Showing posts with label ಜ್ಞಾನ. Show all posts
Showing posts with label ಜ್ಞಾನ. Show all posts

Sunday, January 8, 2023

ಮುಕ್ತಕಗಳು - ೯೯

ಸಿರಿ ತಾನು ಕೀಲಿಕೈಯಲ್ಲ ಸುಖ ಸಂತಸಕೆ

ಸಿರಿಯಿಂದ ಕೊಳ್ಳಲಾಗದು ಸಂತಸವನು |

ಸಿರಿಯಿರಲು ಸಂತಸದ ಕೀಲಿ ಮಾಡಿಸೆ ಸಾಧ್ಯ

ಸಿರಿಯ ಸರಿ ಬಳಕೆಯದು ~ ಪರಮಾತ್ಮನೆ ||೪೯೧||


ಸಿಕ್ಕರೂ ಸಿಗಬಹುದು ಗೌರವವು ಹಣದಿಂದ

ಸಿಕ್ಕರೂ ಸಿಗಬಹುದು ಅದು ವಿದ್ಯೆಯಿಂದ |

ಸಿಕ್ಕುವುದು ಖಂಡಿತವು ಸತತ ಸನ್ನಡೆತೆಯಿಂ

ಪಕ್ಕವಾದ್ಯಗಳೇಕೆ? ~ ಪರಮಾತ್ಮನೆ ||೪೯೨||


ಕಣ್ಣುಕಿವಿಗಳು ತರುವ ಅರಿವಿನಾ ತುಣುಕುಗಳ

ಮುನ್ನ ಇರಿಸುತ ಮನದ ಉಗ್ರಾಣದಲ್ಲಿ |

ಚೆನ್ನ ಮನನವ ಮಾಡಿ ಬೆಸೆಯುತ್ತ ತುಣುಕುಗಳ

ಚಿನ್ನದಾ ಸರಮಾಡು ~ ಪರಮಾತ್ಮನೆ ||೪೯೩||


ಒಂದು ವೀಣೆಯ ಹಾಗೆ ಮಾನವರ ಸಂಬಂಧ

ಚೆಂದದಾ ನಾದ ಹೊಮ್ಮದಿರಲೇನಿಂದು |

ಬಂಧಗಳ ಕಾಪಾಡು ಮುರಿಯದಾ ತಂತಿಯೊಲು

ಮುಂದಿಹುದು ಸವಿನಾದ ~ ಪರಮಾತ್ಮನೆ ||೪೯೪||


ಹಂಚಬಲ್ಲದು ನಾಲಿಗೆಯು ಸಿಹಿಯ ಅಮೃತವನು

ಹಂಚಬಲ್ಲದದು ಕಹಿ ಹಾಲಾಹಲವನು |

ಕೊಂಚ ಹಿಡಿತವು ಇರಲಿ ಈ ಮರ್ಕಟದ ಮೇಲೆ

ಪಂಚರಲಿ ಪಾತಕಿಯು ~ ಪರಮಾತ್ಮನೆ ||೪೯೫||

Saturday, December 17, 2022

ಮುಕ್ತಕಗಳು - ೮೦

ಫಲಕೊಡದ ಮರವು ಸಹ ಜನಕೆ ನೆರಳಾಗುವುದು

ಗುಲಗಂಜಿ ವಿಷಬೀಜ ತೂಗೊ ಬೊಟ್ಟಾಯ್ತು |

ಕೆಲ ಕುಂದುಕೊರತೆಯಿರೆ ಹಿಂದೆ ಕೂರಲುಬೇಡ

ಕೆಲಸಕ್ಕೆ  ನಿಲ್ಲು ನೀ ~ ಪರಮಾತ್ಮನೆ ||೩೯೬||


ಸಂಪತ್ತು ಅಮಲಂತೆ ಇಳಿಯದದು ಬಹುಬೇಗ

ಜೊಂಪು ತರುವುದು ಅರಿವಿನಾ ಸೂಕ್ಷ್ಮ ಗುಣಕೆ |

ಸಂಪು ಹೂಡುವುದು ಕಿವಿ ಹಿತವಚನ ಕಡೆಗಣಿಸಿ

ಗುಂಪು ತೊರೆಯುವ ಧನಿಕ ~ ಪರಮಾತ್ಮನೆ ||೩೯೭||


ಎಲ್ಲರಿಗೂ ಒಲಿಯದದು ಅಧ್ಯಾತ್ಮ ಜ್ಞಾನವದು

ಕಲ್ಲೆಸದ ಕೊಳದಲ್ಲಿ ತಿಳಿಮೂಡಬೇಕು |

ಬಲ್ಲಿದರ ಸಂಗದಲಿ ಬೆಳಕ ಕಾಣಲುಬೇಕು

ಕಲ್ಲು ಕೊನರುವುದಾಗ ~ ಪರಮಾತ್ಮನೆ ||೩೯೮||


ಆಸೆಗಳು ಆಳಿದರೆ ನಮ್ಮನ್ನು ತಲೆಯೇರಿ

ಗಾಸಿಯಾಗ್ವುದು ಬದುಕು ನೆಲೆಯಿಲ್ಲದಂತೆ |

ಹಾಸಿಗೆಯ ಮೀರದೊಲು ಕಾಲುಗಳ ಚಾಚಿದರೆ

ಆಸೆಗಳು ಕಾಲಿನಡಿ ~ ಪರಮಾತ್ಮನೆ ||೩೯೯||


ಊನವಿರೆ ದೇಹದಲಿ ಅರೆಹೊಟ್ಟೆ ಉಂಡಂತೆ

ಊನವಿರೆ ನಡತೆಯಲಿ ಏನುಹೇ ಳುವುದು?

