ಪುಟ್ಟ ಪುಟ್ಟ
ಚಿಟ್ಟೆ ಬಂತು
ಬಟ್ಟೆ ರಂಗು ರಂಗಲಿ
ಹೊಟ್ಟೆಮೇಲೆ
ಪಟ್ಟೆ ಪಟ್ಟೆ
ಪುಟ್ಟ ಕಣ್ಣು ನಾಲಿಗೆ
ಬೆಕ್ಕು ಬಂತು
ನೆಕ್ಕಿ ಕುಡಿದು
ಸೊಕ್ಕಿನಿಂದ ಹಾಲನು
ನಕ್ಕು ನಿಂತು
ಚಿಕ್ಕ ಹಲ್ಲು
ಬೆಕ್ಕು ತಾನು ತೋರಿತು
ನಾಯಿ ಮರಿಯು
ಬಾಯಿ ತೆರೆದು
ಜೀಯ ತಿಂಡಿಯೆಂದಿತು
ತಾಯಿ ನಾಯಿ
ಬಾಯಿಯಲ್ಲಿ
ಕಾಯಿ ತಂದು ಕೊಟ್ಟಿತು
ಪುಟ್ಟ ಪುಟ್ಟ
ಚಿಟ್ಟೆ ಬಂತು
ಬಟ್ಟೆ ರಂಗು ರಂಗಲಿ
ಹೊಟ್ಟೆಮೇಲೆ
ಪಟ್ಟೆ ಪಟ್ಟೆ
ಪುಟ್ಟ ಕಣ್ಣು ನಾಲಿಗೆ
ಬೆಕ್ಕು ಬಂತು
ನೆಕ್ಕಿ ಕುಡಿದು
ಸೊಕ್ಕಿನಿಂದ ಹಾಲನು
ನಕ್ಕು ನಿಂತು
ಚಿಕ್ಕ ಹಲ್ಲು
ಬೆಕ್ಕು ತಾನು ತೋರಿತು
ನಾಯಿ ಮರಿಯು
ಬಾಯಿ ತೆರೆದು
ಜೀಯ ತಿಂಡಿಯೆಂದಿತು
ತಾಯಿ ನಾಯಿ
ಬಾಯಿಯಲ್ಲಿ
ಕಾಯಿ ತಂದು ಕೊಟ್ಟಿತು
ಶರಪಂಜರ ಚಿತ್ರದ "ಹದಿನಾಲ್ಕು ನಿಮಿಷ ವನವಾಸದಿಂದ..." ಹಾಡಿನ ಧಾಟಿ
ಹದಿನಾಲ್ಕು ನಿಮಿಷ ಬಾಂಡ್ಲಿಯೊಳಗಿಂದ ಎದ್ದು ಬಂದಿತು ಬೋಂಡ
ಎದ್ದು ಬಂದಿತು ಬೋಂಡ
ಸಾಟಿಯಿಲ್ಲದ ಆ ಅಡುಗೆಭಟ್ಟನ ಪಾತ್ರೆಯ ಆಸೆರೆ ಒಂದೇ
ಸಾಕೆಂದಿತು ಆ ಬೋಂಡ
ಅಗ್ನಿಪರೀಕ್ಷೆಯ ಎಣ್ಣೆ ಪರೀಕ್ಷೆಗೆ ಗುರಿಯಾಯಿತು ಬೋಂಡ
ಅಗ್ನಿಯು ಕಾದು ಘೋಷಿಸಿದ ಬೋಂಡ ಬೆಂದಿದೆ... ಬೋಂಡ ಬೆಂದಿದೆ
ಅಲ್ಪ ಗಿರಾಕಿಯ ಕಲ್ಪನೆ ಮಾತಿಗೆ ಅಳುಕಿದ ಆ ಭಟ್ಟ
ಬೋಂಡ ಕೆಟ್ಟಿದೆ... ಬೋಂಡ ಸುಟ್ಟಿದೆ... ಎಂದನೆ ರೋಸಿದ ಭಟ್ಟ
ಅತ್ತು ಬೋಂಡಗಳ ತಿಪ್ಪೆಗೆ ಹಾಕಿದ ಮೂರ್ಖನಾದ ಭಟ್ಟ...
