Showing posts with label ಗುರು. Show all posts
Showing posts with label ಗುರು. Show all posts

Tuesday, September 6, 2022

ಮುಕ್ತಕಗಳು - ೬೨

ತುಟಿಯಂಚಿನಲಿ ಬಂದ ನುಡಿಗಳಿಗೆ ಬೆಲೆಯಿಲ್ಲ

ನಟನೆಯೆಂಬುದು ತಿಳಿಯೆ ಸಮಯಬೇಕಿಲ್ಲ |

ಸಟೆಯಾಡುವುದಕೆ ಸಮ ಎದೆಯ ನುಡಿಯಾಡದಿರೆ

ತಟವಟವ ತೊರೆದುಬಿಡು ಪರಮಾತ್ಮನೆ ||೩೦೬||

ತಟವಟ = ಬೂಟಾಟಿಕೆ


ಕಸಬಿನಲಿ ಕೀಳ್ಯಾವ್ದು ಮೇಲ್ಯಾವ್ದು ಹೇಳಯ್ಯ

ಕಸವ ತೆಗೆಯುವುದರಲಿ ಕೀಳುತನವೆಲ್ಲಿ?

ಬಿಸುಡಿದರೆ ಕಸವನ್ನು ಎಲ್ಲೆಂದರಲ್ಲಿಯೇ

ಹೆಸರಾದೆ ಕೀಳ್ತನಕೆ ~ ಪರಮಾತ್ಮನೆ ||೩೦೭||


ಅನ್ನಕ್ಕೆ ಚಿನ್ನಕ್ಕೆ ಹೋಲಿಕೆಯು ತರವೇನು

ಚಿನ್ನವನು ತಿನ್ನುವೆಯ ಹೊಟ್ಟೆ ಹಸಿದಿರಲು |

ನಿನ್ನ ಹೋಲಿಸಲೇಕೆ ಇನ್ನಾರದೋ ಜೊತೆಗೆ

ನಿನ್ನಬೆಲೆ ನಿನಗುಂಟು ~ ಪರಮಾತ್ಮನೆ ||೩೦೮||


ಕಾಲಚಕ್ರವು ತಿರುಗಿ ಮುನ್ನಡೆಸುತಿದೆ ಜಗವ

ಜಾಲವಿದು ಕಾಲದಲಿ ಖೈದಿಗಳು ನಾವು |

ಚಾಲಕನು ಕಾಣಸಿಗ ತಲುಪುವುದು ಎಲ್ಲಿಗೋ

ಕೇಳುವುದು ಯಾರನ್ನು ~ ಪರಮಾತ್ಮನೆ ||೩೦೯||


ದಾರಿದೀಪದ ಬೆಳಕು ದಾರಿಗೇ ಸೀಮಿತವು

ಕಾರಿರುಳ ಮನೆಗೆ ಬೆಳಕಾಗಲಾರದದು |

ನೂರಿರಲು ಶಿಕ್ಷಕರು ಬದುಕುವುದ ಕಲಿಸಲಿಕೆ

ತೋರುವರೆ ಒಳದೈವ ಪರಮಾತ್ಮನೆ ||೩೧೦||

Tuesday, August 16, 2022

ಮುಕ್ತಕಗಳು - ೪೫

ಚಪಲದಾ ಮನಸಿಂದು ಅಂಕೆಯೇ ಇಲ್ಲದೇ

ಕಪಿಯಂತೆ ಕುಣಿಯುತಿರೆ ಎಲ್ಲೆಯಿರದಂತೆ |

ಉಪಯೋಗವೇನಿಲ್ಲ ಚುಚ್ಚುವುವು ಮಳ್ಳುಗಳು

ಜಪಮಾಲೆ ನೀಡದಕೆ ಪರಮಾತ್ಮನೆ ||೨೨೧||


ಗೆದ್ದವರ ಬಿದ್ದವರ ಕಥೆಯು ಇತಿಹಾಸವೇ

ಇದ್ದವರು ಸುಮ್ಮನೆಯೆ ನೆನಪಾಗರಲ್ಲ |

ಗೆದ್ದಲಿನ ಮನದ ಕುಹಕಿಗಳು ಕಥೆಯಾಗುವರೆ

ಸದ್ದಿರದೆ ಕರಗುವರು ~ ಪರಮಾತ್ಮನೆ ||೨೨೨||


ಎತ್ತರಕ್ಕೊಯ್ದರೂ ಮನುಜನನು ವಿದ್ಯೆಯೇ 

ಮತ್ತದೇ ಪೀಠದಲಿ ನಿಲಿಸೊ ಬಲವುಂಟೆ? |

ಬಿತ್ತಿಬೆಳೆಸುತಿರೆ ಆದರ್ಶ ನಡೆ ನುಡಿಗಳನು

ಕುತ್ತಿರದು ಪೀಠಕ್ಕೆ ಪರಮಾತ್ಮನೆ ||೨೨೩||


ಚಂದದಲಿ ತಿಳಿಹೇಳಿ ಅಕ್ಕರವ ಕಲಿಸಿರುವೆ

ಮಂದಮತಿ ಮಂಡೆಯಲಿ ಬೀರಿ ಬೆಳಕನ್ನು |

ಬಿಂದಿಗೆಗೆ ತುಂಬಿಸಿದೆ ಅಮೃತದಾ ಸಾರವನು

ವಂದಿಪೆನು ಗುರುದೇವ ~ ಪರಮಾತ್ಮನೆ ||೨೨೪||

 

