Friday, April 21, 2023

ನವ ವಸಂತ

ಬಂದ ಬಂದ ನವ ವಸಂತ

ತಂದ ತಂದ ಹೊಸ ಪ್ರಪಂಚ


ಹಸಿರಿನ ಸೀರೆಯ ಉಟ್ಟ ವಸುಂಧರೆ

ಉಸಿರಿನ ಸುಗಂಧ ಚುಂಬಕವಾಗಿರೆ

ಫಲಗಳ ಬುತ್ತಿಯ ಆರಿಸಿ ತಂದಿರೆ

ಒಲವಿನ ಉಡುಗೊರೆಯಾಗಿ ನಿಂದಿರೆ


ಮಲ್ಲಿಗೆ ಸಂಪಿಗೆ ಗುಲಾಬಿ ಕೇದಿಗೆ 

ಹುಲ್ಲಿನ ಹಸಿರಿನ ಮೆತ್ತನೆ ಹಾಸಿಗೆ

ಮಾಮರ ಕಿತ್ತಳೆ ಅಂಜೂರ ಹಲಸು

ಅಂದ ಸುಗಂಧ ಸವಿರುಚಿ ಸೊಗಸು


ಬಣ್ಣದ ದಿರುಸನು ಧರಿಸಿದ ಲಲನೆ

ಚಿನ್ನದ ಒಡವೆ ಮಿಂಚಿದೆ ಸುಮ್ಮನೆ

ನೊಸಲಿಗೆ ತಿಲಕ ಕಣ್ಣಲಿ ಹೊಳಪು

ನಸುನಗೆ ವದನ ಗುಲಾಬಿ ಕದಪು


ಅಂದದ ತೋರಣ ರಂಗಿನ ಚಿತ್ತಾರ

ಬಂಧುಗಳ ಮಿಲನಕೆ ಹರುಷದ ಸಾಕಾರ

ಎದೆಯಲಿ ಹರುಷ ಗುಡಿಯಲಿ ಚರಪು

ಯುಗಾದಿ ತಂದಿಹ ಹೊಸತನ ಹುರುಪು!



ಸಂಕ್ರಾಂತಿಯ ಸಂಭ್ರಮ

ಉದಯ ರವಿಯ ಪ್ರಥಮ ಕಿರಣಕೆ, 

ಬಡಗಣದಲ್ಲಿ ಬೆಳಕಾಗಿದೆ. 

ತೂಗಿ ತೊನೆಯುವ ತುಂಬು ತೆನೆಗಳು, 

ಬಕುತಿಯಲಿ ತಲೆಬಾಗಿವೆ. 


ರೈತಜನರ ಕನಸು ಇಂದು, 

ಕಣಜದಲಿ ನನಸಾಗಿದೆ. 

ತಮ್ಮ ಹಕ್ಕಿನ ಕಾಳುಕಡ್ಡಿಗೆ, 

ಹಕ್ಕಿಗಳು ಹಾರಾಡಿವೆ. 


ಬಣ್ಣ ಬಣ್ಣದ ಬಟ್ಟೆಗಳಲಿ, 

ಹೆಂಗೆಳೆಯರು ನಲಿದಾಡಿರೆ, 

ರಂಗು ರಂಗಿನ ರಂಗವಲ್ಲಿಯು, 

ಅಂಗಳದಲಿ ಕುಣಿದಾಡಿದೆ. 


ಎಳ್ಳು, ಬೆಲ್ಲ, ಕೊಬ್ಬರಿ, ಕಡಲೆಯ, 

ಹಾಗೆ ಮಂದಿಯು ಬೆರೆತಿರೆ, 

ಎಳ್ಳು ಬೀರುವ ಒಳ್ಳೆ ಕಾರ್ಯಕೆ, 

ಗೆಳೆತನಗಳು ದೃಢವಾಗಿವೆ. 


ಸುಗ್ಗಿಕಾಲದ ಹುಗ್ಗಿ ರುಚಿಯನು, 

ಹಿಗ್ಗಿ ಹೀರಿದೆ ನಾಲಿಗೆ. 

ಬಾಗಿ ನಮಿಸುವ ಭಾನುದೇವಗೆ, 

ಸುಗ್ಗಿ ತಂದಿಹ ಬಾಳಿಗೆ. 


ಗವಿಗಂಗಾಧರೇಶ್ವರ ಸ್ವಾಮಿಗೆ, 

ಸೂರ್ಯ ರಶ್ಮಿಯ ಅಭ್ಯಂಜನ.

ಬಕುತರೆಲ್ಲರ ಪಾಲಿಗಿಂದು,  

ಆನಂದಾತಿರೇಕದ ಮಜ್ಜನ! 



