ಕಾಣುತಿಹುದು ದೀಪ ಮಾಲೆ,
ಬೀದಿಯಲ್ಲಿ ಸಾಲು ಸಾಲೆ.
ಬೆಳಕ ಬೀರಿ ನಗುವ ಚಿಮ್ಮಿದೆ,
ದೀಪಾವಳಿಯ ಹುರುಪು ತಂದಿದೆ.
ಗಂಗಾ ಮಾತೆಯೆ ಶರಣು ಶರಣು
ನೀರ ತುಂಬುವೆ ಇಂದು ನಾನು
ಶುದ್ಧವಾಗಲಿ ಮಲಿನ ತನುವು
ಹಗುರವಾಗಲಿ ನೊಂದ ಮನವು
ಕೃಷ್ಣ ದೇವನೆ ನಿನಗೆ ನಮನ
ಆಗಲಿಂದೇ ಅಸುರ ದಮನ
ನರಕ ಚತುರ್ದಶಿಯ ಶುಭದಿನ
ನರಕಾಸುರರಿಗೆ ಕೊನೆ ದಿನ
ಕೇಳುತಿಹುದು ಗೆಜ್ಜ ನಾದ,
ನೋಡು ಅಲ್ಲಿ ದಿವ್ಯ ಪಾದ,
ಬಂದಳಗೋ ಲಕುಮಿ ತಾಯಿ,
ಸಲಹು ಎಮ್ಮನು ನೀನು ಮಾಯಿ.
ವಾಮನಮೂರ್ತಿ ನೀನು ಬಂದೆ
ಭೂಮ್ಯಾಕಾಶಗಳ ತುಳಿದು ನಿಂದೆ
ಬಲಿಗೆ ಮೋಕ್ಷವ ಬಳಿಗೆ ತಂದೆ
ಪಾಲಿಸು ಎಮ್ಮನು ನೀನೆ ತಂದೆ
ಬಕುತಿ ಭಾವಗಳು ಚಿಮ್ಮಿ ಓಕುಳಿ
ಹರುಷದಾ ದೀಪಾವಳಿ
ದೀಪಗಳ ಸಿರಿ ಬೆಳಕಲಿ
ವಿಶ್ವ ಶಾಂತಿಯು ಹರಡಲಿ