Thursday, April 30, 2020

ನಮಗಿನ್ನಾರು?













ಹುಟ್ಟಿಸಿದ ದೇವನು,
ಹುಲ್ಲು ಮೇಯಿಸನಂತೆ!
ಶಾಸ್ತ್ರ ಹೇಳುವುದಕ್ಕೆ,
ಬದನೇಕಾಯಿ ತಿನ್ನುವುದಕ್ಕೆ!

ದೇವರಿಗೂ ತಿಳಿಯದಲ್ಲ,
ನಮ್ಮ ವ್ಯಥೆಯ ಕಥೆಯು!
ಇನ್ನಾರು ಬರುವರು, ಬಂದು
ಕಣ್ಣೀರ ಒರೆಸುವರು?

ಹುಲ್ಲೂ ಇಲ್ಲ ತಿನ್ನಲು,
ಬೊಗಸೆ ನೀರಿಲ್ಲ ಕುಡಿಯಲು.
ದೇವರೇ ಕೈಬಿಟ್ಟ ಹಾಗಿದೆ,
ಆಧಾರ ಇನ್ನು ನಮಗೇನಿದೆ?

ಪ್ರತಿದಿನದ ಗಳಿಕೆಯಲಿ,
ತುತ್ತು ನಾಲ್ಕು ಹೊಟ್ಟೆಯಲಿ,
ಬದುಕ ಬಂಡಿಯ ಗಾಲಿ,
ತಿರುಗುತ್ತಿತ್ತು, ಮುಂದೆ ಸಾಗುತ್ತಿತ್ತು.

ಯಾರೋ ಸೋಂಕಿತರಾದರೆ,
ನಮ್ಮ ಹೊಟ್ಟೆಗೇಕೆ ಬರೆ?
ಮಾರಿಯು ರಂಗಕ್ಕಿಳಿದರೆ,
ನಮ್ಮ ಜೀವನಕ್ಕೇಕೆ ತೆರೆ?

ಬಂದಿದ್ದರೆ ಸೋಂಕು ನಮಗೂ,
ಇರುತ್ತಿತ್ತೇನೋ ಬೆಲೆ  ನಮ್ಮ ದನಿಗೂ,
ಕೇಳುತ್ತಿತ್ತೇನೋ ನಮ್ಮದೂ ಕೂಗು!
ಸಿಗುತ್ತಿತ್ತೇನೋ ಅನ್ನ ಕೊನೆಗೂ!



Wednesday, April 29, 2020

ಕಾಲಚಕ್ರ



















ಯುಗದ ಅಂತ್ಯದ ಬೀಜಕೆ,
ಯುಗದ ಆದಿಯ ಮೊಳಕೆ.
ಜಗಕೆ ಹಸಿರು, ಮನಕೆ ಹಸಿರು,
ಹುರುಪು ಹುರುಪಿನ ಉಸಿರು.

ಪ್ರಭವ ವಿಭವಗಳ  ಕಾಲಚಕ್ರ,
ಕುಂಬಾರ ನಿನ್ನಯ ಪ್ರಿಯಚಕ್ರ.
ವಿಕಾರಿಯ ಮಾಡಿ ಹಸಿಮುದ್ದೆ,
ಶಾರ್ವರಿಯ ರೂಪಿಸಿ ನೀ ಗೆದ್ದೆ.

ಅದೇ ಮಣ್ಣು, ಅದೇ ಬೇರು,
ಕಾಲಕಾಲಕೆ ಹೂಸ ಚಿಗುರು.
ಅಳಿಸಿದೆ ಕಾಲವು ಹೆಜ್ಜೆಯ ಗುರುತು,
ಕಾಲಕಾಲಕೆ ಹೊಸ ತಿರುವು.

ಹಳೆಯದ ಕಳಿಚಿದೆ ಸಮಯ,
ಹೊಸತನು ಧರಿಸುವ ಸಮಯ.
ಬುವಿಗಿತ್ತಿದೆ ಹಸಿರಿನ ಸೀರೆಯ,
ಬಣ್ಣ ಬಣ್ಣದ ಹೂಗಳೊಡವೆಯ.

ತಪ್ಪದ ಅನುಕರಣೆ ನಮ್ಮಗಳದು,
ಜೀವಂತ ಸಮಯದ ಗೊಂಬೆಗಳದು.
ಹೊಸ ಬಟ್ಟೆಯ, ಒಡವೆಯ ಆನಂದ,
ಕಾಯೋ ನಮ್ಮನು ಗೋವಿಂದ! 

