ಮುತ್ತಿನಂಥ ಮಾತ ನೀ ಬಲ್ಲೆ,
ತಾಳಕ್ಕೆ ತಕ್ಕಂತೆ ನೀ ಕುಣಿದೆ ,
ನಮ್ಮ ಅದೃಷ್ಟವೋ ಏನೋ,
ಕಾಲಕ್ಕೆ ತಕ್ಕಂತೆ ಬದಲಾಗಲಿಲ್ಲ!
ಹಾಲಿನಂಥ ಕನ್ನಡವನ್ನು,
ಜೇನಿನಂಥ ಕಂಠದಲ್ಲಿ ಬೆರೆಸಿ,
ಸಿಹಿಯ ಕನ್ನಡದ ಸವಿನುಡಿಯ,
ಸುಧೆಯನ್ನು ಉಣಬಡಿಸಿದೆ!
ಒತ್ತಡಗಳಿಗೆ ಮಣಿಯಲಿಲ್ಲ,
ರಾಜಕಾರಣಕೆ ಇಳಿಯಲಿಲ್ಲ,
ಕನ್ನಡವೊಂದೇ ಸಾಕೆಂದೆ,
ನೆಚ್ಚಿನ ರಾಜಕುಮಾರನಾದೆ!
ಕನ್ನಡಕ್ಕೋಸ್ಕರ ಹೋರಾಡಿದ,
ರಣಧೀರ ಕಂಠೀರವ ನೀನು!
ಸಂಪತ್ತಿಗೆ ಸವಾಲೆಸೆದ,
ಬಹದ್ದೂರ್ ಗಂಡು ನೀನು!
ಬೀದಿ ಬಸವಣ್ಣನೆಂದರು,
ಚೂರಿ ಚಿಕ್ಕಣ್ಣನೆಂದರು,
ತಲೆ ಕೆಡಸಿಕೊಳ್ಳದೆ ಆದೆ,
ನೀ ದೇವತಾ ಮನುಷ್ಯ!
ನಮ್ಮ ಕನ್ನಡ ನಾಡಿನಲ್ಲಿ,
ಮತ್ತೊಮ್ಮೆ ಹುಟ್ಟಿ ಬಾ,
ಬಂಗಾರದ ಮನುಷ್ಯನೇ,
ಕಾಯುತಿದೆ ಗಂಧದಗುಡಿ!