Showing posts with label ಕೊರೋನಾ. Show all posts
Showing posts with label ಕೊರೋನಾ. Show all posts

Friday, May 29, 2020

ಮುಂದಿದೆ ಮಾರಿಹಬ್ಬ!

ನೀ ಬಂದೆ, ವಾಮನನಂತೆ,
ಜಗವನಾಕ್ರಮಿಸಿದೆ.
ಭಯಭೀತರಾದರು,
ಪ್ರಜೆಗಳೂ, ರಾಜರೂ, ಎಲ್ಲರೂ!

ಅಸ್ತ್ರಗಳೆಲ್ಲ ನಿಷ್ಪ್ರಯೋಜಕ,
ನಿನ್ನ ಶಕ್ತಿಯ ಮುಂದೆ.
ನೀನೇತಕೆ ಇಲ್ಲಿಗೆ ಬಂದೆ?
ಜಗವಾಗಿದೆ ಕುರಿಗಳ ಮಂದೆ!

ಮುಟ್ಟಿದರೆ ನಿನ್ನ,
ಕತ್ತು ಹಿಸುಕುವೆಯಲ್ಲ!
ಉರುಳುತಿವೆ ತಲೆಗಳು,
ನಿನ್ನ ನೆರಳು ಬಿದ್ದಲ್ಲೆಲ್ಲ!

ಅಡಗುದಾಣಗಳಲ್ಲಿ ನಡೆಯುತಿದೆ,
ಹೊಸ ಅಸ್ತ್ರಗಳ ಶೋಧ,
ನಿನಗಾಗಿ ಬರಲಿದ್ದಾನೆ,
ಬಲಶಾಲಿ ಯೋಧ!

ಕೊರೋನಾ, ಮುಂದಿದೆ ನಿನಗೆ,
ಕಂಡರಿಯದ ಮಾರಿಹಬ್ಬ!
ಹೆದರದೆ ನಿನ್ನೆದುರು,
ಎದ್ದು ನಿಲ್ಲುವನು ಪ್ರತಿಯೊಬ್ಬ!

Friday, May 15, 2020

ಕೊರೋನಾ ಕಲ್ಯಾಣ


ಕೂಡಿದ ಹೃದಯಗಳೆರಡು,
ಹಡೆದಾ ಜೋಡಿಗಳೆರಡು,
ಹತ್ತಿರದವರೊಂದಿಪ್ಪತ್ತು,
ಬೇರೆ ಬೇಡ ಮದುವೆಯ ಹೊತ್ತು!

ಮೂರ್ಗಂಟಿಗೆ ಬೇಕೆ ಸಾವಿರ ಸಾಕ್ಷಿ?
ಹೂಂ ಎಂದರೆ ಸಾಕು ಮನಸಿನ ಪಕ್ಷಿ!
ನೂರಾರು ಅತಿಥಿಗಳು ಬೇಕಿಲ್ಲ,
ಸಹೃದಯರು ಹತ್ತೇ ಸಾಕಲ್ಲ!

ಕಾಣಿಕೆ ಬೇಡ, ತೋರಿಕೆ ಬೇಡ,
ದುಡಿದ ಗಂಟಿನ ಸೋರಿಕೆ ಬೇಡ!
ಊಟಕೆ ಇರಲಿ ಉಪ್ಪಿನಕಾಯಿ,
ಮದುವೆಲಿ ಇರಲಿ ಮನಸಿಗೆ ಹಾಯಿ!

ಕಳಿಸಲಿ ಎಲ್ಲರೂ ಶುಭಹಾರೈಕೆ,
ವೈಫೈ ಮಾಡಲಿ ಪೂರೈಕೆ.
ಹೀಗೇ ಆಗಲಿ ಮದುವೆಗಳು,
ನಗುತಾ ಇರಲಿ ಬದುಕುಗಳು.

ಸಮಾಜ ಸುಧಾರಕ ಕೊರೋನಾ,
ಹಿಡಿತಕೆ ತಂದಿದೆ ಖರ್ಚನ್ನ!
ಪಾಯಸ, ಹೋಳಿಗೆ, ಚಿತ್ರಾನ್ನ,
ಆಗೇ ಹೋಯಿತು ಕಲ್ಯಾಣ!

Sunday, May 10, 2020

ಸದವಕಾಶ

ಅವಕಾಶವಿದು, ಅವಕಾಶವಿದು,
ನಮಗೆಲ್ಲ ಸದವಕಾಶವಿದು!

ತೊರೆದ ಬಂಧುಗಳ ಆಲಂಗಿಸಲು,
ಮುರಿದ ಸಂಬಂಧಗಳ ಬೆಸೆಯಲು,
ಸವಿಕುಟುಂಬದಲ್ಲಿ ಕಲೆಯಲು,
ಹಾಲು, ಜೇನಿನಂತೆ ಬೆರೆಯಲು!

ಮನೆಯ ಆಹಾರ ಮೆಚ್ಚಲು,
ಶಾಖಾಹಾರವ ಒಪ್ಪಲು,
ವಿಷಾಹಾರವ ತೊರೆಯಲು,
ಹಂಸಕ್ಷೀರ ನ್ಯಾಯದೊಲು!