ಪೂರ್ಣ ಬೆಂದಿದ ಪೂರ್ಣ ಊದಿದ ಬೋಂಡವ ಕಂಡಳು ಪತ್ನಿ
ಒಳ್ಳೆ ಬೋಂಡಕೆ ತಿಪ್ಪೆ ಆಸರೆಯೆ ನಿರ್ದಯಿ ಭಟ್ಟ..., ನಿರ್ದಯಿ ಭಟ್ಟ...
ಪಾತ್ರೆಗೆ ಬಂದವು ಮತ್ತೆ ಬೋಂಡಗಳು
ಬೋಂಡಕೆ ಶಾಂತಿನಿಕೇತನ
ಒಳ್ಳೆ ಬೋಂಡವೇ.. ನನ್ನ ಬೋಂಡವೇ,,, ಎನ್ನುತ ಭಟ್ಟನ ಆಗಮನಾ
ಸಂಗಮ ಸಮಯದೆ ಭಟ್ಟ ಬಿದ್ದನಾ
ಚಿರವಿರಹವೇ ಬೋಂಡದ ಜೀವನ!
ಮೋಹಕ ಚೆಲುವೆಯೆ ಮಾದಕ ನೋಟವು
ದಾಹವ ಹೆಚ್ಚಿಸಿ ಹುಚ್ಚನು ಹಿಡಿಸಿದೆ
ಸಾಹಸಿಯಾಗಿಹೆ ಚಂಚಲ ಕಂಗಳ ಬಾಣಕೆ ಗುರಿಯಾಗಿ!
ರೋಹಿತ ತುಟಿಗಳ ಚುಂಬಿಸೊ ಬಯಕೆಗೆ
ಮೋಹವು ಹೆಚ್ಚಿದೆ ತನುವದು ಕಾದಿದೆ
ದೇಹಕೆ ತಣ್ಣನೆ ಮದ್ದದು ಬೇಕಿದೆ ತಾಪವ ತಗ್ಗಿಸಲು!
ನಿನ್ನಯ ಬಾಹ್ಯದ ಚೆಲುವದು ಚುಂಬಕ
ನಿನ್ನಯ ಮನಸೂ ಬಹುವಿಧ ಸುಂದರ
ಮನ್ನಿಸಿ ಬೆಡಗಿಯೆ ನನ್ನಯ ಜೊತೆಯಲಿ ಪಯಣಿಗಳಾಗುವೆಯಾ?
ಮುನ್ನುಡಿ ಬರೆಯುವ ನಮ್ಮಯ ಬಾಳಿಗೆ
ಕನ್ನಡಿಯಾಗುವ ದೈವದ ತತ್ವಕೆ
ಹೊನ್ನಿನ ಮಾದರಿ ಮಿನುಗುತಲಿರುವ ಪ್ರೇಮದ ಲೋಕದಲಿ!
ನಿನ್ನ ನಗುವೆ ನನ್ನ ಉಸಿರು,
ನಿನ್ನ ಕನಸೇ ಕಣ್ಣ ಹಸಿರು!
ದೇವಲೋಕದ ಚೆಲುವು ನೀನು
ತಾರಾಲೋಕದ ಬೆಳಕು ನೀನು
ತಿಂಗಳ ರಾತ್ರಿಯ ತಂಪು ನೀನು
ನಿನ್ನ ಮಾತೇ ಮಧುರ ಜೇನು!
ನನ್ನ ಸನಿಹಕೆ ವರವಾಗಿ ಬಂದೆ,
ಕುರುಡು ಕಣ್ಣಿಗೆ ಬೆಳಕಾಗಿ ನಿಂದೆ,
ಬರಡು ಬಾಳಿಗೆ ಅಮೃತದಂತೆ,
ಕೊರಡ ಕೊನರಿಸೊ ವರ್ಷದಂತೆ!
