Saturday, June 21, 2025

ಸೋನೆ

ಸುರಿಯುತಿದೆ ಸೋನೆ ಮುಂಗಾರು ಮಳೆಯು

ಹರಿವ ನದಿ ತುಂಬಿ ಬಂದು

ಭರದಲ್ಲಿ ಸಾಗುತಿದೆ ಸಾಗರದೆಡೆ

ಬೆರೆವ ಭರದಲ್ಲಿ ಹರಿದು


ಜೀಮೂತ ಜೀಕಿ ಸುರಿಸುತಿದೆ ಮಳೆಯ

ಆಮೋದ ತಾಕಿ ಧರೆಯ

ಕಾಮವೋ ಮುಗ್ಧ ಪ್ರೇಮವೋ ಕಾಣೆ

ಸೋಮರಸದಂಥ ಗೆಳೆಯ


ಹಸಿರುಕ್ಕಿ ನಲಿವ ಸಂತಸವು ಧರೆಗೆ

ಕಸವರದ ಬಿಸಿಲು ತಾನ

ಹೊಸೆಯುತಿದೆ ಗಾನ ಬೆಸೆಯುತ್ತ ತಾಳ

ಹೊಸತಾದ ಜೀವ ಗಾನ


ಬಿಸಿಬಿಸಿಯ ತಿನಿಸ ಬಯಸುತಿದೆ ಮನವು

ಬಿಸಿ ಪೇಯದೊಡನೆ ಜೊತೆಗೆ

ಮುಸಿನಗುತ ಮಡದಿ ತಿನಿಸುಗಳ ತಂದು

ಪಿಸುಮಾತ ನುಡಿಯೆ ಒಸಗೆ


Saturday, June 14, 2025

ಮಧ್ಯಮಾವರ್ತ

ಪ್ರಕಾರ: ಮಧ್ಯಮಾವರ್ತ

೫ ೩ ೫ ೩
೫ ೩ ೩
೫ ೩ ೫ ೩
೫ ೩ ೩

ಆದಿಪ್ರಾಸ ಕಡ್ಡಾಯ
ಸಾಲುಗಳ ಮಧ್ಯದಲ್ಲಿ ಸ್ವರಾಕ್ಷರ ಬರುವಂತಿಲ್ಲ.
೨ ಮತ್ತು ೪ ಸಾಲುಗಳಲ್ಲಿ ಅಂತ್ಯಪ್ರಾಸವಿರಬೇಕು
  
ವಿಷಯ: ಮುಂಗಾರು

ಶೀರ್ಷಿಕೆ: ಸೋನೆ

ಸುರಿಯುತಿದೆ ಸೋನೆ ಮುಂಗಾರು ಮಳೆಯು
ಹರಿವ ನದಿ ತುಂಬಿ ಬಂದು
ಭರದಲ್ಲಿ ಸಾಗುತಿದೆ ಸಾಗರದೆಡೆ
ಬೆರೆವ ಭರದಲ್ಲಿ ಹರಿದು

ಜೀಮೂತ ಜೀಕಿ ಸುರಿಸುತಿದೆ ಮಳೆಯ
ಆಮೋದ ತಾಕಿ ಧರೆಯ
ಕಾಮವೋ ಮುಗ್ಧ ಪ್ರೇಮವೋ ಕಾಣೆ
ಸೋಮರಸದಂಥ ಗೆಳೆಯ

ಹಸಿರುಕ್ಕಿ ನಲಿವ ಸಂತಸವು ಧರೆಗೆ
ಕಸವರದ ಬಿಸಿಲು ತಾನ
ಹೊಸೆಯುತಿದೆ ಗಾನ ಬೆಸೆಯುತ್ತ ತಾಳ
ಹೊಸತಾದ ಜೀವ ಗಾನ

ಬಿಸಿಬಿಸಿಯ ತಿನಿಸ ಬಯಸುತಿದೆ ಮನವು
ಬಿಸಿ ಪೇಯದೊಡನೆ ಜೊತೆಗೆ
ಮುಸಿನಗುತ ಮಡದಿ ತಿನಿಸುಗಳ ತಂದು
ಪಿಸುಮಾತ ನುಡಿಯೆ ಒಸಗೆ