ಬಿರಿದರೂ ವನಸುಮವು ಅರ್ಚನೆಗೆ ಸಿಗದಲ್ಲ

ಪರಮಪುರುಷನ ಪಾದ ಸೇರದಳಿಯುವುದು |

ತೊರೆ ಕಾಡ ಹಿಡಿ ನಾಡ ಮೂಢ ಸನ್ಯಾಸಿಯೇ

ವರವಾಗು ಪುರಜನಕೆ ~ ಪರಮಾತ್ಮನೆ ||೨೨೫||


Monday, August 15, 2022

ಮುಕ್ತಕಗಳು - ೩೭

ಕರಗುವುದು ಕರಿಮೋಡ ಮೂಡುವುದು ಹೊಸ ಕಿರಣ

ಗುರುವಿನಾ ಕೃಪೆಯಿರಲು ಬದುಕಿನಲಿ ಬೆಳಕು |

ಕರುಗಳಿಗೆ ಗೋವಂತೆ ಗುರುವು ತಾನಿರಬೇಕು

ಅರಿವಿನಾ ಹಾಲುಣಿಸೆ ~ ಪರಮಾತ್ಮನೆ ||೧೮೧||


ಭಕ್ತಿಮಾರ್ಗವು ಸುಲಭ ಸಾಧನವು ಜಗದಲ್ಲಿ

ಮುಕ್ತಿಯನು ಪಡೆಯಲಿಕೆ ನರಜನುಮದಲ್ಲಿ |

ವ್ಯಕ್ತಿ ಮಾಡಿದ ಕರ್ಮ ಸುಟ್ಟು ಬೂದಿಯ ಮಾಡೊ

ಶಕ್ತಿಯಿದೆ ಭಕ್ತಿಯಲಿ ~ ಪರಮಾತ್ಮನೆ ||೧೮೨||


ನಾಕವಿದೆ ನರಕವಿದೆ ಕತ್ತಲೆಯ ಕೂಪವಿದೆ

ಬೇಕು ಎಂದರೆ ಸಿಗುವ ಲೋಕಗಳು ಇಲ್ಲಿ |

ಜೋಕೆಯಲಿ ಆರಿಸಿಕೊಳಲುಬೇಕು ಲೋಕವನು

ಭೀಕರವು ತಪ್ಪಿದರೆ ಪರಮಾತ್ಮನೆ ||೧೮೩||


ಕಾಡುಗಳ ಕಡಿಯುತ್ತ ನಾಡನ್ನು ಕಟ್ಟಿಹೆವು

ನೋಡುನೋಡುತ ಹಸಿರು ಕಾಡುಗಳೆ ಮಾಯ |

ಬೇಡುವುದು ಯಾರಲ್ಲಿ ಬರಡಾಗೆ ಭೂತಾಯಿ

ತೋಡಿಹೆವು ಗೋರಿಗಳ ಪರಮಾತ್ಮನೆ ||೧೮೪||


ಬದುಕೊಂದು ಉತ್ಸವದ ಪಂಕ್ತಿಭೋಜನವಲ್ಲ

ಉದರಕ್ಕೆ ಸಿಗದು ಎಲ್ಲರಿಗು ಭಕ್ಷ್ಯಗಳು |

ಬೆದರಿಸುತ ಪಡೆಯಲಾಗದು ಪರರ ಹಣೆಬರಹ

ಕದಿಯಲಾಗದು ಕರ್ಮ ಪರಮಾತ್ಮನೆ ||೧೮೫||

Friday, July 29, 2022

ಮುಕ್ತಕಗಳು - ೩೦

ಬಂಧುಗಳು ಇವರೇನು? ಮತ್ಸರದ ಮೂಟೆಗಳು

