ಹನಿಗವನ:
ಆರು ಸಾಲಿನ ಕವನ. ೧,೨,೪,೫ ಸಾಲುಗಳಲ್ಲಿ ಒಂದೆರಡು ಪದಗಳಿರಬೇಕು. ೩,೬ ಸಾಲುಗಳಲ್ಲಿ ಎರಡಕ್ಕಿಂತ ಹೆಚ್ಚು ಪದಗಳು ಮತ್ತು ಇವೆರಡರಲ್ಲಿ ಅಂತ್ಯಪ್ರಾಸವಿರಬೇಕು.
೧. ಹೆಣ್ಣು
ಹೆಣ್ಣಲ್ಲ ಅಬಲೆ
ತಾಯಾಕೆ ವಿಮಲೆ
ಜಗಕೆ ಮಡಿಲಿತ್ತ ಸಬಲೆ
ಸಂಕೀರ್ಣ ಈ ಹೆಣ್ಣು
ಅರ್ಥವಾಗದ ಹಣ್ಣು
ಸುಖ ಸಂಸಾರದ ಕಣ್ಣು
೨. ಕನಸು
ಬಣ್ಣಬಣ್ಣದ ಕನಸು
ಕಾಣಲೇನೂ ಶ್ರಮವಿಲ್ಲ
ನನಸಾಗಿಸಲು ಬಾಗುವುದು ಬೆನ್ನು
ಬಣ್ಣಬಣ್ಣದ ಕನಸು
ಕಾಣಲೇನೂ ಖರ್ಚಿಲ್ಲ
ನನಸಾಗಿಸಲು ಕಳೆಯುವುದು ಹೊನ್ನು
೩. ಅಪ್ಪ
ಚುಚ್ಚಿದರು
ಕೆಣಕಿದರು
ಹಲವು ವರ್ಷಗಳ ಕಾಲ
ಉಂಡಿಹರು
ಸಮರದಲಿ
ನಾವು ತೀರಿಸುವ ಸಾಲ
೫. ವಿಷಯ : ಮಳೆ, ಗಾಳಿ, ಕರೆಂಟು
ಮಳೆ ಗಾಳಿಗೂ
ಕರೆಂಟಿಗೂ
ಇದೆ ವೈರತ್ವದ ನಂಟು
ಬಂದಿತೆಂದರೆ
ಮಳೆ ಗಾಳಿ
ಓಡಿ ಹೋಗುವುದು ಕರೆಂಟು
೬. ವಿಷಯ : ಮೌನ
ಬಡಬಡಿಸುವ ಮಾತೇಕೆ,
ಪಿಸುಗುಟ್ಟೊ ನುಡಿಯೇಕೆ,
ನೀರವ ಮೌನದಲಿ ಮಾತಿಲ್ಲವೇನು?
ಕಣ್ಣಿನಾ ಮಿಂಚುಗಳು,
ತುಟಿಗಳಾ ಕೊಂಕುಗಳು,
ಸೆಳೆದು ಮನಕೆ ಮಾತನುಸಿರಿಲ್ಲವೇನು?
1.
ಕೆಂಪಾಯ್ತು ಹಿಮರಾಶಿ
ಕಟುಕರ ಕ್ರೌರ್ಯಕ್ಕೆ
ಮತಾಂಧರ ನಿರ್ದಯ ರಾಕ್ಷಸತ್ವಕ್ಕೆ!
ಉತ್ತರವಿದೆಯೇ ನಮ್ಮಲ್ಲಿ
ಆಕ್ರಮಣದ ಸಂಚಿಗೆ
ಮರೆಯಲಾಗದ ಪಾಠ ಕಲಿಸುವುದಕ್ಕೆ?
2.
ದಯೆಯಿಲ್ಲದ ಧರ್ಮ
ಉಂಟು ಬುವಿಯಲ್ಲಿ
ನಂಬಿದವರು ಆಗಿಹರು ರಾಕ್ಷಸರು
ಹಿಂಸೆಯೇ ವಿಚಾರ
ಕ್ರೌರ್ಯವೇ ಪ್ರಚಾರ
ದಾನವತ್ವಕ್ಕೆ ಮತ್ತೊಂದು ಹೆಸರು!
೮. ವಿಷಯ: ಬಣ್ಣ
ಪ್ರತಿಯೊಬ್ಬರೂ ಒಂದು
ಬಣ್ಣವಿದ್ದಂತೆ, ಅವರ
ವ್ಯಕ್ತಿತ್ವವೇ ಆ ಬಣ್ಣದ ಚೆಲ್ಲು
ಕಲಬೆರಕೆಯಾಗದೆ
ಸುಂದರ ಸಮರಸದಿ
ಕಲೆತಾಗೋಣ ಸುಂದರ ಕಾಮನಬಿಲ್ಲು
೯. ವಿಷಯ: ಯಾತ್ರೆ
ಜೀವನದ ಯಾತ್ರೆಯಿದು
ನಿಲ್ಲದಿಹ ಪಯಣವಿದು
ಸೇರಲು ನಾವು ಕಾಣದಿಹ ಪುಣ್ಯಕ್ಷೇತ್ರ
ಗುರಿಯು ಮರೆಯದೆ ಇರಲಿ
ದಾರಿ ತಪ್ಪದೆ ಇರಲಿ
ತಲುಪುವೆವುಗಮ್ಯವ ಆಗ ಮಾತ್ರ
೧೦. ವಿಷಯ: ರಕ್ಷಾ ಬಂಧನ
ಅಣ್ಣ ತಂಗಿಯರ
ಸವಿ ಬಂಧ
ಅದುವೇ ರಕ್ಷಾ ಬಂಧನ
ಪ್ರತಿ ವರುಷ
ತಂದು ಹರುಷ
ಮನೆಯನಾಗಿಸಿತು ನಂದನ
೧೧. ವಿಷಯ: ಗುರು ಶಿಷ್ಯರು
ನೀಡುತಿದೆ
ಜ್ಞಾನ ವಿಜ್ಞಾನದ ಬಳುವಳಿ
ಕತ್ತಲೆಯ ಕಳೆಯುತ
ನಿರಂತರ
ಅಂಧ ಅಜ್ಞಾನದ ಸವಕಳಿ
ಬರದೇ ಬರದೇ
ಬಹಳ ಸಮಯಕೆ
ಬಂದಿತು ಗಾಢವಾದ ನಿದ್ದೆ
ಪುಟಿದು ಬಂದಿತು
ಕಾಲ್ಚೆಂಡು ಕನಸಿನಲಿ
ಜೋರಾಗಿ ನನ್ನವಳಿಗೆ ಒದ್ದೆ!
ಆ ಮುರುಳಿಯಲಿ
ಊದುತ ಉಸಿರನು
ನಾದ ಹೊರಡಿಸಿದೆ ನೀ ಕೃಷ್ಣ
ತೊಗಲು ಬೊಂಬೆಗಳಲಿ
ತುಂಬುತ ಉಸಿರನು
ಪ್ರಾಣ ನೀಡಿದೆ ನೀನೇ ಕೃಷ್ಣ
No comments:
Post a Comment