Friday, February 19, 2021

ನೀಲ ದ್ವೀಪದ ನೆನಪು

ಎಳೆನೀರಿನಂತಹ ತಿಳಿನೀರು,

ಬಣ್ಣಗಳು ತಿಳಿನೀಲಿ, ತಿಳಿಹಸಿರು!

ಉಳಿದಿದೆ ನೀಲದ್ವೀಪದ ಹೆಸರು,

ಎದೆಯಲಿಂದು ಅಚ್ಚ ಹಸಿರು!


ತಂದ ಭೂಮ್ಯಾಕಾಶಗಳಿಗೆ ನಂಟ,

ನೀಲಿ ದೇಹದ ಸಾಗರನೆ ಬಂಟ,

ಅಲೆಯಲೆಯಲಿ ಆಗಸನ ಸಿವಿಮಾತ,

ಬುವಿಗೆ ತುಪಿಸುವಾತನೇ ಈತ!


ಮಂದಮಾರುತನ ಹೆಜ್ಜೆಗೆ,

ಅಲೆಗಳು ಕಟ್ಟಿವೆ ಗೆಜ್ಜೆ!

ಇಲ್ಲಿ ಹೆಜ್ಜೆಗೆಜ್ಜೆಗಳ ಮೇಳ

ಮನಕೆ ಮುದದ ಜೋಗುಳ!


ಚಿನ್ನದ ಮರಳ ಮೇಲೆ ಕುಳಿತು,

ಹಾಗೆಯೇ ತಲೆಯೆತ್ತಿದರೆ ಇನಿತು,

ಅಂಬರ ರಾಣಿಯ ಕೆನ್ನೆಯಲಿ,

ಅಂಟಿದೆ ಸಿಗ್ಗಿನ ಕೆನ್ನೀರ ಓಕುಳಿ!


ಬಿಳಿಯ ಕೊಡೆಯ ಮರೆಯಿಂದ,

ಇಣುಕುತಿಹನು ಬೆಳಕಿನೊಡೆಯ.

ರನ್ನದ ಹೊದಿಕೆ ಹೊದ್ದಿಸಿದ,

ಸಾಗರಗೆ ಪ್ರಿಯ ಗೆಳೆಯ!


ಬಂಗಾಳ ಕೊಲ್ಲಿಯಲಿ,

ನೀಲದ್ವೀಪದಂಚಿನಲಿ,

ಮೈಮರೆತ ಚಣಗಳು,

ಸಗ್ಗದಾಚೆಯ ಸುಖಗಳು!

Thursday, February 18, 2021

ಸಲಹು ತಂದೆ (ಭಾಮಿನಿ ಷಟ್ಪದಿ)

ಮುರಳಿ ಮಾಧವ ಕಮಲ ನಯನನೆ 

ಪೊರೆದು ನನ್ನನು ಸಲಹು ತಂದೆಯೆ

ವರವ ನೀಡುತ ಭಕ್ತಿಭಾವವ ಮನದಿ ನೆಲೆಗೊಳಿಸು!

ಕರುಣ ನೇತ್ರನೆ ಶರಣು ಬಂದಿಹೆ

ಪರಮಪಾವನ ಚೆಲುವ ಮೂರ್ತಿಯೆ 

ಕರವ ಪಿಡಿಯುತ ಬಾಳ ಬಾಧೆಯ ನೀನೆ ಪರಿಹರಿಸು!


ಚೆಲುವ ಚೆನ್ನಿಗ ಶಾಮಸುಂದರ 

ಜಲಜನಾಭನೆ ಮಧುರ ಭಾಷಿಯೆ 

ಸಲಹು ಭಕುತರ ಚರಣದಡಿಯಲಿ ನಗುವ ಸೂಸುತಲಿ!

ಗೆಲುವ ತಾರೋ ನನ್ನ ಮನದಲಿ

ಬಲವ ನೀಡೋ ನನ್ನ ತನುವಲಿ

ನಿಲುವೆ ನೋಡೋ ನೀನು ನೀಡುವ ಕಾರ್ಯ ಮುಗಿಸುತಲಿ!

Thursday, February 11, 2021

ದಾರಿ ತೋರೆನಗೆ (ಭೋಗಷಟ್ಪದಿ)

ದೇವ ಹಿಡಿದೆ ಚರಣ ಕಮಲ

ಕಾವೆ ನೀನು  ನಮ್ಮ  ಸಕಲ

ಭವದ  ಬಂಧ ಬಿಡಿಸಿಕೊಳುವ ದಾರಿ ತೋರೆಯಾ? |

ಕವಿದ ಮೋಡ ಚದುರಿ ಹೋಗಿ

ಜವನ ಭಯವು  ಕಳೆದು ಹೋಗಿ  

ಭವನದಲ್ಲಿ ನಿನ್ನ ಬೆಳಕ ಕಿರಣ ಕಾಣಲಿ! ||


ಎನ್ನ ಮನದ ಬಳಿಯೆ ಕುಳಿತು

ನನ್ನ ತಪ್ಪು ನೋಡುತಿದ್ದು 

ಕಣ್ಣ ಮುಚ್ಚಿ ಕುಳಿತೆಯೇಕೆ ಪರಮ ಬಂಧುವೇ? |

ಎನ್ನ  ತಪ್ಪ ತಿದ್ದಿ ತೀಡು 

ಬಿನ್ನವಿಸುವೆ ಶಿಕ್ಷೆ ನೀಡು

ಭಿನ್ನವಾದ ವರವು ಬೇಡ ಪದುಮನಾಭನೇ! ||

ಪ್ರೇಮಪಯಣ (ಭೋಗಷಟ್ಪದಿ)

ಏನು ಹೇಳು ಮನದ ನುಡಿಯ

ಜೇನ ಸಿಹಿಯು ನಿನ್ನ ಹೃದಯ

ನಾನು ನೀನು ಬೆಸೆವ ನಮ್ಮ ಬದುಕ ಕೊಂಡಿಯ! 

