Wednesday, July 30, 2025

ಕುಸುಮ ಷಟ್ಪದಿ (ಗೀತೋಪದೇಶ)

ಗೀತೆಯನು ನೀಡಿರುವ
ದಾತನವ ಪರಮಾತ್ಮ
ನೀತಿಯನು ಬೋಧಿಸಿಹ ಬುವಿಯ ಧರ್ಮ |
ಆತುರದ ಮನಗಳಿಗೆ
ಕಾತುರದ ಸಮಯಕ್ಕೆ
ನಾಥ ನೀಡಿದ ನಮಗೆ ಬದುಕೊ ಮಾರ್ಗ ||

ಯುದ್ಧ ಭೂಮಿಯ ಬದುಕು
ಗೆದ್ದು ಬಾಯೆಂದಿಹನು
ಬುದ್ಧಿ ಮಾತನು ಹೇಳಿ ಭಗವಂತನು |
ಮದ್ದು ಗುಂಡುಗಳಿಲ್ಲ
ಯುದ್ಧ ಮನದಾಳದಲಿ
ಬುದ್ಧಿ ನಿಗ್ರಹಿಸಲೀ ಪೆದ್ದು ಮನವ ||

ಕೆಲಸವನು ಮಾಡುತಿರು
ಫಲ ಕೊಡುವ ಪಾತ್ರನಿರೆ
ಕೆಲಸ ಮಾಡದೆ ಬೇರೆ ದಾರಿಯಿಲ್ಲ |
ಕೆಲವರಿರೆ ಸಾತ್ವಿಕರು
ಕೆಲ ರಾಜ ತಾಮಸಿಕ
ಬೆಳೆಸು ಸಾತ್ವಿಕತೆ ಮುಕ್ತಿಯನು ಪಡೆಯೆ ||

ಕಾಯವಿದು ನಶ್ವರವು
ಸಾಯುದಿಹ ಆತ್ಮ ನೀ
ಕಾಯುವುದು ನಿನಗೆ ಮತ್ತೊಂದು ಕಾಯ |
ಮಾಯೆಯಾ ಪರದೆಯನು
ಹಾಯಾಗಿ ತೊಲಗಿಸುವ
ಜೀಯ ನಮಿಸುವೆ ನಿನಗೆ ಪರಮಾತ್ಮನೆ ||

Monday, June 30, 2025

ಸೀತಾಯಣ

ವೇದವತಿಯೇ ಭೂಮಿ ಸುತೆಯೇ
ಆದೆ ಜಾನಕಿ ಜನಕ ಪುತ್ರಿಯೆ
ಧಾಮ ಮಿಥಿಲೆಯು ನಾಮ ಮೈಥಿಲಿ
ತಂಗಿಯರ ಅಭಿಮಾನ ಪುತ್ತಳಿ

ಬಿಲ್ಲು ಹರನದು ಮುರಿದು ರಾಮನು
ಎಲ್ಲ ರಾಜರ ಸೊಲ್ಲ ತಡೆದನು
ವರಿಸಿ ಸೀತೆಯ ಹೃದಯ ಗೆಳತಿಯ
ತಂದನೂರಿಗೆ ಮನದ ಒಡತಿಯ

ಹೊರಟು ನಿಂತಳು ವನದ ವಾಸಕೆ
ತೊರೆದು ಅರಮನೆ ದೀರ್ಘ ಕಾಲಕೆ
ಜಿಂಕೆ ಕಂಡಳು ಆಸೆ ಪಟ್ಟಳು
ಬಂದ ರಾವಣ ಬಂದಿಯಾದಳು

ರಾಮ ಭದ್ರೆಯ ಹುಡುಕಿ ಬಂದನು
ಹನುಮ ಸೀತೆಯ ಜಾಡು ಕಂಡನು
ಲಂಕೆ ಸುಟ್ಟಿತು ಯುದ್ಧ ನಡೆಯಿತು
ಅಸುರ ರಾಜನ ಎದೆಯು ಸೀಳಿತು

ಅಗ್ನಿ ಒರೆತವ ಗೆದ್ದು ನಿಂತಳು
ಮತ್ತೆ ಕಾಡಿನ ಪಾಲು ಆದಳು
ಅವಳಿ ಪುತ್ರರ ತಾಯಿಯಾದಳು
ಕೊನೆಗೆ ತಾಯಿಯ ಮಡಿಲ ಪಡೆದಳು

Saturday, June 21, 2025

ವಂದಿಪೆನು ಶಾರದೆಗೆ

ವಂದಿಸುವೆ ಪೊಡಮಡುವೆ ತಾಯೆ ಶಾರದೆಯೆ

ಕಂದ ನಿನ್ನವನು ನಾ ಸಲಹಿ ಎನ್ನ ಕಾಯೆ

ಅಕ್ಕರದ ಅಕ್ಕರೆಯ ಅರಿವ ಎನಗೆ ನೀಡೆ

ಮಿಕ್ಕಿರುವ ಬದುಕಿಗೆ ಬೆಳಕ ಹಾಡು ಹಾಡೆ


ಪುಸ್ತಕದಲಿ ದೇಗುಲವ ತೋರಿದೆ ನನಗೆ

ಮಸ್ತಕದ ದೇಗುಲದಿ ಸದಾ ಪೂಜೆ ನಿನಗೆ

ಶ್ವೇತವಸ್ತ್ರದ ರಾಣಿ ಹರಸು ವೀಣಾ ಪಾಣಿ

ಜ್ಯೋತಿ ಬೆಳಗುವೆ ನಿನಗೆ ಸ್ವೀಕರಿಸು ವಾಣಿ


ಮೀಯಿಸು ನನ್ನನ್ನು ಜ್ಞಾನದಾ ಜಲದಲ್ಲಿ

ತೋಯಿಸು ಮತಿಯನ್ನು ಕಲಿವ ಆಸೆಯಲಿ

ಕಲಿಕೆಯೇ ಮೆಟ್ಟಿಲು ನಿನ್ನ ತಾಲಪುವ ದಾರಿ

ಕಲಿಯುವೆನು ದಿನನಿತ್ಯ ನಿನ್ನ ಪದಾದ ಕೋರಿ

ಚೆಲುವೆಯರು

ತುರುಬಲಿ ತಾರೆಗಳ ಬಂಧಿಸಿ,

ಚಂದ್ರ ತಿಲಕವ ಧರಿಸಿ,

ಕಪ್ಪು ಸೀರೆಯನುಟ್ಟ ಅಂದ,

ಚೆಲುವೆ ನೀ ಬಂದೆ ಎಲ್ಲಿಂದ?


ಯಾವ ಲೋಕದ ಚೆಲುವೆ ನೀನು?

ದಾರಿ ತಪ್ಪಿ ಬಂದೆಯೇನು?

ನನ್ನ ಕಣ್ಣಿಗೆ ಹಬ್ಬ ತಂದು,

ಇದಿರು ನಿಂದಿರುವೆ ಇಂದು!


ಕನಸು ಮೂಡಿತೊ ಹೇಗೆ?

ನಾ ಕಣ್ಣು ಮುಚ್ಚಿದೆ ಹಾಗೆ.

ಕಣ್ಣು ತೆರೆದೆ ನಾ ಸುಮ್ಮನೆ,

ಅಚ್ಚರಿಯೇ ಕಣ್ಣೆದುರು ಗಮ್ಮನೆ!


ಮೇಘ ಮಲ್ಲೆಯನೇರಿಸಿ,

ಸೂರ್ಯ ತಿಲಕವ ಧರಿಸಿ,

ಬೆಳಕ ಸೀರೆಯನುಟ್ಟ ತರಳೆ,

ರಮಣಿ ನೀ ಯಾರು ಹೇಳೆ?


ರಾತ್ರಿ ಕಂಡಾ ರಮಣಿ ಆಗ,

ಹೇಳದೇ ಹೋದಳೆಲ್ಲಿಗೆ ಈಗ?

ಈಗ ಕಂಡ ಈ ಚೆಂದುಳ್ಳಿ ಚೆಲುವೆ,

ಬಂದಳೆಲ್ಲಿಂದ ಹೇಳು ಮನವೆ?


