Showing posts with label ಧನ. Show all posts
Showing posts with label ಧನ. Show all posts

Sunday, January 8, 2023

ಮುಕ್ತಕಗಳು - ೯೭

ನೂರು ಸಂತತಿಯ ಸಂಸಾರಿ ಒಂದೇ ಸುಳ್ಳು

ಯಾರಿರದ ಬ್ರಹ್ಮಚಾರಿಯು ಒಂಟಿ ಸತ್ಯ |

ನೂರು ಸುಳ್ಳಿನ ಬಲೆಯ ಕತ್ತರಿಸುವುದು ಸತ್ಯ

ತೋರಿಸುವ ಸಮಯಕ್ಕೆ ~ ಪರಮಾತ್ಮನೆ ||೪೮೧||


ಉಪಕಾರಿ ಮುಡುಪಿಡುವ ಪರರಿಗೇ ಅವನಧನ

ಕೃಪಣನಾ ಧನ ಕೂಡ ಪರರ  ಸೇರುವುದು |

ಚಪಲತೆಯು ಕಾಡದದು ಈರ್ವರನು ಲವಲೇಶ

ಅಪವಾದ ಇನ್ನೆಲ್ಲ ~ ಪರಮಾತ್ಮನೆ ||೪೮೨||


ಛಡಿಯೇಟು ತಿಂದವನು ಗುರುಗಳಾ ಅಂಕೆಯಲಿ

ಹೊಡೆಸಿಕೊಂಡಿಹ ಮಗನು ತನ್ನ ಪಿತನಿಂದ |

ಕೊಡತಿಯಾ ಏಟು ತಿಂದಿಹ ಹೊನ್ನಿನಾ ತುಂಡು

ತಡೆಯಿರದೆ ಬೆಳಗುವರು ~ ಪರಮಾತ್ಮನೆ ||೪೮೩||

ಕೊಡತಿ = ಸುತ್ತಿಗೆ


ತೊರೆಯಿತಾದರೆ ಮೀನು ನೀರಿನಾಸರೆಯನ್ನು   

ಅರಗುವುದು ಯಾರದೋ ಜಠರಾಗ್ನಿಯಲಿ |

ತೊರೆದೆಯಾದರೆ ಬದುಕಿನಲಿ ನೈತಿಕತೆಯನ್ನು

ಕರಗುವೆಯೊ ಕತ್ತಲಲಿ ~ ಪರಮಾತ್ಮನೆ ||೪೮೪||


ಕರೆಯುತಿದೆ ಕೈಬೀಸಿ ಗೋವಿಂದನಾ ಮಲೆಯು

ಮೆರೆಯುತಿದೆ ಬಕುತಿಯಲೆ ಮಿತಿಯಿಲ್ಲದಂತೆ |

ಹರಿಯುತಿದೆ ಜನಸಾಗರವು ಮಲೆಯ ಮುಚ್ಚುವೊಲು

ಧರೆಯ ಅಚ್ಚರಿಯಿದುವೆ ~ ಪರಮಾತ್ಮನೆ ||೪೮೫||

Saturday, December 17, 2022

ಮುಕ್ತಕಗಳು - ೭೧

ಅತಿಯಾಸೆ ದುಃಖಕ್ಕೆ ಬಲವಾದ ಕಾರಣವು

ಮಿತಿಯಾಸೆ ಜೀವನವ ನಡೆಸೊ ಇಂಧನವು |

ಜೊತೆಯಾಗಬೇಕು ಕರ್ತವ್ಯದಾ ಕಾಯಕವು

ಇತಿಮಿತಿಯ ಬದುಕಿರಲಿ ~ ಪರಮಾತ್ಮನೆ ||೩೫೧||


ಮನಸಿನಲಿ ಚೆಲುವಿರಲು ತೋರುವುದು ನುಡಿಗಳಲಿ 

ಮನಗಳನು ಅರಳಿಸುತ ಹರುಷ ಹಂಚುವುದು |

ಜಿನುಗುವುದು ಜೇನು ಮಾತಿನಲಿ ಒಡನಾಟದಲಿ

ತೊನೆಯುವವು ಹೃದಯಗಳು ~ ಪರಮಾತ್ಮನೆ ||೩೫೨||


ಧನವು ಎಷ್ಟಿರಲೇನು ನಿಧನ ತಪ್ಪುವುದೇನು

ಗುಣ ಚರ್ಚೆಯಾಗುವುದು ಮರಣದಾ ಸಮಯ |

ಹಣವ ಹೊಗಳುವರೇನು ಗುಣವ ಪಕ್ಕದಲಿಟ್ಟು

ಗುಣಕೆ ಹಣ ಹೋಲಿಕೆಯೆ ~ ಪರಮಾತ್ಮನೆ ||೩೫೩||


ಬಂಧುಗಳು ನಾವೆಲ್ಲ ಅರಿಯಬೇಕಿದೆ ನಿಜವ

ಚಂದದಲಿ ಸೇರಿಹೆವು ಜನುಮವನು ಪಡೆದು

ಒಂದೆ ಜಲ ವಾಯು ಬುವಿ ಆಗಸವು ರವಿ ಶಶಿಯು

ತಂದೆಯೊಬ್ಬನೆ ನಮಗೆ ~ ಪರಮಾತ್ಮನೆ ||೩೫೪||


ಒಂದು ಹಣತೆಯು ಹಚ್ಚಿದರೆ ನೂರು ಹಣತೆಗಳ

ಒಂದು ನಗು ಬೆಳಗುವುದು ನೂರು ಮನಗಳನು |

ಕುಂದದೆಯೆ ಬದುಕಿನಲಿ ಚೆಂದ ನಗುವನು ಹಂಚು

ಅಂದವಿರು ವುದುಬದುಕು ~ ಪರಮಾತ್ಮನೆ ||೩೫೫||

Monday, July 11, 2022

ಮುಕ್ತಕಗಳು - ೨೭

ಧನವಧಿಕವಾಗಿರಲು ಕಳೆದುಕೊಳ್ಳುವ ಚಿಂತೆ

ಧನವಿಲ್ಲದಿರೆ ಕೋಟಲೆಗಳ ಕಂತೆಗಳು |

ಮನಕಶಾಂತಿಯೆ ಅಧಿಕ ಧನದಿಂದ ಸಿಹಿಗಿಂತ

ಕೊನೆಯಿಲ್ಲದಿಹ ದುಃಖ ಪರಮಾತ್ಮನೆ ||೧೩೧||


ತ್ರಿಗುಣಗಳ ಸೂತ್ರದಲಿ ಗೊಂಬೆಗಳು ನಾವೆಲ್ಲ

ಬಗೆಬಗೆಯ ನಾಟ್ಯಗಳು ವಿಧಿಯಬೆರಳಾಟ |

ಭಗವಂತ ಬೋಧಿಸಿಹ ಯೋಗಗಳ ನಮಗೆಲ್ಲ

ಸಿಗಿದುಹಾಕಲು ಸೂತ್ರ ಪರಮಾತ್ಮನೆ ||೧೩೨||


ಮಂಗನಿಂದಾದವನು ಮಾನವನು ಎನ್ನುವರು

ಮಂಗಬುದ್ಧಿಯು ಪೂರ್ಣ ಹೋಗಿಲ್ಲವೇನು |

ರಂಗಾಗಿ ಬದುಕೆ ದಾನವನಾದ ಮಾನವನು

ಭಂಗವಾಗಲಿ ಮದವು ಪರಮಾತ್ಮನೆ ||೧೩೩||


ಉಳಿಸಿದುದ ಬಿಟ್ಟುಹೋಗಲುಬೇಕು ಮರಣದಲಿ

ಗಳಿಸುವತಿಯಾಸೆಯೇಕಿದೆ ಅರಿಯಲಾರೆ |

ಉಳಿಸಿದುದ ಕೊಂಡೊಯ್ಯುವಂತಿರೆ ಮೇಲೆ

ಇಳೆಯ ಗತಿ ಊಹಿಸೆನು ಪರಮಾತ್ಮನೆ ||೧೩೪||


ಅವರಿವರ ಕರ್ತವ್ಯವೇನೆಂದು ಕೇಳದಿರು

ರವಿಯು ಕೇಳುವನೆ ನಿನ ಕರ್ತವ್ಯ ಬಂಧು |

ನವಿರಾಗಿ ನುಡಿಯುತ್ತ ಕರ್ತವ್ಯ ಪಾಲಿಸಲು

ರವಿಯಂತೆ ನಡೆಯುತಿರು ಪರಮಾತ್ಮನೆ ||೧೩೫||

ಮುಕ್ತಕಗಳು - ೨೩

ಮನಕೆ ನೆಮ್ಮದಿಯಿಲ್ಲ ಸುಖವನ್ನು ಮರೆತಾಯ್ತು

ಧನಕನಕಗಳ ಕೂಡಿಡುವ ಲೋಭ ಮುಸುಕಿ |

ಹಣವಧಿಕವಿರೆ ಹಂಚಿಕೊಳ್ಳದಿರೆ ದೀನರಲಿ

ಧನವಾಗ್ವುದರ್ಬುದವು ಪರಮಾತ್ಮನೆ ||೧೧೧||