ಅಮೃತದ ಧಾರೆ

ಮಾತೆಯೆ ನಿನ್ನಯ ಪ್ರೀತಿಯ ಸುಧೆಯು

ಹರಿಯುವ ಸಿಹಿನೀರ ನದಿಝರಿ ತೊರೆಯು

ಸವಿಯಲು ನೀಡಿದೆ ಮಧುಮಯ ಫಲವ

ತುಂಬಿಸಿ ತಂದಿಹೆ ನಿನ್ನೆದೆ ಒಲವ


ಕಾಲಕೆ ಸುರಿಸುವೆ ಅಮೃತದ ಧಾರೆ

ಕೀಲಕವಾಗಿದೆ ಫಸಲನು ಕೋರೆ

ನೀಡಿದೆ ಹಸುರಿನ ಮೆತ್ತನೆ ತಲ್ಪ

ಸುಮಗಳ ಸುಗಂಧ ಮತ್ತಿಗೆ ಸ್ವಲ್ಪ


ಬೀಸಿದೆ ತಂಗಾಳಿ ನಿನ್ನಯ ಸೆರಗು

ಗಾಳಿಗೆ ಹೋಯಿತು ಕಾಡುವ ಕೊರಗು

ತಿರುಕನೊ ಧನಿಕನೊ ಭೇದವೆ ಇಲ್ಲ

ಸರಿಸರಿ ಹಂಚಿಕೆ ಮಡಿಲಿನ ಬೆಲ್ಲ


ಮನುಜನ ಆಸೆಗೆ ಮಿತಿಯೇ ಇಲ್ಲ

ಬೇಲಿಯ ಹಾಕಿದ ತನಗೇ ಎಲ್ಲ

ಚಿನ್ನದ ಮೊಟ್ಟೆಯ ಇಡುವಾ ಒಡಲು

ಕನ್ನವ ಹಾಕಿದ ಒಮ್ಮೆಲೆ ಪಡೆಯಲು


ರಕುತವ ಕಾರಿದೆ ನಿನ್ನಯ ಒಡಲು

ಕಲುಷಿತಗೊಂಡಿದೆ ಪರಿಸರ ಕಡಲು

ಮಣಿಸುತ ನಮ್ಮಯ ತಪ್ಪನು ನೀಗು

ಕ್ಷಮಿಸುತ ನಮ್ಮನು ಒಯ್ಯುತ ಸಾಗು!



Thursday, April 20, 2023

ಕಾವ್ಯಝರಿ

ಆದಿಪೂಜಿತ ಏಕದಂತನೆ ಗಣನಾಯಕ,

ಪಾದ ಮುಟ್ಟುವೆ ಹರಸು ಎನ್ನ ವಿನಾಯಕ.

ವೇದವ್ಯಾಸರ ದಿವ್ಯ ನುಡಿಗೆ ಭವ್ಯ ಲೇಖಕ,

ಮೇಧಾವಿಗಳು ದಾಖಲಿಸಿದ ಶ್ರೇಷ್ಠ ಕಥಾನಕ!


ಚಾಮರಕರ್ಣ ಇದೆಯಲ್ಲ ಕಥೆಯ ಕೇಳಲು,

ಧೀಮಂತ ಮೆದುಳಿಹುದು ಮನನ ಮಾಡಲು,

ಪ್ರೇಮವಿದೆ ಮನದಲ್ಲಿ ಕೃತಿಯ ನೀಡಲು,

ದಾಮೋದರನ ನೀತಿಯನು ನಮಗೆ ಸಾರಲು!


ಝರಿಯಂತೆ ನುಡಿಯುತಿರೆ ವೇದವ್ಯಾಸರು,

ಬರೆಯುತಿಹರು ನದಿಯಂತೆ ಆದಿಪೂಜ್ಯರು.

ಸರಸ್ವತಿಯ ದಂಡೆಯಲಿ ಇವರೀರ್ವರು,

ಪರಮಾತ್ಮನ ನುಡಿಗಳನು ನಮಗೆ ಇತ್ತರು!


ಕದನಗಳ ಬಾಳಿನಲ್ಲಿ ಜೀವನವು ದುರ್ಭರ,

ಇದೆ ಇಲ್ಲಿ ಸಮಸ್ಯೆಗಳ ಸಂಪೂರ್ಣ ವಿವರ.

ಬದುಕಿನಲಿ ತಲುಪಲು ನೆಮ್ಮದಿಯ ಆಗರ,

ಕದವ ತೆರೆ ಭಾರತದ ಪಡೆಯೆ ಉತ್ತರ!



ನಮ್ಮ ಪ್ರೀತಿಯ ಭಾರತ

ಭಾರತ ನಮ್ಮಯ ಪ್ರೀತಿಯ ಮಾತೆ,

ತೆರೆಯವ ದೇಶಬಕುತಿಯ ಖಾತೆ!

ಹಾರಿಸು ಮೇಲೆ ತ್ರಿವರ್ಣ ಪತಾಕೆ,

ತೋರಿಸು ಪ್ರೀತಿಯ ಶಂಕೆಯು ಏಕೆ!


ಕೋರದೆ ಕೊಟ್ಟಿದೆ ಉತ್ತಮ ಸಂಸ್ಕಾರ,

ತೋರುತ ಬೆಳಕಿನ ಅಧ್ಯಾತ್ಮದಾಕರ!

ಹಾರುವ ಮೇಲೆ ಸುಂದರ ಅವಕಾಶ,

ಬೀರುವ ಶಾಂತಿ ಸ್ನೇಹದ ಸಂದೇಶ!


ಭಿನ್ನತೆ ತೊರೆದು ಹಾಕುವ ನಡಿಗೆ,

ಉನ್ನತ ಗುರಿಯನು ಮುಟ್ಟುವ ಕಡೆಗೆ!

ಅನ್ನದ ಕೊರತೆ ಇಲ್ಲದೆ ಹೋಗಲಿ,

ಚಿನ್ನದ ಆಸೆ ಮರತೇ ಹೋಗಲಿ!


ಬಲಿದಾನಗಳ ಮರೆಯದೆ ನಡೆಯಿರಿ,

ಕಲಿಗಳ ನೆನೆಯುತ ಸ್ಫೂರ್ತಿಯ ಪಡೆಯಿರಿ!

ಕಲೆಗಳ ಬೆಳೆಸುತ ಆನಂದ ಹೊಂದಿರಿ,

ಎಲೆಗಳ ಹಾಗೆ ಜೊತೆಯಲಿ ಬದುಕಿರಿ!


ಅಮೃತೋತ್ಸವದ ಸುಂದರ ಘಳಿಗೆ,

ಅಮಿತೋತ್ಸಾಹದ ಬಿರುನಡಿಗೆ!

ಗಮನದಿ ಹಾಕುವ ಪ್ರಗತಿಯ ನಡಿಗೆ,

ಕ್ಷಮತೆಯ ಸದೃಢ ಶಾಂತಿಯ ಕಡೆಗೆ!



ಅರಿಷಡ್ವರ್ಗ(ಹಾಯ್ಕುಗಳು)

*ಕಾಮ*

ಕಾಮಾತುರದಿ
ಸಿಗ್ಗಿಲ್ಲ ಭಯವಿಲ್ಲ
ಮನಕೆ ಮೌಢ್ಯ


*ಕ್ರೋಧ*

ಕ್ರೋಧ ಮೊದಲು
ಸುಡುವುದು ತನ್ನನ್ನು
ಪರಮ ಸತ್ಯ


*ಲೋಭ*

ದುರಾಸೆ ಇದು
ದೂರ ಮಾಡುವುದಲ್ಲ
ತನ್ನವರನೇ


*ಮೋಹ*

ಮೋಹ ರಾಜಸ
ನಿರ್ಮೋಹ ಸಾತ್ವಿಕವು
ಪ್ರೀತಿ ಶಾಶ್ವತ


*ಮದ*

ಮದವೇರಿದ
ಮದ್ದಾನೆಗೆ ಖಚಿತ
ಅಂತಿಮ ಕಾಲ


*ಮಾತ್ಸರ್ಯ*

ಒಳಗೊಳಗೇ
ಕೊರೆವ ಕೆಟ್ಟ ಕೀಟ
ನಾಶ ಖಂಡಿತ


ಸಬಲೆ

ಭಲೇ ಭಲೇ ಓ ಸಬಲೇ,

ಏನೆಲ್ಲಾ ನೀ ಸಾಧಿಸಬಲ್ಲೆ!


ಕತ್ತಲ ಮನೆಯನು ಬೆಳಗಿಸಬಲ್ಲೆ,

ಚಿತ್ತದ ಗೊಂದಲ ನೀಗಿಸಬಲ್ಲೆ,

ತುತ್ತಲಿ ಪ್ರೀತಿಯ ತುಂಬಿಸಬಲ್ಲೆ,

ಬತ್ತದ ಒಲುಮೆಯ ನೀಡುವೆಯಲ್ಲೆ!


ಸಾಲುಮರಗಳ ನೆರಳನು ನೀಡುವೆ,

ಉದ್ಯಮಿಯಾಗಿ ಬದುಕನು ಕೊಡುವೆ,

ಬಾಹ್ಯಾಕಾಶಕೆ ಹಾರುತ ಹೋಗುವೆ,

ಚುಕ್ಕಿಯ ಮುಟ್ಟುವ ಸಾಹಸ ಮಾಡುವೆ!


ರೋಗಿಯ ಸಲಹುವ ಪ್ರೀತಿಯ ಸೋದರಿ,

ಕ್ಷಮೆಯಲಿ ನೀ ಭೂತಾಯಿಯ ಮಾದರಿ,

ಇನಿಯನು ಬಯಸುವ ಪ್ರೇಮದ ವಲ್ಲರಿ,

ಮಾತಿಗೆ ನಿಂತರೆ ನಿಲ್ಲದ ವಾಗ್ಝರಿ!


