Tuesday, November 21, 2023

ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತು

ಆರ್ಯವೈಶ್ಯ ಸಾಹಿತ್ಯ ಪರಿಷತ್ತು,

ನಮಗು ಗೊತ್ತು, ನಿಮಗು ಗೊತ್ತು,ಎಲ್ಲರಿಗೂ ಗೊತ್ತು!


ಅಂಬೆಗಾಲ ಇಡುತ್ತಿದ್ದ ಈ ನಿಮ್ಮ ಪೋರ,

ಆಗಿಹನು ಹದಿಹರೆಯದ ಚಿತ್ತ ಚೋರ!

ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಗಮನವ ಸೆಳೆದವ,

ಚಿಗುರು ಮೀಸೆ ತೀಡುತ್ತ ನಗುನಗುತ ನಿಂತಿರುವ!


ಸಾಹಿತ್ಯ ಸಂಸ್ಕೃತಿಗೆ ನಮಿಸಿ ಹೆಜ್ಜೆ ಇಟ್ಟವ,

ಎಲೆಯ ಮರೆಯ ಕಾಯ್ಗಳಿಗೆ ಬೆಳಕನು ಕೊಟ್ಟವ!

ಉದಯಿಸುವ ಪ್ರತಿಭೆಗಳ ಕೈಯ ಹಿಡಿದವ,

ಬೆನ್ನ ತಟ್ಟಿ ಧೈರ್ಯ ತುಂಬಿ ಅಭಯವಿತ್ತವ!


ದಾನಿಗಳ ಕೊಡುಗೆಯಿಂದ ಶಕ್ತಿವಂತನು,

ಅವರ ನೆರವನೆಂದೂ ಮರೆತು ನಡೆಯನು!

ಸದಸ್ಯರು ಕೊಟ್ಟ ಹುರುಪು ರಕ್ಷೆಯಾಯಿತು,

ಕಾರ್ಯಕಾರಿ ಶ್ರಮದಿಂದ ಯಶವು ಬಂದಿತು!


ಸಾಧಿಸಲು ಕಲಿಯುಲು ಇನ್ನೂ ಇದೆ ಬಹಳ,

ಬೆಳೆಯುವನು ಬೆಳೆಸುವನು ದಾರಿ ಮಾಡಿ ಸರಳ!

ಹೀಗೆ ಇರಲಿ ಸದಾ ನಿಮ್ಮ ಪೋಷಿಸುವ ಪಾತ್ರ,

ಆಗುವನು ಜನಾಂಗಕೆ ಕಂಗಳ ನಕ್ಷತ್ರ!

Friday, October 13, 2023

ಹನಿಗವನಗಳು

 ೧. ಸರ್ವಸ್ವ


ಮಗುವಿಗೆ ಮಾತೆಯ ಮಡಿಲೇ ಸರ್ವಸ್ವ

ಪ್ರಿಯತಮೆಗೆ ಪ್ರಿಯನ ಒಲವೇ ಸರ್ವಸ್ವ

ಬುವಿಗೆ ರವಿಚಂದ್ರರ ಬೆಳಕೇ ಸರ್ವಸ್ವ

ಹರಿವ ನದಿಗೆ ಕರೆವ ಕಡಲೇ ಸರ್ವಸ್ವ

ಭಕ್ತನಿಗೆ ಪರಮಾತ್ಮನ ಪಾದವೇ ಸರ್ವಸ್ವ

ಇಂದಿನ ಜನಕೆ ಚತುರವಾಣೀಯೇ ಸರ್ವಸ್ವ!

Sunday, October 1, 2023

ದೀಪಾವಳಿ

ಕಾಣುತಿಹುದು ದೀಪ ಮಾಲೆ,

ಬೀದಿಯಲ್ಲಿ ಸಾಲು ಸಾಲೆ.

ಬೆಳಕ ಬೀರಿ ನಗುವ ಚಿಮ್ಮಿದೆ,

ದೀಪಾವಳಿಯ ಹುರುಪು ತಂದಿದೆ.


ಗಂಗಾ ಮಾತೆಯೆ ಶರಣು ಶರಣು

ನೀರ ತುಂಬುವೆ ಇಂದು ನಾನು

ಶುದ್ಧವಾಗಲಿ ಮಲಿನ ತನುವು

ಹಗುರವಾಗಲಿ ನೊಂದ ಮನವು


ಕೃಷ್ಣ ದೇವನೆ ನಿನಗೆ ನಮನ

ಆಗಲಿಂದೇ ಅಸುರ ದಮನ

ನರಕ ಚತುರ್ದಶಿ ಶುಭದಿನ

ನರಕಾಸುರರಿಗೆ ಕೊನೆ ದಿನ


ಕೇಳುತಿಹುದು ಗೆಜ್ಜ ನಾದ,

ನೋಡು ಅಲ್ಲಿ ದಿವ್ಯ ಪಾದ,

ಬಂದಳಗೋ ಲಕುಮಿ ತಾಯಿ,

ಸಲಹು ಎಮ್ಮನು ನೀನು ಮಾಯಿ.


ಬಕುತಿ ಭಾವಗಳು ಚಿಮ್ಮಿ ಓಕುಳಿ

ಹರುಷದಾ ದೀಪಾವಳಿ

ದೀಪಗಳ  ಸಿರಿ ಬೆಳಕಲಿ

ವಿಶ್ವ ಶಾಂತಿಯು ಹರಡಲಿ


ಬೆಳಕಿನ ಎರವಲು

ನೀಡಿ ಬೆಳಕಿನ ಎರವಲು

ದೀಪವಾಗಿಸು ಎನ್ನನು.

ದೀಪಾವಳಿಗಳ ಮಾಲೆಯಲ್ಲಿ,

ಚೆಂದ ಪೋಣಿಸು ಎನ್ನನು.


ಜಗಕೆ ಮಿಣುಕು ಬೆಳಕನಿತ್ತು

ಕುಣಿವೆ ನಿನ್ನ ಹೆಸರಲಿ.

ಕೆರಯ ನೀರನು ಕೆರೆಗ ಚೆಲ್ಲಿದ,

ಧನ್ಯ ಭಾವವು  ನನ್ನದಿರಲಿ.


ಮನದ ತಮವು ಕರಗಲಿ,

ಜಡತೆ ಮಾಯವಾಗಲಿ.

ಜಗದ ನೋವು ನೀಗಲಿ,

ಹೊಸ ಬೆಳಕಿನಾ ಬೆಳಕಲಿ.


ಆನಂದ

ಕುಡುಕನಿಗೆ ಮತ್ತಿನಲೇ ಆನಂದ

ಕಾಮುಕಗೆ ದೇಹಸುಖವೇ ಆನಂದ

ಬಕುತನಿಗೆ ಸನ್ನಿಧಿಯೇ ಆನಂದ

ಆನಂದವಿರುವಾಗ ಮತ್ತೇನು ಬೇಕೆಂದ!


ಕತ್ತೆಗೆ ಪಾಳುಗೋಡೆಯೇ ಚೆಂದ

ಅರಸನಿಗೆ ಅರೆಮನೆಯೇ ಅಂದ

ಬಡವಗೆ ಹಟ್ಟಿಯಲೇ ಆನಂದ

ಮೀನು ಅಟ್ಟುವವಗೆ ಇಲ್ಲ ದುರ್ಗಂಧ!


ಹಕ್ಕಿಗೆ ನೀರಿನಲಿ ಗೂಡಿಲ್ಲ

ಮೀನಿಗೆ ಬಾನಿನಲಿ ಎಡೆಯಿಲ್ಲ

ಚತುಷ್ಪಾದಕೆ ನೆಲವೇ ಎಲ್ಲ

ಮನುಜ ಮಾತ್ರ ಎಲ್ಲಿಯೂ ಸಲ್ಲ!


ಮತ್ತು ಬೇಕೆನುವವಗೆ ಮದ್ದೇ ಹಾಸ,

ಹಿತವಚನ ಕಿವಿಗೆ ಕಾದ ಸೀಸ

ಕಾಣಿಸದೇ ಇಲ್ಲಿ ಮತ್ತಿನ ಮೋಸ?

ಕಾಪಾಡಬೇಕಿದೆ ನಮ್ಮೆಲ್ಲರ ಕೂಸ!

Tuesday, September 26, 2023

ಜೋಡಿ ಜೀವ

ಜೋಡಿ ಜೀವದ ದೂರದ ಪಯಣ

ವಿರಮಿಸಲಿಲ್ಲ ಒಂದು ಕ್ಷಣ

ಭಾರವ ಹೊತ್ತು ಬಾಗಿದೆ ಬೆನ್ನು 

ಪ್ರೀತಿಯ ಪೊರೆಗೆ ಮಂಜಾಗಿದೆ ಕಣ್ಣು


ಸೂತ್ರವು ಹರಿದಿದೆ ಗಾಳಿಪಟಕೆ, 

ಏಳುತ ಬೀಳುತ ಸೇರುವುದೆಲ್ಲಿಗೆ? 

ಹಗಲಲೇ ಕಾಡಿದೆ ಇರುಳಿನ ಕುರುಡು

ಮಕ್ಕಳು ಇದ್ದರೂ ಬಾಳೇ ಬರಡು. 


ನಿಮ್ಮಯ ನೆರಳಲಿ ಬೆಳೆದ ಸಸಿಗಳು

ಆದವು ಬೇಗನೆ ನೆರಳಿನ ಮರಗಳು 

ದೂಡಿವೆ ನಿಮ್ಮನೇ ಬಿಸಿಲಿನ ಝಳಕೆ

ಕರುಣೆಯೇ ಇಲ್ಲವೇ ಇಂದಿನ ಜನಕೆ

ಮುಕ್ತಕಗಳು - ೧೦೧

ಸಂತೆಯಲಿ ಸರಕಿರಲು ಕಿಸೆಯಲ್ಲಿ ಹಣವಿರಲು

ಕಂತೆಕಟ್ಟುತ ಸರಕು ಕೊಳ್ಳುವೆವು ದರಕೆ |

ಚಿಂತನೆಗೆ ವಿಷಯವಿರೆ ಆಸಕ್ತ ಮನಗಳಿರೆ

ಅಂತಗೊಳಿಸುವ ಶಂಕೆ ~ ಪರಮಾತ್ಮನೆ ||೫೦೧||


ಹುಟ್ಟುವೆವು ಅಳುತಲೇ ಎಲ್ಲರೂ ಜಗದಲ್ಲಿ

ಕಟ್ಟುವೆವು ಅನವರತ ನಗುವ ಕನಸುಗಳ |

ಕೊಟ್ಟರೇ ಇತರರಿಗೆ ನಗೆಯ ಕಾಣಿಕೆಗಳನು

ಒಟ್ಟುವೆವು ನಗೆಗಂಟು ~ ಪರಮಾತ್ಮನೆ ||೫೦೨||

ಒಟ್ಟು = ಕೂಡಿಸು


ಕರೆದುತಂದರೆ ಧನವು ಗೆಳೆಯರನು ಹೊಸದಾಗಿ

ಒರೆಹಚ್ಚಿ ಅವರ ಪರಿಶೀಲಿಸಿತು ಕಷ್ಟ |

ತೊರೆಯದೇ ಕಷ್ಟಕ್ಕೆ ಆದವನೆ ನಿಜಗೆಳೆಯ

ಅರಿ ನಂಬುವಾ ಮುನ್ನ ~ ಪರಮಾತ್ಮನೆ ||೫೦೩||

ಸಮರ್ಪಣೆ

ಮಾಧವಾ ಕೃಷ್ಣಾ ಮಧುಸೂದನ!

ನಿನಗಾಗಿ ಅರ್ಪಣೆ ಈ ನನ್ನ ಗಾನ.

ಮಿಡಿದಿದೆ ಎದೆಯು ಪ್ರೀತಿಯ ತಾನ,

ಮಾಡಿಹೆ ನಿನದೇ ಮುಗಿಯದ ಧ್ಯಾನ!


ಮುರುಳಿಯ ನಾದವ ಕೇಳಿಸು ನೀನು,

ಮನದಲಿ ಅದನೇ ತುಂಬುವೆ ನಾನು!

ಮತ್ತೆಮತ್ತೆ ನಿನ್ನನು ಕಾಡುವೆನೇನು?

ಮನದಲೆ ತುಂಬಿರೆ ಸವಿಸಿಹಿ ಜೇನು!


ಕಾದಿವೆ ಕಂಗಳು ನಿನ್ನಯ ದರ್ಶನಕೆ,

ಬೆಳಕನು ತೋರಿಸು ಈ ನನ್ನ ಮನಕೆ.

ಉತ್ತರ ದೊರೆಯಲಿ ಕಾಡುವ ಜಗಕೆ,

ಪಾವಿತ್ರ್ಯ ಸಿಗಲಿ ನನ್ನಯ ಜನುಮಕೆ.


ನಿನಗಾಗಿ ನಾನು ಹಾತೊರೆದಿರಲು,

ತೆರೆಯೋ ಬೇಗ ನಿನ್ನೆದೆ ಬಾಗಿಲು.

ನದಿಗಳು ಹರಿದು ಸೇರಿವೆ ಕಡಲು,

ಮೀರೆಯು ಬಂದಳು ನಿನ್ನನು ಸೇರಲು!

Monday, August 28, 2023

ಭಾರತೀಯರು ನಾವು

ಭಾರತೀಯರು ನಾವು ಎನ್ನುವುದೆ ಹಿರಿಮೆ,

ಮೇರು ಗಿರಿಯೆತ್ತರವು ನಮ್ಮಯಾ ಗರಿಮೆ!


ಬಹು ಸನಾತನ ನಮ್ಮ ವಿಧಿ ವಿಚಾರಗಳು,

ನವನೂತನವು ನಮ್ಮ ಆವಿಷ್ಕಾರಗಳು!

ಆಚಾರ ಸುವಿಚಾರ ಸಂಸ್ಕಾರವಂತರು,

ಹೃದಯ ವೈಶಾಲ್ಯತೆಯ ಭಾವ ಮೆರೆದವರು.


ವೈರಿಪಡೆಗಳೆದೆಗಳ ಮೆಟ್ಟಿನಿಂತವರು,

ಸ್ನೇಹವನು ಬಯಸಿರಲು ಅಪ್ಪಿಕೊಂಡವರು!

ಹಿಮಪರ್ವತಗಳೆತ್ತರದ ಗುರಿಯು ಉಂಟು,

ಗಂಗೆಯಾ ಜಲದಂತೆ ಶುದ್ಧಮನವುಂಟು.


ಕಣ್ಣೆದುರೆ ಉಂಟು ಸಾಧಕರ ಸಾಧನೆಯು,

ಮಣ್ಣಿನಲೆ ಉಂಟು ಅವರೆಲ್ಲರಾ ದನಿಯು!

ವಿಂಧ್ಯಾಚಲದಂತೆ ವಿಶ್ವಾಸವದು ಅಚಲ,

ಆಕಾಶದಂತೆ ಅವಕಾಶಗಳು ವಿಪುಲ!


ನಮಗಿತ್ತಿಹಳು ತಾಯಿ ಏಸೊಂದು ಮಮತೆ!

ನಾವೇನು ಕೊಟ್ಟಿಹೆವು ಹಚ್ಚಲಿಕೆ ಹಣತೆ?

ಬನ್ನಿರೀ ಬರೆಯೋಣ ಹೊಸದೊಂದು ಚರಿತೆ,

ಭಾರತಿಯ ಕಥೆಯಾಗೆ ಇನಿದಾದ ಕವಿತೆ!

Saturday, May 27, 2023

ನಿಮ್ಮ ವಯಸ್ಸೆಷ್ಟು?

 ನಿಮ್ಮ ವಯಸ್ಸೆಷ್ಟು? ನಿಮ್ಮ ವಯಸ್ಸೆಷ್ಟು?

ಕೇಳುವವರಿಗೆ ಬಹಳ ಇಂಟರೆಷ್ಟು!

ಈ ಪ್ರಶ್ನೆಯೇ ಸರಿಯಿಲ್ಲ ಇಂತು,

ಇನ್ನು ಅವರಿಗೆ ಉತ್ತರಿಸುವುದೆಂತು?


ಚಿಣ್ಣರ ಒಡನಾಡುತಿರೆ ಒಂದೇ ಒಂದು ವರುಷದವ!

ಕಾರ್ಟೂನು ನೋಡುತಿರೆ ಏಳೇ ಏಳರವ!

ಖುಶಿಯಿಂದ ಕುಣಿಯುತಿರೆ ಹದಿನಾರ ಹರೆಯದವ!

ಸ್ನೇಹಿತರ ಸಂಗವಿರೆ ಇಪ್ಪತ್ತು-ಮೂವತ್ತರ ಹವ!


ಹೂಬನದ ಹಕ್ಕಿ ಚಿಟ್ಟೆಗಳೊಡನಾಡುವಾಗ,

ವಯಸ್ಸಿರಬಹುದು ಅವುಗಳಷ್ಟೇ ಆಗ!

ತಾರಾಚಂದ್ರರ, ನದಿ ಬೆಟ್ಟಗಳ ನಡುವಿರಲು,

ನಾನು ಕಾಲಾತೀತ ಎನಿಸುವುದು, ಅದು ಅಮಲು!


ವಯಸ್ಸಿಗೆ, ಮನಸ್ಸಿಗೆ ಉಂಟೇನು ಸಂಬಂಧ?

ಪ್ರತಿ ಕ್ಷಣ ಬದಲಾಗುವ ಮನಸಿಗಾವ ಬಂಧ?

ದಿನಗಳೆಷ್ಟು ಉರುಳಿವೆ ಎನ್ನುವ ಪ್ರಶ್ನೆ ಅಸಂಗತ,

ಹೇಗೆ ಬದುಕಿದೆ ಎನ್ನುವುದು ಅನುದಿನವೂ ಪ್ರಸ್ತುತ!


 

Friday, April 21, 2023

ನವ ವಸಂತ

ಬಂದ ಬಂದ ನವ ವಸಂತ

ತಂದ ತಂದ ಹೊಸ ಪ್ರಪಂಚ


ಹಸಿರಿನ ಸೀರೆಯ ಉಟ್ಟ ವಸುಂಧರೆ

ಉಸಿರಿನ ಸುಗಂಧ ಚುಂಬಕವಾಗಿರೆ

ಫಲಗಳ ಬುತ್ತಿಯ ಆರಿಸಿ ತಂದಿರೆ

ಒಲವಿನ ಉಡುಗೊರೆಯಾಗಿ ನಿಂದಿರೆ


ಮಲ್ಲಿಗೆ ಸಂಪಿಗೆ ಗುಲಾಬಿ ಕೇದಿಗೆ 

ಹುಲ್ಲಿನ ಹಸಿರಿನ ಮೆತ್ತನೆ ಹಾಸಿಗೆ

ಮಾಮರ ಕಿತ್ತಳೆ ಅಂಜೂರ ಹಲಸು

ಅಂದ ಸುಗಂಧ ಸವಿರುಚಿ ಸೊಗಸು


ಬಣ್ಣದ ದಿರುಸನು ಧರಿಸಿದ ಲಲನೆ

ಚಿನ್ನದ ಒಡವೆ ಮಿಂಚಿದೆ ಸುಮ್ಮನೆ

ನೊಸಲಿಗೆ ತಿಲಕ ಕಣ್ಣಲಿ ಹೊಳಪು

ನಸುನಗೆ ವದನ ಗುಲಾಬಿ ಕದಪು


ಅಂದದ ತೋರಣ ರಂಗಿನ ಚಿತ್ತಾರ

ಬಂಧುಗಳ ಮಿಲನಕೆ ಹರುಷದ ಸಾಕಾರ

ಎದೆಯಲಿ ಹರುಷ ಗುಡಿಯಲಿ ಚರಪು

ಯುಗಾದಿ ತಂದಿಹ ಹೊಸತನ ಹುರುಪು!



ಸಂಕ್ರಾಂತಿಯ ಸಂಭ್ರಮ

ಉದಯ ರವಿಯ ಪ್ರಥಮ ಕಿರಣಕೆ, 

ಬಡಗಣದಲ್ಲಿ ಬೆಳಕಾಗಿದೆ. 

ತೂಗಿ ತೊನೆಯುವ ತುಂಬು ತೆನೆಗಳು, 

ಬಕುತಿಯಲಿ ತಲೆಬಾಗಿವೆ. 


ರೈತಜನರ ಕನಸು ಇಂದು, 

ಕಣಜದಲಿ ನನಸಾಗಿದೆ. 

ತಮ್ಮ ಹಕ್ಕಿನ ಕಾಳುಕಡ್ಡಿಗೆ, 

ಹಕ್ಕಿಗಳು ಹಾರಾಡಿವೆ. 


ಬಣ್ಣ ಬಣ್ಣದ ಬಟ್ಟೆಗಳಲಿ, 

ಹೆಂಗೆಳೆಯರು ನಲಿದಾಡಿರೆ, 

ರಂಗು ರಂಗಿನ ರಂಗವಲ್ಲಿಯು, 

ಅಂಗಳದಲಿ ಕುಣಿದಾಡಿದೆ. 


ಎಳ್ಳು, ಬೆಲ್ಲ, ಕೊಬ್ಬರಿ, ಕಡಲೆಯ, 

ಹಾಗೆ ಮಂದಿಯು ಬೆರೆತಿರೆ, 

ಎಳ್ಳು ಬೀರುವ ಒಳ್ಳೆ ಕಾರ್ಯಕೆ, 

ಗೆಳೆತನಗಳು ದೃಢವಾಗಿವೆ. 


ಸುಗ್ಗಿಕಾಲದ ಹುಗ್ಗಿ ರುಚಿಯನು, 

ಹಿಗ್ಗಿ ಹೀರಿದೆ ನಾಲಿಗೆ. 

ಬಾಗಿ ನಮಿಸುವ ಭಾನುದೇವಗೆ, 

ಸುಗ್ಗಿ ತಂದಿಹ ಬಾಳಿಗೆ. 


ಗವಿಗಂಗಾಧರೇಶ್ವರ ಸ್ವಾಮಿಗೆ, 

ಸೂರ್ಯ ರಶ್ಮಿಯ ಅಭ್ಯಂಜನ.

ಬಕುತರೆಲ್ಲರ ಪಾಲಿಗಿಂದು,  

ಆನಂದಾತಿರೇಕದ ಮಜ್ಜನ! 



