Tuesday, September 8, 2009

ಬದರೀನಾಥ ಸ್ತುತಿ

 ಪರ್ವತೇಶನ ನಾಡಿನಲ್ಲಿ, 
ಹಿಮಾಲಯದ ತಂಪಿನಲ್ಲಿ, 
ಭಕ್ತಿಭಾವದಿ ಮಿಂದು ಎದ್ದು, 
ಬದರಿನಾಥನ ಕಂಡೆನು. 

 ನೀಲಕಂಠನು ನೋಡುತಿರಲು, 
ಅಲಕನಂದೆಯು ಪಾದ ತೊಳೆಯಲು, 
ಪುಣ್ಯಪಾದದ ಅಡಿಗೆ ನಿಂತು, 
ಬದರಿನಾಥನ ಕಂಡೆನು. 

 ಗರುಡವಾಹನ ಬಾಗಿಲಲ್ಲಿ, 
ಕುಬೇರ ಲಕ್ಷ್ಮಿಯು ಸನಿಹದಲ್ಲಿ, 
ಕುಚೇಲನಂತೆ ನಮಿಸಿ ನಾನು, 
ಬದರಿನಾಥನ ಕಂಡೆನು. 

 ಬಿಸಿಯ ನೀರ ಚಿಲುಮೆಯಲ್ಲಿ, 
ಮಿಂದ ಭಕ್ತರು ಭಜಿಸುತಿರಲು, 
ಮನದೆ ದೇವನ ಸ್ತುತಿಸಿಕೊಂಡು, 
ಬದರಿನಾಥನ ಕಂಡೆನು. 

 ಉದಯರವಿಯು ಮೂಡಿಬಂದು, 
ಸ್ವರ್ಣ ಮುಕುಟವ ನೀಡುತಿರಲು, 
ಬಣ್ಣಿಸಲಾಗದ ಭಾವದಲ್ಲಿ, 
ಬದರಿನಾಥನ ಕಂಡೆನು. 

 ದಾರಿ ತೋರಿದೆ ಪಾಂಡವರಿಗೆ, 
ಮುಕ್ತಿ ನೀಡಿದೆ ಭಕ್ತ ಜನರಿಗೆ, 
ನಮಿಸಿದೆನೆಗೆ ಕರುಣೆ ತೋರಿದೆ, 
ಧನ್ಯನಾ ಬದರಿನಾಥನೆ!

Friday, May 29, 2009

ಚುನಾವಣೆ 2009

ಅಂತೂ ಇಂತೂ ಮುಗಿಯಿತು ಎಣಿಕೆ,
ಓಡದ ಕುದುರೆಯ ಕತ್ತಲಿ ಕುಣಿಕೆ.

ತಕ್ಕಡಿಯ ಕಪ್ಪೆಗಳಿಗೆ ಆಯಿತು ದಿಗ್ಭ್ರಮೆ,
ನೆಗೆಯಲು ಬಿದ್ದರು ನೀರಿಲ್ಲದೆ ಭಾವಿಗೆ.
ಆರು ದೋಸೆ, ಮೂರೂ ದೋಸೆ, ಬಯಸಿ ಬಂದವರು,
ಭವತಿ ಭಿಕ್ಷಾಂದೇಹಿ ಎನ್ನುವಂತಾಯಿತು.

ತುಂಡು ವೀರರು, ಬಂಡುಕೋರರು,
ಸುಳಿಗಾಳಿಗೆ ಸಿಕ್ಕ ತರೆಗೆಲೆಗಳಾದರು.
ರಾಣಿಜೇನುಗಳು ಪರಿತಪಿಸಿದರು,
'ಜೀ ಹುಜೂರ್' ಎನ್ನುವರಿಲ್ಲದೆ.

ಕೊನೆಗೂ ಸರಿಯಿತು ಕತ್ತಲ ಪರದೆ,
ಮೂಡಿತು ದೇಶಕೆ ಉದಯದ ಹಣತೆ.
ಗೊಂದಲ ಕಳೆಯಿತು, ನೆಮ್ಮದಿ ಮೂಡಿತು,
ಸ್ಥಿರ ಸರಕಾರಕೆ ಬುನಾದಿ ದೊರಕಿತು!

Tuesday, April 28, 2009

ಎಲ್ಲಾ ಬೇಕು!

ನನಗೂ ಬೇಕು, 
ನನ್ನ ಮಗನಿಗೂ ಬೇಕು, 
ಕೇಳಿದರು ಸೀಟು... 

ನನಗೂ ಬೇಕು, 
ನಮ್ಮಮ್ಮನಿಗೂ ಬೇಕು, 
ಕೋರಿದರು ಓಟು... 

ನಮಗೂ ಬೇಕು, 
ಮರಿಮಕ್ಕಳಿಗೂ ಬೇಕು, 
ಕೂಡಿಟ್ಟರು ನೋಟು...

