Showing posts with label ತ್ರಿಗುಣ. Show all posts
Showing posts with label ತ್ರಿಗುಣ. Show all posts

Tuesday, September 6, 2022

ಮುಕ್ತಕಗಳು - ೬೪

ಚಿಕ್ಕ ಬೀಜದೊಳಗಿದೆ ದೊಡ್ಡ ಮರದಾ ನಕ್ಷೆ

ಚೊಕ್ಕದಲಿ ಮೊಳೆತು ಬೆಳೆಯುತ್ತ ಮರವಾಯ್ತು |

ಸಿಕ್ಕ ಸಂಸ್ಕಾರವೇ ರೂಪಿಸಿದೆ ಎಳೆಯರನು

ಲೆಕ್ಕವದು ತಪ್ಪುವುದೆ ~ ಪರಮಾತ್ಮನೆ ||೩೧೬||


ರಂಗಾದ ದಿರಿಸುಗಳು ದೇಹಕ್ಕೆ ಸಿಂಗಾರ

ಬಂಗಾರ ದೊಡವೆಗಳು ಹೆಚ್ಚಿಸಿವೆ ಹೊಳಪು |

ಲಂಗು ಪಾವಿತ್ರ್ಯಸುಖ ಜ್ಞಾನ ಬಲ ಪ್ರೇಮಗಳು

ಸಿಂಗಾರ ಒಳಮನಕೆ ~ ಪರಮಾತ್ಮನೆ ||೩೧೭||

ಲಂಗು = ಕುದುರೆಯ ಬಾಯಿಗೆ ಹಾಕುವ ತಡೆ


ಕೊಟ್ಟು ಹೋಗುತಿರು ಮನುಜಾ ನಿನ್ನದೆಲ್ಲವನು

ಬಿಟ್ಟು ಹೋಗಲುಬೇಕು ಎಷ್ಟಿದ್ದರೇನು |

ಕಟ್ಟಿಕೊಳ್ಳುವೆ ಮೂಟೆಯಲಿ ಪಾಪಪುಣ್ಯಗಳ

ಚಟ್ಟ ಹತ್ತುವ ಮೊದಲು ~ ಪರಮಾತ್ಮನೆ ||೩೧೮||


ತ್ರಿಗುಣಗಳ ಜಗದಿ ಚಾತುರ್ವರ್ಣಗಳ ಸೃಷ್ಟಿ

ಭಗವಂತ ತೋರಿದಾ ಕಾಯಕದ ದಾರಿ |

ಅಗಣಿತದ ವರ್ಣಗಳ ಸೃಷ್ಟಿಸಿದ ಮಾನವನು

ಮಿಗವಾಗಿ ಮೆರೆಯುತಿಹ ~ ಪರಮಾತ್ಮನೆ ||೩೧೯||


ಉಳಿತಾಯ ಮಾಡುವುದು ಎಂತು ಈ ಕಾಲದಲಿ

ಕಳೆಯುವಾ ದಾರಿಗಳು ಹೆಚ್ಚುತಿವೆ ನಿತ್ಯ |

ಕೊಳಲಿನಾ ಸಂಗೀತ ಮಧುರವಾಗುವುದೆಂತು

ಕೊಳಲಿನಲಿ ಬಹುರಂಧ್ರ ~ ಪರಮಾತ್ಮನೆ ||೩೨೦||

Monday, July 11, 2022

ಮುಕ್ತಕಗಳು - ೨೭

ಧನವಧಿಕವಾಗಿರಲು ಕಳೆದುಕೊಳ್ಳುವ ಚಿಂತೆ

ಧನವಿಲ್ಲದಿರೆ ಕೋಟಲೆಗಳ ಕಂತೆಗಳು |

ಮನಕಶಾಂತಿಯೆ ಅಧಿಕ ಧನದಿಂದ ಸಿಹಿಗಿಂತ

ಕೊನೆಯಿಲ್ಲದಿಹ ದುಃಖ ಪರಮಾತ್ಮನೆ ||೧೩೧||


ತ್ರಿಗುಣಗಳ ಸೂತ್ರದಲಿ ಗೊಂಬೆಗಳು ನಾವೆಲ್ಲ

ಬಗೆಬಗೆಯ ನಾಟ್ಯಗಳು ವಿಧಿಯಬೆರಳಾಟ |

ಭಗವಂತ ಬೋಧಿಸಿಹ ಯೋಗಗಳ ನಮಗೆಲ್ಲ

ಸಿಗಿದುಹಾಕಲು ಸೂತ್ರ ಪರಮಾತ್ಮನೆ ||೧೩೨||


ಮಂಗನಿಂದಾದವನು ಮಾನವನು ಎನ್ನುವರು

ಮಂಗಬುದ್ಧಿಯು ಪೂರ್ಣ ಹೋಗಿಲ್ಲವೇನು |

ರಂಗಾಗಿ ಬದುಕೆ ದಾನವನಾದ ಮಾನವನು

ಭಂಗವಾಗಲಿ ಮದವು ಪರಮಾತ್ಮನೆ ||೧೩೩||


ಉಳಿಸಿದುದ ಬಿಟ್ಟುಹೋಗಲುಬೇಕು ಮರಣದಲಿ

ಗಳಿಸುವತಿಯಾಸೆಯೇಕಿದೆ ಅರಿಯಲಾರೆ |

ಉಳಿಸಿದುದ ಕೊಂಡೊಯ್ಯುವಂತಿರೆ ಮೇಲೆ

ಇಳೆಯ ಗತಿ ಊಹಿಸೆನು ಪರಮಾತ್ಮನೆ ||೧೩೪||


ಅವರಿವರ ಕರ್ತವ್ಯವೇನೆಂದು ಕೇಳದಿರು

ರವಿಯು ಕೇಳುವನೆ ನಿನ ಕರ್ತವ್ಯ ಬಂಧು |

ನವಿರಾಗಿ ನುಡಿಯುತ್ತ ಕರ್ತವ್ಯ ಪಾಲಿಸಲು

ರವಿಯಂತೆ ನಡೆಯುತಿರು ಪರಮಾತ್ಮನೆ ||೧೩೫||