Monday, August 28, 2023

ಭಾರತೀಯರು ನಾವು

ಭಾರತೀಯರು ನಾವು ಎನ್ನುವುದೆ ಹಿರಿಮೆ,

ಮೇರು ಗಿರಿಯೆತ್ತರವು ನಮ್ಮಯಾ ಗರಿಮೆ!


ಬಹು ಸನಾತನ ನಮ್ಮ ವಿಧಿ ವಿಚಾರಗಳು,

ನವನೂತನವು ನಮ್ಮ ಆವಿಷ್ಕಾರಗಳು!

ಆಚಾರ ಸುವಿಚಾರ ಸಂಸ್ಕಾರವಂತರು,

ಹೃದಯ ವೈಶಾಲ್ಯತೆಯ ಭಾವ ಮೆರೆದವರು.


ವೈರಿಪಡೆಗಳೆದೆಗಳ ಮೆಟ್ಟಿನಿಂತವರು,

ಸ್ನೇಹವನು ಬಯಸಿರಲು ಅಪ್ಪಿಕೊಂಡವರು!

ಹಿಮಪರ್ವತಗಳೆತ್ತರದ ಗುರಿಯು ಉಂಟು,

ಗಂಗೆಯಾ ಜಲದಂತೆ ಶುದ್ಧಮನವುಂಟು.


ಕಣ್ಣೆದುರೆ ಉಂಟು ಸಾಧಕರ ಸಾಧನೆಯು,

ಮಣ್ಣಿನಲೆ ಉಂಟು ಅವರೆಲ್ಲರಾ ದನಿಯು!

ವಿಂಧ್ಯಾಚಲದಂತೆ ವಿಶ್ವಾಸವದು ಅಚಲ,

ಆಕಾಶದಂತೆ ಅವಕಾಶಗಳು ವಿಪುಲ!


ನಮಗಿತ್ತಿಹಳು ತಾಯಿ ಏಸೊಂದು ಮಮತೆ!

ನಾವೇನು ಕೊಟ್ಟಿಹೆವು ಹಚ್ಚಲಿಕೆ ಹಣತೆ?

ಬನ್ನಿರೀ ಬರೆಯೋಣ ಹೊಸದೊಂದು ಚರಿತೆ,

ಭಾರತಿಯ ಕಥೆಯಾಗೆ ಇನಿದಾದ ಕವಿತೆ!

Saturday, May 27, 2023

ನಿಮ್ಮ ವಯಸ್ಸೆಷ್ಟು?

 ನಿಮ್ಮ ವಯಸ್ಸೆಷ್ಟು? ನಿಮ್ಮ ವಯಸ್ಸೆಷ್ಟು?

ಕೇಳುವವರಿಗೆ ಬಹಳ ಇಂಟರೆಷ್ಟು!

ಈ ಪ್ರಶ್ನೆಯೇ ಸರಿಯಿಲ್ಲ ಇಂತು,

ಇನ್ನು ಅವರಿಗೆ ಉತ್ತರಿಸುವುದೆಂತು?


ಚಿಣ್ಣರ ಒಡನಾಡುತಿರೆ ಒಂದೇ ಒಂದು ವರುಷದವ!

ಕಾರ್ಟೂನು ನೋಡುತಿರೆ ಏಳೇ ಏಳರವ!

ಖುಶಿಯಿಂದ ಕುಣಿಯುತಿರೆ ಹದಿನಾರ ಹರೆಯದವ!

ಸ್ನೇಹಿತರ ಸಂಗವಿರೆ ಇಪ್ಪತ್ತು-ಮೂವತ್ತರ ಹವ!


ಹೂಬನದ ಹಕ್ಕಿ ಚಿಟ್ಟೆಗಳೊಡನಾಡುವಾಗ,

ವಯಸ್ಸಿರಬಹುದು ಅವುಗಳಷ್ಟೇ ಆಗ!

ತಾರಾಚಂದ್ರರ, ನದಿ ಬೆಟ್ಟಗಳ ನಡುವಿರಲು,

ನಾನು ಕಾಲಾತೀತ ಎನಿಸುವುದು, ಅದು ಅಮಲು!


ವಯಸ್ಸಿಗೆ, ಮನಸ್ಸಿಗೆ ಉಂಟೇನು ಸಂಬಂಧ?

ಪ್ರತಿ ಕ್ಷಣ ಬದಲಾಗುವ ಮನಸಿಗಾವ ಬಂಧ?

ದಿನಗಳೆಷ್ಟು ಉರುಳಿವೆ ಎನ್ನುವ ಪ್ರಶ್ನೆ ಅಸಂಗತ,

ಹೇಗೆ ಬದುಕಿದೆ ಎನ್ನುವುದು ಅನುದಿನವೂ ಪ್ರಸ್ತುತ!


 

Friday, April 21, 2023

ನವ ವಸಂತ

ಬಂದ ಬಂದ ನವ ವಸಂತ

ತಂದ ತಂದ ಹೊಸ ಪ್ರಪಂಚ


ಹಸಿರಿನ ಸೀರೆಯ ಉಟ್ಟ ವಸುಂಧರೆ

ಉಸಿರಿನ ಸುಗಂಧ ಚುಂಬಕವಾಗಿರೆ

ಫಲಗಳ ಬುತ್ತಿಯ ಆರಿಸಿ ತಂದಿರೆ

ಒಲವಿನ ಉಡುಗೊರೆಯಾಗಿ ನಿಂದಿರೆ


ಮಲ್ಲಿಗೆ ಸಂಪಿಗೆ ಗುಲಾಬಿ ಕೇದಿಗೆ 

ಹುಲ್ಲಿನ ಹಸಿರಿನ ಮೆತ್ತನೆ ಹಾಸಿಗೆ

ಮಾಮರ ಕಿತ್ತಳೆ ಅಂಜೂರ ಹಲಸು

ಅಂದ ಸುಗಂಧ ಸವಿರುಚಿ ಸೊಗಸು


ಬಣ್ಣದ ದಿರುಸನು ಧರಿಸಿದ ಲಲನೆ

ಚಿನ್ನದ ಒಡವೆ ಮಿಂಚಿದೆ ಸುಮ್ಮನೆ

ನೊಸಲಿಗೆ ತಿಲಕ ಕಣ್ಣಲಿ ಹೊಳಪು

ನಸುನಗೆ ವದನ ಗುಲಾಬಿ ಕದಪು


ಅಂದದ ತೋರಣ ರಂಗಿನ ಚಿತ್ತಾರ

ಬಂಧುಗಳ ಮಿಲನಕೆ ಹರುಷದ ಸಾಕಾರ

ಎದೆಯಲಿ ಹರುಷ ಗುಡಿಯಲಿ ಚರಪು

ಯುಗಾದಿ ತಂದಿಹ ಹೊಸತನ ಹುರುಪು!



ಸಂಕ್ರಾಂತಿಯ ಸಂಭ್ರಮ

ಉದಯ ರವಿಯ ಪ್ರಥಮ ಕಿರಣಕೆ, 

ಬಡಗಣದಲ್ಲಿ ಬೆಳಕಾಗಿದೆ. 

ತೂಗಿ ತೊನೆಯುವ ತುಂಬು ತೆನೆಗಳು, 

ಬಕುತಿಯಲಿ ತಲೆಬಾಗಿವೆ. 


ರೈತಜನರ ಕನಸು ಇಂದು, 

ಕಣಜದಲಿ ನನಸಾಗಿದೆ. 

ತಮ್ಮ ಹಕ್ಕಿನ ಕಾಳುಕಡ್ಡಿಗೆ, 

ಹಕ್ಕಿಗಳು ಹಾರಾಡಿವೆ. 


ಬಣ್ಣ ಬಣ್ಣದ ಬಟ್ಟೆಗಳಲಿ, 

ಹೆಂಗೆಳೆಯರು ನಲಿದಾಡಿರೆ, 

ರಂಗು ರಂಗಿನ ರಂಗವಲ್ಲಿಯು, 

ಅಂಗಳದಲಿ ಕುಣಿದಾಡಿದೆ. 


ಎಳ್ಳು, ಬೆಲ್ಲ, ಕೊಬ್ಬರಿ, ಕಡಲೆಯ, 

ಹಾಗೆ ಮಂದಿಯು ಬೆರೆತಿರೆ, 

ಎಳ್ಳು ಬೀರುವ ಒಳ್ಳೆ ಕಾರ್ಯಕೆ, 

ಗೆಳೆತನಗಳು ದೃಢವಾಗಿವೆ. 


ಸುಗ್ಗಿಕಾಲದ ಹುಗ್ಗಿ ರುಚಿಯನು, 

ಹಿಗ್ಗಿ ಹೀರಿದೆ ನಾಲಿಗೆ. 

ಬಾಗಿ ನಮಿಸುವ ಭಾನುದೇವಗೆ, 

ಸುಗ್ಗಿ ತಂದಿಹ ಬಾಳಿಗೆ. 


ಗವಿಗಂಗಾಧರೇಶ್ವರ ಸ್ವಾಮಿಗೆ, 

ಸೂರ್ಯ ರಶ್ಮಿಯ ಅಭ್ಯಂಜನ.

ಬಕುತರೆಲ್ಲರ ಪಾಲಿಗಿಂದು,  

ಆನಂದಾತಿರೇಕದ ಮಜ್ಜನ! 



ಅಮೃತದ ಧಾರೆ

ಮಾತೆಯೆ ನಿನ್ನಯ ಪ್ರೀತಿಯ ಸುಧೆಯು

ಹರಿಯುವ ಸಿಹಿನೀರ ನದಿಝರಿ ತೊರೆಯು

ಸವಿಯಲು ನೀಡಿದೆ ಮಧುಮಯ ಫಲವ

ತುಂಬಿಸಿ ತಂದಿಹೆ ನಿನ್ನೆದೆ ಒಲವ


ಕಾಲಕೆ ಸುರಿಸುವೆ ಅಮೃತದ ಧಾರೆ

ಕೀಲಕವಾಗಿದೆ ಫಸಲನು ಕೋರೆ

ನೀಡಿದೆ ಹಸುರಿನ ಮೆತ್ತನೆ ತಲ್ಪ

ಸುಮಗಳ ಸುಗಂಧ ಮತ್ತಿಗೆ ಸ್ವಲ್ಪ


ಬೀಸಿದೆ ತಂಗಾಳಿ ನಿನ್ನಯ ಸೆರಗು

ಗಾಳಿಗೆ ಹೋಯಿತು ಕಾಡುವ ಕೊರಗು

ತಿರುಕನೊ ಧನಿಕನೊ ಭೇದವೆ ಇಲ್ಲ

ಸರಿಸರಿ ಹಂಚಿಕೆ ಮಡಿಲಿನ ಬೆಲ್ಲ


ಮನುಜನ ಆಸೆಗೆ ಮಿತಿಯೇ ಇಲ್ಲ

ಬೇಲಿಯ ಹಾಕಿದ ತನಗೇ ಎಲ್ಲ

ಚಿನ್ನದ ಮೊಟ್ಟೆಯ ಇಡುವಾ ಒಡಲು

ಕನ್ನವ ಹಾಕಿದ ಒಮ್ಮೆಲೆ ಪಡೆಯಲು


ರಕುತವ ಕಾರಿದೆ ನಿನ್ನಯ ಒಡಲು

ಕಲುಷಿತಗೊಂಡಿದೆ ಪರಿಸರ ಕಡಲು

ಮಣಿಸುತ ನಮ್ಮಯ ತಪ್ಪನು ನೀಗು

ಕ್ಷಮಿಸುತ ನಮ್ಮನು ಒಯ್ಯುತ ಸಾಗು!



Thursday, April 20, 2023

ಕಾವ್ಯಝರಿ

ಆದಿಪೂಜಿತ ಏಕದಂತನೆ ಗಣನಾಯಕ,

ಪಾದ ಮುಟ್ಟುವೆ ಹರಸು ಎನ್ನ ವಿನಾಯಕ.

ವೇದವ್ಯಾಸರ ದಿವ್ಯ ನುಡಿಗೆ ಭವ್ಯ ಲೇಖಕ,

ಮೇಧಾವಿಗಳು ದಾಖಲಿಸಿದ ಶ್ರೇಷ್ಠ ಕಥಾನಕ!