ಮಹಾಯುದ್ಧ
















ಕತ್ತಿ ಗುರಾಣಿಗಳಿಲ್ಲ,
ಆದರೂ ಇದು ಯುದ್ಧ!
ಮದ್ದು ಗುಂಡುಗಳಿಲ್ಲ,
ಆದರೂ ಇದು ಯುದ್ಧ!

ಹೊರಗೆ ಓಡಾಡದಿರು,
ಇದು ಮಹಾಯುದ್ಧ!
ವ್ಯಕ್ತಿ ಸ್ವಾತಂತ್ರ್ಯವೆನದಿರು,
ಇದು ಮಹಾಯುದ್ಧ!

ಬರಿಗಣ್ಣಿಗೆ ಕಾಣದ ವೈರಿ,
ಯಾರದೋ ಬೆನ್ನೇರಿ ಬರಬಹುದು!
ಕರುಣೆಯೇ ಇಲ್ಲದ ಮಾರಿ,
ಯಾರನ್ನೇ ಬಲಿ ಹಾಕಬಹುದು!

ಸೋತು ತಲೆ ಬಾಗಿದರೂ ನಿಲ್ಲದು,
ಕಥೆಯ ಮುಗಿಸದೇ ಬಿಡದು!
ಮರಣ ಮೃದಂಗವ ಬಾರಿಸುತ್ತ,
ಹುರುಪಲಿ ಮುಂದೆ ಸಾಗುವುದು!

ಸಾಬೂನೇ ಕತ್ತಿ, ಮುಸುಕೇ ಗುರಾಣಿ,
ನಮ್ಮೆಲ್ಲರ  ಆತ್ಮರಕ್ಷಣೆಗೆ!
ವೈದ್ಯನೇ ಸೈನಿಕ, ಔಷಧಿಯೇ ಗುಂಡು,
ಆಸ್ಪತ್ರೆಯ ರಣರಂಗಕೆ!

ಕೂಡು ಮನೆಯಲಿ, ಬೇಡು ದೇವರನು,
ಎಲ್ಲರ ಜೀವ ಉಳಿಯಲಿ ಎಂದು,
ಜಿದ್ದಿನ ಯುದ್ಧ ಮುಗಿಯಲಿ ಎಂದು,
ವೈರಿ ಸರ್ವನಾಶವಾಗಲಿ ಇಂದು!

Tuesday, April 28, 2020

ಅಕ್ಷಯ






















ಅಕ್ಷಯ ಅಕ್ಷಯ ಅಕ್ಷಯ
ಆಸೆಗಳಿಂದು ಅಕ್ಷಯ

ದೇವರ ತಲಪುವ ಮೊರೆಗಳು ಅಕ್ಷಯ.
ಪಾದಕೆ ಬೀಳುವ ಕಾಣಿಕೆ ಅಕ್ಷಯ!

ಪತಿಯನು ಕಾಡುವ ಬೇಡಿಕೆಗಳಕ್ಷಯ.
ಮಕ್ಕಳ ಕೋರಿಕೆ ತೀರದ ಅಕ್ಷಯ!

ರಾಜಕಾರಣಿಗಳ ದಾಹವು ಅಕ್ಷಯ.
ಕುರ್ಚಿಯ ಮೇಲಿನ ಮೋಹವು  ಅಕ್ಷಯ!

ವ್ಯಾಪಾರಿಗಳ ಲೋಭವು ಅಕ್ಷಯ.
ದಲ್ಲಾಳಿಗಳ ಲಾಭವು ಅಕ್ಷಯ.

ನಿಲ್ಲಲಿ ಇಂದೇ, ಬೇಡುವ ಅಕ್ಷಯ,
ಆಗಲಿ ಇಂದು, ನೀಡುವ ಅಕ್ಷಯ!

ಆಗಲಿ ಕರುಣೆ, ಪ್ರೇಮಗಳಕ್ಷಯ,
ಆಗಲಿ ರೀತಿ, ನೀತಿಗಳಕ್ಷಯ,

ಅಕ್ಷಯವಾಗಲಿ ಕೊಡುಗೆ,
ಅಕ್ಷಯವಾಗಲಿ ಮುನ್ನಡೆಗೆ!