ಕಲಿಯುವರೆ ಬಾಲಕರು ನಾವು ಹೇಳಿದ ಕೇಳಿ

ಬಲುಬೇಗ ಕಲಿಯುವರು ನಮ್ಮ ನಡೆ ನೋಡಿ |

ಕಲಿಯಲೇಬೇಕಿಹುದು ಕಲಿಸುವಾ ಮುನ್ನವೇ

ಕಲಿಯಬೇಕಿದೆ ಬೇಗ ಪರಮಾತ್ಮನೆ ||೧೧೨||


ಕಾವನಿಗೆ ಬೇಕೇಕೆ ಕಾವಲಿನ ಕೋಟೆಗಳು

ದೇವನಿಗೆ ಬೇಕಿಲ್ಲ ರಜತಕನಕಗಳು |

ಹೂವುಹಣ್ಣುಗಳನರ್ಪಿಸೆ ಸಾಕು ಬಕುತಿಯಲಿ

ಗೋವಿಂದನನೊಲಿಸಲು ಪರಮಾತ್ಮನೆ ||೧೧೩||


 ಬೆದರಿಹರು ಪಿಳ್ಳೆಗಳು ಕೋರೋನ ಗುಮ್ಮಕ್ಕೆ

 ಕದದಾಚೆ ಕಾಲಿಡರು ಕಾಡುತಿದೆ ಭೀತಿ |

 ಚದುರಿ ಹೋಗುತಿದೆ ಆತ್ಮಸ್ಥೈರ್ಯ ಚಿಣ್ಣರದು

 ಬದುವ ಕಳೆ ಹೆಚ್ಚುತಿದೆ ಪರಮಾತ್ಮನೆ ||೧೧೪||


ಮಮತೆಯಾ ಹಿತವಿರಲಿ ಗೆಳೆತನದ ಸವಿಯಿರಲಿ

ಸುಮದ ಸೊಬಗಿರಲಿ ಚಂದನದ ಘಮವಿರಲಿ |

ಸಮತೆಯ ಸ್ವಾದ ನಿಸ್ವಾರ್ಥ ತಳಹದಿಯಿರಲಿ

ನಮದೆನುವ ನಡತೆಯಲಿ ಪರಮಾತ್ಮನೆ ||೧೧೫||

ಮುಕ್ತಕಗಳು - ೨೦

ವಿಷವಿಹುದು ನೀರಿನಲಿ ವಿಷವಿಹುದು ಗಾಳಿಯಲಿ

ವಿಷವಿಹುದು ಹಸುಗೂಸಿನಾಹಾರದಲ್ಲಿ |

ವಿಷಮಸಮಯವಿದು ಸಾವಮೊದಲೇ ನೀ ಮನದ

ವಿಷವ ತೊರೆ ಮನುಜ ಪೇಳ್ ಪರಮಾತ್ಮನೆ ||೯೬||


ಧನವೆಂಬ ಸಿರಿಯುಂಟು  ವಸ್ತುಗಳ   ಕೊಳ್ಳಲಿಕೆ

ಗುಣವೆಂಬ ನಿಧಿಯುಂಟು ಪಡೆಯೆ ನೆಮ್ಮದಿಯ |

ಗುಣಧನಗಳೆರಡನ್ನು ಪಡೆಯುವುದು ವಿರಳವಿರೆ

ಧನದಾಸೆ ಬಿಡಿಸಯ್ಯ ಪರಮಾತ್ಮನೆ ||೯೭||


ಸಾರಥಿಯು ನೀನಾದೆ ಪಾರ್ಥನಿಗೆ ಯುದ್ಧದಲಿ

ಕೌರವರ ಸೆದೆಬಡಿಯೆ ನೆರವಾದೆ ನೀನು |

ಪಾರುಗಾಣಿಸಲು ಜೀವನ ಕದನದಲಿ ಎನಗೆ

ಸಾರಥಿಯು ನೀನಾಗು ಪರಮಾತ್ಮನೆ ||೯೮||


ಹಸೆಮಣೆಯನೇರಿ ಜೊತೆ ಸಪ್ತಪದಿ ತುಳಿದಿಹಳು

ಹೊಸಬದುಕ ಕೊಡಲೆನಗೆ ತನ್ನವರ ತೊರೆದು |

ನಸುನಗೆಯ ಮುಖವಾಡದಲಿ ನೋವ ನುಂಗಿಹಳು

ಹೊಸಜೀವವಿಳೆಗಿಳಿಸಿ ಪರಮಾತ್ಮನೆ ||೯೯|| 


ಮುಕ್ತಕದ ಮಾಲೆಯಲಿ ಶತಸಂಖ್ಯೆ ಪುಷ್ಪಗಳು

ಭಕ್ತನಾ ಕಾಣಿಕೆಯ ಸ್ವೀಕರಿಸು ಗುರುವೆ |

ಪಕ್ವವಿಹ ತಿಳಿವನ್ನು ನೀಡಿರಲು ವಂದನೆಯು