ತ್ರಿಪದಿಗಳು

ಪ್ರಕಾರ: ಅಂಶ ತ್ರಿಪದಿ

ರೂಪ: ಒಗಟು

ಮಾವಿನ ತಳಿರಿದೆ ಬೇವಿನ ಎಸಳಿದೆ

ಮಾವಿನ ಕಾಯಿ ಬೆಲ್ಲದ | ಸೊಗಡಿದೆ

ಯಾವುದು ಹೇಳು ಈ ಹಬ್ಬ? ||


ಪ್ರಕಾರ: ಮಾತ್ರಾಗಣ ತ್ರಿಪದಿ

ರೂಪ: ಒಗಟು

ನೀರಲ್ಲಿ ಹುಟ್ಟುವುದು ನೀರಲ್ಲಿ ಬೆಳೆಯುವುದು

ನೀರಲ್ಲಿ ಐಕ್ಯವಾಗುವುದು | ತಿಳಿದಿರಲು 

ಯಾರಲ್ಲಿ ಹೇಳಿ ಉತ್ತರವ? ||



ಪ್ರಕಾರ: ಮಾತ್ರಾಗಣ_ತ್ರಿಪದಿ
ದತ್ತ ಪದ: ಕಾಮನಬಿಲ್ಲು

ಆಡುತಿಹ ರವಿಯಿಂದು ಮೋಡಗಳ ಹನಿಗಳಲಿ
ಮೂಡಿಹುದು ಅಲ್ಲಿ ಕಾಮನಾ | ಬಿಲ್ಲೊಂದು
ನೋಡುತಿಹ ಮುದದಿ ಕೃಷ್ಣಕವಿ ||


ಪ್ರಕಾರ : ವಿಚಿತ್ರ ತ್ರಿಪದಿ (ಅಂಶಗಣ)
ವಿಷಯ : ಸಿಂದೂರ
 
ಸಿಂದೂರ ಘರ್ಜಿಸಿತು ಬಂದೂಕ ಸಿಡಿಸಿತು 
ಅಂಧರಾ ಗೋಳು ರಕ್ತದಾ | ಮಡುವಾಯ್ತು 
ತಂದಿತು ಕರ್ಮಗಳ ಫಸಲು ||

ನಿರೀಕ್ಷೆ

 ಕಾಯುತಿಹಳು ಚೆಲುವ ಚೆನ್ನೆ,

ಹೂವ ಹಿಡಿದು ನಲ್ಲಗೆ.

ತನ್ನ ಇನಿಯನ ನೆನದು ಕೆನ್ನೆ,

ಕೆಂಪು ತಳೆಯಿತು ಮೆಲ್ಲಗೆ.


ಸಂಜೆ ಕೆಂಪಲಿ ಕೆನ್ನೆ ಕೆಂಪು,

ಮಿಳಿತವಾಯಿತು ಸುಮ್ಮನೆ.

ದಾರಿ ನೋಡುವ ಪೋರಿ ನಕ್ಕಳು,

ನೆನೆದು ಇನಿಯನ ವರ್ತನೆ.


ಬಣ್ಣ ಬಣ್ಣದ ದಿರುಸು ತೊಟ್ಟಳು,

ಕಂಡರೆದೆಯಲಿ ಓಕುಳಿ.

ಕಣ್ಗಳಿಂದಲೆ ಕಳಿಸಿಬಿಟ್ಟಳೆ?

ಮನವು ಮೆಚ್ಚುವ ಬಳುವಳಿ.


ಕುಸುಮ ಗುಚ್ಛವ ಹಿಡಿದು ಕೈಯಲಿ,

ಎದೆಯ ಹೂಗಳ ಜೊತೆಯಲಿ.

ಕಾದು ಕುಳಿತಳು ನಮ್ಮ ಮೈಥಿಲಿ,

ರಾಮ ಬರುವಾ ಪಥದಲಿ.


ಪಾಹಿಮಾಂ ಪರಮೇಶ್ವರ

ನೀಲಕಂಠ ನಿಟಿಲಾಕ್ಷ ಪರಮಶಿವ ಗಿರಿಜೇಶ 

ಫಾಲನೇತ್ರ ನಂಜುಂಡ ಗಣನಾಥ ಸರ್ವೇಶ

ನೀಲಲೋಹಿತ ರುದ್ರ ಮಾರಾರಿ ಭೂತೇಶ

ಕಾಲ ಹತ್ತಿರ ಇರುವೆ ನೀ ನೀಡು ಅವಕಾಶ


ವಿಷಮಾಕ್ಷ ಶಶಿಮೌಳಿ ಅವ್ಯಕ್ತ ಶಿತಿಕಂಠ

ವೃಷಧ್ವಜ ಭಗನೇತ್ರ ಫಾಲಾಕ್ಷ ವಿಷಕಂಠ

ವೃಷಭವಾಹನ ಶರ್ವ ಮೃಡ ರುದ್ರ ಶ್ರೀಕಂಠ

ವಿಷಧರನೆ ಪೂಜಿಸುವೆ ಕಲಿಸು ನೀ ಭವಪಾಠ


ಗಿರಿಧನ್ವ ಗೋಕರ್ಣವಾಸಿ ಹರ ಭೂತಪತಿ

ಪರಮಾತ್ಮ ತ್ರಿಪುರಾರಿ ಕಾಪಾಲಿ ದೇವಿಪತಿ

ಪುರವೈರಿ ಪರಮೇಶ ಈಶ ಕೈಲಾಸಪತಿ

ಕರಮುಗಿವೆ ಪೊಡಮಡುವೆ ನೀಡೆನಗೆ ಸ್ಥಿರಮುಕುತಿ


Tuesday, July 9, 2024

ವಿರಹದ ನೋವು

ಹೃದಯ ವೀಣೆಯ ಮೀಟಿ,

ಮಧುರ ರಾಗವ ನುಡಿಸು!

ಮಿಲನದಾಸೆಯ ನಾಟಿ,

ಎದೆಯ ನೋವನು ಮರೆಸು!


ಮರೆತು ಹೋದೆಯ ನೀನು?

ಜೊತೆಗೆ ಕಳೆದಾ ಸಮಯ!

ಸಾಕ್ಷಿ ಈ ಶಶಿ, ಬಾನು,

ಮಿಡಿವ ನನ್ನಾ ಹೃದಯ!


ಅಣುಕಿಸಿಹ ಶಶಿ  ನನ್ನ,

ತೊಟ್ಟು ತಾರೆಯ ಮಾಲೆ!

ಬಾನು ನಗುತ ಕೇಳಿತೆನ್ನ,

ಬೇಕೆ ಮೇಘದ ಓಲೆ?


ನೀ ನುಡಿದ ಪಿಸುಮಾತು,

ಕಿವಿಯಲೇ ಗುನುಗುಟ್ಟಿದೆ!

ನಿನ ಕಣ್ಣ ಸವಿಮಾತು,

ಎದೆಯಲೇ ಮನೆ ಕಟ್ಟಿದೆ!


ನೀನು ಬರದಿರೆ ಈಗ,

ಮಿಡಿವುದೇ ಈ ಹೃದಯ?

ಬಂತಿದೋ ಬಹಬೇಗ,

ಕೊನೆಯ ಉಸಿರಿನ ಸಮಯ!


Wednesday, April 24, 2024

ಎರಡು ಹನಿ

ಕಾದು ಕಾದು ಕಾಯುತ್ತಿದ್ದ
ಮಳೆಯು ಬಂದೇಬಿಟ್ಟಿತು
ಹೊರಗೆ ಇಣುಕಿ ಹರುಷದಿಂದ
ಮನಸು ಕುಣಿದುಬಿಟ್ಟಿತು

ತಂತಿ ಮೇಲೆ ಇರುವ ಬಟ್ಟೆ
ಬೇಗ ತನ್ನಿ ಅಂದಳು
ಒಣಗಲಿಟ್ಟ ಹಪ್ಪಳಗಳ
ತಾನೆ ಓಡಿ ತಂದಳು

ಓಡಿ ಓಡಿ ಮಹಿಡಿ ಹತ್ತಿ
ಬಟ್ಟೆ ತರಲು ಹೊರಟೆನು
ಮಳೆಯ ಹನಿಯ ತಂಪಿಗೆ
ಮೈಯ ಒಡ್ಡಿ ನಿಂತೆನು

ನೆನೆಯಬೇಡಿ ಮೊದಲ ಮಳೆಯು
ರೋಗ ರುಜಿನ ತರುವುದು
ಕೂಗಿ ಕರೆದಳೆನ್ನ ಮಡದಿ
ಬೇಗ ಮರಳಿ ಬಂದೆನು

ಅಯ್ಯೋ ದೇವ ಎರಡೆ ಹನಿಯು
ಪಲ್ಸ್ ಪೋಲಿಯೊ ಹಾಗೆಯೆ
ಇಳಿದು ಹೋಯ್ತು ಹರುಷವೆಲ್ಲ
ಬಂದ ಹಾಗೆ ಬೇಗನೆ