Sunday, April 26, 2020

ಬಂಗಾರದ ಮನುಷ್ಯ


ಮುತ್ತಿನಂಥ ಮಾತ ನೀ ಬಲ್ಲೆ,
ತಾಳಕ್ಕೆ ತಕ್ಕಂತೆ  ನೀ ಕುಣಿದೆ ,
ನಮ್ಮ ಅದೃಷ್ಟವೋ ಏನೋ,
ಕಾಲಕ್ಕೆ ತಕ್ಕಂತೆ ಬದಲಾಗಲಿಲ್ಲ!

ಹಾಲಿನಂಥ ಕನ್ನಡವನ್ನು,
ಜೇನಿನಂಥ ಕಂಠದಲ್ಲಿ ಬೆರೆಸಿ,
ಸಿಹಿಯ ಕನ್ನಡದ ಸವಿನುಡಿಯ,
ಸುಧೆಯನ್ನು ಉಣಬಡಿಸಿದೆ!

ಒತ್ತಡಗಳಿಗೆ ಮಣಿಯಲಿಲ್ಲ,
ರಾಜಕಾರಣಕೆ ಇಳಿಯಲಿಲ್ಲ,
ಕನ್ನಡವೊಂದೇ ಸಾಕೆಂದೆ,
ನೆಚ್ಚಿನ ರಾಜಕುಮಾರನಾದೆ!


ಕನ್ನಡಕ್ಕೋಸ್ಕರ ಹೋರಾಡಿದ,
ರಣಧೀರ ಕಂಠೀರವ ನೀನು!
ಸಂಪತ್ತಿಗೆ ಸವಾಲೆಸೆದ,
ಬಹದ್ದೂರ್‌ ಗಂಡು ನೀನು!

ಬೀದಿ ಬಸವಣ್ಣನೆಂದರು,
ಚೂರಿ ಚಿಕ್ಕಣ್ಣನೆಂದರು,
ತಲೆ ಕೆಡಸಿಕೊಳ್ಳದೆ ಆದೆ,
ನೀ ದೇವತಾ ಮನುಷ್ಯ!

ನಮ್ಮ ಕನ್ನಡ ನಾಡಿನಲ್ಲಿ,
ಮತ್ತೊಮ್ಮೆ ಹುಟ್ಟಿ ಬಾ,
ಬಂಗಾರದ ಮನುಷ್ಯನೇ,
ಕಾಯುತಿದೆ ಗಂಧದಗುಡಿ!

Saturday, April 25, 2020

ಆತ್ಮಾವಲೋಕನ



ದೇವರು ಕರಣಾ ಮೂರ್ತಿ,
ಸೋಲಲು ಬಿಡನು ಪೂರ್ತಿ.
ಮುಚ್ಚಿದರೆ ಹೋಗುವ ದಾರಿ,
ತೋರುವ ಬೇರೆ ರಹದಾರಿ.

ಮುಚ್ಚಿ ಮನೆಯ ಬಾಗಿಲನು,
ತೆರೆಯೋಣ ಮನದ ಕದವನ್ನು.
ಹೊರಗಿನ ಕೆಲಸವ ಮರೆತು,
ಚಿಂತಿಸೋಣ ಒಳಗಿನ ಕುರಿತು.

ಹೊರಗಿನ ಓಟದ ಓಘದಲಿ,
ಆಗಿದೆ ಸ್ವವಿಮರ್ಶೆಯ ಬಲಿ.
ಕುಳಿತು ಚಿಂತಿಸೊ ಸುಸಮಯ,
ಮತ್ತೆ ಸಿಗುವುದೇ ಈ ಸಮಯ?

ನೆನೆದು ಹಿಂದಿನ ನಡೆನುಡಿಯ,
ಗುರುತಿಸಿ ಮಾಡಿದ ಗಡಿಬಿಡಿಯ,
ಸಂಭಾಷಿಸಿ ಒಳಗಿನ ಗೆಳೆಯನೊಡೆ,
ತಿದ್ದೋಣ ನಮ್ಮ ತಪ್ಪು ನಡೆ.

ಉಳಿಯಲಿ, ಬೆಳೆಯಲಿ ಸಂಬಂಧ,
ಬಿಗಿಯಾಗಲಿ ಪ್ರೀತಿಯ ಅನುಬಂಧ.
ನಗುನಗುವ ನಲಿವ ಕುಟುಂಬಗಳು,
ದೇಶದ ಆಧಾರ ಸ್ತಂಭಗಳು!


Friday, April 24, 2020

ಅಗಲಿಕೆ



ಸಂಗ ತೊರೆದರೂ ನೀವು,
ಸಂಗ ಮರೆಯೆವು ನಾವು.

ಎಲ್ಲಿ ಹೋದಿರಿ ನೀವು,
ಇಲ್ಲೇ ಉಳಿದೆವು ನಾವು.
ನಾಳೆ ಬರುವೆ ಎಂದು,
ಹೇಳಿ ಕಣ್ಮರೆ ಇಂದು!


ಇಂಥ ಅವಸರ ಏಕೆ?
ಬಂಧು, ಮಿತ್ರರು ಸಾಕೇ?
ಮರೆತ ಮಾತುಗಳುಂಟು,
ಮೊಗ್ಗು ಭಾವಗಳುಂಟು.

ಸಾಲು ನಿಂತೆವು ನಾವು,
ಹಾಲು, ಹಣ್ಣಿಗೆ ಎಂದು.
ಸಾಲು ನಿಂತಿರಿ ನೀವು,
ಕಾಲ ದೇವನ ಮುಂದು.

ಏಕೆ ಬಿದ್ದಿರಿ ನೀವು,
ಮಾರಿ ದುಷ್ಟೆಯ ಕಣ್ಗೆ?
ದುಷ್ಟ, ದುರುಳರು ಹೇಗೆ,
ದೌಡು ಸಿಕ್ಕದೆ ಕೈಗೆ?

ಖಾಲಿ ರಸ್ತೆಗಳಿಲ್ಲಿ,
ಕಾಲ ನಿಂತಿದೆ ಇಲ್ಲಿ,
ಕಾಲು ಇಟ್ಟರೆ ಹೊರೆಗೆ,
ಲಾಠಿ ದೂಡಿತು ಒಳಗೆ!

ಸದ್ದು ಇಲ್ಲದೆ ನೀವು,
ಕಾಲು ಕಿತ್ತಿರಿ ಹೇಗೆ?
ಲೋಕ ತೊರೆದಿರಿನೀವು,
ಲಾಠಿ ತಡೆಯದ ಹಾಗೆ!

ಏಕೆ ಅಗಲಿಕೆ ನಮಗೆ?
ಯಾವ ಸಲ್ಲದ ನೆವಕೆ?
ನಾವು ಮಾಡದ ಪಾಪ,
ನೀವು ಮಾಡಿದುದುಂಟೆ?









Thursday, April 23, 2020

ಬೇಡ ಇಂಥ ಸಾವು!




ರಕ್ಕಸಿ ತರುವ ಅನಾಥ ಸಾವು,
ವೈರಿಗೂ ಬೇಡ ಇಂಥ ನೋವು!

ಸುಳಿವು ಕೊಡದೆ, ಕೈಯ ಹಿಡಿದು,
ಎದೆಯ ಗೂಡು ಸೇರಿದವಳು,
ಮಧುರ ಭಾವ ಅರಿಯದವಳು,
ಬಕಾಸುರನ ಹಸಿವಿನವಳು!

ಎದೆಯ ಹತ್ತಿ ಕುಳಿತಳವಳು,
ಶ್ವಾಸಕೋಶ ಬಗೆದಳು!
ಕತ್ತು ಹಿಸುಕಿ ಕೊಂದಳು,
ಮತ್ತೊಬ್ಬರ  ಕೈಯ ಹಿಡಿದಳು!

ಹೊರಲು ಹೆಗಲು ಸಾಲದೇ,
ಹೂಳಲು ಎಡೆಯೇ ಇಲ್ಲದೇ,
ಸುಡಲು ಸೌದೆ ಎಲ್ಲಿದೆ?
ದೇಹಗಳುರುಳಿವೆ ನಿಲ್ಲದೇ!

ಕೊನೆಗೂ ಇಲ್ಲ ದರ್ಶನವು,
ಪ್ರೀತಿಪಾತ್ರ ಬಂಧುಗಳಿಗೆ.
ಸಂಸ್ಕಾರ ಇಲ್ಲ ದೇಹಕೆ,
ಅನಾಥವಾಗಿ ಮಸಣಕೆ.

