Showing posts with label ಕರುಣೆ. Show all posts
Showing posts with label ಕರುಣೆ. Show all posts

Sunday, December 25, 2022

ಮುಕ್ತಕಗಳು - ೮೧

ಹೊಸದಿನವು ಅನುದಿನವು ಆರಂಭ ಪ್ರತಿದಿನವು

ಹೊಸತು ಅರುಣೋದಯದ ಹೊಸಕಿರಣ ಮೂಡಿ |

ಪಸರಿಸುವ ಬೆಳಕಲ್ಲಿ ಮಾಡು ಹೊಸ ಆರಂಭ

ಹೆಸರ ಜಪಿಸುತ ಅವನ ~ ಪರಮಾತ್ಮನೆ ||೪೦೧||


ದಾನವಿತ್ತೆಯೊ ಸಾಲವನು ತೀರಿಸಿದೆಯೊ ನೀ

ಕಾಣದಾ ವಿಧಿಯ ಲೆಕ್ಕವ ನೀನು ಅರಿಯೆ |

ಜೇನುಗಳು ಪಡೆಯವವೆ ಕೂಡಿಹಾಕಿದುದೆಲ್ಲ

ವೈನಾಗಿ ದುಡಿದರೂ ~ ಪರಮಾತ್ಮನೆ ||೪೦೨||


ಸೊಕ್ಕು ತೊರೆಯಲೆ ಇಲ್ಲ ಅರಿವು ಮೂಡಲೆ ಇಲ್ಲ

ಉಕ್ಕಿ ಬರುತಿಹ ಅಹಮಿಕೆಯ ತಡೆಯಲಿಲ್ಲ |

ಸಿಕ್ಕುವನು ವಿಂಧ್ಯವನೆ ಮಣಿಸಿದವನಂತೊಬ್ಬ

ಪಕ್ಕೆಯಲಿ ತಿವಿದಂತೆ ~ ಪರಮಾತ್ಮನೆ ||೪೦೩||


ಮರಳ ಮೇಗಡೆ ಬರೆದ ಅಕ್ಷರವು ಶಾಶ್ವತವೆ

ಶರಧಿಯಲೆಗಳ ಆಟ ದಡ ಮುಟ್ಟುವನಕ |

ಮರೆಯಾಗು ಮೊದಲು ನಿನ ಹೆಸರು ಕೆತ್ತಿದಮೇಲೆ

ಪುರಜನರ ಎದೆಮೇಲೆ ~ ಪರಮಾತ್ಮನೆ ||೪೦೪||


ಕರುಣೆಯಲಿ ನೆರಳಿತ್ತು ಕಾಪಾಡು ನೊಂದವರ

ಸರಿತಪ್ಪುಗಳ ಚಿಂತೆ ನಂತರದ ಕೆಲಸ |

ಕರುಣೆಯೇ ದೊಡ್ಡದದು ನ್ಯಾಯ ಧರ್ಮಕ್ಕಿಂತ

ಎರೆಕವೇ ನಿಜಧರ್ಮ ~ ಪರಮಾತ್ಮನೆ ||೪೦೫||

ಎರೆಕ = ಕರುಣೆ

Monday, July 11, 2022

ಮುಕ್ತಕಗಳು - ೨೫

ಡೊಂಕಿರಬಹುದು ನಾಯಿ ಬಾಲದಲಿ ಬಣ್ಣದಲಿ

ಡೊಂಕೆಲ್ಲಿಹುದು ತೋರಿ ಸ್ವಾಮಿನಿಷ್ಠೆಯಲಿ |

ಡೊಂಕು ಹುಡುಕುವ ಮುನ್ನ ಹುಡುಕೋಣ ಸದ್ಗುಣವ

ಕೊಂಕುಗುಣ ತೊರೆಯೋಣ ಪರಮಾತ್ಮನೆ ||೧೨೧||


ಕಲಿಗಾಲವಿದೆಯೆಂದು ಕೈಚೆಲ್ಲಿ ಕೂರದಿರಿ

ಕಲಿಯ ಮನದಿಂದ ಕಿತ್ತೆಸೆಯೋಣ ಎಲ್ಲ |

ಬಲಿಯಲಿಲ್ಲದೆ ಎಡೆಯು ಕಲಿಕಾಲು ಕೀಳುವನು

ಕಲೆತು ಮಾಡುವ ಬನ್ನಿ ಪರಮಾತ್ಮನೆ ||೧೨೨||


ಚಂಚಲವು ನೀರಿನೊಲು ಆಕಾಶದಗಲವದು

ಮಿಂಚಿಗೂ ವೇಗ ಬೆಂಕಿಯೊಲು ತೀ ಕ್ಷ್ಣವದು |

ಪಂಚಭೂತಗಳ ಗುಣ ಪಂಚೇಂದ್ರಿಯಗಳೊಡೆಯ

ಸಂಚು ಮಾಡುವ ಮನಸು ಪರಮಾತ್ಮನೆ ||೧೨೩||


ಅನುಕಂಪ ಕರುಣೆಗಳು ಅವನಿತ್ತ ಕೊಡುಗೆಗಳು

ಜನಕೆ ಹಂಚುವ ಕೊಂಚಕೊಂಚವಾದರೂ |

ಜನಕನಿತ್ತಾಸ್ತಿಯನು ತನುಜನುಜರಿಗೆನೀಡೆ

ನನಗೇನು ನಷ್ಟವಿದೆ ಪರಮಾತ್ಮನೆ ||೧೨೪||


ಮಲಿನವಾಗುವುದು ಮನ ಪಂಚೇಂದ್ರಿಯಗಳಿಂದ

ಕುಳಿತು ಗ್ರಹಿಸುತಿರಲು ಜಗದ ನಾಟಕವ |

ಕೊಳೆ ತೆಗೆಯಬೇಕು ದಿನದಿನ ಧ್ಯಾನಗಳಿಂದ

ತಿಳಿಯಾಗುವುದು ಮನವು ಪರಮಾತ್ಮನೆ ||೧೨೫||

ಮುಕ್ತಕಗಳು - ೧೦

ವಾದಮಾಡಿದರೆ ಫಲವಿಲ್ಲ ಮೂರ್ಖರ ಜೊತೆಗೆ 

ವಾದ ಮಾಡುವುದು ಸಲ್ಲದು ವಿತಂಡಿಯೊಡೆ |

ವಾದ ಮಾಡುವುದು ಗೆಲುವಿಗೆನಲದು ಸರಿಯಲ್ಲ

ವಾದವಿದೆ ಮಂಥನಕೆ ಪರಮಾತ್ಮನೆ ||೪೬||


ಕ್ರೋಧವದು ಮೆರೆವಾಗ ವಾದಕಿಳಿಯುದಿರು ನೀ

ವ್ಯಾಧಿಯನು ಮುಚ್ಚಿಟ್ಟು ರೋಧಿಸಲು ಬೇಡ |

ಸಾಧನೆಗೆ ಗುರಿಯಿಂದ ದೃಷ್ಟಿ ಸರಿಸದೆ ಸದಾ

ಮಾಧವನ ನೆನೆಬೇಕು ಪರಮಾತ್ಮನೆ ||೪೭||


ಕರುಣೆಯಿಲ್ಲದ ಹೃದಯ ಎಣ್ಣೆಯಿಲ್ಲದ ದೀಪ

ಧರಣಿಯಲಿ  ಸಲ್ಲನೀ ದುರುಳದಾ ನವನು |     

ಮರಣದಲಿ ಜೊತೆಯಿಲ್ಲದೊಂಟಿಯಾಗುವನಲ್ಲ

ಕರುಣೆಯಿರೆ ಸಹಬಾಳ್ವೆ ಪರಮಾತ್ಮನೆ ||೪೮||


ಒಳಗಿನಾತ್ಮಕ್ಕಿದೆಯೊ ಕಣ್ಣು ಕಿವಿಯರಿವೆಲ್ಲ

ಬಳಿಯಿದ್ದು ನೋಡುತಿಹ ಸಿಸಿಕ್ಯಾಮೆರವು |

ಒಳಗಿನದು ಮನದ ಹೊರಗಿನದೆಲ್ಲವಚ್ಚಾಗಿ

ತಿಳಿಯುತಿದೆ ನಿನಗೆಲ್ಲ ಪರಮಾತ್ಮನೆ ||೪೯||


ಕಲಿಗಾಲ ಕವಿದಿಹುದು ಸತ್ಯಕ್ಕೆ ಕಾರ್ಮೋಡ

ಲಲನೆಯರಿಗಾಗುತಿದೆ ಶೋಷಣೆಯ ಶಿಕ್ಷೆ |

ಹುಲಿಗಳೇ ತೊಟ್ಟಿಹವು ಗೋಮುಖದ ಮುಖವಾಡ 

ಬಲಿಗಳೇ ಬೇಕೇನು ಪರಮಾತ್ಮನೆ ||೫೦||