Showing posts with label ಅನ್ನದಾತ. Show all posts
Showing posts with label ಅನ್ನದಾತ. Show all posts

Friday, July 29, 2022

ಮುಕ್ತಕಗಳು - ೨೮

ಗುರುವಾದ ಶಕುನಿ ತಾ ಗಾಂಧಾರಿ ಪುತ್ರನಿಗೆ

ಹರಿಯೆ ಗುರುವೆಂದ ಬಕುತಿಯಲಿ ಅರ್ಜುನನು |

ಗುರುತರವು ಗುರುಪಾದವನರಸುವ ಕಾರ್ಯವದು

ಸರಿಗುರುವು ಕೈವಲ್ಯ ಪರಮಾತ್ಮನೆ ||೧೩೬||


ಅನ್ನವನು ಉಣ್ಣುತಿರೆ ಅನ್ನದಾತನ ನೆನೆಸು

ನಿನ್ನ ಭೂಮಿಗೆ ತಂದ ಜನ್ಮದಾತರನು |

ತನ್ನಾತ್ಮದೊಂದು ಭಾಗವನಿತ್ತವನ ನೆನೆಸು

ಉನ್ನತಿಗೆ ಮಾರ್ಗವದು ಪರಮಾತ್ಮನೆ ||೧೩೭||


ಮೊಳೆತು ಮರವಾಗಲಿಕೆ ತಂತ್ರಾಂಶ ಬೀಜದಲಿ

ಬೆಳೆದು ಮಗುವಾಗೊ ತಂತ್ರ ಭ್ರೂಣದಲ್ಲಿ |

ಕೊಳೆತು ಮಣ್ಣಲಿ ಕಲೆವ ಸೂತ್ರ ನಿರ್ಜೀವದಲಿ

ಅಳೆದು ಇಟ್ಟವರಾರು ಪರಮಾತ್ಮನೆ ||೧೩೮||


ಬೇಡು ದೇವರನು ನಿನಗಾಗಿ ಅಲ್ಲದೆ, ಪರರ

ಕಾಡುತಿಹ ನೋವುಗಳ ಕೊನೆಗಾಣಿಸಲಿಕೆ |

ಓಡಿ ಬರುವನು ದೇವ ನಿಸ್ವಾರ್ಥ ಕೋರಿಕೆಗೆ

ತೀಡುವನು ನಿನ ಕರುಮ ಪರಮಾತ್ಮನೆ ||೧೩೯||


ದೇವರೆಂದರೆ ಕಾವ ದೊರೆ, ಕೋರಿಕೆಗೆ ಪಿತನೆ?

ಜೀವಸಖ, ಅರಿವ ಕೊಡುವಂಥ ಗುರುವೇನು? |

ಜೀವಿಯೊಳಿರುವ ಆತ್ಮ, ಸರ್ವಶ ಕ್ತನೆ, ಯಾರು?

ನಾವು ಭಾವಿಸಿದಂತೆ ಪರಮಾತ್ಮನೆ ||೧೪೦||

Tuesday, January 26, 2021

ಅನ್ನವ ನೀಡುವ ಸೌಭಾಗ್ಯ

 ಎದ್ದು ಬಂದನೋ ಮೂಡಣ ವಿಕ್ರಮ,

ಚಾಲನೆ ಕೊಟ್ಟನು ಬದುಕಿಗೆ ಸಕ್ರಮ!


ಕೋಳಿಯು ಕೂಗಿದೆ ಹಿತ್ತಲಲಿ,

ಗುಬ್ಬಿಯ ಚಿಲಿಪಿಲಿ ಕಿವಿಗಳಲಿ!

ನೇಗಿಲು ಏರಿತು ಹೆಗಲನ್ನು,

ಭೂಮಿಯು ನೀಡಿತು ವರವನ್ನು!


ಹಸಿ ಹಸಿರಿನ ಪೈರು ಕಣ್ಣಿಗೆ ತಂಪು,

ಮೂಗನು ತಲುಪಿದೆ ಮಣ್ಣಿನ ಕಂಪು!

ಜುಳು ಜುಳು ಹರಿದಿದೆ ಕಾಲುವೆ ನೀರು,

ಸಂತಸದಲಿ ಕುಣಿದಾಡಿದೆ ಪೈರು!


ಇಂತಹ ಹಳ್ಳಿಯು ಬೇಡವೆ ಕಂದ?

ಯಾಂತ್ರಿಕ ಪಟ್ಟಣದಲ್ಲೇನಿದೆ ಚೆಂದ?

ಕೂಲಿಯ ಬದುಕಲಿ ಏನಿದೆ ನೆಮ್ಮದಿ?

ಮೇಟಿಯ ಆಟವ ಆಡುನೀ ಚೆಂದದಿ!


ಬೆವರನು ಸುರಿಸು, ಹಸಿರನು ಬೆಳೆಸು,

ಹಸಿವಿನ ಕೂಗನು ನೀ ಅಳಿಸು!

ಅನ್ನವ ನೀಡುವ ಯೋಗದ ಭಾಗ್ಯ,

ಕೈಬಿಡದಿರು ಇಂತಹ ಸೌಭಾಗ್ಯ!