Showing posts with label ಮಳೆ. Show all posts
Showing posts with label ಮಳೆ. Show all posts

Saturday, June 21, 2025

ಸೋನೆ

ಸುರಿಯುತಿದೆ ಸೋನೆ ಮುಂಗಾರು ಮಳೆಯು

ಹರಿವ ನದಿ ತುಂಬಿ ಬಂದು

ಭರದಲ್ಲಿ ಸಾಗುತಿದೆ ಸಾಗರದೆಡೆ

ಬೆರೆವ ಭರದಲ್ಲಿ ಹರಿದು


ಜೀಮೂತ ಜೀಕಿ ಸುರಿಸುತಿದೆ ಮಳೆಯ

ಆಮೋದ ತಾಕಿ ಧರೆಯ

ಕಾಮವೋ ಮುಗ್ಧ ಪ್ರೇಮವೋ ಕಾಣೆ

ಸೋಮರಸದಂಥ ಗೆಳೆಯ


ಹಸಿರುಕ್ಕಿ ನಲಿವ ಸಂತಸವು ಧರೆಗೆ

ಕಸವರದ ಬಿಸಿಲು ತಾನ

ಹೊಸೆಯುತಿದೆ ಗಾನ ಬೆಸೆಯುತ್ತ ತಾಳ

ಹೊಸತಾದ ಜೀವ ಗಾನ


ಬಿಸಿಬಿಸಿಯ ತಿನಿಸ ಬಯಸುತಿದೆ ಮನವು

ಬಿಸಿ ಪೇಯದೊಡನೆ ಜೊತೆಗೆ

ಮುಸಿನಗುತ ಮಡದಿ ತಿನಿಸುಗಳ ತಂದು

ಪಿಸುಮಾತ ನುಡಿಯೆ ಒಸಗೆ


Wednesday, April 24, 2024

ಎರಡು ಹನಿ

ಕಾದು ಕಾದು ಕಾಯುತ್ತಿದ್ದ
ಮಳೆಯು ಬಂದೇಬಿಟ್ಟಿತು
ಹೊರಗೆ ಇಣುಕಿ ಹರುಷದಿಂದ
ಮನಸು ಕುಣಿದುಬಿಟ್ಟಿತು

ತಂತಿ ಮೇಲೆ ಇರುವ ಬಟ್ಟೆ
ಬೇಗ ತನ್ನಿ ಅಂದಳು
ಒಣಗಲಿಟ್ಟ ಹಪ್ಪಳಗಳ
ತಾನೆ ಓಡಿ ತಂದಳು

ಓಡಿ ಓಡಿ ಮಹಿಡಿ ಹತ್ತಿ
ಬಟ್ಟೆ ತರಲು ಹೊರಟೆನು
ಮಳೆಯ ಹನಿಯ ತಂಪಿಗೆ
ಮೈಯ ಒಡ್ಡಿ ನಿಂತೆನು

ನೆನೆಯಬೇಡಿ ಮೊದಲ ಮಳೆಯು
ರೋಗ ರುಜಿನ ತರುವುದು
ಕೂಗಿ ಕರೆದಳೆನ್ನ ಮಡದಿ
ಬೇಗ ಮರಳಿ ಬಂದೆನು

ಅಯ್ಯೋ ದೇವ ಎರಡೆ ಹನಿಯು
ಪಲ್ಸ್ ಪೋಲಿಯೊ ಹಾಗೆಯೆ
ಇಳಿದು ಹೋಯ್ತು ಹರುಷವೆಲ್ಲ
ಬಂದ ಹಾಗೆ ಬೇಗನೆ

Friday, October 13, 2023

ಹನಿಗವನಗಳು


ಹನಿಗವನ:

ಆರು ಸಾಲಿನ ಕವನ. ೧,೨,೪,೫ ಸಾಲುಗಳಲ್ಲಿ ಒಂದೆರಡು ಪದಗಳಿರಬೇಕು. ೩,೬ ಸಾಲುಗಳಲ್ಲಿ ಎರಡಕ್ಕಿಂತ ಹೆಚ್ಚು ಪದಗಳು ಮತ್ತು ಇವೆರಡರಲ್ಲಿ ಅಂತ್ಯಪ್ರಾಸವಿರಬೇಕು.


