Monday, December 26, 2022

ಮುಕ್ತಕಗಳು - ೮೯

ನಿನ್ನ ದುರ್ಗುಣಗಳನು ಕಿತ್ತು ಎಸೆಯಲು ಬೇಕು

ಅನ್ನದಕ್ಕಿಯ ಕಲ್ಲು ಹೆಕ್ಕಿ ತೆಗೆದಂತೆ |

ಮುನ್ನಡೆವ ಹಾದಿಯಲಿ ಮುಳ್ಳುಗಳು ಹೆಚ್ಚಿರಲು

ಸನ್ನಡತೆ ರಕ್ಷಿಪುದು ~ ಪರಮಾತ್ಮನೆ ||೪೪೧||


ಕೊಟ್ಟುಕೊಳ್ಳುವ ಸಂತೆಯಲಿ ಸರಕು ವಿನಿಮಯವು

ಒಟ್ಟು ಕರಗದು ಇಲ್ಲಿ ಸರಕುಗಳ ಗಂಟು! |

ಬಿಟ್ಟು ಗಂಟುಗಳೆಲ್ಲ ನಡೆ ಹಟ್ಟಿಯಾ ಕಡೆಗೆ

ಬೆಟ್ಟದಾ ಹಾದಿಯಿದೆ ~ ಪರಮಾತ್ಮನೆ ||೪೪೨||


ಫಲಭರಿತ ಮರಕುಂಟು ವಂಶ ಬೆಳೆಸುವ ಆಸೆ

ಜಲಧಿ ಸೇರುವ ಆಸೆ ಹರಿಯುವಾ ನದಿಗೆ |

ಇಳೆಯ ಕಣಕಣಕೆ ಇರಲಾಸೆಗಳು ಧರ್ಮವದು

ಅಳತೆ ಮೀರದೆ ಇರಲು ~ ಪರಮಾತ್ಮನೆ ||೪೪೩||


ಕರಿಗೆ ಸಾಕಾಗುವುದೆ ಕುರಿಯು ಮೇಯುವ ಮೇವು

ಉರಿಬಿಸಿಲ ಸೆಕೆಗೆ ಸಿಕ್ಕಂತೆ ಹನಿ ನೀರು |

ಅರೆಮನದ ಕಾರ್ಯಗಳು ನೀಡುವವೆ ಪೂರ್ಣಫಲ?

ಉರಿಸು ಇರುಳಿನ ದೀಪ ~ ಪರಮಾತ್ಮನೆ ||೪೪೪||


ಕಲರವದ ಹಾಡಿರಲು ತಂಗಾಳಿ ಬೀಸಿರಲು 

ಬಳಿಯಲ್ಲೆ ನದಿಯಿರಲು ಹಸಿರು ನಗುತಿರಲು |

ಎಳೆಯ ತುಸು ಬಿಸಿಲಿರಲು ಚುಮುಗುಡುವ ಚಳಿಯಿರಲು

ಗೆಳತಿ ಜೊತೆಗಿರಬೇಕು ~ ಪರಮಾತ್ಮನೆ ||೪೪೫||

ಮುಕ್ತಕಗಳು - ೮೮

ಜಾತಿಧರ್ಮಗಳೀಗ ರಾಜಕೀಯದೆ ಮುಳುಗಿ

ಕೋತಿಗಳ ರೀತಿಯಲಿ ಕುಣಿಸುತಿವೆ ಜನರ |

ಭೀತಿಯನು ಬಿತ್ತುತ್ತ ಮನಗಳನು ಕದಡುತ್ತ

ನೀತಿಯನು ಮರೆತಿಹವು ~ ಪರಮಾತ್ಮನೆ ||೪೩೬||


ಉಪಕಾರ ಮಾಡುತಿರು ಪ್ರತಿಫಲವ ಬಯಸದೆಯೆ

ತಪವ ಗೈಯುವ ರೀತಿ ಎಡೆಬಿಡದೆ ಸತತ |

ಉಪಕಾರ ದೊರೆಯುವುದು ಸಮಯಕ್ಕೆ ಸರಿಯಾಗಿ

ಹಪಹಪಿಸದೆಯೆ ನಿನಗೆ ~ ಪರಮಾತ್ಮನೆ ||೪೩೭||


ಗೋಜಲನು ತುಂಬದಿರಿ ಕಲಿಯುವಾ ಮನಗಳಲಿ

ರಾಜಿಯಾಗಿರಿ ವಿದ್ಯೆ ಕಲಿಸುವಾ ಗುರಿಗೆ |

ಸೋಜಿಗದ ಮನಗಳಿಗೆ ಶುದ್ಧ ಅರಿವನು ನೀಡಿ

ಭೋಜನವು ಸ್ವಾಸ್ಥ್ಯಕ್ಕೆ ~ ಪರಮಾತ್ಮನೆ ||೪೩೮||


ಶಿಸ್ತಿರದ ಬದುಕುನಾ ವಿಕನಿರದ ದೋಣಿ, ಕಥೆ

ಪುಸ್ತಕದ ಪುಟಗಳೇ ಅದಲುಬದಲಂತೆ! |

ಮಸ್ತಕದ ಮಾರ್ಗದರ್ಶನಿವಿರದ ಮನಸಿರಲು

ಬೇಸ್ತು ಬೀಳುವೆ ಬಂಧು ~ ಪರಮಾತ್ಮನೆ ||೪೩೯||


ದೇವರಿಗೆ ಕಾಣುತಿರೆ ಮಾಡುತಿಹ ಪೂಜೆಗಳು

ದೈವಕ್ಕೆ ಕಾಣದೇ ನೀ ಮಾಡೊ ತಪ್ಪು? |

ದೇವನಾ ಕ್ಯಾಮೆರವು ನಮ ಕಣ್ಣೆ ಮರೆಯದಿರು

ನಾವು ನಮಗೇ ಸಾಕ್ಷಿ ~ ಪರಮಾತ್ಮನೆ ||೪೪೦||


ಮುಕ್ತಕಗಳು - ೮೭

ಬಾಳಬಂಡಿಯು ಆಗಬೇಕಿಹುದು ತೇರೊಂದು

ಏಳಿಗೆಯು ದೊರೆಯುವುದು ಶಂಕೆ ಬೇಕಿಲ್ಲ |

ಕೇಳು, ಕೂರಿಸಬೇಕು ಸತ್ಯ ದಯೆ ಧರ್ಮಗಳ

ಈಳುತಿಹ ತೇರಿನಲಿ ~ ಪರಮಾತ್ಮನೆ ||೪೩೧||

ಈಳುತಿಹ = ಎಳೆಯುತಿಹ


ಪದವಿಗಳು ಕಲಿಸುವವೆ ಬದುಕಿನಾ ಪಾಠವನು?

ಪದವಿ ಪಡೆದಿದೆಯೇನು ಜೇನಿನಾ ನೊಣವು? |

ಮುದದಿಂದ ಕಲಿಸದದು ಕೂಡಿ ಬಾಳುವ ರೀತಿ

ಮದವೇಕೆ ಪದವಿಯಿರೆ? ~ ಪರಮಾತ್ಮನೆ ||೪೩೨||


ಮೇಲೆ ಹಾರಲು ಬೇಕು ಖಗಗಳಿಗೆ ರೆಕ್ಕೆಗಳು

ಮೇಲೇರೆ ಮನುಜನಿಗೆ ನಮ್ರತೆಯೆ ರೆಕ್ಕೆ |

ಕಾಲೂರಬೇಕು ಭೂಮಿಯ ಮೇಲೆ ಸೊಕ್ಕಿರದೆ

ಗಾಳಿಗೋ ಪುರಮಿಥ್ಯ ~ ಪರಮಾತ್ಮನೆ ||೪೩೩||


ನೇಹಿಗರ ಸಂಗವದು ಹೆಜ್ಜೇನು ಸವಿದಂತೆ

ದಾಹ ತಣಿಪುದು ಮನಕೆ ಸವಿ ತಂಪನೆರೆದು |

ಬಾಹಿರದ ಬದುಕಿನಲಿ ನೆರಳಂತೆ ನಿಂತವರು

ಜಾಹೀರು ಮಾಡುತಿಹೆ ~ ಪರಮಾತ್ಮನೆ ||೪೩೪||

ಬಾಹಿರ = ಹೊರಗೆ, ಜಾಹೀರು = ಘೋಷಣೆ


ದೇವನೊಬ್ಬನು ಮಾತ್ರ ಎನ್ನುವರೆ ಎಲ್ಲರೂ

ಯಾವುದೇ ಸಂಶಯಗಳಿರದ ನಂಬಿಕೆಯು! |

ಕಾವನೊಬ್ಬನಿರೆ ಕಲಹಿಗಳಾದರೇಕೆ ಜನ?                

ದೇವನನು ಹೆಸರಿಸಲು! ~ ಪರಮಾತ್ಮನೆ ||೪೩೫||

Sunday, December 25, 2022

ಮುಕ್ತಕಗಳು - ೮೬

ಸುಟ್ಟಿರಲು ಮರವೊಂದ ಮತ್ತೆ ಫಲವೀಯುವುದೆ

ನೆಟ್ಟು ಸಸಿಯನು ಪೋಷಿಸುತ ಕಾಯಬೇಕು |

ಕೆಟ್ಟಕರ್ಮಫಲದಾ ಪರಿಣಾಮ ತಗ್ಗಿಸುವ 

ಗಟ್ಟಿ ದಾರಿಯಿದುವೇ ~ ಪರಮಾತ್ಮನೆ ||೪೨೬||


ಈಯುವುದು ಸಂತಸವ ಬಡವನಿಗೆ ತುತ್ತನ್ನ

ಈಯುವುದೆ ಧನಿಕನಿಗೆ ತೃಪ್ತಿ ಮೃಷ್ಟಾನ್ನ? |

ಬೇಯುವುದು ಮನವಧಿಕ ತೀರದಾಸೆಗಳಿರಲು

ಸಾಯುವುದು ಸಂತಸವು ~ ಪರಮಾತ್ಮನೆ ||೪೨೭||


ಸರ್ವಗುಣ ಸಂಪನ್ನರಾರುಂಟು ಪೃಥುವಿಯಲಿ

ಗರ್ವಪಡದಿರು ನೀನು ಕೊರೆಯುಂಟು ನಿನಗೆ | 

ಕರ್ಮ ತಂದಿಹ ಕೊರತೆ ಮರೆಯಾಗ ಬೇಕೆ? ಹಿಡಿ,

ಪರ್ವಕಾಲದ ಮಾರ್ಗ ~ ಪರಮಾತ್ಮನೆ ||೪೨೮||

ಪರ್ವಕಾಲ = ಪರಿವರ್ತನೆ / ಬದಲಾವಣೆ


ಬಾಗುವುದು ಮರವು ಫಲಭರಿತವಾಗಿರುವಾಗ

ಬಾಗುವುದು ತಲೆಯು ಪಾಂಡಿತ್ಯ ತುಂಬಿರಲು |

ಬೀಗುವರು ಸುಮ್ಮನೆಯೆ ಸೋಗಿನಾ ಪಂಡಿತರು

ಮಾಗಿರದ ಎಳಸುಗಳು ~ ಪರಮಾತ್ಮನೆ ||೪೨೯||


ಅರಳುತಿಹ ಕುಸುಮವರಿಯದು ಪಯಣವೆಲ್ಲಿಗೋ

ಅರಳಿ ದೇವನ ಗುಡಿಗೊ ಮಸಣಕೋ ಕೊನೆಗೆ? |

ಇರುವುದೇ ಕುಸುಮಕ್ಕೆ ನಿರ್ಧರಿಸೊ ಅವಕಾಶ?

ಹರಿ ನಮಗೆ ಕೊಟ್ಟಿಹನು ~ ಪರಮಾತ್ಮನೆ ||೪೩೦||

ಮುಕ್ತಕಗಳು - ೮೪

ನಿದ್ದೆಯಲಿ ಕಂಡ ಕನಸಿನ ಹಿಂದೆ ಬೀಳದಿರು

ನಿದ್ದೆ ಕೆಡಿಸುವ ಕನಸು ನನಸಾಗಬೇಕು |

ಒದ್ದೆಯಾಗಿಸು ಕಂಗಳನು ಕನಸ ಬೆನ್ನಟ್ಟೆ

ನಿದ್ದೆ ಬರದಿರುವಂತೆ ~ ಪರಮಾತ್ಮನೆ ||೪೧೬||


ನಾನು ಮಾಡಿದೆಯೆನ್ನದಿರು, ಹಮ್ಮು ತೋರದಿರು

ನೀನಿಲ್ಲಿ ಮಾಡಿದ್ದು ಏನಿಲ್ಲ ಮರುಳೆ! |

ಆನದೇ, ಅವ ನೀಡಿದೇನನೂ ಬಳಸದೆಯೆ

ಏನುಮಾ ಡಿಡಬಲ್ಲೆ ~ ಪರಮಾತ್ಮನೆ ||೪೧೭||


ಧುಮ್ಮಿಕ್ಕುತಿಹ ಕೋರಿಕೆಗಳ ಧಾರೆಗೆ ಬೆದರಿ

ನಮ್ಮಿಂದ ಮರೆಯಾಗಿ ಕಲ್ಲಿನಲಿ ಅಡಗಿ |

ನಮ್ಮ ನಾಟಕಗಳನು ಕದ್ದು ನೋಡುತ್ತಿರುವೆ

ಹೊಮ್ಮಿ ಬುರುತಿದೆಯೆ ನಗು ಪರಮಾತ್ಮನೆ ||೪೧೮||


ಯಾವ ಚಣದಲಿ ಬಹುದೊ ಯಾವ ರೂಪದಿ ಬಹುದೊ

ಯಾವ ಎಡೆಯಲಿ ಬಹುದೊ ತಿಳಿಯದೀ ಮೃತ್ಯು |

ನಾವೆಯನು ಮುಳುಗಿಸುವುದಾವ ಅಲೆಯೋ ಕಾಣೆ

ಜೀವ ಗಾಳಿಯ ಸೊಡರು ~ ಪರಮಾತ್ಮನೆ ||೪೧೯||


ಯಮಭಟರು ಬಂದಾಗ ಪೊರೆಯುವರು ಯಾರಿಹರು,

ನಮ ಮಡದಿ ಮಕ್ಕಳೇ ಗೆಳೆಯರೇ ಯಾರು? |

ಯಮಪಾಶ ಬೀಸಿರಲು ಧನವು ಕಾಯುವುದೇನು?

ಜಮೆಯು ಕೈಜಾರುವುದು  ~ ಪರಮಾತ್ಮನೆ ||೪೨೦||



ಮುಕ್ತಕಗಳು - ೮೩

ಇರದದನು ಬಯಸಿದರೆ ಸುಖದುಃಖಗಳ ಬಲೆಯು

ಇರುವುದನು ನೆನೆಸಿದರೆ ನೆಮ್ಮದಿಯ ಅಲೆಯು |

ಕರುಬಿದರೆ ಕಬ್ಬಿಣಕೆ ತುಕ್ಕು ಹಿಡಿದಾ ರೀತಿ

ಕೊರಗುವುದು ಸಾಕಿನ್ನು ~ ಪರಮಾತ್ಮನೆ ||೪೧೧||


ಕದ್ದು ಕೇಳುವ ಕಿವಿಗೆ ಕಾದಸೀಸದ ಕಾವು

ಬಿದ್ದುಹೋಗಲಿ ಜಿಹ್ವೆ ಕೆಟ್ಟ ಮಾತಾಡೆ |

ಇದ್ದುದೆಲ್ಲವ ಕಸಿದು  ಪಾಳುಕೂಪಕೆ ತಳ್ಳು

ಶುದ್ಧವಿರದಿರೆ ನಡತೆ ಪರಮಾತ್ಮನೆ ||೪೧೨||


ನಿನಗಿಂತ ಮುಂದಿರುವವರ ಕಂಡು ಕರುಬದಿರು

ನಿನಗಿಂತ ಹಿಂದಿರಲು ಅಣಕಿಸದೆ ತಾಳು |

ನಿನ ಜೊತೆಗೆ ನಡೆಯುವರ ಗಮನಿಸುತ ಆದರಿಸು

ನಿನ ಬಾಳು ಬಂಗಾರ ~ ಪರಮಾತ್ಮನೆ ||೪೧೩||


ಭಕ್ತಿಯಲಿ ಅಸದಳದ ಬಲವುಂಟು, ಮನುಜನನು

ಶಕ್ತನಾಗಿಸಿ ಜಗದ ಕೋಟಲೆಯ ಸಹಿಸೆ |

ರಕ್ತನನು ವಿರಕುತನ ಮಾಡಿಸುತ ಜತನದಲಿ

ಮುಕ್ತಿಯೆಡೆ ಸೆಳೆಯುವುದು ~ ಪರಮಾತ್ಮನೆ ||೪೧೪||


ಒಂದಡಿಯ ಹೊಟ್ಟೆಯನು ತುಂಬಿಸುವ ಯತ್ನದಲಿ

ಹೊಂದಿರುವ ಜನುಮವಿಡಿ ಕೂಲಿ ಮಾಡಿಹೆವು |

ಕಂದರವು ಇದಕೆ ನಾವೇ ಬಲಿಪಶುಗಳಾಗಿ

ಒಂದು ದಿನ ಅಳಿಯುವೆವು ~ ಪರಮಾತ್ಮನೆ ||೪೧೫||

ಮುಕ್ತಕಗಳು - ೮೫

ರಕ್ತದಲಿ ಏನಿದೆಯೊ ಬಂಧವದು ಬಲುಗಟ್ಟಿ

ಶಕ್ತವದು ಮನುಜನ ಸ್ವಾರ್ಥಿಯಾಗಿಸಲು |

ಮುಕ್ತವಾಗದೆ ಸೆಳೆತ ಮುಕ್ತವಾಗದು ಜಗವು

ಉಕ್ತಿಯಲುಳಿಯೆ ಸಾಕೆ? ~ ಪರಮಾತ್ಮನೆ ||೪೨೧||


ಅನ್ನ ವಿದ್ಯೆಗಳು ಸರಕುಗಳು ಆಗಿರದಾಗ

ಚೆನ್ನಿತ್ತು ಜಗವು ನೆಮ್ಮದಿಯ ಕಾಲವದು |

ಇನ್ನವೇ ಸರಕುಗಳು ಆಗಿರಲು ಪೇಟೆಯಲಿ

ಭಿನ್ನವಾಯಿತು ಶಾಂತಿ ~ ಪರಮಾತ್ಮನೆ ||೪೨೨||


ಆಗಸದ ಮೇಘಗಳ ಎತ್ತರದ ಗುರಿಗಳಿರೆ

ಆಗಿರಿಯ ಘನದಷ್ಟು ಯತ್ನವಿರಬೇಕು |

ಸಾಗುತಿರು ನಿಲ್ಲದೆಯೆ ಎಲ್ಲ ಅಡೆತಡೆಗಳಿಗೆ

ಮೇಘ ಸುರಿಸುವುದು ಮಳೆ ~ ಪರಮಾತ್ಮನೆ ||೪೨೩||


ಬುವಿಯಿಂದ ಏಳುತಿವೆ ಹಸಿರಿನಾ ಬುಗ್ಗೆಗಳು

ಅವನಿಯೇ ನೀಡುತಿರೆ ಒಡಲಿನಾ ಸವಿಯ |

ಸವಿಯನೇ ಉಂಡವನು ಹಂಚಿದರೆ ಕಹಿಯನ್ನು

ಇವನ ವಿಷವೆಲ್ಲಿಯದು?! ಪರಮಾತ್ಮನೆ ||೪೨೪||


ಪ್ರತ್ಯೇಕ ಫಲವಿಹುದು ಪ್ರತಿಯೊಂದು ಕರ್ಮಕ್ಕೆ

ಸ್ತುತ್ಯಕರ್ಮವಳಿಸದು ದುಷ್ಟಕರ್ಮಫಲ |

ನಿತ್ಯ ಸುರಿದರೆ ನೀರ ಸುಟ್ಟ ಮರದಾ ಬುಡಕೆ

ಸತ್ಯ, ಫಲವೀಯದದು ~ ಪರಮಾತ್ಮನೆ ||೪೨೫||

ಮುಕ್ತಕಗಳು - ೮೨

ಉಚಿತದಲಿ ದೊರಕಿದರೆ ಕೆಲವೊಂದು ನಮಗೀಗ

ಖಚಿತ ತಿಳಿ ಬೆಲೆ ಪಾವತಿಸಬೇಕು ಮುಂದೆ |

ರಚನೆಯಾಗಿದೆ ಕರ್ಮಸಿದ್ಧಾಂತ ಜಗಕಾಗಿ

ಉಚಿತ ಸಿಗದೇನಿಲ್ಲಿ ~ ಪರಮಾತ್ಮನೆ ||೪೦೬||


ಸಾಯದಿರಿ ಸಾವು ಸನಿಹಕೆ ಬರುವ ಮುನ್ನವೇ

ಕಾಯುದಿರಿ ಬದುಕನ್ನು ಸಂಭ್ರಮಿಸಿ ನಗಲು |

ನೋಯುವುದೆ ನೊಂದವರ ಕಣ್ಣೊರೆಸಿ ನಗಿಸಲಿಕೆ?

ಮಾಯುವುದು ನಮನೋವು ~ ಪರಮಾತ್ಮನೆ ||೪೦೭||


ಮನುಜನಿಗೆ ಸಿಕ್ಕಿಹುದು ಆಲೋಚನೆಯ ಶಕ್ತಿ

ಇನಿಯಾಗಿ ಇಳೆಯಲ್ಲಿ ಬಾಳಿ ತೋರಿಸಲು |

ಕೊನೆಗೊಳ್ಳೆ ಬದುಕದುವೆ ಕಹಿಗಿಂತ ಕಡೆಯಾಗಿ

ಜನಕನದು ತಪ್ಪೇನು ~ ಪರಮಾತ್ಮನೆ ||೪೦೮||

ಇನಿ = ಸಿಹಿ 


ಮನುಜ ಜನುಮದ ನಮಗೆ ಅವಕಾಶಗಳು ಹಲವು

ಕನಸುಗಳ ಬೆನ್ನಟ್ಟಿ ಸಾಧಿಸುವ ಗೆಲುವು |

ಧನಕನಕ ಕೀರ್ತಿ ಪದವಿಗಳ ಬೆಲೆ ತೃಣದಷ್ಟು

ಮನುಜನೊಲು ಬದುಕದಿರೆ ~ ಪರಮಾತ್ಮನೆ ||೪೦೯||


ಹದವಮಾಡುವುದೆಂತು ಬಿರುಕಬ್ಬಿಣದ ಸರಳ,

ತಿದಿಯೊತ್ತದಿರೆ ಬೆಂಕಿಗೆ ಹೆದರಿ ನಿಂತು? |

ಬೆದರುಬೊಂಬೆಗೆ ಹೆದರಿದರೆ ದೊರಕುವುದೆ ಕಾಳು?

ಹೆದರಿದರೆ ಬದುಕಿಹುದೆ? ~ ಪರಮಾತ್ಮನೆ ||೪೧೦||

ಮುಕ್ತಕಗಳು - ೮೧

ಹೊಸದಿನವು ಅನುದಿನವು ಆರಂಭ ಪ್ರತಿದಿನವು

ಹೊಸತು ಅರುಣೋದಯದ ಹೊಸಕಿರಣ ಮೂಡಿ |

ಪಸರಿಸುವ ಬೆಳಕಲ್ಲಿ ಮಾಡು ಹೊಸ ಆರಂಭ

ಹೆಸರ ಜಪಿಸುತ ಅವನ ~ ಪರಮಾತ್ಮನೆ ||೪೦೧||


ದಾನವಿತ್ತೆಯೊ ಸಾಲವನು ತೀರಿಸಿದೆಯೊ ನೀ

ಕಾಣದಾ ವಿಧಿಯ ಲೆಕ್ಕವ ನೀನು ಅರಿಯೆ |

ಜೇನುಗಳು ಪಡೆಯವವೆ ಕೂಡಿಹಾಕಿದುದೆಲ್ಲ

ವೈನಾಗಿ ದುಡಿದರೂ ~ ಪರಮಾತ್ಮನೆ ||೪೦೨||


ಸೊಕ್ಕು ತೊರೆಯಲೆ ಇಲ್ಲ ಅರಿವು ಮೂಡಲೆ ಇಲ್ಲ

ಉಕ್ಕಿ ಬರುತಿಹ ಅಹಮಿಕೆಯ ತಡೆಯಲಿಲ್ಲ |

ಸಿಕ್ಕುವನು ವಿಂಧ್ಯವನೆ ಮಣಿಸಿದವನಂತೊಬ್ಬ

ಪಕ್ಕೆಯಲಿ ತಿವಿದಂತೆ ~ ಪರಮಾತ್ಮನೆ ||೪೦೩||


ಮರಳ ಮೇಗಡೆ ಬರೆದ ಅಕ್ಷರವು ಶಾಶ್ವತವೆ

ಶರಧಿಯಲೆಗಳ ಆಟ ದಡ ಮುಟ್ಟುವನಕ |

ಮರೆಯಾಗು ಮೊದಲು ನಿನ ಹೆಸರು ಕೆತ್ತಿದಮೇಲೆ

ಪುರಜನರ ಎದೆಮೇಲೆ ~ ಪರಮಾತ್ಮನೆ ||೪೦೪||


ಕರುಣೆಯಲಿ ನೆರಳಿತ್ತು ಕಾಪಾಡು ನೊಂದವರ

ಸರಿತಪ್ಪುಗಳ ಚಿಂತೆ ನಂತರದ ಕೆಲಸ |

ಕರುಣೆಯೇ ದೊಡ್ಡದದು ನ್ಯಾಯ ಧರ್ಮಕ್ಕಿಂತ

ಎರೆಕವೇ ನಿಜಧರ್ಮ ~ ಪರಮಾತ್ಮನೆ ||೪೦೫||

ಎರೆಕ = ಕರುಣೆ

Saturday, December 17, 2022

ಮುಕ್ತಕಗಳು - ೮೦

ಫಲಕೊಡದ ಮರವು ಸಹ ಜನಕೆ ನೆರಳಾಗುವುದು

ಗುಲಗಂಜಿ ವಿಷಬೀಜ ತೂಗೊ ಬೊಟ್ಟಾಯ್ತು |

ಕೆಲ ಕುಂದುಕೊರತೆಯಿರೆ ಹಿಂದೆ ಕೂರಲುಬೇಡ

ಕೆಲಸಕ್ಕೆ  ನಿಲ್ಲು ನೀ ~ ಪರಮಾತ್ಮನೆ ||೩೯೬||


ಸಂಪತ್ತು ಅಮಲಂತೆ ಇಳಿಯದದು ಬಹುಬೇಗ

ಜೊಂಪು ತರುವುದು ಅರಿವಿನಾ ಸೂಕ್ಷ್ಮ ಗುಣಕೆ |

ಸಂಪು ಹೂಡುವುದು ಕಿವಿ ಹಿತವಚನ ಕಡೆಗಣಿಸಿ

ಗುಂಪು ತೊರೆಯುವ ಧನಿಕ ~ ಪರಮಾತ್ಮನೆ ||೩೯೭||


ಎಲ್ಲರಿಗೂ ಒಲಿಯದದು ಅಧ್ಯಾತ್ಮ ಜ್ಞಾನವದು

ಕಲ್ಲೆಸದ ಕೊಳದಲ್ಲಿ ತಿಳಿಮೂಡಬೇಕು |

ಬಲ್ಲಿದರ ಸಂಗದಲಿ ಬೆಳಕ ಕಾಣಲುಬೇಕು

ಕಲ್ಲು ಕೊನರುವುದಾಗ ~ ಪರಮಾತ್ಮನೆ ||೩೯೮||


ಆಸೆಗಳು ಆಳಿದರೆ ನಮ್ಮನ್ನು ತಲೆಯೇರಿ

ಗಾಸಿಯಾಗ್ವುದು ಬದುಕು ನೆಲೆಯಿಲ್ಲದಂತೆ |

ಹಾಸಿಗೆಯ ಮೀರದೊಲು ಕಾಲುಗಳ ಚಾಚಿದರೆ

ಆಸೆಗಳು ಕಾಲಿನಡಿ ~ ಪರಮಾತ್ಮನೆ ||೩೯೯||


ಊನವಿರೆ ದೇಹದಲಿ ಅರೆಹೊಟ್ಟೆ ಉಂಡಂತೆ

ಊನವಿರೆ ನಡತೆಯಲಿ ಏನುಹೇ ಳುವುದು?

ಬಾನಿಯಲಿ ತುಂಬಿರಲು ಹೊಗೆಯಾಡೊ ಸಾಂಬಾರು 

ಬೋನಹಳ ಸಿದಹಾಗೆ ~ ಪರಮಾತ್ಮನೆ ||೪೦೦||

ಬಾನಿ = ದೊಡ್ಡ ಪಾತ್ರೆ, ಬೋನ = ಅನ್ನ

ಮುಕ್ತಕಗಳು - ೭೯

ಒಮ್ಮೆ ಮಾಡಿದ ತಪ್ಪ ಮತ್ತೊಮ್ಮೆ ಮಾಡದಿರು

ಸುಮ್ಮನೆಯೆ ಶ್ರಮ ಹಾಳು ಎಲ್ಲವೂ ಹಾಳು |

ಕಮ್ಮು ಹಿಡಿದರೆ ಒಮ್ಮೆ ಬಿಡದಲ್ಲ ಶ್ವಾನವದು

ಹಮ್ಮು ಬಿಡು ಅರಿತು ನಡೆ ~ ಪರಮಾತ್ಮನೆ ||೩೯೧||

ಕಮ್ಮು = ವಾಸನೆ, ಹಮ್ಮು = ಗರ್ವ


ಬಸಿರ ಆಸರೆ ಕೊಟ್ಟು ಬುವಿಗಿಳಿಸಿದಳು ಜನನಿ

ಉಸಿರ ಸಾಲವ ಕೊಟ್ಟು ಬದುಕಿತ್ತಳವನಿ |

ಬಸಿರ ಆಸರೆ ಉಸಿರ ಸಾಲಕ್ಕೆ ಪ್ರತಿಯಾಗಿ

ಮಸಿಯ ಬಳಿಯಲು ಬೇಡ ~ ಪರಮಾತ್ಮನೆ ||೩೯೨||


ಸಹಿಸೆ ಉಳಿಪೆಟ್ಟುಗಳ ಶಿಲೆ ಮೂರ್ತಿಯಾಗುವುದು

ಸಹಿಸದಿರೆ ಕಾಲಡಿಯ ದಾರಿಗಲ್ಲಾಯ್ತು |

ಸಹಿಸಿಕೋ ಕಷ್ಟಗಳ ದೃಢಮನದ ಅಂಕೆಯಲಿ

ಕಹಿ ಕಳೆದು ಸಿಹಿ ಬಹುದು ~ ಪರಮಾತ್ಮನೆ ||೩೯೩||


ಉಸಿರು ನಿಂತರೆ ಏನು ಹೆಸರು ನಿಂತರೆ ಸಾಕು

ಹಸಿರಾಗಿ ಉಳಿಯುವುದು ನೆನಪು ಮಾಸದೊಲು |

ಕಸಿವ ರೋಧನ ಕನಕಗಳನೆಲ್ಲ ಉಳಿದಿರುವ

ಹೆಸರೊಂದೆ ಶಾಶ್ವತವು ~ ಪರಮಾತ್ಮನೆ ||೩೯೪||


ಹುಟ್ಟುತಲೆ ಅತ್ತಾಗ ನಕ್ಕವರು ಬಂಧುಗಳು

ಕೆಟ್ಟು ಅತ್ತಾಗ ನಕ್ಕವರು ಬಂಧುಗಳೆ? |

ಮೆಟ್ಟಿ ಭೇದಗಳ ಕೈಜೋಡಿಸಿರೆ ಬಂಧುಗಳು

ಚಟ್ಟಕ್ಕೆ ಹೆಗಲೀಯೆ ~ ಪರಮಾತ್ಮನೆ ||೩೯೫||

ಮುಕ್ತಕಗಳು - ೭೮

ದುಶ್ಚಟವು ಬೆಳೆಯಲಿಕೆ ಕಾರಣವು ನೂರಿರಲಿ

ನಿಶ್ಚಯವ ಮಾಡಬೇಕಿದೆ ಅದನು ತೊರೆಯೆ |

ಪಶ್ಚಾದ್ವಿವೇಕಕೆಲ್ಲಿದೆ ಸಮಯ ಸರಿಪಡಿಸೆ

ಪಶ್ಚಿಮದ ರವಿ ಹೊರಟ ~ ಪರಮಾತ್ಮನೆ ||೩೮೬||

ಪಶ್ಚಾದ್ವಿವೇಕ = ಕೆಟ್ಟ ಮೇಲೆ ಬಂದ ಬುದ್ಧಿ 


ಕ್ಷಮಿಸಬೇಕಿದೆ ನಮ್ಮ ಎದೆಭಾರ ಹೋಗಿಸಲು

ಕ್ಷಮಿಸಬೇಕಿದೆ ಸುಡುವ ಬೆಂಕಿಯಾರಿಸಲು |

ಕ್ಷಮಿಸುತ್ತ ಉಳಿಸಬೇಕಿಹುದು ಸಂಬಂಧಗಳ

ಕ್ಷಮಿಸಿಬಿಡು ತಡವೇಕೆ ~ ಪರಮಾತ್ಮನೆ || ೩೮೭||


ಬಯಸದಿರು ಪದವಿಯನು ಯೋಗ್ಯತೆಗೆ ಮೀರಿದುದ

ಬಯಸದೇ ಬಂದಿರಲು ಮನವಿಟ್ಟು ಶ್ರಮಿಸು |

ಬಯಸಿದರೆ ಬಯಸು ಭಗವದನುಗ್ರಹವ ಮಾತ್ರ

ಬಯಸುತಿರು ಜನರೊಳಿತ ~ ಪರಮಾತ್ಮನೆ ||೩೮೮||


ಧರ್ಮವೆಂದರೆ ಪೂಜಿಸುವ ಪದ್ಧತಿಯು ಅಲ್ಲ

ಕರ್ತವ್ಯವದು ನಿನ್ನ ಪಾತ್ರಕನುಸಾರ |

ಧರ್ಮ ಮಾತೆಗೆ ಬೇರೆ ಪಿತೃವಿಗೇ ಬೇರೆಯಿರೆ

ಮರ್ಮವನರಿತು ಬಾಳು ~ ಪರಮಾತ್ಮನೆ ||೩೮೯||


ಮಕರಂದ ಹೂವಿನದು ಚಿಟ್ಟೆ ದುಂಬಿಯ ಪಾಲು

ಪಕಳೆಗಳು ಕಣ್ಮನಗಳನು ಮುದಗೊಳಿಸಲು |

ಸಕಲ ಗಂಧಗಳು ಆಸ್ವಾದಕರ ಸ್ವತ್ತಾಯ್ತು 

ವಿಕಲವಾಯಿತೆ ಪುಷ್ಪ? ~ ಪರಮಾತ್ಮನೆ ||೩೯೦||

ಮುಕ್ತಕಗಳು - ೭೭

ಬುವಿಯಲ್ಲಿ ಜೀವನವು ಗೋಜಲಿನ ಗೂಡಂತೆ

ಕಿವಿಮಾತ ಪಾಲಿಸಿರೆ ಸರಳ ಸೋಪಾನ |

ಅವಿರತ ಶ್ರಮ ಸಹನೆ ಅನಸೂಯೆ ಕ್ಷಮೆಗಳಿರೆ

ಸವಿಗೊಳಿಸುವವು ಬದುಕ ~ ಪರಮಾತ್ಮನೆ ||೩೮೧||

ಅನಸೂಯೆ = ಅಸೂಯೆ ಇಲ್ಲದಿರುವುದು


ಬಣ್ಣಗಳು ಏಸೊಂದು ನಮ್ಮ ಭೂಲೋಕದಲಿ

ಕಣ್ಣುಗಳು ಸವಿಯುತಿವೆ ರಸಪಾಕ ನಿತ್ಯ |

ಉಣ್ಣಲೇನಿದೆ ಕೊರೆ ಪ್ರಕೃತಿಯೇ ಅಟ್ಟುತಿರೆ

ಬಣ್ಣಿಸಲು ಸೋತ ಸನೆ ~ ಪರಮಾತ್ಮನೆ ||೩೮೨||

ಅಟ್ಟು = ಅಡುಗೆ ಮಾಡು, ಸನೆ = ನಾಲಿಗೆ


ಸಂತಸವ ಹಂಚಿದರೆ ಸಂತಸವು ಹೆಚ್ಚುವುದು

ಕಂತೆ ಧನ ಹೆಚ್ಚಿಸುವ ಸಂತಸವು ಕ್ಷಣಿಕ |

ಅಂತರಾತ್ಮನ ಅರಿಯೆ ಶಾಶ್ವತದ ಸಂತಸವು

ಚಿಂತೆಯನು ಮರೆಸುವುದು ~ ಪರಮಾತ್ಮನೆ ||೩೮೩||


ದನಿಯಿರದ ಜೀವಿಗಳ ಕಾಡಾಗುತಿದೆ ನಷ್ಟ

ಮನುಜನಾಕ್ರಮಣದಿಂ ಬದುಕುವುದೆ ಕಷ್ಟ |

ವನಜೀವಿ ತಿರುಗಿಬೀಳುವ ಮುನ್ನ ಎಚ್ಚೆತ್ತು

ದನಿಯಾಗು, ಸಹಬದುಕು ~ ಪರಮಾತ್ಮನೆ ||೩೮೪||


ಊರ ದೊರೆಯಾದರೂ ಅಮ್ಮನಿಗೆ ಮಗ ತಾನು

ಕಾರುಬಾರಿರಲೇನು ಗುರುವಿನಾ ಶಿಷ್ಯ |

ಚಾರುಮತಿಯಾದರೂ ಪತಿಯ ನೆರಳಾಗುವಳು

ಜೋರು ಪಾತ್ರದ ಮಹಿಮೆ ~ ಪರಮಾತ್ಮನೆ ||೩೮೫||

ಚಾರುಮತಿ = ಜ್ಞಾನವಂತೆ

ಮುಕ್ತಕಗಳು - ೭೬

ಸಾಗರವು ಇರುವರೆಗೆ ಅಲೆಗಳವು ನಿಲ್ಲುವವೆ

ಭೋಗದಾಸೆಯು ನಿಲದು ಜೀವವಿರುವರೆಗೆ |

ಜೋಗಿಯಾಗುವುದೇಕೆ ಆಸೆಗಳ ಅದುಮಿಡಲು

ಯೋಗ ಮನಸಿಗೆ ಕಲಿಸು ~ ಪರಮಾತ್ಮನೆ |೩೭೬||


ಬೇಯಿಸಲು ರಂಜಿಸಲು ಶಯನದಲು ಯಂತ್ರಗಳು!

ಆಯಾಸ ದೇಹಕ್ಕೆ ಲವಲೇಶವಿಲ್ಲ |

ಕಾಯಕ್ಕೆ ಅತಿಸುಖದ ಸೇವೆಯಾ ಅತಿಶಯವು

ನೋಯುತಿದೆ ಮನಸೊಂದೆ ~ ಪರಮಾತ್ಮನೆ ||೩೭೭||


ಧನವನ್ನು ಪಡೆವಾಸೆ ನೆಮ್ಮದಿಯ ಜೀವನಕೆ

ಧನವಧಿಕ ದೊರೆತವಗೆ ನೆಮ್ಮದಿಯು ಎಲ್ಲಿ? |

ಧನವು ತರುವುದು ಚಿಂತೆ ಹಲವಾರು, ನೆಮ್ಮದಿಗೆ

ಮನದೆ ತೃ ಪ್ತಿಯುಬೇಕು ~ ಪರಮಾತ್ಮನೆ ||೩೭೮||


ಕೊಡಿ ಕೊಡದೆ ಇರಿ ಮಕ್ಕಳಿಗೆ ಧನಕನಕಗಳನು

ಕೊಡಬೇಕು ಮಾನವತ್ವದ ಪಾಠವನ್ನು |

ನೆಡಬೇಕು ದೇಶಭಾಷೆಯ ಭಕ್ತಿ ಬೀಜವನು

ಸುಡಬೇಕು ವೈಷಮ್ಯ ~ ಪರಮಾತ್ಮನೆ ||೩೭೯||


ಕರಿನೆರಳ ಛಾಯೆಯಲಿ ಮುಳುಗಿಹುದು ಜಗವಿಂದು

ಜರಿದಿಹೆವು ಅವರಿವರ ಕಾರಣವು ಸಿಗದೆ |

ಕಿರಿದಾದ ಮನಗಳಲಿ ಮೂಡಬೇಕಿದೆ ಬೆಳಕು

ಹರಿ ನೀನೆ ಕರುಣಿಸೋ ಪರಮಾತ್ಮನೆ ||೩೮೦||


ಮುಕ್ತಕಗಳು - ೭೫

ಅಲ್ಪನಿಗೆ ಐಶ್ವರ್ಯ ಬಂದಾಗ ಉಳಿಯದದು

ಸ್ವಲ್ಪ ಕಾಲವೆ ಮಾತ್ರ ಇಂದ್ರವೈ ಭೋಗ |

ಶಿಲ್ಪಕ್ಕೆ ಸಿಂಗಾರ ಜೀವ ತುಂಬದು ಅದಕೆ

ಕಲ್ಪನೆಯ ಕೂಸಹುದು ~ ಪರಮಾತ್ಮನೆ ||೩೭೧||

ಅಲ್ಪ = ದುರಭಿಮಾನಿ

 

ಹೆಸರು ಮಾಡಲು ತಂತ್ರಗಾರಿಕೆಗೆ ಶರಣೇಕೆ?

ಬಸಿ ಬೆವರ ನಿನ್ನ ಕಾರ್ಯಕ್ಷೇತ್ರದಲ್ಲಿ |

ಪಸರಿಸುತ ನಿನ ಕಾರ್ಯ ಜನರೆದೆಗೆ ಮುಟ್ಟಿದೊಡೆ

ಹಸಿರಾಗುವುದು ಹೆಸರು ~ ಪರಮಾತ್ಮನೆ ||೩೭೨||


ಗಗನವನು ನೋಡಲಿಕೆ ನೂಕಾಟ ಏತಕ್ಕೆ?

ಜಗಳವದು ಏಕೆ ಸಾಗರದಿ ಈಜಲಿಕೆ? |

ಜಗಪತಿಯ ಮಂದಿರದಿ ತಳ್ಳಾಟ ಬೇಕಿದೆಯೆ

ಭಗವಂತನಾ ಕೃಪೆಗೆ? ~ ಪರಮಾತ್ಮನೆ ||೩೭೩||


ಬೆಳಕು ಇರುವೆಡೆಯಲ್ಲೆ ಕರಿನೆರಳು ಮೂಡುವುದು

ಕಲಹ ಪತಿಪತ್ನಿಯರ ಸನಿಹ ಮಾಡುವುದು |

ಬೆಳೆಗಿಂತ ದಿವಿನಾಗಿ ಕಳೆಯು ತಲೆಯೆತ್ತುವುದು

ಇಳೆಯ ವೈರುಧ್ಯಗಳು ~ ಪರಮಾತ್ಮನೆ ||೩೭೪||


ಕೈಯಲ್ಲಿ ಜಪಮಾಲೆ ಮನದಲ್ಲಿ ಮಧುಬಾಲೆ

ಬಾಯಲ್ಲಿ ಮಂತ್ರಗಳು ತಲೆಯಲ್ಲಿ ತಂತ್ರ |

ನಾಯಕರು ಹೀರಿಹರು ಪ್ರಜೆಗಳಾ ರಕುತವನು

ಲಾಯಕ್ಕೆ ಬದುಕಲಿಕೆ? ~ ಪರಮಾತ್ಮನೆ ||೩೭೫||

ಮುಕ್ತಕಗಳು - ೭೪

ನುಡಿಯಲ್ಲಿ ವೇದಾಂತಸಾರದಾ ಪಲಕುಗಳು

ನಡೆಯಲ್ಲಿ ತೋರಿಕೆಯ ಹುಸಿಯ ಥಳಕುಗಳು |

ಬಡಿವಾರ ಬದುಕಿನಲಿ ಏಕಿಂಥ ಹುಳುಕುಗಳು?

ಸುಡುಗಾಡು ಸನಿಹವಿದೆ ~ ಪರಮಾತ್ಮನೆ ||೩೬೬||


ಕನಸಿರಲು ಸಾಧಿಸಲು ಕಾಣುವುದು ಕೃತಿಯಲ್ಲಿ

ಅನವರತ ಗುರಿಯಕಡೆ ಸಾಗುವುದು ಹೆಜ್ಜೆ |

ಕೊನೆಯ ಮುಟ್ಟುವ ಛಲವು ಕಾಣುವುದು ಕಂಗಳಲಿ

ಸನಿಹ ಸುಳಿಯದು ಜಡತೆ ~ ಪರಮಾತ್ಮನೆ ||೩೬೭||


ಸಂಕಲ್ಪ ಬಲವು ತಾನ್ ಎಲ್ಲ ಬಲಗಳ ರಾಜ‌

ಸಂಕಟದ ಸಮಯದಲಿ ಸರಿ ರಾಮಬಾಣ |

ಲಂಕೆಗೇ ಹಾರಿದ್ದ ಹನುಮನಾ ಬಲದಂತೆ

ಶಂಕೆಯೇ ಇರದ ಬಲ ~ ಪರಮಾತ್ಮನೆ ||೩೬೮||


ಮಸಣಕ್ಕೆ ಸನಿಹದಲಿ ತಲುಪಿ ನಿಂತಿದ್ದರೂ

ಹೊಸದೊಂದು ಮರದ ಸಸಿ ನೆಟ್ಟು ಮರೆಯಾಗು

ಹಸಿ ತಂಪು ನಿನಗಿತ್ತ ಮರವನ್ನು ನೆಟ್ಟವರ

ಹೆಸರ ಬಲ್ಲೆಯ ನೀನು ~ ಪರಮಾತ್ಮನೆ ||೩೬೯||


ಸಾಗರದ ನೀರಿನಲಿ ಬೆರೆತಿರುವ ಲವಣದೊಲು 

ಬೇಗುದಿಯು ಮನದಲ್ಲಿ ಬೆರೆತು ನಿಂತಿಹುದು |

ಪೋಗಾಡು ಲವಣವನು ನೀರನ್ನು ಸಂಸ್ಕರಿಸಿ

ರಾಗ ತೊಳೆ ಮನದಿಂದ ~ ಪರಮಾತ್ಮನೆ ||೩೭೦||

ಪೋಗಾಡು = ಹೋಗಲಾಡಿಸು

ಮುಕ್ತಕಗಳು - ೭೩

ಸಾಧನೆಯು ಸಫಲವದು ಜನಕೆ ಉಪಯುಕ್ತವಿರೆ

ಬೋಧಿಸದ ಜ್ಞಾನಿಯಿರೆ  ಶಿಷ್ಯರಿರಲೇಕೆ |

ಗೋಧಿಯನು ಬೆಳದೇನು ಫಲ ರೊಟ್ಟಿ ಉಣ್ಣದಿರೆ

ಹಾದಿ ಹಿಡಿ ಜನಪರದ ~ ಪರಮಾತ್ಮನೆ ||೩೬೧||


ವಿಧಿಬರಹ ಕಾಕಲಿಪಿ ಅರಿಯುವುದು ಬಲುಕಷ್ಟ

ಬದುಕು ಸವೆಸುವುದೇಕೆ ಅದನು ಓದಲಿಕೆ |

ಬದಿಗೆ ಸರಿಸುತ ಅದನು ಹಿಡಿ ಬೇಗ ಲೇಖನಿಯ

ಒದಗಿಸಲು ಹೊಸಬರಹ ~ ಪರಮಾತ್ಮನೆ ||೩೬೨||


ಪತಿ ಪತ್ನಿ ಸಂಬಂಧ ಉತ್ಕೃಷ್ಟ ಇಳೆಯಲ್ಲಿ

ಜೊತೆನಡೆಸಿ ಅಪರಿಚಿತ ಮನಗಳನು ಬೆಸೆದು |

ಅತಿ ಕಠಿಣ ಒರೆತಕ್ಕೆ ಒಡ್ಡಿಕೊ ಳ್ಳುತ ಗೆದ್ದು

ಚಿತೆಯಲ್ಲಿ ಭಸ್ಮವದು ~ ಪರಮಾತ್ಮನೆ ||೩೬೩||


ಹಸಿದಿರಲು ಹೊಟ್ಟೆ ಅನ್ನದ ಚಿಂತೆಯೊಂದಿಹುದು

ಹಸಿವ ನೀ ಗಿಸಲು ನೂರೆಂಟು ಚಿಂ ತೆಗಳು |

ಹಸಿವಿರಲಿ ತೀರದೊಲು ಜ್ಞಾನದಾ ಪಥದಲ್ಲಿ

ಹುಸಿಯ ಬೇ ಡಿಕೆಯಲ್ಲ ಪರಮಾತ್ಮನೆ ||೩೬೪||


ನೋವಿನಾ ನೆನಪುಗಳ ಭೂತವದು ಬೆಂಬಿಡದು

ನಾವು ಹೊರಗಟ್ಟದಿರೆ ಬಲವಂತದಿಂದ |

ಶಾವಿಗೆಯ ಪಾಯಸದಿ ಕೂದಲದು ಬೇಕೇನು

ಸೋವಿಗೂ ಬೇಡವದು ~ ಪರಮಾತ್ಮನೆ ||೩೬೫||

ಸೋವಿ = ಅಗ್ಗ

ಮುಕ್ತಕಗಳು - ೭೨

ಅವಕಾಶ ತಪ್ಪಿದರೆ ಹಲುಬುವುದು ಏತಕ್ಕೆ

ಶಿವಕೊಡುವ ಸೂಚನೆಯೊ ಬೇರೆಯದೆ ವರವ? |

ಅವನ ಲೀಲೆಯನು ಬಲ್ಲವರಾರು ಅವನಿಯಲಿ

ತವಕ ಬಿಡು ಸಮಯ ಕೊಡು ~ ಪರಮಾತ್ಮನೆ ||೩೫೬||


ಅರ್ಥ ಕಾಮಗಳು ಅತಿಯಾಗಿರಲು ಕುರುಡಾಗಿ

ಧರ್ಮ ಮೋ ಕ್ಷಗಳ ಮಾರ್ಗವು ಕಾಣಸಿಗದು |

ವ್ಯರ್ಥವೇ ನರಜನ್ಮ ಗುರಿತೊರೆದ ಬಾಣದೊಲು

ಮರ್ತ್ಯಲೋಕದ ಮಹಿಮೆ ~ ಪರಮಾತ್ಮನೆ ||೩೫೭||


ಬರೆಯುವುದೆ ಕಾಯಕವು ಓದುವುದೆ ಪ್ರಾರ್ಥನೆಯು

ಒರೆಗೆ ಹಚ್ಚಲುಬೇಕು ಬರೆವ ಮಾತೊಮ್ಮೆ

ಒರೆಯಿಂದೆಳೆದು ಲೇಖನಿಯ ಸತ್ಯ ಮೆರೆಯುವೊಲು

ಬರವಣಿಗೆ ಮೂಡಿಸುವ ~ ಪರಮಾತ್ಮನೆ ||೩೫೮||


ಸತ್ಯವೇ ಉಳಿಯುವುದು ಸಮಯದಾಚೆಯವರೆಗೆ

ಮಿಥ್ಯವೇ ಅಳಿಯುವುದು ಕೆಲಕಾಲ ಬೆಳಗಿ |

ನಿತ್ಯವೂ ಸತ್ಯಮಾ ರ್ಗದಲಿ ನಡೆ, ಮಾತಿನಲಿ

ತಥ್ಯವಿರೆ ಆನಂದ ~ ಪರಮಾತ್ಮನೆ ||೩೫೯||

ತಥ್ಯ = ತಿರುಳು


ದೊರೆಯುವುದೆ ಎಲ್ಲರಿಗೆ ಎಲ್ಲವೂ ಜಗದಲ್ಲಿ?

ದೊರಕುವುದು ಎಲ್ಲರಿಗೆ ಮಾತ್ರವೇ ಕೆಲವು |

ಸುರರಿಗೂ ಅನಿಸುವುದು ಇನ್ನಷ್ಟು ಬೇಕೆಂದು

ಕೊರಗದಿರು ಇಲ್ಲದಕೆ ~ ಪರಮಾತ್ಮನೆ ||೩೬೦||

ಮುಕ್ತಕಗಳು - ೭೧

ಅತಿಯಾಸೆ ದುಃಖಕ್ಕೆ ಬಲವಾದ ಕಾರಣವು

ಮಿತಿಯಾಸೆ ಜೀವನವ ನಡೆಸೊ ಇಂಧನವು |

ಜೊತೆಯಾಗಬೇಕು ಕರ್ತವ್ಯದಾ ಕಾಯಕವು

ಇತಿಮಿತಿಯ ಬದುಕಿರಲಿ ~ ಪರಮಾತ್ಮನೆ ||೩೫೧||


ಮನಸಿನಲಿ ಚೆಲುವಿರಲು ತೋರುವುದು ನುಡಿಗಳಲಿ 

ಮನಗಳನು ಅರಳಿಸುತ ಹರುಷ ಹಂಚುವುದು |

ಜಿನುಗುವುದು ಜೇನು ಮಾತಿನಲಿ ಒಡನಾಟದಲಿ

ತೊನೆಯುವವು ಹೃದಯಗಳು ~ ಪರಮಾತ್ಮನೆ ||೩೫೨||


ಧನವು ಎಷ್ಟಿರಲೇನು ನಿಧನ ತಪ್ಪುವುದೇನು

ಗುಣ ಚರ್ಚೆಯಾಗುವುದು ಮರಣದಾ ಸಮಯ |

ಹಣವ ಹೊಗಳುವರೇನು ಗುಣವ ಪಕ್ಕದಲಿಟ್ಟು

ಗುಣಕೆ ಹಣ ಹೋಲಿಕೆಯೆ ~ ಪರಮಾತ್ಮನೆ ||೩೫೩||


ಬಂಧುಗಳು ನಾವೆಲ್ಲ ಅರಿಯಬೇಕಿದೆ ನಿಜವ

ಚಂದದಲಿ ಸೇರಿಹೆವು ಜನುಮವನು ಪಡೆದು

ಒಂದೆ ಜಲ ವಾಯು ಬುವಿ ಆಗಸವು ರವಿ ಶಶಿಯು

ತಂದೆಯೊಬ್ಬನೆ ನಮಗೆ ~ ಪರಮಾತ್ಮನೆ ||೩೫೪||


ಒಂದು ಹಣತೆಯು ಹಚ್ಚಿದರೆ ನೂರು ಹಣತೆಗಳ

ಒಂದು ನಗು ಬೆಳಗುವುದು ನೂರು ಮನಗಳನು |

ಕುಂದದೆಯೆ ಬದುಕಿನಲಿ ಚೆಂದ ನಗುವನು ಹಂಚು

ಅಂದವಿರು ವುದುಬದುಕು ~ ಪರಮಾತ್ಮನೆ ||೩೫೫||

Monday, September 26, 2022

ಮುಕ್ತಕಗಳು - ೭೦

ಎಲೆಯಲ್ಲಿ ಕೊಳೆಯಿರಲು ಊಟ ಮಾಡುವುದೆಂತು

ಕೊಳೆಯನ್ನು ತೊಳೆದು ಶುಭ್ರಗೊಳಿಸಲು ಬೇಕು  |

ಮಲಿನತೆಯು  ಮನದಲ್ಲಿ ಮನೆಮಾಡಿ ನಗುತಿರಲು

ಮುಳುವಾಯ್ತು ಸವಿನುಡಿಗೆ ~ ಪರಮಾತ್ಮನೆ||೩೪೬||


ಸುಖವಿಲ್ಲ ನಗನಾಣ್ಯ ದಿರಿಸು ಅರಮನೆಗಳಲಿ

ಸುಖವಿಹುದು ನಮ್ಮದೇ ಸ್ವಂತ ಮನಗಳಲಿ |

ಸಕಲ ಸಂತೋಷಗಳ ಆಕರವು ಎದೆಯಲಿರೆ

ಮಕುಟ ಬೇಕೇಕೆ ದೊರೆ ~ ಪರಮಾತ್ಮನೆ ||೩೪೭||


ಮಕುಟವಿರೆ ಚಿನ್ನದ್ದು ತಲೆಗಾಯ್ತು ಮಣಭಾರ

ಸಕಲ ಅಧಿಕಾರವಿರೆ ಕರ್ತವ್ಯಭಾರ |

ಸಕಲ ಐಶ್ವರ್ಯವಿರೆ ಭಯಭಾರ ಮನದಲ್ಲಿ

ಯುಕುತಿಯಲಿ ತೂಗಿರುವೆ ಪರಮಾತ್ಮನೆ ||೩೪೮||


ಸುಖ ಪಡಲು ಪರಮಾತ್ಮ ಜನುಮವನು ಕೊಟ್ಟಿರುವ

ನಖಶಿಖಾಂತದ ದೇಹ ಬುದ್ಧಿ ಮನಗಳನು |

ಸುಖ ಪಡಲು ದೇವರಲಿ ವಸ್ತುಗಳ ಬೇಡಿಹೆವು

ಪ್ರಖರ ಮಂದಮತಿಗಳು ~ ಪರಮಾತ್ಮನೆ ||೩೪೯||


ಬುದ್ಧಿಜೀವಿಗಳೆಂದು ಗದ್ದಲವ ಮಾಡಿಹರು

ಸದ್ದು ಮಾಡುತಿವೆ ಅರೆಬೆಂದ ಮಡಕೆಗಳು |

ಪೆದ್ದ ದೊರೆ ಕುರುಡನೊಲು ಆನೆಯನು ಮುಟ್ಟಿದವ

ಉದ್ಧರಿಸು ಇಂಥವರ ಪರಮಾತ್ಮನೆ ||೩೫೦||

Saturday, September 17, 2022

ಮುಕ್ತಕಗಳು - ೬೯

ಹೊಸಬೆಳಕ ಚೆಲ್ಲುವನು ರವಿ ಜಗದ ತುಂಬೆಲ್ಲ

ಫಸಲು ಮೇಟಿಯು ಬೆವರ ಹರಿಸಿದೆಡೆ ಮಾತ್ರ |

ಪಸರಿಸುವ ದೇವ ಕೃಪೆಯನ್ನು ಮಕ್ಕಳಿಗೆಲ್ಲ

ಬಸಿ ಬೆವರ ಪಡೆ ವರವ ~ ಪರಮಾತ್ಮನೆ ||೩೪೧||


ಕಾಲಕ್ರಮೇಣ ಕೆಲ ಜನರ ಮರೆತರೆ ನಾವು

ಕಾಲವನ್ನೇ ಮರೆಸೊ ಸ್ನೇಹಗಳು ಕೆಲವು |

ಕೋಲವಿದು, ಜನುಮಜನುಮಗಳ ಅನುಬಂಧವಿದು

ಬೇಲಿ ಕಟ್ಟುತ ಪೊರೆಯೊ ~ ಪರಮಾತ್ಮನೆ ||೩೪೨||

ಕೋಲ = ಸೊಗಸು


ಮೂರು ದಿನಗಳ ಸಂತೆ ಮುಗಿದುಹೋಗುವ ಮುನ್ನ

ಕೋರು ಸರಕೆಲ್ಲವೂ ಬಿಕರಿಯಾಗಲಿಕೆ |

ಸೇರುವುದು ಹೊಸ ಸರಕು ಮುಂದಿನಾ ಸಂತೆಯಲಿ

ಮಾರಾಟ ಬಲುಕಷ್ಟ ~ ಪರಮಾತ್ಮನೆ ||೩೪೩||


ಸಾವೆಂದು ಬರುವುದೋ ಹೇಗೆ ಕರೆದೊಯ್ವುದೋ

ನಾವಿಂದು ಅರಿಯುವಾ ಸಾಧನವು ಇಲ್ಲ |

ಜೀವನದ ಕೊನೆವರೆಗೆ ಬದುಕುವಾ ರೀತಿಯನು

ನಾವು ನಿರ್ಧರಿಸೋಣ ~ ಪರಮಾತ್ಮನೆ ||೩೪೪||


ಕೃತಿಚೋರನಿವ ಭಾವನೆಗಳನೇ ಕದ್ದಿಹನು

ಅತಿ ಅಧಮನಿವನು ಬರಡಾದ ಮನದವನು |

ಮತಿಗೇಡಿಯಾಗಿಹನು ಹೊಟ್ಟೆ ತುಂಬಿದ ಚೋರ

ಹತಮಾಡು ಸಂತತಿಯ ~ ಪರಮಾತ್ಮನೆ ||೩೪೫||

ಮುಕ್ತಕಗಳು - ೬೮

ಜೀವನದ ಪಂದ್ಯವದು ಎಷ್ಟು ದಿನಗಳ ಆಟ

ಯಾವ ದಿನ ಮುಗಿವುದೋ ಬಲ್ಲವರು ಯಾರು? |

ನಾವು ಗೆದ್ದವರೊ ಸೋತವರೊ ತಿಳಿಸುವರು ಜನ

ಸಾವ ಗೆದ್ದವರಾರು ~ ಪರಮಾತ್ಮನೆ ||೩೩೬||


ಎಳೆಯರಾಗುತಿರುವರು ಸ್ವಾರ್ಥದಾ ಮೂಟೆಗಳು

ತಲೆಗೆ ಹೋಗುತಿದೆ ಮಾತಾಪಿತರ ನಡತೆ |

ಬೆಳೆಯುವಾ ಸಮಯದಲಿ ಸರಿದಾರಿ ಹಿಡಿಯದಿರೆ

ಬೆಳಗುವರು ಹೇಗಿನ್ನು ~ ಪರಮಾತ್ಮನೆ ||೩೩೭||


ಕಲಬೆರೆಕೆ ಪಿಡುಗಿಂದು ಕೊಲ್ಲುತಿದೆ ಮಾನವರ

ಎಲೆಗೆ ಬಿದ್ದರೆ ಸಾಕೆ ಪರಿಶುದ್ಧ ಅನ್ನ |

ತಲೆಗೆ ಬೀಳಲೆಬೇಕು ಪರಿಶುದ್ಧ ಯೋಚನೆಯು

ಕೊಳೆಯ ತುಂಬುವೆಯೇಕೆ ~ ಪರಮಾತ್ಮನೆ ||೩೩೮||


ತಪ್ಪು ಮಾಡಿರುವುದರಿವಿಗೆ ಬಂದ ಕ್ಷಣದಲೇ

ತಪ್ಪೊಪ್ಪಿಗೆಯ ಕೇಳು ಸಂಬಂಧ ಉಳಿಸೆ |

ಕೊಪ್ಪರಿಗೆ ಧನಕೂಡ ಸರಿಪಡಿಸಲಾಗದದ

ತಪ್ಪದೆಲೆ ಕ್ಷಮೆಕೇಳು ~ ಪರಮಾತ್ಮನೆ ||೩೩೯||


ಪರಧನವ ತಿನ್ನುವುದೆ ಪರಮಾರ್ಥ ಎನ್ನುತಲಿ

ಪುರದ ಅಭಿವೃದ್ಧಿಯಲಿ ಕಳ್ಳತನ ಮಾಡೆ |

ಪರಮಾತ್ಮ ಶಿಕ್ಷಿಸುವ ಎಂದು ಕಾಯಲುಬೇಡಿ

ಜರಿದು ಶಾಪವ ಹಾಕಿ ~ ಪರಮಾತ್ಮನೆ ||೩೪೦||

ಮುಕ್ತಕಗಳು - ೬೭

ಸ್ವಾರ್ಥಿಗಳು ನಾವಿಂದು ನೆರೆಹೊರೆಗೆ ನೆರವಿಲ್ಲ

ಕಾರ್ಯಸಾಧನೆಗಾಗಿ ಹಿಡಿಯುವೆವು ಕಾಲು |

ದೂರ್ವಾಸರಾಗುವೆವು ಚಿಕ್ಕ ತೊಂದರೆಯಾಗೆ

ಈರ್ಷೆ ಬಿಂಕಗಳ ತೊರೆ ~ ಪರಮಾತ್ಮನೆ ||೩೩೧||


ಧನವಿರದೆ ಹೋದರೂ ಕಡಪಡೆದು ನಡೆಸುವರು

ಮನವಿರದೆ ಇರಲು ಮಾಡುವುದೆಂತು ಕೆಲಸ? |

ತನುಮನಗಳಣಿಗೊಳಿಸಿ ಮುಂದಾಗು ಕಾಯಕಕೆ

ಧನ ಬೆಲೆಗೆ ದೊರಕುವುದು ~ ಪರಮಾತ್ಮನೆ ||೩೩೨||


ಅರಿವ ಹೆಚ್ಚಿಸಬೇಕು ಪ್ರತಿನಿತ್ಯ ತುಸುತುಸುವೆ

ಮೆರೆಯದಿರು ಎಲ್ಲವನು ಅರಿತವನು ಎಂದು |

ಅರಿತೆಯೆಲ್ಲವನೆಂದು ನಂಬಿದರೆ ನೀ ಹಿಡಿವೆ

ಗಿರಿಯಇಳಿ ಯುವದಾರಿ ~ ಪರಮಾತ್ಮನೆ ||೩೩೩||


ಜನುಮಗಳ ಕೊಂಡಿಗಳು ಪಾಪಗಳು ಪುಣ್ಯಗಳು

ಕೊನೆಯಿಲ್ಲದಂತೆ ಜೊತೆಯಲ್ಲೆ ಬರುತಿಹವು |

ಮನೆಯ ಬಂಧುಗಳಂತೆ ಇರುತ ಸುಖ ದುಃಖಗಳ

ಗೊನೆಯನ್ನು ನೀಡುವವು ~ ಪರಮಾತ್ಮನೆ ||೩೩೪||


ಮತಿಯಲ್ಲಿ ಸದ್ವಿಚಾರಗಳು ಬೆಳೆಯಲಿ ಸದಾ

ಇತಿಮಿತಿಯ ಮಾತುಗಳು ನಸುನಗುತಲಿರಲಿ |

ಕೃತಿಯಿರಲಿ ಎಲ್ಲರೂ ನೋಡಿ ಕಲಿಯುವ ರೀತಿ

ಜೊತೆಯಾಗುವುದು ದೈವ ~ ಪರಮಾತ್ಮನೆ ||೩೩೫||

ಮುಕ್ತಕಗಳು - ೬೬

ಫಲವತ್ತು ಭೂಮಿಯದು ಮನುಜನಾ ಹೃದಯವೇ

ಬೆಳೆಯುವುದು ಸೊಂಪಾಗಿ ಬಿತ್ತು ನೀ ಸುಗುಣ |

ಕಳೆ ಕೀಟಗಳ ಕಾಟವನು ಕೊನೆಗೊಳಿಸು ನಿತ್ಯ

ಕಲಿಗೆ ಊಟದ ಕೊರತೆ ~ ಪರಮಾತ್ಮನೆ ||೩೨೬||


ಸಮಯಕ್ಕೆ ರಜೆಯಿಲ್ಲ ಜಮೆಮಾಡಲಾಗದದ

ವಿಮೆಯ ಮಾಡಿಸಲಾರೆ ದೊರೆತ ಸಮಯಕ್ಕೆ |        

ಗಮನವಿಡಬೇಕು ಚಣಚಣವ ಉಪಯೋಗಿಸಲು

ನಮಗಮೂಲ್ಯಸಿರಿಯದು ~ ಪರಮಾತ್ಮನೆ ||೩೨೭||


ಪರಿಹಾರ ಹುಟ್ಟುವುದು ತೊಂದರೆಯ ಜೊತೆಯಲ್ಲೆ

ಅರಿವ ಬೆಳೆಸಲುಬೇಕು ಪರಿಹಾರ ಹುಡುಕೆ |

ಗಿರಿಶಿಖರ ತಲಪುವಾ ಸೋಪಾನ ಕಟ್ಟಲಿಕೆ

ಗಿರಿಯ ಬಂಡೆಗಳಿಹವು ~ ಪರಮಾತ್ಮನೆ ||೩೨೮||


ಜನನಿಬಿಡ ಪಟ್ಟಣದೆ ಅತ್ತರಿಗೆ ಬೆಲೆಹೆಚ್ಚು

ಬನದ ಕುಸುಮದ ಗಂಧ ಮೂಸುವವರಿಲ್ಲ |

ಜನವ ಮುಟ್ಟುವ ವಸ್ತು ಬೇಡಿಕೆಯಲಿರಲೇನು

ಗುಣವ ಕಡೆಗಣಿಸದಿರು ಪರಮಾತ್ಮನೆ ||೩೨೯||


ಯಾರದೋ ಮೆಚ್ಚುಗೆಗೆ ವಸ್ತುಗಳ ಕೊಳ್ಳುವೆವು

ತೋರಲಿಕೆ ನಮ್ಮ ಸಂಪತ್ತಿನಾ ಘನತೆ  |

ತೀರದಾ ದಾಹವದು ಸುಡುತಿಹುದು ನೆಮ್ಮದಿಯ

ಹೀರು ಆಧ್ಯಾತ್ಮ ಜಲ ~ ಪರಮಾತ್ಮನೆ ||೩೩೦||

Tuesday, September 6, 2022

ಮುಕ್ತಕಗಳು - ೬೫

ದಿನಮಣಿಯೊ ಲರಬೇಕು ಕರ್ತವ್ಯನಿಷ್ಠೆಯಲಿ

ಕನಕನಂತಿರಬೇಕು ಅಚಲ ವಿಶ್ವಾಸ |

ಜನಕನಂತಿರಬೇಕು ಫಲದಾಸೆ ಇಲ್ಲದೆಯೆ

ಬೆನಕ ನೀಗುವ ವಿಘ್ನ ~ ಪರಮಾತ್ಮನೆ ||೩೨೧||


ಪರಿವಾರವೆನೆ ಇಂದು ಪತಿಪತ್ನಿಯರು ಮಾತ್ರ

ಪರಿಧಿಯನು ದಾಟಿಹರು ಮಕ್ಕಳೂ ಈಗ |    

ಹರಿ ನಿನ್ನ ವಸುದೈವದಾ ಕುಟುಂಬವೆಲ್ಲೋ

ಬರಡಾಯ್ತು ಎದೆಯೇಕೆ  ಪರಮಾತ್ಮನೆ ||೩೨೨||


ಆಕಾರವಿಲ್ಲ ಬಲ್ಲೆವು ನಿನಗೆ ಪರಮಾತ್ಮ

ಸಾಕಾರ ರೂಪದಲಿ ನಿನ್ನ ಪೂಜಿಪೆವು |

ಬೇಕು ಕೇಂದ್ರೀಕರಿಸೆ ಚಂಚಲದ ಚಿತ್ತವನು

ಸಾಕಾರ ರೂಪವೇ ~ ಪರಮಾತ್ಮನೆ ||೩೨೩||


ಎಡವಿ ಬಿದ್ದರೆ ನಾವು ಭೂಮಿಯದು ತಪ್ಪೇನು?

ಕೊಡವಿಕೊಂಡೇಳುತಿರು ಕಣ್ಣನ್ನು ತೆರೆದು |

ಕಡವ ಪಡೆದವ ನಿನಗೆ ಹಿಂತಿರುಗಿ ನೀಡದಿರೆ

ಮಡೆಯ ನೀನಲ್ಲವೇ? ~ ಪರಮಾತ್ಮನೆ ||೩೨೪||


ಎಲುಬಿರದ ನಾಲಿಗೆಯು ಚಾಪಲ್ಯ ಮೆರೆಸುತಿದೆ

ತಲೆಯಲ್ಲಿ ಮೂಡುತಿಹ ಜೋಕೆಯನು ಕೊಂದು |

ಕಳೆಯುತಿರೆ ಮಯ್ಯೊಳಿತು ದಿನದಿನವು ಮತ್ತೇನು

ಬಳಿಸಾರುವುದು ರೋಗ ~ ಪರಮಾತ್ಮನೆ ||೩೨೫||

ಮುಕ್ತಕಗಳು - ೬೪

ಚಿಕ್ಕ ಬೀಜದೊಳಗಿದೆ ದೊಡ್ಡ ಮರದಾ ನಕ್ಷೆ

ಚೊಕ್ಕದಲಿ ಮೊಳೆತು ಬೆಳೆಯುತ್ತ ಮರವಾಯ್ತು |

ಸಿಕ್ಕ ಸಂಸ್ಕಾರವೇ ರೂಪಿಸಿದೆ ಎಳೆಯರನು

ಲೆಕ್ಕವದು ತಪ್ಪುವುದೆ ~ ಪರಮಾತ್ಮನೆ ||೩೧೬||


ರಂಗಾದ ದಿರಿಸುಗಳು ದೇಹಕ್ಕೆ ಸಿಂಗಾರ

ಬಂಗಾರ ದೊಡವೆಗಳು ಹೆಚ್ಚಿಸಿವೆ ಹೊಳಪು |

ಲಂಗು ಪಾವಿತ್ರ್ಯಸುಖ ಜ್ಞಾನ ಬಲ ಪ್ರೇಮಗಳು

ಸಿಂಗಾರ ಒಳಮನಕೆ ~ ಪರಮಾತ್ಮನೆ ||೩೧೭||

ಲಂಗು = ಕುದುರೆಯ ಬಾಯಿಗೆ ಹಾಕುವ ತಡೆ


ಕೊಟ್ಟು ಹೋಗುತಿರು ಮನುಜಾ ನಿನ್ನದೆಲ್ಲವನು

ಬಿಟ್ಟು ಹೋಗಲುಬೇಕು ಎಷ್ಟಿದ್ದರೇನು |

ಕಟ್ಟಿಕೊಳ್ಳುವೆ ಮೂಟೆಯಲಿ ಪಾಪಪುಣ್ಯಗಳ

ಚಟ್ಟ ಹತ್ತುವ ಮೊದಲು ~ ಪರಮಾತ್ಮನೆ ||೩೧೮||


ತ್ರಿಗುಣಗಳ ಜಗದಿ ಚಾತುರ್ವರ್ಣಗಳ ಸೃಷ್ಟಿ

ಭಗವಂತ ತೋರಿದಾ ಕಾಯಕದ ದಾರಿ |

ಅಗಣಿತದ ವರ್ಣಗಳ ಸೃಷ್ಟಿಸಿದ ಮಾನವನು

ಮಿಗವಾಗಿ ಮೆರೆಯುತಿಹ ~ ಪರಮಾತ್ಮನೆ ||೩೧೯||


ಉಳಿತಾಯ ಮಾಡುವುದು ಎಂತು ಈ ಕಾಲದಲಿ

ಕಳೆಯುವಾ ದಾರಿಗಳು ಹೆಚ್ಚುತಿವೆ ನಿತ್ಯ |

ಕೊಳಲಿನಾ ಸಂಗೀತ ಮಧುರವಾಗುವುದೆಂತು

ಕೊಳಲಿನಲಿ ಬಹುರಂಧ್ರ ~ ಪರಮಾತ್ಮನೆ ||೩೨೦||

ಮುಕ್ತಕಗಳು - ೬೩

ಎಲ್ಲರಾ ತಲೆಮೇಲೆ ಗಾಜಿನಾ ಛಾವಣಿಯು

ಎಲ್ಲರೂ ಅರಿತಿಲ್ಲ ಛಾವಣಿಯ ಮಟ್ಟ |

ಅಲ್ಲಿಗೇರುವವನೇ ಛಲದಂಕಮಲ್ಲ ನೀ

ನಿಲ್ಲದೆಯೆ ಮೇಲೇರು ~ ಪರಮಾತ್ಮನೆ ||೩೧೧||


ಕೊಳುತಿಹರು ಕೊಳುತಿಹರು ಇಲ್ಲದಾ ಹಣದಿಂದ

ಬೆಲೆಯಿಲ್ಲ ಮನೆಯಲ್ಲಿ ತುಂಬಿಹುದು ಕಸವು |

ಒಲೆಯ ಮೇಲಿನ ಹಾಲು ಉಕ್ಕಿಹರಿ ಯುತಲಿಹುದು

ತಲೆಯ ಮೇಗಡೆ ಸಾಲ ~ ಪರಮಾತ್ಮನೆ ||೩೧೨||


ಎಲೆಯ ತಿನ್ನುವ ಕೀಟ ಚಿಟ್ಟೆಯಾಗುವ ರೀತಿ

ಬೆಳೆದು ಪಸರಿಸು ನಿನ್ನ ರೆಕ್ಕೆಗಳ ಜಗದಿ |

ಬಿಲದಿ ಇಲಿಯಾಗಿರಲು ಹೇಗೆ ನೋಡುವೆ ಜಗವ

ಕಲಿಯೆ ದೇಶವ ಸುತ್ತು  ಪರಮಾತ್ಮನೆ ||೩೧೩||


ಜಲಧಿಯಲೆಗಳ ನಡುವೆ ಧ್ಯಾನ ಮಾಡುವೆ ಹೇಗೆ

ಜಲಪಾತದಡಿಯಲ್ಲಿ ಸ್ನಾನವದು ಎಂತು? |

ಕಲಿ ಶಾಂತವಿರಿಸೆ ಮನದಾಲೋಚನೆಯಲೆಗಳ

ಉಲಿವ ಒಳಗಿನ ಬಂಧು ~ ಪರಮಾತ್ಮನೆ ||೩೧೪||


ನವರಾತ್ರಿ ಶುಭರಾತ್ರಿ ಭಾರತೀಯರಿಗೆಲ್ಲ

ನವದುರ್ಗೆಯರ ಪೂಜೆ ಸಂಭ್ರಮದ ಸಮಯ |

ಅವಿರತವು ದಶಕಂಠ, ಮಹಿಷಾಸುರರ ದಮನ

ನವಹರ್ಷ ಪ್ರಜೆಗಳಿಗೆ ~ ಪರಮಾತ್ಮನೆ ||೩೧೫||

ಮುಕ್ತಕಗಳು - ೬೨

ತುಟಿಯಂಚಿನಲಿ ಬಂದ ನುಡಿಗಳಿಗೆ ಬೆಲೆಯಿಲ್ಲ

ನಟನೆಯೆಂಬುದು ತಿಳಿಯೆ ಸಮಯಬೇಕಿಲ್ಲ |

ಸಟೆಯಾಡುವುದಕೆ ಸಮ ಎದೆಯ ನುಡಿಯಾಡದಿರೆ

ತಟವಟವ ತೊರೆದುಬಿಡು ಪರಮಾತ್ಮನೆ ||೩೦೬||

ತಟವಟ = ಬೂಟಾಟಿಕೆ


ಕಸಬಿನಲಿ ಕೀಳ್ಯಾವ್ದು ಮೇಲ್ಯಾವ್ದು ಹೇಳಯ್ಯ

ಕಸವ ತೆಗೆಯುವುದರಲಿ ಕೀಳುತನವೆಲ್ಲಿ?

ಬಿಸುಡಿದರೆ ಕಸವನ್ನು ಎಲ್ಲೆಂದರಲ್ಲಿಯೇ

ಹೆಸರಾದೆ ಕೀಳ್ತನಕೆ ~ ಪರಮಾತ್ಮನೆ ||೩೦೭||


ಅನ್ನಕ್ಕೆ ಚಿನ್ನಕ್ಕೆ ಹೋಲಿಕೆಯು ತರವೇನು

ಚಿನ್ನವನು ತಿನ್ನುವೆಯ ಹೊಟ್ಟೆ ಹಸಿದಿರಲು |

ನಿನ್ನ ಹೋಲಿಸಲೇಕೆ ಇನ್ನಾರದೋ ಜೊತೆಗೆ

ನಿನ್ನಬೆಲೆ ನಿನಗುಂಟು ~ ಪರಮಾತ್ಮನೆ ||೩೦೮||


ಕಾಲಚಕ್ರವು ತಿರುಗಿ ಮುನ್ನಡೆಸುತಿದೆ ಜಗವ

ಜಾಲವಿದು ಕಾಲದಲಿ ಖೈದಿಗಳು ನಾವು |

ಚಾಲಕನು ಕಾಣಸಿಗ ತಲುಪುವುದು ಎಲ್ಲಿಗೋ

ಕೇಳುವುದು ಯಾರನ್ನು ~ ಪರಮಾತ್ಮನೆ ||೩೦೯||


ದಾರಿದೀಪದ ಬೆಳಕು ದಾರಿಗೇ ಸೀಮಿತವು

ಕಾರಿರುಳ ಮನೆಗೆ ಬೆಳಕಾಗಲಾರದದು |

ನೂರಿರಲು ಶಿಕ್ಷಕರು ಬದುಕುವುದ ಕಲಿಸಲಿಕೆ

ತೋರುವರೆ ಒಳದೈವ ಪರಮಾತ್ಮನೆ ||೩೧೦||

Monday, September 5, 2022

ಮುಕ್ತಕಗಳು - ೬೧

ಝಗಮಗಿಸೊ ದೀಪಗಳು, ಎದೆಯಲ್ಲಿ ಕತ್ತಲೆಯು

ಧಗಧಗನೆ ಉರಿಯುತಿದೆ ಬೇಕುಗಳ ಬೆಂಕಿ |

ನಿಗಿನಿಗಿಸೊ ಕೆಂಡಗಳು ಸುಡುತಿರಲು ಮನಗಳನು

ಹೊಗೆಯಾಡುತಿದೆ ಬುವಿಯು ~ ಪರಮಾತ್ಮನೆ ||೩೦೧||


ದಶಕಂಠನದು ಒಂದು ದೌರ್ಬಲ್ಯ ಮಾತ್ರವೇ

ನಶೆಯಿತ್ತು ಪರನೀರೆ ವ್ಯಾಮೋಹವಧಿಕ |

ಯಶ ಶೌರ್ಯ ಪಾಂಡಿತ್ಯ ಬರಲಿಲ್ಲ ಕೆಲಸಕ್ಕೆ

ವಿಷವಾಯ್ತು ಹೆಣ್ಣಾಸೆ ಪರಮಾತ್ಮನೆ ||೩೦೨||


ತನುವ ಸುಂದರವಿಡಲು ಈಸೊಂದು ಶ್ರಮವೇಕೆ

ಮನವ ಸುಂದರವಾಗಿ ಇರಿಸೋಣ ನಾವು |

ಶುನಕ ಬಿಳಿಯಿರಲೇನು ಹೊಲಸ ತೊರೆಯುವುದೇನು

ಗುಣಕೆ ಬೆಲೆ ಮೆಯ್‌ಗಲ್ಲ ~ ಪರಮಾತ್ಮನೆ ||೩೦೩||


ನಾವು ಓಡುವುದೇಕೆ ಪಕ್ಕದವ ಓಡಿದರೆ

ಜೀವನವು ಪಂದ್ಯವೇ? ಪೋಟಿಯೇನಿಲ್ಲ |

ಸಾವು ಬರುವುದರೊಳಗೆ ಅನುಭವಿಸು ಪ್ರೀತಿಯನು

ಕೋವಿ ಗುಂಡಾಗದಿರು ~ ಪರಮಾತ್ಮನೆ ||೩೦೪||


ಕಲಿತು ಮಾಡುವ ಕೆಲಸ ಉತ್ತಮವು ನಿಜವಾಗಿ

ಕಲೆತು ಮಾಡುವ ಕೆಲಸ ಸರ್ವೋಪಯೋಗಿ |

ಕಲೆತು ಕಲಿಯುತ ಮಾಡುವುದು ಮಹಾ ಶ್ರೇಷ್ಠವದು

ಕಲೆಯುವುದ ಕಲಿಯೋಣ ಪರಮಾತ್ಮನೆ ||೩೦೫||

Monday, August 22, 2022

ಮುಕ್ತಕಗಳು - ೬೦

ಆಸೆಗಳ ಕೊಳದಲ್ಲಿ ಈಸುವುದು ಏತಕ್ಕೆ

ಹಾಸಿ ಮಲಗಿರುವ ಮೃಗವನೆಬ್ಬಿಸಿದ ಹಾಗೆ |

ಬೀಸೊ ಬಿರುಗಾಳಿಯಲಿ ಗಾಳಿಪಟ ಉಳಿಯುವುದೆ

ಆಸೆಗಳ ನಿಗ್ರಹಿಸು ~ ಪರಮಾತ್ಮನೆ ||೨೯೬||


ನಟ್ಟಿರುಳ ಕತ್ತಲಲಿ ಮಿಂಚೊಂದು ಸುಳಿದಂತೆ

ಥಟ್ಟೆಂದು ಹೊಳೆದರಾವಿಷ್ಕಾರ ವೊಂದು |

ಬಿಟ್ಟಿ ದೊರಕಿದದೃಷ್ಟವಿತ್ತ ವರವಲ್ಲವದು

ಗಟ್ಟಿ ತಪಸಿನ ಫಲವು ~ ಪರಮಾತ್ಮನೆ ||೨೯೭||


ಒಳಿತು ಕೆಡಕುಗಳ ಯುದ್ಧವು ನಡೆಯುತಿದೆ ನಿತ್ಯ

ಕಲಿ-ಕಲ್ಕಿಯರ ಯುದ್ಧವಿದು ಅಲ್ಲವೇನು? |

ಬಲಿಯಾಗುತಿರಬಹುದು ಪುಟ್ಟ ಕಲ್ಕಿಗಳಿಂದು

ಬೆಳೆದು ಬರುವನು ಕಲ್ಕಿ ಪರಮಾತ್ಮನೆ ||೨೯೮||


ನರಜನ್ಮ ಸಿಕ್ಕಿಹುದು ಪುಣ್ಯದಾ ಶುಭಘಳಿಗೆ

ಅರಸನಾಗಿಹೆ ವಿವೇಚನೆ ಬುದ್ಧಿಗಳಿಗೆ

ವಿರಮಿಸದೆ ನಡೆ ಮುಂದೆ ಸತ್ಯದಾ ದಾರಿಯಲಿ

ಸಿರಿಪತಿಯ ಧ್ಯಾನಿಸುತ ~ ಪರಮಾತ್ಮನೆ ||೨೯೯||


ದಿನಮಣಿಯು ಚಂದಿರಗೆ ಕೊಟ್ಟಿರುವ ಸುಡುಬಿಸಿಲ

ತನಿಯಾಗಿಸುತ ಜೊನ್ನವನು ಸುರಿದ ನಗುತ |

ನಿನಗೆ ನೋವೇ ಆಗಿರಲಿ ನಗುವ ಹಂಚುತಿರು      

ಘನತೆಪಡೆವುದು ಜನುಮ ~ ಪರಮಾತ್ಮನೆ ||೩೦೦||

ಮುಕ್ತಕಗಳು - ೫೮

ಎದೆಯಲ್ಲಿ ಹಲವಾರು ಭಾವಗಳು ತುಂಬಿರಲು

ನದಿಯನ್ನು ತಡೆಹಿಡಿದ ಅಣೆಕಟ್ಟಿನಂತೆ |

ಕದಗಳವು ಬೇಕಿರಲು ಒತ್ತಡವ ಹೊರ ಹಾಕೆ

ಬಳಿಯಲ್ಲಿ ಸಖನಿರಲಿ ಪರಮಾತ್ಮನೆ ||೨೮೬||


ಇರಲೇನು ಬದುಕಲ್ಲಿ ನವರಸದ ಸಮ್ಮಿಲನ

ಇರಬೇಕು ಸಮರಸವು ಬಹುಮುಖ್ಯವಾಗಿ |

ಕೊರತೆಯಾದರೆ ನೋಡು ಸಮರಸವು ನಮ್ಮಲ್ಲಿ

ಮರೆವೆ ಕೆಲ ರಸಗಳನು ~ ಪರಮಾತ್ಮನೆ ||೨೮೭||


ಮಣ್ಣಿನಿಂದಲೆ ಊಟ ಮಣ್ಣಿನಿಂದಲೆ ಬಟ್ಟೆ

ಮಣ್ಣಿನಿಂದಲೆ ಮಹಲು ತಲೆಮೇಲೆ ಸೂರು |

ಮಣ್ಣಿನಿಂದಲೆ ಕಾಯ ಮಣ್ಣ ಸೇರುವೆ ಕೊನೆಗೆ

ಕಣ್ಣಿಗೊತ್ತಿಕೊ ಮಣ್ಣ ~ ಪರಮಾತ್ಮನೆ ||೨೮೮||


ಮಿತ್ರರಲಿ ಇರಬೇಕು ಮುಚ್ಚುಮರೆ ಇಲ್ಲದೊಲು

ಪುತ್ರರಲಿ ಭೇದವನು ಮಾಡದಿರಬೇಕು |

ಶತ್ರುಗಳ ಕ್ಷಮಿಸುತ್ತ ಸ್ನೇಹಹಸ್ತವ ಚಾಚು

ಅತ್ರಾಸ ಬದುಕೆಲ್ಲ ~ ಪರಮಾತ್ಮನೆ ||೨೮೯||

ಅತ್ರಾಸ = ಕಜ್ಜಾಯ (ಅತಿರಸ)


ಕಳೆದುಕೊಂಡರೆ ಮಾನ ಪ್ರಾಣವೇ ಹೋದಂತೆ

ಕಳೆಯು ಬೆಳೆದೆತ್ತರಕೆ ನುಂಗಿದೊಲು ಪೈರ |

ಇಳೆಯ ಜೀವನ ನರಕವೆನಿಸುವುದು, ಹಣೆಪಟ್ಟಿ

ಉಳಿಯುವುದು ಕೊನೆತನಕ ~ ಪರಮಾತ್ಮನೆ ||೨೯೦||

ಮುಕ್ತಕಗಳು - ೫೯

ಸಮಯವದು ಉಚಿತವೇ, ಬೆಲೆಕಟ್ಟಲಾಗದ್ದು

ನಮಗೆ ಒಡೆತನವಿಲ್ಲ, ಬಳಸೆ ಸಿಕ್ಕುವುದು |

ಜಮೆ ಮಾಡಲಾಗದ್ದು, ವ್ಯಯಿಸಬಹುದಷ್ಟೆಯದು

ಗಮನವಿಡು ಲಾಭಪಡೆ ~ ಪರಮಾತ್ಮನೆ ||೨೯೧||


ಗೃಹಿಣಿಗಿದೆಯೇ ನಿವೃ ತ್ತಿಯ ಪಾರಿತೋಷಕವು

ದಹಿಸುತಿಹ ದಿನಿದಿನದ ಕೋಟಲೆಗಳಿಂದ |

ಇಹುದೆ ಹೃದಯಕ್ಕೆ ರಜೆ ಮನುಜ ಬದುಕಿರುವನಕ

ಗೃಹದ ಹೃದಯವು ಆಕೆ ~ ಪರಮಾತ್ಮನೆ ||೨೯೨||


ಮನ ಶುದ್ಧವಿಲ್ಲದಿರೆ ಮಂತ್ರವೀಯದು ಶಕ್ತಿ

ತನು ಶುದ್ಧವಿಲ್ಲದಿರೆ ಫಲಕೊಡದು ತೀರ್ಥ |

ಧನವಧಿಕವಿರಲೇನು ಕೊಳ್ಳಲಾಗದು ಭಕ್ತಿ

ತನುಮನವ ಶುದ್ಧವಿಡು ~ ಪರಮಾತ್ಮನೆ ||೨೯೩||


ಕಾಗದದ ದೋಣಿಯಲಿ ಸಾಗರವ ದಾಟುವೆಯ

ಬಾಗಿದಾ ಮರವನ್ನು ನೇರ ಮಾಡುವೆಯ |

ಸಾಗು ಭೂಮಿಯ ಮೇಲೆ ಹೆಜ್ಜೆಗಳನೂರುತಲಿ

ಸೋಗೇಕೆ ಮಾತಿನಲಿ ~ ಪರಮಾತ್ಮನೆ ||೨೯೪||


ಅಕ್ಕರೆಯು ದೊರೆತರದು ಬಾಯಾರಿದವಗೆ ಜಲ

ಸಕ್ಕರೆಯ ಸವಿನುಡೆಯು ಎದೆಯ ತುಂಬುವುದು |

ಅಕ್ಕಪಕ್ಕದಲಿ ಹಂಚುತ ಅಕ್ಕರೆಯ ಉಚಿತ

ಚೊಕ್ಕವಾಗಿಸು ಧರೆಯ ~ ಪರಮಾತ್ಮನೆ ||೨೯೫||

ಮುಕ್ತಕಗಳು - ೫೭

ಪರಿಹರಿಸಿ ವಿಘ್ನಗಳ ಹರಸು ನಮ್ಮೆಲ್ಲರನು

ವರದಹಸ್ತನೆ ನೀಡು ವರಗಳನು ಬೇಗ |

ದುರಿತನಾಶನೆ ಗೌರಿಪುತ್ರ ಜಯ ಗಣಪತಿಯೆ

ನಿರತ ಭಜಿಸುವೆ ಕಾಯೊ ~ ಪರಮಾತ್ಮನೆ ||೨೮೧||


ಹುಟ್ಟಿದ್ದು ಸಾಧನೆಯೆ? ಬೆಳೆದಿದ್ದು ಸಾಧನೆಯೆ?

ಹುಟ್ಟಿದಾ ದಿನದಂದು ಸಡಗರವು ಏಕೆ? |

ನೆಟ್ಟರೇ ಮರಗಳನು ಕೊಟ್ಟರೇ ದಾನವನು

ಉಟ್ಟು ಸಂಭ್ರಮಿಸೋಣ ~ ಪರಮಾತ್ಮನೆ ||೨೮೨||


ಅರೆಬೆಂದ ಜ್ಞಾನವದು ಅರಿಗೆ ಬಲ ನೀಡುವುದು

ಕುರಿಗಳಾಗುವೆವು ಸುಜ್ಞಾನವಿಲ್ಲದಿರೆ |

ಕುರುಡನಾ ಕಿಸೆಯ ಮಾಣಿಕ್ಯ ಬೆಲೆ ತರದಲ್ಲ

ಅರಿತಿರಲು ಬೆಲೆಯುಂಟು ~ ಪರಮಾತ್ಮನೆ ||೨೮೩||


ಹಣದಿಂದ ಸಿಗಬಹುದು ಆಹಾರ ಮಾತ್ರವೇ

ಹಣವು ತರಬಲ್ಲದೇ ಆರೋಗ್ಯ ವನ್ನು |

ಗುಣಶಾಂತಿ ಸುಖನಿದ್ದೆ ಸುಸ್ನೇಹ ನೆಮ್ಮದಿಯು

ಹಣಕೆ ದೊರೆಯುವುದಿಲ್ಲ ~ ಪರಮಾತ್ಮನೆ ||೨೮೪||


ನಿಗದಿಯಾಗಿದೆ ಬಹಳ ನಿಯಮಗಳು ವಿಶ್ವದಲಿ

ಜಗವು ಕೊಡು-ಪಡೆಯಧಿಕ ನಿಯಮಕ್ಕೆ ಬದ್ಧ |

ನಗುವ ಕೊಡೆ ಸುಖವ ಪಡೆವೆವು ಅಧಿಕ ನೆನಪಿರಲಿ

ಬಗೆಯದಿರು ದ್ರೋಹವನು ~ ಪರಮಾತ್ಮನೆ ||೨೮೫||


ಮುಕ್ತಕಗಳು - ೫೬

ಮೂಳೆ ಮಾಂಸಗಳಿರುವ ಜೀವಯಂತ್ರವು ಮನುಜ

ಬಾಳಿಕೆಗೆ ನೂರ್ವರುಷ ಸಂಕೀರ್ಣ ಸೃಷ್ಟಿ |

ಪೀಳಿಗೆಗಳೇ ನಶಿಸಿದವು ಲಕ್ಷ  ಸಂಖ್ಯೆಯಲಿ

ಆಳ ಉದ್ದಗಳರಿಯ ಪರಮಾತ್ಮನೆ ||೨೭೬||


ವೇದಗಳು ನೀಡುವವು ಬದುಕುವಾ ಜ್ಞಾನವನು

ಗಾದೆಗಳು ಬದುಕಿನಾ ಅನುಭವದ ಸಾರ |

ವಾದ ಮಾಡದೆ ರೂಢಿಸೆರಡು ಉಪಕರಣಗಳ

ಹಾದಿ ಸುಗಮವು ಮುಂದೆ ~ ಪರಮಾತ್ಮನೆ ||೨೭೭||


ಅಪರಂಜಿ ನಗವಾಗೆ ಎಲ್ಲರೂ ಮಣಿಸುವರು

ಕಪಿಚೇಷ್ಟೆಗೂ ಅಂಕು ಡೊಂಕಾಗಬಹುದು |

ಉಪಯೋಗವಾಗುವುದು ತುಸು ತಾಮ್ರ ಸೇರಿದರೆ

ಹಪಹಪಿಸು ತುಸು ಕೊರೆಗೆ ~ ಪರಮಾತ್ಮನೆ ||೨೭೮||

ಕೊರೆ = ನ್ಯೂನತೆ


ವಿಜ್ಞಾನ ಬೆಳೆಯುತಿದೆ ಸಿರಿಯು ಹೆಚ್ಚಾಗುತಿದೆ

ಅಜ್ಞಾನ ಹೆಚ್ಚಿಸಿದೆ ವ್ಯಾಪಾರಿ ಬುದ್ಧಿ |

ಸುಜ್ಞಾನ ವಿರಬೇಕು ವಿಜ್ಞಾನಿಗಳಿಗೆಲ್ಲ

ಅಜ್ಞರಾ ಸರಿಪಡಿಸು ಪರಮಾತ್ಮನೆ ||೨೭೯||


ಆರ್ಯೆ ಬಂದಿಹಳು ಮಾತಾಪಿತರ ತೊರೆಯುತ್ತ

ಭಾರ್ಯೆಯೊಳು ತೋರು ಅಕ್ಕರೆಯ ಅನವರತ |

ಧೈರ್ಯವನು ತುಂಬುವಳು ಹೆಗಲ ಆಸರೆ ನೀಡಿ

ಕಾರ್ಯಲಕ್ಷ್ಮಿಯವಳೇ ~ ಪರಮಾತ್ಮನೆ ||೨೮೦||

Thursday, August 18, 2022

ಮುಕ್ತಕಗಳು - ೫೦

ಸೀಬೆ ತಿನ್ನಬಹುದಾದರೆ ಮಾವು ತಿನಲಾಗದು

ಲಾಭವುಂಟೇನು ಮಧುಮೇಹಿಯಾಗಿರಲು |

ಜೇಬು ತುಂಬಿರೆ ಸಾಕೆ ಎಲ್ಲ ಅನುಭವಿಸಲಿಕೆ

ತೂಬು ಇದೆ ಬದುಕಿನಲಿ ~ ಪರಮಾತ್ಮನೆ ||೨೪೬||


ಇಬ್ಬನಿಯು ಕಾಣುವುದು ಮುತ್ತಿನಾ ಮಣಿಗಳೊಲು

ಹುಬ್ಬಿನಾ ಎಸಳುಗಳು ಇಂದ್ರಛಾಪದೊಲು |

ಕಬ್ಬಿಗನ ಕಣ್ಣುಗಳು ಮಾಯದಾ ದುರ್ಬೀನು

ಹೆಬ್ಬೆಟ್ಟೆ ಅವನಿರಲಿ ~ ಪರಮಾತ್ಮನೆ ||೨೪೭||


ಚಿನ್ನದಾ ತಲ್ಪದಲಿ ಮಾಳಿಗೆಯ ಮನೆಯಲ್ಲಿ

ರನ್ನದಾ ಕಂಬಳಿಯ ಹೊದ್ದು ಮಲಗುತಲಿ |

ಹೊನ್ನಿನಾ ತಟ್ಟೆಯಲಿ ಊಟ ಮಾಡಿದರೇನು

ಮಣ್ಣಾಗುವುದು ಸತ್ಯ ~ ಪರಮಾತ್ಮನೆ ||೨೪೮||


ಹಕ್ಕಿಯೊಲು ಹಾರಿದೆವು ಮೀನಿನೊಲು ಈಜಿದೆವು

ಸೊಕ್ಕಿನಲಿ ಬುವಿಯಲ್ಲೆ ಎಡವಿ ಬಿದ್ದಿಹೆವು |

ಮಿಕ್ಕ ಸಮಯದಲಿ ಎಚ್ಚರ ತಪ್ಪಿ ಹೆಜ್ಜೆಯಿಡೆ

ದಕ್ಕುವುದೆ ಅನ್ನವದು ~ ಪರಮಾತ್ಮನೆ ||೨೪೯||


ಹೊರದೂಡುವುದು ಎಂತು ಕಲಿಯನ್ನು ಮನದಿಂದ

ಬರುವನಕ ಕಲ್ಕಿ  ಕಾಯುತಿರಬೇಕೇನು |

ತೊರೆ ಹಿಂಸೆ ಪಣ ಪಾನ ಪರನೀರೆ ಸಂಗಗಳ

ಧರೆಗೆ ಉರುಳುವನು ಕಲಿ ಪರಮಾತ್ಮನೆ ||೨೫೦||

ಮುಕ್ತಕಗಳು - ೪೯

ಗೆಳೆತನವೆ ಸಂಬಂಧಗಳಲಿ ಅತಿ ಉತ್ತಮವು

ಎಳೆಗಳಿರದಿರೆ ಆಸ್ತಿ ಅಂತಸ್ತುಗಳದು |    

ಸೆಳೆಯುವವು ಬುದ್ಧಿಮನಗಳು ಈರ್ವರನು ಸನಿಹ

ಪುಳಕಗೊಳಿಸುತ ಮನವ  ಪರಮಾತ್ಮನೆ ||೨೪೧||


ಮರೆವೊಂದು ವರದಾನ ಮರೆಯಲಿಕೆ ನೋವುಗಳ

ಹೊರೆಯೆಲ್ಲ ಇಳಿದಾಗ ನಸುನಗುವು ಮೂಡೆ |

ಕರಗಿಹೋಗಲಿ ಹೆಪ್ಪುಗಟ್ಟಿರುವ ಹಿಮಪಾತ

ಮರೆಯಾಗಿ ಮೋಡಗಳು ~ ಪರಮಾತ್ಮನೆ ||೨೪೨||


ದುಡುಕದಿರು ಆತುರದಿ ಕೋಪದಾ ತಾಪದಲಿ

ಎಡವದಿರು ಸುರಿಯುವುದು ನಿನ್ನದೇ ರಕುತ |

ಅಡಿಯಿಡುವ ಮುನ್ನ ಯೋಚಿಸು ಒಂದೆರಡು ಘಳಿಗೆ

ಕೊಡೆ ಮಾಡು ಬುದ್ಧಿಯನು ~ ಪರಮಾತ್ಮನೆ ||೨೪೩||


ದಣಿಸಿದರೆ ಮನವನ್ನು ಸೋಲುವುದು ದೇಹವದು

ಮಣಿಸಿದರೆ ದೇಹವನು ಹೊಮ್ಮುವುದು ಹುರುಪು |

ಗಣಿಯಂಥ ಕಾಯವಿದು ದೇವನದ್ಭುತ ಸೃಷ್ಟಿ

ಚಣ ಸಾಕೆ ಅದನರಿಯೆ ~ ಪರಮಾತ್ಮನೆ ||೨೪೪||


ಮರೆಯೋಣ ತಪ್ಪುಗಳ ಬಂಧುಮಿತ್ರರ ನಡುವೆ

ಬೆರೆಯೋಣ ಸಂತಸದಿ ಬದುಕಿನಲಿ ನಲಿಯೆ |

ಮೆರೆಯೋಣ ಗೆಳೆತನದ ಸವಿಫಲದ ರುಚಿಯನ್ನು

ಮೆರೆವಂತೆ ಕಾಗೆಗಳು ~ ಪರಮಾತ್ಮನೆ ||೨೪೫||

ಮುಕ್ತಕಗಳು - ೪೮

ಪ್ರೀತಿಯೆಂದರೆ ಅದುವೆ ವ್ಯವಹಾರ ಅಲ್ಲಣ್ಣ

ಪಾತಕವು ಬದಲಿಗೇನಾದರೂ ಬಯಸೆ |

ಏತದಂತಿರಬೇಕು ಅಕ್ಕರೆಯ ಹಂಚಲಿಕೆ

ಜೋತುಬೀಳದೆ ಫಲಕೆ ~ ಪರಮಾತ್ಮನೆ ||೨೩೬||


ಮರೆಯದಿರು ನೇಹಿಗರ ತೊರೆಯದಿರು ಹಿರಿಯರನು

ತೊರೆದೆಯಾದರೆ ತೊರೆದೆ ಜೀವನದ ಸಿರಿಯ |

ಕೊರೆಯುವುದು ಮನವ ಜೀವನದ ಕೊನೆಗಾಲದಲಿ

ಬರಿದೆ ಹಲುಬುವೆ ನೀನು ~ ಪರಮಾತ್ಮನೆ ||೨೩೭||


ಉಚಿತದಲಿ ಸಿಕ್ಕಿರಲು ದೇಹವದು ನಮಗೆಲ್ಲ

ಉಚಿತವೇ ದೇಹವನು ಕಡೆಗಣಿಸೆ ನಾವು |

ರಚನೆಯಾಗಿದೆ ದೇಹ ಸೂಕ್ತದಲಿ ಸಾಧನೆಗೆ

ಶಚಿಪತಿಗೆ ಸುರಕರಿಯು ~ ಪರಮಾತ್ಮನೆ ||೨೩೮||


ಜಾಲತಾಣಗಳು ಜನಗಳ ದಾರಿ ತಪ್ಪಿಸಿವೆ

ಹೊಲಸನ್ನು ತುಂಬಿಸುತ ತಲೆಯ ತುಂಬೆಲ್ಲ |

ಕಲಿಸುತಿವೆ ಕೆಲವೊಮ್ಮೆ ಸುಜ್ಞಾನ ಪಾಠಗಳ

ಅಲಗು ಎರಡಿರೊ ಖಡ್ಗ ~ ಪರಮಾತ್ಮನೆ ||೨೩೯||


ಕಪಟ ನಾಟಕವನಾಡುವ ಚತುರರೇ ಕೇಳಿ

ಉಪದೇಶ ಠೀವಿಯಲಿ ನಾಟಕದ ವೇಷ |

ಜಪಮಾಲೆ ಹಿಡಿದವರು ಎಲ್ಲ ಸಾತ್ವಿಕರಲ್ಲ

ಅಪಜಯವು ನಿಮಗಿರಲಿ ~ ಪರಮಾತ್ಮನೆ  ||೨೪೦||

ಮುಕ್ತಕಗಳು - ೪೭

ಹಾಲು ಹಾಲಾಹಲಗಳೆರಡು ಬೆರತಿರುವಂತೆ

ಜಾಲತಾಣಗಳು ಗೊಂದಲದ ರಸಪಾಕ |

ಹಾಲು ಕುಡಿಯುವ ಜಾಣ್ಮೆಯಿರಬೇಕು ಹಂಸದೊಲು

ಜಾಲಿಮರ ನೆರಳಾಯ್ತು ಪರಮಾತ್ಮನೆ ||೨೩೧||


ಮದುವೆಯದು ಬಂಧನವೊ ಇಂಧನವೊ ಜೀವನಕೆ?

ಬದುಕಿನಾ ಪ್ರಶ್ನೆ ಕಾಡುತಿದೆ ಯುವಜನರ |

ಕದವ ತೆರೆಯುವುದು ಸಂಘಟಿತ ಬದುಕಿಗೆ ಮದುವೆ

ನದಿಯು ಸಾಗರದೆಡೆಗೆ ಪರಮಾತ್ಮನೆ ||೨೩೨||


ಆಗಸದೆಲ್ಲೆಯಲಿ ವಿಹರಿಸಲೇನು ಪಕ್ಷಿಗಳು

ಬಾಗಬೇಕಿದೆ ಬುವಿಯೆಡೆಗೆ ಉದರಕಾಗಿ |

ಹೋಗಿ ನಿಂತರು ಕೂಡ ಕನಸಿನಾ ಸಗ್ಗದಲಿ

ಸಾಗುವಳಿ ಬುವಿಯಲ್ಲೆ ~ ಪರಮಾತ್ಮನೆ ||೨೩೩|| 


ಬದುಕಿನಲಿ ಕಷ್ಟಗಳು ಬೆಂಬಿಡದೆ ಬರುತಿರಲು

ಕುದಿಯುತಿಹ ನೀರಿನಲಿ ಗುಳ್ಳೆಗಳ ಹಾಗೆ |

ಎದೆಗುಂದದಿರು ಕಾಲಚಕ್ರ ತಿರುಗುವುದು ತಾನ್

ಎದೆಯು ಹಗುರಾಗುವುದು ~ ಪರಮಾತ್ಮನೆ ||೨೩೪||


ಹಣದಾಸೆ ಮಣ್ಣಾಸೆ ಹೆಣ್ಣಾಸೆಗಳು ಮೂರು

ತೃಣವೆಂದು ತೊರೆದವರೆ ಸಾಧಕರು ನೋಡು |

ರಣರಂಗವಾಗೆ ಮನವೀ ರಕ್ಕಸರ ಮುಗಿಸೆ

ಗುಣವಂತರಾಗುವರು ~ ಪರಮಾತ್ಮನೆ ||೨೩೫||

ಮುಕ್ತಕಗಳು - ೪೬

ದಿನವೊಂದರಲೆ ಸಿದ್ಧವಾಗುವುದೆ ಸಿಹಿ ಹಣ್ಣು

ಕನಸು ನನಸಾಗುವುದೆ ಕಂಡ ಕ್ಷಣದಲೆ |

ಅನವರತ ಎಡೆಬಿಡದೆ ಸಾಧನೆಯ ಮಾಡಿದರೆ

ನಿನಗೆ ದೊರಕುವುದು ಫಲ ~ ಪರಮಾತ್ಮನೆ ||೨೨೬||


ತಿದ್ದುವರು ಇರಬೇಕು ತಪ್ಪುಗಳ ಮಾಡಿದೊಡೆ

ಕದ್ದವಗೆ ತಿಳಿಹೇಳಿ ತರಬೇಕು ಶಿಸ್ತು |

ಗೆದ್ದವಗೆ ಕೂಡ ಇರಬಹುದಲ್ಲ ದೋಷಗಳು

ಮದ್ದು ನೀಡುವನು ಗುರು ~ ಪರಮಾತ್ಮನೆ ||೨೨೭||


ಸತ್ಯನಾರಾಯಣನ ಪೂಜೆಯನು ಮಾಡುವರು

ನಿತ್ಯ ಸುಳ್ಳಿನ ಹಾರ ಪೋಣಿಸುತ ನಿಂದು

ಹತ್ಯೆಗಳ ಮಾಡಿ ತಬ್ಬಲಿಗಳನು ಸಾಕುವರು

ಕೃತ್ಯಗಳ ವೈರುಧ್ಯ ಪರಮಾತ್ಮನೆ ||೨೨೮||


ಬೆಣ್ಣೆಯನು ಕಾಯಿಸದೆ ತುಪ್ಪವಾಗದು ಕೇಳು

ಉಣ್ಣೆಯನು ಹೆಣೆಯದಿರೆ ಆಗುವುದೆ ಟೋಪಿ |

ಅಣ್ಣಯ್ಯ ಕಾಯಕವ ನೀನೆ ಮಾಡಲುಬೇಕು

ಕಣ್ಣಯ್ಯ ಫಲಕೊಡುವ ~ ಪರಮಾತ್ಮನೆ ||೨೨೯||


ಕರುಬದಿರು ನೆರೆಯವಗೆ ಕೋಟಿಗಳು ದೊರಕಿರಲು

ಪರರ ಖಾತೆಯ ಧನವು ಪರರಿಗೇ ಪ್ರಾಪ್ತಿ |

ಅರಿತಿರುವ ಚಿತ್ರಗುಪ್ತನು ಖಾತೆಗಳ ವಿವರ

ಮರೆತು ನೀಡನು ನಿನಗೆ ~ ಪರಮಾತ್ಮನೆ ||೨೩೦||


ಮುಕ್ತಕಗಳು - ೫೧

ಕತ್ತಲೆಯ ಕೂಪದಲಿ ಬೆಳಕು ಕಂಡರೆ ಹಬ್ಬ

ಎತ್ತಲಿಂದಲೆ ಬರಲಿ ಸುಜ್ಞಾನ ತಾನು |

ಸುತ್ತಲಿನ ದೀಪಗಳ ಭಕ್ತಿಯಲಿ ವಂದಿಸುವೆ

ಬೆತ್ತಲೆಯ ಮನದಿಂದ ಪರಮಾತ್ಮನೆ ||೨೫೧||


ಉರುಳುತಿದೆ ಕಾಲವದು ಹಿಂದಿರುಗಿ ನೋಡದೆಯೆ

ತಿರುಗುತಿದೆ ಮನಸು ನೆನಪುಗಳ ಸುಳಿಯಲ್ಲೆ |

ಬರುವ ನಾಳೆಗಳ ಭಯ-ಆಸೆಗಳ ಬಲೆಯಲ್ಲೆ 

ಕರಗುತಿದೆ ದಿನವೊಂದು ಪರಮಾತ್ಮನೆ ||೨೫೨||


ಪರಕೀಯ ದಾಸ್ಯದಲಿ ಬಳಲಿದ್ದ ಭಾರತಿಯೆ

ಅರಳಿರುವ ಸ್ವಾತಂತ್ರ್ಯ ಅಮೃತದಾ ಸ್ವಾದ |

ಕುರುಡಾಸೆ ಮಕ್ಕಳದು ಪಾತಕಿಗೆ ಮಣೆಹಾಕಿ

ತರದಿರಲಿ ಸಂಕೋಲೆ ಪರಮಾತ್ಮನೆ ||೨೫೩||


ಸಸಿಯು ಟಿಸಿಲೊಡೆಯುವುದು ಎಲ್ಲಿ ಬೆಳೆಯುತಲಿರಲು

ಹೊಸ ಮೋಡ ಮೂಡುವುದು ಎಲ್ಲಿ ಆಗಸದಿ

ಬಸಿರ ಸೇರುವುದೆಲ್ಲಿ ಮರುಜನ್ಮದಲಿ, ಅರಿತ

ಜಸವಂತರಾರಿಹರು ಪರಮಾತ್ಮನೆ ||೨೫೪||


ಭತ್ತದಲಿ ದೊರೆಯುವುದೆ ಬೇಳೆಯಾ ಕಾಳುಗಳು

ಹುತ್ತದಲಿ ಹಾವಿರದೆ ಹುಲಿಯಿರುವುದೇನು |

ಸುತ್ತಲಿನ ಜನ ತಪ್ಪು ಮಾಡುವುದು ಸಹಜ ಗುಣ

ಕತ್ತಿಯೆತ್ತದೆ ತಿದ್ದು ಪರಮಾತ್ಮನೆ ||೨೫೫||


ಮುಕ್ತಕಗಳು - ೫೨

ಆರು ರಿಪುಗಳು ಲಗ್ಗೆಯಿಟ್ಟಿಹವು ನರಪುರಿಗೆ

ಆರು ತಡೆವರು ಭೀಕರದ ರಕ್ಕಸರನು |

ಊರಿನೊಡೆಯನು ತಾನು ಹಿಡಿಯದಿರೆ ಖಡುಗವನು

ಗೋರಿಯಾಗ್ವುದು ಪುರವು ~ ಪರಮಾತ್ಮನೆ ||೨೫೬||


ಅವಳ ಮೆಲುನುಡಿಯ ಸಿಹಿಗಿಂತ ಸವಿಯೇನಿಲ್ಲ

ಕವಿಯು ಬಣ್ಣಿಸಲಾರ ಎದೆಯ ಅನುಭವವ |

ಸವಿಜೇನು ತುಳುಕುತಿರೆ ತುಟಿ ನೋಟ ತಾಕುತಿರೆ

ಅವನಿಯನು ಗೆದ್ದಂತೆ ~ ಪರಮಾತ್ಮನೆ ||೨೫೭||


ಕಲಿತಿರುವ ವಿದ್ಯೆಯನು ಹಂಚುತ್ತ ಬಾಳುತಿರು

ಉಳಿಯುವುದು ನಿನ್ನಲ್ಲೆ ಬೇರೂರಿ ಮರವಾಗಿ |

ಬಳಸಿದರೆ ಖಡ್ಗವದು ಹರಿತದಾ ಆಯುಧವು 

ಬಳಸದಿರೆ ಕಿಲುಬು ಕಲೆ ಪರಮಾತ್ಮನೆ  ||೨೫೮||


ಕಾಣಿಕೆಯು ಹುಂಡಿಯಲಿ ಕಾಣಿಕೆಯು ಹೆಚ್ಚುತಿದೆ

ದೇಣಿಗೆಯು ಕೇಳದೆಯೆ ಸೇರುತಿದೆ ನೋಡಿ |

ಕಾಣಿಕೆಯು ಲಾಭಕ್ಕೊ ತಪ್ಪಿಗೋ ಭಕ್ತಿಗೋ?

ಶಾಣೆಯಾದರು ಮಂದಿ ಪರಮಾತ್ಮನೆ ||೨೫೯||


ಕಳವಳದ ಘಳಿಗೆಗಳು ಬಾಳಿನಲಿ ಒರೆತಗಳು

ಕಳೆಯದಿರು ಸಂಯಮವ, ತೋರು ನೀ ಸ್ಥಿರತೆ |

ಉಳಿಬೇಕು ಪೈಪೋಟಿ ಓಟದಲಿ, ಬದುಕೆಲ್ಲ

ಮಳೆಯಲ್ಲೆ ಮೆರವಣಿಗೆ ~ ಪರಮಾತ್ಮನೆ ||೨೬೦||

ಮುಕ್ತಕಗಳು - ೫೩

ಅಕ್ಕರೆಯ ಭಾವಕ್ಕೆ ಪದಗಳೇ ಬೇಕೇನು

ಹಕ್ಕಿಗಳ ಚಿಲಿಪಿಲಿಯು ಮುದ ನೀಡದೇನು

ಉಕ್ಕಿ ಬಂದರೆ ಭಾವ ಎದೆಯ ತಾಕುವುದಲ್ಲ

ಅಕ್ಕರವು ಏಕಯ್ಯ ಪರಮಾತ್ಮನೆ ||೨೬೧||


ಪಂಚಭೂತಗಳಿಂದ ಹುಟ್ಟಿದಾ ದ್ರವ್ಯಕಣ

ಪಂಚಕೋಶಗಳಿರುವ ಬಂಡಿ ಈ ದೇಹ |

ಪಂಚೇಂದ್ರಿಯಗಳೆಂಬ ಪಂಚಾರಗಳಳೆದಿವೆ

ಪಂಚಿ ಆತ್ಮವಿರದಿರೆ ಪರಮಾತ್ಮನೆ ||೨೬೨||

ಪಂಚಾರ = ಕುದುರೆ, ಪಂಚಿ = ವ್ಯರ್ಥ


ಕಡ ಪಡೆಯಲಾಗುವುದೆ ಪರರ ಸತ್ಕರ್ಮಗಳ

ದುಡಿದು ಪಡೆಯುವುದೊಂದೆ ಅದಕಿರುವ ಮಾರ್ಗ |

ಕುಡಿಯೇಳುವುದೆ ಮಾವಿನದು ಬೇವು ಬಿತ್ತಿದರೆ

ತಡವೇಕೆ ಬಿತ್ತನೆಗೆ ~ ಪರಮಾತ್ಮನೆ ||೨೬೩||


ಎರಚಿದರು ಕಸದಂತೆ ಧನವನ್ನು ಬುವಿಯಲ್ಲಿ

ಪರಿಣಯವು ಪರಿಷೆಯನು ನಾಚಿಸುವ ರೀತಿ |

ಮುರಿಯುತ್ತ ಮದವನ್ನು ವೈರಾಣು ಬಂದಿಹುದು

ವರವಿತ್ತು ಜನಕರಿಗೆ ~ ಪರಮಾತ್ಮನೆ ||೨೬೪||


ಕಷ್ಟಕಾರ್ಪಣ್ಯಗಳು ಇರದವರು ಯಾರುಂಟು

ತುಷ್ಟಿ ಹುಡುಕಲುಬೇಕು ಕಷ್ಟಗಳ ನಡುವೆ |

ದುಷ್ಟ ಕಷ್ಟಗಳ ಪ್ರಭಾವ ಕುಂದಿಸೆ ನಿತ್ಯ

ಇಷ್ಟದೇವರನು ನೆನೆ ~ ಪರಮಾತ್ಮನೆ ||೨೬೫||

ಮುಕ್ತಕಗಳು - ೫೪

ಪೊಂಗದಿರು ಸುರಿಯುತಿದೆ ಆಗಸದ ಮಡಿಲಿಂದ

ಚಂಗದಿರ ನಡೆಸುತಿರೆ ಸಪ್ತಾಶ್ವ ರಥವ |

ತಂಗದಿರ ಮರೆಯಾದ ನಾಚಿಕೆಯ ಮುಸುಕಿನಲಿ

ರಂಗು ಬಂದಿದೆ ಬುವಿಗೆ ~ ಪರಮಾತ್ಮನೆ ||೨೬೬||


ನಿಶೆಯ ನಶೆಯಲ್ಲಿ ಮುಳುಗಿಹ ಇಹದ ಜಗಕೆಲ್ಲ

ಉಷೆಯು ಕಳೆಯುವಳು ನಿದಿರೆಯ ಮಾದಕತೆಯ |

ಭಿಷಜ ಜಾಡ್ಯವ ಕಳೆಯೆ ಓಷಧಿಯ ನೀಡುವೊಲು

ಉಷೆಯು ಕೊಡುವಳು ರವಿಯ ~ ಪರಮಾತ್ಮನೆ ||೨೬೭||

ಭಿಷಜ = ವೈದ್ಯ


ಅಮ್ಮನೊಲು ಪೊರೆಯುವ ಪ್ರಕೃತಿಯೇ ಇತ್ತಿರುವ

ನಮ್ಮದೇ ಪರಿಸರವು ನಮ್ಮ ಮನೆಯಂತೆ |

ಸುಮ್ಮನೇ ಹಾಳ್ಗೆಡವಿ ತಿಪ್ಪೆಯನು ಮಾಡಿದರೆ

ಗುಮ್ಮನಂತಾಗುವುದು ~ ಪರಮಾತ್ಮನೆ || ೨೬೮||


ಮಗುವಿನಾ ನಗೆಗಿಂತ ಹಿರಿಮದ್ದು ಉಂಟೇನು

ದುಗುಡ ದುಮ್ಮಾನಗಳ ಕಳೆಯುವುದು ಚಣಕೆ |

ಜಗದ ಕೋಟಲೆಗಳೇ ಕಾಡಿರಲು ಎಡೆಬಿಡದೆ

ಮಗುವಂತೆ ನಕ್ಕುಬಿಡು ~ ಪರಮಾತ್ಮನೆ ||೨೬೯||


ಅನೃತ ರಾಗದ್ವೇಷ ಅತಿಕಾಮ ಮದಗಳೇ

ಅನವರತ ಮನುಜನನು ಬಗ್ಗುಬಡಿ ದಿಹವು |

ಮನಗಳಿಗೆ ಕಿಲುಬು ಹಿಡಿಸುವ ಆಮ್ಲಗಳಿವೆಲ್ಲ

ಮನವ ತೊಳೆ ಕಿಲುಬ ಕಳೆ ~ ಪರಮಾತ್ಮನೆ ||೨೭೦||

ಮುಕ್ತಕಗಳು - ೫೫

ಕರವೀರಪುರದಲ್ಲಿ ನೆಲಸಿರುವ ಲಕುಮಿಯೇ

ಪೊರೆ ನೀನು ಪುತ್ರರನು ಉಸುರಿರುವ ತನಕ |

ತರುವೆ ನೀ ಭಕುತರಿಗೆ ಸಾಯುಜ್ಯ ಪದವಿಯನು

ತೊರೆದಾಗ ಅತಿಯಾಸೆ ~ ಪರಮಾತ್ಮನೆ ||೨೭೧||

ಸಾಯುಜ್ಯ = ಮೋಕ್ಷ

  

ನಡೆದಿಹೆವು ಪ್ರತಿದಿನವು ಜವರಾಯ ಇರುವೆಡೆಗೆ

ಕೊಡನಲ್ಲ ವಿಶ್ರಾಂತಿ ಅರೆಘಳಿಗೆ ಕೂಡ |

ಕೊಡ ನಮಗೆ ಬೇರೆ ದಾರಿಯ ಹಿಡಿಯಲಾಸ್ಪದವ

ಬಿಡದೆ ನೆನೆಯುತಿರು ಇದ ~ ಪರಮಾತ್ಮನೆ ||೨೭೨||


ರಾಮನಾಮವ ಜಪಿಸಿ ದಾರಿಕೆಟ್ಟವರಿಲ್ಲ

ಶ್ಯಾಮಸುಂದರನ ನೆನೆವಗೆ ಶೋಕವಿಲ್ಲ |

ಕಾಮವನು ನಿಗ್ರಹಿಸೊ ಶಕ್ತಿ ಬೆಳೆದರೆ, ಪರಂ

ಧಾಮದಾ ದಾರಿಯದು ~ ಪರಮಾತ್ಮನೆ ||೨೭೩||


ಕಸವ ತುಂಬದಿರಿ ಎಳೆಯರ ಉದರ ಮಸ್ತಕಕೆ

ಕಸುವು ಬೇಕಿದೆ ತಮ್ಮ ಬದುಕ ಸಾಗಿಸಲು |

ಸಸಿಗೆ ನೀಡಿದರೆ ಪರಿಶುದ್ಧ ಜಲ ವಾಯುಗಳ

ಫಸಲನೀಯುವುದಧಿಕ ~ ಪರಮಾತ್ಮನೆ ||೨೭೪||


ಸಾಗರದ ನೀರಿನೊಳು ಧ್ಯಾನವದು ಸಾಧ್ಯವೇ

ಜೋಗದಾ ಧಾರೆಯಲಿ ಮೀಯುವುದು ಉಂಟೆ |

ಆಗುವವು ಕಾರ್ಯಗಳು ಸೂಕ್ತದಾ ಪರಿಸರದಿ

ನೀಗಿಸಿರೆ ಅಡೆತಡೆಯ ~ ಪರಮಾತ್ಮನೆ || ೨೭೫||


Wednesday, August 17, 2022

ಸ್ವಾರ್ಥ

ಅಯ್ಯೋ ಅದೆಷ್ಟು ಸ್ವಾರ್ಥಿಗಳು ನಾವು!

ನಮ್ಮ ಮೇಲೆ ನಮಗೇಕೆ ಇಷ್ಟೊಂದು ಪ್ರೇಮ?

ಸ್ವಾರ್ಥವೇ ನಡೆಸುತಿದೆ ಈ ಜಗದ ಸಂತೆ,

ಉಗಿಬಂಡಿಯ ನಡೆಸುವ ನಿಗಿನಿಗಿ ಕೆಂಡದಂತೆ!


ಪತಿಪತ್ನಿಯರಾ ಧರ್ಮ, ತಾಯಿ ಮಕ್ಕಳ ಪ್ರೇಮ,

ಗುರುಶಿಷ್ಯರಾ ನಂಟು, ಗೆಳೆಯ ಗೆಳತಿಯರ ಸ್ನೇಹ,

ಎಲ್ಲ ಸಂಬಂಧಗಳಾಗಿವೆ ಸ್ವಾರ್ಥದಾ ಕೊಂಡಿಗಳು,

ಓಡುತಿವೆ ಹುರುಪಿಂದ ಹುರುಪಿನಲಿ ಉಗಿಬಂಡಿಗಳು!


ಏಣಿಯಾ ಅಗತ್ಯ ಈಗ ಸೂರು ಮುಟ್ಟುವ ತನಕ,

ಹಳೆಯ ಕೊಂಡಿಗಳ ಕಳಚಿ ಹೊಸತ ಜೋಡಿಸುವ ತವಕ.

ಕಾಣದಾ ಎನನ್ನೋ ಸಾಧಿಸುವ ಅಪೇಕ್ಷೆ,

ಸ್ವಾರ್ಥದಾ ಜಗದಲ್ಲಿ ಸಂಬಂಧಗಳಿಗೆ ಪರೀಕ್ಷೆ!


ಅಷ್ಟು ಆತುರವೇಕೆ ನಿಧಾನವಿರಲಿ,

ತಿರುಗುತಿದೆ ಬುವಿಯು ಸಾವಧಾನದಲಿ.

ಸ್ವಾರ್ಥವು ಸೆಳೆದಾಗ ಯೋಚಿಸು ಒಮ್ಮೆ,

ಮರೆಯದೆ ಪ್ರೀತಿ, ವಾತ್ಸಲ್ಯ, ಕರ್ತವ್ಯಗಳ ಹಿರಿಮೆ!

Tuesday, August 16, 2022

ಮುಕ್ತಕಗಳು - ೪೫

ಚಪಲದಾ ಮನಸಿಂದು ಅಂಕೆಯೇ ಇಲ್ಲದೇ

ಕಪಿಯಂತೆ ಕುಣಿಯುತಿರೆ ಎಲ್ಲೆಯಿರದಂತೆ |

ಉಪಯೋಗವೇನಿಲ್ಲ ಚುಚ್ಚುವುವು ಮಳ್ಳುಗಳು

ಜಪಮಾಲೆ ನೀಡದಕೆ ಪರಮಾತ್ಮನೆ ||೨೨೧||


ಗೆದ್ದವರ ಬಿದ್ದವರ ಕಥೆಯು ಇತಿಹಾಸವೇ

ಇದ್ದವರು ಸುಮ್ಮನೆಯೆ ನೆನಪಾಗರಲ್ಲ |

ಗೆದ್ದಲಿನ ಮನದ ಕುಹಕಿಗಳು ಕಥೆಯಾಗುವರೆ

ಸದ್ದಿರದೆ ಕರಗುವರು ~ ಪರಮಾತ್ಮನೆ ||೨೨೨||


ಎತ್ತರಕ್ಕೊಯ್ದರೂ ಮನುಜನನು ವಿದ್ಯೆಯೇ 

ಮತ್ತದೇ ಪೀಠದಲಿ ನಿಲಿಸೊ ಬಲವುಂಟೆ? |

ಬಿತ್ತಿಬೆಳೆಸುತಿರೆ ಆದರ್ಶ ನಡೆ ನುಡಿಗಳನು

ಕುತ್ತಿರದು ಪೀಠಕ್ಕೆ ಪರಮಾತ್ಮನೆ ||೨೨೩||


ಚಂದದಲಿ ತಿಳಿಹೇಳಿ ಅಕ್ಕರವ ಕಲಿಸಿರುವೆ

ಮಂದಮತಿ ಮಂಡೆಯಲಿ ಬೀರಿ ಬೆಳಕನ್ನು |

ಬಿಂದಿಗೆಗೆ ತುಂಬಿಸಿದೆ ಅಮೃತದಾ ಸಾರವನು

ವಂದಿಪೆನು ಗುರುದೇವ ~ ಪರಮಾತ್ಮನೆ ||೨೨೪||

 

ಬಿರಿದರೂ ವನಸುಮವು ಅರ್ಚನೆಗೆ ಸಿಗದಲ್ಲ

ಪರಮಪುರುಷನ ಪಾದ ಸೇರದಳಿಯುವುದು |

ತೊರೆ ಕಾಡ ಹಿಡಿ ನಾಡ ಮೂಢ ಸನ್ಯಾಸಿಯೇ

ವರವಾಗು ಪುರಜನಕೆ ~ ಪರಮಾತ್ಮನೆ ||೨೨೫||


ಮುಕ್ತಕಗಳು - ೪೪

ಶರಣು ಶರಣೆಂದವರು ಶರಣರೇನೆಲ್ಲರೂ

ಪರಮೇಶ್ವರನೆ ಶರಣು ಬಾರದಿರೆ ನಿನಗೆ |

ಭರಣಿಯಲಿ ಕಲ್ಲುಗಳು ಮಾಡಿದರೆ ಸಪ್ಪಳವ

ಅರಿಯಲಾಗದು ಅರ್ಥ ಪರಮಾತ್ಮನೆ ||೨೧೬||


ಚಕ್ರಗಳ ಹೊಂದಿರುವ ವಾಹನವು ಈ ದೇಹ

ವಕ್ರಪಥದಲಿ ಚಲಿಸಿ ದಾರಿ ತಪ್ಪಿಹುದು |

ಸಕ್ರಿಯದಿ ಆಧ್ಯಾತ್ಮ ದಿಕ್ಸೂಚಿ ನೋಡಿ ನಡೆ

ಚಕ್ರಿ ತಾ ಮೆಚ್ಚುವನು ~ ಪರಮಾತ್ಮನೆ ||೨೧೭||


ಮೌನ ಮಾತಾಡಿದರೆ ಹಲವಾರು ಅರ್ಥಗಳು

ಜೇನಿನಾ ಮಧುರತೆಯು, ಕೋಪದಾ ತಾಪ |

ಬೋನದಾ ತೃಪ್ತಿ, ಕ್ಷಮೆಯ ತಂಪು ನಲ್ನುಡಿಯು

ಮೌನಕ್ಕೆ ಭಾಷೆಯಿದೆ ~ ಪರಮಾತ್ಮನೆ ||೨೧೮||


ಕಂಡಂಥ ಕನಸುಗಳ ಧರೆಗಿಳಿಸಬಹುದಲ್ಲ

ಗಂಡೆದಯ ಕಲಿಗಳೊಲು ಬೆನ್ನು ಹತ್ತಿದರೆ |

ದಂಡವಾಗದೆ ಇರಲಿ ಕನಸುಗಳ ಬೇಟೆಗಳು

ಉಂಡು ಮಲಗುವುದೇಕೆ ~ ಪರಮಾತ್ಮನೆ ||೨೧೯||


ಬರಿದಾಗದಿರಲಿ ಸಿರಿ ಕರೆದು ದಾನವನೀಯೆ

ಕರಗಳೆಂಟಾಗೆ ಸರಿ ಸೇವೆ ಮಾಡುವಗೆ |

ಮರಿಮಕ್ಕಳಿರಬೇಕು ಪರಹಿತವ ಕೋರುವಗೆ

ಹರಸೆನ್ನ ಕೋರಿಕೆಯ ಪರಮಾತ್ಮನೆ ||೨೨೦||

ಮುಕ್ತಕಗಳು - ೪೩

ನಿನ್ನ ನೀ ತಿದ್ದುತಿರು ಅನುದಿನವು ಬೆಳೆಯುತಿರು

ಮನ್ನಿಸುತ ತಪ್ಪುಗಳ ಒಪ್ಪುಗಳ ಹುಡುಕು |

ಉನ್ನತಿಯು ದೊರಕುವುದು ಬಹುಬೇಗ ಸುಳ್ಳಲ್ಲ

ಜೊನ್ನವೇ ಜೀವನವು ~ ಪರಮಾತ್ಮನೆ ||೨೧೧||


ವನಸುಮವು ಏನ ಸಾಧಿಸಿತು ಕಿರು ಬದುಕಿನಲಿ?

ಜನಕಿತ್ತಿತೇ ಗಂಧ ಮುಡಿಯೇರಿತೇನು? |

ಬನದ ಸನ್ಯಾಸಿ ತಾ ಏನು ನೀಡಿದ ಜಗಕೆ?

ಜನನಿಗೂ ಸುಖವಿಲ್ಲ ~ ಪರಮಾತ್ಮನೆ ||೨೧೨||


ಬೆಲೆಯುಂಟು ಮರಗಳಿಗೆ ಧರೆಗೆ ಬಿದ್ದರು ಕೂಡ

ಫಲನೆರಳುಗಳ ನೀಡುವವು ಜೀವವಿರಲು |

ಕಲಿಯಬೇಕಿದೆ ಪಾಠ ಮರದಂತಹವರಿಂದ

ಬೆಲೆಬಾಳುವುದು ಬಾಳು ~ ಪರಮಾತ್ಮನೆ ||೨೧೩||


ಕನ್ನಡಿಯು ದೋಷಿಯೇ ಬಿಂಬ ಅಂದವಿರದಿರೆ

ಭಿನ್ನರೂಪವ ತೋರದದು ನಿನ್ನ ಹೊರತು |

ನಿನ್ನಜನ ದೂರಿದರೆ ನಿನ್ನ ನಡೆ ಕಂಡವರು

ಸನ್ನಡತೆ ಬೆಳೆಸಿಕೋ ~ ಪರಮಾತ್ಮನೆ ||೨೧೪||


ಕರುಗಳಿಗೆ ಇರಬೇಕು ಹಸುಗಳಾ ಮೊಲೆಯುಣಿಕೆ

ತರುವೊಂದೆ ಆಧಾರ ಬೆಳೆಯುವಾ ಲತೆಗೆ |

ಇರಬೇಕು ನಿನ್ನಾಸರೆಯು ನನಗೆ ಬಾಳಿನಲಿ

ಕರಪಿಡಿದು ನಡೆಸುವೆಯ  ಪರಮಾತ್ಮನೆ? ||೨೧೫||

ಮುಕ್ತಕಗಳು - ೪೨

ಬಯಕೆ ಸಾಮರ್ಥ್ಯದಾ ಪರಿಧಿಯಲ್ಲಿರಬೇಕು

ಬಯಸುವುದೆ ಆಗಸದ ಮಿನುಗುತಾರೆಯನು |

ಚಯನ ಸಾಲದು ಪುಟ್ಟ ಗುಡಿಸಲನು ಕಟ್ಟಲಿಕೆ

ಮಯಸಭೆಗೆ ಆಸೆಯೇ ~ ಪರಮಾತ್ಮನೆ ||೨೦೬||


ಕಾಮಾಲೆ ಕಂಗಳಿಗೆ ಕಾಣುವುದು ಸರಿಯಲ್ಲ

ಹೂಮಾಲೆ ಕಾಣುವುದು ಹಾವಿನೊಲು ಮರುಳೆ |

ಧಾಮನಿಧಿಯೊಬ್ಬನೇ ಕಳಚುವನು ಪೊರೆಯನ್ನು

ಭೂಮಾತೆ ಬಲ್ಲಳಿದ ಪರಮಾತ್ಮನೆ ||೨೦೭||


ನಲುಗಿಹನು ಮನುಜ ರಾಗದ್ವೇಷಗಳ ನಡುವೆ

ಕಲಿಯಬೇಕಿದೆ ಅಂಟಿಕೊಳದ ಚತುರತೆಯ |

ಇಳೆಯೊಳಗೆ ಸಾತ್ವಿಕದ ದಾರಿಯಿದೆ ಇದಕಾಗಿ

ಮಳೆಯೊಳಗೆ ಕೊಡೆಯಂತೆ ಪರಮಾತ್ಮನೆ ||೨೦೮||


ರಾಗವಿಲ್ಲದರವನು ವೈರಾಗ್ಯ ಪಡೆದವನು

ಭಗವಂತ ನೀಡಿದುದ ಅನುಭವಿಸಿ ತೃಪ್ತ |

ಸಿಗದಿದನು ಬೇಕೆಂದು ಆಸೆಪಡದಾ ವ್ಯಕ್ತಿ

ಜಗವ ಗೆದ್ದಿಹ ಯೋಗಿ ಪರಮಾತ್ಮನೆ ||೨೦೯||


ಒಲವಿರಲಿ ಬಾಳಿನಲಿ ನೋವುಗಳ ಮರೆಸಲಿಕೆ

ಜಲವಿರುವ ಬಾವಿಯದು ಸನಿಹವಿರೆ ಚೆಂದ

ಕಲಿಯುವಾ ಶಿಷ್ಯನಿಗೆ ಗುರುವಿರಲಿ ಸನಿಹದಲಿ

ಕಳೆತೆಗೆದು ಬೆಳಸಲಿಕೆ ಪರಮಾತ್ಮನೆ ||೨೧೦||

ಮುಕ್ತಕಗಳು - ೪೧

ಊಳಿಗವ ಮಾಡುವರು ಜೀತದಾಳುಗಳಲ್ಲ

ತಾಳಿಹರು ಕೂಳಿನಾ ಸಂಕಟವ ಹರಿಸೆ |

ಧೂಳಿನೊಲು ಕಾಣದಿರಿ ಪ್ರೀತಿಯನು ತುಂಬುತಿರಿ

ಜೋಳಿಗೆಗೆ ಅನುದಿನವು ~ ಪರಮಾತ್ಮನೆ ||೨೦೧||


ಗುಳಿಗೆಗಳು ನಕಲಿ ಕುಡಿಯುವ ಹಾಲಿನಲಿ ನೀರು

ಮಲಿನವಾಗುತಿವೆ ಜಲ ವಾಯು ಭೂಮಿಗಳು |

ಕಲಬೆರಕೆ ಯುಗದಲ್ಲಿ ಮನಗಳೇ ಕಲುಷಿತವು

ಕಲಿಯುಗದ ಶಾಪವೇ ಪರಮಾತ್ಮನೆ? ||೨೦೨||


ವೈದ್ಯರೇ ಇವರಲ್ಲ ಕಲ್ಲೆದೆಯ ದಾನವರು

ಬಾಧ್ಯತೆಯ ಮರೆತು ರೋಗಿಗಳ ದೋಚಿದರೆ |

ಆದ್ಯತೆಯ ನೀಡುತಲಿ ಸೇವೆಯನು ಮಾಡುವರು

ವೈದ್ಯನಾರಾಯಣರು ಪರಮಾತ್ಮನೆ ||೨೦೩||


ಗೋಮುಖದ ವ್ಯಾಘ್ರಗಳು ಹೊಂಚು ಹಾಕಿವೆಯಲ್ಲ

ಕಾಮನೆಯ ದಾಹಕ್ಕೆ ಆಹುತಿಯ ನೀಡೆ |

ರಾಮನನ್ನೂ ಬಿಡದ ಪಾಪಿಗಳು ಇಂಥವರು

ಪಾಮರರೆ ಯಜ್ಞಪಶು ಪರಮಾತ್ಮನೆ ||೨೦೪||


ಮಾತಿನಲಿ ಮಮತೆಯಿರೆ ನೋಟದಲಿ ಕರುಣೆಯಿರೆ

ಜಾತಿಗಳ ಕೇಳದೆಯೆ ಸೇವೆಯನು ಮಾಡೆ |

ನೇತಿಯೆನ್ನದೆ ಎಲ್ಲರಲಿ ಬೆರೆತಿರಲು, ನಾಕ

ಈತನಿರುವೆಡೆಯಲ್ಲೆ ಪರಮಾತ್ಮನೆ ||೨೦೫||

Monday, August 15, 2022

ಮುಕ್ತಕಗಳು - ೪೦

ಕೊಂಕು ಮಾತುಗಳೆ ವೈರಿಗಳು ಸಂಬಂಧದಲಿ

ಬಿಂಕ ತೊರೆ ಸನಿಹ ಕರೆ ಸವಿನುಡಿಯ ಉಲಿದು |

ಸುಂಕವಿಲ್ಲದೆ ಲಾಭ ತರುವುದೀ ವ್ಯವಹಾರ

ರಂಕನಿಗು ಸಾಧ್ಯವಿದೆ ಪರಮಾತ್ಮನೆ ||೧೯೬||


ಛಂದಸ್ಸು ತೊಡಕಲ್ಲ ಕಾವ್ಯ ರಚಿಸುವ ಕವಿಗೆ

ಚಂದದಲಿ ಲಯ ಯತಿಗಳನು ನೀಡಿ ಹರಸಿ |

ಗೊಂದಲವ ಬಿಡಿಸುವುದು ವಾಚಿಸುವ ಇನಿದನಿಗೆ

ಅಂದದ ಪ್ರಾಸದಲಿ ಪರಮಾತ್ಮನೆ ||೧೯೭||


ಹುಟ್ಟುಸಾವುಗಳ ನಡುವಿನಲಿ ದೊರೆತಿಹ ಪಾತ್ರ

ಗಟ್ಟಿ ಆತ್ಮಕೆ ಸಿಕ್ಕ ಮತ್ತೊಂದು ವೇಷ |

ತಟ್ಟುತಲೆ ತಮಟೆಯನು ಪಾತ್ರವದು ಮುಗಿದಾಗ

ಸುಟ್ಟುಬಿಡುವರು ವೇಷ ಪರಮಾತ್ಮನೆ ||೧೯೮||


ಗಾಳಕ್ಕೆ ಸಿಕ್ಕಿಹುದು ಮೀನೆಂದು ಹಿಗ್ಗದಿರು

ಗಾಳವೇ ಮೋಸಕ್ಕೆ ಮತ್ತೊಂದು ಹೆಸರು |

ಗಾಳ ಹಾಕುವುದು ತಪ್ಪಲ್ಲ ಉದರ ಪೋಷಣೆಗೆ

ಊಳಿಗವು ದೊರಕದಿರೆ ~ ಪರಮಾತ್ಮನೆ ||೧೯೯||


ನಡೆಯುತಿರೆ ಎಡವುವರು ಹತ್ತುತಿರೆ ಜಾರುವರು

ಎಡವುವರೆ, ಜಾರುವರೆ, ಕುಳಿತವರು ಕೆಳಗೆ? |

ಬಡಿವಾರ ಬಿಡಬೇಕು ಕುಳಿತು ಟೀಕಿಸುವುದನು

ಬಡಿಯದಿರು ಡೋಲನ್ನು ~ ಪರಮಾತ್ಮನೆ ||೨೦೦||

ಮುಕ್ತಕಗಳು - ೩೭

ಕರಗುವುದು ಕರಿಮೋಡ ಮೂಡುವುದು ಹೊಸ ಕಿರಣ

ಗುರುವಿನಾ ಕೃಪೆಯಿರಲು ಬದುಕಿನಲಿ ಬೆಳಕು |

ಕರುಗಳಿಗೆ ಗೋವಂತೆ ಗುರುವು ತಾನಿರಬೇಕು

ಅರಿವಿನಾ ಹಾಲುಣಿಸೆ ~ ಪರಮಾತ್ಮನೆ ||೧೮೧||


ಭಕ್ತಿಮಾರ್ಗವು ಸುಲಭ ಸಾಧನವು ಜಗದಲ್ಲಿ

ಮುಕ್ತಿಯನು ಪಡೆಯಲಿಕೆ ನರಜನುಮದಲ್ಲಿ |

ವ್ಯಕ್ತಿ ಮಾಡಿದ ಕರ್ಮ ಸುಟ್ಟು ಬೂದಿಯ ಮಾಡೊ

ಶಕ್ತಿಯಿದೆ ಭಕ್ತಿಯಲಿ ~ ಪರಮಾತ್ಮನೆ ||೧೮೨||


ನಾಕವಿದೆ ನರಕವಿದೆ ಕತ್ತಲೆಯ ಕೂಪವಿದೆ

ಬೇಕು ಎಂದರೆ ಸಿಗುವ ಲೋಕಗಳು ಇಲ್ಲಿ |

ಜೋಕೆಯಲಿ ಆರಿಸಿಕೊಳಲುಬೇಕು ಲೋಕವನು

ಭೀಕರವು ತಪ್ಪಿದರೆ ಪರಮಾತ್ಮನೆ ||೧೮೩||


ಕಾಡುಗಳ ಕಡಿಯುತ್ತ ನಾಡನ್ನು ಕಟ್ಟಿಹೆವು

ನೋಡುನೋಡುತ ಹಸಿರು ಕಾಡುಗಳೆ ಮಾಯ |

ಬೇಡುವುದು ಯಾರಲ್ಲಿ ಬರಡಾಗೆ ಭೂತಾಯಿ

ತೋಡಿಹೆವು ಗೋರಿಗಳ ಪರಮಾತ್ಮನೆ ||೧೮೪||


ಬದುಕೊಂದು ಉತ್ಸವದ ಪಂಕ್ತಿಭೋಜನವಲ್ಲ

ಉದರಕ್ಕೆ ಸಿಗದು ಎಲ್ಲರಿಗು ಭಕ್ಷ್ಯಗಳು |

ಬೆದರಿಸುತ ಪಡೆಯಲಾಗದು ಪರರ ಹಣೆಬರಹ

ಕದಿಯಲಾಗದು ಕರ್ಮ ಪರಮಾತ್ಮನೆ ||೧೮೫||

ಮುಕ್ತಕಗಳು - ೩೯

ಬಿರಿದ ಮಲ್ಲಿಗೆಯ ಕಂಪನು ತಡೆಯಲಾದೀತೆ

ಸುರಿವ ಮಳೆಹನಿಯ ಮರಳಿಸಲು ಆದೀತೆ |

ಜರಿದು ನುಡಿದಿಹ ಮಾತ ಹಿಂಪಡೆಯಲಾದೀತೆ

ಅರಿತು ನುಡಿ ಎಲ್ಲರಲಿ ಪರಮಾತ್ಮನೆ ||೧೯೧||


ಮರದ ಹಣ್ಣುಗಳೆಲ್ಲ ಪರರಿಗೋಸುಗವಾಗಿ

ಝರಿಯ ನೀರೆಲ್ಲ ದಾಹವನು ತೀರಿಸಲು |

ಪರರಿಗೇನನು ನೀಡಿರುವೆ ನಿನ್ನದೆಂಬುವುದ

ಪರಶಿವನು ಕೇಳುತಿಹ ~ ಪರಮಾತ್ಮನೆ ||೧೯೨||


ತೂಗಿರಲು ಪೈರುಗಳು, ಬಂತದೋ ಸಂಕ್ರಾಂತಿ

ಕೂಗಿರಲು ಕೋಗಿಲೆಯು, ಬಂತಲ್ಲ ಚೈತ್ರ |

ಬಾಗಿರಲು ದೈವಕ್ಕೆ, ಕಾಣವುದು ಸರಿದಾರಿ

ಮಾಗುವುದು ಬುದ್ಧಿ ಮನ ಪರಮಾತ್ಮನೆ ||೧೯೩||


ಅಡಿಗಡಿಗೆ ತೋರುವುದು ಪರರ ಲೋಪಗಳೆಮಗೆ

ಕಡೆಗಣಿಸುತಲಿ ನಮ್ಮ ಲೋಪಗಳ ಮನವು |

ಬಿಡದಿರಲು ಈ ಚಾಳಿ ಅತಿ ಶೀಘ್ರದಲ್ಲಿಯೇ

ತೊಡಕಾಗು ವುದುಬಾಳು ~ ಪರಮಾತ್ಮನೆ ||೧೯೪||


ಜೀವತೊರೆದವರ ಅಟ್ಟಕ್ಕೇರಿಸುತ ಹೊಗಳಿ

ಜೀವವಿರುವಾಗ ಮುಖ ಕಿವಿಚುತ್ತ ನಡೆದು |

ಸೋವಿ ಬೂಟಾಟಿಕೆಯ ಮೆರೆದಾಡುತಿಹೆವಲ್ಲ

ಜೀವವಿರೆ ಸವಿಯ ನುಡಿ ~ ಪರಮಾತ್ಮನೆ ||೧೯೫||

ಮುಕ್ತಕ - ೩೮

ಅಡೆತಡೆಯ ಬಳಸುತ್ತ ಹರಿಯುವುದು ಕಿರುಝರಿಯು

ಒಡೆದು ನುಗ್ಗುವುದು ತಡೆಯುವುದನ್ನು ಜಲಧಿ |

ತಡೆವ  ಶಕ್ತಿಯನರಿತು ಹೆಜ್ಜೆಯಿಡು ಬದುಕಿನಲಿ

ನಡೆಯಲ್ಲಿ ಜಾಗ್ರತೆಯು ~ ಪರಮಾತ್ಮನೆ ||೧೮೬||


ಭೂ ರಂಗಮಂಚದಲಿ ದೊರೆತೊಂದು ಪಾತ್ರವಿದು

ಭಾರಿಯಾ ಸ್ವಾಗತಕೆ ಕಥೆಯನ್ನೆ ಮರೆತೆ |

ಓರಿಗೆಯ ಪಾತ್ರಗಳ ನಟನೆಗೆ ಸ್ಪಂದಿಸುತ

ಜೋರಿನಲಿ ನಟಿಸುತಿಹೆ ಪರಮಾತ್ಮನೆ ||೧೮೭||


ಅವಕಾಶ ದೊರೆಯುವುದು ನೀ ಶ್ರಮವ ಹಾಕಿರಲು

ನವನೀತ ತೇಲಿಬಂದಂತೆ ಅಳೆಯೊಳಗೆ |

ಎವೆತೆರೆದು ಕಾಯುತ್ತ ಶಾಖವನು ನೀಡಿದರೆ

ಹವಿಯಾಯ್ತು ನವನೀತ ~ ಪರಮಾತ್ಮನೆ ||೧೮೮||

ಅಳೆ = ಮಜ್ಜಿಗೆ ಹವಿ = ತುಪ್ಪ


ತಿನ್ನಲಿರದಿರೆ ಉದರ ಪೋಷಣೆಯ ಚಿಂತೆಗಳು

ಅನ್ನವಿರೆ ಬಟ್ಟೆಬರೆಗಳ ಚಿಂತೆ, ಮುಂದೆ |

ಹೊನ್ನು, ತಲೆಸೂರು, ಜಂಗಮವಾಣಿ...ಮತ್ತೆಷ್ಟೊ

ಬೆನ್ನುಬಿಡ ಬೇತಾಳ ಪರಮಾತ್ಮನೆ ||೧೮೯||


ಸುಲಭವದು ಎಲ್ಲರಿಗೆ ಭಕ್ತಿಯೋಗದ ಮಾರ್ಗ

ಕೆಲಸವೇ ಪೂಜೆಯೆನೆ ಕರ್ಮದಾ ಮಾರ್ಗ |

ಕಲಿತು ಮಥಿಸುವವರಿಗೆ ಜ್ಞಾನಯೋಗದ ಮಾರ್ಗ

ತಿಳಿಸಿರುವೆ ಗೀತೆಯಲಿ ಪರಮಾತ್ಮನೆ ||೧೯೦||

ಮುಕ್ತಕಗಳು - ೩೬

ಕೂಡುವರು ಕಳೆಯುವರು ಲಾಭಗಳ ನಷ್ಟಗಳ

ನೋಡುವರು ತೂಗಿ ಮುಂಬರುವ ಗಳಿಕೆಗಳ |

ಜೋಡಿಯಾಗುವರು ಲಾಭವೆನಿಸಲು ಸಂಬಂಧ

ಬೇಡ ಬೀಸಿದ ಬಲೆಯು ~ ಪರಮಾತ್ಮನೆ ||೧೭೬||


ವಿನಯ ಕಲಿಸದ ವಿದ್ಯೆ ಸಮಯಕ್ಕೆ ಸಿಗದ ಹಣ

ಮೊನಚಿರದ ಆಯುಧವು ಹೂಬಿಡದ ಬಳ್ಳಿ |

ಗುಣವಿಲ್ಲದಿಹ ರೂಪ ಆದರಿಸದಿಹ ಪುತ್ರ

ತೃಣಕಿಂತ ತೃಣದಂತೆ ~ ಪರಮಾತ್ಮನೆ ||೧೭೭||


ಜುಟ್ಟು ಹಿಡಿದಲುಗಿಸಿದೆ ಕೋರೋನ ಜಗವನ್ನು

ಪಟ್ಟುಬಿಡದೆಲೆ ಮತ್ತೆ ದಂಡೆತ್ತಿ ಬಂದು |

ಕಟ್ಟುನಿಟ್ಟಾದ ಅಭ್ಯಾಸಗಳ ಕಲಿಬೇಕು 

ಮೆಟ್ಟಿ ನಿಲ್ಲಲದನ್ನು ಪರಮಾತ್ಮನೆ ||೧೭೮||


ಕನಸು ಕಾಣುವುದೆಲ್ಲ ನನಸಾಗುವುದು ಕಠಿಣ

ಕನವರಿಕೆ ಬಿಟ್ಟು ಶ್ರಮವ ಹಾಕಬೇಕು |

ಇನಿತು ಸಸಿ ಬೆಳೆಯುತ್ತ ಮರವಾಗಬೇಕಿರಲು

ದಿನನಿತ್ಯ ನೀರುಣಿಸು ~ ಪರಮಾತ್ಮನೆ ||೧೭೯||


ತೀರಿಹೋಗುತಿರೆ ಅನಿಲಗಳು ಬುವಿ ಗರ್ಭದಲಿ

ಸೌರಶಕ್ತಿಯು ಮಾನವರಿಗೆ ವರದಾನ |

ಆ ರಾಜ ರವಿಕಿರಣ ಸೋರಿಹೋಗುತಲಿರಲು

ಹೀರಿ ಹಿಡಿಯುವ ರವಿಯ ~ ಪರಮಾತ್ಮನೆ ||೧೮೦||

Monday, August 8, 2022

ವಿರಹದ ನೋವು

ಹೃದಯ ವೀಣೆಯ ಮೀಟಿ,

ಮಧುರ ರಾಗವ ನುಡಿಸು!

ಮಿಲನದಾಸೆಯ ನಾಟಿ,

ಎದೆಯ ನೋವನು ಮರೆಸು!


ಮರೆತು ಹೋದೆಯ ನೀನು?

ಜೊತೆಗೆ ಕಳೆದಾ ಸಮಯ!

ಸಾಕ್ಷಿ ರವಿ, ಶಶಿ, ಬಾನು,

ಮಿಡಿವ ನನ್ನಾ ಹೃದಯ!


ಚಂದ್ರನಣುಕಿಸಿದ ನನ್ನ,

ತೊಟ್ಟು ತಾರೆಯ ಮಾಲೆ!

ಬಾನು ಕೇಳಿದೆ ನನ್ನ,

ಕೊಡಲೆ ಮೇಘದ ಓಲೆ?


ನೀ ನುಡಿದ ಪಿಸುಮಾತು,

ಕಿವಿಯಲಿ ಗುನುಗುಟ್ಟಿದೆ!

ನಿನ ಕಣ್ಣ ಸವಿಮಾತು,

ಎದೆಯಲೇ ಮನೆ ಕಟ್ಟಿದೆ!

 

ನೀನು ಬರದಿರೆ ಈಗ,

ಮಿಡಿವುದೇ ಈ ಹೃದಯ?

ಬಂತದೋ ಬಹಬೇಗ,

ಕೊನೆಯ ಉಸಿರಿನ ಸಮಯ!

Friday, August 5, 2022

ಕರುಣೆಯ ಕಡಲು

ವಿಠ್ಠಲಾ ನೀನು ಕರುಣೆಯ ಕಡಲು, 

ನಿನ್ನಲೆ ಕಂಡೆ ಮಾತೆಯ ಮಡಿಲು! 

ಪಂಢರಪುರದಾ ಭಾಗ್ಯವು ನೀನು, 

ಬಕುತರ ಪಾಲಿನ ನಿಜ ಕಾಮಧೇನು! 


ಪಾಂಡುರಂಗ ವಿಠ್ಠಲಾ ಜಯ ವಿಠ್ಠಲ, 

ನಿನ್ನಯ ನಾಮವೇ ಸವಿ ವಿಠ್ಠಲಾ! 

ತಪ್ಪದೆ ಭಜಿಸುವೆ ನಿನ್ನಯ ನಾಮ, 

ತೋರಿಸು ಎನಗೆ ನಿನ್ನಯ ಧಾಮ! 


ಬದುಕಲಿ ಬೆಂದು ಹಣ್ಣಾಗಿಹೆನು, 

ಅಶ್ರುಧಾರೆಯ ಕಣ್ಣಾಗಿಹೆನು! 

ನಿನ್ನಯ ಪ್ರೀತಿಯ ಆಸರೆ ನೀಡು, 

ವಿಠಲನೆ ಇಂದೇ ಅಭಯವ ನೀಡು! 


ನಿನ್ನಯ ರೂಪವ ಕಣ್ತುಂಬಿಕೊಳುವೆ, 

ನಿನ್ನಯ ನಾಮವ ಎದೆಯಲಿ ತುಂಬುವೆ, 

ಭವ ಬಂಧನವಾ ಬೇಗನೆ ಬಿಡಿಸು, 

ವಿಠಲನೆ ನನ್ನನು ನಿನ್ನಲೆ ಸೇರಿಸು! 


Thursday, August 4, 2022

ಮುಂಜಾನೆಯಲಿ ಮುಗುದೆ (ಕುಸುಮ ಷಟ್ಪದಿ)

ಹೊನ್ನಕಿರಣವು ಮೂಡಿ

ಚೆನ್ನಿರಲು ಗಗನದಲಿ

ರನ್ನಮಣಿ  ಸಿಂಗರವು  ಹಸಿರೆಲೆಯಲಿ!

ಕನ್ನ ಹಾಕಿದೆ ಮನಕೆ 

ಪನ್ನೀರ ಮಣಿಮಾಲೆ

ಜೊನ್ನು ಸುರಿದಿದೆ ಮನದ ಗೂಡಿನೊಳಗೆ!


ವಸುಮತಿಯ ಮನದಾಸೆ

ಕುಸುಮದೊಲು ಹೊರಬಂದು

ಪಿಸುಮಾತ ನುಡಿಯುತಿದೆ ಪವನನೊಡನೆ!

ಕುಸುಮ ಗಂಧವ ಹೊತ್ತು

ರಸಿಕ ನಾಸಿಕಗಳಿಗೆ

ವಸುಮತಿಯ ಮನದಾಸೆ ತಿಳಿಸುತಿಹನು!


ನಲ್ಲೆಯೂ ಜೊತೆಯಿರಲು

ಸಲ್ಲಾಪ ಸಾಗಿರಲು

ಘಲ್ಲೆನುತಿಹುದು ಹೃದಯ ಗೆಜ್ಜೆ ತೊಟ್ಟು!

ಮೆಲ್ಲಮೆಲ್ಲನೆ ಮನವು

ಹುಲ್ಲೆಯಂತೆಯೆ ಜಿಗಿದು

ಹುಲ್ಲು ಹಾಸಿನ ಮೇಲೆ ಕುಣಿದಾಡಿದೆ!


ತಂಗಾಳಿ ಹಿತವಾಗಿ

ಮುಂಗುರುಳ ಮೀಟುತಿರೆ

ಮಂಗಳೆಯ ಚೆಲುವಿಂದು ಮಿತಿಮೀರಿದೆ!

ಚೆಂಗದಿರ ಹೊಳೆಯುತಿರೆ

ಕಂಗಳನು ಬೆಳಗುತಿರೆ

ಸಂಗಡವೆ ಕದಪುಗಳು ಪ್ರತಿಫಲಿಸಿವೆ!


ಕುಸುಮ ಷಟ್ಪದಿಯ ಛಂದಸ್ಸು:

೫|೫|

೫|೫|

೫|೫|೫|-

೫|೫|

೫|೫|

೫|೫|೫|-

1ನೆಯ ಹಾಗೂ 4ನೆಯ ಸಾಲುಗಳ ಮೊದಲನೆಯ ಅಕ್ಷರ ಮಾತ್ರ ಸ್ವರವಾಗಿರಬಹುದು

ಯಗಣ (U_ _ ) ಮತ್ತು  ಜಗಣ(U_UU) ಗಳನ್ನು ಬಳಸುವಂತಿಲ್ಲ (ಲಗಾದಿ ದೋಷ)


ಮುಕ್ತಕಗಳು - ೩೫

ಜೋರಿನಲಿ ಬೆಳೆದಂಥ ಮರಗಳನು ವಾಹನಕೆ

ದಾರಿ ಮಾಡಲು ಕಡಿದು, ತಾರು ಸುರಿದಾಯ್ತು |

ತಾರಿನಾ ಬಣ್ಣದಲೆ ಧನವು ಸೋರಿಕೆಯಾಗೆ

ತೋರಿಕೆಗೆ ರಸ್ತೆಯದು ~ ಪರಮಾತ್ಮನೆ ||೧೭೧||


ನರಜನ್ಮ ದೊರೆತಿಹುದು ಸತ್ಕರ್ಮ ಮಾಡಲಿಕೆ

ಸುರರಿಗೂ ನರಜನ್ಮ ಕರ್ಮ ಕಾರಣಕೆ |

ದೊರೆತಿಹುದು ಅವಕಾಶ ಆಕಾಶದೆತ್ತರದ

ಮರೆತು ನಿದ್ರಿಸಬೇಡ ~ ಪರಮಾತ್ಮನೆ ||೧೭೨||


ಸಸಿಗಳನು ನೆಡುನೆಡುತ ಮರಗಳನೆ ಬೆಳೆಸಿಬಿಡಿ

ಹಸಿರು ಗಿಡಗಳನು ಉಸಿರಂತೆ ಕಾಪಾಡಿ |

ಉಸಿರಾಗುವವು ನಮ್ಮ ಮುಂದಿನಾ ಪೀಳಿಗೆಗೆ

ಬಸಿರಾಯ್ತು ಸತ್ಕರ್ಮ ಪರಮಾತ್ಮನೆ ||೧೭೩||


ಹಸ್ತದಲಿರುವ ಸಂಪದವು ಕರಗಿ ಹೋದರೂ

ಮಸ್ತಕದ ಸಂಪದವು ಕರಗುವುದೆ ಹೇಳು |

ಪುಸ್ತಕವು, ಗುರುಮುಖವು, ವ್ಯವಹಾರ, ಪರ್ಯಟನೆ, 

ಮಸ್ತಕವ ತುಂಬುವವು ~ ಪರಮಾತ್ಮನೆ ||೧೭೪||


ಮಾಡಿರುವ ಪಾಪಕ್ಕೆ ಶಿಕ್ಷೆ ತಪ್ಪುವುದಿಲ್ಲ

ಬೇಡಿದರೆ ದೇವರನು ಕರುಣೆಯನು ತೋರ |

ಮಾಡಿದರೆ ಉಪಕಾರ ಮೂರರಷ್ಟಾದರೂ

ನೋಡುವನು ಕಣ್ತೆರೆದು ಪರಮಾತ್ಮನೆ ||೧೭೫||

ಮುಕ್ತಕಗಳು - ೩೪

ಹಿತ್ತಾಳೆಗಿವಿಯರಸಗೆ ಚಾರರೂ ಮಂತ್ರಿಗಳು

ತೊತ್ತುಗಳೆ ಆಳುವರು ರಾಜ್ಯವನು ಕೇಳು |

ಬಿತ್ತುವರು ಸಂಶಯವ ಆಲಿಸುವ ಕಿವಿಯಿರಲು

ಸತ್ತಿರದ ಮತಿಯಿರಲಿ ~ ಪರಮಾತ್ಮನೆ ||೧೬೬||


ಹೊತ್ತಲ್ಲದೊತ್ತಿನಲಿ ಉಳಬೇಡ ಉಣಬೇಡ

ಗೊತ್ತುಗುರಿ ಇಲ್ಲದೆಯೆ ಬದುಕುವುದು ಬೇಡ |

ಮತ್ತಿನಲಿ ಮುಳುಗಿಸುವ ವಿಷ ವಿಷಯಗಳು ಬೇಡ

ಚಿತ್ತಚಾಂಚಲ್ಯ ತೊರೆ ~ ಪರಮಾತ್ಮನೆ ||೧೬೭||


ಭೋಗದಲಿ ಆಸಕ್ತಿ, ಕೋಪಗಳು, ಅತಿಯಾಸೆ,

ರಾಗಗಳು, ಗರ್ವ, ಒಡಲಿನನಲವು, ಆರು |

ತೂಗುಗತ್ತಿಗಳು ತಲೆಮೇಲಿರಲು ಬುವಿಯಲ್ಲಿ  

ಸಾಗುವುದು ಸುಲಭವೇ ಪರಮಾತ್ಮನೆ || ೧೬೮||

 

ಇಳೆಯಲ್ಲಿ ಹಗಲಿರುಳು ಕತ್ತಲೆಯ ಸಾಮ್ರಾಜ್ಯ

ಬೆಳಕಿನೆಡೆ ಹೋಗುವಾ ದಾರಿಕಾಣದಿದೆ |

ಒಳಗಿರುವ ಚೈತನ್ಯವನು ಬೇಡು ದಿಕ್ಸೂಚಿ

ತಳಮಳವ ತೊರೆದಿಟ್ಟು ~ ಪರಮಾತ್ಮನೆ ||೧೬೯||


ಜಾಲಿಯಾ ಮರದ ನೆರಳಿನಲಿ ನಿಂತರೆ ಕಷ್ಟ

ಸಾಲದಾ ಸುಳಿಯಲ್ಲಿ ಸಿಲುಕಿದರೆ ನಷ್ಟ |

ಗಾಳದಾ ಮೀನನ್ನು ಹಿಡಿದಿಹುದು ಕಿರುಕೊಕ್ಕಿ

ಜೋಲಿಹೊಡೆದರೆ ಸತ್ತೆ ~ ಪರಮಾತ್ಮನೆ ||೧೭೦||

ಮುಕ್ತಕಗಳು - ೩೩

ಮರಣಗಳ ಸಾಲಾಗಿ ತಂದಿಹುದು ವೈರಾಣು

ಮರೆತಿದ್ದ ಪಾಠಗಳ ಮತ್ತೆ ನೆನಪಿಸುತ |

ಬೆರೆತಿಹವು ಋಣಧನಗಳಾ ಫಲವು, ಜೀವನವು

ಎರಡು ಮುಖಗಳ ನಾಣ್ಯ ~ ಪರಮಾತ್ಮನೆ ||೧೬೧||


ದಯೆಯಿಲ್ಲದಿರೆ ಧರ್ಮವೆಂಬುವರೆ ಬೋಧನೆಯ

ಲಯವಾಗಿಹೋಗುವುದು ಮಾನವತೆ ನಶಿಸಿ |

ಜಯವಿರಲಿ ದಯೆಯ ರಕ್ಷಿಸುವವಗೆ ಅನವರತ

ದಯೆಯಿಡುವ ಸಕಲರಲಿ ~ ಪರಮಾತ್ಮನೆ ||೧೬೨|| 


ಸಾಹಿತ್ಯ ಸಂಗೀತ ಲಲಿತಕಲೆಗಳು ಬೇಕು

ದೇಹಕ್ಕೆ ಮನಗಳಿಗೆ ಮುದ ನೀಡಲೆಂದು |

ದೇಹಿ ಎಂದರೆ ಮನಸುಗಳ ಕುಣಿಸಿ, ಸಾತ್ವಿಕದ

ದಾಹವನು ತಣಿಸುವವು ~ ಪರಮಾತ್ಮನೆ ||೧೬೩||


ಸಂಕಟವು ಬಂದಿರಲು ಸೊಂಟ ಬಗ್ಗಿಸಿ ನಾವು

ವೆಂಕಟರಮಣನ ಮೊರೆ ಹೋಗುವೆವು ಬಂಧು |

ಬಿಂಕದೀಯಾಟ ತೊರೆಯಲು ಸದಾ ನೆನೆ ಪಾದ

ಟಂಕಿಸುತ ಮನದಲ್ಲಿ ~ ಪರಮಾತ್ಮನೆ ||೧೬೪||


ದೇವ ದಾನವರ ಹೋರಾಟ ನಡೆದಿದೆ ಸತ್ಯ

ರಾವಣರು ತಲೆಯೆತ್ತಿ ನಿಲ್ಲುತಿರೆ ನಿತ್ಯ |

ಕಾವಲಿದೆ ಮನಕೆ ರಾವಣರ ಹುಟ್ಟಡಗಿಸಲು

ಕೋವಿಯೇ ಸನ್ಮತಿಯು ಪರಮಾತ್ಮನೆ ||೧೬೫||

ಮುಕ್ತಕಗಳು - ೩೨

ಬೇರು ಇದೆಯೆಂದು ನಂಬಲು ಬೇಕು ವಿಧಿಯಿಲ್ಲ

ದೂರದಾ ಮರದಲ್ಲಿ ತುಂಬಿರಲು ಹಣ್ಣು |

ಕಾರಣವು ಇಲ್ಲದೆಯೆ ಏನು ನಡೆಯುವುದಿಲ್ಲಿ?

ಬೇರಿನೊಲು ಕಾರಣವು ~ ಪರಮಾತ್ಮನೆ ||೧೫೬||


ಚೆಲ್ಲದಿರಿ ಅನ್ನವನು ಬಡವನಿಗದೇ ಚಿನ್ನ

ಒಲ್ಲೆಯೆನಿ ಬಡಿಸುವಗೆ ಎಲೆಯತುಂಬೆಲ್ಲ |

ಒಲ್ಲದಿಹ ಹೊಟ್ಟೆಯಲಿ ತುರುಕುವುದು ಚೆಂದವೇ

ಎಲ್ಲೆಯಿಡು ಎಲೆಯಲ್ಲಿ ~ ಪರಮಾತ್ಮನೆ ||೧೫೭||


ಜಗದಲ್ಲಿ ತುಂಬಿಹುದು ಎಲ್ಲೆಡೆಯು ಚೈತನ್ಯ

ಬೊಗಸೆಯನು ತರೆದಿಡುವ ಪ್ರಾಣದಾಕರಕೆ |

ಜಗದೊಡೆಯ ಸೂಸುತಿಹ ವಿಶ್ವಕಿರಣಗಳ, ನಸು

ಹಗಲಿನಲಿ ಅನುಭವಿಸು ~ ಪರಮಾತ್ಮನೆ ||೧೫೮||


ಚಮಚ ತಟ್ಟೆಗಳೆಲ್ಲ ರುಚಿಯ ಸವಿಯುವವೇನು

ಘಮದ ಹೂವಿನ ಗಂಧ ಹೂದಾನಿಗಿಲ್ಲ |

ಗಮನ ಮನನವಿರದೇ ಅಭ್ಯಾಸ ಮಾಡಿದರೆ

ಚಮಚಗಳೆ ಆಗುವೆವು ಪರಮಾತ್ಮನೆ ||೧೫೯||


ಕಲಿತೆ ಕಾಲೇಜಿನಲಿ ನಾನೆಂದು ಬೀಗದಿರು

ಕಲಿತೆಯಾ ಮಾನವತ್ವದ ಮೂಲ ಪಾಠ? |

ಕಲಿಸುವುದೆ ಸನ್ನಡತೆ ಮೂರಕ್ಕರದ ಪದವಿ?

ಕಲೆತು ಬಾಳುವುದ ಕಲಿ ~ ಪರಮಾತ್ಮನೆ ||೧೬೦|| 

ಮುಕ್ತಕಗಳು - ೩೧

ದುರುಳರನು ದೂರವಿಡು ಮರುಳರಲಿ ಮರುಕವಿಡು

ಕರುಳಬಳ್ಳಿಗಳ ನೀರುಣಿಸಿ ಬೆಳೆಸುತಿರು |

ಪರರಲ್ಲಿ ನೇಹವಿಡು ಜಂತುಗಳ ಕಾಪಾಡು

ಪರಭಾರೆ ಮಾಡದೆಲೆ ~ ಪರಮಾತ್ಮನೆ ||೧೫೧||


ಹಸಿದು ಬಂದವಗೆ ತುತ್ತನ್ನವನು ನೀಡುವುದು

ಕುಸಿದು ಕುಳಿತವಗೆ ಹೆಗಲಿನ ಆಸರೆಯನು |

ತುಸು ನೀರು ಬಾಯಾರಿ ಬಂದವಗೆ ತಪ್ಪದೆಲೆ

ಜಸದಾದ ಸಂಸ್ಕೃತಿಯು ಪರಮಾತ್ಮನೆ ||೧೫೨||


ಜೊತೆಯಲ್ಲಿ ನೆರಳಂತೆ ಕಷ್ಟದಲಿ ಹೆಗಲಂತೆ

ಕಥೆಯಲ್ಲಿ ನಾಯಕಿಯು ಈ ನನ್ನ ಕಾಂತೆ |

ಚತುರಮತಿ ಸಂಸಾರ ಜಂಜಾಟ ಬಿಡಿಸುವಲಿ

ಸತಿಯೀಕೆ ಸರಸತಿಯು ಪರಮಾತ್ಮನೆ ||೧೫೩||


ರಾಜಕೀಯದ ಮುಸುಕಿನಲಿ ಕಳ್ಳಕಾಕರಿಗೆ

ಮೋಜಿನಲಿ ರಾಜನೊಲು ಬದುಕುವಾ ಆಸೆ |

ರಾಜಧರ್ಮವನರಿತವರು ಅಲ್ಲ, ದೇಶವನು

ಬಾಜಿಯಲಿ ಕಳೆಯುವರು ಪರಮಾತ್ಮನೆ ||೧೫೪||


ಮಗುವೆಂಬ ಮಲ್ಲಿಗೆಯ ಮುಗ್ಧನಗು ಘಮಘಮವು

ನಗುವಳಿಯದಿರಲಿ ಮಗು ಬೆಳೆದಂತೆ ನಿತ್ಯ |

ಜಗದ ಕಲ್ಮಶಗಳೇ ಅಳಿಸುವವು ನಗುವನ್ನು

ನಗದಂತೆ ನಗುವ ಪೊರೆ ~ ಪರಮಾತ್ಮನೆ ||೧೫೫||

Friday, July 29, 2022

ಮುಕ್ತಕಗಳು - ೩೦

ಬಂಧುಗಳು ಇವರೇನು? ಮತ್ಸರದ ಮೂಟೆಗಳು

ಕಂದಕಕೆ ಬಿದ್ದವಗೆ ಕಲ್ಲು ಹೊಡೆಯುವರು |

ಚಂದದಲಿ ಸಂಬಂಧ ತೂಗಿಸಲು ಒಲ್ಲದಿರೆ

ಬಂಧುತ್ವವೆಲ್ಲಿಹುದು ಪರಮಾತ್ಮನೆ ||೧೪೬||


ಕಲ್ಲಿನೊಲು ಎದೆಯಿರಲು ದೂರ ಸರಿಯುವರೆಲ್ಲ

ಮುಳ್ಳಿನೊಲು ಮನವಿರಲು ಮಾತನಾಡಿಸರು

ಜೊಳ್ಳುಮಾತಿಗೆ ಬೆಲೆಯ ನೀಡುವವರಾರು? ಹೂ

ಬಳ್ಳಿಯಂತಿರಬೇಕು ಪರಮಾತ್ಮನೆ ||೧೪೭||


ಅನುಭವದೆ ಮಾಗಿರಲು ಅರಿವಿನಿಂ ತುಂಬಿರಲು

ಹಣತೆಗಳ ಹಚ್ಚುವಾ ಮನದಾಸೆಯಿರಲು |

ಘನಪಾದವನು ಬಿಡದೆ ಹಿಡಿ ಪಾಠಕಲಿಯಲೀ

ತನಗಿಂತ ಗುರುವೆಲ್ಲಿ ಪರಮಾತ್ಮನೆ ||೧೪೮||


ಗಾನಕ್ಕಿಹುದು ಮೈಮರೆಸುವ ಸನ್ಮೋಹಕತೆ

ಜೇನಿನೊಲು ಸವಿಯಿಹುದು ಚುಂಬಕದ ಸೆಳೆತ |

ಗಾನ ಪಲ್ಲವಿ ರಾಗ ತಾಳಗಳು ಔಷಧವು

ಮಾನಸಿಕ ಶಮನಿಕವು ಪರಮಾತ್ಮನೆ ||೧೪೯||


ವಿಪರೀತ ಮನಗಳೊಡೆ ಗೆಳೆತನವು ತರವಲ್ಲ

ಅಪವಿತ್ರ ಸಂಬಂಧ ಸಂದೇಹ ನಿತ್ಯ |

ಅಪನಂಬಿಕೆಯ ಬಿತ್ತಿ ದಮನಕರು ಕರಟಕರು

ಕಪಟವನೆ ಎಸಗುವರು ಪರಮಾತ್ಮನೆ ||೧೫೦||

ಮುಕ್ತಕಗಳು - ೨೯

ಧರೆಯಲ್ಲಿ ಬಾಳುವುದ ಕಲಿಯುವಾ ಮುನ್ನವೇ

ಪುರವನ್ನು ಕಟ್ಟುವುದೆ ಚಂದಿರನ ಮೇಲೆ |

ಹೊರಗೆಲ್ಲೊ ಕಾಲಿಟ್ಟು ಎಡವುವಾ ಮುನ್ನವೇ

ಧರಣಿಯಲಿ ಬದುಕೆ ಕಲಿ ಪರಮಾತ್ಮನೆ ||೧೪೧||


ದುಃಖವನು ನುಂಗುವಳು ಅನುದಿನವು ಅಮ್ಮ ತಾನ್

ದುಃಖದನಲವು ದಹಿಸುತಿಹುದು ಒಡಲಿನಲಿ |

ಯಃಕಶ್ಚಿತ್‌ ನೋವು ಕಾಣದು ನಗುಮೊಗದಲಿ, ಅಂ

ತಃಕರಣವೆನೆ ಅಮ್ಮ ಪರಮಾತ್ಮನೆ ||೧೪೨||


ವಿಜ್ಞಾನ ನೀಡುತಿದೆ ಭೌತಿಕದ ಜ್ಞಾನವನು

ವಿಜ್ಞಾನಿಯತಿಯಾಸೆ ವಿಧ್ವಂಸಕಾರಿ |

ಅಜ್ಞಾನ ಕಳೆಯುತಿದೆ ಆಧ್ಯಾತ್ಮ ಜ್ಞಾನವನು 

ಸುಜ್ಞಾನ ಬೇಕಿಂದು ಪರಮಾತ್ಮನೆ ||೧೪೩||


ನಿನ್ನ ನೀ ತಿಳಿವದಿದೆ ಮುನ್ನಡೆಯ ಸಾಧಿಸಲು

ಕನ್ನಡಿಯು ತೋರುವುದು ನಿನ್ನನೇ ನಿನಗೆ |

ಮಣ್ಣಿನಾ ದೇಹವನು ನೋಡಿದರೆ ಫಲವಿಲ್ಲ

ಕನ್ನಡಿಯ ಹಿಡಿ ಮನಕೆ ಪರಮಾತ್ಮನೆ ||೧೪೪||


ಇರುವೆಯೆಂದರೆ ಶಿಸ್ತಿರುವ ಸಿಪಾಯಿಯ ತೆರದಿ

ಕೊರತೆಯೇನಿಲ್ಲ ಮುಂದಾಲೋಚನೆಗೂ |

ಮರೆಯದೆಂದೂ ತನ್ನವರ ಕೂಡಿಬಾಳುವುದ

ಇರುವೆಯಿಂ ಕಲಿವುದಿದೆ ಪರಮಾತ್ಮನೆ ||೧೪೫||

ಮುಕ್ತಕಗಳು - ೨೮

ಗುರುವಾದ ಶಕುನಿ ತಾ ಗಾಂಧಾರಿ ಪುತ್ರನಿಗೆ

ಹರಿಯೆ ಗುರುವೆಂದ ಬಕುತಿಯಲಿ ಅರ್ಜುನನು |

ಗುರುತರವು ಗುರುಪಾದವನರಸುವ ಕಾರ್ಯವದು

ಸರಿಗುರುವು ಕೈವಲ್ಯ ಪರಮಾತ್ಮನೆ ||೧೩೬||


ಅನ್ನವನು ಉಣ್ಣುತಿರೆ ಅನ್ನದಾತನ ನೆನೆಸು

ನಿನ್ನ ಭೂಮಿಗೆ ತಂದ ಜನ್ಮದಾತರನು |

ತನ್ನಾತ್ಮದೊಂದು ಭಾಗವನಿತ್ತವನ ನೆನೆಸು

ಉನ್ನತಿಗೆ ಮಾರ್ಗವದು ಪರಮಾತ್ಮನೆ ||೧೩೭||


ಮೊಳೆತು ಮರವಾಗಲಿಕೆ ತಂತ್ರಾಂಶ ಬೀಜದಲಿ

ಬೆಳೆದು ಮಗುವಾಗೊ ತಂತ್ರ ಭ್ರೂಣದಲ್ಲಿ |

ಕೊಳೆತು ಮಣ್ಣಲಿ ಕಲೆವ ಸೂತ್ರ ನಿರ್ಜೀವದಲಿ

ಅಳೆದು ಇಟ್ಟವರಾರು ಪರಮಾತ್ಮನೆ ||೧೩೮||


ಬೇಡು ದೇವರನು ನಿನಗಾಗಿ ಅಲ್ಲದೆ, ಪರರ

ಕಾಡುತಿಹ ನೋವುಗಳ ಕೊನೆಗಾಣಿಸಲಿಕೆ |

ಓಡಿ ಬರುವನು ದೇವ ನಿಸ್ವಾರ್ಥ ಕೋರಿಕೆಗೆ

ತೀಡುವನು ನಿನ ಕರುಮ ಪರಮಾತ್ಮನೆ ||೧೩೯||


ದೇವರೆಂದರೆ ಕಾವ ದೊರೆ, ಕೋರಿಕೆಗೆ ಪಿತನೆ?

ಜೀವಸಖ, ಅರಿವ ಕೊಡುವಂಥ ಗುರುವೇನು? |

ಜೀವಿಯೊಳಿರುವ ಆತ್ಮ, ಸರ್ವಶ ಕ್ತನೆ, ಯಾರು?