ಸೋನೆ

ಸುರಿಯುತಿದೆ ಸೋನೆ ಮುಂಗಾರು ಮಳೆಯು

ಹರಿವ ನದಿ ತುಂಬಿ ಬಂದು

ಭರದಲ್ಲಿ ಸಾಗುತಿದೆ ಸಾಗರದೆಡೆ

ಬೆರೆವ ಭರದಲ್ಲಿ ಹರಿದು


ಜೀಮೂತ ಜೀಕಿ ಸುರಿಸುತಿದೆ ಮಳೆಯ

ಆಮೋದ ತಾಕಿ ಧರೆಯ

ಕಾಮವೋ ಮುಗ್ಧ ಪ್ರೇಮವೋ ಕಾಣೆ

ಸೋಮರಸದಂಥ ಗೆಳೆಯ


ಹಸಿರುಕ್ಕಿ ನಲಿವ ಸಂತಸವು ಧರೆಗೆ

ಕಸವರದ ಬಿಸಿಲು ತಾನ

ಹೊಸೆಯುತಿದೆ ಗಾನ ಬೆಸೆಯುತ್ತ ತಾಳ

ಹೊಸತಾದ ಜೀವ ಗಾನ


ಬಿಸಿಬಿಸಿಯ ತಿನಿಸ ಬಯಸುತಿದೆ ಮನವು

ಬಿಸಿ ಪೇಯದೊಡನೆ ಜೊತೆಗೆ

ಮುಸಿನಗುತ ಮಡದಿ ತಿನಿಸುಗಳ ತಂದು

ಪಿಸುಮಾತ ನುಡಿಯೆ ಒಸಗೆ


Saturday, June 14, 2025

ಮಧ್ಯಮಾವರ್ತ

ಪ್ರಕಾರ: ಮಧ್ಯಮಾವರ್ತ

೫ ೩ ೫ ೩
೫ ೩ ೩
೫ ೩ ೫ ೩
೫ ೩ ೩

ಆದಿಪ್ರಾಸ ಕಡ್ಡಾಯ
ಸಾಲುಗಳ ಮಧ್ಯದಲ್ಲಿ ಸ್ವರಾಕ್ಷರ ಬರುವಂತಿಲ್ಲ.
೨ ಮತ್ತು ೪ ಸಾಲುಗಳಲ್ಲಿ ಅಂತ್ಯಪ್ರಾಸವಿರಬೇಕು
  
ವಿಷಯ: ಮುಂಗಾರು

ಶೀರ್ಷಿಕೆ: ಸೋನೆ

ಸುರಿಯುತಿದೆ ಸೋನೆ ಮುಂಗಾರು ಮಳೆಯು
ಹರಿವ ನದಿ ತುಂಬಿ ಬಂದು
ಭರದಲ್ಲಿ ಸಾಗುತಿದೆ ಸಾಗರದೆಡೆ
ಬೆರೆವ ಭರದಲ್ಲಿ ಹರಿದು

ಜೀಮೂತ ಜೀಕಿ ಸುರಿಸುತಿದೆ ಮಳೆಯ
ಆಮೋದ ತಾಕಿ ಧರೆಯ
ಕಾಮವೋ ಮುಗ್ಧ ಪ್ರೇಮವೋ ಕಾಣೆ
ಸೋಮರಸದಂಥ ಗೆಳೆಯ

ಹಸಿರುಕ್ಕಿ ನಲಿವ ಸಂತಸವು ಧರೆಗೆ
ಕಸವರದ ಬಿಸಿಲು ತಾನ
ಹೊಸೆಯುತಿದೆ ಗಾನ ಬೆಸೆಯುತ್ತ ತಾಳ
ಹೊಸತಾದ ಜೀವ ಗಾನ

ಬಿಸಿಬಿಸಿಯ ತಿನಿಸ ಬಯಸುತಿದೆ ಮನವು
ಬಿಸಿ ಪೇಯದೊಡನೆ ಜೊತೆಗೆ
ಮುಸಿನಗುತ ಮಡದಿ ತಿನಿಸುಗಳ ತಂದು
ಪಿಸುಮಾತ ನುಡಿಯೆ ಒಸಗೆ

ತ್ರಿಪದಿಗಳು

ಪ್ರಕಾರ: ಅಂಶ ತ್ರಿಪದಿ

ರೂಪ: ಒಗಟು

ಮಾವಿನ ತಳಿರಿದೆ ಬೇವಿನ ಎಸಳಿದೆ

ಮಾವಿನ ಕಾಯಿ ಬೆಲ್ಲದ | ಸೊಗಡಿದೆ

ಯಾವುದು ಹೇಳು ಈ ಹಬ್ಬ? ||


ಪ್ರಕಾರ: ಮಾತ್ರಾಗಣ ತ್ರಿಪದಿ

ರೂಪ: ಒಗಟು

ನೀರಲ್ಲಿ ಹುಟ್ಟುವುದು ನೀರಲ್ಲಿ ಬೆಳೆಯುವುದು

ನೀರಲ್ಲಿ ಐಕ್ಯವಾಗುವುದು | ತಿಳಿದಿರಲು 

ಯಾರಲ್ಲಿ ಹೇಳಿ ಉತ್ತರವ? ||



ಪ್ರಕಾರ: ಮಾತ್ರಾಗಣ_ತ್ರಿಪದಿ
ದತ್ತ ಪದ: ಕಾಮನಬಿಲ್ಲು

ಆಡುತಿಹ ರವಿಯಿಂದು ಮೋಡಗಳ ಹನಿಗಳಲಿ
ಮೂಡಿಹುದು ಅಲ್ಲಿ ಕಾಮನಾ | ಬಿಲ್ಲೊಂದು
ನೋಡುತಿಹ ಮುದದಿ ಕೃಷ್ಣಕವಿ ||


ಪ್ರಕಾರ : ವಿಚಿತ್ರ ತ್ರಿಪದಿ (ಅಂಶಗಣ)
ವಿಷಯ : ಸಿಂದೂರ
 
ಸಿಂದೂರ ಘರ್ಜಿಸಿತು ಬಂದೂಕ ಸಿಡಿಸಿತು 
ಅಂಧರಾ ಗೋಳು ರಕ್ತದಾ | ಮಡುವಾಯ್ತು 
ತಂದಿತು ಕರ್ಮಗಳ ಫಸಲು ||