ಚಾಮರಕರ್ಣ ಇದೆಯಲ್ಲ ಕಥೆಯ ಕೇಳಲು,

ಧೀಮಂತ ಮೆದುಳಿಹುದು ಮನನ ಮಾಡಲು,

ಪ್ರೇಮವಿದೆ ಮನದಲ್ಲಿ ಕೃತಿಯ ನೀಡಲು,

ದಾಮೋದರನ ನೀತಿಯನು ನಮಗೆ ಸಾರಲು!


ಝರಿಯಂತೆ ನುಡಿಯುತಿರೆ ವೇದವ್ಯಾಸರು,

ಬರೆಯುತಿಹರು ನದಿಯಂತೆ ಆದಿಪೂಜ್ಯರು.

ಸರಸ್ವತಿಯ ದಂಡೆಯಲಿ ಇವರೀರ್ವರು,

ಪರಮಾತ್ಮನ ನುಡಿಗಳನು ನಮಗೆ ಇತ್ತರು!


ಕದನಗಳ ಬಾಳಿನಲ್ಲಿ ಜೀವನವು ದುರ್ಭರ,

ಇದೆ ಇಲ್ಲಿ ಸಮಸ್ಯೆಗಳ ಸಂಪೂರ್ಣ ವಿವರ.

ಬದುಕಿನಲಿ ತಲುಪಲು ನೆಮ್ಮದಿಯ ಆಗರ,

ಕದವ ತೆರೆ ಭಾರತದ ಪಡೆಯೆ ಉತ್ತರ!



ನಮ್ಮ ಪ್ರೀತಿಯ ಭಾರತ

ಭಾರತ ನಮ್ಮಯ ಪ್ರೀತಿಯ ಮಾತೆ,

ತೆರೆಯವ ದೇಶಬಕುತಿಯ ಖಾತೆ!

ಹಾರಿಸು ಮೇಲೆ ತ್ರಿವರ್ಣ ಪತಾಕೆ,

ತೋರಿಸು ಪ್ರೀತಿಯ ಶಂಕೆಯು ಏಕೆ!


ಕೋರದೆ ಕೊಟ್ಟಿದೆ ಉತ್ತಮ ಸಂಸ್ಕಾರ,

ತೋರುತ ಬೆಳಕಿನ ಅಧ್ಯಾತ್ಮದಾಕರ!

ಹಾರುವ ಮೇಲೆ ಸುಂದರ ಅವಕಾಶ,

ಬೀರುವ ಶಾಂತಿ ಸ್ನೇಹದ ಸಂದೇಶ!


ಭಿನ್ನತೆ ತೊರೆದು ಹಾಕುವ ನಡಿಗೆ,

ಉನ್ನತ ಗುರಿಯನು ಮುಟ್ಟುವ ಕಡೆಗೆ!

ಅನ್ನದ ಕೊರತೆ ಇಲ್ಲದೆ ಹೋಗಲಿ,

ಚಿನ್ನದ ಆಸೆ ಮರತೇ ಹೋಗಲಿ!


ಬಲಿದಾನಗಳ ಮರೆಯದೆ ನಡೆಯಿರಿ,

ಕಲಿಗಳ ನೆನೆಯುತ ಸ್ಫೂರ್ತಿಯ ಪಡೆಯಿರಿ!

ಕಲೆಗಳ ಬೆಳೆಸುತ ಆನಂದ ಹೊಂದಿರಿ,

ಎಲೆಗಳ ಹಾಗೆ ಜೊತೆಯಲಿ ಬದುಕಿರಿ!


ಅಮೃತೋತ್ಸವದ ಸುಂದರ ಘಳಿಗೆ,

ಅಮಿತೋತ್ಸಾಹದ ಬಿರುನಡಿಗೆ!

ಗಮನದಿ ಹಾಕುವ ಪ್ರಗತಿಯ ನಡಿಗೆ,

ಕ್ಷಮತೆಯ ಸದೃಢ ಶಾಂತಿಯ ಕಡೆಗೆ!