ಧಾರಾವಾಹಿಗಳ ಮರೆಯಲು,
ಮುಚ್ಚಿಟ್ಟ ಪುಸ್ತಕ ತೆರೆಯಲು,
ಸದಭಿರುಚಿಗಳ ಬೆಸಿಕೊಳ್ಳಲು,
ಚಾತಕಪಕ್ಷಿಯ ಆಯ್ಕೆಯೊಲು!

ಹಸಿದ ಹೊಟ್ಟೆಗಳ ತುಂಬಲು,
ನತದೃಷ್ಟರಿಗೆ ಸಹಾಯ ಮಾಡಲು,
ಕರುಣೆ, ಮಮತೆ, ಬೆಳಸಿಕೊಳ್ಳಲು,
ಮಾತೆಯ ಪ್ರೀತಿಯ ಹೃದಯದೊಲು!

ಪರದೇಶದ ಮೋಹವ ಬಿಡಲು,
ಚೀನಿಯ ವಸ್ತು ತ್ಯಜಿಸಲು,
ಭಾರತದಲ್ಲೇ ಸೃಜಿಸಲು,
ಸ್ವಾವಲಂಬನೆಯ ಕೃಷಿ ಮಾಡಲು!

ಕೊರೋನಾ ಕೊಟ್ಟಿದೆ ಅವಕಾಶ,
ಮಾಡೋಣ ರಂಗಕೆ ಪ್ರವೇಶ,
ಹರಸುತಿಹ  ನಮ್ಮ ಪರಮೇಶ,
ಈಗ, ಎಲ್ಲೆಯೇ ಅಲ್ಲ ಆಕಾಶ!







Wednesday, May 6, 2020

ಪುಂಡ ಮಕ್ಕಳು























ನಿಸರ್ಗ ತಾಯ ಮಕ್ಕಳಿವರು
ತುಂಟರು, ತುಡುಗರು,
ಪುಂಡಾಟದಲಿ ಮಗ್ನರು,
ಮೊಂಡಾಟದಲಿ ಶ್ರೇಷ್ಠರು!

ಮಾತೆ ಇತ್ತ ಊಟದಲ್ಲಿ,
ವಿಷವ ಬೆರೆಸಿಕೊಂಡರು.
ದಾಹ ನೀಗೋ ನೀರಿನಲ್ಲಿ,
ಕಸವ ಕಲೆಸಿಕೊಂಡರು.

ಮನಬಂದಂತೆ ಆಡುವರು,
ಪರಿಣಾಮಗಳ ನೋಡರು.
ಆಟ ಆಡುತಲೇ ತಾಯ,
ಎದೆಗೆ ಲಗ್ಗೆಯಿಟ್ಟರು!

ತಾವೇ ಒಡೆಯರೆಂದು ಭ್ರಮಿಸಿ,
ಎಲ್ಲೆ ಮೀರಿ ಕುಣಿದರು,
ಮಾತೆ ಇತ್ತ ಸೂಚನೆಗಳ,
ಧಿಕ್ಕರಿಸಿ ನಡೆದರು.

ಅಗೋ ಗುಮ್ಮ ಎಂದಳು,
ಹೆದರಲಿಲ್ಲ ಮಕ್ಕಳು.
ಕೆಂಗಣ್ಣ ಬಿಟ್ಟಳು,
ಬೆದರಲಿಲ್ಲ ಮಕ್ಕಳು!

ಎನೂ ತೋಚದಾಗಿ ಅವಳು,
ಪಾಠ ಕಲಿಸೆ ಬಯಸಿದಳು.
ಕೊರೋನಾ ಗುಮ್ಮನವಳು,
ಛೂ ಎಂದು ಬಿಟ್ಟಳು!

Wednesday, April 29, 2020

ಮಹಾಯುದ್ಧ
















ಕತ್ತಿ ಗುರಾಣಿಗಳಿಲ್ಲ,
ಆದರೂ ಇದು ಯುದ್ಧ!
ಮದ್ದು ಗುಂಡುಗಳಿಲ್ಲ,
ಆದರೂ ಇದು ಯುದ್ಧ!

ಹೊರಗೆ ಓಡಾಡದಿರು,
ಇದು ಮಹಾಯುದ್ಧ!
ವ್ಯಕ್ತಿ ಸ್ವಾತಂತ್ರ್ಯವೆನದಿರು,
ಇದು ಮಹಾಯುದ್ಧ!

ಬರಿಗಣ್ಣಿಗೆ ಕಾಣದ ವೈರಿ,
ಯಾರದೋ ಬೆನ್ನೇರಿ ಬರಬಹುದು!
ಕರುಣೆಯೇ ಇಲ್ಲದ ಮಾರಿ,
ಯಾರನ್ನೇ ಬಲಿ ಹಾಕಬಹುದು!

