Friday, March 6, 2020

ಸಪ್ತಾಶ್ವನ ಸಂದಿಗ್ಧತೆ


(ಜ್ಯೋತಿಷ್ಯ ತಿಳಿದವರಿಗಾಗಿ, ಸಂಕ್ರಾಂತಿ 2020)

ಇಳೆಯು ನೋಡು ನಲಿಯುತಿಹಳು,
ಬೆಳೆಯ ಕೊಟ್ಟು ಹರಸುತಿಹಳು,
ನಿನ್ನ ಬೆಳಕಿನ ವರವ ಪಡೆದು,
ತನ್ನ ಮಕ್ಕಳ ಹಸಿವ ತೊಡೆದು.

ಮಿಹಿರ ಹೇಳು ಏಕೀ ತಳಮಳ,
ಎದೆಯ ಗೂಡಲಿ ಏನು ಕಳವಳ?
ಮಗನ ಮನೆಯಲಿ ಇಟ್ಟೆ ಹೆಜ್ಜೆಯ,
ಸುತನ ನೋಡುವ ಇಷ್ಟ, ಆಶಯ.

ಶನಿಯ ಮುನಿಸಿನ ನೆನಪು ಕಾಡಿತೆ?
ಮತ್ತೆ ಜಗಳದ ಭಯವು ಮೂಡಿತೆ?
ಬದುಕಿನಂಚಿನ ದಿನವು ಬಾರದೆ,
ತಂದೆ ಮಕ್ಕಳ ಋಣವು ಮುಗಿವುದೆ?

ಪುತ್ರಮೋಹವ ತೊರೆಯಲಾರೆ,
ಅವನ ಕೋಪವ ಸಹಿಸಲಾರೆ.
ನಿಮ್ಮ ಘರ್ಷಣೆ ನಮಗೆ ತೊಂದರೆ,
ಮುನಿಸು ತೊರೆದು ನಿಲ್ಲಿ ಆದರೆ.

ಮಕರ ಗೃಹದಲಿ ನಿಮ್ಮ ಭೇಟಿ,
ನಿಮ್ಮ ಶಕ್ತಿಗೆ ಯಾರು ಸಾಟಿ?
ಇರಲಿ ಸಂಯಮ ಇಬ್ಬರಲ್ಲಿ,
ಕರುಣೆ ಇರಲಿ ಇತರರಲ್ಲಿ.

ಗುರುಕುಲದಲಿ ಕುವರನಿರುವ,
ಹತ್ತೇ ದಿನದಲಿ ಬಂದು ಸೇರುವ.
ಎದೆಗೆ ಎದೆಯ ಕೊಟ್ಟು ಅಪ್ಪಿಕೋ,
ಮನದ ಮುನಿಸು ಬಿಟ್ಟು ಒಪ್ಪಿಕೊ!


No comments: