Monday, March 9, 2020

ಬಾಳ ಪಯಣ

ಬಾಳ ದೋಣಿಯ ಪಯಣ ಸಾಗಿದೆ,
ಆಳ ಕಡಲಿನ ಮೇಲೆ ತೇಲಿದೆ.

ನೀಲಿ ನೀರಿನ ಕಡಲು ಹರಡಿದೆ,
ತಿಳಿಯ ಬಿಸಿಲಿನ ಕಾವು ಹಿತವಿದೆ.
ತಂಪು ಗಾಳಿಯ ಸೊಂಪು ಸೊಗಡಿಗೆ,
ಮನವು ಮುಗಿಲಿಗೆ ಹಾರಿ ಹೋಗಿದೆ.

ಎಲ್ಲ ಸೊಗಸಿದೆ, ಬೆಲ್ಲ ಸಿಹಿಯಿದೆ,
ಕಣ್ಣು ಮುಚ್ಚಲು ಕನಸು ಹತ್ತಿದೆ.
ಒಂದೇ ಚಣದಲಿ ಮೋಡ ಕವಿದಿದೆ,
ಬಿರುಸು ಗಾಳಿಗೆ ಅಲೆಯು ಎದ್ದಿದೆ.

ಮೋಡ ಗುಡುಗಿದೆ, ದೋಣಿ ನಡುಗಿದೆ,
ಭಯದ ಬೆಂಕಿಯು ಮನವ ಸುಡುತಿದೆ.
ದೋಣಿ ಮುಗುಚಿದೆ, ನೀರ ಸೇರಿದೆ,
ಕೊರೆವ ನೀರಿನ ಚಳಿಯು ಕಚ್ಚಿದೆ.

ನೀರ ಅಲೆಗಳು ಹೊಡೆತ ಕೊಡುತಿವೆ,
ನೆಲೆಯು ಇಲ್ಲದೆ ದೇಹ ಮುಳುಗಿದೆ,
ಉಸಿರು ಕಟ್ಟಿದೆ, ಜೀವ ಬೆಚ್ಚಿದೆ,
ಉಳಿವ ಆಸೆಯು ನೆಲವ ಕಚ್ಚಿದೆ.

ಕೊನೆಯ ಉಸಿರಿನ ಸಮಯ ಬಂದಿದೆ.
ಬೇರೆ ದಾರಿಯು ಈಗ ಕಾಣದೆ.
ದೇವ ದೇವನ ಮನದೆ ಬೇಡಿದೆ.
"ಒಡನೆ ನನ್ನನು ಕಾಯೊ ಒಡಯನೆ".

ತೇಲಿ ಬಂದಿತು ಮರದ ದಿಮ್ಮಿಯು,
ದೈವ ನೀಡಿದ ನನ್ನ ಕುದುರೆಯು,
ಶೃತಿಯ ಹಿಡಿಯಿತು ಎದೆಯ ನಾಡಿಯು,
ಎದೆಯ ತುಂಬಿದ ಪೊರೆದ ಸ್ವಾಮಿಯು.

ಕನಸು ಒಡೆಯಿತು, ಕಣ್ಣು ತೆರೆಯಿತು,
ತಿಳಿಯ ಬಿಸಿಲದು ಕಣ್ಣು ಹೊಡೆಯಿತು,
ನೀಲಿ ಕಡಲದು ನೋಡಿ ನಕ್ಕಿತು,
ಒಂದು ಜನುಮವು ಕಳದು ಹೋಯಿತು!


No comments: