Saturday, December 4, 2021

ಯತ್ರ ನಾರ್ಯಸ್ತು ಪೂಜ್ಯಂತೆ...

ನಾಚಿಕೆಯಲಿ ತಲೆಯಿಂದು ತಗ್ಗಿದೆ, ನಿಂತಿಲ್ಲವಿನ್ನೂ ಕಣ್ಣೀರಧಾರೆ,

ಭಾರತಾಂಬೆಯ ಮಡಿಲಲಿ ಮುದುಡಿವೆ ಹೊಸ ಕನಸುಗಳು,

ಪೈಶಾಚಿಕತೆಗೆ ಬಲಿಯಾಗಿ ನಲುಗಿವೆ ನವಕುಸುಮಗಳು.


“ಕಾಮಾತುರಾಣಾಂ ನ ಭಯಂ ನ ಲಜ್ಜಾ”,

ಹತೋಟಿಯಿಲ್ಲದ ಮೃಗಗಳೇ ನಾವು?

ನಾಗರಿಕತೆಯು ಕೇವಲ ಕಥೆಯಾಗುಳಿದಿದೆಯೇ?


“ನ ಸ್ತ್ರೀ ಸ್ವಾತಂತ್ರ್ಯಮರ್ಹತಿ”

ಭಂಡ, ಪುಂಡ ಕಾಮುಕರ ಭಯವೇ?

ಅವರನ್ನು ಬದಲಾಯಿಸಲಾಗದ ಅಸಮರ್ಥತೆಯೇ?


“ಯಾ ದೇವೀ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ”

ಆ ತಾಯಿಯಿಂದು ಶಕ್ತಿಹೀನಳಾಗಿ ತಲೆತಗ್ಗಿಸಿರುವಳೇ?

ಮಹಿಷರು, ರಕ್ತ ಬೀಜಾಸುರರು ಅಟ್ಟಹಾಸಗೈಯ್ಯುತ್ತಿರುವರೇ?


“ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ”

ಹೇ ದೇವ! ಇನ್ನೂ ಧರ್ಮವು ಉಳಿದಿದೆಯೇ ಭೂಮಿಯ ಮೇಲೆ?

ದ್ರೌಪದಿಯ ಪೊರೆದರೆ ಸಾಕೆ? ಸಂಕಟದ ಆರ್ತನಾದವು ಕೇಳುತ್ತಿಲ್ಲವೇ?


“ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ:”

ತೊರೆದುಬಿಟ್ಟರೇ ದೇವತೆಗಳು ನಮ್ಮ ನಾಡನೇ?

ನಿಲ್ಲದಾಗಿದೆ ಈ ನಾಚಿಕೆಗೇಡಿನ ಪೈಶಾಚಿಕ ವರ್ತನೆ!



ಕನ್ನಡಿಗನ ಕಥೆ


ಕನ್ನಡ, ಕನ್ನಡ, ಕನ್ನಡವೆಂದರೂ ವೇದಿಕೆಯನೇರಿ,

“ಎನ್ನಡ”, “ಎಕ್ಕಡ”, “ವ್ಹಾಟ್ ಡ”, ಎನ್ನುವುದಾಯಿತು ದಿನಚರಿ.

ಏಕೆ ಹೀಗೆ? ಏಕೆ ಹೀಗೆ? ಎಂದು ಅಚ್ಚರಿ ಪಡದಿರಿ,

ಇದು “ಅತಿಥಿ ದೇವೋಭವ” ದ ವಿಪರೀತಾರ್ಥದ ಪರಿ!



ಊರ ಮಕ್ಕಳಿಗೆ ಕನ್ನಡ ಕಡ್ಡಾಯ ಮಾಡಿ ಎಂದರು.

ತಮ್ಮ ಮಕ್ಕಳನು ಇಂಗ್ಲೀಷ್ ಶಾಲೆಗೆ ಕಳಿಸಿದರು,

ಐ.ಟಿ., ಬಿ.ಟಿ., ಮಾಡಿಸಿ ವಿದೇಶಕೆ ರವಾನಿಸಿದರು,

ಕನ್ನಡದ ಮಾಣಿಯ ಕೈಯ್ಯಲ್ಲಿ ಮುಸುರೆ ತೊಳೆಸಿದರು!

ಮನದ ಮಣ್ಣಿನಲಿ


ಮನದ ಮಣ್ಣಿನಲಿ ಕುಡಿಯೊಡೆದ ಬಯಕೆಗೆ

ಆಸೆಯ ನೀರೆರೆದು, ಊಹೆಯ ಬೆಳಕನಿತ್ತು,

ಬೆಳೆಸಿ ಹೆಮ್ಮರವಾಗಿಸಿ, ಫಲ ಕೊಡದ ಅದರ

ರೆಂಬೆಗೆ ನೇಣು ಹಾಕಿಕೊಂಡವರೇ ಹೆಚ್ಚು!