ತಾ ಸಾವೆದು ಗಂಧವೀವ,
ಸಿರಿಗಂಧದ ಕೊರಡು ನೀವು.
ಮನೆ ಮಠಗಳ ಮರೆತುಬಿಟ್ಟು,
ಸತಿ ಸುತರನು ದೂರವಿಟ್ಟು,
ಸೌಖ್ಯವನ್ನೇ ಪಣಕೆ ಇಟ್ಟು,
ನಿಸ್ವಾರ್ಥದ ಸೇವೆ ಕೊಟ್ಟೆ ವೈದ್ಯನಾರಾಯಣ!
ನಿಮ್ಮ ಹೆಗಲಿಗೆ ಹೆಗಲ ಕೊಟ್ಟ,
ಇಚ್ಛೆಗಳ ಅದುಮಿ ಇಟ್ಟ,
ರೋಗಿಗಳಿಗೆ ಅಭಯವಿತ್ತ,
ಸಿಬ್ಬಂದಿಯ ಸೇವೆ, ಚಿತ್ತ, ದೈವಸಹಾಯವು!
ಬಿಸಿಲಿನಲ್ಲಿ ತಿರುಗಿ ತಿರುಗಿ,
ಅಲೆಮಾರಿಗಳ ಹಿಂದಕಟ್ಟಿ,
ಮಾತೆ ಮಕ್ಕಳ ಕಾಪುವಂತೆ
ಎಲ್ಲರನೂ ಕಾಯುತಿರುವ ಪ್ರಾಣ ರಕ್ಷಕರು!
ಬೀದಿ ಹೊಲಸ ಗುಡಿಸಿಕೊಂಡು,
ನಮ್ಮ ಕಸವ ತುಂಬಿಕೊಂಡು,
ನಿಮ್ಮ ಸ್ವಾಸ್ಥ್ಯ ಕಾಯ್ದುಕೊಂಡು,
ಸೇವೆ ಮಾಡುತಿರುವ ನೀವೇ ನಿಜಕೂ ಮಾನ್ಯರು!
ರುಚಿ ಶುಚಿಯ ಪಾಕವಿಳಿಸಿ,
ಹೊಟ್ಟೆಗಿಲ್ಲದವರ ಹುಡುಕಿ,
ಹಸಿದ, ಕುಸಿದ ಪ್ರಾಣಗಳಿಗೆ,
ಅನ್ನಭಾಗ್ಯ ನೀಡುತಿರುವ ನೀವೇ ಧನ್ಯರು!
ನಿಮ್ಮ ಮಹಿಮೆ, ನಿಮ್ಮ ದುಡಿಮೆ,
ಎಷ್ಟು ಹೇಳಿದರೂ ಕಡಿಮೆ.
ನಮಗಿತ್ತಿರಿ ನೀವು ಮುಲಾಮ್,
ನಿಮಗೆಲ್ಲರಿಗೆ ನಮ್ಮ ಸಲಾಮ್!