ಬಾನಿಯಲಿ ತುಂಬಿರಲು ಹೊಗೆಯಾಡೊ ಸಾಂಬಾರು 

ಬೋನಹಳ ಸಿದಹಾಗೆ ~ ಪರಮಾತ್ಮನೆ ||೪೦೦||

ಬಾನಿ = ದೊಡ್ಡ ಪಾತ್ರೆ, ಬೋನ = ಅನ್ನ

Thursday, August 18, 2022

ಮುಕ್ತಕಗಳು - ೫೧

ಕತ್ತಲೆಯ ಕೂಪದಲಿ ಬೆಳಕು ಕಂಡರೆ ಹಬ್ಬ

ಎತ್ತಲಿಂದಲೆ ಬರಲಿ ಸುಜ್ಞಾನ ತಾನು |

ಸುತ್ತಲಿನ ದೀಪಗಳ ಭಕ್ತಿಯಲಿ ವಂದಿಸುವೆ

ಬೆತ್ತಲೆಯ ಮನದಿಂದ ಪರಮಾತ್ಮನೆ ||೨೫೧||


ಉರುಳುತಿದೆ ಕಾಲವದು ಹಿಂದಿರುಗಿ ನೋಡದೆಯೆ

ತಿರುಗುತಿದೆ ಮನಸು ನೆನಪುಗಳ ಸುಳಿಯಲ್ಲೆ |

ಬರುವ ನಾಳೆಗಳ ಭಯ-ಆಸೆಗಳ ಬಲೆಯಲ್ಲೆ 

ಕರಗುತಿದೆ ದಿನವೊಂದು ಪರಮಾತ್ಮನೆ ||೨೫೨||


ಪರಕೀಯ ದಾಸ್ಯದಲಿ ಬಳಲಿದ್ದ ಭಾರತಿಯೆ

ಅರಳಿರುವ ಸ್ವಾತಂತ್ರ್ಯ ಅಮೃತದಾ ಸ್ವಾದ |

ಕುರುಡಾಸೆ ಮಕ್ಕಳದು ಪಾತಕಿಗೆ ಮಣೆಹಾಕಿ

ತರದಿರಲಿ ಸಂಕೋಲೆ ಪರಮಾತ್ಮನೆ ||೨೫೩||


ಸಸಿಯು ಟಿಸಿಲೊಡೆಯುವುದು ಎಲ್ಲಿ ಬೆಳೆಯುತಲಿರಲು

ಹೊಸ ಮೋಡ ಮೂಡುವುದು ಎಲ್ಲಿ ಆಗಸದಿ

ಬಸಿರ ಸೇರುವುದೆಲ್ಲಿ ಮರುಜನ್ಮದಲಿ, ಅರಿತ

ಜಸವಂತರಾರಿಹರು ಪರಮಾತ್ಮನೆ ||೨೫೪||


ಭತ್ತದಲಿ ದೊರೆಯುವುದೆ ಬೇಳೆಯಾ ಕಾಳುಗಳು

ಹುತ್ತದಲಿ ಹಾವಿರದೆ ಹುಲಿಯಿರುವುದೇನು |

ಸುತ್ತಲಿನ ಜನ ತಪ್ಪು ಮಾಡುವುದು ಸಹಜ ಗುಣ

ಕತ್ತಿಯೆತ್ತದೆ ತಿದ್ದು ಪರಮಾತ್ಮನೆ ||೨೫೫||


Thursday, August 4, 2022

ಮುಕ್ತಕಗಳು - ೩೫

ಜೋರಿನಲಿ ಬೆಳೆದಂಥ ಮರಗಳನು ವಾಹನಕೆ

ದಾರಿ ಮಾಡಲು ಕಡಿದು, ತಾರು ಸುರಿದಾಯ್ತು |

ತಾರಿನಾ ಬಣ್ಣದಲೆ ಧನವು ಸೋರಿಕೆಯಾಗೆ

ತೋರಿಕೆಗೆ ರಸ್ತೆಯದು ~ ಪರಮಾತ್ಮನೆ ||೧೭೧||


ನರಜನ್ಮ ದೊರೆತಿಹುದು ಸತ್ಕರ್ಮ ಮಾಡಲಿಕೆ

ಸುರರಿಗೂ ನರಜನ್ಮ ಕರ್ಮ ಕಾರಣಕೆ |

ದೊರೆತಿಹುದು ಅವಕಾಶ ಆಕಾಶದೆತ್ತರದ

ಮರೆತು ನಿದ್ರಿಸಬೇಡ ~ ಪರಮಾತ್ಮನೆ ||೧೭೨||


ಸಸಿಗಳನು ನೆಡುನೆಡುತ ಮರಗಳನೆ ಬೆಳೆಸಿಬಿಡಿ

ಹಸಿರು ಗಿಡಗಳನು ಉಸಿರಂತೆ ಕಾಪಾಡಿ |

ಉಸಿರಾಗುವವು ನಮ್ಮ ಮುಂದಿನಾ ಪೀಳಿಗೆಗೆ

ಬಸಿರಾಯ್ತು ಸತ್ಕರ್ಮ ಪರಮಾತ್ಮನೆ ||೧೭೩||


ಹಸ್ತದಲಿರುವ ಸಂಪದವು ಕರಗಿ ಹೋದರೂ

ಮಸ್ತಕದ ಸಂಪದವು ಕರಗುವುದೆ ಹೇಳು |

ಪುಸ್ತಕವು, ಗುರುಮುಖವು, ವ್ಯವಹಾರ, ಪರ್ಯಟನೆ, 

ಮಸ್ತಕವ ತುಂಬುವವು ~ ಪರಮಾತ್ಮನೆ ||೧೭೪||


ಮಾಡಿರುವ ಪಾಪಕ್ಕೆ ಶಿಕ್ಷೆ ತಪ್ಪುವುದಿಲ್ಲ

ಬೇಡಿದರೆ ದೇವರನು ಕರುಣೆಯನು ತೋರ |

ಮಾಡಿದರೆ ಉಪಕಾರ ಮೂರರಷ್ಟಾದರೂ

ನೋಡುವನು ಕಣ್ತೆರೆದು ಪರಮಾತ್ಮನೆ ||೧೭೫||