Showing posts with label ಸಂಕ್ರಾಂತಿ. Show all posts
Showing posts with label ಸಂಕ್ರಾಂತಿ. Show all posts

Monday, August 15, 2022

ಮುಕ್ತಕಗಳು - ೩೯

ಬಿರಿದ ಮಲ್ಲಿಗೆಯ ಕಂಪನು ತಡೆಯಲಾದೀತೆ

ಸುರಿವ ಮಳೆಹನಿಯ ಮರಳಿಸಲು ಆದೀತೆ |

ಜರಿದು ನುಡಿದಿಹ ಮಾತ ಹಿಂಪಡೆಯಲಾದೀತೆ

ಅರಿತು ನುಡಿ ಎಲ್ಲರಲಿ ಪರಮಾತ್ಮನೆ ||೧೯೧||


ಮರದ ಹಣ್ಣುಗಳೆಲ್ಲ ಪರರಿಗೋಸುಗವಾಗಿ

ಝರಿಯ ನೀರೆಲ್ಲ ದಾಹವನು ತೀರಿಸಲು |

ಪರರಿಗೇನನು ನೀಡಿರುವೆ ನಿನ್ನದೆಂಬುವುದ

ಪರಶಿವನು ಕೇಳುತಿಹ ~ ಪರಮಾತ್ಮನೆ ||೧೯೨||


ತೂಗಿರಲು ಪೈರುಗಳು, ಬಂತದೋ ಸಂಕ್ರಾಂತಿ

ಕೂಗಿರಲು ಕೋಗಿಲೆಯು, ಬಂತಲ್ಲ ಚೈತ್ರ |

ಬಾಗಿರಲು ದೈವಕ್ಕೆ, ಕಾಣವುದು ಸರಿದಾರಿ

ಮಾಗುವುದು ಬುದ್ಧಿ ಮನ ಪರಮಾತ್ಮನೆ ||೧೯೩||


ಅಡಿಗಡಿಗೆ ತೋರುವುದು ಪರರ ಲೋಪಗಳೆಮಗೆ

ಕಡೆಗಣಿಸುತಲಿ ನಮ್ಮ ಲೋಪಗಳ ಮನವು |

ಬಿಡದಿರಲು ಈ ಚಾಳಿ ಅತಿ ಶೀಘ್ರದಲ್ಲಿಯೇ

ತೊಡಕಾಗು ವುದುಬಾಳು ~ ಪರಮಾತ್ಮನೆ ||೧೯೪||


ಜೀವತೊರೆದವರ ಅಟ್ಟಕ್ಕೇರಿಸುತ ಹೊಗಳಿ

ಜೀವವಿರುವಾಗ ಮುಖ ಕಿವಿಚುತ್ತ ನಡೆದು |

ಸೋವಿ ಬೂಟಾಟಿಕೆಯ ಮೆರೆದಾಡುತಿಹೆವಲ್ಲ

ಜೀವವಿರೆ ಸವಿಯ ನುಡಿ ~ ಪರಮಾತ್ಮನೆ ||೧೯೫||

Wednesday, January 12, 2022

ಸುಗ್ಗಿಯ ಹಿಗ್ಗು

ಸುಗಿಯ ಕಾಲದ ಹುಗ್ಗಿಯ ಸವಿಯುವೆ,

ಸಗ್ಗದ ಹಿಗ್ಗಿನ ಬುಗ್ಗೆಯ ಹೀರುವೆ!


ಮೊಗ್ಗಿನ ನಗುವನು ಹಿಗ್ಗಿಸಿಬಿಡುವೆ,

ಜಗ್ಗದ ದುಃಖವ ಬಗ್ಗಿಸಿಬಿಡುವೆ!

ನುಗ್ಗುತ ಓಡುತ ಲಗ್ಗೆಯ ಹಾಕುವೆ,

ಒಗ್ಗದ ಮನಗಳ ಒಗ್ಗಿಸಿಕೊಳ್ಳುವೆ!


ಗಲ್ಲದ ಪೆಟ್ಟಿಗೆ ಘಲ್ಲೆನುತಿರಲು,

ಹುಲ್ಲೆಗೆ ತುರುವೆ ಮಲ್ಲಿಗೆ ಹೂವ,

ನಲ್ಲೆಯ ಗಲ್ಲವ ಮೆಲ್ಲಗೆ ಗಿಲ್ಲುತ,

ಎಳ್ಳು ಬೆಲ್ಲವ ಮೆಲ್ಲನೆ ಮೆಲ್ಲುವೆ!


ಹುಬ್ಬಿನ ಬಾಣಕೆ ಎದೆಯನು ಉಬ್ಬಿಸಿ,

ನನ್ನಯ ಗುಬ್ಬಿಯ ತಬ್ಬುತ ಹಿಡಿಯುವೆ!

ಹಬ್ಬದ ದಿನವು ಅಬ್ಬೆಗೆ ನಮಿಸಿ,

ಕಬ್ಬನು ಸವಿದು, ಒಬ್ಬಟ್ಟುಣ್ಣುವೆ!



Saturday, January 2, 2021

ಸಂ ಕ್ರಾಂತಿ

 ಸಂಕ್ರಾಂತಿ ಬರಲಿ, 

ಸಂ ಕ್ರಾಂತಿ ತರಲಿ. 


ನಮ್ಮತನ ಉಳಿಸೋ ಕ್ರಾಂತಿ, 

ಒಮ್ಮತವ ಬೆಳೆಸೋ ಕ್ರಾಂತಿ,

ಹಸಿರ ಕೊಯ್ಲಿನ ಕ್ರಾಂತಿ,

ಹಸಿವ ನೀಗುವ ಕ್ರಾಂತಿ.


ಶುದ್ಧ ಗಾಳಿಯ ಕ್ರಾಂತಿ,

ಶುದ್ಧ ನೀರಿನ ಕ್ರಾಂತಿ,

ಸ್ವಚ್ಛ ಪರಿಸರದ ಕ್ರಾಂತಿ,

ಶುಭ್ರ ಮನಸಿನ ಕ್ರಾಂತಿ.


ಎಳ್ಳು ಬೆಲ್ಲದ ರೀತಿ,

ಸವಿಯ ಸ್ನೇಹದ ಕ್ರಾಂತಿ.

ಕಬ್ಬು ಹಾಲಿನ ರೀತಿ,

ಪ್ರೀತಿ ಹಂಚುವ ಕ್ರಾಂತಿ.



ಕಸವೇ ಇಲ್ಲದ ರೀತಿ,

ಸ್ವಚ್ಛ ಜಗಲಿಯ ಕ್ರಾಂತಿ.

ಕಳಚುವ ಕಹಿಯ ಭ್ರಾಂತಿ,

ಎಲ್ಲರಿಗೂ ಸ್ನೇಹ ಸಂಕ್ರಾಂತಿ!

Friday, March 6, 2020

ಸಪ್ತಾಶ್ವನ ಸಂದಿಗ್ಧತೆ


(ಜ್ಯೋತಿಷ್ಯ ತಿಳಿದವರಿಗಾಗಿ, ಸಂಕ್ರಾಂತಿ 2020)

ಇಳೆಯು ನೋಡು ನಲಿಯುತಿಹಳು,
ಬೆಳೆಯ ಕೊಟ್ಟು ಹರಸುತಿಹಳು,
ನಿನ್ನ ಬೆಳಕಿನ ವರವ ಪಡೆದು,
ತನ್ನ ಮಕ್ಕಳ ಹಸಿವ ತೊಡೆದು.

ಮಿಹಿರ ಹೇಳು ಏಕೀ ತಳಮಳ,
ಎದೆಯ ಗೂಡಲಿ ಏನು ಕಳವಳ?
ಮಗನ ಮನೆಯಲಿ ಇಟ್ಟೆ ಹೆಜ್ಜೆಯ,
ಸುತನ ನೋಡುವ ಇಷ್ಟ, ಆಶಯ.

ಶನಿಯ ಮುನಿಸಿನ ನೆನಪು ಕಾಡಿತೆ?
ಮತ್ತೆ ಜಗಳದ ಭಯವು ಮೂಡಿತೆ?
ಬದುಕಿನಂಚಿನ ದಿನವು ಬಾರದೆ,
ತಂದೆ ಮಕ್ಕಳ ಋಣವು ಮುಗಿವುದೆ?

ಪುತ್ರಮೋಹವ ತೊರೆಯಲಾರೆ,
ಅವನ ಕೋಪವ ಸಹಿಸಲಾರೆ.
ನಿಮ್ಮ ಘರ್ಷಣೆ ನಮಗೆ ತೊಂದರೆ,
ಮುನಿಸು ತೊರೆದು ನಿಲ್ಲಿ ಆದರೆ.

ಮಕರ ಗೃಹದಲಿ ನಿಮ್ಮ ಭೇಟಿ,
ನಿಮ್ಮ ಶಕ್ತಿಗೆ ಯಾರು ಸಾಟಿ?
ಇರಲಿ ಸಂಯಮ ಇಬ್ಬರಲ್ಲಿ,
ಕರುಣೆ ಇರಲಿ ಇತರರಲ್ಲಿ.

ಗುರುಕುಲದಲಿ ಕುವರನಿರುವ,
ಹತ್ತೇ ದಿನದಲಿ ಬಂದು ಸೇರುವ.
ಎದೆಗೆ ಎದೆಯ ಕೊಟ್ಟು ಅಪ್ಪಿಕೋ,
ಮನದ ಮುನಿಸು ಬಿಟ್ಟು ಒಪ್ಪಿಕೊ!