Showing posts with label ಜೀವನ. Show all posts
Showing posts with label ಜೀವನ. Show all posts

Saturday, September 17, 2022

ಮುಕ್ತಕಗಳು - ೬೮

ಜೀವನದ ಪಂದ್ಯವದು ಎಷ್ಟು ದಿನಗಳ ಆಟ

ಯಾವ ದಿನ ಮುಗಿವುದೋ ಬಲ್ಲವರು ಯಾರು? |

ನಾವು ಗೆದ್ದವರೊ ಸೋತವರೊ ತಿಳಿಸುವರು ಜನ

ಸಾವ ಗೆದ್ದವರಾರು ~ ಪರಮಾತ್ಮನೆ ||೩೩೬||


ಎಳೆಯರಾಗುತಿರುವರು ಸ್ವಾರ್ಥದಾ ಮೂಟೆಗಳು

ತಲೆಗೆ ಹೋಗುತಿದೆ ಮಾತಾಪಿತರ ನಡತೆ |

ಬೆಳೆಯುವಾ ಸಮಯದಲಿ ಸರಿದಾರಿ ಹಿಡಿಯದಿರೆ

ಬೆಳಗುವರು ಹೇಗಿನ್ನು ~ ಪರಮಾತ್ಮನೆ ||೩೩೭||


ಕಲಬೆರೆಕೆ ಪಿಡುಗಿಂದು ಕೊಲ್ಲುತಿದೆ ಮಾನವರ

ಎಲೆಗೆ ಬಿದ್ದರೆ ಸಾಕೆ ಪರಿಶುದ್ಧ ಅನ್ನ |

ತಲೆಗೆ ಬೀಳಲೆಬೇಕು ಪರಿಶುದ್ಧ ಯೋಚನೆಯು

ಕೊಳೆಯ ತುಂಬುವೆಯೇಕೆ ~ ಪರಮಾತ್ಮನೆ ||೩೩೮||


ತಪ್ಪು ಮಾಡಿರುವುದರಿವಿಗೆ ಬಂದ ಕ್ಷಣದಲೇ

ತಪ್ಪೊಪ್ಪಿಗೆಯ ಕೇಳು ಸಂಬಂಧ ಉಳಿಸೆ |

ಕೊಪ್ಪರಿಗೆ ಧನಕೂಡ ಸರಿಪಡಿಸಲಾಗದದ

ತಪ್ಪದೆಲೆ ಕ್ಷಮೆಕೇಳು ~ ಪರಮಾತ್ಮನೆ ||೩೩೯||


ಪರಧನವ ತಿನ್ನುವುದೆ ಪರಮಾರ್ಥ ಎನ್ನುತಲಿ

ಪುರದ ಅಭಿವೃದ್ಧಿಯಲಿ ಕಳ್ಳತನ ಮಾಡೆ |

ಪರಮಾತ್ಮ ಶಿಕ್ಷಿಸುವ ಎಂದು ಕಾಯಲುಬೇಡಿ

ಜರಿದು ಶಾಪವ ಹಾಕಿ ~ ಪರಮಾತ್ಮನೆ ||೩೪೦||

Monday, March 9, 2020

ಬಾಳ ಪಯಣ

ಬಾಳ ದೋಣಿಯ ಪಯಣ ಸಾಗಿದೆ,
ಆಳ ಕಡಲಿನ ಮೇಲೆ ತೇಲಿದೆ.

ನೀಲಿ ನೀರಿನ ಕಡಲು ಹರಡಿದೆ,
ತಿಳಿಯ ಬಿಸಿಲಿನ ಕಾವು ಹಿತವಿದೆ.
ತಂಪು ಗಾಳಿಯ ಸೊಂಪು ಸೊಗಡಿಗೆ,
ಮನವು ಮುಗಿಲಿಗೆ ಹಾರಿ ಹೋಗಿದೆ.

ಎಲ್ಲ ಸೊಗಸಿದೆ, ಬೆಲ್ಲ ಸಿಹಿಯಿದೆ,
ಕಣ್ಣು ಮುಚ್ಚಲು ಕನಸು ಹತ್ತಿದೆ.
ಒಂದೇ ಚಣದಲಿ ಮೋಡ ಕವಿದಿದೆ,
ಬಿರುಸು ಗಾಳಿಗೆ ಅಲೆಯು ಎದ್ದಿದೆ.

ಮೋಡ ಗುಡುಗಿದೆ, ದೋಣಿ ನಡುಗಿದೆ,
ಭಯದ ಬೆಂಕಿಯು ಮನವ ಸುಡುತಿದೆ.
ದೋಣಿ ಮುಗುಚಿದೆ, ನೀರ ಸೇರಿದೆ,
ಕೊರೆವ ನೀರಿನ ಚಳಿಯು ಕಚ್ಚಿದೆ.

ನೀರ ಅಲೆಗಳು ಹೊಡೆತ ಕೊಡುತಿವೆ,
ನೆಲೆಯು ಇಲ್ಲದೆ ದೇಹ ಮುಳುಗಿದೆ,
ಉಸಿರು ಕಟ್ಟಿದೆ, ಜೀವ ಬೆಚ್ಚಿದೆ,
ಉಳಿವ ಆಸೆಯು ನೆಲವ ಕಚ್ಚಿದೆ.

ಕೊನೆಯ ಉಸಿರಿನ ಸಮಯ ಬಂದಿದೆ.
ಬೇರೆ ದಾರಿಯು ಈಗ ಕಾಣದೆ.
ದೇವ ದೇವನ ಮನದೆ ಬೇಡಿದೆ.
"ಒಡನೆ ನನ್ನನು ಕಾಯೊ ಒಡಯನೆ".

ತೇಲಿ ಬಂದಿತು ಮರದ ದಿಮ್ಮಿಯು,
ದೈವ ನೀಡಿದ ನನ್ನ ಕುದುರೆಯು,
ಶೃತಿಯ ಹಿಡಿಯಿತು ಎದೆಯ ನಾಡಿಯು,
ಎದೆಯ ತುಂಬಿದ ಪೊರೆದ ಸ್ವಾಮಿಯು.

ಕನಸು ಒಡೆಯಿತು, ಕಣ್ಣು ತೆರೆಯಿತು,
ತಿಳಿಯ ಬಿಸಿಲದು ಕಣ್ಣು ಹೊಡೆಯಿತು,
ನೀಲಿ ಕಡಲದು ನೋಡಿ ನಕ್ಕಿತು,
ಒಂದು ಜನುಮವು ಕಳದು ಹೋಯಿತು!