ಅಮೃತದ ಧಾರೆ

ಮಾತೆಯೆ ನಿನ್ನಯ ಪ್ರೀತಿಯ ಸುಧೆಯು

ಹರಿಯುವ ಸಿಹಿನೀರ ನದಿಝರಿ ತೊರೆಯು

ಸವಿಯಲು ನೀಡಿದೆ ಮಧುಮಯ ಫಲವ

ತುಂಬಿಸಿ ತಂದಿಹೆ ನಿನ್ನೆದೆ ಒಲವ


ಕಾಲಕೆ ಸುರಿಸುವೆ ಅಮೃತದ ಧಾರೆ

ಕೀಲಕವಾಗಿದೆ ಫಸಲನು ಕೋರೆ

ನೀಡಿದೆ ಹಸುರಿನ ಮೆತ್ತನೆ ತಲ್ಪ

ಸುಮಗಳ ಸುಗಂಧ ಮತ್ತಿಗೆ ಸ್ವಲ್ಪ


ಬೀಸಿದೆ ತಂಗಾಳಿ ನಿನ್ನಯ ಸೆರಗು

ಗಾಳಿಗೆ ಹೋಯಿತು ಕಾಡುವ ಕೊರಗು

ತಿರುಕನೊ ಧನಿಕನೊ ಭೇದವೆ ಇಲ್ಲ

ಸರಿಸರಿ ಹಂಚಿಕೆ ಮಡಿಲಿನ ಬೆಲ್ಲ


ಮನುಜನ ಆಸೆಗೆ ಮಿತಿಯೇ ಇಲ್ಲ

ಬೇಲಿಯ ಹಾಕಿದ ತನಗೇ ಎಲ್ಲ

ಚಿನ್ನದ ಮೊಟ್ಟೆಯ ಇಡುವಾ ಒಡಲು

ಕನ್ನವ ಹಾಕಿದ ಒಮ್ಮೆಲೆ ಪಡೆಯಲು


ರಕುತವ ಕಾರಿದೆ ನಿನ್ನಯ ಒಡಲು

ಕಲುಷಿತಗೊಂಡಿದೆ ಪರಿಸರ ಕಡಲು

ಮಣಿಸುತ ನಮ್ಮಯ ತಪ್ಪನು ನೀಗು

ಕ್ಷಮಿಸುತ ನಮ್ಮನು ಒಯ್ಯುತ ಸಾಗು!



Thursday, April 20, 2023

ಕಾವ್ಯಝರಿ

ಆದಿಪೂಜಿತ ಏಕದಂತನೆ ಗಣನಾಯಕ,

ಪಾದ ಮುಟ್ಟುವೆ ಹರಸು ಎನ್ನ ವಿನಾಯಕ.

ವೇದವ್ಯಾಸರ ದಿವ್ಯ ನುಡಿಗೆ ಭವ್ಯ ಲೇಖಕ,

ಮೇಧಾವಿಗಳು ದಾಖಲಿಸಿದ ಶ್ರೇಷ್ಠ ಕಥಾನಕ!


ಚಾಮರಕರ್ಣ ಇದೆಯಲ್ಲ ಕಥೆಯ ಕೇಳಲು,

ಧೀಮಂತ ಮೆದುಳಿಹುದು ಮನನ ಮಾಡಲು,

ಪ್ರೇಮವಿದೆ ಮನದಲ್ಲಿ ಕೃತಿಯ ನೀಡಲು,

ದಾಮೋದರನ ನೀತಿಯನು ನಮಗೆ ಸಾರಲು!


ಝರಿಯಂತೆ ನುಡಿಯುತಿರೆ ವೇದವ್ಯಾಸರು,

ಬರೆಯುತಿಹರು ನದಿಯಂತೆ ಆದಿಪೂಜ್ಯರು.

ಸರಸ್ವತಿಯ ದಂಡೆಯಲಿ ಇವರೀರ್ವರು,

ಪರಮಾತ್ಮನ ನುಡಿಗಳನು ನಮಗೆ ಇತ್ತರು!


ಕದನಗಳ ಬಾಳಿನಲ್ಲಿ ಜೀವನವು ದುರ್ಭರ,

ಇದೆ ಇಲ್ಲಿ ಸಮಸ್ಯೆಗಳ ಸಂಪೂರ್ಣ ವಿವರ.

ಬದುಕಿನಲಿ ತಲುಪಲು ನೆಮ್ಮದಿಯ ಆಗರ,

ಕದವ ತೆರೆ ಭಾರತದ ಪಡೆಯೆ ಉತ್ತರ!



ನಮ್ಮ ಪ್ರೀತಿಯ ಭಾರತ

ಭಾರತ ನಮ್ಮಯ ಪ್ರೀತಿಯ ಮಾತೆ,

ತೆರೆಯವ ದೇಶಬಕುತಿಯ ಖಾತೆ!

ಹಾರಿಸು ಮೇಲೆ ತ್ರಿವರ್ಣ ಪತಾಕೆ,

ತೋರಿಸು ಪ್ರೀತಿಯ ಶಂಕೆಯು ಏಕೆ!


ಕೋರದೆ ಕೊಟ್ಟಿದೆ ಉತ್ತಮ ಸಂಸ್ಕಾರ,

ತೋರುತ ಬೆಳಕಿನ ಅಧ್ಯಾತ್ಮದಾಕರ!

ಹಾರುವ ಮೇಲೆ ಸುಂದರ ಅವಕಾಶ,

ಬೀರುವ ಶಾಂತಿ ಸ್ನೇಹದ ಸಂದೇಶ!


ಭಿನ್ನತೆ ತೊರೆದು ಹಾಕುವ ನಡಿಗೆ,

ಉನ್ನತ ಗುರಿಯನು ಮುಟ್ಟುವ ಕಡೆಗೆ!

ಅನ್ನದ ಕೊರತೆ ಇಲ್ಲದೆ ಹೋಗಲಿ,

ಚಿನ್ನದ ಆಸೆ ಮರತೇ ಹೋಗಲಿ!


ಬಲಿದಾನಗಳ ಮರೆಯದೆ ನಡೆಯಿರಿ,

ಕಲಿಗಳ ನೆನೆಯುತ ಸ್ಫೂರ್ತಿಯ ಪಡೆಯಿರಿ!

ಕಲೆಗಳ ಬೆಳೆಸುತ ಆನಂದ ಹೊಂದಿರಿ,

ಎಲೆಗಳ ಹಾಗೆ ಜೊತೆಯಲಿ ಬದುಕಿರಿ!


ಅಮೃತೋತ್ಸವದ ಸುಂದರ ಘಳಿಗೆ,

ಅಮಿತೋತ್ಸಾಹದ ಬಿರುನಡಿಗೆ!

ಗಮನದಿ ಹಾಕುವ ಪ್ರಗತಿಯ ನಡಿಗೆ,

ಕ್ಷಮತೆಯ ಸದೃಢ ಶಾಂತಿಯ ಕಡೆಗೆ!



ಅರಿಷಡ್ವರ್ಗ(ಹಾಯ್ಕುಗಳು)

*ಕಾಮ*

ಕಾಮಾತುರದಿ
ಸಿಗ್ಗಿಲ್ಲ ಭಯವಿಲ್ಲ
ಮನಕೆ ಮೌಢ್ಯ


*ಕ್ರೋಧ*

ಕ್ರೋಧ ಮೊದಲು
ಸುಡುವುದು ತನ್ನನ್ನು
ಪರಮ ಸತ್ಯ


*ಲೋಭ*

ದುರಾಸೆ ಇದು
ದೂರ ಮಾಡುವುದಲ್ಲ
ತನ್ನವರನೇ


*ಮೋಹ*

ಮೋಹ ರಾಜಸ
ನಿರ್ಮೋಹ ಸಾತ್ವಿಕವು
ಪ್ರೀತಿ ಶಾಶ್ವತ


*ಮದ*

ಮದವೇರಿದ
ಮದ್ದಾನೆಗೆ ಖಚಿತ
ಅಂತಿಮ ಕಾಲ


*ಮಾತ್ಸರ್ಯ*

ಒಳಗೊಳಗೇ
ಕೊರೆವ ಕೆಟ್ಟ ಕೀಟ
ನಾಶ ಖಂಡಿತ


ಸಬಲೆ

ಭಲೇ ಭಲೇ ಓ ಸಬಲೇ,

ಏನೆಲ್ಲಾ ನೀ ಸಾಧಿಸಬಲ್ಲೆ!


ಕತ್ತಲ ಮನೆಯನು ಬೆಳಗಿಸಬಲ್ಲೆ,

ಚಿತ್ತದ ಗೊಂದಲ ನೀಗಿಸಬಲ್ಲೆ,

ತುತ್ತಲಿ ಪ್ರೀತಿಯ ತುಂಬಿಸಬಲ್ಲೆ,

ಬತ್ತದ ಒಲುಮೆಯ ನೀಡುವೆಯಲ್ಲೆ!


ಸಾಲುಮರಗಳ ನೆರಳನು ನೀಡುವೆ,

ಉದ್ಯಮಿಯಾಗಿ ಬದುಕನು ಕೊಡುವೆ,

ಬಾಹ್ಯಾಕಾಶಕೆ ಹಾರುತ ಹೋಗುವೆ,

ಚುಕ್ಕಿಯ ಮುಟ್ಟುವ ಸಾಹಸ ಮಾಡುವೆ!


ರೋಗಿಯ ಸಲಹುವ ಪ್ರೀತಿಯ ಸೋದರಿ,

ಕ್ಷಮೆಯಲಿ ನೀ ಭೂತಾಯಿಯ ಮಾದರಿ,

ಇನಿಯನು ಬಯಸುವ ಪ್ರೇಮದ ವಲ್ಲರಿ,

ಮಾತಿಗೆ ನಿಂತರೆ ನಿಲ್ಲದ ವಾಗ್ಝರಿ!


ದೇಶವ ಕಾಯಲು ಬಂದೂಕು ಹಿಡಿಯುವೆ,

ರೋಷವು ಬಂದರೆ ಇದಿರಾರಿಲ್ಲವೆ,

ಕೋಶವ ತುಂಬುತ ದೇಶವ ಸಲಹುವೆ,

ಎಲ್ಲರೂ ಮೆಚ್ಚುವ ರನ್ನದ ಒಡವೆ!



ಪಾವನ ಪುನೀತ

    (ಛಂದೋಬದ್ಧ *ಸಾಂಗತ್ಯ* ಪ್ರಕಾರದ ರಚನೆ)


ಪಾವನ ಪುನೀತ ಮನದವ ಗೆಳೆಯನೆ

ದೇವನ ಮನೆಗೆ ನಡೆದೆ

ಜೀವನ ಯಾನವ ಬೇಗನೆ ಮುಗಿಸುತ

ಸಾವಿನ ಬಾಗಿಲ ತೆರೆದೆ


ರಸಿಕರ ಮನದಲಿ ತಾರೆಯ ತೆರದಲಿ

ಹಸಿರಿನ ನೆನಪಲಿ ಉಳಿದೆ

ಹಸಿವನು ಅಳಿಸಿದೆ ವಿದ್ಯೆಯ ನೀಡಿದೆ

ಉಸಿರಿಗೆ ಜೀವವನಿತ್ತೆ


ಕಾಯಕ ಪ್ರೇಮದ ಕರುಣೆಯ ಹೃದಯದ

ತಾಯಿಯ ಕರುಳನು ಪಡೆದೆ

ನಾಯಕ ನಟನೆಯ ಚಿತ್ರದೆ ಮಾಡುತ

ನಾಯಕ ಜನರಿಗೆ ಆದೆ


ದಾನಕೆ ಸೇವೆಗೆ ಮಿತಿಯೇ ಇಲ್ಲದೆ

ದೀನರ ದಲಿತರ ಪೊರೆದೆ

ಜೇನಿನ ಮಾತಲಿ ಉತ್ತಮ ನಡೆಯಲಿ

ಗಾನವ ಪಾಡುತ ಮೆರೆದೆ


ಮುತ್ತಿನ ರಾಜನ ಮುದ್ದಿನ ಕುವರನೆ

ಮುತ್ತಿನ ಮಣಿಯೊಲು ಹೊಳೆವೆ

ಕತ್ತಲು ತುಂಬಿದ ಮನಗಳ ಬೆಳಗುತ

ಹತ್ತಿರ ಎದೆಯಲೆ ಇರುವೆ!



ಹೊಸ ನಕ್ಷತ್ರ

ಉದಯವಾಯಿತು ಮಿನುಗು ಚುಕ್ಕಿಯು

ಹೃದಯದಾಗಸ ಬೆಳಗಿತು

ಕದವ ತಟ್ಟುತ ಎಲ್ಲ ವೈಶ್ಯರ

ಮುದದೆ ಕೂಗಿ ಕರೆಯಿತು

 

ಆಧ್ಯಾತ್ಮವು ಬಳಿಗೆ ಸೆಳೆಯಿತು

ಎಳೆಯ ಚಿಗುರುವ ವಯಸಲೇ

ಶಾರದೆಯ ಪ್ರಿಯಪುತ್ರನಾದೆ

ಬೆಳೆದು ಹೆಮ್ಮರವಾಗುತ

 

ಬಂದೆ ಸಚ್ಚಿದಾನಂದ ಗುರುವೆ

ನಮಗೆ ದಾರಿ ತೋರಲು

ನಿನ್ನ ಹಿಂದೆ ನಾವು ನಡೆವೆವು

ನಮ್ಮ ಬಾಳನು ಬೆಳಗಲು

 

ಗಂಗಾ ನದಿಯ ತೀರದಲ್ಲಿ

ಹೊಸತು ಜನುಮವ ಪಡೆದೆ ನೀ

ನಮ್ಮ ಪೀಠವ ಬೆಳಗಲೆಂದೇ

ನಮ್ಮ ನಡುವಿಗೆ ಬಂದೆ ನೀ

 

ಜನರ ಬಾಳಲಿ ಪ್ರೀತಿ ಪ್ರೇಮದ

ಬೀಜ ಬಿತ್ತಲು ಬಂದೆ ನೀ

ದೀನ ದಲಿತರ ಬಾಳನಲ್ಲಿ

ಬೆಳಕ ಕಿರಣವ ತಂದೆ ನೀ

 

ವೀಣೆ ನಾದದ ಮಾಧುರ್ಯದಲ್ಲಿ

ತೇಲಿ ಮುಳುಗಿಸು ನಮ್ಮನು

ವೇದಜ್ಞಾನದ ವೇದಾಂತಿ ನೀನು

ಅರಿವ ನೀಡಿ ಹರಸೆಮ್ಮನು

 

ವೈಶ್ಯಕುಲದ ಪೀಠಾಧಿಪತಿಯಾಗುತ್ತಿರುವ ಶ್ರೀ ಸಚ್ಚಿದಾಂದ ಸ್ವಾಮಿ ಸರಸ್ವತಿಯವರ ಬಗ್ಗೆ ಕವನರೂಪದ ಭಕ್ತಿ ಸಮರ್ಪಣೆ!



ಹಳ್ಳಿಯ ಸೊಗಡು

ಕಣ್ಣನು ತಣಿಸುವ ನೋಟದ ಅಂದ,

ಹಸಿಮಣ್ಣಿನ ವಾಸನೆ ಮೂಗಿಗೆ ಚೆಂದ!

ದೂರದ ಬೆಟ್ಟ ಗುಡ್ಡದ ನೋಟಗಳ,

ನೀಡಬಲ್ಲವೇ ಕಾಗದದ ನೋಟುಗಳು!


ಹಳ್ಳಿಯ ಸ್ನೇಹ, ಹಳ್ಳಿಯ ಪ್ರೇಮ,

ಮರಬಳ್ಳಿಗಳ ಸ್ನೇಹದ ಧಾಮ!

ಪರಿಶುದ್ಧ ಗಾಳಿ, ಪರಿಶುದ್ಧ ಪ್ರೇಮ,

ಹಸಿರಿನ ಉಸಿರಿನ ಸ್ವರ್ಗದಾರಾಮ!


ಜುಳು ಜುಳು ಹರಿಯುವ ನೀರಿನ ತೊರೆಗಳು,

ಚಿಲಿಪಿಲಿಗುಟ್ಟುತ ಹಾರುವ ಹಕ್ಕಿಗಳು!

ಹುಲ್ಲನು ಮೇಯುವ ದನಕುರಿಮರಿಗಳು,

ಚೆಂದದ ಹೂಗಳಲಿ ಬಣ್ಣದ ಚಿಟ್ಟೆಗಳು!


ಇಂತಹ ಹಳ್ಳಿಯು ಬೇಡವೆ ಕಂದ?

ಯಾಂತ್ರಿಕ ಪಟ್ಟಣದಲ್ಲೇನಿದೆ ಚೆಂದ?

ಕೂಲಿಯ ಬದುಕಲಿ ಏನಿದೆ ನೆಮ್ಮದಿ?

ಮೇಟಿಯ ಆಟವ ಆಡುನೀ ಚೆಂದದಿ!


ಬೆವರನು ಸುರಿಸು, ಹಸಿರನು ಬೆಳೆಸು,

ಹಸಿವಿನ ಕೂಗನು ನೀ ಅಳಿಸು!

ಅನ್ನವ ನೀಡುವ ಯೋಗದ ಭಾಗ್ಯ,

ಕೈಬಿಡದಿರು ಇಂತಹ ಸೌಭಾಗ್ಯ!



ಜಗದೊಡೆಯನಿಗೆ ನಮನ

ವಿಶ್ವವ ವ್ಯಾಪಿಸಿರುವ ವಿಶ್ವೇಶ್ವರನೇ,

ಮೂಜಗವು ವಂದಿಸುವ ಮುಕ್ಕಣ್ಣನೇ,

ಜಗದಾತ್ಮ ನೀನು, ಜಗದೀಶ ನೀನು,

ನಮಿಸುವೆ ಪರಮಾತ್ಮ, ಪರಮೇಶ್ವರ!


ಜಟಾಜೂಟಧಾರಿ, ನಾಗಾಭರಣ,

ಶಿರದಲ್ಲಿ ಚಂದ್ರ, ಎದೆಯಲ್ಲಿ ಸೂರ್ಯ,

ಬುವಿಗೆಲ್ಲ ಬೆಳಕೀವ ಬಸವೇಶ್ವರನೇ,

ಜಗಜ್ಯೋತಿ ನೀನು, ವಿಷಕಂಠನೇ!


ಸ್ಥಿರಚಿತ್ತ ನೀನು, ಚಂಚಲನು ನಾನು,

ತಿಳಿಗೊಳಿಸು, ಸ್ಥಿರಗೊಳಿಸು,

ಮನವನ್ನು ಮುದಗೊಳಿಸು,

ಭಸ್ಮಾಂಗಧಾರಿ, ಫಣಿಭೂಷಣ!



ತತ್ವಜ್ಞಾನಿ ತಾತಯ್ಯ

ನಾರೇಯಣ ಗುರು, ನಾರೇಯಣ ಗುರು,

ಬಂದೆವು ನಿನ್ನಯ ಪಾದಕೆ ಶರಣು!


ಪಾವನ ಪುಣ್ಯದ ಜನ್ಮವ ಪಡೆದೆ,

ಆತ್ಮವು ತೋರಿದ ದಾರಿಯ ಹಿಡಿದೆ.

ಅಮರ ನಾರಾಯಣ ಪ್ರಸಾದನೇ,

ಕೈವರ ಪುರದ ಮಹಾತ್ಮನೇ!


ಎಂಜಲ ಕೂಳಿಗೆ ಪರಾಕು ಏಕೆ,

ಸಂಸಾರಿಗಳಿಗೇಕೆ  ವಾರಾಂಗನೆಯು?

ಮರಗಳ ಕಡಿದು ಹಾಳಾಗದಿರಿ,

ಹೇಳಿದೆ ಜೀವನ ತತ್ವಗಳ!


ಅರ್ಥವಿಲ್ಲದ ಓದದು ಏಕೆಂದೆ,

ಮತಕುಲಗಳಿಗೆ ಅರ್ಥವು ಇಲ್ಲೆಂದೆ.

ಸಾಮಾನ್ಯ ಜನರ ಸದ್ಗುರು ನೀನು,

ಬದುಕಿನ ಪಾಡನೇ ಹಾಡಾಗಿಸಿದೆ!


ತುದಿಮೊದಲರಿಯದ ಪಾಮರರಿಗೆ,

ಒಳಗಿನ ಆತ್ಮದ ಬೆಳಕನು ನೀಡಿದೆ.

ಬಳೆಗಾರ ನೀನು ಬಾಳನು ಬೆಳಗಿದೆ,

ನಾರೇಯಣ ಗುರು ತಾತಯ್ಯನಾದೆ.


ಕಲ್ಲನು ಬಾಯಲೇ ಸಕ್ಕರೆ ಮಾಡಿದೆ,

ನಮ್ಮಯ ಬದುಕಿಗೆ ಸಿಹಿಯನು ನೀಡು.

ಮಣ್ಣಿನ ಹಕ್ಕಿಗೆ ಜೀವವ ತುಂಬಿದೆ,

ಭಕ್ತಿಯ ದೀಪಕೆ ಪ್ರಾಣವ ನೀಡು!


ಹಾವಿನ ಬಾಯಲೇ ನೀರನು ತರಿಸಿದೆ,

ಬತ್ತಿದ ಬದುಕಿಗೆ ಜಲವನು ನೀಡು.

ಒಕ್ಕಣ್ಣನಿಗೆ ನೀ ನೀಡಿದೆ ಕಣ್ಣನು,

ನೀಡು ನಮಗೆ ಜ್ಞಾನದ ನೇತ್ರವ!


ಅಂತಃಚಕ್ಷುವು ತೆರಯಿತು ನಿನಗೆ,

ಕಾಲದ ಜ್ಙಾನವ ನೀಡಿದೆ ನಮಗೆ.

ನಾರೇಯಣನ ಆತ್ಮದ ಬಂಧುವೆ,

ಅಮರನಾದೆ ಸಜೀವ ಸಮಾಧಿಯಲಿ!


*ಕೈವಾರ ತಾತಯ್ಯ ರಾಷ್ಟ್ರಮಟ್ಟದ ಕವನ ಸ್ಪರ್ಧೆ* ಯಲ್ಲಿ

ದ್ವಿತೀಯ ಬಹುಮಾನ ಪಡೆದ ಕವನ



ಅಕ್ಕ-ತಂಗಿ

ಅಕ್ಕತಂಗಿಯರ ಬಂಧ,

ಒಂದು ಭದ್ರಕೋಟೆ.

ಬಾಳ ಮುದವಾಗಿಸುವ, 

ಸಿಹಿಯ ಮೂಟೆ.


ಜೊತೆಗಾತಿ, ಪ್ರಾಣಸಖಿ,

ತಾಯಿಮಕ್ಕಳ ರೀತಿ,

ಹಲವು ಮುಖಗಳ,

ಸಂಬಂಧ ಇವರ ಪ್ರೀತಿ.


ಒಂದು ಕ್ಷಣ ಪೈಪೋಟಿ,

ಮರುಕ್ಷಣ ಸಂಪ್ರೀತಿ.

ಆದರ್ಶ ಮೇಲ್ಪಂಕ್ತಿಯ,

ಸುವರ್ಣ ಸ್ನೇಹಸೇತು.


ಚಿಕ್ಕಂದಿನ ಜಗಳಗಳು,

ಪುಟ್ಟ ಕದನಗಳು,

ಬಂಧವ ಬೆಸೆಯುವ,

ಗಟ್ಟಿ ಹಗ್ಗಗಳು!


ಈ ಪಯಣ ಸಾಗುವುದು,

ಕವಲು ದಾರಿಯವರೆಗೆ,

ಬದುಕಿನ ದಾರಿಗಳು,

ಬೇರೆಯಾಗುವವರೆಗೆ.


ನೆನಪುಗಳು ಸುಳಿಯುವವು,

ಬಾಳ ಕೊನೆಯವರೆಗೆ,

ಸುಡುವ ಬಿರು ಬಿಸಿಲಲಿ,

ಹಾಯಿ ತಂಬೆಲರ ಹಾಗೆ!


ಹಳೆಯ ನೆನಪುಗಳು,

ಸುಳಿದಾಡುವ ಸಮಯ,

ಹಂಬಲವು  ಎದೆಗಪ್ಪಲು,

ತನ್ನ ತವರಿನಾ ಸಖಿಯ!



ನೆರಳಾಗುವೆ

ಮಳೆಯೇ ಬರಲಿ, ಬಿಸಿಲೇ ಇರಲಿ,

ನೆರಳಾಗುವೆ ನಿನಗೆ ಬಾ ತಮ್ಮ!


ಬಾಳ ಹಾದಿಯು ಸುಲಭವೇ ಅಲ್ಲ,

ಹಳ್ಳ, ಗುಂಡಿ, ಇದೆ ಕೆಸರೆಲ್ಲ!

ಜೊತೆಯಲೇ ನಡೆವೆ, ತಂಪನು ಎರೆವೆ,

ನೆರಳಾಗುವೆ ನಿನಗೆ ಬಾ ತಮ್ಮ!


ಬಣ್ಣ, ಬಣ್ಣದ ಛತ್ರಿಯು ಏಕೆ?

ಸೊಗಸಾಗಿದೆ ಈ ಹಸಿರೆಲೆಯು!

ಮರುಳಾಗದಿರು ನೀ ಬಣ್ಣಕ್ಕೆ,

ನೆರಳಾಗುವೆ ನಿನಗೆ ಬಾ ತಮ್ಮ!


ನಗುತಾ ನಾವು ನಡೆಯುವ,

ಎಂದಿಗೂ ಹೀಗೇ ಜೊತೆಯಿರುವ,

ನಗುವು ನಿನ್ನದು, ಆನಂದ ನನ್ನದು,

ನೆರಳಾಗುವೆ ನಿನಗೆ ಬಾ ತಮ್ಮ!


ಹೆಜ್ಜೆಗೆ ನಾನು ಹೆಜ್ಜೆಯ ಹಾಕುವೆ,

ತಪ್ಪು ದಾರಿಗೆ ಬಿಡೆ ನಾನು!

ಬಾಳ ದಾರಿಯ ಕೊನೆವರೆಗೂ,

ನೆರಳಾಗುವೆ ನಿನಗೆ ಬಾ ತಮ್ಮ!



ಪಾಠ

ಸಿದ್ಧಪಡಿಸುತಿಹಿಳು ತಾಯಿ ಮಗಳನ್ನು,

ಅವಳ ಹೊಸ ಬಾಳ ಪಯಣಕೆ,

ತಾ ಕಲಿತ ಪಾಠಗಳ ಕಲಿಸುತ್ತ.


ಕೂದಲಲಿ ಗಂಟಾಗದಂತೆ ಬಿಡಿಸುತ್ತ,

ಸಂಬಂಧಗಳು ಗಂಟಾಗದಂತೆ,

ಚತುರತೆಯಲಿ ಬಿಡಿಸಬೇಕೆಂದು.


ಕೂದಲಿಗೆ ಘಮದ ಎಣ್ಣೆ ಸವರುತ್ತ,

ಕುಟುಂಬಕೆ ಪೋಷಣೆ ಕೊಡಲು,

ಪ್ರೀತಿಯ ಸುಗಂಧದೆಣ್ಣೆ ಬೇಕೆಂದು.


ಜಡೆಯನು ಹೆಣೆಯುತಿಹಳು ತಾಯಿ,

ಕೂಡುಕುಟುಂಬದ ಸಬಲತೆಗೆ,

ಒಗ್ಗಟ್ಟಿನಲಿ ಬಲದ ಗುಟ್ಟಿದೆಯೆಂದು.


ಕನ್ನಡಿಯಲಿ ನೋಡೆನ್ನುತಿಹಳು,

ತನ್ನ ನಡವಳಿಕೆ ತಾನೇ ಕಂಡು,

ತಪ್ಪುಗಳನು ತಿದ್ದಿಕೊಳಬೇಕೆಂದು.


ತಲೆಮಾರಿನಿಂದ ತಲೆಮಾರಿಗೆ,

ಸಂಸ್ಕಾರವಿಲ್ಲಿ ಹಸ್ತಾಂತರ,

ಜೆಡೆ ಹೆಣಿಕೆ ಇಲ್ಲಿ ಪ್ರೀತಿಗೆ ಮಾತ್ರ!



ಅಗ್ನಿಪರ್ವತ



ಮಧ್ಯರಾತ್ರಿಯ ನೀರವತೆಯಲ್ಲಿ

ಸಿಡಿಯಿತು ಅಗ್ನಿಪರ್ವತ



ಕೋಟಿಕೋಟಿ ಜನರ ಒಡಲ ಬೆಂಕಿ

ಹೊರ ಹರಿಯಿತು ಶತ್ರುಗಳ

ಮಾರಣ ಹೋಮಕ್ಕೆ ಸಾಕ್ಷಿಯಾಗಿ



ವರುಷ ವರುಷಗಳ ತಾಪ

ಒಳಗೊಳಗೇ ಕುದಿಯುತಿತ್ತು

ಪಾಪದ ಕೊಡ ತುಂಬಿ ನಿಂತಿತ್ತು



ಬೆನ್ನಿಗೆ ಚೂರಿ ಹಾಕುವ ಹೇಡಿಗಳ

ಕಾಲು ಕೆರೆದು ಜಗಳಕ್ಕೆ ಎಳೆಯುವ ದಾಡಿಗಳ

ಕಾರ್ಯಕ್ಕೆ ಬೇಸತ್ತು ಹೋಗಿತ್ತು ದೇಶ



ಮಧ್ಯರಾತ್ರಿಯ ನೀರವತೆಯಲ್ಲಿ

ಸಿಡಿಯಿತು ಅಗ್ನಿಪರ್ವತ

ನಂತರದಲ್ಲಿ ಸ್ಮಶಾನ ಮೌನ



ಓಂ ಶಾಂತಿ ಶಾಂತಿ ಶಾಂತಿಃ


ಸನ್ನಿಹಿತ

ಬ್ರಹ್ಮಚರ್ಯಾಶ್ರಮದಲ್ಲಿ ಕಾಮ ಕುಸುಮಗಳ ತೋಟ,

ಗೃಹಸ್ಥಾಶ್ರಮದಲ್ಲಿ ಕೊಲೆ, ಸುಲಿಗೆಗಳ ಪರಿಪಾಠ,

ವಾನಪ್ರಸ್ಥದಲ್ಲಿ ಜೀವಿಸಲು ಜಂಜಾಟ,

ಸನ್ಯಾಸಾಶ್ರಮದಲ್ಲಿ ಸಕಲ ವೈಭೋಗದಾಟ!

 

ತೋಟವ ಮೇಯುವ ಬೇಲಿಯಂತಹ ಅಧಿಕಾರವರ್ಗ,

ಕಾರ್ಮಿಕವರ್ಗದಲಿ ಸೋಮಾರಿತನದ ಅಧಿಪತ್ಯ,

ಆರಕ್ಷಕ ದಳದಲ್ಲಿ ಭಕ್ಷಕರೆ ಬಹಳ,

ಯಥಾ ಪ್ರಜಾ ತಥಾ ರಾಜ! ಯಥಾ ಪ್ರಜಾ ತಥಾ ರಾಜ!

 

ತಾಯ ಹಾಲಿನಲೇ ಮೂಡುತಿದೆ ನಂಜು,

ಒಳಗಣ್ಣುಗಳಿಗೆ ಕವಿಯುತಿದೆ ಮಂಜು,

ಮುಳುಗುತಿದೆ ಇಂದು ಅಧರ್ಮದಲಿ ಭಾರತ,

ಧರ್ಮಸಂಸ್ಥಾಪನೆ ಇನ್ನು ಸನ್ನಿಹಿತ! ಸನ್ನಿಹಿತ!


ಮಸಣವಾಯಿತು ದೇವಭೂಮಿ...

ಮೇಘ ಸಿಡಿಯಿತು, ಭುವಿಯು ನಡುಗಿತು,

ಮುಸಲಧಾರೆಯ ಏಟಿಗೆ, ಉಕ್ಕೊ ನದಿಗಳ ರಭಸಕೆ.



ಮಸಣವಾಯಿತು ದೇವಭೂಮಿ

ಪ್ರಳಯನಾದದ ಧಾಟಿಗೆ,

ನಿಂತ ನೆಲವು ಹಾಗೇ ಕುಸಿದರೆ

ಆಸರೆಯೆಲ್ಲಿದೆ ಬದುಕಿಗೆ.



ತಂದೆ ತಾಯರ, ಮುದ್ದುಮಕ್ಕಳ

ತೋಳಹಾರದ ಬದಲಿಗೆ,

ಅಗಲಿಕೆಯ ಕಲ್ಲ ಬಂಡೆಯು

ಜೋತುಬಿದ್ದಿತು ಕೊರಳಿಗೆ!



ಗರ್ಭಗುಡಿಯಲಿ, ದೇವನೆದುರಲಿ

ಪ್ರಾಣಭಿಕ್ಷೆಯ ಹರಕೆಗೆ,

ಸಾವುನೋವಿನ ವರವು ದೊರೆಯಿತು,

ಸ್ತಬ್ಧವಾಯಿತು ಗುಂಡಿಗೆ!



ಕ್ರೂರಮೃಗಗಳ, ಕ್ಷುದ್ರಮನಗಳ,

ಕಾಮ, ಲೋಭದ ಮತ್ತಿಗೆ,

ಸತ್ತ ಶವಗಳು ಮತ್ತೆ ಮಡಿದವು,

ನಾಚಿಕೆಗೇಡು ನಾಡಿಗೆ, ನಾಚಿಕೆಗೇಡು ನಾಡಿಗೆ!

Wednesday, February 8, 2023

ನೀನಿಲ್ಲದೆ...

ಬಣ್ಣಗಳೆಲ್ಲ ಕಪ್ಪಾಗಿಹೋಗಿವೆ, 

ಬಾಳು ತಾಳವ ತಪ್ಪಿದೆ! 


ನೀನು ಇಲ್ಲದ ಬದುಕು ಬರಡು

ಚಳಿಗಾಳಿಗೆ ಕೊರಡಾಗಿದೆ |

ಮಧುಮಾಸದ ನೆನಪು ಕಾಡಿದೆ

ಪ್ರೀತಿ ಸುಮವು ಬಾಡಿದೆ ||೧||


ನಾನು ಮಾಡಿದ ಯಾವ ತಪ್ಪಿಗೆ

ಶಿಕ್ಷೆಯಾಗಿದೆ ಅಗಲಿಕೆ? |

ನೀನು ಇಲ್ಲದ ಪ್ರೇಮಲೋಕವು

ಅಂಧಕಾರದಿ ಮುಳುಗಿದೆ ||೨||


ಒಂಟಿ ನಾನು ಬಾಳ ಕಡಲಲಿ

ಹುಟ್ಟು ಹಾಕಲು ನೀನಿಲ್ಲದೆ |

ಬಾಳ ನೌಕೆಯು ದಾರಿ ತಪ್ಪಿದೆ

ಗೊತ್ತು ಗುರಿಯು ಇಲ್ಲದೆ ||೩||


ಮರಳಿ ಬಾರದ ಲೋಕವೆಲ್ಲಿದೆ

ತಿಳಿಸು ಬರುವೆನು ಅಲ್ಲಿಗೇ |

ಮತ್ತೆ ಸೇರುವ, ಮತ್ತೆ ಹಾಡುವ

ಪ್ರಣಯಗೀತೆಯ ನಾಳೆಗೆ ||೪||


Tuesday, February 7, 2023

ನಿನ್ನ ನಗು

ನಿನ್ನ ನಗುವೆ ನನ್ನ ಉಸಿರು, 

ನಿನ್ನ ಕನಸೇ ಕಣ್ಣ ಹಸಿರು! 


ದೇವಲೋಕದ ಚೆಲುವು ನೀನು

ತಾರಾಲೋಕದ ಬೆಳಕು ನೀನು

ತಿಂಗಳ ರಾತ್ರಿಯ ತಂಪು ನೀನು

ನಿನ್ನ ಮಾತೇ ಮಧುರ ಜೇನು! 


ನನ್ನ ಸನಿಹಕೆ ವರವಾಗಿ ಬಂದೆ, 

ಕುರುಡು ಕಣ್ಣಿಗೆ ಬೆಳಕಾಗಿ ನಿಂದೆ,

ಬರಡು ಬಾಳಿಗೆ ಅಮೃತದಂತೆ, 

ಕೊರಡ ಕೊನರಿಸೊ ವರ್ಷದಂತೆ!


ನಮ್ಮ ಜೋಡಿ ಶುಕಪಿಕಗಳಂತೆ, 

ನಮ್ಮ ಬದುಕು ಹೂಬಿಸಿಲಿನಂತೆ, 

ಸಮಯ ನಿಂತೇ ಹೋಯಿತು, 

ಹೃದಯ ಕುಣಿಕುಣಿದಾಡಿತು! 


ಎಂದು ಬರುವೆ ನನ್ನ ಬಾಳಿಗೆ, 

ಎಂದು ತರುವೆ ಸಿಹಿಯ ಹೋಳಿಗೆ?

ಬಳಸಿ ಬಂದು ನನ್ನ ತೋಳಿಗೆ, 

ತುಂಬು ನನ್ನ ಪ್ರೀತಿ ಜೋಳಿಗೆ! 