ನಾವು ಭಾವಿಸಿದಂತೆ ಪರಮಾತ್ಮನೆ ||೧೪೦||

Monday, July 11, 2022

ಮುಕ್ತಕಗಳು - ೨೭

ಧನವಧಿಕವಾಗಿರಲು ಕಳೆದುಕೊಳ್ಳುವ ಚಿಂತೆ

ಧನವಿಲ್ಲದಿರೆ ಕೋಟಲೆಗಳ ಕಂತೆಗಳು |

ಮನಕಶಾಂತಿಯೆ ಅಧಿಕ ಧನದಿಂದ ಸಿಹಿಗಿಂತ

ಕೊನೆಯಿಲ್ಲದಿಹ ದುಃಖ ಪರಮಾತ್ಮನೆ ||೧೩೧||


ತ್ರಿಗುಣಗಳ ಸೂತ್ರದಲಿ ಗೊಂಬೆಗಳು ನಾವೆಲ್ಲ

ಬಗೆಬಗೆಯ ನಾಟ್ಯಗಳು ವಿಧಿಯಬೆರಳಾಟ |

ಭಗವಂತ ಬೋಧಿಸಿಹ ಯೋಗಗಳ ನಮಗೆಲ್ಲ

ಸಿಗಿದುಹಾಕಲು ಸೂತ್ರ ಪರಮಾತ್ಮನೆ ||೧೩೨||


ಮಂಗನಿಂದಾದವನು ಮಾನವನು ಎನ್ನುವರು

ಮಂಗಬುದ್ಧಿಯು ಪೂರ್ಣ ಹೋಗಿಲ್ಲವೇನು |

ರಂಗಾಗಿ ಬದುಕೆ ದಾನವನಾದ ಮಾನವನು

ಭಂಗವಾಗಲಿ ಮದವು ಪರಮಾತ್ಮನೆ ||೧೩೩||


ಉಳಿಸಿದುದ ಬಿಟ್ಟುಹೋಗಲುಬೇಕು ಮರಣದಲಿ

ಗಳಿಸುವತಿಯಾಸೆಯೇಕಿದೆ ಅರಿಯಲಾರೆ |

ಉಳಿಸಿದುದ ಕೊಂಡೊಯ್ಯುವಂತಿರೆ ಮೇಲೆ

ಇಳೆಯ ಗತಿ ಊಹಿಸೆನು ಪರಮಾತ್ಮನೆ ||೧೩೪||


ಅವರಿವರ ಕರ್ತವ್ಯವೇನೆಂದು ಕೇಳದಿರು

ರವಿಯು ಕೇಳುವನೆ ನಿನ ಕರ್ತವ್ಯ ಬಂಧು |

ನವಿರಾಗಿ ನುಡಿಯುತ್ತ ಕರ್ತವ್ಯ ಪಾಲಿಸಲು

ರವಿಯಂತೆ ನಡೆಯುತಿರು ಪರಮಾತ್ಮನೆ ||೧೩೫||

ಮುಕ್ತಕಗಳು - ೨೬

ಹದ್ದಿರದ  ಹಯಗಳೊಲು ಪಂಚೇಂದ್ರಿ ಯಗಳಿರಲು

ಬಿದ್ದಿಹುದು ಕಡಿವಾಣ ಮನವೆಂಬ ಹಿಡಿತ |

ಬುದ್ಧಿಯೇ ಕಡಿವಾಣ ಹಿಡಿದೊಡೆಯನಲ್ಲವೇ

ಬುದ್ಧಿಗಿಷ್ಟರಿವ ತಾ ಪರಮಾತ್ಮನೆ  ||೧೨೬||


ಅನುದಿನವು ಸಿಗುತಿಹುದು ಹೊಸದೊಂದು ದಿನವೆಮಗೆ

ಚಣಚಣವು ಕರಗುತಿದೆ ದಕ್ಕಿರುವ ದಿನವು |

ಕನಸಿನಲಿ ಕಳೆಯದೆಲೆ ಅತಿಮುಖ್ಯ ಚಣಗಳನು

ಇನಿತಿನಿತು ಕಲಿಯೋಣ ಪರಮಾತ್ಮನೆ ||೧೨೭||


ಸೇವೆಯನು ಮಾಡುತ್ತ ದಾದಿಯರು ಬೆಂದಿಹರು

ಸಾವುನೋವುಗಳ ದಿನನಿತ್ಯ ನೋಡುತಲಿ |

ಜೀವಕ್ಕೆ ಸೋದರಿಯು ವೈದ್ಯರಿಗೆ ಬಲದಕೈ

ನೋವಿರದಿರಲವರಿಗೆ ಪರಮಾತ್ಮನೆ ||೧೨೮||


ಕರಿನೆರಳ ಮುಷ್ಟಿಯಲಿ ನಮ್ಮ ಭೂಲೋಕವಿರೆ

ಬಿರುಗಾಳಿ ಬೀಸಿ ದೇಹಗಳು ಧರೆಗುರುಳೆ

ಗಿರಿಧರನ ಕರುಣೆಯೇ ರಕ್ಷಣೆಗೆ ಸಾಧನವು

ಮೊರೆಯಿಡುವೆ ಕಾಪಾಡು ಪರಮಾತ್ಮನೆ ||೧೨೯||


ಉಕ್ಕಿ ಬಂದರೆ ಕೋಪ ಹಿತಬಯಸುವವರಲ್ಲಿ

ಸೊಕ್ಕು ತೋರದೆ ಬಾಯಿಮುಚ್ಚೆರಡು ಘಳಿಗೆ |

ಸಿಕ್ಕಿ ಬೀಳದಿರು ನೀ ತಾಮಸದ ಬಲೆಯಲ್ಲಿ

ನಕ್ಕುಬಿಡು ಗೆದ್ದೆ ನೀ ಪರಮಾತ್ಮನೆ ||೧೩೦||

ಮುಕ್ತಕಗಳು - ೯

ಹಸ್ತವನು ಚಾಚುವೆನು ಸ್ನೇಹಕ್ಕೆ ದಾನಕ್ಕೆ

ವಿಸ್ತರಿಸಲರಿವನ್ನು ಪುಸ್ತಕಕೆ ಶರಣು |

ಮಸ್ತಕವು ಬಾಗುವುದು ದೈವಕ್ಕೆ ಹಿರಿಯರಿಗೆ

ಹಸ್ತಾಕ್ಷರವಿದೆನ್ನ ಪರಮಾತ್ಮನೆ ||೪೧||


ಒಬ್ಬನಿಗೆ ಕೊಟ್ಟೆ ಧನವಧಿಕ ಮಿತಬಲವ ಇ

ನ್ನೊಬ್ಬನಿಗೆ ದುಡಿಯಲಿಕೆ ಅಧಿಕ ತೋಳ್ಬಲವ |

ಇಬ್ಬರೂ ಕೊಟ್ಟುಪಡೆಯುತ ಬಾಳೆ ಜಗದಲ್ಲಿ 

ತಬ್ಬಲಿಗಳಾಗುವರೆ?  ಪರಮಾತ್ಮನೆ ||೪೨||


ಅತಿಧನದ ಮೋಹವದು ಮನಬಿಟ್ಟು ಪೋಗುವುದೆ

ಹಿತವಚನ ಬಂಡೆ ಮೇಗಡೆಯ ಮಳೆಯಾಯ್ತು |

ಸತಿಯು ಜೊತೆಬಿಟ್ಟರೂ ಬಿಡದಿಹುದು ಜೊತೆಯನ್ನು

ಚಿತೆಯನಕ ಬರುವುದೋ ಪರಮಾತ್ಮನೆ ||೪೩||


ನಂಬಿಕೆಯನಿಟ್ಟಿರಲು ಮೋಸಹೋಗುವ ಚಿಂತೆ

ನಂಬಿಕೆಯನಿಡದಿರಲು ಬದುಕುವುದೆ ಬವಣೆ |

ನಂಬಿಕೆಯನಿಡಬೇಕು ನಂಬುತ್ತ ನಿನ್ನನ್ನು

ನಂಬಿ ಕೆಟ್ಟವರಿಲ್ಲ ಪರಮಾತ್ಮನೆ ||೪೪||


ಇಳಿಗೆ ಬಂದಿಳಿದಿರಲು ಹಸಿಹಸಿರ ಹೊಸಹೊನಲು

ನಳನಳಿಸುತಿವೆಯಲ್ಲ ಹೊಸಬಯಕೆ ಚಿಗುರು |

ಕಳೆದುಹೋಗಿರುವಾಗ ಹಳೆನೆನಪಿನೆಲೆಗಳೂ

ತಳಿರುಟ್ಟ ಯುಗದಾದಿ ಪರಮಾತ್ಮನೆ ||೪೫||

ಪ್ರೇಮಲೋಕ (ವಾರ್ಧಕ ಷಟ್ಪದಿ)

ಪಡುವಣದ ದಿನಮಣಿಗೆ ದಣಿವಾಗಿ ದಾಹವಿರೆ

ಕಡಲಿನಲಿ ತಣಿವರಸಿ ಮುಳುಗುಹಾಕುತ್ತಿಹನು

ಕಡುಕೆಂಪಿನಾ ದೇಹ ಸಾಗರವ ತಾಕಿದೊಡೆ ತಂಪಾಗಿ ನಿದ್ರಿಸಿದನು |

ಅಡಗಿದ್ದ ಚಂದಿರನು ಮದವೇರಿ ಬಂದಿಹನು

ಮಡದಿಯರ ಜೊತೆಗೂಡಿ ರಸಸಂಜೆ ಮೋದದಲಿ

ಹುಡುಕಾಟ ಹುಡುಗಾಟ ಸರಸಸಲ್ಲಾಪಗಳು ರಾತ್ರಿಯಲಿ ಸಾಗುತಿಹವು ||

 

ಅಂಬರದ ಹೊಸ ಬೆಳಕು ಬುವಿಯಲ್ಲಿ ಚೆಲ್ಲಿರಲು

ತಂಬೆಳಕು ಕರೆಯುತಿದೆ ಸೆಳೆಯುತ ಪ್ರೇಮಿಗಳ

ಸಂಬಾಳಿಸುತ ಮಾರುತನು ತನುವ ಪುಳಕಿಸುತ ನವಲೋಕ ಸೃಷ್ಟಿಸಿಹನು |

ಅಂಬರದ ಸಂಭ್ರಮವು ಬುವಿಯಲ್ಲಿ ಬಿಂಬಿಸಿದೆ

ಹುಂಬ ಚಂದಿರ ತಾರೆಯರೊಲುಮೆ ಹೊಮ್ಮಿಸಿದೆ

ಚುಂಬಕದ ವಾತಾವರಣ ಬೆರೆಸಿ ಮೋಹದಲೆಯ ರಂಗುಗಳಾಟವ ||

ವಾರ್ಧಕ ಷಟ್ಪದಿ

ಯಶವನೇನೆಂಬೆ ಧನ ವಿದ್ಯೆ ಸಿರಿ ಸಂಪತ್ತೆ

ಪಶು ಭೂಮಿಯಧಿಕಾರ ಯೌವ್ವನದ ಬಲಗಳೇ

ದಶಕಂಠ ಹೊಂದಿದ್ದವೆಲ್ಲವೂ ಮಣ್ಣಾಗಿ ಪಶುವಂತೆ ಬಲಿಯಾದನು

ಯಶವ ಕ್ಷಣಿಕದ ಮಿಂಚಂತೆ ಕಂಡರೆಷ್ಟೋ

ನಶಿಸದಾ ಯಶವನ್ನು ಪಡೆದವರು ಕೆಲವರೇ

ವಶವಾಯ್ತು ಯಶವು ಗುಣದಲ್ಲಿ ನಿಂತವಗೆ ಹೆಸರಾಗುವನು ಕೊನೆಯವರೆಗೆ


ಕೋಪವೇ ಬಂದಿರಲಿ ಮನಸುಗಳು ಬೆಂದಿರಲಿ

ತಾಪದಾ ನುಡಿ ಬೇಡ  ಕಾತುರದ ನಡೆ ಬೇಡ

ಜೋಪಡಿಗೆ ಬೆಂಕಿಯನು ಹಚ್ಚಿಕೊಳ್ಳುವರಾರು ಮೊಗದ ಮೇಗಡೆ ಮಸಿಯನು

ಕೋಪವೇ ಸರ್ವನಾಶದ ಬೀಜ ಬಿತ್ತದಿರಿ ಬುವಿಯಲ್ಲಿ

ತಾಪತ್ರಯಗಳು ಬಾಳಿನಲಿ ಸಾಮಾನ್ಯ ವಿಧಿಯಾಟದಲಿ

ಕೋಪತಾಪಗಳಿಗಿದ್ದರಂಕುಶ ಬಾಳುಹಸನಾಗಿರಲು ಜೀವ ತಂಪು

ಮುಕ್ತಕಗಳು - ೨೫

ಡೊಂಕಿರಬಹುದು ನಾಯಿ ಬಾಲದಲಿ ಬಣ್ಣದಲಿ

ಡೊಂಕೆಲ್ಲಿಹುದು ತೋರಿ ಸ್ವಾಮಿನಿಷ್ಠೆಯಲಿ |

ಡೊಂಕು ಹುಡುಕುವ ಮುನ್ನ ಹುಡುಕೋಣ ಸದ್ಗುಣವ

ಕೊಂಕುಗುಣ ತೊರೆಯೋಣ ಪರಮಾತ್ಮನೆ ||೧೨೧||


ಕಲಿಗಾಲವಿದೆಯೆಂದು ಕೈಚೆಲ್ಲಿ ಕೂರದಿರಿ

ಕಲಿಯ ಮನದಿಂದ ಕಿತ್ತೆಸೆಯೋಣ ಎಲ್ಲ |

ಬಲಿಯಲಿಲ್ಲದೆ ಎಡೆಯು ಕಲಿಕಾಲು ಕೀಳುವನು

ಕಲೆತು ಮಾಡುವ ಬನ್ನಿ ಪರಮಾತ್ಮನೆ ||೧೨೨||


ಚಂಚಲವು ನೀರಿನೊಲು ಆಕಾಶದಗಲವದು

ಮಿಂಚಿಗೂ ವೇಗ ಬೆಂಕಿಯೊಲು ತೀ ಕ್ಷ್ಣವದು |

ಪಂಚಭೂತಗಳ ಗುಣ ಪಂಚೇಂದ್ರಿಯಗಳೊಡೆಯ

ಸಂಚು ಮಾಡುವ ಮನಸು ಪರಮಾತ್ಮನೆ ||೧೨೩||


ಅನುಕಂಪ ಕರುಣೆಗಳು ಅವನಿತ್ತ ಕೊಡುಗೆಗಳು

ಜನಕೆ ಹಂಚುವ ಕೊಂಚಕೊಂಚವಾದರೂ |

ಜನಕನಿತ್ತಾಸ್ತಿಯನು ತನುಜನುಜರಿಗೆನೀಡೆ

ನನಗೇನು ನಷ್ಟವಿದೆ ಪರಮಾತ್ಮನೆ ||೧೨೪||


ಮಲಿನವಾಗುವುದು ಮನ ಪಂಚೇಂದ್ರಿಯಗಳಿಂದ

ಕುಳಿತು ಗ್ರಹಿಸುತಿರಲು ಜಗದ ನಾಟಕವ |

ಕೊಳೆ ತೆಗೆಯಬೇಕು ದಿನದಿನ ಧ್ಯಾನಗಳಿಂದ

ತಿಳಿಯಾಗುವುದು ಮನವು ಪರಮಾತ್ಮನೆ ||೧೨೫||

ಮುಕ್ತಕಗಳು - ೨೪

ಚಿಂತೆಯೊಂದಿರೆ ಮನದಿ ನಿಶ್ಚಿಂತ ಮಾನವನು

ಚಿಂತೆಯಿಲ್ಲದಿರವನು ಜಲತೊರೆದ ಮೀನು |

ಸಂತೆಯಾಗುವುದು ಮನ ಚಿಂತೆಯಿಲ್ಲದರಂತು

ಚಿಂತೆ ಚಿಂತನೆ ತರಲಿ ಪರಮಾತ್ಮನೆ ||೧೧೬||


ಅಮ್ಮನೆನ್ನುವ ನುಡಿಯ ಒಮ್ಮೆ ನುಡಿದರೆಸಾಕು

ಒಮ್ಮೆಲೇ ಮೈಯೆಲ್ಲ ಪುಳಕಿತದ ಭಾವ

ಕಮ್ಮಿಯಾಗದು ಹೆತ್ತೊಡಲ ಮಮತೆ ಮುದ್ದಿಸುವ

ಅಮ್ಮ ನಿನಗಿರುವಳೇ ಪರಮಾತ್ಮನೆ ||೧೧೭||


ನಾವು ಸೂತ್ರದ ಗೊಂಬೆಗಳು ಸಂಶಯವೆ ಇಲ್ಲ

ಜೀವವಿಲ್ಲದ ತೊಗಲು ಗೊಂಬೆಗಳು ಅಲ್ಲ |

ದೇವನರುಹಿಹ ವಿಧಿಯ ಸೂತ್ರ ಹರಿಯುವ ವಿದ್ಯೆ

ಜೀವನಕೆ ಸೂತ್ರವಿದು ಪರಮಾತ್ಮನೆ ||೧೧೮||


ನಮ್ಮ ತಪ್ಪೆಲ್ಲವಕೆ ಬೆನ್ನೊಡ್ಡಿ ಕುಳಿತಾಗ

ಸುಮ್ಮನವು ಜಗದಿಂದ ಮರೆಯಾಗುವವೇ |

ನಮ್ಮ ಜಗ ಕುರುಡಲ್ಲ ಎಣಿಸುವುದು ತಪ್ಪುಗಳ

ಸುಮ್ಮನೇಕೀ ನಟನೆ ಪರಮಾತ್ಮನೆ ||೧೧೯||


ಇರುಳು ಕಳೆದಾ ಮೇಲೆ ಹಗಲು ಬರಲೇಬೇಕು

ಸುರಿಯುತಿಹ ಮಳೆಯೊಮ್ಮೆ ನಿಲ್ಲಲೇ ಬೇಕು |

ಧರಣಿಯೊಳು ಇದು ಸತ್ಯ ಕಾಲಮಹಿಮೆಯ ಸೂತ್ರ

ಕೊರಗದೆಲೆ ಕಾಯುವೆನು ಪರಮಾತ್ಮನೆ ||೧೨೦||


ಮುಕ್ತಕಗಳು - ೨೩

ಮನಕೆ ನೆಮ್ಮದಿಯಿಲ್ಲ ಸುಖವನ್ನು ಮರೆತಾಯ್ತು

ಧನಕನಕಗಳ ಕೂಡಿಡುವ ಲೋಭ ಮುಸುಕಿ |

ಹಣವಧಿಕವಿರೆ ಹಂಚಿಕೊಳ್ಳದಿರೆ ದೀನರಲಿ

ಧನವಾಗ್ವುದರ್ಬುದವು ಪರಮಾತ್ಮನೆ ||೧೧೧||


ಕಲಿಯುವರೆ ಬಾಲಕರು ನಾವು ಹೇಳಿದ ಕೇಳಿ

ಬಲುಬೇಗ ಕಲಿಯುವರು ನಮ್ಮ ನಡೆ ನೋಡಿ |

ಕಲಿಯಲೇಬೇಕಿಹುದು ಕಲಿಸುವಾ ಮುನ್ನವೇ

ಕಲಿಯಬೇಕಿದೆ ಬೇಗ ಪರಮಾತ್ಮನೆ ||೧೧೨||


ಕಾವನಿಗೆ ಬೇಕೇಕೆ ಕಾವಲಿನ ಕೋಟೆಗಳು

ದೇವನಿಗೆ ಬೇಕಿಲ್ಲ ರಜತಕನಕಗಳು |

ಹೂವುಹಣ್ಣುಗಳನರ್ಪಿಸೆ ಸಾಕು ಬಕುತಿಯಲಿ

ಗೋವಿಂದನನೊಲಿಸಲು ಪರಮಾತ್ಮನೆ ||೧೧೩||


 ಬೆದರಿಹರು ಪಿಳ್ಳೆಗಳು ಕೋರೋನ ಗುಮ್ಮಕ್ಕೆ

 ಕದದಾಚೆ ಕಾಲಿಡರು ಕಾಡುತಿದೆ ಭೀತಿ |

 ಚದುರಿ ಹೋಗುತಿದೆ ಆತ್ಮಸ್ಥೈರ್ಯ ಚಿಣ್ಣರದು

 ಬದುವ ಕಳೆ ಹೆಚ್ಚುತಿದೆ ಪರಮಾತ್ಮನೆ ||೧೧೪||


ಮಮತೆಯಾ ಹಿತವಿರಲಿ ಗೆಳೆತನದ ಸವಿಯಿರಲಿ

ಸುಮದ ಸೊಬಗಿರಲಿ ಚಂದನದ ಘಮವಿರಲಿ |

ಸಮತೆಯ ಸ್ವಾದ ನಿಸ್ವಾರ್ಥ ತಳಹದಿಯಿರಲಿ

ನಮದೆನುವ ನಡತೆಯಲಿ ಪರಮಾತ್ಮನೆ ||೧೧೫||

ಮುಕ್ತಕಗಳು - ೨೨

ಪಿಡುಗು ಕಾಡಿದೆ ವಿಶ್ವದಾದ್ಯಂತ ಎಲ್ಲರನು

ಕುಡಿಕೆ ಹೊನ್ನು ಗಳಿಸುವ ಪಿಡುಗು ಕೆಲವರನು |

ಎಡೆಬಿಡದೆ ಬದುಕುಗಳ ಹೆಣಮಾಡಿ ಧನಗಳಿಸೆ

ತಡೆಯುವಾ ಗಂಡೆಲ್ಲಿ ಪರಮಾತ್ಮನೆ ||೧೦೬||


ಮೆರವಣಿಗೆ ಸಾಗುತಿದೆ ರಸ್ತೆಯಲಿ ಗಾಡಿಗಳ

ಪರಿವೆಯಿಲ್ಲದೆ ವಿಷಾನಿಲವ ಚೆಲ್ಲುತಲಿ

ಹೊರಟಿರುವುದೆಲ್ಲಿಗೆನೆ ಮರಳಿಬಾರದಕಡೆಗೆ

ನೆರೆಯಲ್ಲೆ ಸುಡುಗಾಡು ಪರಮಾತ್ಮನೆ ||೧೦೭||


ಪ್ರಾರ್ಥನೆಗೆ ಮೀರಿರುವುದೇನಾದರುಂಟೇನು

ಆರ್ತನಾ ಬೇಡಿಕೆಯಲಿದೆ ಪೂರ್ಣಶಕ್ತಿ  |

ಧೂರ್ತರಿಗೆ  ನಿಲುಕದದು ಮನದೆ ಕಲ್ಮಶವಿರೆ

ಪ್ರಾರ್ಥನೆಗೊಲಿಯುವೆ ನೀ ಪರಮಾತ್ಮನೆ ||೧೦೮||


ಹೊರಲು ಹೆಗಲುಗಳಿಲ್ಲ ಸುಡಲು ಕಟ್ಟಿಗೆಯಿಲ್ಲ

ಉರುಳುತಿಹ ದೇಹಗಳ ಹೂಳಲೆಡೆಯಿಲ್ಲ |

ಕಿರುಬಗಳು ಕದಿಯುತಿವೆ ದೇಹದಂಗಾಂಗಗಳ

ಸರಿದಾರಿ ತಪ್ಪಿಹೆವು ಪರಮಾತ್ಮನೆ ||೧೦೯||


ವೈರಾಣುವಾಗಿಹನು ಮನುಜನೇ ಭೂರಮೆಗೆ

ತೀರದಾಸೆಗಳಿಂದ ಘಾಸಿಗೊಳಿಸಿಹನು |

ವೈರಾಣು ಕಳಿಸಿಹಳು ದೋಷಿಗಳ ನಾಶಕ್ಕೆ

ಮಾರಕಾಸ್ತ್ರದ ಧಾಳಿ ಪರಮಾತ್ಮನೆ ||೧೧೦||

ಮುಕ್ತಕಗಳು - ೨೧

ಮಾರಾಟವಾಗುತಿವೆ ಶಾಲುಪೇಟಗಳಿಂದು

ಕೋರಿದವರಿಗೆ ಮಕುಟವಾಗುತಿದೆ ಪೇಟ

ಮಾರಾಟವಾಗುತಿವೆ ವೇದಿಕೆಯ ಮಧ್ಯದಲಿ

ಜೋರಿನಾ ವ್ಯಾಪಾರ ಪರಮಾತ್ಮನೆ ||೧೦೧||


ನಗುನಗುತಲಿರಬೇಕು ನವಸುಮವು ಅರಳುವೊಲು 

ಮಗುವಿನಾ ನಗುವಂತೆ ಪರಿಶುದ್ಧವಾಗಿ |

ಬಿಗಿದ ಮೊಗಗಳ ಸಡಿಲಗೊಳಿಸಿ ನೋವ ಮರೆಸಲು

ನಗುವೆ ನೋವಿಗೆ ಮದ್ದು ಪರಮಾತ್ಮನೆ ||೧೦೨||


ತಪ್ಪು ಮಾಡದವರಾರುಂಟು ಜಗದಲಿ ತಮ್ಮ

ತಪ್ಪನೊಪ್ಪಿಕೊಳುವವರತಿವಿರಳವಿಹರು |

ತಪ್ಪನಿತರರ ಮುಡಿಗೆ ಮುಡಿಸುವರು ಬಲುಬೇಗ

ತಪ್ಪ ನುಡಿದಿರೆ ತಾಳು ಪರಮಾತ್ಮನೆ ||೧೦೩||

ತಾಳು = ಸಹಿಸಿಕೋ


ರೋಗಿಗಳ ನೋವಿನಲಿ ನೋಟು ಕಂಡರು ಕಂತೆ

ಯೋಗವೋ ಅತಿಧನದ ಮೋಹವೋ ಕಾಣೆ |

ಜೋಗುಳವ ಹಾಡುವರೆ ಚಾಟಿ ಹಿಡಿದಂತಾಯ್ತು

ಹೋಗುತಿವೆ ಜೀವಗಳು ಪರಮಾತ್ಮನೆ ||೧೦೪||


ಹಿಂದಿನದ ನೆನೆಯುತಿರೆ ನೋವು ಮರುಕಳಿಸುವುದು

ಮುಂದಿನದ ಯೋಚಿಸಲು ಮೂಡುವುದು ಭಯವು |

ಇಂದು ನಮ್ಮೊಂದಿಗಿರೆ ತಪ್ಪು ಮಾಡದಿರೋಣ

ಎಂದಿಗೂ ಸರಿದಾರಿ ಪರಮಾತ್ಮನೆ ||೧೦೫||

ಕೃಷ್ಣಕವಿ: ಕನ್ನಡ ಕಾವ್ಯಲೋಕದ ಕುಹೂಗಾನ

    ಕೃಷ್ಣಕವಿಯವರ ʻಸ್ವಾತಿ ಮುತ್ತುಗಳುʼ ಕೃತಿಗೆ ಕೆ. ರಾಜಕುಮಾರ್‌ ಅವರ ಮುನ್ನುಡಿ

     ಕೃಷ್ಣಕವಿ: ಕನ್ನಡ ಕಾವ್ಯಲೋಕದ ಕುಹೂಗಾನ

    ಮುಕ್ತಕಗಳೆಂಬ ರಸಪಾಕವನ್ನು ಓದುಗರಿಗೆ ಸವಿಯಲು ನೀಡಿರುವ ಕೃಷ್ಣಕವಿಯವರು ತಮ್ಮ ಅಭಿವ್ಯಕ್ತಿಗಾಗಿ ಕಾವ್ಯವನ್ನೇ ಪ್ರಧಾನ ಮಾಧ್ಯಮವನ್ನಾಗಿ ಆರಿಸಿಕೊಂಡವರು. ಅವರದು ಸುಲಭದ ಹಾದಿಯಲ್ಲ; ದುರ್ಗಮ ಹಾದಿ. ಅವರು ತಮಗೆ ತಾವೇ ಸವಾಲುಗಳನ್ನು ಎಸೆದುಕೊಳ್ಳುವವರೂ ಹಾಗೂ ಸಮರ್ಪಕ ಉತ್ತರ ಕಂಡುಕೊಳ್ಳುವವರೂ ಹೌದು. ಅವರದು ಸಾಹಸದ ನಡೆ. ತೋಚಿದ್ದನ್ನು ಗೀಚಿ ಕಾವ್ಯವೆಂದು ಪ್ರಸ್ತುತಪಡಿಸುವ ಪೈಕಿ ಅವರಲ್ಲ. ಅವರು ಒಂದು ಚುಟುಕು ಬರೆದರೂ ಒಂದು ನೀಳ್ಗವನ ರಚಿಸಿದರೂ ಅಲ್ಲೊಂದು ಉದ್ದೇಶವಿರುತ್ತದೆ; ಸಂದೇಶವಿರುತ್ತದೆ. ಅವರಿಗೆ ಕಾವ್ಯ ನವನವೋನ್ಮೇಷಶಾಲಿ. ಹಾಗಾಗಿ ಅವರು ಯಾವುದೇ ಒಂದಕ್ಕೆ ಜೋತುಬಿದ್ದವರಲ್ಲ, ಅವರದು ನಿರಂತರ ಅನ್ವೇಷಣೆ; ಅದ್ಭುತ ಧೀಶಕ್ತಿ. ಅವರು ಕಾವ್ಯರಚನೆಗೆ ತೊಡಗಿ ಹದಿನೆಂಟು ವರ್ಷಗಳಾಗುತ್ತಿವೆ. ಹದಿನೆಂಟು ಎಂಬ ಈ ನಿರಂತರ ಯಾನದಲ್ಲಿ ಅನೇಕ ಮೈಲುಗಲ್ಲುಗಳನ್ನು ನೆಟ್ಟಿದ್ದಾರೆ. ನಮ್ಮ ನಡುವಿನ ಭರವಸೆಯ ಕವಿ ಎಂಬ ಶ್ಲಾಘನೆಗೆ ಪಾತ್ರರಾಗಿದ್ದಾರೆ.

    ಅವರ ಮೊದಲ ಪ್ರಯತ್ನವೇ ಚಿತ್ರ-ಕವನ ಸಂಕಲನ. ತಾವು ದೇಶ, ವಿದೇಶಗಳಲ್ಲಿ ಕ್ಲಿಕ್ಕಿಸಿದ್ದ ಆಯ್ದ ಚಿತ್ರಗಳಿಗೆ, ಚಿತ್ರಕ್ಕೊಂದರಂತೆ ಕವನ ಹೆಣೆದರು. ಕನ್ನಡದಲ್ಲಿ ಹೀಗೆ ದೃಶ್ಯ ಮತ್ತು ಕಾವ್ಯವನ್ನು ಒಟ್ಟಿಗೆ ಬೆಸೆದು ಹೊರತಂದ ಸಂಕಲನ ಅದೇ ಮೊದಲು. ಅದಕ್ಕೆ ಎಲ್.ಎಸ್. ಶೇಷಗಿರಿ ರಾವ್‌ ಅವರ ಮುನ್ನುಡಿ, ಜರಗನಹಳ್ಳಿ ಶಿವಶಂಕರ್‌ ಅವರ ಬೆನ್ನುಡಿಯ ಶ್ರೀರಕ್ಷೆ ಇತ್ತು. ಅವರು ಜಗಲಿ(ವಾಟ್ಸಾಪ್)ಯಲ್ಲಿ ಏಕಾಕ್ಷರ ಕವಿತೆ ಬರೆಯಲು ಆರಂಭಿಸಿದರು. ಹಲವು ಹತ್ತು ಕಾವ್ಯಾಭ್ಯಾಸಿಗಳೂ ಇದರಿಂದ ಪ್ರಭಾವಿತರಾಗಿ ತಾವೂ ಪ್ರಯೋಗಿಸಿ ನೋಡಿದರು. ಇತ್ತೀಚೆಗೆ ಮುಕ್ತಕಗಳನ್ನು ರಚಿಸಲಾರಂಭಿಸಿದರು. ಮುಕ್ತಕ ಕವಿಗಳ ಪಡೆಯೇ ಹುಟ್ಟಿಕೊಂಡಿತು. ಹಾಗಾಗಿ ಅವರಿಗೆ ʻಅಭಿಮಾನಿ ದೇವರುʼಗಳಿದ್ದಾರೆ ಎನ್ನಬಹುದು. ಕಾವ್ಯೋದ್ಯಾನದ ಹೊಸ ಕುಕಿಲು ಎಸ್. ಕೃಷ್ಣಮೂರ್ತಿ. ಅವರು ಈಗ ʻಕೃಷ್ಣಕವಿʼ ಎನ್ನುವ ಕಾವ್ಯನಾಮವನ್ನು ಧರಿಸಿದ್ದಾರೆ.

    ಸಾವಿರ ವರ್ಷಗಳನ್ನೂ ಮೀರಿದ ನಿಡಿದಾದ ಇತಿಹಾಸ ಈ ಮುಕ್ತಕಗಳದ್ದು. ಇತಿಹಾಸದ ಹಿಮದಲ್ಲಿ ಮುಕ್ತಕವೆಂಬ ಕಾವ್ಯಪ್ರಕಾರ ಹೂತುಹೋಯಿತೇ ಎಂದೆನಿಸಿದಾಗ ಅರುಣಪಲ್ಲವವಾಗಿ ಬಿಸುಪು ಸೋಕಿ, ಹಿಮ ಕರಗಿ, ಕರಗಿ, ಮುಕ್ತಕಗಳ ಸಿಂಹಾಸನ ಮಾಲೆ ಮತ್ತೆ ಚಾರ್‌ಧಾಮದಂತೆ ಕಂಗೊಳಿಸುವಂತಾಗಿದೆ. ಇತ್ತೀಚೆಗೆ ಅದು ಮತ್ತೆ ಹುಲುಸಾಗಿ ಬೆಳೆಯುತ್ತಿದೆ. ಹಲವು ಬಗೆಯ ಪ್ರಯೋಗಗಳಿಗೆ ಕನ್ನಡ ಈಗ ಕನ್ನೆನೆಲ. ನವ ಸಾಮಾಜಿಕ ಮಾಧ್ಯಮಗಳು ಈ ಪ್ರಯೋಗಗಳಿಗೆ ಆಸರೆ ಮತ್ತು ನೆಲೆಯನ್ನು ಒದಗಿಸಿವೆ. ಮುಕ್ತಕ ಎಂದರೆ ಬಿಡಿ ಪದ್ಯ, ಒಂದು ರೀತಿಯ ಚುಟುಕು. ಇನ್ನೊಂದು ಪದ್ಯದ ಆಸರೆಯಿಲ್ಲದೆ ಸ್ವತಂತ್ರವಾದ ಹಾಗೂ ಚಿಕ್ಕ-ಚೊಕ್ಕ ಪದ್ಯವೇ ಮುಕ್ತಕ. ಅದರದು ಸ್ವತಂತ್ರಭಾವ. ಅದೊಂದು ರೀತಿಯ ಸಂಕೀರ್ಣ ಅಂಕಗಣಿತವೂ ಹೌದು. ಆದರೆ ಮೇಲ್ನೋಟಕ್ಕೆ ತನ್ನಲ್ಲಿನ ಈ ಲೆಕ್ಕಾಚಾರದ ಯಾವುದೇ ಸುಳಿವನ್ನು ನೀಡದೆ ಸಂವಹನವನ್ನು ಸಾಧಿಸುತ್ತದೆ. ಇದೀಗ ಮುಕ್ತಕ ಸಾಮ್ರಾಟರದೇ ಒಂದು ತಂಡ. ಅವರ ಮುಕ್ತಕಗಳದ್ದೇ ಚುಂಬಕ ಗಾಳಿ. ಇದು ಪ್ರಬಲ ಮಾರುತವೂ ಹೌದು. ಚುಟುಕಗಳಿಗೆ, ಹನಿಗವನಗಳಿಗೆ ಇಲ್ಲದ ಬಿಗಿಬಂಧ ಮುಕ್ತಕಗಳಿಗಿದೆ. ಇತ್ತೀಚೆಗೆ ಚುಟುಕು, ಹನಿಗವನ, ಹಾಯ್ಕು, ಟಂಕಾ, ರುಬಾಯಿ, ಖಸಿದಾ, ಅಬಾಬಿ, ಮಸ್ನವಿ ಹೀಗೆ ಎಲ್ಲವನ್ನೂ ಸಗಟಾಗಿ ಮುಕ್ತಕಗಳೆಂದು ಕರೆಯಲಾಗುತ್ತಿದೆ. ಈ ಅಪವ್ಯಾಖ್ಯಾನ ಮತ್ತು ಅಪವರ್ಗೀಕರಣ ನಿಲ್ಲಬೇಕು. 

