ಇಳೆಯ ತಳದ ದೇಶದಲ್ಲಿ,
ಭೂಮಿತಾಯಿ ನಲಿದಳು.
ಜೋಡಿದ್ವೀಪದ ನಾಡಿನಲ್ಲಿ
ದೇವಸನ್ನಿಧಿ ತಂದಳು!
ಸಗ್ಗಸೀಮೆಯ ನಾಡಿನಲ್ಲಿ,
ಭಾವ ಬುಗ್ಗೆಯು ಚಿಮ್ಮಿದೆ.
ಕಣ್ಣ ಮುಂದಿನ ಅಂದ ಕಂಡು,
ಹೃದಯ ತುಂಬಿ ಬಂದಿದೆ.
ನೀಲಿ ನಭದ ಬೆಳಕಿನಲ್ಲಿ,
ಎದೆಯ ಕಲ್ಮಶ ಕರಗಿದೆ.
ಅರಳೆ ಮೋಡದ ಸುರುಳಿಯಿಂದ,
ಮನಸು ಹಗುರ ಎನಿಸಿದೆ.
ಎಲ್ಲಿ ನೋಡಿದರಲ್ಲಿ ಕಾಣಿರಿ,
ಹಸಿರ ಬುಗ್ಗೆಯು ಚಿಮ್ಮಿದೆ.
ಬುವಿಯ ಒಡಲಿನ ಪ್ರೀತಿಯಿಲ್ಲಿ,
ಬಣ್ಣದಲಿ ಹೊರ ಹೊಮ್ಮಿದೆ.
ಧವಳ ಗಿರಿಗಳ ಶಿಖರಗಳು,
ತಲೆಯೆತ್ತಿ ಆಗಸ ಮುಟ್ಟಿವೆ.
ನೀಲಿ ನೀರಿನ ಕೊಳಗಳಿಲ್ಲಿ,
ಗಿರಿಯ ಪಾದವ ತೊಳೆದಿವೆ!
ಹಸಿರು ರೇಷಿಮೆ ಹಾಸಮೇಲೆ,
ಮೇಯೋ ಕುರಿಯ ಮರಿಗಳು,
ಹೆಣ್ಣುಮಕ್ಕಳು ಇಟ್ಟಿರುವಂತೆ,
ಬಿಳಿಯ ರಂಗೋಲಿ ಚುಕ್ಕೆಗಳು!
ಗಾಳಿಯಾಡುವ ಮಾತಿನಲ್ಲಿ,
ಮಧುರ ರಾಗವು ಮೂಡಿದೆ.
ಎದೆಯ ನವಿರು ಭಾವಗಳಿಗೆ,
ಭಾಷೆಯೊಂದು ದೊರಕಿದೆ!