೧. ಹೆಣ್ಣು

ಹೆಣ್ಣಲ್ಲ ಅಬಲೆ

ತಾಯಾಕೆ ವಿಮಲೆ

ಜಗಕೆ ಮಡಿಲಿತ್ತ ಸಬಲೆ

ಸಂಕೀರ್ಣ ಈ ಹೆಣ್ಣು

ಅರ್ಥವಾಗದ ಹಣ್ಣು

ಸುಖ ಸಂಸಾರದ ಕಣ್ಣು




೨. ಕನಸು


ಬಣ್ಣಬಣ್ಣದ ಕನಸು
ಕಾಣಲೇನೂ ಶ್ರಮವಿಲ್ಲ
ನನಸಾಗಿಸಲು ಬಾಗುವುದು ಬೆನ್ನು
ಬಣ್ಣಬಣ್ಣದ ಕನಸು
ಕಾಣಲೇನೂ ಖರ್ಚಿಲ್ಲ
ನನಸಾಗಿಸಲು ಕಳೆಯುವುದು ಹೊನ್ನು


೩. ಅಪ್ಪ

ಮೊದಮೊದಲು
ನೀನೆನಗೆ
ಅರ್ಥವಾಗಿರಲಿಲ್ಲ ಅಪ್ಪ
ನಿನ್ನ ಕಾಳಜಿ, ಶಿಸ್ತು
ನಾ ಅಪ್ಪನಾದಾಗ
ಸರಿಯಾಗಿ ಅರ್ಥವಾಯಿತಪ್ಪ!

೪. ವಿಷಯ : ಯುದ್ಧ /ಸಮರ

ಚುಚ್ಚಿದರು
ಕೆಣಕಿದರು
ಹಲವು ವರ್ಷಗಳ ಕಾಲ
ಉಂಡಿಹರು
ಸಮರದಲಿ
ನಾವು ತೀರಿಸುವ ಸಾಲ


೫. ವಿಷಯ : ಮಳೆ, ಗಾಳಿ, ಕರೆಂಟು

ಮಳೆ ಗಾಳಿಗೂ
ಕರೆಂಟಿಗೂ
ಇದೆ ವೈರತ್ವದ ನಂಟು
ಬಂದಿತೆಂದರೆ
ಮಳೆ ಗಾಳಿ
ಓಡಿ ಹೋಗುವುದು ಕರೆಂಟು


೬. ವಿಷಯ : ಮೌನ

ಬಡಬಡಿಸುವ ಮಾತೇಕೆ,
ಪಿಸುಗುಟ್ಟೊ ನುಡಿಯೇಕೆ,
ನೀರವ ಮೌನದಲಿ ಮಾತಿಲ್ಲವೇನು?
ಕಣ್ಣಿನಾ ಮಿಂಚುಗಳು,
ತುಟಿಗಳಾ ಕೊಂಕುಗಳು,
ಸೆಳೆದು ಮನಕೆ ಮಾತನುಸಿರಿಲ್ಲವೇನು?

೭. ವಿಷಯ : ಕ್ರೌರ್ಯ
1.
ಕೆಂಪಾಯ್ತು ಹಿಮರಾಶಿ
ಕಟುಕರ ಕ್ರೌರ್ಯಕ್ಕೆ
ಮತಾಂಧರ ನಿರ್ದಯ ರಾಕ್ಷಸತ್ವಕ್ಕೆ!
ಉತ್ತರವಿದೆಯೇ ನಮ್ಮಲ್ಲಿ
ಆಕ್ರಮಣದ ಸಂಚಿಗೆ
ಮರೆಯಲಾಗದ ಪಾಠ ಕಲಿಸುವುದಕ್ಕೆ?
2.
ದಯೆಯಿಲ್ಲದ ಧರ್ಮ
ಉಂಟು ಬುವಿಯಲ್ಲಿ
ನಂಬಿದವರು ಆಗಿಹರು ರಾಕ್ಷಸರು
ಹಿಂಸೆಯೇ ವಿಚಾರ
ಕ್ರೌರ್ಯವೇ ಪ್ರಚಾರ
ದಾನವತ್ವಕ್ಕೆ ಮತ್ತೊಂದು ಹೆಸರು!  