ಬಾನು ಸೇರಿ ತಾರೆ ಮೀರಿ

ಯಾನ ಮಾಡಿ ಗಡಿಯ ದಾಟಿ

ಗಾನ ಪಾಡಿ ಲಯದಿ ನಡೆಸು ಬದುಕ ಬಂಡಿಯ! 


ಇದ್ದರಿರಲಿ ಗಾಳಿ ಸುದ್ದಿ

ಬದ್ಧ ನಾವು ನಮ್ಮ ನುಡಿಗೆ

ಶುದ್ಧ ಮನದ ಪ್ರೇಮ ಗೀತೆ ನಾವು ಹಾಡುವ!

ಇದ್ದರಿರಲಿ ಕೊಂಕು ನುಡಿಯು

ಹದ್ದುಮೀರಿ ಜಂಟಿಯಾಗಿ

ಗೆದ್ದು ನಾವು ಬಾಳ ಪಂದ್ಯ ಗುರಿಯ ಸೇರುವ! 

Tuesday, February 2, 2021

ಪಾಪನಾಶಿನಿ (ಭಾಮಿನಿ ಷಟ್ಟದಿ)

 ಹರಿದು ಬಂದೆಯ ಗಂಗೆ ತಾಯೇ 

ಹರಿಯ ಚರಣದ ಕಮಲದಿಂದಲೆ 

ಹರನ ಜಟೆಯನು ಸೇರಿ ನಿಂದಿಹೆ ದಿವ್ಯಪಾವನಿಯೇ!

ಪರರ ಪಾಪವ ತೊಳೆಯಲೆಂದೇ 

ಹರಿಹರರ ತಾಕುತಲಿಳಿದೆ ನೀ 

ಪರಮ ಪಾವನಿ ನಮಗೆ ಸದ್ಗತಿ ನೀಡಲೋಸುಗವೇ!


ಕಪಿಲ ಮುನಿಗಳ ಶಾಪ ತೊಳೆಯಲು

ನೃಪ ಭಗೀರಥ ಕರೆದ ಧರಣಿಗೆ

ಶಪಿತ ಪಿತೃಗಳಿಗಾಗಿ ಬಂದರು ಪೊರೆದೆ ಭಕ್ತರನು!

ನೃಪನ ತಪಸಿಗೆ ಫಲವು ದೊರಕಿತು 

ತಪಿತ ಧರಣಿಗೆ ಮೋಕ್ಷ ಸಿಕ್ಕಿತು

ದಿಪುತ ಜಲದ ಹೊನಲು ಬುವಿಯಲಿ ಹರಿದರಿದು ನಲಿದಿದೆ!


ಇಳಿದೆ ಪಾವನ ಮಾಡೆ ಬುವಿಯನು

ಕಳೆದೆ ಜನಗಳ ಪಾಪಗಳನೇ

ಬಳಿಗೆ ಬಂದರೆ ಮಮತೆಯಿಂದಲೆ ತಂಪನೆರೆವೇ ನೀ

ಜಳಕ ಮಾಡಲು ನಿನ್ನ ಮಡಿಲಲಿ

ಪುಳಕ ನಮ್ಮಯ ಮನಸು ದೇಹವು

ಕೊಳಕು ಕಳೆದಿಹ ಭಾವ ನಮ್ಮಲಿ ಪುಣ್ಯ ಪಡೆದಿಹೆವು

ದೇವಗಂಗೆ

ಇಳಿದು ಬಂದೆ ಗಂಗೆ ತಾಯೇ

ಹರಿಯ ಚರಣ ಕಮಲದಿಂದ

ಶಿವನ ಜಟೆಯ ಸೇರಿ ನಿಂದೆ ದಿವ್ಯ ಪಾವನೀ!

ನಮ್ಮ ಪಾಪ ತೊಳೆಯಲೆಂದೇ

ಹರಿಹರರ ತಾಕಿ ಬುವಿಗೆ ಬಂದೆ

ಪಾಪನಾಶಿನಿ ನಮಗೆ ಸದ್ಗತಿ ನೀಡಲೋಸುಗ!


ಕಪಿಲ ಮುನಿಗಳ ಶಾಪ ತೊಳೆಯೆ

ಜೀವದುಂಬಲು ಭಗೀರಥನಾ

ಪಿತರಿಗೋಸುಗೆ ಬಂದೆಯಾದರೂ ಪೊರೆದೆ ಎಮ್ಮನು!

ನಮಿಪೆ ತಾಯೇ ನಮ್ಮ ಕಾಯೇ

ಪಾಪ ನಾಶಿನಿ ಪುಣ್ಯದಾಯಿನಿ

ವರವ ನೀಡುವ ದೇವ ಕನ್ಯೆಗೆ ತಲೆಯ ಬಾಗುವೆ!


ಅಲಕನಂದೆಯೆ ಭೋಗವತಿಯೇ

ಬಾರೆ ಭಾಗೀರಥಿಯೆ ಜಾಹ್ನವಿ

ದೇವಗಂಗೆ ಗಿರಿಮಂಡಲಗಾಮಿನಿ ನಮನ ನಿನಗೆ!

ವಿಷ್ಣುಪಾದೀ ನರಕಭೀತಿಹೃತೇ

ದೇವಭೂತಿ ಹರಶೇಖರಿಯೇ

ಭಾಗ್ಯವತೀ ವರನದಿ ನಮಸ್ತೆ ನಮೋನಮಃ!