Tuesday, April 14, 2009

ಮತ್ತೆ ಬರುವನು ವಸಂತ

ವಸಂತ ಬಂದಾಗ, ಕೈಹಿಡಿದು ನಕ್ಕಾಗ,
ಎದೆತುಂಬಿ ಚಿಮ್ಮಿತು ನಿನಗೆ ಸಂತಸದ ಹಸಿರು.

ಗ್ರೀಷ್ಮನೋಡಿ ಬಂದು, ವಸಂತನಟ್ಟಿದಾಗ,
ಬೆಂದೆ ವಿರಹದುರಿಯ ಬೇಗೆಯಲ್ಲಿ.
ಗೆಳತಿ ವರ್ಷಳು ಸುರಿಸಿದಳು ಕಣ್ಣೀರ ಧಾರೆ,
ನಿನ್ನೊಡಲ ತಾಪಕೆ ನೊಂದು, ಬೆಂದು.

ಶರತನ ಸಾಂತ್ವನದ ನುಡಿ ಹನಿಗಳು,
ತಂದಿತಾದರೂ ತುಸು ಸಮಾಧಾನ,
ಹೇಮಂತನಾಗಮಿಸಿ, ವಸಂತನ ಮರೆ ಎಂದಾಗ,
ಮರಗಟ್ಟಿದೆ ನೀನು, ಮೈ ಕೊರೆವ ಮಂಜಿನಂತೆ!

ಶಿಶಿರನು ತಂದ ಸಂತಸದ ಸುಗ್ಗಿ,
ವಸಂತನು ಮತ್ತೆ ಬರುವ ಸುದ್ದಿ!
ಸಸುನಗೆಯು ಚಿಗುರಿ, ಮೈಯೆಲ್ಲ ಅರಳಿ,
ಕಾದಿರುವೆ ಕಾತುರದಿ,  ಮತ್ತೆ ಬರುವ ವಸಂತನಿಗಾಗಿ!

Sunday, April 5, 2009

ಗಾಳಿಪಟ

ನಿನ್ನ ನೆನಪಿನ ಸೂತ್ರ ಹಿಡಿದ, 
ಗಾಳಿಪಟದ ಪಯಣ ನನ್ನದು. 

 ಎದೆಯ ಗೂಡಲಿ ಹುರುಪು ಮೂಡಿ, 
ಮೇಲೆ ಹಾರುವ ಆಸೆ ಚಿಮ್ಮಿತು, 
ಮಂದ ಮಾರುತ ಕೈಯ ಬೀಸಿತು, 
ನಿನ್ನ ನೆನಪಿನ ಅಲೆಯು ಎದ್ದಿತು. 

 ಹಿಗ್ಗಿನಲ್ಲಿ ಎದೆಯು ತುಂಬಿ, 
ಗಾಳಿಯಲ್ಲಿ ಹಾರಿ ತೇಲಿ, 
ಸ್ವರ್ಗದಲ್ಲಿ ಜೋಲಿ ಹೊಡೆದೆ, 
ನಿನ್ನ ಸಂಗದ ಕನಸಲಿ. 

 ನೀನಿಲ್ಲದ ಸ್ವರ್ಗವು ನರಕವೆನೆಗೆ, 
ರಂಭೆ ಕೊಂಬೆಗಳ ಸಂಗವೇಕೆ? 
ನಿನ್ನ ನೆನಪಿನ ಸೆಳೆತವೊಂದು, 
ಎಳೆದು ತಂದಿತು ಭೂಮಿಗೆ!

Thursday, April 2, 2009

ವಿರೋಧಿ ನಾಮ ಸಂವತ್ಸರ

ನಾಮ ‘ವಿರೋಧಿ’ ಎಂದು, 
ಮಾನ ಕಳೆಯದಿರಿ ಎನಗೆ. 
ನಾಮ ಹಾಕುವವರು, 
ಮಾನಗೇಡಿಗಳು, 
ಇವರಿಗಷ್ಟೇ ವಿರೋಧಿ ನಾನು. 

 ನಿಮ್ಮ ವಿರೋಧಿಗಳಿಗೆ ವಿರೋಧಿ ನಾನು, 
ಮುನ್ನಡೆಯೋಣ ಅವಿರೋಧದಿಂದ ನಾವು. 
ನಾಮ ಮಾತ್ರಕೆ ವಿರೋಧಿಸಿದರೆ ಸಾಲದು, 
ನಿರ್ನಾಮವಾಗಿಸಬೇಕು ವಿರೋಧಗಳನ್ನು. 

 ಬೇಯುತಿವೆ ಚುನಾವಣೆಯ ಕಾವಿನಲ್ಲಿ, 
ಆಳುವ, ವಿರೋಧ ಪಕ್ಷಗಳು. 
ನಾಮಾವಶೇಷವಾಗಿಸೋಣ ಜನ ವಿರೋಧಿಗಳನ್ನು, 
ಈ ವಿರೋಧಿ ನಾಮ ಸಂವತ್ಸರದಲ್ಲಿ!