Showing posts with label ನರಜನ್ಮ. Show all posts
Showing posts with label ನರಜನ್ಮ. Show all posts

Saturday, December 17, 2022

ಮುಕ್ತಕಗಳು - ೭೨

ಅವಕಾಶ ತಪ್ಪಿದರೆ ಹಲುಬುವುದು ಏತಕ್ಕೆ

ಶಿವಕೊಡುವ ಸೂಚನೆಯೊ ಬೇರೆಯದೆ ವರವ? |

ಅವನ ಲೀಲೆಯನು ಬಲ್ಲವರಾರು ಅವನಿಯಲಿ

ತವಕ ಬಿಡು ಸಮಯ ಕೊಡು ~ ಪರಮಾತ್ಮನೆ ||೩೫೬||


ಅರ್ಥ ಕಾಮಗಳು ಅತಿಯಾಗಿರಲು ಕುರುಡಾಗಿ

ಧರ್ಮ ಮೋ ಕ್ಷಗಳ ಮಾರ್ಗವು ಕಾಣಸಿಗದು |

ವ್ಯರ್ಥವೇ ನರಜನ್ಮ ಗುರಿತೊರೆದ ಬಾಣದೊಲು

ಮರ್ತ್ಯಲೋಕದ ಮಹಿಮೆ ~ ಪರಮಾತ್ಮನೆ ||೩೫೭||


ಬರೆಯುವುದೆ ಕಾಯಕವು ಓದುವುದೆ ಪ್ರಾರ್ಥನೆಯು

ಒರೆಗೆ ಹಚ್ಚಲುಬೇಕು ಬರೆವ ಮಾತೊಮ್ಮೆ

ಒರೆಯಿಂದೆಳೆದು ಲೇಖನಿಯ ಸತ್ಯ ಮೆರೆಯುವೊಲು

ಬರವಣಿಗೆ ಮೂಡಿಸುವ ~ ಪರಮಾತ್ಮನೆ ||೩೫೮||


ಸತ್ಯವೇ ಉಳಿಯುವುದು ಸಮಯದಾಚೆಯವರೆಗೆ

ಮಿಥ್ಯವೇ ಅಳಿಯುವುದು ಕೆಲಕಾಲ ಬೆಳಗಿ |

ನಿತ್ಯವೂ ಸತ್ಯಮಾ ರ್ಗದಲಿ ನಡೆ, ಮಾತಿನಲಿ

ತಥ್ಯವಿರೆ ಆನಂದ ~ ಪರಮಾತ್ಮನೆ ||೩೫೯||

ತಥ್ಯ = ತಿರುಳು


ದೊರೆಯುವುದೆ ಎಲ್ಲರಿಗೆ ಎಲ್ಲವೂ ಜಗದಲ್ಲಿ?

ದೊರಕುವುದು ಎಲ್ಲರಿಗೆ ಮಾತ್ರವೇ ಕೆಲವು |

ಸುರರಿಗೂ ಅನಿಸುವುದು ಇನ್ನಷ್ಟು ಬೇಕೆಂದು

ಕೊರಗದಿರು ಇಲ್ಲದಕೆ ~ ಪರಮಾತ್ಮನೆ ||೩೬೦||

Monday, August 22, 2022

ಮುಕ್ತಕಗಳು - ೬೦

ಆಸೆಗಳ ಕೊಳದಲ್ಲಿ ಈಸುವುದು ಏತಕ್ಕೆ

ಹಾಸಿ ಮಲಗಿರುವ ಮೃಗವನೆಬ್ಬಿಸಿದ ಹಾಗೆ |

ಬೀಸೊ ಬಿರುಗಾಳಿಯಲಿ ಗಾಳಿಪಟ ಉಳಿಯುವುದೆ

ಆಸೆಗಳ ನಿಗ್ರಹಿಸು ~ ಪರಮಾತ್ಮನೆ ||೨೯೬||


ನಟ್ಟಿರುಳ ಕತ್ತಲಲಿ ಮಿಂಚೊಂದು ಸುಳಿದಂತೆ

ಥಟ್ಟೆಂದು ಹೊಳೆದರಾವಿಷ್ಕಾರ ವೊಂದು |

ಬಿಟ್ಟಿ ದೊರಕಿದದೃಷ್ಟವಿತ್ತ ವರವಲ್ಲವದು

ಗಟ್ಟಿ ತಪಸಿನ ಫಲವು ~ ಪರಮಾತ್ಮನೆ ||೨೯೭||


ಒಳಿತು ಕೆಡಕುಗಳ ಯುದ್ಧವು ನಡೆಯುತಿದೆ ನಿತ್ಯ

ಕಲಿ-ಕಲ್ಕಿಯರ ಯುದ್ಧವಿದು ಅಲ್ಲವೇನು? |

ಬಲಿಯಾಗುತಿರಬಹುದು ಪುಟ್ಟ ಕಲ್ಕಿಗಳಿಂದು

ಬೆಳೆದು ಬರುವನು ಕಲ್ಕಿ ಪರಮಾತ್ಮನೆ ||೨೯೮||


ನರಜನ್ಮ ಸಿಕ್ಕಿಹುದು ಪುಣ್ಯದಾ ಶುಭಘಳಿಗೆ

ಅರಸನಾಗಿಹೆ ವಿವೇಚನೆ ಬುದ್ಧಿಗಳಿಗೆ

ವಿರಮಿಸದೆ ನಡೆ ಮುಂದೆ ಸತ್ಯದಾ ದಾರಿಯಲಿ

ಸಿರಿಪತಿಯ ಧ್ಯಾನಿಸುತ ~ ಪರಮಾತ್ಮನೆ ||೨೯೯||


ದಿನಮಣಿಯು ಚಂದಿರಗೆ ಕೊಟ್ಟಿರುವ ಸುಡುಬಿಸಿಲ

ತನಿಯಾಗಿಸುತ ಜೊನ್ನವನು ಸುರಿದ ನಗುತ |

ನಿನಗೆ ನೋವೇ ಆಗಿರಲಿ ನಗುವ ಹಂಚುತಿರು      

ಘನತೆಪಡೆವುದು ಜನುಮ ~ ಪರಮಾತ್ಮನೆ ||೩೦೦||

Thursday, August 4, 2022

ಮುಕ್ತಕಗಳು - ೩೫

ಜೋರಿನಲಿ ಬೆಳೆದಂಥ ಮರಗಳನು ವಾಹನಕೆ

ದಾರಿ ಮಾಡಲು ಕಡಿದು, ತಾರು ಸುರಿದಾಯ್ತು |

ತಾರಿನಾ ಬಣ್ಣದಲೆ ಧನವು ಸೋರಿಕೆಯಾಗೆ

ತೋರಿಕೆಗೆ ರಸ್ತೆಯದು ~ ಪರಮಾತ್ಮನೆ ||೧೭೧||


ನರಜನ್ಮ ದೊರೆತಿಹುದು ಸತ್ಕರ್ಮ ಮಾಡಲಿಕೆ

ಸುರರಿಗೂ ನರಜನ್ಮ ಕರ್ಮ ಕಾರಣಕೆ |

ದೊರೆತಿಹುದು ಅವಕಾಶ ಆಕಾಶದೆತ್ತರದ

ಮರೆತು ನಿದ್ರಿಸಬೇಡ ~ ಪರಮಾತ್ಮನೆ ||೧೭೨||


ಸಸಿಗಳನು ನೆಡುನೆಡುತ ಮರಗಳನೆ ಬೆಳೆಸಿಬಿಡಿ

ಹಸಿರು ಗಿಡಗಳನು ಉಸಿರಂತೆ ಕಾಪಾಡಿ |

ಉಸಿರಾಗುವವು ನಮ್ಮ ಮುಂದಿನಾ ಪೀಳಿಗೆಗೆ

ಬಸಿರಾಯ್ತು ಸತ್ಕರ್ಮ ಪರಮಾತ್ಮನೆ ||೧೭೩||


ಹಸ್ತದಲಿರುವ ಸಂಪದವು ಕರಗಿ ಹೋದರೂ

ಮಸ್ತಕದ ಸಂಪದವು ಕರಗುವುದೆ ಹೇಳು |

ಪುಸ್ತಕವು, ಗುರುಮುಖವು, ವ್ಯವಹಾರ, ಪರ್ಯಟನೆ, 

ಮಸ್ತಕವ ತುಂಬುವವು ~ ಪರಮಾತ್ಮನೆ ||೧೭೪||


ಮಾಡಿರುವ ಪಾಪಕ್ಕೆ ಶಿಕ್ಷೆ ತಪ್ಪುವುದಿಲ್ಲ

ಬೇಡಿದರೆ ದೇವರನು ಕರುಣೆಯನು ತೋರ |

ಮಾಡಿದರೆ ಉಪಕಾರ ಮೂರರಷ್ಟಾದರೂ

ನೋಡುವನು ಕಣ್ತೆರೆದು ಪರಮಾತ್ಮನೆ ||೧೭೫||