ನಮ್ಮ ಜೋಡಿ ಶುಕಪಿಕಗಳಂತೆ,
ನಮ್ಮ ಬದುಕು ಹೂಬಿಸಿಲಿನಂತೆ,
ಸಮಯ ನಿಂತೇ ಹೋಯಿತು,
ಹೃದಯ ಕುಣಿಕುಣಿದಾಡಿತು!
ಎಂದು ಬರುವೆ ನನ್ನ ಬಾಳಿಗೆ,
ಎಂದು ತರುವೆ ಸಿಹಿಯ ಹೋಳಿಗೆ?
ಬಳಸಿ ಬಂದು ನನ್ನ ತೋಳಿಗೆ,
ತುಂಬು ನನ್ನ ಪ್ರೀತಿ ಜೋಳಿಗೆ!
ಮಾತೃ ಭಾಷೆಯೇ ಮಧುರ ನುಡಿಯು,
ನಾಲಿಗೆಯ ಕುಣಿಸುವ ಪದಗಳ ಖನಿಯು!
ಎದೆಯ ಹಾಲಿನ ಸುಮಧುರ ಸವಿಯು,
ಕಿವಿಗಳಿಗೆ ತಾಯ ಎದೆಬಡಿತದ ದನಿಯು!
ಕಣ್ಣುಗಳು ಕಂಡರೂ ಪರದೇಶವನು,
ಪರಭಾಷೆಯೇ ತಲುಪಲಿ ಕಿವಿಗಳನು,
ನಾಲಿಗೆ ನುಡಿಯಲಿ ಅಮ್ಮನ ಭಾಷೆ,
ಅಮ್ಮಗೆ ನೀನೆಂದೆಂದಿಗೂ ಕೂಸೇ!
ವ್ಯವಹಾರದ ಭಾಷೆಯು ಏನೇ ಇರಲಿ,
ಅದು ಹೊರಬಾಗಿಲ ಹೊರಗೇ ಇರಲಿ!
ಮಮತೆಯ ಮಾತೆಯ ತೊರೆಯದಿರು,
ಹೂರಗಿನ ಥಳುಕಿಗೆ ಮರುಳಾಗದಿರು!
ಮರೆತರೆ ನಾವು ನಮ್ಮಯ ಭಾಷೆ,
ಅನಾಥರು ನಮ್ಮಯ ಮನೆಯಲ್ಲೇ!
ಕಲಿತರೂ ಬುಧ್ಧಿಯು ಪರಭಾಷೆಯನು,
ಎದೆ ಮಿಡಿಯಲಿ ಮಣ್ಣಿನ ಭಾಷೆಯಲಿ!
ಕನ್ನಡ ತಾಯಿಯ ಪ್ರೀತಿಯ ಕೂಸೆ,
ಕನ್ನಡ ನಮ್ಮಯ ಹೆಮ್ಮೆಯ ಭಾಷೆ,
ಭಾಷೆಯು ಬರದವಗೆ ನೀ ಕಲಿಸು,
ಮಣ್ಣಿನ ಋಣವನು ಪರಿಹರಿಸು!
1. ವಿಷಯ: *ಅನ್ವೇಷಣೆ*
ಮುಗಿಯದಾಗಿದೆ ಈ ಅನ್ವೇಷಣೆ,
ಬೇಕಾಗಿದೆ ಇಂದ್ರಿಯ ಸಮರ್ಪಣೆ,
ಮೋಕ್ಷದ್ವಾರಕೆ ಇದೊಂದೇ ದಾರಿಯು,
ಆಗಿದೆ ದೇವದೇವನ ಘೋಷಣೆ!