ಆಸ್ತಿ ಸಿಕ್ಕರೇನು ಬಂತು,
ಸಿಗಲೇ ಇಲ್ಲ ಅಸ್ತಿಯು.
ಕನಸಿನ ಕಥೆಯ ಹಾಗೆ,
ವ್ಯಕ್ತಿ ಮಂಗ ಮಾಯವು!

ಯಾರಿಗೂ ಬೇಡ ಇಂಥ ಗತಿ,
ಬಹುಸಂಕಷ್ಟದ ದುರ್ಗತಿ.
ಬರುವುದೆಂದು ಹತೋಟಿಗೆ?
ಕಾಯುತಿಹೆವು ಬಿಡುಗಡೆಗೆ!

Wednesday, April 22, 2020

ಯಾರೇ ನೀ ಕೊರೋನಾ?



ಹೇ ಕೊರೋನಾ, ಯಾರೇ ನೀನು?
ನಿನಗೆ ಕರುಣೆಯೇ ಇಲ್ಲವೇನು?

ಹೆಸರಿನಲಿ ಇದ್ದರೂ ಕಿರೀಟ,
ಮರೆಯದಿರು, ನೀನೊಂದು ಕೀಟ!
ರಾಣಿ ಮಹಾರಾಣಿ ಅಲ್ಲ ನೀನು,
ಸಿಂಹಾಸನ ಇಲ್ಲ ಬಲ್ಲೆಯೇನು?



ಹೇಳೇ, ನಿನ್ನ ಕುಲಗೋತ್ರವ,
ಜನ್ಮ ನೀಡಿದ ಜನಕನ ಪಾತ್ರವ.
ಹುಟ್ಟೂರಲೇ ಇದ್ದು, ಸಾಯದೆ,
ನೀ ವಿಮಾನಗಳ ಏಕೆ ಹತ್ತಿದೆ?

ಎಲೈ, ಕಾಲಿಲ್ಲದ  ಕಳ್ಳ ಕುಂಟಿ,
ಬಿಡದ ಬೇತಾಳನಂತೆ ಬೆನ್ನಿಗಂಟಿ,
ಕಾಲಿಲ್ಲದಿರೂ ಓಡುತಲಿರುವೆ,
ಶಿಷ್ಟಸಂಹಾರ ಮಾಡುತಲಿರುವೆ!

ಇನ್ನೂ ಬೇಕೆ ಬಲಿಗಳು ನಿನಗೆ?
ಏನು ಸಾಧಿಸಬೇಕಿದೆ ಕೊನೆಗೆ?
ಮುಗಿದರೆ ನಮ್ಮೆಲ್ಲರ ಜಾತ್ರೆ,
ಅದು ನಿನಗೂ ಕೊನೆಯ ಯಾತ್ರೆ!

ಅಬ್ಭಾ! ಅದೆಷ್ಟು ಕೈಗಳು ನಿನಗೆ?
ನಾಚಿಕೆ ಆಗುತಿದೆ ಅಷ್ಟಪದಿಗೆ.
ಮಣ್ಣಾದನಲ್ಲ ದಶಕಂಠನು ಕೂಡ,
ಖಂಡಿತ, ಕಾಲನು ನಿನ್ನನ್ನೂ ಬಿಡ!

Monday, April 20, 2020

ವಿಧಿಯಾಟ



ಈ ವಿಧಿಯಾಟದ ಮರ್ಮವೇನು?
ನಾವು ಮಾಡಿದ ಕರ್ಮವೇನು?

ನಾಡಲಿ ಸ್ವಚ್ಛಂದದ ಪ್ರಾಣಿಗಳು,
ದಾರಿಕಾಣದೆ ಬೋನು ಸೇರಿದವಲ್ಲ!
ಹಾರಾಡೋ ಹಕ್ಕಿಗಳು ನೆಲಕಚ್ಚಿ,
ಬಾಯಿಮುಚ್ಚಿ, ಗೂಡು ಸೇರಿದವಲ್ಲ!

ಮನೆಯ ಮೂವರದು ಮೂರು ದಾರಿ,
ಈಗವರದು ಒಂದೇ ಕೂಡುಕುಟುಂಬ!
ಒಟ್ಟಿಗೆ ಊಟ, ಒಟ್ಟಿಗೆ ಆಟ, ನೋಟ,
ಹಿಂದೆಂದೂ ಕಾಣದ ವಿಧಿಯ ಆಟ!