ದೇಶವ ಕಾಯಲು ಬಂದೂಕು ಹಿಡಿಯುವೆ,

ರೋಷವು ಬಂದರೆ ಇದಿರಾರಿಲ್ಲವೆ,

ಕೋಶವ ತುಂಬುತ ದೇಶವ ಸಲಹುವೆ,

ಎಲ್ಲರೂ ಮೆಚ್ಚುವ ರನ್ನದ ಒಡವೆ!



ಪಾವನ ಪುನೀತ

    (ಛಂದೋಬದ್ಧ *ಸಾಂಗತ್ಯ* ಪ್ರಕಾರದ ರಚನೆ)


ಪಾವನ ಪುನೀತ ಮನದವ ಗೆಳೆಯನೆ

ದೇವನ ಮನೆಗೆ ನಡೆದೆ

ಜೀವನ ಯಾನವ ಬೇಗನೆ ಮುಗಿಸುತ

ಸಾವಿನ ಬಾಗಿಲ ತೆರೆದೆ


ರಸಿಕರ ಮನದಲಿ ತಾರೆಯ ತೆರದಲಿ

ಹಸಿರಿನ ನೆನಪಲಿ ಉಳಿದೆ

ಹಸಿವನು ಅಳಿಸಿದೆ ವಿದ್ಯೆಯ ನೀಡಿದೆ

ಉಸಿರಿಗೆ ಜೀವವನಿತ್ತೆ


ಕಾಯಕ ಪ್ರೇಮದ ಕರುಣೆಯ ಹೃದಯದ

ತಾಯಿಯ ಕರುಳನು ಪಡೆದೆ

ನಾಯಕ ನಟನೆಯ ಚಿತ್ರದೆ ಮಾಡುತ

ನಾಯಕ ಜನರಿಗೆ ಆದೆ


ದಾನಕೆ ಸೇವೆಗೆ ಮಿತಿಯೇ ಇಲ್ಲದೆ

ದೀನರ ದಲಿತರ ಪೊರೆದೆ

ಜೇನಿನ ಮಾತಲಿ ಉತ್ತಮ ನಡೆಯಲಿ

ಗಾನವ ಪಾಡುತ ಮೆರೆದೆ


ಮುತ್ತಿನ ರಾಜನ ಮುದ್ದಿನ ಕುವರನೆ

ಮುತ್ತಿನ ಮಣಿಯೊಲು ಹೊಳೆವೆ

ಕತ್ತಲು ತುಂಬಿದ ಮನಗಳ ಬೆಳಗುತ

ಹತ್ತಿರ ಎದೆಯಲೆ ಇರುವೆ!



ಹೊಸ ನಕ್ಷತ್ರ

ಉದಯವಾಯಿತು ಮಿನುಗು ಚುಕ್ಕಿಯು

ಹೃದಯದಾಗಸ ಬೆಳಗಿತು

ಕದವ ತಟ್ಟುತ ಎಲ್ಲ ವೈಶ್ಯರ

ಮುದದೆ ಕೂಗಿ ಕರೆಯಿತು

 

ಆಧ್ಯಾತ್ಮವು ಬಳಿಗೆ ಸೆಳೆಯಿತು

ಎಳೆಯ ಚಿಗುರುವ ವಯಸಲೇ

ಶಾರದೆಯ ಪ್ರಿಯಪುತ್ರನಾದೆ

ಬೆಳೆದು ಹೆಮ್ಮರವಾಗುತ

 

ಬಂದೆ ಸಚ್ಚಿದಾನಂದ ಗುರುವೆ

ನಮಗೆ ದಾರಿ ತೋರಲು

ನಿನ್ನ ಹಿಂದೆ ನಾವು ನಡೆವೆವು

ನಮ್ಮ ಬಾಳನು ಬೆಳಗಲು

 

ಗಂಗಾ ನದಿಯ ತೀರದಲ್ಲಿ

ಹೊಸತು ಜನುಮವ ಪಡೆದೆ ನೀ

ನಮ್ಮ ಪೀಠವ ಬೆಳಗಲೆಂದೇ

ನಮ್ಮ ನಡುವಿಗೆ ಬಂದೆ ನೀ

 

ಜನರ ಬಾಳಲಿ ಪ್ರೀತಿ ಪ್ರೇಮದ

ಬೀಜ ಬಿತ್ತಲು ಬಂದೆ ನೀ

ದೀನ ದಲಿತರ ಬಾಳನಲ್ಲಿ

ಬೆಳಕ ಕಿರಣವ ತಂದೆ ನೀ

 

ವೀಣೆ ನಾದದ ಮಾಧುರ್ಯದಲ್ಲಿ

ತೇಲಿ ಮುಳುಗಿಸು ನಮ್ಮನು

ವೇದಜ್ಞಾನದ ವೇದಾಂತಿ ನೀನು

ಅರಿವ ನೀಡಿ ಹರಸೆಮ್ಮನು

 

ವೈಶ್ಯಕುಲದ ಪೀಠಾಧಿಪತಿಯಾಗುತ್ತಿರುವ ಶ್ರೀ ಸಚ್ಚಿದಾಂದ ಸ್ವಾಮಿ ಸರಸ್ವತಿಯವರ ಬಗ್ಗೆ ಕವನರೂಪದ ಭಕ್ತಿ ಸಮರ್ಪಣೆ!



