Thursday, March 26, 2020

ಏನು ಮಾಡ್ಲಿ ದೇವ್ರೇ

ಕರೋನಾ ಕರೋನಾ ಕರೋನಾ,
ಹೇಗೆ ಕಳೆಯಲಿ ನಾ ಸಮಯಾನಾ!

ಹೊರಗೆ ಹೋದರೆ ಪೋಲೀಸ್‌ ಕಾಟ,
ಮನೇಲೇ ಕುಳಿತರೆ ಹೆಂಡತಿ ಪಾಠ.
ವಾಟ್ಸಾಪ್‌ ನೋಡಿದ್ರೆ ಜ್ವರ ಬರುತ್ತೆ,
ಟಿವಿ ನೋಡಿದ್ರೆ ಹೆದ್ರಿಕೆ ಆಗುತ್ತೆ!

ಕೆಮ್ಮು ಬಂದರೆ ಭಯ ಆಗುತ್ತೆ,
ಸೀನು ಬಂದರೆ ಪ್ರಾಣ ಹೋಗುತ್ತೆ.
ಗುಡಿಯಲಿ ಕೂತು ಬೇಡೋಣಾಂದ್ರೆ,
ಅದಕ್ಕೂ ಇದೆಯಲ್ಲ ತೊಂದ್ರೆ!

ಗೆಳೆಯರು ಮಕ್ಕಳು ಮೊಮ್ಮಕ್ಳೆಲ್ಲ,
ವಿಡಿಯೋದಲ್ಲೇ ಹಾಯ್‌ ಬಾಯೆಲ್ಲ .
ಮುಂಜಾನೆ ಪಾರ್ಕಲಿ ಸುತ್ತಾಟವಿಲ್ಲ,
ಹಾಟ್‌ ಕಾಫಿಯಲಿ ಮೀಟಿಂಗಿಲ್ಲ.

ಪುಸ್ತಕ ಹಿಡಿದರೂ ಓದೋಕಾಗಲ್ಲ,
ಏನೋ ಯೋಚನೆ ಬರುತ್ತಲ್ಲ.
ಮನಸ್ಸಿಗಂತೂ ನೆಮ್ಮದಿಯಿಲ್ಲ,
ಸುಮ್ನೆ ಕೂರೋಕೆ ಆಗ್ತಾ ಇಲ್ಲ.

ಹಾಲು ಪ್ಯಾಕೆಟ್‌ ಮೇಲೇನಿರುತ್ತೋ,
ನ್ಯೂಸ್‌ ಪೇಪರಿಗೆ ಸೋಂಕಾಗಿರುತ್ತೋ,
ತರಕಾರಿ ತರೋದೆ ಬೇಡ ಅನ್ಸುತ್ತೆ,
ತಿಂಗಳ ದಿನಸಿ ಸಾಕಾಗುತ್ತೆ.

ಚೀನಾಲಿ ಯಾರೋ ಏನೋ ತಿಂದ್ರೆ,
ಪ್ರಪಂಚಕೆಲ್ಲ ದೊಡ್ಡ ತೊಂದ್ರೆ!
ಕೈ ತೊಳೆದೂ ತೊಳೆದೂ ಸುಸ್ತಾಯ್ತು,
ಟ್ಯಾಂಕಿನ ನೀರೆಲ್ಲ ಖರ್ಚಾಯ್ತು!

ಮನೇಲೆ ಸ್ವಲ್ಪ ವಾಕಿಂಗ್‌ ಮಾಡ್ದೆ.
ಅಲ್ಲೇ ಸ್ವಲ್ಪ ಜಾಗಿಂಗ್‌ ಮಾಡ್ದೆ.
ಏನು ಮಾಡ್ಲಿ ದೇವ್ರೆ, ಅಯ್ಯೋ!
ಇನ್ನೇನು ಮಾಡ್ಲಿ ದೇವ್ರೆ!

Tuesday, March 24, 2020

ಕೊರೋನಾ ಪುರಾಣ

ಕಣ್ಣಿಗೆ ಕಾಣದ ಕೊರೋನಾ,
ಜಗವನು ಕಾಡಿದ ಪುರಾಣ.

ಹುಟ್ಟಿತು, ಎದ್ದಿತು, ವುಹಾನಿನಲ್ಲಿ,
ಬೆಳೆಸಿತು ಪಯಣ ವಿಮಾನದಲ್ಲಿ.
ಕೆಲವೇ ದಿನಗಳ ವಾಸದಲಿ,
ಹಾಹಾಕಾರವು ಜಗದಲ್ಲಿ.

ಬೆನ್ನನ್ನು ಹತ್ತಿತು ಬೇತಾಳ,
ತಪ್ಪಿತು ಎಲ್ಲರ ಬದುಕಿನ ತಾಳ.
ಹೆದರಿದೆ, ಬೆದರಿದೆ, ಜಗವೆಲ್ಲ,
ಬೇತಾಳನ ಇಳಿಸಲು ತಿಳಿವಿಲ್ಲ.

ಕೈಗಳ ಕುಲುಕಿಗೆ, ಮೈಗಳ ಸನಿಹಕೆ,
ಎಂದೂ ಇಲ್ಲದ ಬಿಗುಮಾನ.
ಕೈಗಳ ಜೋಡಿಸಿ, ನಸುನಗೆ ಸೂಸಿ,
ನಮಿಸಿದರಾಯಿತು ಸಮ್ಮಾನ.

ಶಿಸ್ತು ಮೀರಿದರೆ ಶಿಕ್ಷೆ ತಪ್ಪದು,
ಅತ್ತುಕರೆದರೆ ಏನೂ ಆಗದು!
ಕರುಣೆಯೇ ಇಲ್ಲದ ಕೊರೋನಾ,
ಹೀರಿದೆ ಎಲ್ಲ ಹಿರಿಯರ ಪ್ರಾಣ.

ಹೆಣಗಳು ಉರುಳಿವೆ ಸಾವಿರಗಳಲಿ,
ಮಣ್ಣು ಮಾಡಲು ಎಡೆಯೆಲ್ಲಿ?
ಇಲ್ಲವೇ ಇಲ್ಲ ಕಣ್ಣೀರಿಗೆ ಅಂಕೆ,
ಒರೆಸುವ ಬೆರಳಿಗೂ ಸೋಂಕಿನ ಶಂಕೆ!

ಜಗದ ಪುಪ್ಪಸ ಪುಸ್ಸಾಗಿಸಿತು,
ವೈದ್ಯಕುಲಕೇ ಸವಾಲು ಒಡ್ಡಿತು,
ಆರ್ಥಿಕತೆಯ ಸೊಂಟವ ಮುರಿಯಿತು,
ಬಡಬಗ್ಗರ ಹೊಟ್ಟೆಗೆ ಹೊಡೆಯಿತು!

ಬೀದಿಗೆ ಇಳಿಯಲು ಹೆದರಿದರೆಲ್ಲ,
ಹೆದರಿ ಮನೆಯಲಿ ಅಡಗಿದರಲ್ಲ,
ಯುಗಾದಿಗಿಲ್ಲ ಬೇವು, ಬೆಲ್ಲ!
ಕರೋನಾ ಇದುರು ಯಾರೂ ಇಲ್ಲ!

ರಕ್ತಬೀಜಾಸುರನ ಸಂತತಿಯಂತೆ,
ಹರಡಿದೆ ಜಗದಲಿ ಇದರಾ ಸಂತೆ.
ಕಾದಿಹೆ ಕಾಳಿ ಬರುವಳು ಎಂದೇ,
ಕೊರೋನಾ ಛಿದ್ರವಾಗಲಿ ಇಂದೇ!

Monday, March 9, 2020

ಬಾಳ ಪಯಣ

ಬಾಳ ದೋಣಿಯ ಪಯಣ ಸಾಗಿದೆ,
ಆಳ ಕಡಲಿನ ಮೇಲೆ ತೇಲಿದೆ.

ನೀಲಿ ನೀರಿನ ಕಡಲು ಹರಡಿದೆ,
ತಿಳಿಯ ಬಿಸಿಲಿನ ಕಾವು ಹಿತವಿದೆ.
ತಂಪು ಗಾಳಿಯ ಸೊಂಪು ಸೊಗಡಿಗೆ,
ಮನವು ಮುಗಿಲಿಗೆ ಹಾರಿ ಹೋಗಿದೆ.

ಎಲ್ಲ ಸೊಗಸಿದೆ, ಬೆಲ್ಲ ಸಿಹಿಯಿದೆ,
ಕಣ್ಣು ಮುಚ್ಚಲು ಕನಸು ಹತ್ತಿದೆ.
ಒಂದೇ ಚಣದಲಿ ಮೋಡ ಕವಿದಿದೆ,
ಬಿರುಸು ಗಾಳಿಗೆ ಅಲೆಯು ಎದ್ದಿದೆ.

ಮೋಡ ಗುಡುಗಿದೆ, ದೋಣಿ ನಡುಗಿದೆ,
ಭಯದ ಬೆಂಕಿಯು ಮನವ ಸುಡುತಿದೆ.
ದೋಣಿ ಮುಗುಚಿದೆ, ನೀರ ಸೇರಿದೆ,
ಕೊರೆವ ನೀರಿನ ಚಳಿಯು ಕಚ್ಚಿದೆ.

ನೀರ ಅಲೆಗಳು ಹೊಡೆತ ಕೊಡುತಿವೆ,
ನೆಲೆಯು ಇಲ್ಲದೆ ದೇಹ ಮುಳುಗಿದೆ,
ಉಸಿರು ಕಟ್ಟಿದೆ, ಜೀವ ಬೆಚ್ಚಿದೆ,
ಉಳಿವ ಆಸೆಯು ನೆಲವ ಕಚ್ಚಿದೆ.

ಕೊನೆಯ ಉಸಿರಿನ ಸಮಯ ಬಂದಿದೆ.
ಬೇರೆ ದಾರಿಯು ಈಗ ಕಾಣದೆ.
ದೇವ ದೇವನ ಮನದೆ ಬೇಡಿದೆ.
"ಒಡನೆ ನನ್ನನು ಕಾಯೊ ಒಡಯನೆ".

ತೇಲಿ ಬಂದಿತು ಮರದ ದಿಮ್ಮಿಯು,
ದೈವ ನೀಡಿದ ನನ್ನ ಕುದುರೆಯು,
ಶೃತಿಯ ಹಿಡಿಯಿತು ಎದೆಯ ನಾಡಿಯು,
ಎದೆಯ ತುಂಬಿದ ಪೊರೆದ ಸ್ವಾಮಿಯು.

ಕನಸು ಒಡೆಯಿತು, ಕಣ್ಣು ತೆರೆಯಿತು,
ತಿಳಿಯ ಬಿಸಿಲದು ಕಣ್ಣು ಹೊಡೆಯಿತು,
ನೀಲಿ ಕಡಲದು ನೋಡಿ ನಕ್ಕಿತು,
ಒಂದು ಜನುಮವು ಕಳದು ಹೋಯಿತು!