ನೆರೆತ ಕೂದಲು ಕಪ್ಪಾಗುತ್ತಿಲ್ಲ,
ಬೆಳೆದ ಕೂದಲು ಕಟ್ಟಾಗುತ್ತಿಲ್ಲ!
ಕೆಲಸದವಳ ಮೇಲೆ ಸಿಟ್ಟಾಗುತ್ತಿಲ್ಲ!
ಅವಳಿಲ್ಲದವರಿಗೆ ಇರುವ ನಲ್ಲ!

ಕುಳಿತು ಕುಳಿತು ಸಾಕಾಯಿತು,
ಮಲಗಿ ಮಲಗಿ ಬೋರಾಯಿತು.
ಅಡುಗೆ ಒಲ್ಲದ ಲಲನೆಯರೂ ಹಿಡಿದರು,
"ಮಾಡು ಇಲ್ಲವೇ ಮಡಿ" ಮಂತ್ರ!

ಜಗವನೆಲ್ಲ ಕಾಯವ ದೈವವೂ ಒಂದೇ,
ಎಲ್ಲರನು ಕಾಡುವ ಭಯವೂ ಒಂದೇ!
ಎಲ್ಲರ ಕಾತುರದ ನಿರೀಕ್ಷೆಯೂ ಒಂದೇ,
ಮುಗಿವುದೆಂದು ಲಾಕ್ಡೌನ್‌ ಎನ್ನುವುದೊಂದೇ!

Monday, April 13, 2020

ನಿಮಗೊಂದು ಸಲಾಮ್!


ತಾ ಸಾವೆದು ಗಂಧವೀವ,
ಸಿರಿಗಂಧದ ಕೊರಡು ನೀವು.

ಮನೆ ಮಠಗಳ ಮರೆತುಬಿಟ್ಟು,
ಸತಿ ಸುತರನು ದೂರವಿಟ್ಟು,
ಸೌಖ್ಯವನ್ನೇ ಪಣಕೆ ಇಟ್ಟು,
ನಿಸ್ವಾರ್ಥದ ಸೇವೆ ಕೊಟ್ಟೆ ವೈದ್ಯನಾರಾಯಣ!

ನಿಮ್ಮ ಹೆಗಲಿಗೆ ಹೆಗಲ ಕೊಟ್ಟ,
ಇಚ್ಛೆಗಳ ಅದುಮಿ ಇಟ್ಟ,
ರೋಗಿಗಳಿಗೆ ಅಭಯವಿತ್ತ,
ಸಿಬ್ಬಂದಿಯ ಸೇವೆ, ಚಿತ್ತ, ದೈವಸಹಾಯವು!

ಬಿಸಿಲಿನಲ್ಲಿ ತಿರುಗಿ ತಿರುಗಿ,
ಅಲೆಮಾರಿಗಳ ಹಿಂದಕಟ್ಟಿ,
ಮಾತೆ ಮಕ್ಕಳ ಕಾಪುವಂತೆ
ಎಲ್ಲರನೂ ಕಾಯುತಿರುವ ಪ್ರಾಣ ರಕ್ಷಕರು!

ಬೀದಿ ಹೊಲಸ ಗುಡಿಸಿಕೊಂಡು,
ನಮ್ಮ ಕಸವ ತುಂಬಿಕೊಂಡು,
ನಿಮ್ಮ ಸ್ವಾಸ್ಥ್ಯ ಕಾಯ್ದುಕೊಂಡು,
ಸೇವೆ ಮಾಡುತಿರುವ ನೀವೇ ನಿಜಕೂ ಮಾನ್ಯರು!

ರುಚಿ ಶುಚಿಯ ಪಾಕವಿಳಿಸಿ,
ಹೊಟ್ಟೆಗಿಲ್ಲದವರ ಹುಡುಕಿ,
ಹಸಿದ, ಕುಸಿದ ಪ್ರಾಣಗಳಿಗೆ,
ಅನ್ನಭಾಗ್ಯ ನೀಡುತಿರುವ ನೀವೇ ಧನ್ಯರು!

ನಿಮ್ಮ ಮಹಿಮೆ, ನಿಮ್ಮ ದುಡಿಮೆ,
ಎಷ್ಟು ಹೇಳಿದರೂ ಕಡಿಮೆ.
ನಮಗಿತ್ತಿರಿ ನೀವು ಮುಲಾಮ್‌,
ನಿಮಗೆಲ್ಲರಿಗೆ ನಮ್ಮ ಸಲಾಮ್!

