Showing posts with label ಪರಿಹಾರ. Show all posts
Showing posts with label ಪರಿಹಾರ. Show all posts

Saturday, September 17, 2022

ಮುಕ್ತಕಗಳು - ೬೬

ಫಲವತ್ತು ಭೂಮಿಯದು ಮನುಜನಾ ಹೃದಯವೇ

ಬೆಳೆಯುವುದು ಸೊಂಪಾಗಿ ಬಿತ್ತು ನೀ ಸುಗುಣ |

ಕಳೆ ಕೀಟಗಳ ಕಾಟವನು ಕೊನೆಗೊಳಿಸು ನಿತ್ಯ

ಕಲಿಗೆ ಊಟದ ಕೊರತೆ ~ ಪರಮಾತ್ಮನೆ ||೩೨೬||


ಸಮಯಕ್ಕೆ ರಜೆಯಿಲ್ಲ ಜಮೆಮಾಡಲಾಗದದ

ವಿಮೆಯ ಮಾಡಿಸಲಾರೆ ದೊರೆತ ಸಮಯಕ್ಕೆ |        

ಗಮನವಿಡಬೇಕು ಚಣಚಣವ ಉಪಯೋಗಿಸಲು

ನಮಗಮೂಲ್ಯಸಿರಿಯದು ~ ಪರಮಾತ್ಮನೆ ||೩೨೭||


ಪರಿಹಾರ ಹುಟ್ಟುವುದು ತೊಂದರೆಯ ಜೊತೆಯಲ್ಲೆ

ಅರಿವ ಬೆಳೆಸಲುಬೇಕು ಪರಿಹಾರ ಹುಡುಕೆ |

ಗಿರಿಶಿಖರ ತಲಪುವಾ ಸೋಪಾನ ಕಟ್ಟಲಿಕೆ

ಗಿರಿಯ ಬಂಡೆಗಳಿಹವು ~ ಪರಮಾತ್ಮನೆ ||೩೨೮||


ಜನನಿಬಿಡ ಪಟ್ಟಣದೆ ಅತ್ತರಿಗೆ ಬೆಲೆಹೆಚ್ಚು

ಬನದ ಕುಸುಮದ ಗಂಧ ಮೂಸುವವರಿಲ್ಲ |

ಜನವ ಮುಟ್ಟುವ ವಸ್ತು ಬೇಡಿಕೆಯಲಿರಲೇನು

ಗುಣವ ಕಡೆಗಣಿಸದಿರು ಪರಮಾತ್ಮನೆ ||೩೨೯||


ಯಾರದೋ ಮೆಚ್ಚುಗೆಗೆ ವಸ್ತುಗಳ ಕೊಳ್ಳುವೆವು

ತೋರಲಿಕೆ ನಮ್ಮ ಸಂಪತ್ತಿನಾ ಘನತೆ  |

ತೀರದಾ ದಾಹವದು ಸುಡುತಿಹುದು ನೆಮ್ಮದಿಯ

ಹೀರು ಆಧ್ಯಾತ್ಮ ಜಲ ~ ಪರಮಾತ್ಮನೆ ||೩೩೦||