    ಚುಟುಕು, ಹನಿಗವನ, ಮುಕ್ತಕ ಇವೆಲ್ಲವೂ ಈ ಕಾಲದ ಅಗತ್ಯಗಳು. ತೆರೆಯ ಮರೆಗೆ ಸರಿದಿದ್ದ ಮುಕ್ತಕ ಪ್ರಕಾರ ಮತ್ತೆ ಮೈಕೊಡವಿಕೊಂಡು ಲಗುಬಗೆಯಲ್ಲಿ ವಿಜೃಂಭಿಸುತ್ತಿರುವುದಕ್ಕೆ ಇದೂ ಒಂದು ಕಾರಣ. ಇದೀಗ ಕನ್ನಡದಲ್ಲಿ ಮುಕ್ತಕ ಮಣಿಗಳಿಗೆ ಮೀಸಲಾದ ಜಗಲಿ(ವಾಟ್ಸಾಪ್) ಗುಂಪುಗಳಿವೆ; ವೇದಿಕೆಗಳಿವೆ, ಸಂಘಟನೆಗಳಿವೆ, ಸಂಸ್ಥೆಗಳಿವೆ. ಮುಕ್ತಕಗಳ ನಿತ್ಯೋಪಾಸಕರಿದ್ದಾರೆ.  ಅವರಿಗೆ ಮುಕ್ತಕಗಳೇ ವೇದಮಂತ್ರ. ವೇದಗಳೂ ಮುಕ್ತಕ ರಚನೆಯ ಮಾದರಿ ತಾನೆ? ಇದೀಗ ನಾಡಿನೆಲ್ಲೆಡೆ ಮುಕ್ತಕರದೇ ಚಿಲಿಪಿಲಿ. ನಿಂತ ನೆಲ ಸರಿದರೂ, ಹಿಡಿದ ಹುಡಿ ಜಾರಿದರೂ, ಕೈಯಲ್ಲಿನ ಕಲಮು ಮಾತ್ರ ನಿಲ್ಲಲಾರದು. ಕಲಮು ಇಲ್ಲದಿದ್ದರೇನಂತೆ ಕಾಗದರಹಿತವಾಗಿ ಮುಕ್ತಕಗಳನ್ನು ರಚಿಸಲು ಬೆರಳತುದಿಯೆಂಬ ವಿಸ್ಮಯವೊಂದಿದೆ!

    ಕೃಷ್ಣಕವಿಯವರು ಮುಕ್ತಕಗಳ ಮೂಲಕ ಆದರ್ಶವನ್ನು ಪ್ರತಿಪಾದಿಸಿದ್ದಾರೆ. ಸಮಾಜವನ್ನು ತಿದ್ದಲು, ಶುಚಿಗೊಳಿಸಲು ಅವರು ಮುಕ್ತಕಗಳೆಂಬ ಬಾಣಗಳನ್ನು ಪ್ರಯೋಗಿಸಿದ್ದಾರೆ. ಅವರು ಮುಕ್ತಕಗಳಿಗೆ ʻಸ್ವಚ್ಛಕʼ ಗುಣವನ್ನು ಲೇಪಿಸಿದ್ದಾರೆ. ಹಾಗಾಗಿ ಅವುಗಳ ರಚನೆಯಲ್ಲಿ ಅವರಿಗಿರುವ ಸದುದ್ದೇಶವನ್ನು ಗಮನಿಸಬಹುದು. ಸಮಾಜದ, ಸಮೂಹದ ಆಮಿಷಗಳಿಗೆ, ಆವೇಗಕ್ಕೆ ಒಂದು ನೈತಿಕ ಅಂಕುಶವನ್ನು ಹಾಕಲು ಯತ್ನಿಸಿದ್ದಾರೆ. ಕೆಳಗಿನ ಮುಕ್ತಕಗಳು ಈ ಮಾತಿಗೆ ಪೂರಕವಾಗಿವೆ:


ಒಲವಿರಲಿ ಮಕ್ಕಳಲಿ ನಲ್ಮೆ ಮಾಸದಹಾಗೆ       ಸಾಲುಮರಗಳ ಬೆಳೆಸಿ ನೆರಳನಿತ್ತರು ಹಿಂದೆ

ಛಲವೇಕೆ ಬಹುಧನದ ಬಳುವಳಿಯ ಕೊಡಲು? |       ಸಾಲುಸಾಲಾಗಿ ಕತ್ತರಿಸುತಿಹೆವಿಂದು |

ಬಲಿಯಾಗುವರು ದುಂದು ದುಶ್ಚಟದ ಮೋಹಕ್ಕೆ       ಸಾಲವಾದರು ಕೂಡ ಬೆಳಸದಿರೆ ಮರಗಳನು

ಕಲಿಗಾಲ ತರವಲ್ಲ ~ ಪರಮಾತ್ಮನೆ ||       ಸಾಲಾಗಿ ಮಲಗುವೆವು ~ ಪರಮಾತ್ಮನೆ ||


    ತಾವು ಆಡಿದ, ಆಚರಿಸಿದ, ಅನುಸರಿಸಿದ, ಅಳವಡಿಸಿಕೊಂಡ ಆದರ್ಶಗಳನ್ನೇ ಮುಕ್ತಕಗಳಲ್ಲೂ ಕಂಡರಿಸಿದ್ದಾರೆ. ಅವರು ಸಂಯಮಿ, ಸಾತ್ತ್ವಿಕ ನಡೆ ಅವರದು. ಅವರು ಅಭಿವ್ಯಕ್ತಿಯಲ್ಲಿ ಸಾಧಿಸಿರುವ ಆಪ್ತಭಾವ ಪರಿಣಾಮಕಾರಿಯಾದುದು. ಶ್ಲೇಷೆಯನ್ನೇ ಕ್ಲೀಷೆ ಎನ್ನುವಷ್ಟರ ಮಟ್ಟಿಗೆ ಅಸ್ತ್ರವಾಗಿ ಝಳಪಿಸುವವರಲ್ಲ. ಪನ್ನು, ಪಂಚು ಎಂಬ ಉರುಳುಗಳಿಗೆ ಕೊರಳು ಒಡ್ಡದೆ ಅಪಾಯದಿಂದ ಪಾರಾಗಿದ್ದಾರೆ. ಅಗ್ಗದ ಜನಪ್ರಿಯತೆಗೆ ಹಾತೊರೆದು ಪಾಕವನ್ನು ಅಳ್ಳಕವಾಗಿಸಿಕೊಂಡವರಲ್ಲ. ಅವರು ತಮ್ಮ ಇಚ್ಛೆಗಾಗಿ ಬರೆದವರು, ಮುಕ್ತಕಗಳಲ್ಲಿ ಸಾಧಿಸಿದ ಗಾಂಭೀರ್ಯ ಮತ್ತು ತೋರಿಸಿದ ಸಂಯಮ ಉಲ್ಲೇಖಾರ್ಹ. ಕಾವ್ಯದ ಕಡುಮೋಹಿ. ಹತ್ತಿರ ಹತ್ತಿರ ಎರಡು ದಶಕಗಳಿಂದ ಸೃಜಿಸುತ್ತ ಸಾಗಿದ್ದರೂ ದಣಿದಿಲ್ಲ, ಬಸವಳಿದಿಲ್ಲ, ಉತ್ಸಾಹ ಉಡುಗಿಲ್ಲ, ಧ್ವನಿ ಕುಗ್ಗಿಲ್ಲ. ಇವರ ಕಾವ್ಯ ಗುಡುಗು-ಮಿಂಚು, ಸಿಡಿಲು-ಸದ್ದು ಇಲ್ಲದೆ ಒಂದೇ ಸಮನೆ ಸುರಿವ ಮುಸಲಧಾರೆ. ಇಂತಹ ಆರ್ಭಟಗಳು ಇಲ್ಲದಿರುವುದರಿಂದಲೇ ಈ ಮುಕ್ತಕಗಳು ಅನನ್ಯ. ಈ ಸಂಕಲನದ ಮುಕ್ತಕಗಳು ಈಗಾಗಲೇ ಅವರಿಗೆ ಅಸ್ಮಿತೆ ನೀಡಿವೆ. 

    ಕೆಲವು ಮುಕ್ತಕಗಳನ್ನು ಅವರು ತಮ್ಮ ಮತ್ತು ತಾವು ನಂಬಿದ ಪರಮಾತ್ಮನ ನಡುವಿನ ಅನುಸಂಧಾನದ ಸೇತುವೆಯನ್ನಾಗಿಸಿದ್ದಾರೆ. ಈ ಕೆಳಗಿನ ಮುಕ್ತಕಗಳಲ್ಲಿ ಆ ಭಾವವನ್ನು ಕಾಣಬಹುದು:


ಬಿಸಿಯೂಟ  ಹಸಿವಳಿಸೆ, ಸಿಹಿನೀರು ಮನತಣಿಸೆ,     ಒಳಗಿರುವೆ ಹೊರಗಿರುವೆ ಕಣಕಣದೆ ಕುಳಿತಿರುವೆ

ಉಸಿರಾಡೆ ತಂಗಾಳಿ, ಸೂರು ತಲೆಮೇಲೆ |     ಹೊಳೆಯ ಮೀನಿನ ಸುತ್ತಲಿನ ನೀರಿನಂತೆ |

ಹಸಿವ ತೀರಿಸುವುಗಳನೆಲ್ಲವನು ನನಗಿತ್ತೆ     ಬಳಿಯಲೇ ಇದ್ದರೂ ಕಾಣೆ ನೀ ಬರಿಗಣ್ಗೆ

ಕೊಸರು ಬೇಡೆನು ನಿನ್ನ ಪರಮಾತ್ಮನೆ ||     ಒಳಗಣ್ಣ ತೆರೆಸು ನೀ ಪರಮಾತ್ಮನೆ ||


    ಇನ್ನು ಕೆಲವು ಮುಕ್ತಕಗಳು ಸನಾತನ ಧರ್ಮದ ತತ್ತ್ವಗಳನ್ನು ಸರಳ ಭಾಷೆಯಲ್ಲಿ ಬಿಂಬಿಸಿವೆ. ಈ ಕೆಲವು ಮುಕ್ತಕಗಳು ಅದಕ್ಕೆ ಸಾಕ್ಷಿ:


ಪರರು ಬರಿಯಂಚೆಯವರಾಗಿಹರು ತಲುಪಿಸಲು     ಮಲಿನವಾಗುವುದು ಮನ ಪಂಚೇಂದ್ರಿಯಗಳಿಂದ

ಪರಿಪರಿಯ ನಿನ್ನ ಕರ್ಮಫಲದಾ ಫಸಲು |     ಕುಳಿತು ಗ್ರಹಿಸುತಿರಲು ಜಗದ ನಾಟಕವ |

ಜರೆಯದಿರು ಪರರನ್ನು ನಿನ್ನ ಸಂಕಟಗಳಿಗೆ     ಕೊಳೆ ತೆಗೆಯಬೇಕು ದಿನ ದಿನ ಧ್ಯಾನಗಳಿಂದ

ಪರರಲ್ಲಿ ದಯೆಯಿರಲಿ ~ ಪರಮಾತ್ಮನೆ ||     ತಿಳಿಯಾಗುವುದು ಮನವು ~ ಪರಮಾತ್ಮನೆ ||


    ನಾವೆಲ್ಲ ಎದುರಿಸಿದ, ಎದುರಿಸುತ್ತಿರುವ ಕೊರೋನ ಮಹಾಮಾರಿ ಮಾನವ ಸಮಾಜವನ್ನು ತಲ್ಲಣಗೊಳಿಸಿದೆ. ಕವಿಹೃದಯ ಈ ಸಮಸ್ಯೆಯು ತಂದ ಪರಿಸ್ಥಿತಿಯನ್ನು ಮುಕ್ತಕಗಳ ರೂಪದಲ್ಲಿ ಅನಾವರಣಗೊಳಿಸಿದೆ:


ಅವಿವೇಕಿ ಮಾನವರು ಬುದ್ಧಿಯಿಲ್ಲದೆ ಅಂದು       ಹೊರಲು ಹೆಗಲುಗಳಿಲ್ಲ ಸುಡಲು ಕಟ್ಟಿಗೆಯಿಲ್ಲ

ಬುವಿಗೆ ಹೊದಿಸಲು ಕಸದ ಪ್ಲಾಸ್ಟೀಕು ಹೊದಿಕೆ |       ಉರುಳುತಿಹ ದೇಹಗಳ ಹೂಳಲೆಡೆಯಿಲ್ಲ |

ಕವುಚುತ್ತ ದೇಹಗಳ ಪ್ಲಾಸ್ಟೀಕಿನಲ್ಲಿಂದು       ಕಿರುಬಗಳು ಕದಿಯುತಿವೆ ದೇಹದಂಗಾಂಗಗಳ

ಬುವಿಯೊಳಗೆ ತಳ್ಳಿಹೆವು ಪರಮಾತ್ಮನೆ ||       ಸರಿದಾರಿ ತಪ್ಪಿಹೆವು ~ ಪರಮಾತ್ಮನೆ ||


    ಈ ಮುಕ್ತಕಗಳು ಸಾಮಾಜಿಕ, ನೈತಿಕ, ಆಧ್ಯಾತ್ಮಿಕ, ಪರಿಸರ, ರಾಜಕೀಯ, ಪ್ರಕೃತಿ, ಮಾನವಧರ್ಮ ಹೀಗೆ ಹತ್ತು ಹಲವಾರು ಮುಖಗಳ ಆಯಾಮವನ್ನು ಹೊಂದಿವೆ. ಮುಕ್ತಕ ಎಂಬುದರ ವ್ಯಾಖ್ಯೆ ಏನೇ ಇರಲಿ; ಅದರ ಉದ್ದೇಶ ಆಯಾ ಕಾಲದ ಜನರ ಜೀವನಶೈಲಿ, ಮನೋಧರ್ಮಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನ. ಅಲ್ಲಿಂದ ಅವರ ನಡೆ-ನುಡಿಯನ್ನು ತಿದ್ದಿ-ತೀಡಿ, ಸುಧಾರಣೆಯ ಕಡೆಗೆ ಹೊರಳುವ ಹಾಗೆ ಮಾಡುವುದು. ತನ್ನ ಕಾರ್ಯದಲ್ಲಿ ಈ ಸಂಕಲನ ಸಫಲವಾಗಿದೆ. ಸನ್ಮಾರ್ಗದ ಕಡೆಗೆ ಜನರನ್ನು ಕರೆದೊಯ್ಯುತ್ತದೆ. ಇದು ಚೋದಕ ಗುಣಕ್ಕಿಂತ ಪ್ರೇರಣಾತ್ಮಕ ಉದ್ದೇಶ ಉಳ್ಳದ್ದು. ಆ ನಿಟ್ಟಿನಲ್ಲಿ ಈ ಕೆಳಗಿನ ಮುಕ್ತಕಗಳನ್ನು ಉದಾಹರಿಸಬಹುದು:


ಪರಿಪರಿಯ ಪಾಠಗಳ ಕಲಿಯುವೆವು ಎಲ್ಲರಲಿ ದುಡುಕದಿರು ಆತುರದಿ ಕೋಪದಾ ತಾಪದಲಿ

ಅರಿವ ನೀಡಲು ಪಟ್ಟಗುರು ಮಾತ್ರ ಬೇಕೆ? | ಎಡವದಿರು ಸುರಿಯುವುದು ನಿನ್ನದೇ ರಕುತ |

ಬರಲಿ ಒಳಿತಾದುದೆಲ್ಲವು ನಮ್ಮೆಡೆಗೆ ನಿರತ ಅಡಿಯಿಡುವ ಮುನ್ನ ಯೋಚಿಸು ಒಂದೆರಡು ಘಳಿಗೆ

ತೆರೆ ಎಲ್ಲ ಕಿಟಕಿಗಳ ~ ಪರಮಾತ್ಮನೆ || ಕೊಡೆ ಮಾಡು ಬುದ್ಧಿಯನು ~ ಪರಮಾತ್ಮನೆ ||

 

    ವೇಗವಾಗಿ ಓಡಬೇಕೆಂಬ ಹಟದಲ್ಲಿ, ಸಂಕ್ಷಿಪ್ತವಾಗಬೇಕೆಂಬ ಚಪಲದಲ್ಲಿ ದಾಪುಗಾಲು ಹಾಕುತ್ತಿರುವ ಈ ತಲೆಮಾರಿನವರಿಗೆ ಕಾವ್ಯವನ್ನು ಉಣಬಡಿಸುವ ವಿಧಾನಗಳೂ ಬದಲಾಗಬೇಕು. ಇದನ್ನು ಈ ಕವಿಯು ಅರಿತುಕೊಂಡು ಹೇಳಬೇಕಾದುದನ್ನು ಸುತ್ತಿ ಬಳಸಿ ಹೇಳದೆ ನೇರವಾಗಿ ಹೇಳಲು ಮುಕ್ತಕ ಪ್ರಕಾರವನ್ನು ಆಯ್ದುಕೊಂಡಿದ್ದಾರೆ. ಇದಕ್ಕೆ ಸಮರ್ಥನೆ ಉದ್ದಕ್ಕೂ ಸಿಗುತ್ತದೆ.

    ಎಸ್. ಕೃಷ್ಣಮೂರ್ತಿ ಅವರಿಗೂ ನನಗೂ ಹದಿನಾರು ವರ್ಷಗಳ ಗೆಳೆತನ, ಸಮಾನ ವಯಸ್ಕರು; ಸಮಾನ ಮನಸ್ಕರು. ಅವರು ಕಾವ್ಯದ ಕೈಹಿಡಿದು ಕೃಷಿಕರಾದರು, ಛಂದೋಬದ್ಧ ಪದ್ಯಗಳನ್ನು ರಚಿಸುತ್ತ ಪ್ರವಾಹದ ವಿರುದ್ಧ ಈಸಿ ಜೈಸಿದರು. ನಾನು ಗದ್ಯದ ಕಾಲಿಗೆ ಗೆಜ್ಜೆಕಟ್ಟುತ್ತ ನಡೆದೆ. ಕಾವ್ಯ ನನ್ನ ಪಾಲಿಗೆ ಗಗನಕುಸುಮ. ಅವರು ತಮ್ಮ ಈ ಎರಡನೆಯ ಕವನ ಸಂಕಲನಕ್ಕೆ ಮುನ್ನುಡಿಯಬೇಕೆಂದು ನನ್ನನ್ನು ಕೋರಿದ್ದಾರೆ! ನನಗೆ ಕುವೆಂಪು ಅವರ ಕವನ ನೆನಪಾಗುತ್ತಿದೆ:

ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ? ಸಡಗರದ ಮಾತುಗಳ ಬಿಂಕವೇಕೆ?

ನಿನ್ನ ಮುಂದಿರುವಾಗ ಮಂತ್ರಗಳ ಮರೆಯೇಕೆ? ಸಂಪ್ರದಾಯದ ಮರುಳು ಲಜ್ಜೆಯೇಕೆ?


    ಹೌದು, ಕೃಷ್ಣಕವಿಯವರ ಮುಕ್ತಕಗಳನ್ನು ಓದಲು, ಆಸ್ವಾದಿಸಲು ಯಾವ ಸಿದ್ಧತೆಗಳೂ ಬೇಡ, ಯಾರ ಶಿಫಾರಸ್ಸೂ ಬೇಕಿಲ್ಲ. ಅವರ ಈ ಮುಕ್ತಕಗಳು ಸ್ವಯಂಸ್ಪಷ್ಟ; ಸ್ವಯಂಪರಿಪೂರ್ಣ. 

    ಇದೇ ಸಂದರ್ಭದಲ್ಲಿ ಸುಮಾರು ಒಂದೂಕಾಲು ಶತಮಾನದ ಹಿಂದಿನ ಮುದ್ದಣ-ಮನೋರಮೆಯರ ಸಲ್ಲಾಪ ನೆನಪಾಗುತ್ತದೆ. ಅಲ್ಲಿ ಮನೋರಮೆ “ಪದ್ಯಂ ವಧ್ಯಂ ಗದ್ಯಂ ಹೃದ್ಯಂ” ಎಂದು ಬಿರುನುಡಿಯುತ್ತಾಳೆ. ಪದ್ಯವನ್ನು ಸಾರಾಸಗಟಾಗಿ ನಿರಾಕರಿಸುತ್ತಾಳೆ; ನಿವಾಳಿಸಿ ಎಸೆಯುತ್ತಾಳೆ. ಗದ್ಯವನ್ನು ಹೃದ್ಯವೆಂದು ಬಣ್ಣಿಸುತ್ತಾಳೆ. ಕೃಷ್ಣಕವಿಯ ಈ ಮುಕ್ತಕಗಳನ್ನು ಮನೋರಮೆ ಓದುವಂತಾಗಿದ್ದರೆ, ಖಂಡಿತ ಪದ್ಯಂ ವಧ್ಯಂ ಎನ್ನುವ ತನ್ನ ನಿಲುವನ್ನು ಬದಲಿಸಿಕೊಳ್ಳುತ್ತಿದ್ದಳು!

    ಕೃಷ್ಣಕವಿ ಅವರದು ಶಿಸ್ತಿಗೆ, ಕಟ್ಟುಪಾಡಿಗೆ ಒಳಪಟ್ಟ ವ್ಯಕ್ತಿತ್ವ. ಮುಕ್ತಕವೆಂಬುದೂ ಅಷ್ಟೇ: ಕವಿಯೊಬ್ಬ ತನ್ನನ್ನು ತಾನೇ ಒಂದು ಶಿಸ್ತಿಗೆ, ಕಟ್ಟುಪಾಡಿಗೆ ಒಳಪಡಿಸಿಕೊಳ್ಳುವ ಪರಿ. ಅಂತಹ ಮಿತಿಯೊಂದರ ಗಡಿ ದಾಟದೆಯೇ ಹೇಳಬೇಕಾದುದನ್ನು ಅರುಹಬೇಕು. ಮುಕ್ತಕಗಳಿಗೂ, ಕೃಷ್ಣಕವಿ ಅವರ ಮನೋಧರ್ಮಕ್ಕೂ ಅಂತರವಿಲ್ಲ. ಹಾಗಾಗಿ ಅವರು ತಮ್ಮ ಅಭಿವ್ಯಕ್ತಿಗಾಗಿ ಮುಕ್ತಕ ಪ್ರಕಾರವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಸಮರ್ಥನೆಯಿದೆ. ಛಂದಸ್ಸಿನ ಕಟ್ಟುಪಾಡಿನಲ್ಲಿ, ಬಂಧನದಲ್ಲಿ ಸಂತೋಷವನ್ನು ಅರಸಿ ಯಶೋವಂತರಾದವರು ಅವರು! ಇದೀಗ ಅವರು ಮುಕ್ತಕಗಳಿಗೆ ನಡುಬಗ್ಗಿ ನಜ಼ರುಗಳನ್ನು ಒಪ್ಪಿಸಬೇಕಿಲ್ಲ, ಮುಕ್ತಕಗಳೇ ಅವರಿಗೆ ನಡೆಮುಡಿ ಹಾಸಿ ಕೈವಶವಾಗುತ್ತಿವೆ.

    ಶ್ರೇಷ್ಠತೆಯ ವ್ಯಸನಕ್ಕೆ ಬಿದ್ದವರು ಮಹಾಕಾವ್ಯ, ಖಂಡಕಾವ್ಯ, ನೀಳ್ಗವನಗಳಲ್ಲಿ ಮಾತ್ರ ಕೃಷಿ ಮಾಡುತ್ತಾರೆ. ಮುಕ್ತಕಗಳು; ಸಮರದ ಸಂದರ್ಭದಲ್ಲಿ ಸೈನಿಕರಿಗೆ ಮಾತ್ರೆಗಳ ರೂಪದಲ್ಲಿ ಅಡಕಗೊಳಿಸಿ ಉಣಬಡಿಸುವ ಆಹಾರದಂತೆ. ಇಂತಹ ಪರಿಹಾರ ರೂಪದ ಪ್ರಯತ್ನ ಕೃಷ್ಣಕವಿಯವರದು. ಅವರ ಮುಕ್ತಕಗಳು ಮಿತವಾದ ಪದಗಳಲ್ಲಿ ಅಮಿತಾರ್ಥವನ್ನು ಸೂಸುವಂತಹ ಸಾರಯುತ ರಚನೆಗಳು. ಇಲ್ಲಿನ ಅನೇಕ ಮುಕ್ತಕಗಳು ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸುವ ಕರುಣಾಳು ಬೆಳಕು. ಇವು ಮುದ ಕೊಡುವ ಮುಕ್ತಕಗಳಷ್ಟೇ ಅಲ್ಲ; ಮಸ್ತಿಷ್ಕದ ಮದ ಕಳೆವ ಮುಕ್ತಕಗಳೂ ಹೌದು.

    ಛಂದಸ್ಸನ್ನು ಗಮನಿಸಬೇಕಾದಂತಹ ಸಂದರ್ಭದಲ್ಲಿ ಕೆಲವು ಪದರೂಪಗಳು ಹ್ರಸ್ವಗೊಂಡಿವೆ. ಅಭಿನವ ಪಂಪ ನಾಗಚಂದ್ರನ ಈ ಮಾತು ನೆನಪಾಗುತ್ತದೆ: “ಅಬ್ಧಿಯುಂ ಒರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ”. ಇಲ್ಲಿ ಮುಕ್ತಕಗಳನ್ನು ರಚಿಸಿದ ಕಾಲಾನುಕ್ರಮದಲ್ಲಿಯೇ ಅವುಗಳನ್ನು ದಾಖಲಿಸಿದ್ದಾರೆ. ಹಾಗಾಗಿ ಮುಕ್ತಕಗಳು ಕ್ರಮೇಣ ಇವರಿಗೆ ಕರಗತವಾಗಿ ಕಲಾತ್ಮಕವಾಗಿ ಇಲ್ಲಿ ಅರಳಿರುವುದನ್ನು ಗಮನಿಸಬಹುದು. ಒಂಬತ್ತು ದಶಕಗಳ ಹಿಂದೆ ಹೊಸಗನ್ನಡದಲ್ಲಿ ಕುವೆಂಪು ಅವರಿಂದ ಆರಂಭವಾದ ಮುಕ್ತಕ ರಚನೆ ತೀನಂಶ್ರೀ, ಡಿ.ವಿ.ಜಿ. ಮುಂತಾದವರಿಂದ ಮುಂದುವರೆಯಿತು. ಇದೀಗ ಕೃಷ್ಣಕವಿಯವರೆಗೆ ಬಂದು ನಿಂತಿದೆ. ಅವರ ಮುಕ್ತಕಗಳಲ್ಲಿ ಜೀವನಾನುಭವವಿದೆ. ತನ್ಮೂಲಕ ವೈಯಕ್ತಿಕ ಹಾಗೂ ಸಾಮುದಾಯಿಕ ಸಂಕಷ್ಟಗಳಿಗೆ ಪರಿಹಾರವನ್ನು ಸೂಚಿಸಲು ಸಾಧ್ಯವಾಗಿದೆ. ಮುಕ್ತಕಗಳಿಗೆ ಗೇಯಗುಣವಿದೆ. ಹಾಗಾಗಿ ಹಾಡಬಹುದು; ಗುನುಗಬಹುದು. ಈ ಮುಕ್ತಕಗಳ ಭಾಷೆ ಸರಳವಾಗಿದ್ದು ಇವುಗಳನ್ನು ಅರ್ಥೈಸಲು ನಿಘಂಟು ಬೇಕಿಲ್ಲ.

    ಇಲ್ಲಿನ ಪ್ರತಿಯೊಂದು ಬಿಡಿಪದ್ಯವೂ ತನ್ನದೇ ಆದ ಭಾವವನ್ನು ಅಂತರ್ಗತಗೊಳಿಸುವ ರೀತಿಯೂ ಅಸದೃಶ. ಕೃಷ್ಣಕವಿ ಇಲ್ಲಿ ʻಆನು ಒಲಿದಂತೆʼ ಹಾಡಿದ್ದಾರೆ. ಅವರನ್ನು ಈಗ ಮುಕ್ತಕಗಳ ರಾಯಭಾರಿ ಎನ್ನಬಹುದು. ಅವರೀಗ ಮುಕ್ತಕ ಕುಟುಂಬದ ಪಾಲಿಗೆ ʻಆನು ದೇವಾ ಹೊರಗಣವನುʼ ಅಲ್ಲ! ಈಗ ಅವರು ಮುಕ್ತಕ ಪರಿವಾರದ ಪ್ರಮುಖ ಸದಸ್ಯ. ಆರಂಭದಲ್ಲಿ ಅವರು ಬರೆದು, ಬರೆದು ಪಳಗಿದವರು. ಈಗ ಪಳಗಿ ಬರೆಯುತ್ತಿರುವವರು; ಮೆರೆಯುತ್ತಿರುವವರು. ಮುಕ್ತಕಗಳ ಅವರ ಈ ಕೃತಿ ಒಂದು ಹನಿಖಜಾನೆ. ಮಂಜುಹನಿಯಂತೆ ಶೀತಲವಲ್ಲ; ಬೆವರು ಹನಿಯಂತೆ ಕಮಟಲ್ಲ; ಆದರೆ ನಿಶ್ಚಿತವಾಗಿ ಜೇನಹನಿಯಂತೆ ಸಿಹಿ!

    ಕೃಷ್ಣಕವಿ ಕನ್ನಡದ ಚಲನಶೀಲ ಕಾವ್ಯ ಪರಂಪರೆಯನ್ನೂ, ಹೊಸಗನ್ನಡದ ಪ್ರಾತಿನಿಧಿಕ ಕವಿಗಳ ಆಯ್ದ ಕವನಗಳನ್ನೂ ಅಭ್ಯಾಸ ಮಾಡಲಿ. ಅವುಗಳ ರಚನೆ, ಬಂಧ, ವಸ್ತು ಮತ್ತು ವಿನ್ಯಾಸಗಳನ್ನು ಅವಲೋಕಿಸಲಿ. ಕನ್ನಡದ ಸಂವೇದನೆಯನ್ನೂ, ಈ ನೆಲದಲ್ಲಿ ನಡೆದ ಎಲ್ಲ ಸಾಹಿತ್ಯಿಕ ಚಳವಳಿಗಳನ್ನೂ ಅರಿತು ಸಮಕಾಲೀನವಾಗಿ ಪ್ರಸ್ತುತ, ಸಂಗತ ಎನ್ನಬಹುದಾದ ಕಾವ್ಯವನ್ನು ಸೃಜಿಸುತ್ತ ಜಿಗಿಜಿಗಿದು ಸಾಗಲಿ. ಅವರಿಗೆ ಶುಭವಾಗಲಿ, ಒಳಿತಾಗಲಿ, ಮಂಗಳವಾಗಲಿ.


ಕೆ. ರಾಜಕುಮಾರ್‌

ಸನಿಹವಾಣಿ: 9035313490

ನಿಕಟಪೂರ್ವ ಗೌರವ ಕಾರ್ಯದರ್ಶಿ

 ಕನ್ನಡ ಸಾಹಿತ್ಯ ಪರಿಷತ್ತು

1-6-2022 


ಮುಕ್ತಕಗಳು - ೨೦

ವಿಷವಿಹುದು ನೀರಿನಲಿ ವಿಷವಿಹುದು ಗಾಳಿಯಲಿ

ವಿಷವಿಹುದು ಹಸುಗೂಸಿನಾಹಾರದಲ್ಲಿ |

ವಿಷಮಸಮಯವಿದು ಸಾವಮೊದಲೇ ನೀ ಮನದ

ವಿಷವ ತೊರೆ ಮನುಜ ಪೇಳ್ ಪರಮಾತ್ಮನೆ ||೯೬||


ಧನವೆಂಬ ಸಿರಿಯುಂಟು  ವಸ್ತುಗಳ   ಕೊಳ್ಳಲಿಕೆ

ಗುಣವೆಂಬ ನಿಧಿಯುಂಟು ಪಡೆಯೆ ನೆಮ್ಮದಿಯ |

ಗುಣಧನಗಳೆರಡನ್ನು ಪಡೆಯುವುದು ವಿರಳವಿರೆ

ಧನದಾಸೆ ಬಿಡಿಸಯ್ಯ ಪರಮಾತ್ಮನೆ ||೯೭||


ಸಾರಥಿಯು ನೀನಾದೆ ಪಾರ್ಥನಿಗೆ ಯುದ್ಧದಲಿ

ಕೌರವರ ಸೆದೆಬಡಿಯೆ ನೆರವಾದೆ ನೀನು |

ಪಾರುಗಾಣಿಸಲು ಜೀವನ ಕದನದಲಿ ಎನಗೆ

ಸಾರಥಿಯು ನೀನಾಗು ಪರಮಾತ್ಮನೆ ||೯೮||


ಹಸೆಮಣೆಯನೇರಿ ಜೊತೆ ಸಪ್ತಪದಿ ತುಳಿದಿಹಳು

ಹೊಸಬದುಕ ಕೊಡಲೆನಗೆ ತನ್ನವರ ತೊರೆದು |

ನಸುನಗೆಯ ಮುಖವಾಡದಲಿ ನೋವ ನುಂಗಿಹಳು

ಹೊಸಜೀವವಿಳೆಗಿಳಿಸಿ ಪರಮಾತ್ಮನೆ ||೯೯|| 


ಮುಕ್ತಕದ ಮಾಲೆಯಲಿ ಶತಸಂಖ್ಯೆ ಪುಷ್ಪಗಳು

ಭಕ್ತನಾ ಕಾಣಿಕೆಯ ಸ್ವೀಕರಿಸು ಗುರುವೆ |

ಪಕ್ವವಿಹ ತಿಳಿವನ್ನು ನೀಡಿರಲು ವಂದನೆಯು

ದಕ್ಷಿಣಾಮೂರ್ತಿಯೇ ಪರಮಾತ್ಮನೆ ||೧೦೦||


ಮುಕ್ತಕಗಳು - ೧೯

ಮರಣದಾ ಹೆಮ್ಮಾರಿ ಕಾಡಿಹುದು ದಿನರಾತ್ರಿ

ಮರೆಯದಿರಿ ವೈದ್ಯಜನ ಕೊಟ್ಟಿರುವ ಸಲಹೆ |

ಇರುಳು ಕಂಡಿಹ ಬಾವಿಯಲಿ ಹಗಲು ಬೀಳುವುದೆ

ಕುರಿಗಳಾಗುವುದೇಕೆ ಪರಮಾತ್ಮನೆ ||೯೧||


ಕೀಟ ಕೀಳೆನುವವರು ಮೂಢಮತಿಗಳು ಕೇಳಿ

ಕೀಟವಿಲ್ಲದೆ ಪರಾಗಸ್ಪರ್ಶ ವಿರಳ |

ಮೇಟಿಯಾ ಶ್ರಮವೆಲ್ಲ ನೀರಿನಲಿ ಹೋಮವೇ

ಕೀಟವಿರೆ ಊಟವಿದೆ ಪರಮಾತ್ಮನೆ ||೯೨||


ದಾನ ಕೊಡುವುದು ಲೇಸು ಕುಡಿಕೆಯಲಿಡುವ ಬದಲು

ದೀನ ದುರ್ಬಲರಿಂಗೆ ಹಸಿವನೀಗಿಸಲು |

ದಾನ ನೀಡುವುದ ಸತ್ಪಾತ್ರರಿಗೆ ನೀಡಿದೊಡೆ

ದಾನಕ್ಕೆ ಸದ್ಗತಿಯು ಪರಮಾತ್ಮನೆ ||೯೩||


ನುಡಿಯಲ್ಲಿ ಸತ್ಯ ಹೃದಯದಲ್ಲಿ ಪ್ರೀತಿಸೆಲೆ

ನಡೆಯಲ್ಲಿ ನಿಷ್ಠೆ ಕರಗಳಲಿ ದಾನಗುಣ |

ಹಿಡಿಯೆ ಧರ್ಮದ ದಾರಿ ಮನದಲ್ಲಿ ಪ್ರಾರ್ಥನೆಯು 

ಇರುವಲ್ಲಿ ನೀನಿರುವೆ ಪರಮಾತ್ಮನೆ ||೯೪||


ಸಾಲುಮರಗಳ ಬೆಳೆಸಿ ನೆರಳನಿತ್ತರು ಹಿಂದೆ

ಸಾಲುಸಾಲಾಗಿ ಕತ್ತರಿಸುತಿಹೆವಿಂದು |

ಸಾಲವಾದರು ಕೂಡ ಬೆಳಸದಿರೆ ಮರಗಳನು

ಸಾಲಾಗಿ ಮಲಗುವೆವು ಪರಮಾತ್ಮನೆ ||೯೫||


ಮುಕ್ತಕಗಳು - ೧೮

ಮೂವತ್ತಮೂರು ರೀತಿಯ ಶಕ್ತಿಗಳು ಜಗದಿ

ಮೂವತ್ತಮೂರು ದೇವತೆಗಳೆನೆ ತಪ್ಪೆ |

ಜೀವಿಗಳ ನಿರ್ವಹಿಸೊ ದೇವತೆಗಳಿವರೆಲ್ಲ

ದೇವರಿಗೆ ದೇವ ನೀ ಪರಮಾತ್ಮನೆ ||೮೬||


ಸಾವಿರದ ಮನೆಯಿಲ್ಲದಿರೆ ಸಾಯೆ ಭಯವೇಕೆ

ಸಾವು ನೀಡುವುದು ನಿವೃತ್ತಿ ಜಗದಿಂದ | 

ನೋವು ಕೆಲದಿನ ಮಾತ್ರ  ಜೊತೆ ನಂಟಿರುವವರಿಗೆ

ನೋವಿರದ ಸಾವಿರಲಿ ಪರಮಾತ್ಮನೆ ||೮೭||


ದ್ವೇಷ ಕೋಪಗಳೆನಲು ಬೆಂಕಿಯಾ ಜ್ವಾಲೆಗಳು

ವೇಷವನು ಧರಿಸಿ ಮೋಸವನು ಮಾಡಿಹವು  |       

ದ್ವೇಷ ಸುಡುತಿಹುದಲ್ಲ ನಮ್ಮದೇ ಕಾಯವನು

ದ್ವೇಷವನು ನಿಗ್ರಹಿಸು ಪರಮಾತ್ಮನೆ ||೮೮||


ನನ್ನೆದೆಯ ವೀಣೆಯನು ನುಡಿಸು ಬಾ ಚೆಲುವೆಯೇ

ನಿನ್ನೆದೆಯ ತಾಳಕ್ಕೆ ಕುಣಿಯುವೆನು ನಾನು |

ಚೆನ್ನ ಮೇಳೈಸಲೆಮ್ಮಯ ನಾದನಾಟ್ಯಗಳು

ಜೊನ್ನ ಸುರಿವುದೆದೆಯಲಿ ಪರಮಾತ್ಮನೆ ||೮೯||

 

ಪುಸ್ತಕವನೋದಲದು ಹಚ್ಚುವುದು ಹಣತೆಯನು

ಮಸ್ತಕದ ದೀಪವದು ಬಾಳಿಗೇ ಬೆಳಕು |

ವಿಸ್ತರಿಸಿ ಕೊಳ್ಳಲಿಕೆ ಜ್ಞಾನದಾ ಪರಿಧಿಯನು

ಪುಸ್ತಕವು ಬಹುಮುಖ್ಯ ~ ಪರಮಾತ್ಮನೆ ||೯೦||

ಮುಕ್ತಕಗಳು - ೧೭

ಮದವೇರಿ ನಿಂತಾಗ ಮದ್ಯದಮಲೇರಿದೊಲು

ಬೆದರಿಹೋಗ್ವುದು ವಿವೇಚನೆಯ ದೃಢಶಕ್ತಿ |

ಇದಿರಾಗೊ ತಡೆಗಳೆಲ್ಲವು ಸರ್ವನಾಶವೇ

ನದಿಯು ಹುಚ್ಚೆದ್ದಂತೆ ಪರಮಾತ್ಮನೆ ||೮೧||


ಚಂದನದ ವನದಲ್ಲಿ ಮೇರುಪರ್ವತವಾದೆ

ಗಂಧದಾ ಗುಡಿಯ ಗರ್ಭದಲಿ ನೆಲೆಯಾದೆ |

ಮಂದಿಯಾ ಮನದಲ್ಲಿ ರಾರಾಜಿಸಿದ ತಾರೆ

ಬಂಧುವೇ ನಮಗೆಲ್ಲ ಪರಮಾತ್ಮನೆ ||೮೨||


ನಿನ್ನವರ ಬದಲಾಗೆನುವ ಮುನ್ನ ನಡತೆಯಲಿ

ತನ್ನತನ ಬದಲಿಸುವ ಬವಣೆಯನು ಕಾಣು |

ಭಿನ್ನತೆಯ ಮೇಳದಲಿ ನವರಾಗ ಮೂಡಿಸುತ 

ಮನ್ನಿಸೈ ನಿನ್ನವರ ಪರಮಾತ್ಮನೆ ||೮೩||


ರಾಜನನು ಅನುಸರಿಪ ಪ್ರಜೆಗಳೆಲ್ಲಿಹರೀಗ 

ರಾಜನಾರಿಸುವ ಹಕ್ಕೀಗ ತಮದೇನೆ |

ರಾಜನ ಕ್ಷಮತೆ ಆರಿಸಿದವರ ಮತಿಯಷ್ಟೆ

ರಾಜನನು ತೆಗಳುವುದೆ ಪರಮಾತ್ಮನೆ ||೮೪||


ದಿನದಿನದ ಬವಣೆಯಲಿ ಬದುಕ ಜಂಜಾಟದಲಿ

ನೆನಪಿರವು ನೀತಿವಾಕ್ಯ ಹಿತವಚನಗಳು |

ದಿನದ ಕೊನೆಗಿರಬೇಕು ನಾಕುಚಣದೇಕಾಂತ

ಮನನಮಾಡಲು ತಿಳಿವ ಪರಮಾತ್ಮನೆ ||೮೫||


ಮುಕ್ತಕಗಳು - ೮

ಒಂಟಿಯೇ ಗಾಳಿಯಲಿ ತಿರುಗುವಾ ಗಿರಗಿಟ್ಲೆ?

ಒಂಟಿ ನಾನಲ್ಲ ನೀನಿರಲು ಸಖನಾಗಿ |

ನೆಂಟ ನೀನೇ ಬರುವೆ ಜೊತೆಯಾಗಿ ಕೊನೆವರೆಗೆ 

ಬಂಟ ನಾನಾಗಿರುವೆ ಪರಮಾತ್ಮನೆ ||೩೬||


ಕನಸೆಲ್ಲ ಕರಗಿರಲು ಮನದಲ್ಲಿ ಕಹಿಯಿರಲು

ತನುವಲ್ಲಿ ಜಡವಿರಲು ನಿದಿರೆ ದೂರಾಗೆ |

ಜಿನುಗಿಸಲು ಹೊಸ ಹುರುಪು ಮರೆಯಲಿಕೆ ಕಹಿಯನ್ನು

ನಿನನಿಡುವೆ ಮನದಲ್ಲಿ ಪರಮಾತ್ಮನೆ ||೩೭||


ಎಲ್ಲ ಕೊಡುತಿಹ ಬುವಿಗೆ ನಾವೇನು ಕೊಟ್ಟಿಹೆವು

ಗಿಲ್ಲಿಹೆವು ಗುದ್ದಿಹೆವು ಮೆದ್ದಿಹೆವು ಬೆಲ್ಲ |

ಗಲ್ಲಿಯಲಿ ಶ್ವಾನವೂ ತಿರುಗಿ ಬೀಳುವುದೊಮ್ಮೆ

ಕಲ್ಲುಹೊಡೆದರೆ ನಿತ್ಯ ಪರಮಾತ್ಮನೆ ||೩೮||


ಕರದಲ್ಲಿ ಪಿಡಿದಿಹೆವು ಮಾಯದಾಟಿಕೆಯನ್ನು

ಭರದಲ್ಲಿ ತೊರೆದಿಹೆವು ಮತ್ತೆಲ್ಲವನ್ನು |

ಎರಡು ಮೊನಚಿನ ಖಡ್ಗ ಕೊಯ್ಯ ಬಲ್ಲದು ಕತ್ತ

ಮರೆತು ಮೈಮರೆತಾಗ ಪರಮಾತ್ಮನೆ ||೩೯||


ಏನೆ ಮಾಡಲಿ ನಾವು ನೋವಾಗದಂತಿರಲಿ

ಜಾನುವಾರುಗಳಿಗೂ ಬಿಸಿ ತಾಕದಿರಲಿ |

ನಾನು ಗೋಡೆಗೆಸೆವಾ ಚೆಂಡೊಂದು ಹಿಮ್ಮರಳಿ

ತಾನೆದೆಗೆ ತಾಕುವುದು ಪರಮಾತ್ಮನೆ ||೪೦||

ಮುಕ್ತಕಗಳು - ೧೬

ಪರರು ಬರಿಯಂಚೆಯವರಾಗಿಹರು ತಲುಪಿಸಲು

ಪರಿಪರಿಯ ನಿನ್ನ ಕರ್ಮಫಲದಾ ಫಸಲು |

ಜರೆಯದಿರು ಪರರನ್ನು ನಿನ್ನ ಸಂಕಟಗಳಿಗೆ

ಪರರಲ್ಲಿ ದಯೆಯಿರಲಿ ಪರಮಾತ್ಮನೆ ||೭೬||


ಕಾಮದಲಿ ಕುರುಡಾಗೆ ಭಯವಿಲ್ಲ ಸಿಗ್ಗಿಲ್ಲ

ರೋಮರೋಮದಿ ದಹಿಸೆ ಕಾಮದಾಹಾಗ್ನಿ |

ಕಾಮದಾಹಕ್ಕೆ ಬಂಧುಗಳೆ ಬಲಿಯಾಗುತಿರೆ

ಪಾಮರತೆ ಸಂಹರಿಸು ಪರಮಾತ್ಮನೆ ||೭೭||


ವೈರಾಣು ಬಂದಿಹುದು ವೈರಿಯಾ ರೂಪದಲಿ

ಹೋರಾಟ ನಡೆಯುತಿದೆ ಮನೆಮನಗಳಲ್ಲಿ |

ಜೋರಿನಾ ಮಾನವನು ರೆಕ್ಕೆತರಿದಿದ್ದರೂ

ಹಾರಾಟ ಬಿಡಲೊಲ್ಲ ಪರಮಾತ್ಮನೆ ||೭೮||


ಮೋಹವಾಗುವುದಲ್ಲ ಚೆಂದದ್ದು ಕಂಡಾಗ

ಮೋಹ ಚಿಗುರೊಡೆಯಲಿಕೆ ಸ್ವಾರ್ಥವೇ ಮೂಲ

ಮೋಹ ಪಾಶಗಳು ಜೀವನದ ಕಗ್ಗಂಟುಗಳು

ಮೋಹ ಭಯವೀಯುವುದು ಪರಮಾತ್ಮನೆ ||೭೯|| 


ಕದಡುವುದು ತಿಳಿಗೊಳದ ನೀರನ್ನು ಮತ್ಸರವು

ಹದವಿರುವ ಮನದಲ್ಲಿ ಕಸವ ತುಂಬುವುದು |

ಎದೆಯಿಂದ ಮತ್ಸರದ ಬೇರು ಕೀಳದೆ ಬಿಡಲು

ಬದುಕು ಹಸನಾಗದದು ಪರಮಾತ್ಮನೆ ||೮೦||

ಮುಕ್ತಕಗಳು - ೧೫

ಮುಂಗವುಸ ಮರೆಯಲ್ಲಿ ಮುಖವ ಮರೆಮಾಚಿಹೆವು

ಟೊಂಗೆಯಿಲ್ಲದ ಮರವನಾಶ್ರಯಿಸಿ ನಿಂದು |

ರಂಗಾಗಿ ಬದುಕಲಿಕೆ ಟೊಂಗೆಗಳ ಕಡಿದಿರುವ

ಮಂಗಗಳ ಕಾಪಾಡು ಪರಮಾತ್ಮನೆ ||೭೧||


ಅವಿವೇಕಿ ಮಾನವರು ಬುದ್ಧಿಯಿಲ್ಲದೆ ಅಂದು

ಬುವಿಗೆ ಹೊದಿಸಲು ಕಸದ ಪ್ಲಾಸ್ಟೀಕು ಹೊದಿಕೆ |

ಕವುಚುತ್ತ ದೇಹಗಳ ಪ್ಲಾಸ್ಟೀಕಿನಲ್ಲಿಂದು

ಬುವಿಯೊಳಗೆ ತಳ್ಳಿಹೆವು ~ ಪರಮಾತ್ಮನೆ ||೭೨||


ಕಾಮ ಲೋಭ ಕ್ರೋಧ ನರಕದಾ ದ್ವಾರಗಳು

ವಾಮಮಾರ್ಗಗಳ ತೊರೆಯೋಣ ಬಂಧುಗಳೆ

ರಾಮರಾಜ್ಯವ ತರಲು ಬೇಡ ಯಾರೂ, ಸಾಕು

ರಾಮನಾಮದ ಶಕ್ತಿ ~ ಪರಮಾತ್ಮನೆ ||೭೩||


ವಿಕೃತದೀ ಮನಸಿಗಿನ್ನೂ ಬೇಕೆನುವ ದಾಹ

ಸಕಲವಿರಲೂ ತೃಪ್ತಿಯಿಲ್ಲದಿಹ ಲೋಪ |

ಅಕಳಿಕೆಯ ಬಲೆಯಲ್ಲಿ ಸಿಲುಕಿರುವ ಕೂಸು ನಾ

ವಿಕಲತೆಯ ಗುಣಪಡಿಸು ಪರಮಾತ್ಮನೆ ||೭೪||

ಅಕಳಿಕೆ = ಕಚಗುಳಿ


ಮಂದಿರದ ಹುಂಡಿಯಲಿ ಕಾಣಿಕೆಯನೊಪ್ಪಿಸುತ

ಮಂದಿ ದುಃಖಗಳ ಮರೆಸುವ ಸುಖವ ಕೋರೆ

ತಿಂದಿರದ ಹೊಟ್ಟೆಗನ್ನವ ನೀಡಲದು ಹೆಚ್ಚು

ಮಂದಿರದ ಕಾಣಿಕೆಗೆ ~ ಪರಮಾತ್ಮನೆ ||೭೫||

ಮುಕ್ತಕಗಳು - ೧೪

ಧನವನಾಕರ್ಷಿಸುವುದುಂಟು ಧನ ಚುಂಬಕವು

ಧನವು ಬೆಳೆಸುವುದು ಸಂತತಿಯನತಿಶಯದಿ |

ಕೊನೆಗೆ ಹೂತಿಟ್ಟರೂ ಪಡೆಯುವುದು ಮರುಜನುಮ

ಧನಪುರಾಣವಿದುವೇ ಪರಮಾತ್ಮನೆ ||೬೬||


ಕಲಿಯುವುದು ಮುಗಿಯುವುದೆ ಜೀವನದ ಕೊನೆವರೆಗೆ

ಕಲಿಕೆ ಜೀವದ ಸೂಕ್ಷ್ಮ ಸಂಕೇತ ಸಾಕ್ಷಿ |

ಕಲಿವುದೇನಿಲ್ಲದಿರೆ ಬದುಕಲೇನಿದೆ ನಮಗೆ

ಕಲಿಕೆ ನಾಡಿಮಿಡಿತವು ಪರಮಾತ್ಮನೆ ||೬೭||


ವೈರಾಣು ಬಂದಿಹುದು ವೈರಿರೂಪದಲಿಂದು

ಬಾರಿಸುತ ಮರಣಭೇರಿಯ ನಿಲ್ಲದಂತೆ |

ಮೀರಿ ಭೇದಗಳ ಹೋರಾಡಬೇಕಿದೆಯಿಂದು

ತೋರಿಕೆಯು ಸಲ್ಲದದು ಪರಮಾತ್ಮನೆ ||೬೮||


ರಾಜಧರ್ಮವಮರೆತ ದೇಶನಾಶಕರಿವರು

ರಾಜಕೀಯದ ಮುಸುಕು ಧರಿಸಿ ನಿಂದಿಹರು |

ಗಾಜಿನಾ ಮನೆಯಲ್ಲಿ ಕಲ್ಲು ತೂರಾಡಿಹರು

ರಾಜಿಯಾಗಿಹೆವಲ್ಲ ಪರಮಾತ್ಮನೆ ||೬೯||


ತಂಗದಿರ ಬುವಿಗಿತ್ತ ರಜತಮಯ ಕಾಂತಿಯನು

ಚಂಗದಿರನಿತ್ತಿಹನು ಹೊನ್ನಿನಾಭರಣ |

ರಂಗನಾಥನ ಸತಿಗೆ ವೈಭವದಲಂಕಾರ

ಸಿಂಗರದ ಸಂಭ್ರಮವು ಪರಮಾತ್ಮನೆ ||೭೦||

ಮುಕ್ತಕಗಳು - ೧೩

ವೇದದಲಿ ತಿಳಿಸಿರುವ ಸಂಕಲ್ಪ ಪೂಜೆಗಳು

ಹಾದಿಯಲ್ಲವು ಸಾತ್ವಿಕರಿಗಾಗಿ ಮರುಳೆ |

ಕಾದಿರಿಸಿ ನಾರದರು ಪೇಳಿರುವ ಸತ್ಯವಿದು

ನಾದದಲ ಪಸ್ವರವು ಪರಮಾತ್ಮನೆ ||೬೧||


ಸಮತೆಯೆಲ್ಲಿದೆ ಜಗದ ಸೃಷ್ಟಿಯಲಿ ಬಂಧುಗಳೆ

ಸಮತೆ ಬೇಕೆನ್ನದಿರಿ ಮಾನವರ ನಡುವೆ |

ಮಮತೆಯಿರಬೇಕೆಲ್ಲ ಜೀವರಾಶಿಗಳಲ್ಲಿ

ಮಮತೆಸಮ ವಾಗಿರಲಿ ಪರಮಾತ್ಮನೆ ||೬೨||

 

ತಿಂಡುಂಡು ಮಲಗಿದರೆ ಮಂಡೆ ಬೆಂಡಾಗುವುದು

ದಂಡ ಮಾಡಿದ ಸಮಯ ಹಿಂದೆ ಬರಬಹುದೆ |

ದಂಡಿಸಲು ದೇಹವನು ಚೈತನ್ಯ ತುಂಬುವುದು 

ಗುಂಡಿಗೆಗೆ ಮಯ್ಯೊಳಿತು ಪರಮಾತ್ಮನೆ ||೬೩||


ನದಿಯ ಹಾದಿಯ ಬದಲಿಸಲು ಸಾಧ್ಯ ಬುವಿಯಲ್ಲಿ

ಬದಲಿಸಲು ಸಾಧ್ಯವೇ ವಿಧಿವಿಲಾಸವನು |

ಎದೆತಟ್ಟಿ ಪೇಳುವೆ ಶ್ರದ್ಧೆಯಚಲವಿರೆ ನೀ

ಬದಲಿಸುವೆಯೆಮಗಾಗಿ ಪ್ರಮಾತ್ಮನೆ ||೬೪||


ಪ್ರಾರಬ್ಧವೆನೆ ಹಿಂದೆ ನಾ ಮಾಡಿರುವ ಕರ್ಮ

ಯಾರು ಬದಲಿಸಬಲ್ಲರದ ನನ್ನ ಹೊರತು |

ಪಾರಾಯಣ ಧ್ಯಾನ ಸೇವೆ ಲಂಘನದಿಂದ

ಪ್ರಾರಬ್ಧ ಬದಲಿಸುವೆ ಪರಮಾತ್ಮನೆ ||೬೫||

ಮುಕ್ತಕಗಳು - ೧೨

ಯಂತ್ರಗಳ ಮಿತಿ ಮಾನವನ ಮತಿಗೆ ಸೀಮಿತವು

ತಂತ್ರಗಳು ಎಲ್ಲ ಪ್ರಕೃತಿಗೆ ಸೀಮಿತವು |

ಯಂತ್ರಗಳ ತಂತ್ರಗಳ ಮೀರಿಸಿದೆ ಭಕ್ತಿಯಾ

ಮಂತ್ರ ನಿನ್ನ ಪಡೆಯಲು ಪರಮಾತ್ಮನೆ ||೫೬||


ಹೊಸಯುಗವಿದೆನಲೇಕೆ ಕಲಿಗಾಲ ಕಳೆಯಿತೇ

ದೆಸೆಯು ಬದಲಾಗಿ ಶುಕ್ರದೆಸೆ ಬಂದಿಹುದೆ |

ಹೊಸಬಟ್ಟೆ ತೊಟ್ಟೊಡನೆ ತುಸುಬುದ್ಧಿ ಬಂತೇನು

ಹೊಸಮಾತು ಹೇಳಯ್ಯ ಪರಮಾತ್ಮನೇ ||೫೭||


ಬಾಗಿಲಿಗೆ ತೋರಣವು ಹೋಳಿಗೆಗೆ ಹೂರಣವು

ಭಾಗಿಯಾಗಿವೆ ಜೊತೆಗೆ ಬೇವುಬೆಲ್ಲಗಳು |

ತೂಗಿತೊನೆಯುವ ಮಾವು ಹಾಡಿಕುಣಿಯುವ ನಾವು

ಹೀಗಿದೆಯೊ ಯುಗದಾದಿ ಪರಮಾತ್ಮನೆ ||೫೮||


ವ್ಯಕ್ತಿ ಯಾರಾದರೇನವನರಸನಾಗಿರಲಿ

ಶಕ್ತಿ ತುಂಬಿರಲಿ ಬಾಹುಗಳಲ್ಲಿ ಅಧಿಕ |

ಯುಕ್ತಿಯಲಿ ಅತಿಕುಶಲ ಚತುರಮತಿಯಾದರೂ

ಭಕ್ತಿಗೊಲಿಯುವೆ ಮಾತ್ರ ಪರಮಾತ್ಮನೆ ||೫೯||


ಮರದ ಮೇಲಿನ ಹಕ್ಕಿ ಮರಬೀಳೆ ಹೆದರುವುದೆ

ಶರಧಿಯಲಿರುವ ಮೀನು ಜಲವುಕ್ಕಿಬರಲು |

ನೆರೆಯಲ್ಲ ಜಗದಪ್ರಳಯಕು ಹೆದರೆನು ನಿನ್ನ

ಕರತಲದ ರಕ್ಷೆಯಿರೆ ಪರಮಾತ್ಮನೆ ||೬೦||

ಮುಕ್ತಕಗಳು - ೧೧

ಪ್ರಣವವೇ ಪ್ರಥಮ ರವ ಸೃಷ್ಟಿಯಾರಂಭದಲಿ

ಕಣಕಣಕೆ ತಾಯ್ನಾಡಿಯನುಭವವ ನೀಡಿ |

ತಣಿಸಿ ಮನ ತನುವಿಗೀಯ್ವುದು ಮುದದ ಚೈತನ್ಯ

ಮಣಿವೆ ನಾ ಪ್ರಣವಕ್ಕೆ ಪರಮಾತ್ಮನೆ ||೫೧||


ಈಶ್ವರನ ದಯವಿರದೆ ಕಾಗೆ ಕಾಯೆನದು ಜಗ

ದೀಶ್ವರನ ದಯವಿರದೆ ಮೋಕ್ಷವದು ಹೇಗೆ |

ಈಶ್ವರನೆ ಬದುಕಿನಲಿ ಶ್ರೀಚರಣ ಪಿಡಿದಿಹೆನು

ಶಾಶ್ವತದೆಡೆಯ ನೀಡು ಪರಮಾತ್ಮನೆ ||೫೨||


ವೇದಗಳ ಕಾಲದಲಿ ಕಂಡ ನಾರೀಸಮತೆ

ಗಾದೆಗಳ ಕಾಲಕ್ಕೆ ಕಾಣದಾಯ್ತಲ್ಲ |

ಪಾದಗಳ ತೊಳೆದರೂ ನೀಡಿಲ್ಲ ಸಮತೆಯನು

ಭೇದವನಳಿಸಿ ಪೊರೆಯೊ ಪರಮಾತ್ಮನೆ ||೫೩||


ದಾನವರ ಸಂಹರಿಸಲವತಾರಗಳನೆತ್ತಿ

ನೀನವರ ಸಂಹರಿಸಿ ಜಗವನ್ನು ಕಾಯ್ದೆ |

ಮಾನವರೆದೆಯ ದಾನವತೆ ಕಾಣಲಿಲ್ಲವೇ

ನೀನದನು ಮರೆತೆಯಾ ~ ಪರಮಾತ್ಮನೆ ||೫೪||


ಕರ್ಮದಾ ವಿಧಿಯಾಟ ಯಾರಿಗೂ ತಪ್ಪದದು

ಮರ್ಮವನರಿತು ಜರಿಯದಿರು ನೋಯಿಸಿದರೆ |

ಧರ್ಮವನು ಪಾಲಿಸುತ ಕರ್ಮವನು ಸವೆಸುತಿರು

ನಿರ್ಮಲದ ಮನದಿಂದ ~ ಪರಮಾತ್ಮನೆ ||೫೫||


ಮುಕ್ತಕಗಳು - ೧೦

ವಾದಮಾಡಿದರೆ ಫಲವಿಲ್ಲ ಮೂರ್ಖರ ಜೊತೆಗೆ 

ವಾದ ಮಾಡುವುದು ಸಲ್ಲದು ವಿತಂಡಿಯೊಡೆ |

ವಾದ ಮಾಡುವುದು ಗೆಲುವಿಗೆನಲದು ಸರಿಯಲ್ಲ

ವಾದವಿದೆ ಮಂಥನಕೆ ಪರಮಾತ್ಮನೆ ||೪೬||


ಕ್ರೋಧವದು ಮೆರೆವಾಗ ವಾದಕಿಳಿಯುದಿರು ನೀ

ವ್ಯಾಧಿಯನು ಮುಚ್ಚಿಟ್ಟು ರೋಧಿಸಲು ಬೇಡ |

ಸಾಧನೆಗೆ ಗುರಿಯಿಂದ ದೃಷ್ಟಿ ಸರಿಸದೆ ಸದಾ

ಮಾಧವನ ನೆನೆಬೇಕು ಪರಮಾತ್ಮನೆ ||೪೭||


ಕರುಣೆಯಿಲ್ಲದ ಹೃದಯ ಎಣ್ಣೆಯಿಲ್ಲದ ದೀಪ

ಧರಣಿಯಲಿ  ಸಲ್ಲನೀ ದುರುಳದಾ ನವನು |     

ಮರಣದಲಿ ಜೊತೆಯಿಲ್ಲದೊಂಟಿಯಾಗುವನಲ್ಲ

ಕರುಣೆಯಿರೆ ಸಹಬಾಳ್ವೆ ಪರಮಾತ್ಮನೆ ||೪೮||


ಒಳಗಿನಾತ್ಮಕ್ಕಿದೆಯೊ ಕಣ್ಣು ಕಿವಿಯರಿವೆಲ್ಲ

ಬಳಿಯಿದ್ದು ನೋಡುತಿಹ ಸಿಸಿಕ್ಯಾಮೆರವು |

ಒಳಗಿನದು ಮನದ ಹೊರಗಿನದೆಲ್ಲವಚ್ಚಾಗಿ

ತಿಳಿಯುತಿದೆ ನಿನಗೆಲ್ಲ ಪರಮಾತ್ಮನೆ ||೪೯||


ಕಲಿಗಾಲ ಕವಿದಿಹುದು ಸತ್ಯಕ್ಕೆ ಕಾರ್ಮೋಡ

ಲಲನೆಯರಿಗಾಗುತಿದೆ ಶೋಷಣೆಯ ಶಿಕ್ಷೆ |

ಹುಲಿಗಳೇ ತೊಟ್ಟಿಹವು ಗೋಮುಖದ ಮುಖವಾಡ 

ಬಲಿಗಳೇ ಬೇಕೇನು ಪರಮಾತ್ಮನೆ ||೫೦||

ಮುಕ್ತಕಗಳು - ೭

ಉಸಿರು ತುಂಬಿದೆ ವೇಣುವಿಗೆ ನುಡಿಸೆ ಸವಿರಾಗ

ಉಸಿರು ತುಂಬಿದೆಯೆಮಗೆ ನುಡಿಯೆ ಸವಿಮಾತು |

ಉಸಿರು ಉಸಿರಲಿ ನಿನ್ನ ಉಸಿರಿರಲು ಜನರೇಕೆ

ಪಸರಿಸರು ಸವಿನುಡಿಯ ಪರಮಾತ್ಮನೆ ||೩೧||


ನಮಗಿರ್ಪ ಸತಿಸುತರು ಮಾತೆಪಿತರೆಲ್ಲರೂ

ನಮದೇನೆ ಪೂರ್ವಕರ್ಮದ ಫಲಿತವಂತೆ |

ನಮದಾದ ಕರ್ಮಗಳ ತೀರಿಸುವ ಪರಿಕರವು

ನಮಗಿರುವ ನಮ್ಮವರು ಪರಮಾತ್ಮನೆ ||೩೨||


ಯಾರು ಬಂದರು ಜನಿಸಿದಾಗ ಜೊತೆ ಜೊತೆಯಾಗಿ

ಯಾರು ಬರುವರು ಹೋಗುತಿರಲು ಜೊತೆಯಾಗಿ |

ಮೂರು ದಿನಗಳ ಪಯಣದಲಿ ಕಳಚಿದರೆ ಕೊಂಡಿ 

ಕೂರೆ ದುಃಖದಿ ಸರಿಯೆ ಪರಮಾತ್ಮನೆ ||೩೩||


ಒಲವಿರಲಿ ಮಕ್ಕಳಲಿ ನಲ್ಮೆ ಮಾಸದಹಾಗೆ

ಛಲವೇಕೆ ಬಹುಧನದ ಬಳುವಳಿಯ ಕೊಡಲು |

ಬಲಿಯಾಗುವರು ದುಂದು ದುಶ್ಚಟದ ಮೋಹಕ್ಕೆ

ಕಲಿಗಾಲ ತರವಲ್ಲ ಪರಮಾತ್ಮನೆ ||೩೪||


ಮರೆತು ವಾನಪ್ರಸ್ಥವನು ಬದುಕುತಿಹೆವಿಂದು

ಹೊರೆಯಾಗಿ ಜನಮನದ ಸೌಖ್ಯಕ್ಕೆ ಬಂಧು |

ಕರೆಯೆ ವೃದ್ಧಾಶ್ರಮವು ಯಾರು ಕಾರಣ ಪೇಳು

ಜರೆಯದಿರು ಪುತ್ರರನು ಪರಮಾತ್ಮನೆ ||೩೫||

ಕೃಷ್ಣಾ ಮುಕುಂದ

 ಕೃಷ್ಣಾ ಮುಕುಂದ ಹೇ ಪರಮಾತ್ಮ,

ಹೇಗೆ ಕರೆದರೂ ನಿನ್ನ ತೃಪ್ತ ನನ್ನಾತ್ಮ!

ನಾಮಮಾತ್ರದಲ್ಲೇ ಜೇನಿನ ಸಿಹಿಯು,

ದರುಶನದಲ್ಲಿ ಏನುಂಟೋ ಭಾಗ್ಯವು!    


ಈ ಬದುಕಲಿ ನಿನ್ನ ಕಾಣದಾಗಿಹೆ,

ತೋರೋ ದಾರಿಯ ನಿನ್ನಯ ಗಮ್ಯಕೆ.

ವಿಶ್ವರೋಪ ತೋರಿದೆ ಆ ಪಾರ್ಥನಿಗೆ,

ತೋರೋ ನಿನ್ನ ನಿಜ ರೂಪ ಎನಗೆ!


ಆ ಮುರಳಿಯಲಿ ನಿನ್ನ ಉಸಿರು ಹರಿಸಿ ,

ನುಡಿಸಿದೆ ಎದೆಯ ಸೆಳೆಯೋ ರಾಗ!

ಈ ದೇಹದಲಿ ನಿನ್ನ ಉಸಿರು ಸೇರಿಸಿ,

ತೊಗಲು ಬೊಂಬೆಗೆ ಜೀವವ ತುಂಬಿದೆ!


ಈ ಜೀವ ನಿನ್ನದೇ ನಿನ್ನ ದಾಸ ನಾನು,

ನಿನ್ನಯ ಪಾದದ ಸೇವೆ ಕೊಡುವೆಯೇನು?

ನಿನ್ನ ಪಾದದಾಣೆ ಎಂದೂ ಬಿಡೆ ನಾನು,

ನಾಮವ ರೂಪವ ತುಂಬಿಕೊಂಡಿಹೆನು!


ನಿನ್ನ ಕಂಡ ಕೂಡಲೇ ಸಾಕು ಈ ಜೀವನ,

ನಿನ್ನ ಕಂಡ ರಾಧೆಯಂತೆ ಆಯಿತು ಪಾವನ!

ನೀ ಸಾಲ ಕೊಟ್ಟ ಉಸಿರು ಆ ನಿನ್ನ ಪಾದಕೆ,

ಅರ್ಪಿಸಿ ಸಮರ್ಪಿಸಿ ಲೀನವಾಗುವೆ ನಿನ್ನಲೇ!

Sunday, July 10, 2022

ಮುಕ್ತಕಗಳು - ೩

ಯಶವ ಏನೆಂಬೆ? ಧನ, ವಿದ್ಯೆ, ಸಿರಿಸಂಪತ್ತೆ?

ಪಶು, ಭೂಮಿ, ಅಧಿಕಾರ, ಯೌವ್ವನದ ಬಲವೆ? |

ದಶಕಂಠ ಹೊಂದಿದ್ದೆಲ್ಲವೂ ಗೆಲಿಸಿದವೆ?!

ಯಶವ ಗುಣದಲಿ ನೋಡು ~ ಪರಮಾತ್ಮನೆ  ||೧೧||


ಗುಡಿ ಸುತ್ತಿ ಗುಂಡಾರ ಸುತ್ತಿ ದೇವನೊಲಿಸಲು

ಬಿಡದೆ ತೀರ್ಥಗಳ ಸುತ್ತಿಹೆ ಗಾಣದೆತ್ತೆ! |

ಒಡೆಯನನು ಮರೆತಾಗ ಎದೆಯ ಗೂಡಿನಲಿರುವ

ಕೊಡುವನೇ ಪರಮಪದ ~ ಪರಮಾತ್ಮನೆ ||೧೨||


ನಗೆಯ ಮಲ್ಲಿಗೆಯನರಳಿಸು ಸುಗುಣವಂತನೇ

ಮಗುವಂತೆ ನಕ್ಕುಬಿಡು ನೋವುಗಳ ಮರೆಸೆ |

ಸಿಗುವಂತೆ ಸಿಹಿಬೆಲ್ಲ ಬೇವಿನೆಸಳಿನ ಜೊತೆಗೆ

ಸಿಗಲಿ ಬಾಳಲಿ ಸವಿಯು ಪರಮಾತ್ಮನೆ  ||೧೩||


ಕಾವ್ಯಕನ್ನಿಕೆಯ ರಸಗಂಗೆ ಹರಿದಿದೆ ಸದಾ 

ದಿವ್ಯತೆಯ ಬೆಳಗುತಿಹ ದಿವಿನಾದ ಗೊಂಬೆ |

ನವ್ಯತೆಯ ನಗನತ್ತ ಕಾಲವೇ ಕೊಟ್ಟಿಹುದು

ಭವ್ಯತೆಗೆ ಕುಂದಿಲ್ಲ ಪರಮಾತ್ಮನೆ ||೧೪||


ಎಲ್ಲ ಚಪಲಗಳಲ್ಲಿ ನಾಲಿಗೆಯ ಚಪಲವೇ

ಬಲ್ಲಿದರು ಪೇಳಿಹರು ಬಲು ಜಿಗುಟು ಚಪಲ |

ಗಲ್ಲು ಶಿಕ್ಷೆಗೆ ಹೆದರದಿಹ ದುಷ್ಟ ದುರುಳನೊಲು

ಜೊಲ್ಲು ಸುರಿಸುವ ನಾಲ್ಗೆ ಪರಮಾತ್ಮನೆ ||೧೫||

ಮುಕ್ತಕಗಳು - ೬

ಏಕೆ ರಕ್ಷಿಸಿ ವರಾಹನೆ ಕರಪಿಡಿದೆಯೆನ್ನ  

ಸಾಕಾಯ್ತು ಬವಣೆ ಮನುಜನಿಗೆ ಮನೆಯಾಗಿ |

ಬೇಕು ಬೇಡಗಳು ಬರೆ ಹಾಕುತಿವೆ ದಿನನಿತ್ಯ

ನೂಕಿಬಿಡು ಸಾಗರಕೆ ಪರಮಾತ್ಮನೆ ||೨೬||


ಇಂದು ರಮೆ ಒಲಿದಿರಲು ನಿಶಿತಮತಿಯಾಗಿರಲು

ಹೊಂದುವೆನು ಎಲ್ಲವನು ಎನಬೇಡ  ಬಂಧು |

ಮುಂದೆ ಸುಖ ಪಡೆಯಲಿಕೆ ದಾನವನು ಮಾಡಿದವ

ಮಂದಮತಿ ತಾನಲ್ಲ ಪರಮಾತ್ಮನೆ  ||೨೭||


ಚಿಂತೆಯೇ ಚಿಗುರುವುದು ಬೆಳೆದು ಮರವಾಗುವುದು

ಕುಂತಿರಲು ಸುಮ್ಮನೇ ಸೋಮಾರಿ ಗಂಡು |

ಬಂತು ಮಂಡೆಯಲಿ ಬರೆ ದೆವ್ವಗಳ ಕಾರ್ಖಾನೆ

ಕಂತೆ ಕೆಲಸವ ನೀಡು ಪರಮಾತ್ಮನೆ ||೨೮||


ದೇಹದಣುಗಳ ಹಿಂಪಡೆವೆ ಬದಲಿಸುತ ನಿತ್ಯ 

ಮೋಹಗಳ ಹಿಂಪಡೆದು ಮೋಕ್ಷವನು ನೀಡು |

ದಾಹಗಳ ಹಿಂಪಡೆದು ನಿನ್ನ ದಾಸನ ಮಾಡು

ದೇಹಿ ಎನ್ನುವೆ ತಂದೆ ಪರಮಾತ್ಮನೆ ||೨೯||


ಕೋಪವೇ ಬಂದಿರಲಿ ಮನಸುಗಳು ಬೆಂದಿರಲಿ

ತಾಪದಾ ನುಡಿ ಬೇಡ ಆತುರವು ಬೇಡ

ಜೋಪಡಿಗೆ ಬೆಂಕಿ ಹಚ್ಚುವುದಾವ ಲಾಭಕ್ಕೆ

ಆಪತ್ತು ಬೇಡೆಮಗೆ ಪರಮಾತ್ಮನೆ ||೩೦||