ದಕ್ಷಿಣಾಮೂರ್ತಿಯೇ ಪರಮಾತ್ಮನೆ ||೧೦೦||


ಮುಕ್ತಕಗಳು - ೧೪

ಧನವನಾಕರ್ಷಿಸುವುದುಂಟು ಧನ ಚುಂಬಕವು

ಧನವು ಬೆಳೆಸುವುದು ಸಂತತಿಯನತಿಶಯದಿ |

ಕೊನೆಗೆ ಹೂತಿಟ್ಟರೂ ಪಡೆಯುವುದು ಮರುಜನುಮ

ಧನಪುರಾಣವಿದುವೇ ಪರಮಾತ್ಮನೆ ||೬೬||


ಕಲಿಯುವುದು ಮುಗಿಯುವುದೆ ಜೀವನದ ಕೊನೆವರೆಗೆ

ಕಲಿಕೆ ಜೀವದ ಸೂಕ್ಷ್ಮ ಸಂಕೇತ ಸಾಕ್ಷಿ |

ಕಲಿವುದೇನಿಲ್ಲದಿರೆ ಬದುಕಲೇನಿದೆ ನಮಗೆ

ಕಲಿಕೆ ನಾಡಿಮಿಡಿತವು ಪರಮಾತ್ಮನೆ ||೬೭||


ವೈರಾಣು ಬಂದಿಹುದು ವೈರಿರೂಪದಲಿಂದು

ಬಾರಿಸುತ ಮರಣಭೇರಿಯ ನಿಲ್ಲದಂತೆ |

ಮೀರಿ ಭೇದಗಳ ಹೋರಾಡಬೇಕಿದೆಯಿಂದು

ತೋರಿಕೆಯು ಸಲ್ಲದದು ಪರಮಾತ್ಮನೆ ||೬೮||


ರಾಜಧರ್ಮವಮರೆತ ದೇಶನಾಶಕರಿವರು

ರಾಜಕೀಯದ ಮುಸುಕು ಧರಿಸಿ ನಿಂದಿಹರು |

ಗಾಜಿನಾ ಮನೆಯಲ್ಲಿ ಕಲ್ಲು ತೂರಾಡಿಹರು

ರಾಜಿಯಾಗಿಹೆವಲ್ಲ ಪರಮಾತ್ಮನೆ ||೬೯||


ತಂಗದಿರ ಬುವಿಗಿತ್ತ ರಜತಮಯ ಕಾಂತಿಯನು

ಚಂಗದಿರನಿತ್ತಿಹನು ಹೊನ್ನಿನಾಭರಣ |

ರಂಗನಾಥನ ಸತಿಗೆ ವೈಭವದಲಂಕಾರ

ಸಿಂಗರದ ಸಂಭ್ರಮವು ಪರಮಾತ್ಮನೆ ||೭೦||

Friday, March 6, 2020

ಧನ ಪುರಾಣ

ಇದ್ದರೆ ಚಿಂತೆ, ಇಲ್ಲದಿದ್ದರೆ ತೊಂದರೆ,
ಬಲ್ಲೆಯಾ ಧನದ ಈ ಮೂಲ ಮಂತ್ರ?
ಇದ್ದರೆ ಮತ್ತಷ್ಟು ಸೇರುವುದು ನೋಡು,
ಇಲ್ಲದಿರೆ ಗಳಿಸಲು ಪಡಬೇಕು ಪಾಡು!

ಬೆಟ್ಟದಲ್ಲೆಲ್ಲೋ ಹುಟ್ಟಿದಾ ನದಿಯು,
ಹರಿಹರಿದು ಸಾಗರವ ಸೇರುವಂತೆ,
ಬಡವರ ಕಿಸೆಯಿಂದ ಹಾರಿ ಬಂದು,
ದೊಡ್ಡ ಬೊಕ್ಕಸಗಳ ತುಂಬಿತಂತೆ.

ಹೊನ್ನು, ಮಣ್ಣು, ಅಧಿಕಾರಗಳ ಬಹುರೂಪಿ,
ಹಲವರಿಗೆ ಇದು ದೇವತಾ ಸ್ವರೂಪಿ.
ಅತಿಯಾದ ಆಸೆ ಮನುಜನ ಖಾಯಿಲೆ,
ಇದಕ್ಕೆ ಮದ್ದಿಲ್ಲ, ಅಳಿಯುವುದು ಸುಟ್ಟಾಗಲೇ!

ಧನಕ್ಕಿದೆ ಧನವನ್ನು ಸೃಷ್ಟಿಸುವ ಶಕ್ತಿ,
ಜೀವ ಜಂತುಗಳಂತೆ ಬೆಳೆಸುವುದು ಸಂತತಿ!
ಸಮಾಧಿ ಮಾಡಿದರೂ ಭೂಮಿ ಅಗೆದು,
ಎದ್ದುಬರುವುದು ನೋಡು ಮರುಜನ್ಮ ಪಡೆದು!