Friday, March 6, 2020

ದೇವರ ಕಣ್ಣು

ಭರ್ಜರಿ ರಸ್ತೆಯಲಿ ಭಾರೀ ಮಳಿಗೆ,
ಭರಪೂರ ಜೇಬಿನ ಮಂದಿ ಒಳಗೆ.
ಕಣ್ಣು ಕೋರೈಸುವ ದೀಪಗಳ ಬೆಳಕು,
ಪತಂಗಗಳ ಸೆಳೆಯಲು ಇನ್ನೇನು ಬೇಕು?

ಕೈಗೆಟಕುತಿವೆ ಬೆಲೆಯ ಒಡವೆ ವಸ್ತ್ರಗಳು,
ಮುಟ್ಟಿದರೆ ಸಾಕು ಅರಳುತಿವೆ ಮನಗಳು,
ಎಲ್ಲ ಬೇಕೆನ್ನುವ  ಮನದ ಕಾಮನೆಗಳು,
ಸಾಕಾಗದಾಗಿದೆ ಕಿಸೆಯ ಕಾಂಚಾಣಗಳು.

ಇರುವರೆಲ್ಲರೂ ಅವರವರ ಲೋಕದಲಿ,
ಯಜಮಾನ, ಸಿಬ್ಬಂದಿ ಅವರವರ ಕೆಲಸದಲಿ.
ಮನವ ಕಾಡುತಿವೆ ನೂರು ಬಯಕೆಗಳು,
ಕಣ್ತಪ್ಪಿಸಿ ಕದಿಯಲು ಸುಲಭ ಸಂದರ್ಭಗಳು.

ಯಜಮಾನನಿಗೆ ಇಲ್ಲ ಚಿಂತೆಗಿಂತೆಗಳು,
ಇಲ್ಲವೇ ಕಾವಲಿಗೆ  ನೂರೆಂಟು ನಯನಗಳು?
ಕಾಯುತಿವೆ ಎಲ್ಲೆಡೆ ಕ್ಯಾಮೆರಾ ಕಣ್ಣುಗಳು,
ಗಮನದಲ್ಲಿದೆ ಎಲ್ಲರ ಚಲನ ವಲನಗಳು!

ಭಗವಂತ ಬುದ್ಧಿವಂತ ಈ ಯಜಮಾನನಂತೆ,
ನಿಯುತ ಕಣ್ಣುಗಳ ಜಗದಿ ಅಳವಡಿಸಿಹನಂತೆ,
ತಪ್ಪು ಒಪ್ಪುಗಳ ನಡೆಯುತ್ತಿದೆ ಚಿತ್ರಣ,
ಸಂದೇಶ ಹೋಗುತಿದೆ ಅನುದಿನ ಅನುಕ್ಷಣ!

ನಮ್ಮ ಕಂಗಳೇ ಅವನ ಕ್ಯಾಮೆರಾಗಳು!
ನಮ್ಮ ತಪ್ಪನ್ನು ಚಿತ್ರಿಸಿವೆ ನಮ್ಮವೇ ಕಂಗಳು!
ಕಥೆಯ ಹೇಳುತಿವೆ ನಮ್ಮವೇ ಮನಗಳು!
ಚಿತ್ರಗುಪ್ತನ ತಾಣವೇ ನಮ್ಮ ಜೀವಕಣಗಳು!

ಸಕಲ ಜೀವರಾಶಿಯೇ ಅವನ ಸಂಪರ್ಕ ಜಾಲ!
ನಮಗೆ ನಮ್ಮನೇ ಕಾವಲಿಟ್ಟು ನಗುತಿಹನು ಕಳ್ಳ!

370 ಎಂಬ ವಿಷ

ನಾ ತಾಯಿ ಭಾರತಾಂಬೆ,
ಆದೆ ಕೆಲ ಮಕ್ಕಳ ಕೈಗೊಂಬೆ.
ಸ್ವಾರ್ಥದಾಟದಲಿ ಅವರು,
370 ಎಂಬ ವಿಷವನುಣಿಸಿದರು!

ವಿಷ ಬೆರೆತು, ಕಹಿ ಸುರಿದು,
ಅರ್ಬುದವಾಗಿ ಬೆಳೆದು,
ರಕ್ತ ಹರಿಯಿತು ಕೋಡಿ,
ಇದಾವ ಪುರುಷಾರ್ಥ ನೋಡಿ.

ಮಕ್ಕಳು ಮಕ್ಕಳ ನಡುವೆ,
ಬಡಿದಾಟದಲಿ ಆದೆ ಬಡವೆ.
ಯಾರಿಗೆ ಹೇಳಲಿ ನನ್ನ ಕಥೆಯ,
ಮನದಾಳದ ಮಾಸದ ವ್ಯಥೆಯ?

ಏಳು ದಶಕಗಳ ನೋವು,
ಸಹಿಸಲಾಗದ ಕಹಿ ಬೇವು.
ಆಗ ಹುಟ್ಟಿದ  ಹಸಿ ಹುಣ್ಣು,
ಕೆಲವರಿಗೆ ಮಾತ್ರ ಸಿಹಿ ಗಿಣ್ಣು.

ಎದ್ದು ನಿಂತನೊಬ್ಬ ಹೆಮ್ಮೆಯ ಪುತ್ರ,
ಛಾತಿ ಛಪ್ಪನ್ನಿಂಚಿನ ಗಾತ್ರ!
ಅರ್ಬುದವ ಛೇದಿಸಿ, ಮುಲಾಮು ಹಚ್ಚಿ,
ತಪ್ಪಿಸಿದ ನಾ ಆಗುವುದ ಹುಚ್ಚಿ!