ಕಂದಕಕೆ ಬಿದ್ದವಗೆ ಕಲ್ಲು ಹೊಡೆಯುವರು |

ಚಂದದಲಿ ಸಂಬಂಧ ತೂಗಿಸಲು ಒಲ್ಲದಿರೆ

ಬಂಧುತ್ವವೆಲ್ಲಿಹುದು ಪರಮಾತ್ಮನೆ ||೧೪೬||


ಕಲ್ಲಿನೊಲು ಎದೆಯಿರಲು ದೂರ ಸರಿಯುವರೆಲ್ಲ

ಮುಳ್ಳಿನೊಲು ಮನವಿರಲು ಮಾತನಾಡಿಸರು

ಜೊಳ್ಳುಮಾತಿಗೆ ಬೆಲೆಯ ನೀಡುವವರಾರು? ಹೂ

ಬಳ್ಳಿಯಂತಿರಬೇಕು ಪರಮಾತ್ಮನೆ ||೧೪೭||


ಅನುಭವದೆ ಮಾಗಿರಲು ಅರಿವಿನಿಂ ತುಂಬಿರಲು

ಹಣತೆಗಳ ಹಚ್ಚುವಾ ಮನದಾಸೆಯಿರಲು |

ಘನಪಾದವನು ಬಿಡದೆ ಹಿಡಿ ಪಾಠಕಲಿಯಲೀ

ತನಗಿಂತ ಗುರುವೆಲ್ಲಿ ಪರಮಾತ್ಮನೆ ||೧೪೮||


ಗಾನಕ್ಕಿಹುದು ಮೈಮರೆಸುವ ಸನ್ಮೋಹಕತೆ

ಜೇನಿನೊಲು ಸವಿಯಿಹುದು ಚುಂಬಕದ ಸೆಳೆತ |

ಗಾನ ಪಲ್ಲವಿ ರಾಗ ತಾಳಗಳು ಔಷಧವು

ಮಾನಸಿಕ ಶಮನಿಕವು ಪರಮಾತ್ಮನೆ ||೧೪೯||


ವಿಪರೀತ ಮನಗಳೊಡೆ ಗೆಳೆತನವು ತರವಲ್ಲ

ಅಪವಿತ್ರ ಸಂಬಂಧ ಸಂದೇಹ ನಿತ್ಯ |

ಅಪನಂಬಿಕೆಯ ಬಿತ್ತಿ ದಮನಕರು ಕರಟಕರು

ಕಪಟವನೆ ಎಸಗುವರು ಪರಮಾತ್ಮನೆ ||೧೫೦||

ಮುಕ್ತಕಗಳು - ೨೮

ಗುರುವಾದ ಶಕುನಿ ತಾ ಗಾಂಧಾರಿ ಪುತ್ರನಿಗೆ

ಹರಿಯೆ ಗುರುವೆಂದ ಬಕುತಿಯಲಿ ಅರ್ಜುನನು |

ಗುರುತರವು ಗುರುಪಾದವನರಸುವ ಕಾರ್ಯವದು

ಸರಿಗುರುವು ಕೈವಲ್ಯ ಪರಮಾತ್ಮನೆ ||೧೩೬||


ಅನ್ನವನು ಉಣ್ಣುತಿರೆ ಅನ್ನದಾತನ ನೆನೆಸು

ನಿನ್ನ ಭೂಮಿಗೆ ತಂದ ಜನ್ಮದಾತರನು |

ತನ್ನಾತ್ಮದೊಂದು ಭಾಗವನಿತ್ತವನ ನೆನೆಸು

ಉನ್ನತಿಗೆ ಮಾರ್ಗವದು ಪರಮಾತ್ಮನೆ ||೧೩೭||