೮. ವಿಷಯ: ಬಣ್ಣ

ಪ್ರತಿಯೊಬ್ಬರೂ ಒಂದು
ಬಣ್ಣವಿದ್ದಂತೆ, ಅವರ
ವ್ಯಕ್ತಿತ್ವವೇ ಆ ಬಣ್ಣದ ಚೆಲ್ಲು
ಕಲಬೆರಕೆಯಾಗದೆ
ಸುಂದರ ಸಮರಸದಿ
ಕಲೆತಾಗೋಣ ಸುಂದರ ಕಾಮನಬಿಲ್ಲು

೯. ವಿಷಯ: ಯಾತ್ರೆ

ಜೀವನದ ಯಾತ್ರೆಯಿದು
ನಿಲ್ಲದಿಹ ಪಯಣವಿದು
ಸೇರಲು ನಾವು ಕಾಣದಿಹ ಪುಣ್ಯಕ್ಷೇತ್ರ
ಗುರಿಯು ಮರೆಯದೆ ಇರಲಿ
ದಾರಿ ತಪ್ಪದೆ ಇರಲಿ
ತಲುಪುವೆವುಗಮ್ಯವ ಆಗ ಮಾತ್ರ

೧೦. ವಿಷಯ: ರಕ್ಷಾ ಬಂಧನ

ಅಣ್ಣ ತಂಗಿಯರ 
ಸವಿ ಬಂಧ
ಅದುವೇ ರಕ್ಷಾ ಬಂಧನ
ಪ್ರತಿ ವರುಷ
ತಂದು ಹರುಷ
ಮನೆಯನಾಗಿಸಿತು ನಂದನ

೧೧. ವಿಷಯ: ಗುರು ಶಿಷ್ಯರು

ಗುರುಶಿಷ್ಯರ ಸರಪಳಿ
ನೀಡುತಿದೆ
ಜ್ಞಾನ ವಿಜ್ಞಾನದ ಬಳುವಳಿ
ಕತ್ತಲೆಯ ಕಳೆಯುತ
ನಿರಂತರ
ಅಂಧ ಅಜ್ಞಾನದ ಸವಕಳಿ

೧೨. ವಿಷಯ: ನಿದ್ದೆ

ಬರದೇ ಬರದೇ
ಬಹಳ ಸಮಯಕೆ
ಬಂದಿತು ಗಾಢವಾದ ನಿದ್ದೆ
ಪುಟಿದು ಬಂದಿತು
ಕಾಲ್ಚೆಂಡು ಕನಸಿನಲಿ
ಜೋರಾಗಿ ನನ್ನವಳಿಗೆ ಒದ್ದೆ!

೧೩. ವಿಷಯ : ಕೃಷ್ಣಜನ್ಮಾಷ್ಟಮಿ

ಆ ಮುರುಳಿಯಲಿ
ಊದುತ ಉಸಿರನು
ನಾದ ಹೊರಡಿಸಿದೆ ನೀ ಕೃಷ್ಣ
ತೊಗಲು ಬೊಂಬೆಗಳಲಿ
ತುಂಬುತ ಉಸಿರನು
ಪ್ರಾಣ ನೀಡಿದೆ ನೀನೇ ಕೃಷ್ಣ

Friday, May 22, 2020

ಮುಂಜಾನೆಯ ಮಳೆ

ಧರೆಗಿಳಿದಿದೆ ಸುರಲೋಕದ,
ಅಮೃತ ಬಿಂದು.
ನವಚೇತನ, ಉಲ್ಲಾಸದ,
ರಾಗವು ಇಂದು.

ಹಸಿರುಟ್ಟಿದೆ ಭೂತಾಯಿಯು,
ನಸುಬೆಳಕಲಿ ಮಿಂದು.
ನವಪಲ್ಲವ ಚಿಗುರೊಡೆದಿದೆ,
ಹೊಸಲೋಕಕೆ ಬಂದು.

ತಂಗಾಳಿಯ ಕುಳಿರಲ್ಲಿದೆ,
ಬಿಸಿಯೇರುವ ಮತ್ತು.
ಮಗದೊಮ್ಮೆ ಮೈಮರೆತರೆ,
ಕರ್ತವ್ಯಕೆ ಕುತ್ತು.

ಪಲ್ಲಂಗವ ತೊರೆದುಬಿಡಿ,
ಧನ್ಯವಾದ ಇತ್ತು.
ಮುಂಜಾನೆಯ ಹೊಂಗಿರಣವು,
ಪಲ್ಲವಿಸುವ ಹೊತ್ತು.