Sunday, October 1, 2023

ಆನಂದ

ಕುಡುಕನಿಗೆ ಮತ್ತಿನಲೇ ಆನಂದ

ಕಾಮುಕಗೆ ದೇಹಸುಖವೇ ಆನಂದ

ಬಕುತನಿಗೆ ಸನ್ನಿಧಿಯೇ ಆನಂದ

ಆನಂದವಿರುವಾಗ ಮತ್ತೇನು ಬೇಕೆಂದ!


ಕತ್ತೆಗೆ ಪಾಳುಗೋಡೆಯೇ ಚೆಂದ

ಅರಸನಿಗೆ ಅರೆಮನೆಯೇ ಅಂದ

ಬಡವಗೆ ಹಟ್ಟಿಯಲೇ ಆನಂದ

ಮೀನು ಅಟ್ಟುವವಗೆ ಇಲ್ಲ ದುರ್ಗಂಧ!


ಹಕ್ಕಿಗೆ ನೀರಿನಲಿ ಗೂಡಿಲ್ಲ

ಮೀನಿಗೆ ಬಾನಿನಲಿ ಎಡೆಯಿಲ್ಲ

ಚತುಷ್ಪಾದಕೆ ನೆಲವೇ ಎಲ್ಲ

ಮನುಜ ಮಾತ್ರ ಎಲ್ಲಿಯೂ ಸಲ್ಲ!


ಮತ್ತು ಬೇಕೆನುವವಗೆ ಮದ್ದೇ ಹಾಸ,

ಹಿತವಚನ ಕಿವಿಗೆ ಕಾದ ಸೀಸ

ಕಾಣಿಸದೇ ಇಲ್ಲಿ ಮತ್ತಿನ ಮೋಸ?

ಕಾಪಾಡಬೇಕಿದೆ ನಮ್ಮೆಲ್ಲರ ಕೂಸ!

Tuesday, September 26, 2023

ಜೋಡಿ ಜೀವ

ಜೋಡಿ ಜೀವದ ದೂರದ ಪಯಣ

ವಿರಮಿಸಲಿಲ್ಲ ಒಂದು ಕ್ಷಣ

ಭಾರವ ಹೊತ್ತು ಬಾಗಿದೆ ಬೆನ್ನು 

ಪ್ರೀತಿಯ ಪೊರೆಗೆ ಮಂಜಾಗಿದೆ ಕಣ್ಣು


ಸೂತ್ರವು ಹರಿದಿದೆ ಗಾಳಿಪಟಕೆ, 

ಏಳುತ ಬೀಳುತ ಸೇರುವುದೆಲ್ಲಿಗೆ? 

ಹಗಲಲೇ ಕಾಡಿದೆ ಇರುಳಿನ ಕುರುಡು

ಮಕ್ಕಳು ಇದ್ದರೂ ಬಾಳೇ ಬರಡು. 


ನಿಮ್ಮಯ ನೆರಳಲಿ ಬೆಳೆದ ಸಸಿಗಳು

ಆದವು ಬೇಗನೆ ನೆರಳಿನ ಮರಗಳು 

ದೂಡಿವೆ ನಿಮ್ಮನೇ ಬಿಸಿಲಿನ ಝಳಕೆ

ಕರುಣೆಯೇ ಇಲ್ಲವೇ ಇಂದಿನ ಜನಕೆ

ಮುಕ್ತಕಗಳು - ೧೦೧

ಸಂತೆಯಲಿ ಸರಕಿರಲು ಕಿಸೆಯಲ್ಲಿ ಹಣವಿರಲು

ಕಂತೆಕಟ್ಟುತ ಸರಕು ಕೊಳ್ಳುವೆವು ದರಕೆ |

ಚಿಂತನೆಗೆ ವಿಷಯವಿರೆ ಆಸಕ್ತ ಮನಗಳಿರೆ

ಅಂತಗೊಳಿಸುವ ಶಂಕೆ ~ ಪರಮಾತ್ಮನೆ ||೫೦೧||


ಹುಟ್ಟುವೆವು ಅಳುತಲೇ ಎಲ್ಲರೂ ಜಗದಲ್ಲಿ

ಕಟ್ಟುವೆವು ಅನವರತ ನಗುವ ಕನಸುಗಳ |

ಕೊಟ್ಟರೇ ಇತರರಿಗೆ ನಗೆಯ ಕಾಣಿಕೆಗಳನು

ಒಟ್ಟುವೆವು ನಗೆಗಂಟು ~ ಪರಮಾತ್ಮನೆ ||೫೦೨||

ಒಟ್ಟು = ಕೂಡಿಸು


ಕರೆದುತಂದರೆ ಧನವು ಗೆಳೆಯರನು ಹೊಸದಾಗಿ

ಒರೆಹಚ್ಚಿ ಅವರ ಪರಿಶೀಲಿಸಿತು ಕಷ್ಟ |

ತೊರೆಯದೇ ಕಷ್ಟಕ್ಕೆ ಆದವನೆ ನಿಜಗೆಳೆಯ

ಅರಿ ನಂಬುವಾ ಮುನ್ನ ~ ಪರಮಾತ್ಮನೆ ||೫೦೩||

ಸಮರ್ಪಣೆ

ಮಾಧವಾ ಕೃಷ್ಣಾ ಮಧುಸೂದನ!

ನಿನಗಾಗಿ ಅರ್ಪಣೆ ಈ ನನ್ನ ಗಾನ.

ಮಿಡಿದಿದೆ ಎದೆಯು ಪ್ರೀತಿಯ ತಾನ,

ಮಾಡಿಹೆ ನಿನದೇ ಮುಗಿಯದ ಧ್ಯಾನ!


ಮುರುಳಿಯ ನಾದವ ಕೇಳಿಸು ನೀನು,

ಮನದಲಿ ಅದನೇ ತುಂಬುವೆ ನಾನು!

ಮತ್ತೆಮತ್ತೆ ನಿನ್ನನು ಕಾಡುವೆನೇನು?

ಮನದಲೆ ತುಂಬಿರೆ ಸವಿಸಿಹಿ ಜೇನು!


ಕಾದಿವೆ ಕಂಗಳು ನಿನ್ನಯ ದರ್ಶನಕೆ,

ಬೆಳಕನು ತೋರಿಸು ಈ ನನ್ನ ಮನಕೆ.

ಉತ್ತರ ದೊರೆಯಲಿ ಕಾಡುವ ಜಗಕೆ,

ಪಾವಿತ್ರ್ಯ ಸಿಗಲಿ ನನ್ನಯ ಜನುಮಕೆ.


ನಿನಗಾಗಿ ನಾನು ಹಾತೊರೆದಿರಲು,

ತೆರೆಯೋ ಬೇಗ ನಿನ್ನೆದೆ ಬಾಗಿಲು.

ನದಿಗಳು ಹರಿದು ಸೇರಿವೆ ಕಡಲು,

ಮೀರೆಯು ಬಂದಳು ನಿನ್ನನು ಸೇರಲು!

Monday, August 28, 2023

ಭಾರತೀಯರು ನಾವು

ಭಾರತೀಯರು ನಾವು ಎನ್ನುವುದೆ ಹಿರಿಮೆ,

ಮೇರು ಗಿರಿಯೆತ್ತರವು ನಮ್ಮಯಾ ಗರಿಮೆ!


ಬಹು ಸನಾತನ ನಮ್ಮ ವಿಧಿ ವಿಚಾರಗಳು,

ನವನೂತನವು ನಮ್ಮ ಆವಿಷ್ಕಾರಗಳು!

ಆಚಾರ ಸುವಿಚಾರ ಸಂಸ್ಕಾರವಂತರು,

ಹೃದಯ ವೈಶಾಲ್ಯತೆಯ ಭಾವ ಮೆರೆದವರು.


ವೈರಿಪಡೆಗಳೆದೆಗಳ ಮೆಟ್ಟಿನಿಂತವರು,

ಸ್ನೇಹವನು ಬಯಸಿರಲು ಅಪ್ಪಿಕೊಂಡವರು!

ಹಿಮಪರ್ವತಗಳೆತ್ತರದ ಗುರಿಯು ಉಂಟು,

ಗಂಗೆಯಾ ಜಲದಂತೆ ಶುದ್ಧಮನವುಂಟು.


ಕಣ್ಣೆದುರೆ ಉಂಟು ಸಾಧಕರ ಸಾಧನೆಯು,

ಮಣ್ಣಿನಲೆ ಉಂಟು ಅವರೆಲ್ಲರಾ ದನಿಯು!

ವಿಂಧ್ಯಾಚಲದಂತೆ ವಿಶ್ವಾಸವದು ಅಚಲ,

ಆಕಾಶದಂತೆ ಅವಕಾಶಗಳು ವಿಪುಲ!


ನಮಗಿತ್ತಿಹಳು ತಾಯಿ ಏಸೊಂದು ಮಮತೆ!

ನಾವೇನು ಕೊಟ್ಟಿಹೆವು ಹಚ್ಚಲಿಕೆ ಹಣತೆ?

ಬನ್ನಿರೀ ಬರೆಯೋಣ ಹೊಸದೊಂದು ಚರಿತೆ,

ಭಾರತಿಯ ಕಥೆಯಾಗೆ ಇನಿದಾದ ಕವಿತೆ!

Saturday, May 27, 2023

ನಿಮ್ಮ ವಯಸ್ಸೆಷ್ಟು?

 ನಿಮ್ಮ ವಯಸ್ಸೆಷ್ಟು? ನಿಮ್ಮ ವಯಸ್ಸೆಷ್ಟು?

ಕೇಳುವವರಿಗೆ ಬಹಳ ಇಂಟರೆಷ್ಟು!

ಈ ಪ್ರಶ್ನೆಯೇ ಸರಿಯಿಲ್ಲ ಇಂತು,

ಇನ್ನು ಅವರಿಗೆ ಉತ್ತರಿಸುವುದೆಂತು?


ಚಿಣ್ಣರ ಒಡನಾಡುತಿರೆ ಒಂದೇ ಒಂದು ವರುಷದವ!

ಕಾರ್ಟೂನು ನೋಡುತಿರೆ ಏಳೇ ಏಳರವ!

ಖುಶಿಯಿಂದ ಕುಣಿಯುತಿರೆ ಹದಿನಾರ ಹರೆಯದವ!

ಸ್ನೇಹಿತರ ಸಂಗವಿರೆ ಇಪ್ಪತ್ತು-ಮೂವತ್ತರ ಹವ!


ಹೂಬನದ ಹಕ್ಕಿ ಚಿಟ್ಟೆಗಳೊಡನಾಡುವಾಗ,

ವಯಸ್ಸಿರಬಹುದು ಅವುಗಳಷ್ಟೇ ಆಗ!

ತಾರಾಚಂದ್ರರ, ನದಿ ಬೆಟ್ಟಗಳ ನಡುವಿರಲು,

ನಾನು ಕಾಲಾತೀತ ಎನಿಸುವುದು, ಅದು ಅಮಲು!


ವಯಸ್ಸಿಗೆ, ಮನಸ್ಸಿಗೆ ಉಂಟೇನು ಸಂಬಂಧ?

ಪ್ರತಿ ಕ್ಷಣ ಬದಲಾಗುವ ಮನಸಿಗಾವ ಬಂಧ?

ದಿನಗಳೆಷ್ಟು ಉರುಳಿವೆ ಎನ್ನುವ ಪ್ರಶ್ನೆ ಅಸಂಗತ,

ಹೇಗೆ ಬದುಕಿದೆ ಎನ್ನುವುದು ಅನುದಿನವೂ ಪ್ರಸ್ತುತ!


 

Friday, April 21, 2023

ನವ ವಸಂತ

ಬಂದ ಬಂದ ನವ ವಸಂತ

ತಂದ ತಂದ ಹೊಸ ಪ್ರಪಂಚ


ಹಸಿರಿನ ಸೀರೆಯ ಉಟ್ಟ ವಸುಂಧರೆ

ಉಸಿರಿನ ಸುಗಂಧ ಚುಂಬಕವಾಗಿರೆ

ಫಲಗಳ ಬುತ್ತಿಯ ಆರಿಸಿ ತಂದಿರೆ

ಒಲವಿನ ಉಡುಗೊರೆಯಾಗಿ ನಿಂದಿರೆ


ಮಲ್ಲಿಗೆ ಸಂಪಿಗೆ ಗುಲಾಬಿ ಕೇದಿಗೆ 

ಹುಲ್ಲಿನ ಹಸಿರಿನ ಮೆತ್ತನೆ ಹಾಸಿಗೆ

ಮಾಮರ ಕಿತ್ತಳೆ ಅಂಜೂರ ಹಲಸು

ಅಂದ ಸುಗಂಧ ಸವಿರುಚಿ ಸೊಗಸು


ಬಣ್ಣದ ದಿರುಸನು ಧರಿಸಿದ ಲಲನೆ

ಚಿನ್ನದ ಒಡವೆ ಮಿಂಚಿದೆ ಸುಮ್ಮನೆ

ನೊಸಲಿಗೆ ತಿಲಕ ಕಣ್ಣಲಿ ಹೊಳಪು

ನಸುನಗೆ ವದನ ಗುಲಾಬಿ ಕದಪು


ಅಂದದ ತೋರಣ ರಂಗಿನ ಚಿತ್ತಾರ

ಬಂಧುಗಳ ಮಿಲನಕೆ ಹರುಷದ ಸಾಕಾರ

ಎದೆಯಲಿ ಹರುಷ ಗುಡಿಯಲಿ ಚರಪು

ಯುಗಾದಿ ತಂದಿಹ ಹೊಸತನ ಹುರುಪು!