Showing posts with label ಕಾಸು ಕೊಟ್ಟರೆ ಕಡಲೆ. Show all posts
Showing posts with label ಕಾಸು ಕೊಟ್ಟರೆ ಕಡಲೆ. Show all posts

Sunday, July 10, 2022

ಮುಕ್ತಕಗಳು - ೨

ಅನ್ಯ ಭಾಷೆಯು ಬೇಕೆ ಕನ್ನಡವನುಲಿವಾಗ?

ಕನ್ಯೆ ಬೇಕೆನುವಾಭರಣದಲಂಕಾರ |

ವನ್ಯಜೀವಿಗೆ ಕಾಡು, ಕನ್ನಡವನೆನಗಿತ್ತೆ

ಧನ್ಯನಾಗಿಸಿ ನನ್ನ ಪರಮಾತ್ಮನೆ ||೬||


ಮುಕ್ತಕದ ಸೊಗಸುಗಳ ಮೆಚ್ಚದವರುಂಟೇನು?

ಶಕ್ತ ಚೌಕಟ್ಟಿನಲ್ಲನುಭಾವ  ಹೊಂದಿ |

ರಕ್ತಮಾಂಸಗಳಿರುವ ಜೀವಂತ ಗೊಂಬೆಯದು

ಭಕ್ತನಾಗಿಹೆ ನಾನು ಪರಮಾತ್ಮನೆ ||೭||


ಅಂದು ಗುಂಡಪ್ಪ ಕೈ ಹಿಡಿದ ಮುಕ್ತಕವನೇ

ಚೆಂದದಲಿ ಹೆಚ್ಚಾಯ್ತು ಮುಕ್ತಕದ ಪದ್ಯ |

ಇಂದು ಆ  ಕಗ್ಗವೇ ದಿಕ್ಸೂಚಿ  ಬದುಕಲಿಕೆ

ಸಂದೇಹ ಎಲ್ಲಿಹುದು ಪರಮಾತ್ಮನೆ ||೮|| 


ಮುಕ್ತಕವ ರಚಿಸಿದೊಡೆ ಮುತ್ತುಕಟ್ಟಿದೊಲಿರಲಿ

ಮುಕ್ತಕವನೋದಿದರೆ ತಲೆ ತೂಗಬೇಕು |

ಮುಕ್ತಕವು ಅಂತರಂಗಕೆ ಈಯೆ ಬೆಳಕನ್ನು

ಮುಕ್ತಮನ ಶರಣೆನಲಿ ಪರಮಾತ್ಮನೆ ||೯||


ಆಸೆಯಿದ್ದರೆ ಸಾಕೆ ದೇಹ ದಣಿಸಲುಬೇಕು

ವಾಸುದೇವನ ಕೃಪೆಯು ಜೊತೆಯಾಗಬೇಕು |

ಏಸು ನೀರಿನಲಿ ಮುಳುಗೇಳಬೇಕಿದೆ ಜಸಕೆ

ಕಾಸು ಕೊಟ್ಟರೆ ಕಡಲೆ ಪರಮಾತ್ಮನೆ  ||೧೦||