Sunday, January 8, 2023

ಮುಕ್ತಕಗಳು - ೧೦೦

ನಮ್ಮ ಭಾಗ್ಯವು ಕರ್ಮ ಶ್ರಮಗಳ ಮಿಶ್ರಣವು

ಎಮ್ಮೆಯಂತಿರಬೇಕೆ ಕರ್ಮಕ್ಕೆ ಬಾಗಿ |

ಹೊಮ್ಮಿಸುವ ಶ್ರಮದಿಂದ ಹೊಸತು ಸತ್ಫಲಗಳನು

ಚಿಮ್ಮಿಸುವ ಆನಂದ ~ ಪರಮಾತ್ಮನೆ ||೪೯೬||


ಹೇರಿದರೆ ನಿಮ್ಮಾಸೆಗಳನು ಮಕ್ಕಳಮೇಲೆ

ದೂರದಿರಿ ತೀರದಿರೆ ನಿಮ್ಮ ಬಯಕೆಗಳು |

ಯಾರ ತಪ್ಪದು ಎಣ್ಣೆ ನೀರಿನಲಿ ಕರಗದಿರೆ

ನೀರಿನದೊ? ಎಣ್ಣೆಯದೊ? ~ ಪರಮಾತ್ಮನೆ ||೪೯೭||


ಪರಿಪರಿಯ ಪಾಠಗಳ ಕಲಿಯುವೆವು ಎಲ್ಲರಲಿ

ಅರಿವ ನೀಡಲು ಪಟ್ಟಗುರು ಮಾತ್ರ ಬೇಕೆ? |

ಬರಲಿ ಒಳಿತಾದುದೆಲ್ಲವು ನಮ್ಮೆಡೆಗೆ ನಿರತ

ತೆರೆ ಎಲ್ಲ ಕಿಟಕಿಗಳ ~ ಪರಮಾತ್ಮನೆ ||೪೯೮||


ಅನೃತವನು ನುಡಿಯುತ್ತ ಪಡೆದ ಉತ್ತಮ ಪದವಿ

ಜನರ ಹಿಂಸಿಸಿ ಪಡೆದ ಗೌರವಾದರವು |

ಧನವ ಗಳಿಸಿಟ್ಟಿರಲು ಮೋಸದಾ ಹಾದಿಯಲಿ

ಇನನ ಎದುರಿನ ಹಿಮವು ~ ಪರಮಾತ್ಮನೆ ||೪೯೯||


ಎಲ್ಲವನ್ನೂ ನಮಗೆ ಕೊಟ್ಟಿರುವ ಲೋಕಕ್ಕೆ

ಎಳ್ಳಿನಷ್ಟಾದರೂ ಕೊಡಬೇಕು ನಾವು |

ಕಳ್ಳರಾಗುವೆವು ಕೊಡದೆಲೆ ಲೋಕ ತೊರೆದಲ್ಲಿ

ಜೊಳ್ಳು ಜೀವನವೇಕೆ? ~ ಪರಮಾತ್ಮನೆ ||೫೦೦||

ಮುಕ್ತಕಗಳು - ೯೯

ಸಿರಿ ತಾನು ಕೀಲಿಕೈಯಲ್ಲ ಸುಖ ಸಂತಸಕೆ

ಸಿರಿಯಿಂದ ಕೊಳ್ಳಲಾಗದು ಸಂತಸವನು |

ಸಿರಿಯಿರಲು ಸಂತಸದ ಕೀಲಿ ಮಾಡಿಸೆ ಸಾಧ್ಯ

ಸಿರಿಯ ಸರಿ ಬಳಕೆಯದು ~ ಪರಮಾತ್ಮನೆ ||೪೯೧||


ಸಿಕ್ಕರೂ ಸಿಗಬಹುದು ಗೌರವವು ಹಣದಿಂದ

ಸಿಕ್ಕರೂ ಸಿಗಬಹುದು ಅದು ವಿದ್ಯೆಯಿಂದ |

ಸಿಕ್ಕುವುದು ಖಂಡಿತವು ಸತತ ಸನ್ನಡೆತೆಯಿಂ

ಪಕ್ಕವಾದ್ಯಗಳೇಕೆ? ~ ಪರಮಾತ್ಮನೆ ||೪೯೨||


ಕಣ್ಣುಕಿವಿಗಳು ತರುವ ಅರಿವಿನಾ ತುಣುಕುಗಳ

ಮುನ್ನ ಇರಿಸುತ ಮನದ ಉಗ್ರಾಣದಲ್ಲಿ |

ಚೆನ್ನ ಮನನವ ಮಾಡಿ ಬೆಸೆಯುತ್ತ ತುಣುಕುಗಳ

ಚಿನ್ನದಾ ಸರಮಾಡು ~ ಪರಮಾತ್ಮನೆ ||೪೯೩||


ಒಂದು ವೀಣೆಯ ಹಾಗೆ ಮಾನವರ ಸಂಬಂಧ

ಚೆಂದದಾ ನಾದ ಹೊಮ್ಮದಿರಲೇನಿಂದು |

ಬಂಧಗಳ ಕಾಪಾಡು ಮುರಿಯದಾ ತಂತಿಯೊಲು

ಮುಂದಿಹುದು ಸವಿನಾದ ~ ಪರಮಾತ್ಮನೆ ||೪೯೪||


ಹಂಚಬಲ್ಲದು ನಾಲಿಗೆಯು ಸಿಹಿಯ ಅಮೃತವನು

ಹಂಚಬಲ್ಲದದು ಕಹಿ ಹಾಲಾಹಲವನು |

ಕೊಂಚ ಹಿಡಿತವು ಇರಲಿ ಈ ಮರ್ಕಟದ ಮೇಲೆ

ಪಂಚರಲಿ ಪಾತಕಿಯು ~ ಪರಮಾತ್ಮನೆ ||೪೯೫||

ಮುಕ್ತಕಗಳು - ೯೮

ತಿರುಮಲೆಯ ಗೋವಿಂದ ಸಿಹಿರುಚಿಯ ಮಕರಂದ

ಮರಳಿ ದುಂಬಿಗಳು ಸವಿಯುತಿವೆ ಆನಂದ |

ಹರಿದು ಬಕುತಿಯ ಜೇನು ನಲಿದಿಹವು ಮುದದಿಂದ

ಮರೆತು ಕೋಟಲೆಗಳನು ~ ಪರಮಾತ್ಮನೆ ||೪೮೬||


ಅರಿತು ನಡೆಯಲುಬೇಕು ಕೆಲವನ್ನು ಬದುಕಿನಲಿ

ಮರೆತು ನಡೆಯಲುಬೇಕು ಮತ್ತೆ ಕೆಲವನ್ನು  |

ಬೆರೆತು ಬಾಳಲುಬೇಕು ಪ್ರೀತಿಯಿಂ ಎಲ್ಲರಲಿ

ಮರೆತು ಸೇಡಿನ ದಾರಿ ~ ಪರಮಾತ್ಮನೆ ||೩೮೭||


ಗಳಿಸದಿದ್ದರೆ ಏನು ಕೋಟಿ ಸಕ್ರಮವಾಗಿ

ಬೆಳೆಯುವವು ಶಾಂತಿ ನೆಮ್ಮದಿ ಸಂತಸಗಳು  |

ಮೊಳಕೆಯೊಡೆಯುವವು ನಿಸ್ವಾರ್ಥದಾ ಬೀಜಗಳು

ಹುಳುಕಿಲ್ಲದಿಹ ಫಲವು ~ ಪರಮಾತ್ಮನೆ ||೪೮೮||


ಬದಲಿಸುವ ಬಟ್ಟೆಗಳ ಬಗ್ಗೆ ಚಿಂತಿಸಬೇಡ

ಬದಲಿಸಿದೆ ಲಕ್ಷ್ಯವನು  ಎಡೆಬಿಡದೆ ಸಾಗು |

ಮುದದಿ ಮಾಧವ ತಾನು ಬಟ್ಟೆಯನು ತೋರುವನು

ಕದವ ತೆರೆಯುತ ಮನೆಯ ~ ಪರಮಾತ್ಮನೆ ||೪೮೯||


ಬಲ್ಲಿದರು ಪೇಳಿಹರು ಕಿವಿಮಾತು ನೆನಪಿಡಲು

ಕಲ್ಲೆಸೆಯೆ ಕೆಸರಿನಲಿ ಮುಖವೆಲ್ಲ ಮಣ್ಣು |

ನಲ್ಲವರು ಚೇಷ್ಟೆಯನು ಮಾಡದಿರುವರು, ತಮ್ಮ

ಗಲ್ಲಿಯಲಿ ಕೆಸರಿರಲು ~ ಪರಮಾತ್ಮನೆ ||೪೯೦||

ನಲ್ಲವರು = ಉತ್ತಮರು

ಮುಕ್ತಕಗಳು - ೯೭

ನೂರು ಸಂತತಿಯ ಸಂಸಾರಿ ಒಂದೇ ಸುಳ್ಳು

ಯಾರಿರದ ಬ್ರಹ್ಮಚಾರಿಯು ಒಂಟಿ ಸತ್ಯ |

ನೂರು ಸುಳ್ಳಿನ ಬಲೆಯ ಕತ್ತರಿಸುವುದು ಸತ್ಯ

ತೋರಿಸುವ ಸಮಯಕ್ಕೆ ~ ಪರಮಾತ್ಮನೆ ||೪೮೧||


ಉಪಕಾರಿ ಮುಡುಪಿಡುವ ಪರರಿಗೇ ಅವನಧನ

ಕೃಪಣನಾ ಧನ ಕೂಡ ಪರರ  ಸೇರುವುದು |

ಚಪಲತೆಯು ಕಾಡದದು ಈರ್ವರನು ಲವಲೇಶ

ಅಪವಾದ ಇನ್ನೆಲ್ಲ ~ ಪರಮಾತ್ಮನೆ ||೪೮೨||


ಛಡಿಯೇಟು ತಿಂದವನು ಗುರುಗಳಾ ಅಂಕೆಯಲಿ

ಹೊಡೆಸಿಕೊಂಡಿಹ ಮಗನು ತನ್ನ ಪಿತನಿಂದ |

ಕೊಡತಿಯಾ ಏಟು ತಿಂದಿಹ ಹೊನ್ನಿನಾ ತುಂಡು

ತಡೆಯಿರದೆ ಬೆಳಗುವರು ~ ಪರಮಾತ್ಮನೆ ||೪೮೩||

ಕೊಡತಿ = ಸುತ್ತಿಗೆ


ತೊರೆಯಿತಾದರೆ ಮೀನು ನೀರಿನಾಸರೆಯನ್ನು   

ಅರಗುವುದು ಯಾರದೋ ಜಠರಾಗ್ನಿಯಲಿ |

ತೊರೆದೆಯಾದರೆ ಬದುಕಿನಲಿ ನೈತಿಕತೆಯನ್ನು

ಕರಗುವೆಯೊ ಕತ್ತಲಲಿ ~ ಪರಮಾತ್ಮನೆ ||೪೮೪||


ಕರೆಯುತಿದೆ ಕೈಬೀಸಿ ಗೋವಿಂದನಾ ಮಲೆಯು

ಮೆರೆಯುತಿದೆ ಬಕುತಿಯಲೆ ಮಿತಿಯಿಲ್ಲದಂತೆ |

ಹರಿಯುತಿದೆ ಜನಸಾಗರವು ಮಲೆಯ ಮುಚ್ಚುವೊಲು

ಧರೆಯ ಅಚ್ಚರಿಯಿದುವೆ ~ ಪರಮಾತ್ಮನೆ ||೪೮೫||

ಮುಕ್ತಕಗಳು - ೯೬

ಮಕ್ಕಳಾ ಮಾತುಗಳು ಚಿಲಿಪಿಲಿಯ ಇಂಪಂತೆ

ಪಕ್ಕದಲೆ ಅರಳುತಿಹ ಚೆಲುವ ಹೂವಂತೆ |

ಚಿಕ್ಕದಾದರು ಕೂಡ ದೊಡ್ಡ ಹರುಷವನೀವ

ಸಕ್ಕರೆಯ ಗೊಂಬೆಗಳು ~ ಪರಮಾತ್ಮನೆ ||೪೭೬||


ಉತ್ತಮರು ಆಗೋಣ ಇಂದಿಗಿಂತಲು ನಾಳೆ

ಉತ್ತಮರು ಆಗೋಣ ನಮಗಿಂತ ನಾವು |

ಇತ್ತ ಎದುರಾಳಿಗಳು ಬೇರೆ ಯಾರೂ ಅಲ್ಲ

ಕುತ್ತಿರದ ದಾರಿಯಿದು ~ ಪರಮಾತ್ಮನೆ ||೪೭೭||


ಶಿಶುವಾಗುವರು ಜನರು ಆನಂದ ಹೆಚ್ಚಿರಲು

ಪಶುವಾಗುವರು ಅವರೆ ಕ್ರೋಧ ಉಕ್ಕಿರಲು! |

ವಶವಾಗದಿರಬೇಕು ವಿಷಯಗಳ ಹಿಡಿತಕ್ಕೆ

ನಶೆಯು ಮನ ಕೆಡಿಸುವುದು ~ ಪರಮಾತ್ಮನೆ ||೪೭೮||


ವೇಗ ಹೆಚ್ಚಾದಂತೆ ಮಾನವನ ಬದುಕಿನಲಿ

ಸೋಗು ಹೆಚ್ಚಾಗುತಿದೆ ನೀತಿ ಕೊರೆಯಾಗಿ |

ಜೌಗಿನಲಿ ಜಾರುತಿರೆ ಮುನ್ನೆಡವ ಕಾಲುಗಳು

ಜಾಗರೂಕತೆ ಇರಲಿ ~ ಪರಮಾತ್ಮನೆ ||೪೭೯||


ತೇಲದಿರು ಕನಸಿನಲಿ ಸಾಲ ದೊರೆತಿದೆಯೆಂದು

ಸಾಲವೆಂಬುದು ಎರಡು ಮೊನಚಿನಾ ಖಡ್ಗ! |

ಬೇಲಿಯಿಲ್ಲದ ಹೊಲಕೆ ಆನೆ ನುಗ್ಗಿದ ಹಾಗೆ

ಸಾಲ ಮಿತಿಮೀರಿದರೆ ~ ಪರಮಾತ್ಮನೆ ||೪೮೦||

ಮುಕ್ತಕಗಳು - ೯೫

ಪಾಪವೇ ಭಾರವದು ಭೂಮಿ ಭಾರಕ್ಕಿಂತ

ಆಪಕಿಂತಲು ತಿಳಿಯು ಬೆಳಗುವ ಜ್ಞಾನ |

ಕೋಪವೇ ಪ್ರಖರವದು ರವಿಯಶಾಖಕ್ಕಿಂತ

ಜ್ಞಾಪಕವಿರಲಿ ಸದಾ ~ ಪರಮಾತ್ಮನೆ ||೪೭೧||


ಮನವಿಟ್ಟು ಕಲಿತಿರುವ ಅಕ್ಕರವು, ವಿದ್ಯೆಗಳು

ತನು ಮಣಿಸಿ ಬೆವರಿಳಿಸಿ ಗಳಿಸಿದಾ ಧನವು |

ಇನಿತಾದರೂ ಆರ್ತರಿಗೆ ಮಾಡಿದಾ ದಾನ

ಕೊನೆವರೆಗೆ ಕಾಯುವವು ~ ಪರಮಾತ್ಮನೆ ||೪೭೨||

ಆರ್ತ = ದುಃಖಿತ


ಕೊಟ್ಟು ಕೊರಗದಿರು ಏನೋ ಕಳೆದಿಹಿದು ಎಂದು

ಕೊಟ್ಟದ್ದು ತಪ್ಪದೇ ಹಿಂದಿರುಗಿ ಬಹುದು |

ಕೊಟ್ಟಿರಲು ನಿಸ್ವಾರ್ಥ ಪ್ರೀತಿಯನು, ಬರುವುದದು

ಬೆಟ್ಟದಷ್ಟಾಗುತಲಿ ~ ಪರಮಾತ್ಮನೆ ||೪೭೩||


ನೋಯಿಸದೆ ಇದ್ದಾಗ ತಂದೆತಾಯಿಯ ಮನಸು

ಬೇಯಿಸದೆ ಇದ್ದಾಗ ಕೋಪದಾಗ್ನಿಯಲಿ |

ತೋಯಿಸದೆ ಇದ್ದಾಗ ಕಣ್ಣೀರ ಧಾರೆಯಲಿ

ಹಾಯಾಗಿ ಇರುವೆ ನೀ ~ ಪರಮಾತ್ಮನೆ ||೪೭೪||


ಬದಲಿಸದು ತಪ್ಪರಿವು ನಡೆದ ಘಟನೆಗಳನ್ನು

ಬದಲಿಸದು ಕಾತುರವು ಮುಂದೆ ನಡೆಯುವುದ |

ಎದೆಯಿರಿಸು ಇಂದನ್ನು ಉಪಯುಕ್ತ ವಾಗಿಸಲು

ಮುದ ಬಹುದು ಕದ ತೆರೆದು ~ ಪರಮಾತ್ಮನೆ ||೪೭೫||

ಮುಕ್ತಕಗಳು - ೯೪

ಬದಲಾಗಬೇಕಿದೆಯೆ ನೀನು ಉತ್ತಮನಾಗಿ?

ಬದುವಿನಲ್ಲಿರುವ ಕಳೆ ಕೀಳಬೇಕಿದೆಯೆ? |

ಬದಲಾಯಿಸಲು ನಿನ್ನ ಕಣ್ಣು ಕಿವಿಗಳ ಊಟ

ಬದಲಾಗುವುದು ಬದುಕು ~ ಪರಮಾತ್ಮನೆ ||೪೬೬||


ಹೇಳದಿರಿ ಜಾತಿಯಿಂ ನಾನು ಉತ್ತಮನೆಂದು

ಕೇಳದಿರಿ ಜಾತಿಯದು ನಿನದಾವುದೆಂದು |

ಆಳು ಉತ್ತಮನು ಕೇವಲ ನಡತೆಯಿಂದಷ್ಟೆ

ಕೋಳಿ ಕೂಗದೆ ಹಗಲು ~ ಪರಮಾತ್ಮನೆ ||೪೬೭||


ಉಳಿವಿನಾ ಚಣಗಳೇ ಅತ್ಯಮೂಲ್ಯದ ಆಸ್ತಿ

ಕಳೆಯದಿರಿ ಅದ ನಿಮ್ಮ ಹೊಗಳುವವರೊಡನೆ |

ಕಳೆಯುತಿರಿ ನಿಮ್ಮ ಹಿತಬಯಸುವರ ಜೊತೆಯಲ್ಲಿ

ಕೊಳೆಯಿರದ ಬದುಕದುವೆ ~ ಪರಮಾತ್ಮನೆ ||೪೬೮||


ಬರುವಾಗ ಮಡಿಲಿನಾಸರೆಯನಿತ್ತವನು ಹರಿ

ಹರಿಕರುಣೆಗಾಗಿ ಚಿರಋಣಿಯಾಗಬೇಕು |

ಹೊರಟಾಗ ಹೊರುವ ಹೆಗಲುಗಳು ಸ್ವಯಾರ್ಜಿತವು

ಮರೆಯದಿರು ಆರ್ಜನವ ~ ಪರಮಾತ್ಮನೆ ||೪೬೯||

ಆರ್ಜನ = ಗಳಿಕೆ


ನಂಬಿದರೆ ನಂಬಿ ನಿಮದೇ ದಕ್ಷತೆಯ ಶಕ್ತಿ

ಹುಂಬರಾಗದಿರಿ ಮತ್ತೊಬ್ಬರನು ನಂಬಿ |

ಕಂಬವೆಂದೊರಗದಿರಿ ಅನ್ಯರಾ ಭುಜವನ್ನು

ಗೊಂಬೆಯಾಗದೆ ಬದುಕಿ ~ ಪರಮಾತ್ಮನೆ ||೪೭೦||

ಮುಕ್ತಕಗಳು - ೯೩

ಲೆಕ್ಕವಿದೆ ಬದುಕಿನಲಿ ತಪ್ಪಲಾಗದು ಅದನು

ಲೆಕ್ಕವೇ ಬದುಕಾಗೆ ತಪ್ಪೆಲ್ಲ ನಮದೆ |

ಲೆಕ್ಕವನು ಬೆರೆಸದಿರು ಮಮತೆ ಕರುಣೆಯ ಜೊತೆಗೆ

ಲೆಕ್ಕಬಿಡು ಆಪ್ತರಲಿ ~ ಪರಮಾತ್ಮನೆ ||೪೬೧||


ಸೌಂದರ್ಯವರ್ಧಕವ ಬಳಸುವರು ಅತಿಶಯದಿ

ಕುಂದುಗಳ ಮರೆಮಾಡೊ ಆಸೆಯಿದೆ ಬಹಳ! |

ಕುಂದುಗಳು ಕಾಣುವವು ಅಂದವಿರದಿರೆ ಮನವು

ಅಂದವಾಗಿಡು ಮನವ ~ ಪರಮಾತ್ಮನೆ ||೪೬೨||


ಹೊಲದಲ್ಲಿ ಕಳೆಯೆದ್ದು ಬೆಳೆ ಬೆಳೆಯಲಾಗದಿರೆ

ಹೊಲವನ್ನು ತೊರೆಯುವಾ ಮೂರ್ಖತನ ಬೇಡ |

ಕಳೆಯನ್ನು ಕಿತ್ತೆಸೆವ ದೃಢತೆಯನು ನೀತೋರು

ಬೆಳೆಯು ಹುಲುಸೇಳುವುದು ~ ಪರಮಾತ್ಮನೆ ||೪೬೩||


ನಮ್ಮಲಿಹ ಅವಗುಣಗಳನು ಸಿಟ್ಟು ಹೊರಗೆಳೆಯೆ

ನಮ್ಮವಗುಣಗಳ ಕರಗಿಸುವುದೆ ತಾಳ್ಮೆ |

ಹೊಮ್ಮಿಸಲು ಹೊರಗೆ ಸದ್ಗುಣಗಳಾ ಹೊಳಪನ್ನು

ಬಿಮ್ಮನಿರು ಸಿಟ್ಟುಬಿಡು ~ ಪರಮಾತ್ಮನೆ ||೪೬೪||


ಇಲ್ಲಿ ಇರುವುದೆ ಮೂರು ರತ್ನಗಳು ಬುವಿಯಲ್ಲಿ

ಬೆಲ್ಲದಂತಹ ನುಡಿಯು, ಅನ್ನ ನೀರುಗಳು! |

ಬಲ್ಲಿದರು ನುಡಿದಿಹರು, ಎಂದಿಗೂ ಮರೆಯದಿರು

ಕಲ್ಲುಗಳು ನವರತ್ನ! ~ ಪರಮಾತ್ಮನೆ ||೪೬೫||

ಮುಕ್ತಕಗಳು - ೯೨

ಗೆಳೆಯನಿರೆ ಸನಿಹದಲಿ ಬಿಳಿಯ ಹಾಳೆಯ ಹಾಗೆ

ಬಳಿದು ಬಣ್ಣಗಳ ಮನಕುಂಚವನು ಎಳೆದು |

ಮಳೆಸುರಿದ  ಮಣ್ಣಿನೊಲು ಇರೆ ಅದನು ಎಸೆಯದಿರು

ಹಳೆಯ ಕಾಗದವೆಂದು ~ ಪರಮಾತ್ಮನೆ ||೪೫೬||


ಸರಿಹೆಜ್ಜೆ ಹಾಕುತ್ತ ಬೆಟ್ಟವನೆ ಹತ್ತಿರಲು

ತಿರುಗಿ ನೋಡರು ಜನರು ಆಸಕ್ತಿಯಿರದು |

ಬರಿದೆ ಎಡವಲು ಒಮ್ಮೆ ಹಾಸ್ಯಮಾಡುತ ನಕ್ಕು

ಬರೆಹಾಕಿ ಹೋಗುವರು ~ ಪರಮಾತ್ಮನೆ ||೪೫೭||


ನೆಮ್ಮದಿಯು ಸಿಗದು ನಮಗಿಷ್ಟವಾದುದ ಪಡೆಯೆ

ಇಮ್ಮಡಿಯ ಆಸೆಗಳು ಹುಟ್ಟುವವು ಮುಂದೆ! |

ಸುಮ್ಮನೆಯೆ ಇಷ್ಟಪಡು ಪಡೆದಿರುವ ಎಲ್ಲವನು

ಮುಮ್ಮಡಿಯ ನೆಮ್ಮದಿಗೆ ~ ಪರಮಾತ್ಮನೆ ||೪೫೮||


ಅಕ್ಕರೆಯು ಇರಬೇಕು ನಡೆಯಲ್ಲಿ ನುಡಿಯಲ್ಲಿ

ಸಕ್ಕರೆಯ ಸವಿ ನಿಲ್ಲುವುದು ಬಂಧಗಳಲಿ |

ಮಿಕ್ಕರುಚಿಗಳು ಎಲ್ಲ ಮರೆಯಾಗುವವು ಹಿಂದೆ

ದಕ್ಕುವುದು ಆನಂದ ~ ಪರಮಾತ್ಮನೆ ||೪೫೯||


ವ್ಯರ್ಥವದು ಭೋಜನವು ಹಸಿವಿಲ್ಲದಿರುವಾಗ

ವ್ಯರ್ಥವದು ವಿನಯವನು ಕಲಿಸದಾ ವಿದ್ಯೆ |

ವ್ಯರ್ಥವದು ಉಪಯೋಗಕಾಗದಾ ಸಿರಿತನವು

ವ್ಯರ್ಥವದು ಆತ್ಮರತಿ ~ ಪರಮಾತ್ಮನೆ ||೪೬೦||

ಆತ್ಮರತಿ = ತನ್ನನ್ನು ತಾನೇ ಮೆಚ್ಚಿಕೊಳ್ಳುವುದು

ಮುಕ್ತಕಗಳು - ೯೧

ಫಲಭರಿತ ವೃಕ್ಷಗಳು ಬೆಳೆಸೆ ತಮ ಸಂತತಿಯ

ಬೆಲೆಯಾಗಿ ನೀಡುತಿವೆ ರಸಭರಿತ ಸವಿಯ |

ಸಲಿಸೆ ಕೋರಿಕೆ ಬೀಜಬಿತ್ತಿ ಹದುಳಿಸಿ ಸಸಿಯ

ಬೆಳೆಸುವಾ ಮರಗಳನು ~ ಪರಮಾತ್ಮನೆ ||೪೫೧||

ಹದುಳಿಸು = ತಣಿಸು / ತೃಪ್ತಿ ಪಡಿಸು


ಮನಸು ತುಟಿಗಳ ನಡುವೆ ಬೇಕೊಂದು ಸೋಸುತೆರೆ

ಅನಿಸಿದುದನೆಲ್ಲವನು ಆಡಬೇಕಿಲ್ಲ! |

ದನಿಗೊಡುವ ಹರುಷವನು ಹಂಚುವಾ ಯೋಚನಗೆ

ಕೊನೆಗೊಳಿಸಿ ದುರ್ಭಾವ ~ ಪರಮಾತ್ಮನೆ ||೪೫೨||


ಇರುವರೇ ಶತ್ರುಗಳು ಕಣ್ಣು ನಾಲಿಗೆಗಿಂತ?

ಸರಿದಾರಿ ತಪ್ಪಿಸುವ ಧೂರ್ತ ಪಂಡಿತರು! |

ಬರಸೆಳೆದು ಆಸೆಗಳ ಮನದಲ್ಲಿ ತುಂಬಿಸುತ

ಹರಿಯ ಹೊರಗಟ್ಟುವವು ~ ಪರಮಾತ್ಮನೆ ||೪೫೩||


ಆ ದೇವ ನಿರುವ ಮಾತೆಯ ಮಮತೆಯಲಿ, ಇರುವ

ಆ ದೇವ ತಂದೆಯಾ ಹೊಣೆಗಾರಿಕೆಯಲಿ |

ಮಾದೇವ ಅತಿಥಿ, ಗುರುಗಳ ವೇಷ, ಅರಿವಿನಲಿ

ವೇದಗಳು ನಾಲ್ಕಿವೇ ~ ಪರಮಾತ್ಮನೆ ||೪೫೪||


ಕಾಲಡಿಗೆ ಮುಳ್ಳು ಚುಚ್ಚಿರೆ ತಪ್ಪು ಯಾರದದು?

ಕಾಲಿನದೊ ಮಲಗಿದ್ದ ಮುಳ್ಳಿನದೊ ಹೇಳು? |

ಬಾಳಿನಲಿ ಎಚ್ಚರದ ಹೆಜ್ಜೆಯಿಡಲಾಗದಿರೆ

ಉಳಿವೆಲ್ಲ ರಕುತಮಯ ~ ಪರಮಾತ್ಮನೆ ||೪೫೫||

ಮುಕ್ತಕಗಳು - ೯೦

ಕಡಲಾಳದಲ್ಲಿರುವ ಸಂಪತ್ತು ದೊರೆಯುವುದೆ

ದಡದ ಮೇಗಡೆ ಕುಳಿತು ತಪವ ಮಾಡಿದರೆ? |

ಬಿಡಬೇಕು ಭಯವನ್ನು ತರಬೇಕು ಪರಿಕರವ

ನಡುನೀರ ಲಿಳಿಬೇಕು ~ ಪರಮಾತ್ಮನೆ ||೪೪೬||


ಜನುಮ ಯೌವನ ಮುಪ್ಪು ವಪುರೋಗ ಮರಣಗಳು

ತನುವಿಗೊದಗುವ ಪರಿಸ್ಥಿತಿಗಳಾಗಿರಲು |

ಮನವ ಸಜ್ಜುಗೊಳಿಸುವ ವೇಷಗಳ ಧಾರಣೆಗೆ 

ಅನುಗಾಲ ನೆಮ್ಮದಿಗೆ ~ ಪರಮಾತ್ಮನೆ ||೪೪೭||


ತುಟಿ ಪಿಟಕ್ಕೆನ್ನದಿರೆ ಬಿಕ್ಕಟ್ಟು ಹುಟ್ಟದದು,

ತುಟಿ ಬಿರಿಯೆ ಕರಗುವವು ಹಲವಾರು ತೊಡಕು |

ಹಟ ತೊರೆದು ನಸುನಗಲು ಗಂಟೇನು ಕರಗುವುದು?

ನಿಟಿಲ ಗಂಟದು ಮಾತ್ರ! ~ ಪರಮಾತ್ಮನೆ ||೪೪೮||


ಸೂಸುವುದು ಪರಿಮಳವ ಚಂದನದ  ಹುಟ್ಟುಗುಣ,

ಈಸುವುದು ಮೀನು ನೀರಿನಲಿ ಮುಳುಗದೆಯೆ ||

ಆಸೆಗಳ ಪೂರೈಸೆ ಬದಲಿಸಿರೆ ಬಣ್ಣಗಳ

ಊಸರವಳ್ಳಿಯೆ ಅವನು ~ ಪರಮಾತ್ಮನೆ ||೪೪೯||


ಪಾಪಾಸುಕಳ್ಳಿಯೂ ತಣಿಸುವುದು ದಾಹವನು

ವಾಪಸ್ಸು ನೀಡುತಿದೆ ಸ್ವಾರ್ಥಿಯಲ್ಲವದು |

ನೀ ಪಡೆದ ವರದಲ್ಲಿ  ನೀಡು ತುಸು ಪರರಿಗೂ

ಪೀಪಾಸು ಆಗದಿರು ~ ಪರಮಾತ್ಮನೆ ||೪೫೦||