ಸೋತು ತಲೆ ಬಾಗಿದರೂ ನಿಲ್ಲದು,
ಕಥೆಯ ಮುಗಿಸದೇ ಬಿಡದು!
ಮರಣ ಮೃದಂಗವ ಬಾರಿಸುತ್ತ,
ಹುರುಪಲಿ ಮುಂದೆ ಸಾಗುವುದು!

ಸಾಬೂನೇ ಕತ್ತಿ, ಮುಸುಕೇ ಗುರಾಣಿ,
ನಮ್ಮೆಲ್ಲರ  ಆತ್ಮರಕ್ಷಣೆಗೆ!
ವೈದ್ಯನೇ ಸೈನಿಕ, ಔಷಧಿಯೇ ಗುಂಡು,
ಆಸ್ಪತ್ರೆಯ ರಣರಂಗಕೆ!

ಕೂಡು ಮನೆಯಲಿ, ಬೇಡು ದೇವರನು,
ಎಲ್ಲರ ಜೀವ ಉಳಿಯಲಿ ಎಂದು,
ಜಿದ್ದಿನ ಯುದ್ಧ ಮುಗಿಯಲಿ ಎಂದು,
ವೈರಿ ಸರ್ವನಾಶವಾಗಲಿ ಇಂದು!

Saturday, April 25, 2020

ಆತ್ಮಾವಲೋಕನ



ದೇವರು ಕರಣಾ ಮೂರ್ತಿ,
ಸೋಲಲು ಬಿಡನು ಪೂರ್ತಿ.
ಮುಚ್ಚಿದರೆ ಹೋಗುವ ದಾರಿ,
ತೋರುವ ಬೇರೆ ರಹದಾರಿ.

ಮುಚ್ಚಿ ಮನೆಯ ಬಾಗಿಲನು,
ತೆರೆಯೋಣ ಮನದ ಕದವನ್ನು.
ಹೊರಗಿನ ಕೆಲಸವ ಮರೆತು,
ಚಿಂತಿಸೋಣ ಒಳಗಿನ ಕುರಿತು.

ಹೊರಗಿನ ಓಟದ ಓಘದಲಿ,
ಆಗಿದೆ ಸ್ವವಿಮರ್ಶೆಯ ಬಲಿ.
ಕುಳಿತು ಚಿಂತಿಸೊ ಸುಸಮಯ,
ಮತ್ತೆ ಸಿಗುವುದೇ ಈ ಸಮಯ?

ನೆನೆದು ಹಿಂದಿನ ನಡೆನುಡಿಯ,
ಗುರುತಿಸಿ ಮಾಡಿದ ಗಡಿಬಿಡಿಯ,
ಸಂಭಾಷಿಸಿ ಒಳಗಿನ ಗೆಳೆಯನೊಡೆ,
ತಿದ್ದೋಣ ನಮ್ಮ ತಪ್ಪು ನಡೆ.

ಉಳಿಯಲಿ, ಬೆಳೆಯಲಿ ಸಂಬಂಧ,
ಬಿಗಿಯಾಗಲಿ ಪ್ರೀತಿಯ ಅನುಬಂಧ.
ನಗುನಗುವ ನಲಿವ ಕುಟುಂಬಗಳು,
ದೇಶದ ಆಧಾರ ಸ್ತಂಭಗಳು!


Friday, April 24, 2020

ಅಗಲಿಕೆ



ಸಂಗ ತೊರೆದರೂ ನೀವು,
ಸಂಗ ಮರೆಯೆವು ನಾವು.

ಎಲ್ಲಿ ಹೋದಿರಿ ನೀವು,
ಇಲ್ಲೇ ಉಳಿದೆವು ನಾವು.
ನಾಳೆ ಬರುವೆ ಎಂದು,
ಹೇಳಿ ಕಣ್ಮರೆ ಇಂದು!


ಇಂಥ ಅವಸರ ಏಕೆ?
ಬಂಧು, ಮಿತ್ರರು ಸಾಕೇ?
ಮರೆತ ಮಾತುಗಳುಂಟು,
ಮೊಗ್ಗು ಭಾವಗಳುಂಟು.

ಸಾಲು ನಿಂತೆವು ನಾವು,
ಹಾಲು, ಹಣ್ಣಿಗೆ ಎಂದು.
ಸಾಲು ನಿಂತಿರಿ ನೀವು,
ಕಾಲ ದೇವನ ಮುಂದು.

ಏಕೆ ಬಿದ್ದಿರಿ ನೀವು,
ಮಾರಿ ದುಷ್ಟೆಯ ಕಣ್ಗೆ?
ದುಷ್ಟ, ದುರುಳರು ಹೇಗೆ,
ದೌಡು ಸಿಕ್ಕದೆ ಕೈಗೆ?

ಖಾಲಿ ರಸ್ತೆಗಳಿಲ್ಲಿ,
ಕಾಲ ನಿಂತಿದೆ ಇಲ್ಲಿ,
ಕಾಲು ಇಟ್ಟರೆ ಹೊರೆಗೆ,
ಲಾಠಿ ದೂಡಿತು ಒಳಗೆ!

ಸದ್ದು ಇಲ್ಲದೆ ನೀವು,
ಕಾಲು ಕಿತ್ತಿರಿ ಹೇಗೆ?
ಲೋಕ ತೊರೆದಿರಿನೀವು,
ಲಾಠಿ ತಡೆಯದ ಹಾಗೆ!

ಏಕೆ ಅಗಲಿಕೆ ನಮಗೆ?
ಯಾವ ಸಲ್ಲದ ನೆವಕೆ?
ನಾವು ಮಾಡದ ಪಾಪ,
ನೀವು ಮಾಡಿದುದುಂಟೆ?









Thursday, April 23, 2020

ಬೇಡ ಇಂಥ ಸಾವು!




ರಕ್ಕಸಿ ತರುವ ಅನಾಥ ಸಾವು,
ವೈರಿಗೂ ಬೇಡ ಇಂಥ ನೋವು!

ಸುಳಿವು ಕೊಡದೆ, ಕೈಯ ಹಿಡಿದು,
ಎದೆಯ ಗೂಡು ಸೇರಿದವಳು,
ಮಧುರ ಭಾವ ಅರಿಯದವಳು,
ಬಕಾಸುರನ ಹಸಿವಿನವಳು!

ಎದೆಯ ಹತ್ತಿ ಕುಳಿತಳವಳು,
ಶ್ವಾಸಕೋಶ ಬಗೆದಳು!
ಕತ್ತು ಹಿಸುಕಿ ಕೊಂದಳು,
ಮತ್ತೊಬ್ಬರ  ಕೈಯ ಹಿಡಿದಳು!

ಹೊರಲು ಹೆಗಲು ಸಾಲದೇ,
ಹೂಳಲು ಎಡೆಯೇ ಇಲ್ಲದೇ,
ಸುಡಲು ಸೌದೆ ಎಲ್ಲಿದೆ?
ದೇಹಗಳುರುಳಿವೆ ನಿಲ್ಲದೇ!

ಕೊನೆಗೂ ಇಲ್ಲ ದರ್ಶನವು,
ಪ್ರೀತಿಪಾತ್ರ ಬಂಧುಗಳಿಗೆ.
ಸಂಸ್ಕಾರ ಇಲ್ಲ ದೇಹಕೆ,
ಅನಾಥವಾಗಿ ಮಸಣಕೆ.

ಆಸ್ತಿ ಸಿಕ್ಕರೇನು ಬಂತು,
ಸಿಗಲೇ ಇಲ್ಲ ಅಸ್ತಿಯು.
ಕನಸಿನ ಕಥೆಯ ಹಾಗೆ,
ವ್ಯಕ್ತಿ ಮಂಗ ಮಾಯವು!

ಯಾರಿಗೂ ಬೇಡ ಇಂಥ ಗತಿ,
ಬಹುಸಂಕಷ್ಟದ ದುರ್ಗತಿ.
ಬರುವುದೆಂದು ಹತೋಟಿಗೆ?
ಕಾಯುತಿಹೆವು ಬಿಡುಗಡೆಗೆ!

Wednesday, April 22, 2020

ಯಾರೇ ನೀ ಕೊರೋನಾ?



ಹೇ ಕೊರೋನಾ, ಯಾರೇ ನೀನು?
ನಿನಗೆ ಕರುಣೆಯೇ ಇಲ್ಲವೇನು?

ಹೆಸರಿನಲಿ ಇದ್ದರೂ ಕಿರೀಟ,
ಮರೆಯದಿರು, ನೀನೊಂದು ಕೀಟ!
ರಾಣಿ ಮಹಾರಾಣಿ ಅಲ್ಲ ನೀನು,
ಸಿಂಹಾಸನ ಇಲ್ಲ ಬಲ್ಲೆಯೇನು?



ಹೇಳೇ, ನಿನ್ನ ಕುಲಗೋತ್ರವ,
ಜನ್ಮ ನೀಡಿದ ಜನಕನ ಪಾತ್ರವ.
ಹುಟ್ಟೂರಲೇ ಇದ್ದು, ಸಾಯದೆ,
ನೀ ವಿಮಾನಗಳ ಏಕೆ ಹತ್ತಿದೆ?

ಎಲೈ, ಕಾಲಿಲ್ಲದ  ಕಳ್ಳ ಕುಂಟಿ,
ಬಿಡದ ಬೇತಾಳನಂತೆ ಬೆನ್ನಿಗಂಟಿ,
ಕಾಲಿಲ್ಲದಿರೂ ಓಡುತಲಿರುವೆ,
ಶಿಷ್ಟಸಂಹಾರ ಮಾಡುತಲಿರುವೆ!

ಇನ್ನೂ ಬೇಕೆ ಬಲಿಗಳು ನಿನಗೆ?
ಏನು ಸಾಧಿಸಬೇಕಿದೆ ಕೊನೆಗೆ?
ಮುಗಿದರೆ ನಮ್ಮೆಲ್ಲರ ಜಾತ್ರೆ,
ಅದು ನಿನಗೂ ಕೊನೆಯ ಯಾತ್ರೆ!

ಅಬ್ಭಾ! ಅದೆಷ್ಟು ಕೈಗಳು ನಿನಗೆ?
ನಾಚಿಕೆ ಆಗುತಿದೆ ಅಷ್ಟಪದಿಗೆ.
ಮಣ್ಣಾದನಲ್ಲ ದಶಕಂಠನು ಕೂಡ,
ಖಂಡಿತ, ಕಾಲನು ನಿನ್ನನ್ನೂ ಬಿಡ!

Monday, April 20, 2020

ವಿಧಿಯಾಟ



ಈ ವಿಧಿಯಾಟದ ಮರ್ಮವೇನು?
ನಾವು ಮಾಡಿದ ಕರ್ಮವೇನು?

ನಾಡಲಿ ಸ್ವಚ್ಛಂದದ ಪ್ರಾಣಿಗಳು,
ದಾರಿಕಾಣದೆ ಬೋನು ಸೇರಿದವಲ್ಲ!
ಹಾರಾಡೋ ಹಕ್ಕಿಗಳು ನೆಲಕಚ್ಚಿ,
ಬಾಯಿಮುಚ್ಚಿ, ಗೂಡು ಸೇರಿದವಲ್ಲ!

ಮನೆಯ ಮೂವರದು ಮೂರು ದಾರಿ,
ಈಗವರದು ಒಂದೇ ಕೂಡುಕುಟುಂಬ!
ಒಟ್ಟಿಗೆ ಊಟ, ಒಟ್ಟಿಗೆ ಆಟ, ನೋಟ,
ಹಿಂದೆಂದೂ ಕಾಣದ ವಿಧಿಯ ಆಟ!

ನೆರೆತ ಕೂದಲು ಕಪ್ಪಾಗುತ್ತಿಲ್ಲ,
ಬೆಳೆದ ಕೂದಲು ಕಟ್ಟಾಗುತ್ತಿಲ್ಲ!
ಕೆಲಸದವಳ ಮೇಲೆ ಸಿಟ್ಟಾಗುತ್ತಿಲ್ಲ!
ಅವಳಿಲ್ಲದವರಿಗೆ ಇರುವ ನಲ್ಲ!

ಕುಳಿತು ಕುಳಿತು ಸಾಕಾಯಿತು,
ಮಲಗಿ ಮಲಗಿ ಬೋರಾಯಿತು.
ಅಡುಗೆ ಒಲ್ಲದ ಲಲನೆಯರೂ ಹಿಡಿದರು,
"ಮಾಡು ಇಲ್ಲವೇ ಮಡಿ" ಮಂತ್ರ!

ಜಗವನೆಲ್ಲ ಕಾಯವ ದೈವವೂ ಒಂದೇ,
ಎಲ್ಲರನು ಕಾಡುವ ಭಯವೂ ಒಂದೇ!
ಎಲ್ಲರ ಕಾತುರದ ನಿರೀಕ್ಷೆಯೂ ಒಂದೇ,
ಮುಗಿವುದೆಂದು ಲಾಕ್ಡೌನ್‌ ಎನ್ನುವುದೊಂದೇ!

Monday, April 13, 2020

ನಿಮಗೊಂದು ಸಲಾಮ್!


ತಾ ಸಾವೆದು ಗಂಧವೀವ,
ಸಿರಿಗಂಧದ ಕೊರಡು ನೀವು.

ಮನೆ ಮಠಗಳ ಮರೆತುಬಿಟ್ಟು,
ಸತಿ ಸುತರನು ದೂರವಿಟ್ಟು,
ಸೌಖ್ಯವನ್ನೇ ಪಣಕೆ ಇಟ್ಟು,
ನಿಸ್ವಾರ್ಥದ ಸೇವೆ ಕೊಟ್ಟೆ ವೈದ್ಯನಾರಾಯಣ!

ನಿಮ್ಮ ಹೆಗಲಿಗೆ ಹೆಗಲ ಕೊಟ್ಟ,
ಇಚ್ಛೆಗಳ ಅದುಮಿ ಇಟ್ಟ,
ರೋಗಿಗಳಿಗೆ ಅಭಯವಿತ್ತ,
ಸಿಬ್ಬಂದಿಯ ಸೇವೆ, ಚಿತ್ತ, ದೈವಸಹಾಯವು!

ಬಿಸಿಲಿನಲ್ಲಿ ತಿರುಗಿ ತಿರುಗಿ,
ಅಲೆಮಾರಿಗಳ ಹಿಂದಕಟ್ಟಿ,
ಮಾತೆ ಮಕ್ಕಳ ಕಾಪುವಂತೆ
ಎಲ್ಲರನೂ ಕಾಯುತಿರುವ ಪ್ರಾಣ ರಕ್ಷಕರು!

ಬೀದಿ ಹೊಲಸ ಗುಡಿಸಿಕೊಂಡು,
ನಮ್ಮ ಕಸವ ತುಂಬಿಕೊಂಡು,
ನಿಮ್ಮ ಸ್ವಾಸ್ಥ್ಯ ಕಾಯ್ದುಕೊಂಡು,
ಸೇವೆ ಮಾಡುತಿರುವ ನೀವೇ ನಿಜಕೂ ಮಾನ್ಯರು!

ರುಚಿ ಶುಚಿಯ ಪಾಕವಿಳಿಸಿ,
ಹೊಟ್ಟೆಗಿಲ್ಲದವರ ಹುಡುಕಿ,
ಹಸಿದ, ಕುಸಿದ ಪ್ರಾಣಗಳಿಗೆ,
ಅನ್ನಭಾಗ್ಯ ನೀಡುತಿರುವ ನೀವೇ ಧನ್ಯರು!

ನಿಮ್ಮ ಮಹಿಮೆ, ನಿಮ್ಮ ದುಡಿಮೆ,
ಎಷ್ಟು ಹೇಳಿದರೂ ಕಡಿಮೆ.
ನಮಗಿತ್ತಿರಿ ನೀವು ಮುಲಾಮ್‌,
ನಿಮಗೆಲ್ಲರಿಗೆ ನಮ್ಮ ಸಲಾಮ್!

Monday, April 6, 2020

ಹೊಸ ನಸುಕು















ಕೊರೋನಾ ನಿನ್ನ ಕರುಣೆ ಅಪಾರ,
ಮನುಜನ ಒಳಿತಿಗೆ ಇಟ್ಟೆ ಶ್ರೀಕಾರ!

ಪತಿಪತ್ನಿಯರ, ಪಿತಸುತರ,
ನಡುವೆ ಇತ್ತು ಅವಾಂತರ.
ಸಂಬಂಧಗಳ ಬೆಸೆಯಲು,
ಕೊಟ್ಟೆ ಹೊಸದೊಂದು ಟಿಸಿಲು!

ವಿಷಭರಿತ ಭೂಜಲ ವಾಯುಗಳು,
ಮತ್ತೊಮ್ಮೆ ಪರಿಶುದ್ಧವಾದುವಲ್ಲ!
ಪ್ರಾಣಿ, ಪಕ್ಷಿಗಳು ಆನಂದದಿಂದ,
ವಿಹರಿಸುವ ಭಾಗ್ಯ ತಂದೆಯಲ್ಲ!

ಮಾನವತೆಯೇ ಕಾಣದ ಕಣ್ಗಳಿಗೆ,
ನಿಲ್ಲದೇ ಓಡುತ್ತಿದ್ದ ಕಾಲ್ಗಳಿಗೆ,
ದುರಾಸೆಯೇ ತುಂಬಿದ್ದ ಮನಗಳಿಗೆ,
ಬದುಕಿನ ನಿಜಭಾಷ್ಯ ತಿಳಿಸಿದೆಯಲ್ಲ!

ನೋಟುಗಳು ಪ್ರಾಣಗಳ ಉಳಿಸುತ್ತಿಲ್ಲ,
ಅಧಿಕಾರದ ಹಮ್ಮು ಉಪಯೋಗಕ್ಕಿಲ್ಲ.
ಹಣದಿಂದಲೇ ಎಲ್ಲ ಎಂದವರನ್ನೂ,
ಹಣತೆ ಹಚ್ಚುವ ಹಾಗೆ ಮಾಡಿದೆಯಲ್ಲ!

ಮುದುಡಿ ಮಲಗಿದ್ದ ಮಾನವೀಯತೆ,
ಮತ್ತೆ ಚಗುರೊಡೆದು ನಗುತಿದೆ!
ಕಳೆದುಹೋಗಿದ್ದ ಸಂಬಂಧಗಳೆಲ್ಲವೂ,
ದೀಪದ ಬೆಳಕಲ್ಲಿ ಕಾಣಿಸಿಕೊಂಡಿವೆ!

ಬಂತೆಲ್ಲಿಂದ ನಿನಗೆ ಈ ಪರಿಯ ಶಕ್ತಿ?
ಮಾನವರನು ಮಣಿಸುವ ಯುಕ್ತಿ!
ಈ ಬದಲಾವಣೆಗಳು ಕ್ಷಣಿಕವಾಗದಿರಲಿ,
ಹೊಸ ನಸುಕಿಗೆ ಮುನ್ನುಡಿಯಾಗಲಿ!







Thursday, April 2, 2020

ನೀನಾಗುವೆ ಬಲಿ!

ಏಕೆ ನಿನಗೆ ಎಲ್ಲದರ ಗೊಡವೆ?
ಈಗ, ಕೈಕಟ್ಟಿ ಕುಳಿತೆಯಲ್ಲ ಮಗುವೆ!

ಗಗನಚುಂಬಿಗಳ ಕಟ್ಟಿ ನೀ ಬೀಗುತಿದ್ದೆ,
ಹಿಮಪರ್ವತಗಳ ಒಮ್ಮೆ ನೋಡು ಪೆದ್ದೆ.
ಹರಿವ ನದಿಗಳಿಗೆ ಕಟ್ಟಿದೆ ಕಟ್ಟೆ,
ಸುನಾಮಿಯ ನೋಡಿ ಹೆದರಿಬಿಟ್ಟೆ!

ಲೋಹದಕ್ಕಿಗಳ ನೀ ಹಾರಿಬಿಟ್ಟೆ,
ಆಗಸದಲಿ ಸಂಚರಿಸುವುದ ಕಲಿತುಬಿಟ್ಟೆ.
ಚಂದ್ರ, ಮಂಗಳಗಳ ತಲುಪಿಬಿಟ್ಟೆ!
ವ್ಯೋಮದಂಗಳದಲಿ ಅದು ಪುಟ್ಟ ಹೆಜ್ಜೆ!

ಹುಲಿ, ಸಿಂಹ, ಆನೆಗಳ ಪಳಗಿಸಿಟ್ಟೆ,
ಕಾಣದ ಕೀಟಗಳ ಕಂಡು ಓಟ ಕಿತ್ತೆ!
ನಿಸರ್ಗವ ಮನಬಂದಂತೆ ಬಳಸಿಬಿಟ್ಟು,
ಬುಡಕೆ ಬಂದರೂ ನೀನು ಬಿಡೆಯ ಪಟ್ಟು?

ಭೂರಮೆಯ ನೀನು ಬರಡಾಗಿಸಿದೆ,
ಗಂಗಾ ಮಾತೆಗೆ ವಿಷವನಿತ್ತೆ,
ಅನಿಲ ದೇವನ ಧೂಮವಾಗಿಸಿದೆ,
ಮಾಡಲು ಇದೆ ಇನ್ನೇನು ಬಾಕಿ?

ನೀ ಪಡೆದು ವರವ, ನೀನಿತ್ತೆ ಜ್ವರವ.
ಪ್ರಕೃತಿ ಮಾತೆ ಸರ್ವಶಕ್ತಳು ತಾನು,
ತನ್ನ ರೋಗವ ಪರಿಹರಿಸಿಕೊಳ್ಳಲು,
ನಿನ್ನ ನಾಶವ ನೆನೆದು ನಿಧಾನಿಸುತಿಹಳು!

ಇನ್ನಾದರೂ ಕಲಿ, ಇನ್ನಾದರೂ ಕಲಿ,
ನಿಸರ್ಗದ ಎದುರಲಿ ನೀನಿನ್ನೂ ಇಲಿ!
ನಿಸರ್ಗ ಮಾತೆಯ ವರವ ಕೇಳು, ಆಕೆ,
ಒಲಿದರೆ ಬಾಳು, ಮುನಿದರೆ ಹಾಳು!

Thursday, March 26, 2020

ಏನು ಮಾಡ್ಲಿ ದೇವ್ರೇ

ಕರೋನಾ ಕರೋನಾ ಕರೋನಾ,
ಹೇಗೆ ಕಳೆಯಲಿ ನಾ ಸಮಯಾನಾ!

ಹೊರಗೆ ಹೋದರೆ ಪೋಲೀಸ್‌ ಕಾಟ,
ಮನೇಲೇ ಕುಳಿತರೆ ಹೆಂಡತಿ ಪಾಠ.
ವಾಟ್ಸಾಪ್‌ ನೋಡಿದ್ರೆ ಜ್ವರ ಬರುತ್ತೆ,
ಟಿವಿ ನೋಡಿದ್ರೆ ಹೆದ್ರಿಕೆ ಆಗುತ್ತೆ!

ಕೆಮ್ಮು ಬಂದರೆ ಭಯ ಆಗುತ್ತೆ,
ಸೀನು ಬಂದರೆ ಪ್ರಾಣ ಹೋಗುತ್ತೆ.
ಗುಡಿಯಲಿ ಕೂತು ಬೇಡೋಣಾಂದ್ರೆ,
ಅದಕ್ಕೂ ಇದೆಯಲ್ಲ ತೊಂದ್ರೆ!

ಗೆಳೆಯರು ಮಕ್ಕಳು ಮೊಮ್ಮಕ್ಳೆಲ್ಲ,
ವಿಡಿಯೋದಲ್ಲೇ ಹಾಯ್‌ ಬಾಯೆಲ್ಲ .
ಮುಂಜಾನೆ ಪಾರ್ಕಲಿ ಸುತ್ತಾಟವಿಲ್ಲ,
ಹಾಟ್‌ ಕಾಫಿಯಲಿ ಮೀಟಿಂಗಿಲ್ಲ.

ಪುಸ್ತಕ ಹಿಡಿದರೂ ಓದೋಕಾಗಲ್ಲ,
ಏನೋ ಯೋಚನೆ ಬರುತ್ತಲ್ಲ.
ಮನಸ್ಸಿಗಂತೂ ನೆಮ್ಮದಿಯಿಲ್ಲ,
ಸುಮ್ನೆ ಕೂರೋಕೆ ಆಗ್ತಾ ಇಲ್ಲ.

ಹಾಲು ಪ್ಯಾಕೆಟ್‌ ಮೇಲೇನಿರುತ್ತೋ,
ನ್ಯೂಸ್‌ ಪೇಪರಿಗೆ ಸೋಂಕಾಗಿರುತ್ತೋ,
ತರಕಾರಿ ತರೋದೆ ಬೇಡ ಅನ್ಸುತ್ತೆ,
ತಿಂಗಳ ದಿನಸಿ ಸಾಕಾಗುತ್ತೆ.

