Showing posts with label ಅರಿವು. Show all posts
Showing posts with label ಅರಿವು. Show all posts

Saturday, September 17, 2022

ಮುಕ್ತಕಗಳು - ೬೭

ಸ್ವಾರ್ಥಿಗಳು ನಾವಿಂದು ನೆರೆಹೊರೆಗೆ ನೆರವಿಲ್ಲ

ಕಾರ್ಯಸಾಧನೆಗಾಗಿ ಹಿಡಿಯುವೆವು ಕಾಲು |

ದೂರ್ವಾಸರಾಗುವೆವು ಚಿಕ್ಕ ತೊಂದರೆಯಾಗೆ

ಈರ್ಷೆ ಬಿಂಕಗಳ ತೊರೆ ~ ಪರಮಾತ್ಮನೆ ||೩೩೧||


ಧನವಿರದೆ ಹೋದರೂ ಕಡಪಡೆದು ನಡೆಸುವರು

ಮನವಿರದೆ ಇರಲು ಮಾಡುವುದೆಂತು ಕೆಲಸ? |

ತನುಮನಗಳಣಿಗೊಳಿಸಿ ಮುಂದಾಗು ಕಾಯಕಕೆ

ಧನ ಬೆಲೆಗೆ ದೊರಕುವುದು ~ ಪರಮಾತ್ಮನೆ ||೩೩೨||


ಅರಿವ ಹೆಚ್ಚಿಸಬೇಕು ಪ್ರತಿನಿತ್ಯ ತುಸುತುಸುವೆ

ಮೆರೆಯದಿರು ಎಲ್ಲವನು ಅರಿತವನು ಎಂದು |

ಅರಿತೆಯೆಲ್ಲವನೆಂದು ನಂಬಿದರೆ ನೀ ಹಿಡಿವೆ

ಗಿರಿಯಇಳಿ ಯುವದಾರಿ ~ ಪರಮಾತ್ಮನೆ ||೩೩೩||


ಜನುಮಗಳ ಕೊಂಡಿಗಳು ಪಾಪಗಳು ಪುಣ್ಯಗಳು

ಕೊನೆಯಿಲ್ಲದಂತೆ ಜೊತೆಯಲ್ಲೆ ಬರುತಿಹವು |

ಮನೆಯ ಬಂಧುಗಳಂತೆ ಇರುತ ಸುಖ ದುಃಖಗಳ

ಗೊನೆಯನ್ನು ನೀಡುವವು ~ ಪರಮಾತ್ಮನೆ ||೩೩೪||


ಮತಿಯಲ್ಲಿ ಸದ್ವಿಚಾರಗಳು ಬೆಳೆಯಲಿ ಸದಾ

ಇತಿಮಿತಿಯ ಮಾತುಗಳು ನಸುನಗುತಲಿರಲಿ |

ಕೃತಿಯಿರಲಿ ಎಲ್ಲರೂ ನೋಡಿ ಕಲಿಯುವ ರೀತಿ

ಜೊತೆಯಾಗುವುದು ದೈವ ~ ಪರಮಾತ್ಮನೆ ||೩೩೫||

Monday, August 22, 2022

ಮುಕ್ತಕಗಳು - ೫೭

ಪರಿಹರಿಸಿ ವಿಘ್ನಗಳ ಹರಸು ನಮ್ಮೆಲ್ಲರನು

ವರದಹಸ್ತನೆ ನೀಡು ವರಗಳನು ಬೇಗ |

ದುರಿತನಾಶನೆ ಗೌರಿಪುತ್ರ ಜಯ ಗಣಪತಿಯೆ

ನಿರತ ಭಜಿಸುವೆ ಕಾಯೊ ~ ಪರಮಾತ್ಮನೆ ||೨೮೧||


ಹುಟ್ಟಿದ್ದು ಸಾಧನೆಯೆ? ಬೆಳೆದಿದ್ದು ಸಾಧನೆಯೆ?