Saturday, April 11, 2020

ಹನುಮ ನೀನೇ ಬರಬೇಕು




ಬೇಕು ಸಂಜೀವಿನಿ ಬೇಕು,
ದಿವ್ಯ ಸಂಜೀವಿನಿ ಬೇಕು.

ಕೀಟ ಕಾಟ ತೊಲಗಿಸುವ,
ಮದ್ದುಸಂಜೀವಿನಿ ಬೇಕು.
ಮೃತ್ಯು ಬಾಧೆ ನೀಗಿಸುವ,
ಪ್ರಾಣಸಂಜೀವಿನಿ ಬೇಕು.

ಧರೆಯು ನಳನಳಿಸಲು,
ನವಸಂಜೀವಿನಿ ಬೇಕು.
ವಿಷಗಾಳಿಯ ಹಿತವಾಗಿಸಲು,
ಅಮೃತಸಂಜೀವಿನಿ ಬೇಕು.

ಮಾತಲಿ ಪ್ರೀತಿ ತುಂಬುವ,
ಪ್ರೇಮಸಂಜೀವಿನಿ ಬೇಕು.
ನೋಟಕ್ಕೆ ಪಾವಿತ್ರ್ಯತೆಯನೀವ,
ದೃಷ್ಟಿಸಂಜೀವಿನಿ ಬೇಕು.

ಸಂಬಂಧಗಳ ಬೆಸೆಯುವ,
ಬಂಧಸಂಜೀವಿನಿ ಬೇಕು.
ಆಸೆಗಳಿಗೆ ಕಡಿವಾಣಕ್ಕೆ,
ಅಂಕೆಸಂಜೀವಿನಿ ಬೇಕು.

ಮನುಜಗೆ ಸದ್ಗುಣಗಳನೀವ,
ಮನೋಸಂಜೀವಿನಿ ಬೇಕು.
ಇವನೆಲ್ಲ ತಂದು ಕೊಡಲು,
ಹನುಮ ನೀನೇ ಬರಬೇಕು!


Monday, April 6, 2020

ಹೊಸ ನಸುಕು















ಕೊರೋನಾ ನಿನ್ನ ಕರುಣೆ ಅಪಾರ,
ಮನುಜನ ಒಳಿತಿಗೆ ಇಟ್ಟೆ ಶ್ರೀಕಾರ!

ಪತಿಪತ್ನಿಯರ, ಪಿತಸುತರ,
ನಡುವೆ ಇತ್ತು ಅವಾಂತರ.
ಸಂಬಂಧಗಳ ಬೆಸೆಯಲು,
ಕೊಟ್ಟೆ ಹೊಸದೊಂದು ಟಿಸಿಲು!

ವಿಷಭರಿತ ಭೂಜಲ ವಾಯುಗಳು,
ಮತ್ತೊಮ್ಮೆ ಪರಿಶುದ್ಧವಾದುವಲ್ಲ!
ಪ್ರಾಣಿ, ಪಕ್ಷಿಗಳು ಆನಂದದಿಂದ,
ವಿಹರಿಸುವ ಭಾಗ್ಯ ತಂದೆಯಲ್ಲ!

ಮಾನವತೆಯೇ ಕಾಣದ ಕಣ್ಗಳಿಗೆ,
ನಿಲ್ಲದೇ ಓಡುತ್ತಿದ್ದ ಕಾಲ್ಗಳಿಗೆ,
ದುರಾಸೆಯೇ ತುಂಬಿದ್ದ ಮನಗಳಿಗೆ,
ಬದುಕಿನ ನಿಜಭಾಷ್ಯ ತಿಳಿಸಿದೆಯಲ್ಲ!

ನೋಟುಗಳು ಪ್ರಾಣಗಳ ಉಳಿಸುತ್ತಿಲ್ಲ,
ಅಧಿಕಾರದ ಹಮ್ಮು ಉಪಯೋಗಕ್ಕಿಲ್ಲ.
ಹಣದಿಂದಲೇ ಎಲ್ಲ ಎಂದವರನ್ನೂ,
ಹಣತೆ ಹಚ್ಚುವ ಹಾಗೆ ಮಾಡಿದೆಯಲ್ಲ!

