Monday, March 4, 2024

ಚುಟುಕುಗಳು

ಚುಟುಕು: ನಾಲ್ಕು ಸಾಲುಗಳ ಕವನ. ಅಂತ್ಯಪ್ರಾಸ ಕಡ್ಡಾಯ


ದತ್ತಪದ : ಬದಲಾವಣೆ

ಇರಬೇಕು ಸಹನೆ ತಪ್ಪಿಸಲು ಬಲು ಬವಣೆ
ಕರಗಿಸುತ ಕೋಪವನು ಸಹನೆಗೆ ಹಾಕು ಮಣೆ
ಸುರಿಯುವುದು ಎದೆಯಲ್ಲಿ ದಯೆ ಮತ್ತು ಕರುಣೆ
ತರುವುದು ಬದುಕಿನಲಿ ಸುಂದರ ಬದಲಾವಣೆ

ದತ್ತಪದ : ಧಾರಾಕಾರ

ಧಾರಾಕಾರ ಮಳೆಗೆ ರಸ್ತೆಗಳು ನದಿಯ ಧಾರ,
ವಾಹನ ಸಂಚಾರವಾಯಿತು ಬಹಳ ದುಸ್ತರ!
ಜನತೆ ಕೇಳಿತು ಸರ್ಕಾರವ ಏಕೀ ಅವಾಂತರ?
ಹಿಂದಿನ ಸರ್ಕಾರವ ದೂರಿತು ಈಗಿನ ಸರ್ಕಾರ!

ದತ್ತಪದ : ಅಮ್ಮ

ನನ್ನ ಮೊದಲ ಸ್ಪರ್ಶ ನೀನಮ್ಮ,
ನನ್ನ ಮೊದಲ ಪರಿಚಯ ನೀನಮ್ಮ,
ನಿನ್ನೆದೆಯ ಬಡಿತ ಜೋಗುಳವಮ್ಮ,
ನನ್ನ ಮೊದಲ ತೊದಲೇ "ಅಮ್ಮ"!

ದತ್ತಪದ: ಮನೆ

ಮನೆಯಿರಬೇಕು ಮಕ್ಕಳಿಗೆ ತೆನೆಯಂತೆ ಕಾಳಿಗೆ
ಬೆಳೆಯಬೇಕು ಸಂತಸದಲಿ ಬರವಿರದಂತೆ ಕೂಳಿಗೆ
ಹೂವರಳುವಂತೆ ಮನ ವಿಕಸಿಸಬೇಕು ಬೆಳೆಯುತ
ಸಮಾಜಕೆ ಉಪಕಾರಿಯಾಗಬೇಕು ಬಾಳು ಬಾಳುತ

ದತ್ತಪದ : ನಗು-ಹ್ಯಾಪಿ

ನಗುತಿರಲು ಹ್ಯಾಪಿ, ನಗದಿರುವ ಪಾಪಿ,
ಅವನು ಕೋಪಿ, ಬರುವುದವಗೆ ಬೀಪಿ.
ಮಾಡಿದರೂ ಕಾಪಿ, ಊದುತಿರು ಪೀಪಿ,
ಹಾಕಿದರೂ ಟೋಪಿ, ಆಗದಿರು ಪಾಪಿ.

ದತ್ತಪದ : ಶ್ರಾವಣ

ಬಂತದೋ ಶ್ರಾವಣ ತಂದಿತೋ ತೋರಣ,
ಸಡಗರಕ್ಕೆ ಹೂರಣ ಹಬ್ಬಗಳೇ ಕಾರಣ,
ಭಕ್ತಿಯಲಿ ಪೂಜನ, ಮಂತ್ರಗಳ ಪಠಣ,
ತನುಮನಕೆ ರಸನಕ್ಕೆ ದಿನದಿನವೂ ಔತಣ!