ಇಂದು ಸುರಿದ ಆನಂದ ಭಾಷ್ಪದೆ,
ಆರ್ದ್ರವಾಯಿತು ಒಣಗಿದೆದೆ.
ಚಿರಕಾಲ ಸುಖವಾಗಿ ಬಾಳಿ,
ಹೊಂಗಿರಣದ ಬೆಳಗಾಗಲಿದೆ ತಾಳಿ.



ಹೊಸ ವರ್ಷ

ಬಂತಿದೋ ಮತ್ತೊಂದು ಬುತ್ತಿ,
ಹೊಚ್ಚ ಹೊಸದೆಂದು ಸುದ್ದಿ.

ಬುತ್ತಿಯಲಿ ಹೊಸರುಚಿಯ ನಿರೀಕ್ಷೆ,
ಉಂಟೇನೋ ಬಿಸಿಬಿಸಿಯ ದೋಸೆ.
ಕಹಿಯ ಮರೆಯುವ ಆಕಾಂಕ್ಷೆ,
ಸಿಹಿಯ ಮೂಟೆಯ ಆಸೆ.

ಜಿಹ್ವೆಯಲ್ಲಿ ಜಿನುಗಿದೆ ತೇವ,
ಕಾತುರದೆ ಸಂಭ್ರಮಿಸಿದೆ ಜೀವ.
ಪ್ರತಿ ಸಾರಿಯೂ ಹೀಗೇ,
ಅಮೃತವೇ ಸಿಕ್ಕ ಹಾಗೆ.

ಆಶಿಸುವುದು ಸಹಜ ಗುಣ,
ಮನುಜನ ಮನದ ತಾನ.
ಕನಸಿನ ಲೋಕದ ಸೀಮೆ,
ಆಗದಿರಲಿ ಬರಿಯ ಭ್ರಮೆ.

ಅಡುಗೆ ಆಕೆಯದೇ ಉಂಟು,
ಸರಕಿಗೆ ನನ್ನದೇ ಗಂಟು,
ನನ್ನ ಸಂಪಾದನೆಗೆ ತಕ್ಕದ್ದು,
ನನ್ನ ಪರಿಶ್ರಮಕ್ಕೆ ದಕ್ಕಿದ್ದು.

ಆದರೂ ಇದೆಯಿಲ್ಲಿ ನಿರೀಕ್ಷೆ,
ಹೊಸದನ್ನು ಪಡೆಯುವ ಕಾಂಕ್ಷೆ.
ಆಗದಿರಲಿ ಯಾರಿಗೂ ನಿರಾಶೆ,
ಎಲ್ಲರಿಗೂ ಪ್ರೀತಿಯ ಶುಭಾಕಾಂಕ್ಷೆ!

ಮಧುರ ಮಧುರವೀ ಮಂಜುಳ ಗಾನ

ಕವಿಯ ಭಾವಗಳು,
ಸುಂದರ ಸ್ವಪ್ನಗಳು.
ಪದಗಳು ಹುಟ್ಟುತಿವೆ,
ಹಂದರವ ಕಟ್ಟುತಿವೆ,
ಹಾಡಿಗೆ ಅಸ್ತಿಪಂಜರವ ಕಟ್ಟುತಿವೆ!

ಬಂದನಿಗೋ ಮಾಯಗಾರ,
ಸರಿಗಮದ  ಜಾದೂಗಾರ.
ದಂಡವನ್ನು ಆಡಿಸಿದ,
ರಕ್ತಮಾಂಸ ಕೂಡಿಸಿದ,
ಹಾಡಿಗೆ ಸುಸ್ವರೂಪವ ನೀಡಿದ!

ಸುಸ್ವರದ ಮಾಂತ್ರಿಕ,
ಕಂಠೀರವ ಗಾಯಕ.
ಗುಂಡಿಗೆಯ ತೆರೆದ,
ಉಸಿರನ್ನು ಹೊಸೆದ,
ಹಾಡಿಗೆ ಪ್ರಾಣವನು ತುಂಬಿದ!

ಕೇಳುತಿವೆ ಕಿವಿಗಳು,
ಮಧುರತಮ ಸ್ವರಗಳು.
ಮಕರಂದದ ಝರಿಗಳು,
ಗಂಧರ್ವರ ವರಗಳು,
ಮಧುರ ಮಂಜುಳ ಗಾನಗಳು!

ಸೌರಮಂಡಲಾಧಿಪ

ಸ್ವರ್ಣ ಹಸ್ತ, ವರ್ಣ ಜನಕ,
ಆತ್ಮಕಾರಕ, ಕರ್ಮಯೋಗಿ.
ಅಂಬರ ತಿಲಕ, ದಿವ್ಯ ಚೇತನ,
ನಿತ್ಯ ನೂತನ ದಿನಕರ.

ಸಹಸ್ರ ದೀಪ, ಸಹಸ್ರ ಹಸ್ತ,
ನವ ಗ್ರಹಗಳ ನಾಯಕ.
ಸರ್ವ ಪೂಜಿತ, ಚಂದ್ರ ಸ್ನೇಹಿತ,
ಉಷಾ, ಸಂಧ್ಯಾ ಪ್ರಿಯಕರ.

ಛಾಯಾ ಪ್ರಿಯಪತಿ, ಪುತ್ರ ವೈರಿ,
ಸಪ್ತಾಶ್ವ ರಥನಾಯಕ.
ಅಸ್ತಿ ಕಾರಕ, ಅಸ್ತು ಹಸ್ತ,
ವೃಕ್ಷ ಸಂಕುಲ ರಕ್ಷಕ.