ಹಳ್ಳಿಯ ಸೊಗಡು

ಕಣ್ಣನು ತಣಿಸುವ ನೋಟದ ಅಂದ,

ಹಸಿಮಣ್ಣಿನ ವಾಸನೆ ಮೂಗಿಗೆ ಚೆಂದ!

ದೂರದ ಬೆಟ್ಟ ಗುಡ್ಡದ ನೋಟಗಳ,

ನೀಡಬಲ್ಲವೇ ಕಾಗದದ ನೋಟುಗಳು!


ಹಳ್ಳಿಯ ಸ್ನೇಹ, ಹಳ್ಳಿಯ ಪ್ರೇಮ,

ಮರಬಳ್ಳಿಗಳ ಸ್ನೇಹದ ಧಾಮ!

ಪರಿಶುದ್ಧ ಗಾಳಿ, ಪರಿಶುದ್ಧ ಪ್ರೇಮ,

ಹಸಿರಿನ ಉಸಿರಿನ ಸ್ವರ್ಗದಾರಾಮ!


ಜುಳು ಜುಳು ಹರಿಯುವ ನೀರಿನ ತೊರೆಗಳು,

ಚಿಲಿಪಿಲಿಗುಟ್ಟುತ ಹಾರುವ ಹಕ್ಕಿಗಳು!

ಹುಲ್ಲನು ಮೇಯುವ ದನಕುರಿಮರಿಗಳು,

ಚೆಂದದ ಹೂಗಳಲಿ ಬಣ್ಣದ ಚಿಟ್ಟೆಗಳು!


ಇಂತಹ ಹಳ್ಳಿಯು ಬೇಡವೆ ಕಂದ?

ಯಾಂತ್ರಿಕ ಪಟ್ಟಣದಲ್ಲೇನಿದೆ ಚೆಂದ?

ಕೂಲಿಯ ಬದುಕಲಿ ಏನಿದೆ ನೆಮ್ಮದಿ?

ಮೇಟಿಯ ಆಟವ ಆಡುನೀ ಚೆಂದದಿ!


ಬೆವರನು ಸುರಿಸು, ಹಸಿರನು ಬೆಳೆಸು,

ಹಸಿವಿನ ಕೂಗನು ನೀ ಅಳಿಸು!

ಅನ್ನವ ನೀಡುವ ಯೋಗದ ಭಾಗ್ಯ,

ಕೈಬಿಡದಿರು ಇಂತಹ ಸೌಭಾಗ್ಯ!



ಜಗದೊಡೆಯನಿಗೆ ನಮನ

ವಿಶ್ವವ ವ್ಯಾಪಿಸಿರುವ ವಿಶ್ವೇಶ್ವರನೇ,

ಮೂಜಗವು ವಂದಿಸುವ ಮುಕ್ಕಣ್ಣನೇ,

ಜಗದಾತ್ಮ ನೀನು, ಜಗದೀಶ ನೀನು,

ನಮಿಸುವೆ ಪರಮಾತ್ಮ, ಪರಮೇಶ್ವರ!


ಜಟಾಜೂಟಧಾರಿ, ನಾಗಾಭರಣ,

ಶಿರದಲ್ಲಿ ಚಂದ್ರ, ಎದೆಯಲ್ಲಿ ಸೂರ್ಯ,

ಬುವಿಗೆಲ್ಲ ಬೆಳಕೀವ ಬಸವೇಶ್ವರನೇ,

ಜಗಜ್ಯೋತಿ ನೀನು, ವಿಷಕಂಠನೇ!


ಸ್ಥಿರಚಿತ್ತ ನೀನು, ಚಂಚಲನು ನಾನು,

ತಿಳಿಗೊಳಿಸು, ಸ್ಥಿರಗೊಳಿಸು,

ಮನವನ್ನು ಮುದಗೊಳಿಸು,

ಭಸ್ಮಾಂಗಧಾರಿ, ಫಣಿಭೂಷಣ!



ತತ್ವಜ್ಞಾನಿ ತಾತಯ್ಯ

ನಾರೇಯಣ ಗುರು, ನಾರೇಯಣ ಗುರು,

ಬಂದೆವು ನಿನ್ನಯ ಪಾದಕೆ ಶರಣು!


ಪಾವನ ಪುಣ್ಯದ ಜನ್ಮವ ಪಡೆದೆ,

ಆತ್ಮವು ತೋರಿದ ದಾರಿಯ ಹಿಡಿದೆ.

ಅಮರ ನಾರಾಯಣ ಪ್ರಸಾದನೇ,

ಕೈವರ ಪುರದ ಮಹಾತ್ಮನೇ!


