Showing posts with label ಭೋಗಷಟ್ಪದಿ. Show all posts
Showing posts with label ಭೋಗಷಟ್ಪದಿ. Show all posts

Thursday, February 11, 2021

ದಾರಿ ತೋರೆನಗೆ (ಭೋಗಷಟ್ಪದಿ)

ದೇವ ಹಿಡಿದೆ ಚರಣ ಕಮಲ

ಕಾವೆ ನೀನು  ನಮ್ಮ  ಸಕಲ

ಭವದ  ಬಂಧ ಬಿಡಿಸಿಕೊಳುವ ದಾರಿ ತೋರೆಯಾ? |

ಕವಿದ ಮೋಡ ಚದುರಿ ಹೋಗಿ

ಜವನ ಭಯವು  ಕಳೆದು ಹೋಗಿ  

ಭವನದಲ್ಲಿ ನಿನ್ನ ಬೆಳಕ ಕಿರಣ ಕಾಣಲಿ! ||


ಎನ್ನ ಮನದ ಬಳಿಯೆ ಕುಳಿತು

ನನ್ನ ತಪ್ಪು ನೋಡುತಿದ್ದು 

ಕಣ್ಣ ಮುಚ್ಚಿ ಕುಳಿತೆಯೇಕೆ ಪರಮ ಬಂಧುವೇ? |

ಎನ್ನ  ತಪ್ಪ ತಿದ್ದಿ ತೀಡು 

ಬಿನ್ನವಿಸುವೆ ಶಿಕ್ಷೆ ನೀಡು

ಭಿನ್ನವಾದ ವರವು ಬೇಡ ಪದುಮನಾಭನೇ! ||

ಪ್ರೇಮಪಯಣ (ಭೋಗಷಟ್ಪದಿ)

ಏನು ಹೇಳು ಮನದ ನುಡಿಯ

ಜೇನ ಸಿಹಿಯು ನಿನ್ನ ಹೃದಯ

ನಾನು ನೀನು ಬೆಸೆವ ನಮ್ಮ ಬದುಕ ಕೊಂಡಿಯ! 

ಬಾನು ಸೇರಿ ತಾರೆ ಮೀರಿ

ಯಾನ ಮಾಡಿ ಗಡಿಯ ದಾಟಿ

ಗಾನ ಪಾಡಿ ಲಯದಿ ನಡೆಸು ಬದುಕ ಬಂಡಿಯ! 


ಇದ್ದರಿರಲಿ ಗಾಳಿ ಸುದ್ದಿ

ಬದ್ಧ ನಾವು ನಮ್ಮ ನುಡಿಗೆ

ಶುದ್ಧ ಮನದ ಪ್ರೇಮ ಗೀತೆ ನಾವು ಹಾಡುವ!

ಇದ್ದರಿರಲಿ ಕೊಂಕು ನುಡಿಯು

ಹದ್ದುಮೀರಿ ಜಂಟಿಯಾಗಿ

ಗೆದ್ದು ನಾವು ಬಾಳ ಪಂದ್ಯ ಗುರಿಯ ಸೇರುವ!