ದಿವ್ಯ ಜ್ಯೋತಿ, ಭವ್ಯ ಬಂಧು,
ಮಾಣಿಕ್ಯ ರತ್ನ ಭೂಷಿತ.
ಕ್ರೂರ ಹಸ್ತ, ಅಂಬರ ನೇತ್ರ,
ಮನುಕುಲ ಸಂಪೂಜಿತ.

ಭೂಮಂಡಲ ಭಾಗ್ಯಜ್ಯೋತಿ,
ಸೌರಮಂಡಲಾಧಿಪ.
ವಂದೇ ದೇವ, ವಂದೇ ದೇವ,
ರಥಸಪ್ತಮಿಯ ಶುಭದಿನ.



ಸಪ್ತಾಶ್ವನ ಸಂದಿಗ್ಧತೆ


(ಜ್ಯೋತಿಷ್ಯ ತಿಳಿದವರಿಗಾಗಿ, ಸಂಕ್ರಾಂತಿ 2020)

ಇಳೆಯು ನೋಡು ನಲಿಯುತಿಹಳು,
ಬೆಳೆಯ ಕೊಟ್ಟು ಹರಸುತಿಹಳು,
ನಿನ್ನ ಬೆಳಕಿನ ವರವ ಪಡೆದು,
ತನ್ನ ಮಕ್ಕಳ ಹಸಿವ ತೊಡೆದು.

ಮಿಹಿರ ಹೇಳು ಏಕೀ ತಳಮಳ,
ಎದೆಯ ಗೂಡಲಿ ಏನು ಕಳವಳ?
ಮಗನ ಮನೆಯಲಿ ಇಟ್ಟೆ ಹೆಜ್ಜೆಯ,
ಸುತನ ನೋಡುವ ಇಷ್ಟ, ಆಶಯ.

ಶನಿಯ ಮುನಿಸಿನ ನೆನಪು ಕಾಡಿತೆ?
ಮತ್ತೆ ಜಗಳದ ಭಯವು ಮೂಡಿತೆ?
ಬದುಕಿನಂಚಿನ ದಿನವು ಬಾರದೆ,
ತಂದೆ ಮಕ್ಕಳ ಋಣವು ಮುಗಿವುದೆ?

ಪುತ್ರಮೋಹವ ತೊರೆಯಲಾರೆ,
ಅವನ ಕೋಪವ ಸಹಿಸಲಾರೆ.
ನಿಮ್ಮ ಘರ್ಷಣೆ ನಮಗೆ ತೊಂದರೆ,
ಮುನಿಸು ತೊರೆದು ನಿಲ್ಲಿ ಆದರೆ.

ಮಕರ ಗೃಹದಲಿ ನಿಮ್ಮ ಭೇಟಿ,
ನಿಮ್ಮ ಶಕ್ತಿಗೆ ಯಾರು ಸಾಟಿ?
ಇರಲಿ ಸಂಯಮ ಇಬ್ಬರಲ್ಲಿ,
ಕರುಣೆ ಇರಲಿ ಇತರರಲ್ಲಿ.

ಗುರುಕುಲದಲಿ ಕುವರನಿರುವ,
ಹತ್ತೇ ದಿನದಲಿ ಬಂದು ಸೇರುವ.
ಎದೆಗೆ ಎದೆಯ ಕೊಟ್ಟು ಅಪ್ಪಿಕೋ,
ಮನದ ಮುನಿಸು ಬಿಟ್ಟು ಒಪ್ಪಿಕೊ!


ಬಣ್ಣಗಳ ಹೋಳಿ

ಅಣ್ಣ ತಮ್ಮ, ಅಕ್ಕ ತಂಗಿ,
ತಾಯಿ ತಂದೆ, ಅಜ್ಜಿ ತಾತ,
ಗೆಳೆಯ ಗೆಳತಿ, ಒಲಿದ ಜೋಡಿ,
ಬಂಧ ಹಲವು, ಬಣ್ಣ ಹಲವು.

ಕೆಂಪು, ಹಸಿರು, ಹಳದಿ, ನೀಲಿ,
ಬಂಧ ತಳೆವ ರಂಗು ಹಲವು,
ರಂಗು ಗುಂಗು, ಹೋಳಿ ಇಲ್ಲಿ,
ಬನ್ನಿ ತೋರಿ, ನಿಮ್ಮ ಒಲವು.

ಮನದ ಕಾಮವ ಸುಡುವ ಬನ್ನಿ,
ಸುಡುವ ನೆನಪನು ಸುಟ್ಟು ಬಿಡುವ.
ಮೂಲೆ ಮೂಲೆ ಹುಡುಕಿ ತನ್ನಿ,
ಹಳೆಯ, ಹರಿದ, ತೊರೆದು ಬಿಡುವ.

ನಮ್ಮ ಅಹಂ ನಮಗೆ ವೈರಿ,
ಬೆಂಕಿ ಹಚ್ಚಿ ಸುಟ್ಟು ಬಿಡುವ.
ಧ್ಯಾನ ಮಾಡಿ, ಎಲ್ಲ ಸೇರಿ,
ಶಿವನ ಪಾದ ಹಿಡಿದು ಬಿಡುವ.

ಸುಟ್ಟ ಮೇಲೆ ಹಗುರ ಮನವು,
ಸ್ನಾನ ಮಾಡಿ ಶುದ್ಧ ತನುವು,
ಮತ್ತೆ ಸಜ್ಜು ಬಾಳ ಯಾತ್ರೆಗೆ,
ಜೀವನ ಎನ್ನುವ ಜಾತ್ರೆಗೆ!


