Thursday, April 20, 2023

ನಮ್ಮ ಪ್ರೀತಿಯ ಭಾರತ

ಭಾರತ ನಮ್ಮಯ ಪ್ರೀತಿಯ ಮಾತೆ,

ತೆರೆಯವ ದೇಶಬಕುತಿಯ ಖಾತೆ!

ಹಾರಿಸು ಮೇಲೆ ತ್ರಿವರ್ಣ ಪತಾಕೆ,

ತೋರಿಸು ಪ್ರೀತಿಯ ಶಂಕೆಯು ಏಕೆ!


ಕೋರದೆ ಕೊಟ್ಟಿದೆ ಉತ್ತಮ ಸಂಸ್ಕಾರ,

ತೋರುತ ಬೆಳಕಿನ ಅಧ್ಯಾತ್ಮದಾಕರ!

ಹಾರುವ ಮೇಲೆ ಸುಂದರ ಅವಕಾಶ,

ಬೀರುವ ಶಾಂತಿ ಸ್ನೇಹದ ಸಂದೇಶ!


ಭಿನ್ನತೆ ತೊರೆದು ಹಾಕುವ ನಡಿಗೆ,

ಉನ್ನತ ಗುರಿಯನು ಮುಟ್ಟುವ ಕಡೆಗೆ!

ಅನ್ನದ ಕೊರತೆ ಇಲ್ಲದೆ ಹೋಗಲಿ,

ಚಿನ್ನದ ಆಸೆ ಮರತೇ ಹೋಗಲಿ!


ಬಲಿದಾನಗಳ ಮರೆಯದೆ ನಡೆಯಿರಿ,

ಕಲಿಗಳ ನೆನೆಯುತ ಸ್ಫೂರ್ತಿಯ ಪಡೆಯಿರಿ!

ಕಲೆಗಳ ಬೆಳೆಸುತ ಆನಂದ ಹೊಂದಿರಿ,

ಎಲೆಗಳ ಹಾಗೆ ಜೊತೆಯಲಿ ಬದುಕಿರಿ!


ಅಮೃತೋತ್ಸವದ ಸುಂದರ ಘಳಿಗೆ,

ಅಮಿತೋತ್ಸಾಹದ ಬಿರುನಡಿಗೆ!

ಗಮನದಿ ಹಾಕುವ ಪ್ರಗತಿಯ ನಡಿಗೆ,

ಕ್ಷಮತೆಯ ಸದೃಢ ಶಾಂತಿಯ ಕಡೆಗೆ!



ಅರಿಷಡ್ವರ್ಗ(ಹಾಯ್ಕುಗಳು)

*ಕಾಮ*

ಕಾಮಾತುರದಿ
ಸಿಗ್ಗಿಲ್ಲ ಭಯವಿಲ್ಲ
ಮನಕೆ ಮೌಢ್ಯ


*ಕ್ರೋಧ*

ಕ್ರೋಧ ಮೊದಲು
ಸುಡುವುದು ತನ್ನನ್ನು
ಪರಮ ಸತ್ಯ


*ಲೋಭ*

ದುರಾಸೆ ಇದು
ದೂರ ಮಾಡುವುದಲ್ಲ
ತನ್ನವರನೇ


*ಮೋಹ*

ಮೋಹ ರಾಜಸ
ನಿರ್ಮೋಹ ಸಾತ್ವಿಕವು
ಪ್ರೀತಿ ಶಾಶ್ವತ


*ಮದ*

ಮದವೇರಿದ
ಮದ್ದಾನೆಗೆ ಖಚಿತ
ಅಂತಿಮ ಕಾಲ


*ಮಾತ್ಸರ್ಯ*

ಒಳಗೊಳಗೇ
ಕೊರೆವ ಕೆಟ್ಟ ಕೀಟ
ನಾಶ ಖಂಡಿತ


ಸಬಲೆ

ಭಲೇ ಭಲೇ ಓ ಸಬಲೇ,

ಏನೆಲ್ಲಾ ನೀ ಸಾಧಿಸಬಲ್ಲೆ!


ಕತ್ತಲ ಮನೆಯನು ಬೆಳಗಿಸಬಲ್ಲೆ,

ಚಿತ್ತದ ಗೊಂದಲ ನೀಗಿಸಬಲ್ಲೆ,

ತುತ್ತಲಿ ಪ್ರೀತಿಯ ತುಂಬಿಸಬಲ್ಲೆ,

ಬತ್ತದ ಒಲುಮೆಯ ನೀಡುವೆಯಲ್ಲೆ!


ಸಾಲುಮರಗಳ ನೆರಳನು ನೀಡುವೆ,

ಉದ್ಯಮಿಯಾಗಿ ಬದುಕನು ಕೊಡುವೆ,

ಬಾಹ್ಯಾಕಾಶಕೆ ಹಾರುತ ಹೋಗುವೆ,

ಚುಕ್ಕಿಯ ಮುಟ್ಟುವ ಸಾಹಸ ಮಾಡುವೆ!


ರೋಗಿಯ ಸಲಹುವ ಪ್ರೀತಿಯ ಸೋದರಿ,

ಕ್ಷಮೆಯಲಿ ನೀ ಭೂತಾಯಿಯ ಮಾದರಿ,

ಇನಿಯನು ಬಯಸುವ ಪ್ರೇಮದ ವಲ್ಲರಿ,

ಮಾತಿಗೆ ನಿಂತರೆ ನಿಲ್ಲದ ವಾಗ್ಝರಿ!


ದೇಶವ ಕಾಯಲು ಬಂದೂಕು ಹಿಡಿಯುವೆ,

ರೋಷವು ಬಂದರೆ ಇದಿರಾರಿಲ್ಲವೆ,

ಕೋಶವ ತುಂಬುತ ದೇಶವ ಸಲಹುವೆ,

ಎಲ್ಲರೂ ಮೆಚ್ಚುವ ರನ್ನದ ಒಡವೆ!



ಪಾವನ ಪುನೀತ

    (ಛಂದೋಬದ್ಧ *ಸಾಂಗತ್ಯ* ಪ್ರಕಾರದ ರಚನೆ)


ಪಾವನ ಪುನೀತ ಮನದವ ಗೆಳೆಯನೆ

ದೇವನ ಮನೆಗೆ ನಡೆದೆ

ಜೀವನ ಯಾನವ ಬೇಗನೆ ಮುಗಿಸುತ

ಸಾವಿನ ಬಾಗಿಲ ತೆರೆದೆ


ರಸಿಕರ ಮನದಲಿ ತಾರೆಯ ತೆರದಲಿ

ಹಸಿರಿನ ನೆನಪಲಿ ಉಳಿದೆ

ಹಸಿವನು ಅಳಿಸಿದೆ ವಿದ್ಯೆಯ ನೀಡಿದೆ

ಉಸಿರಿಗೆ ಜೀವವನಿತ್ತೆ


ಕಾಯಕ ಪ್ರೇಮದ ಕರುಣೆಯ ಹೃದಯದ

ತಾಯಿಯ ಕರುಳನು ಪಡೆದೆ

ನಾಯಕ ನಟನೆಯ ಚಿತ್ರದೆ ಮಾಡುತ

ನಾಯಕ ಜನರಿಗೆ ಆದೆ


ದಾನಕೆ ಸೇವೆಗೆ ಮಿತಿಯೇ ಇಲ್ಲದೆ

ದೀನರ ದಲಿತರ ಪೊರೆದೆ

ಜೇನಿನ ಮಾತಲಿ ಉತ್ತಮ ನಡೆಯಲಿ

ಗಾನವ ಪಾಡುತ ಮೆರೆದೆ


ಮುತ್ತಿನ ರಾಜನ ಮುದ್ದಿನ ಕುವರನೆ

ಮುತ್ತಿನ ಮಣಿಯೊಲು ಹೊಳೆವೆ

ಕತ್ತಲು ತುಂಬಿದ ಮನಗಳ ಬೆಳಗುತ

ಹತ್ತಿರ ಎದೆಯಲೆ ಇರುವೆ!



ಹೊಸ ನಕ್ಷತ್ರ

ಉದಯವಾಯಿತು ಮಿನುಗು ಚುಕ್ಕಿಯು

ಹೃದಯದಾಗಸ ಬೆಳಗಿತು

ಕದವ ತಟ್ಟುತ ಎಲ್ಲ ವೈಶ್ಯರ

ಮುದದೆ ಕೂಗಿ ಕರೆಯಿತು

 

ಆಧ್ಯಾತ್ಮವು ಬಳಿಗೆ ಸೆಳೆಯಿತು

ಎಳೆಯ ಚಿಗುರುವ ವಯಸಲೇ

ಶಾರದೆಯ ಪ್ರಿಯಪುತ್ರನಾದೆ

ಬೆಳೆದು ಹೆಮ್ಮರವಾಗುತ

 

ಬಂದೆ ಸಚ್ಚಿದಾನಂದ ಗುರುವೆ

ನಮಗೆ ದಾರಿ ತೋರಲು

ನಿನ್ನ ಹಿಂದೆ ನಾವು ನಡೆವೆವು

ನಮ್ಮ ಬಾಳನು ಬೆಳಗಲು

 

ಗಂಗಾ ನದಿಯ ತೀರದಲ್ಲಿ

ಹೊಸತು ಜನುಮವ ಪಡೆದೆ ನೀ

ನಮ್ಮ ಪೀಠವ ಬೆಳಗಲೆಂದೇ

ನಮ್ಮ ನಡುವಿಗೆ ಬಂದೆ ನೀ

 

