Showing posts with label ಪರಿಸರ. Show all posts
Showing posts with label ಪರಿಸರ. Show all posts

Thursday, August 18, 2022

ಮುಕ್ತಕಗಳು - ೫೫

ಕರವೀರಪುರದಲ್ಲಿ ನೆಲಸಿರುವ ಲಕುಮಿಯೇ

ಪೊರೆ ನೀನು ಪುತ್ರರನು ಉಸುರಿರುವ ತನಕ |

ತರುವೆ ನೀ ಭಕುತರಿಗೆ ಸಾಯುಜ್ಯ ಪದವಿಯನು

ತೊರೆದಾಗ ಅತಿಯಾಸೆ ~ ಪರಮಾತ್ಮನೆ ||೨೭೧||

ಸಾಯುಜ್ಯ = ಮೋಕ್ಷ

  

ನಡೆದಿಹೆವು ಪ್ರತಿದಿನವು ಜವರಾಯ ಇರುವೆಡೆಗೆ

ಕೊಡನಲ್ಲ ವಿಶ್ರಾಂತಿ ಅರೆಘಳಿಗೆ ಕೂಡ |

ಕೊಡ ನಮಗೆ ಬೇರೆ ದಾರಿಯ ಹಿಡಿಯಲಾಸ್ಪದವ

ಬಿಡದೆ ನೆನೆಯುತಿರು ಇದ ~ ಪರಮಾತ್ಮನೆ ||೨೭೨||


ರಾಮನಾಮವ ಜಪಿಸಿ ದಾರಿಕೆಟ್ಟವರಿಲ್ಲ

ಶ್ಯಾಮಸುಂದರನ ನೆನೆವಗೆ ಶೋಕವಿಲ್ಲ |

ಕಾಮವನು ನಿಗ್ರಹಿಸೊ ಶಕ್ತಿ ಬೆಳೆದರೆ, ಪರಂ

ಧಾಮದಾ ದಾರಿಯದು ~ ಪರಮಾತ್ಮನೆ ||೨೭೩||


ಕಸವ ತುಂಬದಿರಿ ಎಳೆಯರ ಉದರ ಮಸ್ತಕಕೆ

ಕಸುವು ಬೇಕಿದೆ ತಮ್ಮ ಬದುಕ ಸಾಗಿಸಲು |

ಸಸಿಗೆ ನೀಡಿದರೆ ಪರಿಶುದ್ಧ ಜಲ ವಾಯುಗಳ

ಫಸಲನೀಯುವುದಧಿಕ ~ ಪರಮಾತ್ಮನೆ ||೨೭೪||


ಸಾಗರದ ನೀರಿನೊಳು ಧ್ಯಾನವದು ಸಾಧ್ಯವೇ

ಜೋಗದಾ ಧಾರೆಯಲಿ ಮೀಯುವುದು ಉಂಟೆ |

ಆಗುವವು ಕಾರ್ಯಗಳು ಸೂಕ್ತದಾ ಪರಿಸರದಿ

ನೀಗಿಸಿರೆ ಅಡೆತಡೆಯ ~ ಪರಮಾತ್ಮನೆ || ೨೭೫||


Saturday, June 6, 2020

ನಿಸರ್ಗ ಮಾತೆಯ ವ್ಯಥೆ

ನಿಸರ್ಗ ಮಾತೆಯ ಕಥೆಯ ಏನು ಹೇಳಲಿ?
ಕಣ್ಣೀರಿನ ವ್ಯಥೆಯೇ ಪ್ರತಿನಿತ್ಯ ಬಾಳಲಿ.
ಪರಿಸರಕೆ ಸಾಕೇ ಒಂದು ದಿನದ ಉತ್ಸವವು?
ಪ್ರಾಣವಾಯುವಿಲ್ಲದೆ ಹೇಗೆ ತಾನೆ ಬದುಕುವೆವು?

ನಿತ್ಯಪೂಜೆಗಿಲ್ಲಿ ಕೊಳಕುಗಳು, ಕಸಗಳು,
ಬುದ್ಧಿಮಾಂದ್ಯರಮ್ಮನಿಗೆ ಇನ್ನೆಂಥ ಬಾಳು!
ವಿಷದ ಧೂಪ ಹಾಕಿದರು ಧೂರ್ತರು, ಪಾಪಿಗಳು,
ಪ್ಲಾಸ್ಟಿಕ್ಕಿಂದ ಮುಚ್ಚಿವೆ ಶ್ವಾಸದ ನಳಿಕೆಗಳು!

ಕೊಡಲಿಯೇಟು ನಿತ್ಯವೂ ದೇಹದ ಮೇಲೆ,
ಇವರಿಗೆ ಕಲಿಸಲು ಎಲ್ಲೂ ಇಲ್ಲ ಶಾಲೆ!
ಔಷಧಿ ಆಗಿದೆ ಬಹುದೂರದ ನಂಟು,
ಗಾಯಕ್ಕೆ ಬಿದ್ದಿದೆ ಬರೆಯಂತೆ ಕಾಂಕ್ರೀಟು!

ಕಣ್ಣುತೆರೆಯಬೇಕಿದೆ ಎಲ್ಲ ಧೃತರಾಷ್ಟ್ರರು,
ಕಾಪಾಡಲು ಬರಲಿ ಪಾಂಡುವಿನ ಪುತ್ರರು!
ನಿಸರ್ಗ ಮಾತೆಗೆ ನಿತ್ಯವೂ ವೇದನೆ,
ನಿತ್ಯೋತ್ಸವವಾಗಬೇಕು ಪರಿಸರ ರಕ್ಷಣೆ!

ಬನ್ನಿ, ಎಲ್ಲ ಬನ್ನಿ, ಸೇರಿ ಮಾಡೋಣ ಶಪಥ,
ಭೂತಾಯ ರಕ್ಷಣೆಗೆ ಹುಡುಕೋಣ ಶತ ಪಥ!
ಆಗೋಣ ಬನ್ನಿ ಸ್ವಚ್ಛ ನಾಗರಿಕರು,
ನಿಸರ್ಗ ಮಾತೆಯ ಹೆಮ್ಮೆಯ ಪುತ್ರರು!