ಆದಿ, ಅಂತ್ಯ

ಯುಗದ ಅಂತ್ಯದ ಬೀಜಕೆ,
ಯುಗದ ಆದಿಯ ಮೊಳಕೆ.
ಜಗಕೆ ಹಸಿರು, ಮನಕೆ ಹಸಿರು,
ಹುರುಪು ಹುರುಪಿನ ಉಸಿರು.

ಪ್ರಭವ ವಿಭವಗಳ  ಕಾಲಚಕ್ರ,
ಕುಂಬಾರ ನಿನ್ನ ಪ್ರಿಯಚಕ್ರ.
ವಿಳಂಬಿಯ ಮಾಡಿ ಹಸಿಮುದ್ದೆ,
ವಿಕಾರಿಯ ರೂಪಿಸಿ ನೀ ಗೆದ್ದೆ.

ಅದೇ ಮಣ್ಣು, ಅದೇ ಬೇರು,
ಕಾಲಕಾಲಕೆ ಹೂಸ ಚಿಗುರು.
ಅಳಿಸಿದೆ ಕಾಲವು ಹೆಜ್ಜೆಯ ಗುರುತು,
ಕಾಲಕಾಲಕೆ ಹೊಸ ತಿರುವು.

ಹಳೆಯದ ಕಳಚಿದೆ ಸಮಯ,
ಹೊಸತನು ಧರಿಸುವ ಸಮಯ.
ಬುವಿಗಿತ್ತಿದೆ ಹಸಿರಿನ ಸೀರೆಯ,
ಬಣ್ಣ ಬಣ್ಣದ ಹೂಗಳೊಡವೆಯ.

ತಪ್ಪದ ಅನುಕರಣೆ ನಮ್ಮಗಳದು,
ಜೀವಂತ ಸಮಯದ ಗೊಂಬೆಗಳದು.
ಹೊಸ ಬಟ್ಟೆಯ, ಒಡವೆಯ ಆನಂದ,
ಕಾಯೋ ನಮ್ಮನು ಗೋವಿಂದ!




ಕೃಷ್ಣ

ದೇವಕಿನಂದನ, ವಾಸುದೇವ,
ಮನುಕುಲ ತಿಲಕ, ಯಾದವ.
ಅಷ್ಟಮ ಸಂಜಾತ, ಅಷ್ಟಮಿ ಜನನ,
ಗುಢಾಕೇಶ, ಕೇಶವ.

ನಳಿನ ನಯನ, ಹಸಿತ ವದನ,
ಗೋಪೀಜನಪ್ರಿಯ, ಮೋಹನ.
ಕೋಮಲಾಂಗ, ಶ್ಯಾಮಸುಂದರ,
ನವನೀತಪ್ರಿಯ, ಮಾಧವ.

ಯಶೋದಾನಂದನ, ಮುರಳಿಮೋಹನ,
ಕಾಳಿಂಗಮರ್ದನ, ಗೋಪಾಲ.
ಬಲರಾಮಾನುಜ, ರಾಧಾ ಪ್ರಿಯಸಖ,
ಪೂತನಮರ್ದನ, ಅಚ್ಯುತ.

ಗೋವರ್ಧನಧಾರಿ, ಪ್ರಜಾರಕ್ಷಕ,
ಪಾಪನಾಶಕ, ಮಧುಸೂದನ.
ದುಷ್ಟನಿಗ್ರಹ, ಶಿಷ್ಟ ರಕ್ಷಣ,
ಮಿತ್ರರಂಜನ, ಸಂಕರ್ಷಣ.

ರುಕ್ಮಿಣೀನಾಥ, ಭಾಮಾಪ್ರಿಯಕರ,
ಬಹುಪತ್ನೀ ಪ್ರಿಯವಲ್ಲಭ.
ಚಿತ್ತಚೋರ, ಲಲನಾರಕ್ಷಕ,
ಸರ್ವಾಕರ್ಷಕ ಸುಂದರ.

ಪಾಂಡವಪ್ರಿಯ, ಪಾರ್ಥಸಾರಥಿ,
ದ್ರೌಪತಿ ಮಾನ ರಕ್ಷಕ,
ಕೌಶಲಮತಿ, ಯುದ್ಧಚತುರ,
ವಿಶ್ವರೂಪ ನಿರಂತರ.

ಪುಣ್ಯದಾಯಕ, ಪಾಪಹಾರಿ,
ಪರಮಾತ್ಮ ಚೇತನ, ತ್ರಿವಿಕ್ರಮ.
ಜಗನ್ನಾಥ, ಜಗದ್ರಕ್ಷಕ,
ಪರಮಪಾವನ ಪರುಷೋತ್ತಮ.

ಆದಿಪುರುಷ, ಪುಣ್ಯಪಾದ,
ಮೋಕ್ಷದಾಯಕ, ಚಿನ್ಮಯ.
ಜ್ಞಾನದೀಪಕ, ವಿಶ್ವಪೂಜಿತ,
ಸರ್ವವ್ಯಾಪೀ ಚೇತನ.



ನೆರೆ-ಹೊರೆ

ವರ್ಷಧಾರೆಯ ಬಿರುಸಿಗೆ,
ಹರ್ಷಧಾರೆಯೇ ಬೆದರಿದೆ!
ಕಂಗೆಟ್ಟು, ಬಸವಳಿದು,
ಪ್ರವಾಹದಲಿ ಕೊಚ್ಚಿ ಹೋಗಿದೆ!

