Showing posts with label ಗೀತೋಪದೇಶ. Show all posts
Showing posts with label ಗೀತೋಪದೇಶ. Show all posts

Wednesday, July 30, 2025

ಕುಸುಮ ಷಟ್ಪದಿ (ಗೀತೋಪದೇಶ)

ಗೀತೆಯನು ನೀಡಿರುವ
ದಾತನವ ಪರಮಾತ್ಮ
ನೀತಿಯನು ಬೋಧಿಸಿಹ ಬುವಿಯ ಧರ್ಮ |
ಆತುರದ ಮನಗಳಿಗೆ
ಕಾತುರದ ಸಮಯಕ್ಕೆ
ನಾಥ ನೀಡಿದ ನಮಗೆ ಬದುಕೊ ಮಾರ್ಗ ||

ಯುದ್ಧ ಭೂಮಿಯ ಬದುಕು
ಗೆದ್ದು ಬಾಯೆಂದಿಹನು
ಬುದ್ಧಿ ಮಾತನು ಹೇಳಿ ಭಗವಂತನು |
ಮದ್ದು ಗುಂಡುಗಳಿಲ್ಲ
ಯುದ್ಧ ಮನದಾಳದಲಿ
ಬುದ್ಧಿ ನಿಗ್ರಹಿಸಲೀ ಪೆದ್ದು ಮನವ ||

ಕೆಲಸವನು ಮಾಡುತಿರು
ಫಲ ಕೊಡುವ ಪಾತ್ರನಿರೆ
ಕೆಲಸ ಮಾಡದೆ ಬೇರೆ ದಾರಿಯಿಲ್ಲ |
ಕೆಲವರಿರೆ ಸಾತ್ವಿಕರು
ಕೆಲ ರಾಜ ತಾಮಸಿಕ
ಬೆಳೆಸು ಸಾತ್ವಿಕತೆ ಮುಕ್ತಿಯನು ಪಡೆಯೆ ||

ಕಾಯವಿದು ನಶ್ವರವು
ಸಾಯುದಿಹ ಆತ್ಮ ನೀ
ಕಾಯುವುದು ನಿನಗೆ ಮತ್ತೊಂದು ಕಾಯ |
ಮಾಯೆಯಾ ಪರದೆಯನು
ಹಾಯಾಗಿ ತೊಲಗಿಸುವ
ಜೀಯ ನಮಿಸುವೆ ನಿನಗೆ ಪರಮಾತ್ಮನೆ ||