ಮುದುಡಿ ಮಲಗಿದ್ದ ಮಾನವೀಯತೆ,
ಮತ್ತೆ ಚಗುರೊಡೆದು ನಗುತಿದೆ!
ಕಳೆದುಹೋಗಿದ್ದ ಸಂಬಂಧಗಳೆಲ್ಲವೂ,
ದೀಪದ ಬೆಳಕಲ್ಲಿ ಕಾಣಿಸಿಕೊಂಡಿವೆ!

ಬಂತೆಲ್ಲಿಂದ ನಿನಗೆ ಈ ಪರಿಯ ಶಕ್ತಿ?
ಮಾನವರನು ಮಣಿಸುವ ಯುಕ್ತಿ!
ಈ ಬದಲಾವಣೆಗಳು ಕ್ಷಣಿಕವಾಗದಿರಲಿ,
ಹೊಸ ನಸುಕಿಗೆ ಮುನ್ನುಡಿಯಾಗಲಿ!







Thursday, April 2, 2020

ನೀನಾಗುವೆ ಬಲಿ!

ಏಕೆ ನಿನಗೆ ಎಲ್ಲದರ ಗೊಡವೆ?
ಈಗ, ಕೈಕಟ್ಟಿ ಕುಳಿತೆಯಲ್ಲ ಮಗುವೆ!

ಗಗನಚುಂಬಿಗಳ ಕಟ್ಟಿ ನೀ ಬೀಗುತಿದ್ದೆ,
ಹಿಮಪರ್ವತಗಳ ಒಮ್ಮೆ ನೋಡು ಪೆದ್ದೆ.
ಹರಿವ ನದಿಗಳಿಗೆ ಕಟ್ಟಿದೆ ಕಟ್ಟೆ,
ಸುನಾಮಿಯ ನೋಡಿ ಹೆದರಿಬಿಟ್ಟೆ!

ಲೋಹದಕ್ಕಿಗಳ ನೀ ಹಾರಿಬಿಟ್ಟೆ,
ಆಗಸದಲಿ ಸಂಚರಿಸುವುದ ಕಲಿತುಬಿಟ್ಟೆ.
ಚಂದ್ರ, ಮಂಗಳಗಳ ತಲುಪಿಬಿಟ್ಟೆ!
ವ್ಯೋಮದಂಗಳದಲಿ ಅದು ಪುಟ್ಟ ಹೆಜ್ಜೆ!

ಹುಲಿ, ಸಿಂಹ, ಆನೆಗಳ ಪಳಗಿಸಿಟ್ಟೆ,
ಕಾಣದ ಕೀಟಗಳ ಕಂಡು ಓಟ ಕಿತ್ತೆ!
ನಿಸರ್ಗವ ಮನಬಂದಂತೆ ಬಳಸಿಬಿಟ್ಟು,
ಬುಡಕೆ ಬಂದರೂ ನೀನು ಬಿಡೆಯ ಪಟ್ಟು?

ಭೂರಮೆಯ ನೀನು ಬರಡಾಗಿಸಿದೆ,
ಗಂಗಾ ಮಾತೆಗೆ ವಿಷವನಿತ್ತೆ,
ಅನಿಲ ದೇವನ ಧೂಮವಾಗಿಸಿದೆ,
ಮಾಡಲು ಇದೆ ಇನ್ನೇನು ಬಾಕಿ?

ನೀ ಪಡೆದು ವರವ, ನೀನಿತ್ತೆ ಜ್ವರವ.
ಪ್ರಕೃತಿ ಮಾತೆ ಸರ್ವಶಕ್ತಳು ತಾನು,
ತನ್ನ ರೋಗವ ಪರಿಹರಿಸಿಕೊಳ್ಳಲು,
ನಿನ್ನ ನಾಶವ ನೆನೆದು ನಿಧಾನಿಸುತಿಹಳು!

ಇನ್ನಾದರೂ ಕಲಿ, ಇನ್ನಾದರೂ ಕಲಿ,
ನಿಸರ್ಗದ ಎದುರಲಿ ನೀನಿನ್ನೂ ಇಲಿ!
ನಿಸರ್ಗ ಮಾತೆಯ ವರವ ಕೇಳು, ಆಕೆ,
ಒಲಿದರೆ ಬಾಳು, ಮುನಿದರೆ ಹಾಳು!