ನೆರೆಹೊರೆಯೆಲ್ಲವೂ ನೆರೆಯಲ್ಲಿ
ಮರೆಯಾಗಿ, ಹೊರೆಯಾಗಿದೆ ಎದೆಯಲ್ಲಿ.
ಕಣ್ಣೀರಕೋಡಿ ಪ್ರವಾಹವಾಗಿದೆ,
ನೆತ್ತರು ಕೆಸರ ಕೆಂಪಾಗಿಸಿದೆ!

ಮೇಲೆ ಕರಿ ಮೋಡ,
ಕೆಳಗೆ ಕೆನ್ನೀರು,
ಮಾಯವಾಗಿದೆ ಹಸಿರು,
ನಿಂತಂತಾಗಿದೆ ಉಸಿರು!

ನೀರು ನೀರೆಂದು ಕೂಗಿದ ಜೀವವು,
ಕೊಚ್ಚಿ ಹೋಗುತಿದೆ ಇಂದು ನೀರಲಿ.
ಸಾಕೆಂದು ಹೇಳಲು ಸಮಯವಿಲ್ಲದೆ,
ಜೀವಗಳು ಮರೆಯಾಗುತ್ತಿವೆ ನಿಲ್ಲದೆ!

ದಿಕ್ಕು ತೋಚದಾಗಿದೆ ಇಂದು,
ಎಲ್ಲ ದಿಕ್ಕುಗಳೂ ನೀರಲಿ!
ಇನ್ನೇನು ಕಾದಿದೆಯೋ,
ಕಾಣದ ಕಾಲದ ಗರ್ಭದಲಿ.

ಕೈಹಿಡಿದೆತ್ತುವ ಕೆಲಸಕೆ,
ಹಸ್ತಗಳು ಚಾಚಿ ಬರಲಿ.
ಕಣ್ಣೊರೆಸುವ ಕೈಗಳು,
ಹೊಸ ಹರುಷವ ತರಲಿ.


ಅಜರಾಮರ ಅನುರಾಗ

ಪ್ರತಿದಿನದ ಪ್ರೇಮವಿದು,
ಅಜರಾಮರ ಅನುರಾಗ.

ಮುಂಜಾನೆ ಮಂಜಿನಲಿ,
ಮಿಂದೆದ್ದ ಕುಸುಮಗಳ,
ರೇಷಿಮೆಯ ದಳಗಳ,
ತಲ್ಪದಲ್ಲಿ ಮುತ್ತುಗಳು.

ಅರೆದಿನದ ವಿರಹದಲಿ,
ಸೊರಗಿಹಳು ಭೂರಮೆಯು.
ಇನಿಯನಿಗೆ ಮುತ್ತನೀವ,
ಬಯಕೆಯಲಿ ಮೇದಿನಿಯು.

ಒಡಲಲ್ಲಿ ಜೀವವನು,
ತುಂಬಿದ ನೇಸರಗೆ,
ಭೂತಾಯ ಪ್ರೀತಿಯ,
ಸ್ವಾಗತದ ಕಾಣಿಕೆ.

ಮೇಘಗಳ ಸರಿಸುತ್ತ,
ಬಂದನಿಗೋ ರವಿರಾಜ!
ನಸುಗೆಂಪು ಅವಳ ಗಲ್ಲ,
ಚೈತನ್ಯವು ಜಗಕೆಲ್ಲ!


ಸಿರಿಗನ್ನಡದ ಸೊಬಗು

ಚಿಲಿಪಿಲಿಗಳ ಕಲರವದಲಿ,
ಕಾವೇರಿಯ ಜುಳುರವದಲಿ,
ಶೇಷಣ್ಣನ ವೀಣೆಯಲಿ,
ಕನ್ನಡದ ಇಂಪಿದೆ,
ಸವಿಗನ್ನಡದ ಇಂಪಿದೆ!

ಸಿರಿಗಂಧದ ಒಡಲಿನಲಿ,
ಮಲ್ಲಿಗೆಯ ಮಡಿಲಿನಲಿ,
ಕಸ್ತೂರಿಯ ಘಮಘಮದಲಿ,
ಕನ್ನಡದ ಕಂಪಿದೆ,
ನರುಗನ್ನಡದ ಕಂಪಿದೆ!

ಮಡಿಕೇರಿಯ ಮಂಜಿನಲಿ,
ಆಗುಂಬೆಯ ಸಂಜೆಯಲಿ,
ಅಕ್ಕರೆಯ ಗಂಜಿಯಲಿ,
ಕನ್ನಡ ತಂಪಿದೆ,
ತನಿಗನ್ನಡದ ತಂಪಿದೆ!

ಹಸಿರು ಗಿರಿಶ್ರೇಣಿಯಲಿ,
ಪಸರಿಸಿಹ ಕಾನಿನಲಿ,
ಮುಗಿಲೆತ್ತರ ತೆಂಗಿನಲಿ,
ಕನ್ನಡದ ಸೊಂಪಿದೆ,
ಚೆಲುಗನ್ನಡದ ಸೊಂಪಿದೆ!

ವರಕವಿಯ ಹಾಡಿನಲಿ,
ಗುಂಡಪ್ಪನ ಕಗ್ಗದಲಿ,
ಪುಟ್ಟಪ್ಪನ ಕಾವ್ಯದಲಿ,
ಕನ್ನಡವು ಅರಳಿದೆ,
ಸುಮಗನ್ನಡವು ಅರಳಿದೆ!

ಹಂಪೆಯ ಕೊಂಪೆಯಲಿ,
ಬೇಲೂರಿನ ಶಿಲೆಗಳಲಿ,
ಬಾದಾಮಿಯ ಗುಹೆಗಳಲಿ,
ಕನ್ನಡದ ಕಥೆಯಿದೆ,
ಸಿರಿ ಕರುನಾಡ ಕಥೆಯಿದೆ!