ಮೊಳೆತು ಮರವಾಗಲಿಕೆ ತಂತ್ರಾಂಶ ಬೀಜದಲಿ

ಬೆಳೆದು ಮಗುವಾಗೊ ತಂತ್ರ ಭ್ರೂಣದಲ್ಲಿ |

ಕೊಳೆತು ಮಣ್ಣಲಿ ಕಲೆವ ಸೂತ್ರ ನಿರ್ಜೀವದಲಿ

ಅಳೆದು ಇಟ್ಟವರಾರು ಪರಮಾತ್ಮನೆ ||೧೩೮||


ಬೇಡು ದೇವರನು ನಿನಗಾಗಿ ಅಲ್ಲದೆ, ಪರರ

ಕಾಡುತಿಹ ನೋವುಗಳ ಕೊನೆಗಾಣಿಸಲಿಕೆ |

ಓಡಿ ಬರುವನು ದೇವ ನಿಸ್ವಾರ್ಥ ಕೋರಿಕೆಗೆ

ತೀಡುವನು ನಿನ ಕರುಮ ಪರಮಾತ್ಮನೆ ||೧೩೯||


ದೇವರೆಂದರೆ ಕಾವ ದೊರೆ, ಕೋರಿಕೆಗೆ ಪಿತನೆ?

ಜೀವಸಖ, ಅರಿವ ಕೊಡುವಂಥ ಗುರುವೇನು? |

ಜೀವಿಯೊಳಿರುವ ಆತ್ಮ, ಸರ್ವಶ ಕ್ತನೆ, ಯಾರು?

ನಾವು ಭಾವಿಸಿದಂತೆ ಪರಮಾತ್ಮನೆ ||೧೪೦||

Saturday, December 26, 2020

ಗುರುದರ್ಶನ

ದರುಶನವ ನನಗೆಂದು ಕೊಡುವೆ?

ನಿನಗಾಗಿ ಕಾಯುತಿಹೆ ಗುರುವೆ

ನೀ ಬಂದೇ ಬರುವೆ ಎಂದು, ಬಂದು

ದಾರಿ ತೋರುವೆ ಎಂದು!


ಕಗ್ಗಂಟು ಬದುಕಿದು, ಕಾಡಂಥ ಜಗವಿದು,

ಕಣ್ಣಿಗೆ ಬಟ್ಟೆ ಕಟ್ಟಿದ ಪಾಡು ನನ್ನದು!

ದಾರಿ ಕಾಣದು, ಸಮಯ ನಿಲ್ಲದು,

ಕೈ ಇಡಿದು ನಡೆಸುವ ಭಾರ ನಿನ್ನದು. 


ಬಂದೆನೇಕೋ ನಾ ಈ ಬುವಿಗೆ,

ತಿಳಿಯಡಿಸು ಬಾ ಇಂದು ನನಗೆ,

ಅಂಧಕಾರದಿ ನಾ ಕಳೆಯುತಿಹೆ ವರುಷಗಳ,

ಮೂಡಿಸು ಚಿತ್ತದಲಿ ಬೆಳಕಿನ ಕಿರಣಗಳ!

 

ಕಣ್ಣು ತೆರೆಯುವೆ ಆಗ ಅರಿವಿನ ಬೆಳಕಿಗೆ,

ತಲೆ ಬಾಗುವೇ ನಾ ನಿನ್ನಯ ಕೊಡುಗೆಗೆ,

ಸಾರ್ಥಕವಾಗಲಿ ನಾ ಪಡೆದ ಜನ್ಮ,

ನಿರಂತರವಾಗಲಿ ಅರ್ಥಪೂರ್ಣ ಕರ್ಮ!