ಜನರ ಬಾಳಲಿ ಪ್ರೀತಿ ಪ್ರೇಮದ

ಬೀಜ ಬಿತ್ತಲು ಬಂದೆ ನೀ

ದೀನ ದಲಿತರ ಬಾಳನಲ್ಲಿ

ಬೆಳಕ ಕಿರಣವ ತಂದೆ ನೀ

 

ವೀಣೆ ನಾದದ ಮಾಧುರ್ಯದಲ್ಲಿ

ತೇಲಿ ಮುಳುಗಿಸು ನಮ್ಮನು

ವೇದಜ್ಞಾನದ ವೇದಾಂತಿ ನೀನು

ಅರಿವ ನೀಡಿ ಹರಸೆಮ್ಮನು

 

ವೈಶ್ಯಕುಲದ ಪೀಠಾಧಿಪತಿಯಾಗುತ್ತಿರುವ ಶ್ರೀ ಸಚ್ಚಿದಾಂದ ಸ್ವಾಮಿ ಸರಸ್ವತಿಯವರ ಬಗ್ಗೆ ಕವನರೂಪದ ಭಕ್ತಿ ಸಮರ್ಪಣೆ!



ಹಳ್ಳಿಯ ಸೊಗಡು

ಕಣ್ಣನು ತಣಿಸುವ ನೋಟದ ಅಂದ,

ಹಸಿಮಣ್ಣಿನ ವಾಸನೆ ಮೂಗಿಗೆ ಚೆಂದ!

ದೂರದ ಬೆಟ್ಟ ಗುಡ್ಡದ ನೋಟಗಳ,

ನೀಡಬಲ್ಲವೇ ಕಾಗದದ ನೋಟುಗಳು!


ಹಳ್ಳಿಯ ಸ್ನೇಹ, ಹಳ್ಳಿಯ ಪ್ರೇಮ,

ಮರಬಳ್ಳಿಗಳ ಸ್ನೇಹದ ಧಾಮ!

ಪರಿಶುದ್ಧ ಗಾಳಿ, ಪರಿಶುದ್ಧ ಪ್ರೇಮ,

ಹಸಿರಿನ ಉಸಿರಿನ ಸ್ವರ್ಗದಾರಾಮ!


ಜುಳು ಜುಳು ಹರಿಯುವ ನೀರಿನ ತೊರೆಗಳು,

ಚಿಲಿಪಿಲಿಗುಟ್ಟುತ ಹಾರುವ ಹಕ್ಕಿಗಳು!

ಹುಲ್ಲನು ಮೇಯುವ ದನಕುರಿಮರಿಗಳು,

ಚೆಂದದ ಹೂಗಳಲಿ ಬಣ್ಣದ ಚಿಟ್ಟೆಗಳು!


ಇಂತಹ ಹಳ್ಳಿಯು ಬೇಡವೆ ಕಂದ?

ಯಾಂತ್ರಿಕ ಪಟ್ಟಣದಲ್ಲೇನಿದೆ ಚೆಂದ?

ಕೂಲಿಯ ಬದುಕಲಿ ಏನಿದೆ ನೆಮ್ಮದಿ?

ಮೇಟಿಯ ಆಟವ ಆಡುನೀ ಚೆಂದದಿ!


ಬೆವರನು ಸುರಿಸು, ಹಸಿರನು ಬೆಳೆಸು,

ಹಸಿವಿನ ಕೂಗನು ನೀ ಅಳಿಸು!

ಅನ್ನವ ನೀಡುವ ಯೋಗದ ಭಾಗ್ಯ,

ಕೈಬಿಡದಿರು ಇಂತಹ ಸೌಭಾಗ್ಯ!



ಜಗದೊಡೆಯನಿಗೆ ನಮನ

ವಿಶ್ವವ ವ್ಯಾಪಿಸಿರುವ ವಿಶ್ವೇಶ್ವರನೇ,

ಮೂಜಗವು ವಂದಿಸುವ ಮುಕ್ಕಣ್ಣನೇ,

ಜಗದಾತ್ಮ ನೀನು, ಜಗದೀಶ ನೀನು,

ನಮಿಸುವೆ ಪರಮಾತ್ಮ, ಪರಮೇಶ್ವರ!


ಜಟಾಜೂಟಧಾರಿ, ನಾಗಾಭರಣ,

ಶಿರದಲ್ಲಿ ಚಂದ್ರ, ಎದೆಯಲ್ಲಿ ಸೂರ್ಯ,

ಬುವಿಗೆಲ್ಲ ಬೆಳಕೀವ ಬಸವೇಶ್ವರನೇ,

ಜಗಜ್ಯೋತಿ ನೀನು, ವಿಷಕಂಠನೇ!


ಸ್ಥಿರಚಿತ್ತ ನೀನು, ಚಂಚಲನು ನಾನು,

ತಿಳಿಗೊಳಿಸು, ಸ್ಥಿರಗೊಳಿಸು,

ಮನವನ್ನು ಮುದಗೊಳಿಸು,

ಭಸ್ಮಾಂಗಧಾರಿ, ಫಣಿಭೂಷಣ!