ಜೋಗದ ಬಿರು ಧಾರೆಯಲಿ,
ರಾಯಣ್ಣನ ಖಡ್ಗದಲಿ,
ಓಬವ್ವನ ಒನಕೆಯಲಿ,
ಕನ್ನಡದ ಸೊಲ್ಲಿದೆ,
ಕಲಿ ಕನ್ನಡಿಗನ ಸೊಲ್ಲಿದೆ!

ಜಯ ಕರ್ನಾಟಕ ಮಾತೆ!
ಜಯ ಕರ್ನಾಟಕ ಮಾತೆ!
ಜಯ ಕರ್ನಾಟಕ ಮಾತೆ!

ಧನ ಪುರಾಣ

ಇದ್ದರೆ ಚಿಂತೆ, ಇಲ್ಲದಿದ್ದರೆ ತೊಂದರೆ,
ಬಲ್ಲೆಯಾ ಧನದ ಈ ಮೂಲ ಮಂತ್ರ?
ಇದ್ದರೆ ಮತ್ತಷ್ಟು ಸೇರುವುದು ನೋಡು,
ಇಲ್ಲದಿರೆ ಗಳಿಸಲು ಪಡಬೇಕು ಪಾಡು!

ಬೆಟ್ಟದಲ್ಲೆಲ್ಲೋ ಹುಟ್ಟಿದಾ ನದಿಯು,
ಹರಿಹರಿದು ಸಾಗರವ ಸೇರುವಂತೆ,
ಬಡವರ ಕಿಸೆಯಿಂದ ಹಾರಿ ಬಂದು,
ದೊಡ್ಡ ಬೊಕ್ಕಸಗಳ ತುಂಬಿತಂತೆ.

ಹೊನ್ನು, ಮಣ್ಣು, ಅಧಿಕಾರಗಳ ಬಹುರೂಪಿ,
ಹಲವರಿಗೆ ಇದು ದೇವತಾ ಸ್ವರೂಪಿ.
ಅತಿಯಾದ ಆಸೆ ಮನುಜನ ಖಾಯಿಲೆ,
ಇದಕ್ಕೆ ಮದ್ದಿಲ್ಲ, ಅಳಿಯುವುದು ಸುಟ್ಟಾಗಲೇ!

ಧನಕ್ಕಿದೆ ಧನವನ್ನು ಸೃಷ್ಟಿಸುವ ಶಕ್ತಿ,
ಜೀವ ಜಂತುಗಳಂತೆ ಬೆಳೆಸುವುದು ಸಂತತಿ!
ಸಮಾಧಿ ಮಾಡಿದರೂ ಭೂಮಿ ಅಗೆದು,
ಎದ್ದುಬರುವುದು ನೋಡು ಮರುಜನ್ಮ ಪಡೆದು!

Wednesday, March 4, 2020

ಹೂದೋಟ

ಹೂವ ತೋಟದಿ ನಿಂತೆ ಮೂಕವಿಸ್ಮಿತನಾಗಿ,
ಏಸು ಬಗೆಯ ಹೂಗಳು! ಏನೆಲ್ಲ ಬಣ್ಣಗಳು!
ಚಂಚಲದ, ಸಡಗರದ ಚಿಟ್ಟೆ ದುಂಬಿಗಳಷ್ಟೋ!
ಚಿಟ್ಟೆಗಳ ಮೈಮೇಲಿನ ಚಿತ್ತಾರಗಳೆಷ್ಟೋ!

ಗುಲಾಬಿಯಂದಕೆ ಸರಿಸಾಟಿಯುಂಟೇ?
ಸಂಪಿಗೆಯ ಪರಿಮಳಕೆ ಮರುಳಾಗದುಂಟೇ?
ದಾಸವಾಳದ ರಂಗಿಗೆ ದಾಸ ನಾನಮ್ಮ,
ಮಲ್ಲಿಗೆಯು ಮಾಡಿದೆ ಮನಸನ್ನು ಘಮಘಮ!

ಪ್ರಕೃತಿಯ ಮಡಿಲೆಲ್ಲ ವೈವಿಧ್ಯಪೂರ್ಣ,
ಜೀವನದ ಕನಸುಗಳು ಅರಳಿವೆ ಸಂಪೂರ್ಣ.
ಪ್ರತಿಯೊಂದು ಜೀವಕಿದೆ ಸ್ವಂತಿಕೆಯ ಗಾನ,
ಪ್ರಕೃತಿಯಲಿ  ಇಲ್ಲ ಎಲ್ಲೂ ಏಕತಾನ!

ಅಚ್ಚು ಅರಗಿನ ಗೊಂಬೆಗಳು ನಾವಲ್ಲ,
ತನ್ನತನವ ಯಾರೂ ಬಿಟ್ಟುಕೊಡಬೇಕಿಲ್ಲ.
ಒಂದೊಂದು ಹೃದಯಕಿದೆ ತನ್ನದೇ ಮಿಡಿತ,
ಒಂದೊಂದು ಮನಸಿಗಿದೆ ತನ್ನದೇ ತುಡಿತ.

ಬೆರೆಯೋಣ, ಅರಿಯೋಣ ಎಲ್ಲರ ಮನಸುಗಳ,
ಬೆನ್ನು ತಟ್ಟೋಣ ಸಾಧಿಸಲು ಕನಸುಗಳ.
ಲೋಕವಾಗಲಿ ಸುಂದರ ಹೂದೋಟದಂತೆ,
ಬೇಕಿಲ್ಲ ಇನ್ನು ಮಾಲಿ, ಬೇಲಿಗಳ ಚಿಂತೆ!