2. ವಿಷಯ: *ಜೋಮಾಲೆ*
ಬಂಧಿಯಾಗಿಸಲಿ ನಿನ್ನ ತೋಳಮಾಲೆ
ಅದೇ ನನ್ನ ಸಿಂಗರಿಸುವ ಹೂಮಾಲೆ
ನಿನ್ನ ಪ್ರೀತಿಯ ಪ್ರೇಮದ ಕಾಣಿಕೆಗೆ
ಇಗೋ ಕೊರಳಿಗೆ ರನ್ನದ ಜೋಮಾಲೆ
3. ಸುಗ್ಗಿ ಹಬ್ಬ
ಸುಗ್ಗಿಯ ಹಬ್ಬದ ಸುಂದರ ಘಳಿಗೆ
ಸಗ್ಗದ ಸಂಭ್ರಮ ಬಂದಿದೆ ಇಳೆಗೆ
ಎಳ್ಳು ಬೆಲ್ಲದ ಸವಿಯನು ಹಂಚುತ
ಸೇರಲು ತಂದಿದೆ ಸ್ನೇಹದ ಗುಳಿಗೆ
4. ಕ್ಷಣಿಕ
ಹಣ ತರುವ ಆನಂದ ಕ್ಷಣಿಕವೇ ಮಾತ್ರ
ಕಳೆದುಹೋಗುವುದು ಎಷ್ಟೇ ಇರಲಿ ಗಾತ್ರ
ಜೀವನದಿ ಬೇಕಿಹುದು ಶಾಶ್ವತ ಆನಂದ
ಗುಣವು ಕೊಡುವುದು ಸದಾನಂದದ ಸೂತ್ರ
5. ವ್ಯಕ್ತಿತ್ವ
ದೇಹ ಊನವಾಗಿರಲು ದೈವವೇ ಕಾರಣ
ವ್ಯಕ್ತಿತ್ವವೇ ಊನವಿರಲು ನಾವೇ ಕಾರಣ
ದೇವ ಕೊಟ್ಟಿದುದ ನಗುತ ಸ್ವೀಕರಿಸುತ
ನಮದಾದ ವ್ಯಕ್ತಿತ್ವವ ನಾವೇ ರೂಪಿಸೋಣ
ವ್ಯಕ್ತಿಗಳ ನಡೆನುಡಿಯು ಆಂತರಿಕ ಭಾವಗಳು
ಕಷ್ಟನಷ್ಟಗಳು ಬಂದಾಗ ಆರಿಸುವ ದಾರಿಗಳು
ಧನಕನಕ ಗಳಿಸುವ ವ್ಯಯಿಸುವ ರೀತಿ ನೀತಿ
ಆಗುತಿವೆ ಮನುಜನ ವ್ಯಕ್ತಿತ್ವದ ಪದರಗಳು
ಉಚಿತದಲಿ ಆಹಾರ ಉಚಿತದಲಿ ವಿಹಾರ
ಉಚಿತಗಳ ಮಳೆಯಿಂದು ಸುರಿಯುತಿದೆ ಪೂರ
ದುಡಿಯುವ ದೇಹಗಳಿಗೆ ಆಲಸ್ಯ ತಾಕುತಿದೆ
ದಿನದಿನಕೆ ಸೋಮಾರಿ ಆಗುತಿಹ ಮತದಾರ
ಮತದಾರ ಆರಿಸಿಹ ಆಳುವವರನಿಂದು
ಯಥಾ ಪ್ರಜಾ ತಥಾ ರಾಜರು ಆಗಿಹರು ಬಂಧು
ಅಧಿಕಾರ ಅವಕಾಶ ಅವರಿಗೆ ಸಿಕ್ಕಾಗ
ಬಾಚುತ್ತ ಬೆಳೆಯುವರು ಸಕಲವನೂ ತಿಂದು!
ಮಲ್ಲಿಗೆಯ ಪರಿಮಳವು ಮನಸೂರೆಗೈಯುವುದು
ಮೊಗದಲ್ಲಿ ನಗೆಮಲ್ಲಿಗೆಯನು ಅರಳಿಸುವುದು
ಅಲಗಿಹ ನಲ್ಲೆಯ ಕೋಪವನು ಕರಗಿಸುತಲಿ
ನಗುನಗುತ ಬಳಿಸಾರಿ ಬರುವಂತೆ ಮಾಡುವುದು
ಒಮ್ಮೆ ನೋಡಲು ನಿನ್ನ ಮತ್ತೆ ನೋಡಬೇಕೆನಿಸುವುದು
ಕಣ್ಣು ಮುಚ್ಚಲೂ ನಿನ್ನದೇ ಮುಖಕಮಲ ಕಾಣುವುದು
ನನ್ನ ಮರೆತರೂ ನಾ ನಿನ್ನ ಮರೆಯಲೇ ಆಗುತಿಲ್ಲ
ಏತಕೆ ನೀ ನನ್ನ ಮನವನ್ನಾವರಿಸಿರುವೆ ಇಂದು?