ಎಂಜಲ ಕೂಳಿಗೆ ಪರಾಕು ಏಕೆ,

ಸಂಸಾರಿಗಳಿಗೇಕೆ  ವಾರಾಂಗನೆಯು?

ಮರಗಳ ಕಡಿದು ಹಾಳಾಗದಿರಿ,

ಹೇಳಿದೆ ಜೀವನ ತತ್ವಗಳ!


ಅರ್ಥವಿಲ್ಲದ ಓದದು ಏಕೆಂದೆ,

ಮತಕುಲಗಳಿಗೆ ಅರ್ಥವು ಇಲ್ಲೆಂದೆ.

ಸಾಮಾನ್ಯ ಜನರ ಸದ್ಗುರು ನೀನು,

ಬದುಕಿನ ಪಾಡನೇ ಹಾಡಾಗಿಸಿದೆ!


ತುದಿಮೊದಲರಿಯದ ಪಾಮರರಿಗೆ,

ಒಳಗಿನ ಆತ್ಮದ ಬೆಳಕನು ನೀಡಿದೆ.

ಬಳೆಗಾರ ನೀನು ಬಾಳನು ಬೆಳಗಿದೆ,

ನಾರೇಯಣ ಗುರು ತಾತಯ್ಯನಾದೆ.


ಕಲ್ಲನು ಬಾಯಲೇ ಸಕ್ಕರೆ ಮಾಡಿದೆ,

ನಮ್ಮಯ ಬದುಕಿಗೆ ಸಿಹಿಯನು ನೀಡು.

ಮಣ್ಣಿನ ಹಕ್ಕಿಗೆ ಜೀವವ ತುಂಬಿದೆ,

ಭಕ್ತಿಯ ದೀಪಕೆ ಪ್ರಾಣವ ನೀಡು!


ಹಾವಿನ ಬಾಯಲೇ ನೀರನು ತರಿಸಿದೆ,

ಬತ್ತಿದ ಬದುಕಿಗೆ ಜಲವನು ನೀಡು.

ಒಕ್ಕಣ್ಣನಿಗೆ ನೀ ನೀಡಿದೆ ಕಣ್ಣನು,

ನೀಡು ನಮಗೆ ಜ್ಞಾನದ ನೇತ್ರವ!


ಅಂತಃಚಕ್ಷುವು ತೆರಯಿತು ನಿನಗೆ,

ಕಾಲದ ಜ್ಙಾನವ ನೀಡಿದೆ ನಮಗೆ.

ನಾರೇಯಣನ ಆತ್ಮದ ಬಂಧುವೆ,

ಅಮರನಾದೆ ಸಜೀವ ಸಮಾಧಿಯಲಿ!


*ಕೈವಾರ ತಾತಯ್ಯ ರಾಷ್ಟ್ರಮಟ್ಟದ ಕವನ ಸ್ಪರ್ಧೆ* ಯಲ್ಲಿ

ದ್ವಿತೀಯ ಬಹುಮಾನ ಪಡೆದ ಕವನ



ಅಕ್ಕ-ತಂಗಿ

ಅಕ್ಕತಂಗಿಯರ ಬಂಧ,

ಒಂದು ಭದ್ರಕೋಟೆ.

ಬಾಳ ಮುದವಾಗಿಸುವ, 

ಸಿಹಿಯ ಮೂಟೆ.


ಜೊತೆಗಾತಿ, ಪ್ರಾಣಸಖಿ,

ತಾಯಿಮಕ್ಕಳ ರೀತಿ,

ಹಲವು ಮುಖಗಳ,

ಸಂಬಂಧ ಇವರ ಪ್ರೀತಿ.


ಒಂದು ಕ್ಷಣ ಪೈಪೋಟಿ,

ಮರುಕ್ಷಣ ಸಂಪ್ರೀತಿ.

ಆದರ್ಶ ಮೇಲ್ಪಂಕ್ತಿಯ,

ಸುವರ್ಣ ಸ್ನೇಹಸೇತು.


ಚಿಕ್ಕಂದಿನ ಜಗಳಗಳು,

ಪುಟ್ಟ ಕದನಗಳು,

ಬಂಧವ ಬೆಸೆಯುವ,

ಗಟ್ಟಿ ಹಗ್ಗಗಳು!


ಈ ಪಯಣ ಸಾಗುವುದು,

ಕವಲು ದಾರಿಯವರೆಗೆ,

ಬದುಕಿನ ದಾರಿಗಳು,

ಬೇರೆಯಾಗುವವರೆಗೆ.


ನೆನಪುಗಳು ಸುಳಿಯುವವು,

ಬಾಳ ಕೊನೆಯವರೆಗೆ,

ಸುಡುವ ಬಿರು ಬಿಸಿಲಲಿ,

ಹಾಯಿ ತಂಬೆಲರ ಹಾಗೆ!