ಹುಟ್ಟಿದಾ ದಿನದಂದು ಸಡಗರವು ಏಕೆ? |

ನೆಟ್ಟರೇ ಮರಗಳನು ಕೊಟ್ಟರೇ ದಾನವನು

ಉಟ್ಟು ಸಂಭ್ರಮಿಸೋಣ ~ ಪರಮಾತ್ಮನೆ ||೨೮೨||


ಅರೆಬೆಂದ ಜ್ಞಾನವದು ಅರಿಗೆ ಬಲ ನೀಡುವುದು

ಕುರಿಗಳಾಗುವೆವು ಸುಜ್ಞಾನವಿಲ್ಲದಿರೆ |

ಕುರುಡನಾ ಕಿಸೆಯ ಮಾಣಿಕ್ಯ ಬೆಲೆ ತರದಲ್ಲ

ಅರಿತಿರಲು ಬೆಲೆಯುಂಟು ~ ಪರಮಾತ್ಮನೆ ||೨೮೩||


ಹಣದಿಂದ ಸಿಗಬಹುದು ಆಹಾರ ಮಾತ್ರವೇ

ಹಣವು ತರಬಲ್ಲದೇ ಆರೋಗ್ಯ ವನ್ನು |

ಗುಣಶಾಂತಿ ಸುಖನಿದ್ದೆ ಸುಸ್ನೇಹ ನೆಮ್ಮದಿಯು

ಹಣಕೆ ದೊರೆಯುವುದಿಲ್ಲ ~ ಪರಮಾತ್ಮನೆ ||೨೮೪||


ನಿಗದಿಯಾಗಿದೆ ಬಹಳ ನಿಯಮಗಳು ವಿಶ್ವದಲಿ

ಜಗವು ಕೊಡು-ಪಡೆಯಧಿಕ ನಿಯಮಕ್ಕೆ ಬದ್ಧ |

ನಗುವ ಕೊಡೆ ಸುಖವ ಪಡೆವೆವು ಅಧಿಕ ನೆನಪಿರಲಿ

ಬಗೆಯದಿರು ದ್ರೋಹವನು ~ ಪರಮಾತ್ಮನೆ ||೨೮೫||


Thursday, August 18, 2022

ಮುಕ್ತಕಗಳು - ೫೧

ಕತ್ತಲೆಯ ಕೂಪದಲಿ ಬೆಳಕು ಕಂಡರೆ ಹಬ್ಬ

ಎತ್ತಲಿಂದಲೆ ಬರಲಿ ಸುಜ್ಞಾನ ತಾನು |

ಸುತ್ತಲಿನ ದೀಪಗಳ ಭಕ್ತಿಯಲಿ ವಂದಿಸುವೆ

ಬೆತ್ತಲೆಯ ಮನದಿಂದ ಪರಮಾತ್ಮನೆ ||೨೫೧||


ಉರುಳುತಿದೆ ಕಾಲವದು ಹಿಂದಿರುಗಿ ನೋಡದೆಯೆ

ತಿರುಗುತಿದೆ ಮನಸು ನೆನಪುಗಳ ಸುಳಿಯಲ್ಲೆ |

ಬರುವ ನಾಳೆಗಳ ಭಯ-ಆಸೆಗಳ ಬಲೆಯಲ್ಲೆ 

ಕರಗುತಿದೆ ದಿನವೊಂದು ಪರಮಾತ್ಮನೆ ||೨೫೨||


ಪರಕೀಯ ದಾಸ್ಯದಲಿ ಬಳಲಿದ್ದ ಭಾರತಿಯೆ

ಅರಳಿರುವ ಸ್ವಾತಂತ್ರ್ಯ ಅಮೃತದಾ ಸ್ವಾದ |

ಕುರುಡಾಸೆ ಮಕ್ಕಳದು ಪಾತಕಿಗೆ ಮಣೆಹಾಕಿ

ತರದಿರಲಿ ಸಂಕೋಲೆ ಪರಮಾತ್ಮನೆ ||೨೫೩||


