Thursday, April 20, 2023

ಕಾವ್ಯಝರಿ

ಆದಿಪೂಜಿತ ಏಕದಂತನೆ ಗಣನಾಯಕ,

ಪಾದ ಮುಟ್ಟುವೆ ಹರಸು ಎನ್ನ ವಿನಾಯಕ.

ವೇದವ್ಯಾಸರ ದಿವ್ಯ ನುಡಿಗೆ ಭವ್ಯ ಲೇಖಕ,

ಮೇಧಾವಿಗಳು ದಾಖಲಿಸಿದ ಶ್ರೇಷ್ಠ ಕಥಾನಕ!


ಚಾಮರಕರ್ಣ ಇದೆಯಲ್ಲ ಕಥೆಯ ಕೇಳಲು,

ಧೀಮಂತ ಮೆದುಳಿಹುದು ಮನನ ಮಾಡಲು,

ಪ್ರೇಮವಿದೆ ಮನದಲ್ಲಿ ಕೃತಿಯ ನೀಡಲು,

ದಾಮೋದರನ ನೀತಿಯನು ನಮಗೆ ಸಾರಲು!


ಝರಿಯಂತೆ ನುಡಿಯುತಿರೆ ವೇದವ್ಯಾಸರು,

ಬರೆಯುತಿಹರು ನದಿಯಂತೆ ಆದಿಪೂಜ್ಯರು.

ಸರಸ್ವತಿಯ ದಂಡೆಯಲಿ ಇವರೀರ್ವರು,

ಪರಮಾತ್ಮನ ನುಡಿಗಳನು ನಮಗೆ ಇತ್ತರು!


ಕದನಗಳ ಬಾಳಿನಲ್ಲಿ ಜೀವನವು ದುರ್ಭರ,

ಇದೆ ಇಲ್ಲಿ ಸಮಸ್ಯೆಗಳ ಸಂಪೂರ್ಣ ವಿವರ.

ಬದುಕಿನಲಿ ತಲುಪಲು ನೆಮ್ಮದಿಯ ಆಗರ,

ಕದವ ತೆರೆ ಭಾರತದ ಪಡೆಯೆ ಉತ್ತರ!



No comments: