆ ಕೋಮಲ ಹೃದಯ?
ಮರೆತೆಯಾ ಜೊತೆಯ ಮಧುರ ದಿನಗಳ?
ನಕ್ಷತ್ರಗಳ ನೋಡುತ ಕಳೆದ ಕ್ಷಣಗಳ?
ಮುಂಗಾರು ಮಳೆಯ ಕಚಗುಳಿಗಳ?

ನೀಲವೇಣಿಯೇ ನಿನ್ನ ಕೇಶದಲಿ ಬಂದಿ
ನಾನಾಗಿದ್ದೆ ನಿನ್ನೆದೆಯ ಪಂಜರದಲಿ,
ಸಂತಸದ ಆಗಸದಲಿ ಹಾರಾಡುತ
ಸಗ್ಗದ ಸೀಮೆಯಲಿ ತೇಲುತಲಿದ್ದೆ.

ತಿರುಗಿ ನೋಡೊಮ್ಮೆ ಕುಂಭನಿತಂಬೆ,
ಕಿರುಕಟಿಯ ಸಿರಿಮನದ ಚೆಲುವೆ,
ಬಿರುನುಡಿಯಾಡಿದ ತಪ್ಪು ನನ್ನದು
ಕ್ಷಮಿಸಲಾರೆಯ ನಿನ್ನೆದೆಯಲಿ ನನ್ನನೊರಗಿಸಿ?

Monday, February 24, 2020

ಮನದ ಅಂಗಳದಲ್ಲಿ

ನನ್ನ ಮನದ ಅಂಗಳದಲ್ಲಿ,
ದಿನಕೊಂದು ಹೊಸತು ರಂಗವಲ್ಲಿ.

ಕಹಿಯ ಕಸವನು ಗುಡಿಸಿ,
ನಗೆಯ ನೀರನು ಚೆಲ್ಲಿ, ನಲ್ಲೆ
ಬಿಡಿಸುವಳು ಚೆಲುವ ರಂಗವಲ್ಲಿ,
ದಿನವೂ ಬಣ್ಣದ ಕನಸು ಅಲ್ಲಿ.

ನಡೆಯುತಿದೆ ಪರಿಪಾಠ ದಿನದಿನವೂ ಪ್ರತಿದಿನವೂ,
ತಪ್ಪಿಲ್ಲ, ತಡೆಯಿಲ್ಲ, ಮರೆವಂತು ಇಲ್ಲವೇ ಇಲ್ಲ,
ಬೆಟ್ಟದ ಮೇಲೆ ಬೀಸುವ ಗಾಳಿಯಂತೆ,
ಮುಂಜಾನೆಯ ಮೂಡಣದ ಸೂರ್ಯನಂತೆ.

ಅಂದೊಂದು ದಿನ, ಗುಡುಗಿತ್ತು, ಸಿಡಿಲಿತ್ತು,
ಧೋ ಎಂದು ಸುರಿದಿತ್ತು ದಿನವೆಲ್ಲ.
ಚದುರಿಹೋಗಿತ್ತು ಮುಂಜಾನೆಯ ರಂಗವಲ್ಲಿ,
ಕರಿಗಿಹೋಗಿತ್ತು ಕನಸು, ಮಳೆಯ ನೀರಿನಲ್ಲಿ.

ಮಳೆ ನಿಂತಾಯಿತು, ದಿನ ಹತ್ತಾಯಿತು,
ಬರಲಿಲ್ಲ ಅವಳು ಹಾಕಲು ನಗುವ ರಂಗವಲ್ಲಿ.
ನಗುವಿಲ್ಲ, ನಲಿವಿಲ್ಲ, ತಂಪಿನ ಇಂಪಿಲ್ಲ,
ಬರಡು ಬರಡಾಯಿತು, ಇನ್ನು ಮನಕೆ ಮುದವೆಲ್ಲಿ?

ಹೀಗೇಕೆ ಮಾಡಿದಳು? ಬರಲಿಲ್ಲವೇಕವಳು?
ತಲೆಯೆತ್ತಿ ನೋಡಿದರೆ ಕಾಣಿಸಿತು,
ಮುಚ್ಚಿದ್ದ ಅಂಗಳದ ಬಾಗಿಲು,
ಅದಕೆ ನಾನೇ ಜಡಿದಿದ್ದ ಬೀಗಗಳು!

ಹೊಸಬೆಳಕು

ಉದಯಿಸಿದೆ ಹೊಸಬೆಳಕು,
ಹಳೆಯ ಕತ್ತಲೆಯ ಸೀಳಿ ಬಂದು.
ಮೂಡುತಿವೆ ಕನಸುಗಳು,
ಹೊಸ ಬೆಳಕಿನಲಿ ಮಿಂದು ಇಂದು.

ಮನಮನಗಳ ನಡುವೆ ಗೋಡೆ ಏಕೆ?
ಕೂಪಮಂಡೂಕಗಳ ಗೊಡವೆ ಬೇಕೆ?
ಬರಲಿ, ಹಿತದ ತಂಪನೆಯ ತಂಗಾಳಿ.
ಇರಲಿ, ಜ್ಞಾನದಾಹದ ಬೆಂಕಿಬಿರುಗಾಳಿ.

ಒಡೆದ ವಿಶ್ವದ ಬಿರುಕುಗಳ,
ಮುಚ್ಚಿ ಮರೆಸಲಿ ಸ್ನೇಹದಂಟು.
ಕದಡಿ ಮುದುಡಿದ ಮನಗಳು,
ಚಿಗುರಲಿ, ಸುಖವು ಮುಂದೆ ಉಂಟು.

ಕಾಡದಿರಲಿ ಹಳೆಯ ನೋವುಗಳು,
ಮಧುರ ನೆನಪುಗಳು ಮಾಸದಿರಲಿ.
ತಳಿರು ತೋರಣಗಳು ಇರಲಿ ನಿತ್ಯ,
ಸಾಗುತಿರಲಿ ಕಾಯಕ, ಅದುವೆ ಸತ್ಯ!