ಸಸಿಯು ಟಿಸಿಲೊಡೆಯುವುದು ಎಲ್ಲಿ ಬೆಳೆಯುತಲಿರಲು

ಹೊಸ ಮೋಡ ಮೂಡುವುದು ಎಲ್ಲಿ ಆಗಸದಿ

ಬಸಿರ ಸೇರುವುದೆಲ್ಲಿ ಮರುಜನ್ಮದಲಿ, ಅರಿತ

ಜಸವಂತರಾರಿಹರು ಪರಮಾತ್ಮನೆ ||೨೫೪||


ಭತ್ತದಲಿ ದೊರೆಯುವುದೆ ಬೇಳೆಯಾ ಕಾಳುಗಳು

ಹುತ್ತದಲಿ ಹಾವಿರದೆ ಹುಲಿಯಿರುವುದೇನು |

ಸುತ್ತಲಿನ ಜನ ತಪ್ಪು ಮಾಡುವುದು ಸಹಜ ಗುಣ

ಕತ್ತಿಯೆತ್ತದೆ ತಿದ್ದು ಪರಮಾತ್ಮನೆ ||೨೫೫||


Monday, August 15, 2022

ಮುಕ್ತಕಗಳು - ೩೯

ಬಿರಿದ ಮಲ್ಲಿಗೆಯ ಕಂಪನು ತಡೆಯಲಾದೀತೆ

ಸುರಿವ ಮಳೆಹನಿಯ ಮರಳಿಸಲು ಆದೀತೆ |

ಜರಿದು ನುಡಿದಿಹ ಮಾತ ಹಿಂಪಡೆಯಲಾದೀತೆ

ಅರಿತು ನುಡಿ ಎಲ್ಲರಲಿ ಪರಮಾತ್ಮನೆ ||೧೯೧||


ಮರದ ಹಣ್ಣುಗಳೆಲ್ಲ ಪರರಿಗೋಸುಗವಾಗಿ

ಝರಿಯ ನೀರೆಲ್ಲ ದಾಹವನು ತೀರಿಸಲು |

ಪರರಿಗೇನನು ನೀಡಿರುವೆ ನಿನ್ನದೆಂಬುವುದ

ಪರಶಿವನು ಕೇಳುತಿಹ ~ ಪರಮಾತ್ಮನೆ ||೧೯೨||


ತೂಗಿರಲು ಪೈರುಗಳು, ಬಂತದೋ ಸಂಕ್ರಾಂತಿ

ಕೂಗಿರಲು ಕೋಗಿಲೆಯು, ಬಂತಲ್ಲ ಚೈತ್ರ |

ಬಾಗಿರಲು ದೈವಕ್ಕೆ, ಕಾಣವುದು ಸರಿದಾರಿ

ಮಾಗುವುದು ಬುದ್ಧಿ ಮನ ಪರಮಾತ್ಮನೆ ||೧೯೩||


ಅಡಿಗಡಿಗೆ ತೋರುವುದು ಪರರ ಲೋಪಗಳೆಮಗೆ

ಕಡೆಗಣಿಸುತಲಿ ನಮ್ಮ ಲೋಪಗಳ ಮನವು |

ಬಿಡದಿರಲು ಈ ಚಾಳಿ ಅತಿ ಶೀಘ್ರದಲ್ಲಿಯೇ

ತೊಡಕಾಗು ವುದುಬಾಳು ~ ಪರಮಾತ್ಮನೆ ||೧೯೪||


ಜೀವತೊರೆದವರ ಅಟ್ಟಕ್ಕೇರಿಸುತ ಹೊಗಳಿ

ಜೀವವಿರುವಾಗ ಮುಖ ಕಿವಿಚುತ್ತ ನಡೆದು |

ಸೋವಿ ಬೂಟಾಟಿಕೆಯ ಮೆರೆದಾಡುತಿಹೆವಲ್ಲ

ಜೀವವಿರೆ ಸವಿಯ ನುಡಿ ~ ಪರಮಾತ್ಮನೆ ||೧೯೫||