Friday, April 21, 2023

ಸಂಕ್ರಾಂತಿಯ ಸಂಭ್ರಮ

ಉದಯ ರವಿಯ ಪ್ರಥಮ ಕಿರಣಕೆ, 

ಬಡಗಣದಲ್ಲಿ ಬೆಳಕಾಗಿದೆ. 

ತೂಗಿ ತೊನೆಯುವ ತುಂಬು ತೆನೆಗಳು, 

ಬಕುತಿಯಲಿ ತಲೆಬಾಗಿವೆ. 


ರೈತಜನರ ಕನಸು ಇಂದು, 

ಕಣಜದಲಿ ನನಸಾಗಿದೆ. 

ತಮ್ಮ ಹಕ್ಕಿನ ಕಾಳುಕಡ್ಡಿಗೆ, 

ಹಕ್ಕಿಗಳು ಹಾರಾಡಿವೆ. 


ಬಣ್ಣ ಬಣ್ಣದ ಬಟ್ಟೆಗಳಲಿ, 

ಹೆಂಗೆಳೆಯರು ನಲಿದಾಡಿರೆ, 

ರಂಗು ರಂಗಿನ ರಂಗವಲ್ಲಿಯು, 

ಅಂಗಳದಲಿ ಕುಣಿದಾಡಿದೆ. 


ಎಳ್ಳು, ಬೆಲ್ಲ, ಕೊಬ್ಬರಿ, ಕಡಲೆಯ, 

ಹಾಗೆ ಮಂದಿಯು ಬೆರೆತಿರೆ, 

ಎಳ್ಳು ಬೀರುವ ಒಳ್ಳೆ ಕಾರ್ಯಕೆ, 

ಗೆಳೆತನಗಳು ದೃಢವಾಗಿವೆ. 


ಸುಗ್ಗಿಕಾಲದ ಹುಗ್ಗಿ ರುಚಿಯನು, 

ಹಿಗ್ಗಿ ಹೀರಿದೆ ನಾಲಿಗೆ. 

ಬಾಗಿ ನಮಿಸುವ ಭಾನುದೇವಗೆ, 

ಸುಗ್ಗಿ ತಂದಿಹ ಬಾಳಿಗೆ. 


ಗವಿಗಂಗಾಧರೇಶ್ವರ ಸ್ವಾಮಿಗೆ, 

ಸೂರ್ಯ ರಶ್ಮಿಯ ಅಭ್ಯಂಜನ.

ಬಕುತರೆಲ್ಲರ ಪಾಲಿಗಿಂದು,  

ಆನಂದಾತಿರೇಕದ ಮಜ್ಜನ! 



No comments: