Showing posts with label ಬುದ್ಧಿಜೀವಿ. Show all posts
Showing posts with label ಬುದ್ಧಿಜೀವಿ. Show all posts

Monday, September 26, 2022

ಮುಕ್ತಕಗಳು - ೭೦

ಎಲೆಯಲ್ಲಿ ಕೊಳೆಯಿರಲು ಊಟ ಮಾಡುವುದೆಂತು

ಕೊಳೆಯನ್ನು ತೊಳೆದು ಶುಭ್ರಗೊಳಿಸಲು ಬೇಕು  |

ಮಲಿನತೆಯು  ಮನದಲ್ಲಿ ಮನೆಮಾಡಿ ನಗುತಿರಲು

ಮುಳುವಾಯ್ತು ಸವಿನುಡಿಗೆ ~ ಪರಮಾತ್ಮನೆ||೩೪೬||


ಸುಖವಿಲ್ಲ ನಗನಾಣ್ಯ ದಿರಿಸು ಅರಮನೆಗಳಲಿ

ಸುಖವಿಹುದು ನಮ್ಮದೇ ಸ್ವಂತ ಮನಗಳಲಿ |

ಸಕಲ ಸಂತೋಷಗಳ ಆಕರವು ಎದೆಯಲಿರೆ

ಮಕುಟ ಬೇಕೇಕೆ ದೊರೆ ~ ಪರಮಾತ್ಮನೆ ||೩೪೭||


ಮಕುಟವಿರೆ ಚಿನ್ನದ್ದು ತಲೆಗಾಯ್ತು ಮಣಭಾರ

ಸಕಲ ಅಧಿಕಾರವಿರೆ ಕರ್ತವ್ಯಭಾರ |

ಸಕಲ ಐಶ್ವರ್ಯವಿರೆ ಭಯಭಾರ ಮನದಲ್ಲಿ

ಯುಕುತಿಯಲಿ ತೂಗಿರುವೆ ಪರಮಾತ್ಮನೆ ||೩೪೮||


ಸುಖ ಪಡಲು ಪರಮಾತ್ಮ ಜನುಮವನು ಕೊಟ್ಟಿರುವ

ನಖಶಿಖಾಂತದ ದೇಹ ಬುದ್ಧಿ ಮನಗಳನು |

ಸುಖ ಪಡಲು ದೇವರಲಿ ವಸ್ತುಗಳ ಬೇಡಿಹೆವು

ಪ್ರಖರ ಮಂದಮತಿಗಳು ~ ಪರಮಾತ್ಮನೆ ||೩೪೯||


ಬುದ್ಧಿಜೀವಿಗಳೆಂದು ಗದ್ದಲವ ಮಾಡಿಹರು

ಸದ್ದು ಮಾಡುತಿವೆ ಅರೆಬೆಂದ ಮಡಕೆಗಳು |

ಪೆದ್ದ ದೊರೆ ಕುರುಡನೊಲು ಆನೆಯನು ಮುಟ್ಟಿದವ

ಉದ್ಧರಿಸು ಇಂಥವರ ಪರಮಾತ್ಮನೆ ||೩೫೦||