ದೇವನೆಂದೂ ನನ್ನ ಕಂಗಳಿಗೆ ಕಂಡಿಲ್ಲ ತಾನು!
ಬೇರಾವುದೋ ಲೋಕದಲಿ ಕುಳಿತಿರುವನೇನು?
ಈ ಬಾನು, ಬುವಿ, ತಾರೆ ಚಂದ್ರರನು ನಮಗಿತ್ತು
ನಮ್ಮಿಂದ ಮರೆಯಾಗಿ ಅಡಗಿಕೊಂಡಿಹನೇನು?
ಪ್ರಿಯನೆಂದ ಪ್ರಿಯೆಗೆ "ನನ್ನೆದೆಯಲೇ ಮನೆಮಾಡಿರುವೆ ನೀನು,
ನೀ ಕೇಳು ನಿನಗಾಗಿ ಏನು ಬೇಕಿದ್ದರೂ ಮಾಡಲು ಸಿದ್ಧ ನಾನು!"
ಪ್ರಿಯೆಯೆಂದಳು, "ನಿನ್ನೆದೆಯ ಗೂಡಿನಲಿ ತೋರು ನನ್ನ ನನಗೆ"
ಏಕೋ, ಏನೋ, ಅಂದಿನಿಂದ ಅವಳ ಕಣ್ಣಿಗೆ ಕಂಡಿಲ್ಲ ಅವನು!
ಕೊಡುವವನೇ ದೇವ ಕಾಯುವವನೇ ತಂದೆ
ಅನ್ನವಿತ್ತವಳೇ ತಾಯಿ ಬೇಕಿನ್ನೇನು ಮುಂದೆ?
ಜತೆಯಲಿರುವವರೇ ಬಂಧು ಬಳಗವು
ಬುವಿಯ ತನುಜಾತರೆಲ್ಲರೂ ಒಂದೇ ಒಂದೇ!
ಬಣ್ಣಗಳೆಲ್ಲ ಕಪ್ಪಾಗಿಹೋಗಿವೆ,
ಬಾಳು ತಾಳವ ತಪ್ಪಿದೆ!
ನೀನು ಇಲ್ಲದ ಬದುಕು ಬರಡು
ಚಳಿಗಾಳಿಗೆ ಕೊರಡಾಗಿದೆ |
ಮಧುಮಾಸದ ನೆನಪು ಕಾಡಿದೆ
ಪ್ರೀತಿ ಸುಮವು ಬಾಡಿದೆ ||೧||
ನಾನು ಮಾಡಿದ ಯಾವ ತಪ್ಪಿಗೆ
ಶಿಕ್ಷೆಯಾಗಿದೆ ಅಗಲಿಕೆ? |
ನೀನು ಇಲ್ಲದ ಪ್ರೇಮಲೋಕವು
ಅಂಧಕಾರದಿ ಮುಳುಗಿದೆ ||೨||
ಒಂಟಿ ನಾನು ಬಾಳ ಕಡಲಲಿ
ಹುಟ್ಟು ಹಾಕಲು ನೀನಿಲ್ಲದೆ |
ಬಾಳ ನೌಕೆಯು ದಾರಿ ತಪ್ಪಿದೆ
ಗೊತ್ತು ಗುರಿಯು ಇಲ್ಲದೆ ||೩||
ಮರಳಿ ಬಾರದ ಲೋಕವೆಲ್ಲಿದೆ
ತಿಳಿಸು ಬರುವೆನು ಅಲ್ಲಿಗೇ |
ಮತ್ತೆ ಸೇರುವ, ಮತ್ತೆ ಹಾಡುವ
ಪ್ರಣಯಗೀತೆಯ ನಾಳೆಗೆ ||೪||