ಚೀನಾಲಿ ಯಾರೋ ಏನೋ ತಿಂದ್ರೆ,
ಪ್ರಪಂಚಕೆಲ್ಲ ದೊಡ್ಡ ತೊಂದ್ರೆ!
ಕೈ ತೊಳೆದೂ ತೊಳೆದೂ ಸುಸ್ತಾಯ್ತು,
ಟ್ಯಾಂಕಿನ ನೀರೆಲ್ಲ ಖರ್ಚಾಯ್ತು!

ಮನೇಲೆ ಸ್ವಲ್ಪ ವಾಕಿಂಗ್‌ ಮಾಡ್ದೆ.
ಅಲ್ಲೇ ಸ್ವಲ್ಪ ಜಾಗಿಂಗ್‌ ಮಾಡ್ದೆ.
ಏನು ಮಾಡ್ಲಿ ದೇವ್ರೆ, ಅಯ್ಯೋ!
ಇನ್ನೇನು ಮಾಡ್ಲಿ ದೇವ್ರೆ!

Tuesday, March 24, 2020

ಕೊರೋನಾ ಪುರಾಣ

ಕಣ್ಣಿಗೆ ಕಾಣದ ಕೊರೋನಾ,
ಜಗವನು ಕಾಡಿದ ಪುರಾಣ.

ಹುಟ್ಟಿತು, ಎದ್ದಿತು, ವುಹಾನಿನಲ್ಲಿ,
ಬೆಳೆಸಿತು ಪಯಣ ವಿಮಾನದಲ್ಲಿ.
ಕೆಲವೇ ದಿನಗಳ ವಾಸದಲಿ,
ಹಾಹಾಕಾರವು ಜಗದಲ್ಲಿ.

ಬೆನ್ನನ್ನು ಹತ್ತಿತು ಬೇತಾಳ,
ತಪ್ಪಿತು ಎಲ್ಲರ ಬದುಕಿನ ತಾಳ.
ಹೆದರಿದೆ, ಬೆದರಿದೆ, ಜಗವೆಲ್ಲ,
ಬೇತಾಳನ ಇಳಿಸಲು ತಿಳಿವಿಲ್ಲ.

ಕೈಗಳ ಕುಲುಕಿಗೆ, ಮೈಗಳ ಸನಿಹಕೆ,
ಎಂದೂ ಇಲ್ಲದ ಬಿಗುಮಾನ.
ಕೈಗಳ ಜೋಡಿಸಿ, ನಸುನಗೆ ಸೂಸಿ,
ನಮಿಸಿದರಾಯಿತು ಸಮ್ಮಾನ.

ಶಿಸ್ತು ಮೀರಿದರೆ ಶಿಕ್ಷೆ ತಪ್ಪದು,
ಅತ್ತುಕರೆದರೆ ಏನೂ ಆಗದು!
ಕರುಣೆಯೇ ಇಲ್ಲದ ಕೊರೋನಾ,
ಹೀರಿದೆ ಎಲ್ಲ ಹಿರಿಯರ ಪ್ರಾಣ.

ಹೆಣಗಳು ಉರುಳಿವೆ ಸಾವಿರಗಳಲಿ,
ಮಣ್ಣು ಮಾಡಲು ಎಡೆಯೆಲ್ಲಿ?
ಇಲ್ಲವೇ ಇಲ್ಲ ಕಣ್ಣೀರಿಗೆ ಅಂಕೆ,
ಒರೆಸುವ ಬೆರಳಿಗೂ ಸೋಂಕಿನ ಶಂಕೆ!

ಜಗದ ಪುಪ್ಪಸ ಪುಸ್ಸಾಗಿಸಿತು,
ವೈದ್ಯಕುಲಕೇ ಸವಾಲು ಒಡ್ಡಿತು,
ಆರ್ಥಿಕತೆಯ ಸೊಂಟವ ಮುರಿಯಿತು,
ಬಡಬಗ್ಗರ ಹೊಟ್ಟೆಗೆ ಹೊಡೆಯಿತು!

ಬೀದಿಗೆ ಇಳಿಯಲು ಹೆದರಿದರೆಲ್ಲ,
ಹೆದರಿ ಮನೆಯಲಿ ಅಡಗಿದರಲ್ಲ,
ಯುಗಾದಿಗಿಲ್ಲ ಬೇವು, ಬೆಲ್ಲ!
ಕರೋನಾ ಇದುರು ಯಾರೂ ಇಲ್ಲ!

ರಕ್ತಬೀಜಾಸುರನ ಸಂತತಿಯಂತೆ,
ಹರಡಿದೆ ಜಗದಲಿ ಇದರಾ ಸಂತೆ.
ಕಾದಿಹೆ ಕಾಳಿ ಬರುವಳು ಎಂದೇ,
ಕೊರೋನಾ ಛಿದ್ರವಾಗಲಿ ಇಂದೇ!