ಹಳೆಯ ನೆನಪುಗಳು,

ಸುಳಿದಾಡುವ ಸಮಯ,

ಹಂಬಲವು  ಎದೆಗಪ್ಪಲು,

ತನ್ನ ತವರಿನಾ ಸಖಿಯ!



ನೆರಳಾಗುವೆ

ಮಳೆಯೇ ಬರಲಿ, ಬಿಸಿಲೇ ಇರಲಿ,

ನೆರಳಾಗುವೆ ನಿನಗೆ ಬಾ ತಮ್ಮ!


ಬಾಳ ಹಾದಿಯು ಸುಲಭವೇ ಅಲ್ಲ,

ಹಳ್ಳ, ಗುಂಡಿ, ಇದೆ ಕೆಸರೆಲ್ಲ!

ಜೊತೆಯಲೇ ನಡೆವೆ, ತಂಪನು ಎರೆವೆ,

ನೆರಳಾಗುವೆ ನಿನಗೆ ಬಾ ತಮ್ಮ!


ಬಣ್ಣ, ಬಣ್ಣದ ಛತ್ರಿಯು ಏಕೆ?

ಸೊಗಸಾಗಿದೆ ಈ ಹಸಿರೆಲೆಯು!

ಮರುಳಾಗದಿರು ನೀ ಬಣ್ಣಕ್ಕೆ,

ನೆರಳಾಗುವೆ ನಿನಗೆ ಬಾ ತಮ್ಮ!


ನಗುತಾ ನಾವು ನಡೆಯುವ,

ಎಂದಿಗೂ ಹೀಗೇ ಜೊತೆಯಿರುವ,

ನಗುವು ನಿನ್ನದು, ಆನಂದ ನನ್ನದು,

ನೆರಳಾಗುವೆ ನಿನಗೆ ಬಾ ತಮ್ಮ!


ಹೆಜ್ಜೆಗೆ ನಾನು ಹೆಜ್ಜೆಯ ಹಾಕುವೆ,

ತಪ್ಪು ದಾರಿಗೆ ಬಿಡೆ ನಾನು!

ಬಾಳ ದಾರಿಯ ಕೊನೆವರೆಗೂ,

ನೆರಳಾಗುವೆ ನಿನಗೆ ಬಾ ತಮ್ಮ!



ಪಾಠ

ಸಿದ್ಧಪಡಿಸುತಿಹಿಳು ತಾಯಿ ಮಗಳನ್ನು,

ಅವಳ ಹೊಸ ಬಾಳ ಪಯಣಕೆ,

ತಾ ಕಲಿತ ಪಾಠಗಳ ಕಲಿಸುತ್ತ.


ಕೂದಲಲಿ ಗಂಟಾಗದಂತೆ ಬಿಡಿಸುತ್ತ,

ಸಂಬಂಧಗಳು ಗಂಟಾಗದಂತೆ,

ಚತುರತೆಯಲಿ ಬಿಡಿಸಬೇಕೆಂದು.


ಕೂದಲಿಗೆ ಘಮದ ಎಣ್ಣೆ ಸವರುತ್ತ,

ಕುಟುಂಬಕೆ ಪೋಷಣೆ ಕೊಡಲು,

ಪ್ರೀತಿಯ ಸುಗಂಧದೆಣ್ಣೆ ಬೇಕೆಂದು.


ಜಡೆಯನು ಹೆಣೆಯುತಿಹಳು ತಾಯಿ,

ಕೂಡುಕುಟುಂಬದ ಸಬಲತೆಗೆ,

ಒಗ್ಗಟ್ಟಿನಲಿ ಬಲದ ಗುಟ್ಟಿದೆಯೆಂದು.


ಕನ್ನಡಿಯಲಿ ನೋಡೆನ್ನುತಿಹಳು,

ತನ್ನ ನಡವಳಿಕೆ ತಾನೇ ಕಂಡು,

ತಪ್ಪುಗಳನು ತಿದ್ದಿಕೊಳಬೇಕೆಂದು.


ತಲೆಮಾರಿನಿಂದ ತಲೆಮಾರಿಗೆ,

ಸಂಸ್ಕಾರವಿಲ್ಲಿ ಹಸ್ತಾಂತರ,

ಜೆಡೆ ಹೆಣಿಕೆ ಇಲ್ಲಿ ಪ್ರೀತಿಗೆ ಮಾತ್ರ!



ಅಗ್ನಿಪರ್ವತ



ಮಧ್ಯರಾತ್ರಿಯ ನೀರವತೆಯಲ್ಲಿ

ಸಿಡಿಯಿತು ಅಗ್ನಿಪರ್ವತ



ಕೋಟಿಕೋಟಿ ಜನರ ಒಡಲ ಬೆಂಕಿ

ಹೊರ ಹರಿಯಿತು ಶತ್ರುಗಳ

ಮಾರಣ ಹೋಮಕ್ಕೆ ಸಾಕ್ಷಿಯಾಗಿ



ವರುಷ ವರುಷಗಳ ತಾಪ

ಒಳಗೊಳಗೇ ಕುದಿಯುತಿತ್ತು

ಪಾಪದ ಕೊಡ ತುಂಬಿ ನಿಂತಿತ್ತು



ಬೆನ್ನಿಗೆ ಚೂರಿ ಹಾಕುವ ಹೇಡಿಗಳ

ಕಾಲು ಕೆರೆದು ಜಗಳಕ್ಕೆ ಎಳೆಯುವ ದಾಡಿಗಳ

ಕಾರ್ಯಕ್ಕೆ ಬೇಸತ್ತು ಹೋಗಿತ್ತು ದೇಶ



ಮಧ್ಯರಾತ್ರಿಯ ನೀರವತೆಯಲ್ಲಿ

ಸಿಡಿಯಿತು ಅಗ್ನಿಪರ್ವತ

ನಂತರದಲ್ಲಿ ಸ್ಮಶಾನ ಮೌನ



ಓಂ ಶಾಂತಿ ಶಾಂತಿ ಶಾಂತಿಃ


ಸನ್ನಿಹಿತ

ಬ್ರಹ್ಮಚರ್ಯಾಶ್ರಮದಲ್ಲಿ ಕಾಮ ಕುಸುಮಗಳ ತೋಟ,

ಗೃಹಸ್ಥಾಶ್ರಮದಲ್ಲಿ ಕೊಲೆ, ಸುಲಿಗೆಗಳ ಪರಿಪಾಠ,

ವಾನಪ್ರಸ್ಥದಲ್ಲಿ ಜೀವಿಸಲು ಜಂಜಾಟ,

ಸನ್ಯಾಸಾಶ್ರಮದಲ್ಲಿ ಸಕಲ ವೈಭೋಗದಾಟ!

 

ತೋಟವ ಮೇಯುವ ಬೇಲಿಯಂತಹ ಅಧಿಕಾರವರ್ಗ,

ಕಾರ್ಮಿಕವರ್ಗದಲಿ ಸೋಮಾರಿತನದ ಅಧಿಪತ್ಯ,

ಆರಕ್ಷಕ ದಳದಲ್ಲಿ ಭಕ್ಷಕರೆ ಬಹಳ,

ಯಥಾ ಪ್ರಜಾ ತಥಾ ರಾಜ! ಯಥಾ ಪ್ರಜಾ ತಥಾ ರಾಜ!

 

ತಾಯ ಹಾಲಿನಲೇ ಮೂಡುತಿದೆ ನಂಜು,

ಒಳಗಣ್ಣುಗಳಿಗೆ ಕವಿಯುತಿದೆ ಮಂಜು,

ಮುಳುಗುತಿದೆ ಇಂದು ಅಧರ್ಮದಲಿ ಭಾರತ,

ಧರ್ಮಸಂಸ್ಥಾಪನೆ ಇನ್ನು ಸನ್ನಿಹಿತ! ಸನ್ನಿಹಿತ!


ಮಸಣವಾಯಿತು ದೇವಭೂಮಿ...

ಮೇಘ ಸಿಡಿಯಿತು, ಭುವಿಯು ನಡುಗಿತು,

ಮುಸಲಧಾರೆಯ ಏಟಿಗೆ, ಉಕ್ಕೊ ನದಿಗಳ ರಭಸಕೆ.



ಮಸಣವಾಯಿತು ದೇವಭೂಮಿ

ಪ್ರಳಯನಾದದ ಧಾಟಿಗೆ,

ನಿಂತ ನೆಲವು ಹಾಗೇ ಕುಸಿದರೆ

ಆಸರೆಯೆಲ್ಲಿದೆ ಬದುಕಿಗೆ.



ತಂದೆ ತಾಯರ, ಮುದ್ದುಮಕ್ಕಳ

ತೋಳಹಾರದ ಬದಲಿಗೆ,

ಅಗಲಿಕೆಯ ಕಲ್ಲ ಬಂಡೆಯು

ಜೋತುಬಿದ್ದಿತು ಕೊರಳಿಗೆ!



ಗರ್ಭಗುಡಿಯಲಿ, ದೇವನೆದುರಲಿ

ಪ್ರಾಣಭಿಕ್ಷೆಯ ಹರಕೆಗೆ,

ಸಾವುನೋವಿನ ವರವು ದೊರೆಯಿತು,

ಸ್ತಬ್ಧವಾಯಿತು ಗುಂಡಿಗೆ!



ಕ್ರೂರಮೃಗಗಳ, ಕ್ಷುದ್ರಮನಗಳ,

ಕಾಮ, ಲೋಭದ ಮತ್ತಿಗೆ,

ಸತ್ತ ಶವಗಳು ಮತ್ತೆ ಮಡಿದವು,

ನಾಚಿಕೆಗೇಡು ನಾಡಿಗೆ, ನಾಚಿಕೆಗೇಡು ನಾಡಿಗೆ!