Showing posts with label ಅನ್ನ. Show all posts
Showing posts with label ಅನ್ನ. Show all posts

Thursday, August 4, 2022

ಮುಕ್ತಕಗಳು - ೩೨

ಬೇರು ಇದೆಯೆಂದು ನಂಬಲು ಬೇಕು ವಿಧಿಯಿಲ್ಲ

ದೂರದಾ ಮರದಲ್ಲಿ ತುಂಬಿರಲು ಹಣ್ಣು |

ಕಾರಣವು ಇಲ್ಲದೆಯೆ ಏನು ನಡೆಯುವುದಿಲ್ಲಿ?

ಬೇರಿನೊಲು ಕಾರಣವು ~ ಪರಮಾತ್ಮನೆ ||೧೫೬||


ಚೆಲ್ಲದಿರಿ ಅನ್ನವನು ಬಡವನಿಗದೇ ಚಿನ್ನ

ಒಲ್ಲೆಯೆನಿ ಬಡಿಸುವಗೆ ಎಲೆಯತುಂಬೆಲ್ಲ |

ಒಲ್ಲದಿಹ ಹೊಟ್ಟೆಯಲಿ ತುರುಕುವುದು ಚೆಂದವೇ

ಎಲ್ಲೆಯಿಡು ಎಲೆಯಲ್ಲಿ ~ ಪರಮಾತ್ಮನೆ ||೧೫೭||


ಜಗದಲ್ಲಿ ತುಂಬಿಹುದು ಎಲ್ಲೆಡೆಯು ಚೈತನ್ಯ

ಬೊಗಸೆಯನು ತರೆದಿಡುವ ಪ್ರಾಣದಾಕರಕೆ |

ಜಗದೊಡೆಯ ಸೂಸುತಿಹ ವಿಶ್ವಕಿರಣಗಳ, ನಸು

ಹಗಲಿನಲಿ ಅನುಭವಿಸು ~ ಪರಮಾತ್ಮನೆ ||೧೫೮||


ಚಮಚ ತಟ್ಟೆಗಳೆಲ್ಲ ರುಚಿಯ ಸವಿಯುವವೇನು

ಘಮದ ಹೂವಿನ ಗಂಧ ಹೂದಾನಿಗಿಲ್ಲ |

ಗಮನ ಮನನವಿರದೇ ಅಭ್ಯಾಸ ಮಾಡಿದರೆ

ಚಮಚಗಳೆ ಆಗುವೆವು ಪರಮಾತ್ಮನೆ ||೧೫೯||


ಕಲಿತೆ ಕಾಲೇಜಿನಲಿ ನಾನೆಂದು ಬೀಗದಿರು

ಕಲಿತೆಯಾ ಮಾನವತ್ವದ ಮೂಲ ಪಾಠ? |

ಕಲಿಸುವುದೆ ಸನ್ನಡತೆ ಮೂರಕ್ಕರದ ಪದವಿ?

ಕಲೆತು ಬಾಳುವುದ ಕಲಿ ~ ಪರಮಾತ್ಮನೆ ||೧೬೦|| 

Wednesday, January 20, 2021

ಅನ್ನದ ಋಣ

 ಹಸಿದಾಗ ಸಿಗುವ ಆ ಒಂದು ತುತ್ತು,

ಬೆಲೆಯು ಕೇವಲ ಹಸಿದವಗೇ ಗೊತ್ತು!


ದೇಹವ, ಪ್ರಾಣವ, ಜೊತೆಹಿಡಿವ ಗುಟ್ಟು,

ಯಾರಿಗೂ ತಿಳಿಯದು ಅನ್ನಕೆ ಬಿಟ್ಟು!

ಹಸಿದಾಗ ಸಿಗುವ ಒಂದು ಹಿಡಿ ಅನ್ನ,

ಅನ್ನಪೂರ್ಣೇಶ್ವರಿ ಕೊಟ್ಟ ವರದಾನ!


ಪಡೆದವಗೆ ಸಂತೃಪ್ತಿ ನೀಡುವ ದಾನ,

ಅದೊಂದೇ ಅಲ್ಲವೇ ಅನ್ನದಾನ!

ಹೊಟ್ಟೆ ತುಂಬಿದಾಗ ಮೃಷ್ಟಾನ್ನ,

ಬೇಡದ ಮುಷ್ಟಿ ಬೂದಿಗೆ ಸಮಾನ!


ಬೆಲೆಕಟ್ಟಲಾಗದು ಅನ್ನದ ಋಣಕೆ,

ಚಿನ್ನದ ಋಣವೂ ನಿಲ್ಲದು ಸಮಕೆ!

ಮರೆಯಬಾರದೆಂದೂ ಅನ್ನದ ಋಣವ,

ಅದು ಸೇರಿದೆ ದೇಹದ ಕಣಕಣವ!


ಏನೇ ಇತ್ತರೂ ತೀರದೀ ಋಣ,

ತಿನ್ನಲಾಗದೆಂದೂ ಕುಡಿಕೆ ಹಣ!

ಹಸಿದ ಹೊಟ್ಟೆಗೆ ನೀಡಿ ಹಿಡಿ ಅನ್ನ,

ತೀರಿಸು ದೇವರುಣಿಸಿದ ಋಣವನ್ನ!