Friday, August 31, 2012

ಗುಡಿಸುವ ಕೆಲಸ


ಕಾಸು ಬೇಕಾದಾಗ, ಕೈಚಾಚಿದೆ ಅಪ್ಪನ ಮುಂದೆ.
ನಿನ್ನ ಬುದ್ಧಿಯ ನಂಬು, ನಿನ್ನ ರಟ್ಟೆಯ ನಂಬು,
ಅಪ್ಪ ಎಂದರು, ಕಾಣುವುದು ಕಾಸು ನಿನ್ನ ಕಿಸೆಯಲ್ಲೇ!

ಕಣ್ಣೀರು ಜಿನುಗಿದಾಗ, ಹುಡುಕಿದೆ ಆಸೆರೆಯ ಹೆಗಲಿಗಾಗಿ.
ಎಂಥ ನಷ್ಟವೇ ಇರಲಿ, ಎಂಥ ಕಷ್ಟವೇ ಬರಲಿ, ಗೆಳೆಯನೆಂದ,
ನಿನ್ನ ಜೀವನವ ರೂಪಿಸುವ ಶಿಲ್ಪಿ ನೀನೆ ಎಂದ!

ದಾರಿ ಕಾಣದಾದಾಗ, ಹುಡುಕಿದೆ ಕಾಣದ ದೇವರಿಗಾಗಿ.
ಹುಡುಕಿ ಅಲೆಯುವೆಯೇಕೆ ಹುಚ್ಚ, ಗುರುಗಳೆಂದರು,
ದೇವನಿರುವನು ನಿನ್ನಲ್ಲ್ಲೇ, ಕಣ್ಣು ಮುಚ್ಚಿದರೆ ಕಾಣುವನು ಕುಳಿತಲ್ಲೇ!

ಹೇ ದೇವ, ನೀ ಎನಗೆ ಎಲ್ಲವನೂ ಕೊಟ್ಟೆ,
ಕಸವನೂ ಕೊಟ್ಟೆ, ಕಸಬರಿಕೆಯನೂ ಕೊಟ್ಟೆ,
ಗುಡಿಸುವ ಕೆಲಸ ಮಾತ್ರ ನನಗೆ ಬಿಟ್ಟೆ!

ಕನಸಿನ ಆಸೆ

ನಿನ್ನ ನೆನಪಿನ ಲೋಕದಲ್ಲಿ,
ಹೂವು, ಹಣ್ಣುಗಳ ತೋಟದಲ್ಲಿ,

ಕಣ್ಣು ಮುಚ್ಚಿ, ಮೈಯ ಮರೆತೆ,
ಕನಸಿಗಿಲ್ಲ ಏನೂ ಕೊರತೆ,

ಕಣ್ಣು ಬಿಟ್ಟರೆ ಸುತ್ತ ಕಾನು,
ದಟ್ಟ ಅಡವಿಯಲಿ ಒಂಟಿ ನಾನು,

ಹುಲಿ, ಕರಡಿಗಳ ಕಾಟವಿಲ್ಲಿ,
ಕಲ್ಲು ಮುಳ್ಳಿನ ದಾರಿಯಿಲ್ಲಿ,

ಕಣ್ಣು ಮುಚ್ಚಿದೆ ನೋವಿನಿಂದ,
ಮತ್ತೆ ಕನಸಿನ ಆಸೆಯಿಂದ!

ಕತ್ತಲ ಪಯಣ

ತಾತ ಕೊಟ್ಟ ಹಣತೆ ಕೈಯಲಿಹುದು,
ಎಣ್ಣೆ, ಬತ್ತಿಗಳಿಲ್ಲದೆ ಕತ್ತಲಿಹುದು.
ಅಪ್ಪ ಕೊಟ್ಟ ಗಂಟು ತಲೆಯ ಮೇಲೆ,
ಅದ ಮಕ್ಕಳಿಗೊಪ್ಪಿಸುವ ಭಾರ ಹೆಗಲ ಮೇಲೆ.

ಕತ್ತಲಲಿ ಎಡವೆಡವಿ ಬಿದ್ದರೂ ಕೂಡ,
ಹಣತೆಯ ಬೆಳಕಿದೆಯೆಂಬ ಭ್ರಮೆಯಿಹುದು ನೋಡ.
ಹೊಸ ಬೆಳಕ ಕಿರಣಗಳ ಸಹಿಸಲಾರದು ಕಣ್ಣು,
ರೂಢಿಯಾಗಿದೆ ನಮಗೆ ಕತ್ತಲಿನ ಹುಣ್ಣು.

ಕತ್ತಲಲ್ಲೇ ನಡೆದು, ಕತ್ತಲಲ್ಲೇ ಬೆಳೆದು,
ಎಡವಿದ ಕಾರಣಕೆ ಅವರಿವರ ಹಳಿದು,
ಕತ್ತಲಿನ ನೆರಳಲ್ಲೇ ಎಲ್ಲವನು ಹುಡುಕಿ,
ಸಿಗದಿದ್ದಕ್ಕೆ ಬೇಗ ಎಲ್ಲರಲೂ ಸಿಡುಕಿ,

ಸವೆದಿದ್ದೇವೆ ನಡೆನಡೆದು ಜೀವಮಾನದ ತನಕ,
ಹಣತೆ, ಗಂಟುಗಳ ಮಕ್ಕಳಿಗೊಪ್ಪಿಸುವ ತವಕ.
ಗಂಟೊಮ್ಮೆ ಬಿಚ್ಚಿದ್ದರೆ ತಿಳಿಯುತ್ತಿತ್ತೇನೋ,
ಎಣ್ಣೆ, ಬತ್ತಿಗಳ ಭರಣಿ ಕಾಣುತಿತ್ತೇನೋ!

ಬೇರೆ ದಾರಿ ಎಲ್ಲಿದೆ?

ಕಣ್ಣು ಅರಳಿದೆ, ಕನಸು ಕಂಡಿದೆ,
ಒಲವ ಸೂಸುತ ಮುಗುಳುನಕ್ಕಿದೆ,
ಏನು ತಾನೆ ಮಾಡಬಲ್ಲದು? ಅಳಿಸಲಾಗದು ನಿನ್ನ ಬಿಂಬ!

ಕಿವಿಯು ನಿಮಿರಿದೆ, ಕಾದು ಕುಳಿತಿದೆ
ಮತ್ತೆ ಮತ್ತಲಿ ಮುಳುಗಲು,
ಏನು ತಾನೆ ಮಾಡಬಲ್ಲದು? ನಿನ್ನ ಸ್ವರದ ಆಸೆ ತುಂಬ!

ಮೂಗು ಬೇಡಿದೆ ಮತ್ತೆ ಮತ್ತೆ,
ನಿನ್ನ ಉಸುರಿನ ಪರಿಮಳ,
ಏನು ತಾನೆ ಮಾಡಬಲ್ಲದು? ಹುಚ್ಚು ಹಿಡಿದ ತುಂಟ ಹುಂಬ!

ತುಟಿಯು ಬೇಡಿದೆ ಮಧುರ ಸ್ಪರ್ಷವ,
ಮತ್ತು ಹಿಡಿಸುವ ಓಷ್ಠಲಾಘವ,
ಏನು ತಾನೆ ಮಾಡಬಲ್ಲದು? ರುಚಿಯ ಕಂಡ ಕಳ್ಳ ಬೆಕ್ಕು!

ನನ್ನ ಹೃದಯವು ಕುಣಿದು ಹಾಡಿದೆ,
ಮಧುರ ತಾಳದಿ ಒಲವ ರಾಗದಿ,
ಏನು ತಾನೆ ಮಾಡಬಲ್ಲದು? ನೀನೆ ಇರಲು ಅದರ ತುಂಬ!

ರಾಜಮಾರ್ಗವೊ, ಅಡ್ಡದಾರಿಯೊ,
ಕಲ್ಲುಮುಳ್ಳಿನ ಕಠಿಣ ಪಥವೊ,
ನಿನ್ನ ಕಡೆಗೆ ನನ್ನ ನಡಿಗೆ, ಬೇರೆ ದಾರಿ ಎಲ್ಲಿದೆ?

Tuesday, October 13, 2009

ಎಲೆಯ ಮರೆಯ ಕಾಯಿ

ಇರುವನರುಹಲು ಸ್ವರವು ಎಲ್ಲಿದೆ, 
ಎಲೆಯ ಮರೆಯ ಕಾಯಿಗೆ?

 ಮೈಯ ತುಂಬಾ ರೆಕ್ಕೆಯಿದ್ದರೂ, 
ಹಾರಲಾರದು ವನದ ಕುಸುಮವು! 
ಸೇರಲಾರದು ದಿವ್ಯ ಸನ್ನಿಧಿ, 
ಏರಲಾರದು ಚೆಲುವ ಮುಡಿಯನು. 

 ರವಿಯೆ ಆಗಲಿ, ಶಶಿಯೆ ಆಗಲಿ, 
ಮಿಣುಕಿ ಮಿನುಗುವ ತಾರೆಯಾಗಲಿ, 
ನೀಡಬಲ್ಲರು ಬೆಳಕ ಕಿರಣವ, 
ತೂರಬಲ್ಲರೆ ತಡೆವ ಮೋಡವ? 

 ತುಂಬಿಕೊಂಡ ಮನಸಿಗೆ, 
ಒಲವ ಸೂಸುವ ಎದೆಯ ಗೂಡಿಗೆ, 
ಉಕ್ಕಿ ಬರುವ ಪ್ರೀತಿ ಹಾಡಿಗೆ, 
ಇಲ್ಲವೇಕೋ ಗುಂಡಿಗೆ, ಆಡಲಿಲ್ಲ ನಾಲಿಗೆ!

Tuesday, September 8, 2009

ಬದರೀನಾಥ ಸ್ತುತಿ

 ಪರ್ವತೇಶನ ನಾಡಿನಲ್ಲಿ, 
ಹಿಮಾಲಯದ ತಂಪಿನಲ್ಲಿ, 
ಭಕ್ತಿಭಾವದಿ ಮಿಂದು ಎದ್ದು, 
ಬದರಿನಾಥನ ಕಂಡೆನು. 

 ನೀಲಕಂಠನು ನೋಡುತಿರಲು, 
ಅಲಕನಂದೆಯು ಪಾದ ತೊಳೆಯಲು, 
ಪುಣ್ಯಪಾದದ ಅಡಿಗೆ ನಿಂತು, 
ಬದರಿನಾಥನ ಕಂಡೆನು. 

 ಗರುಡವಾಹನ ಬಾಗಿಲಲ್ಲಿ, 
ಕುಬೇರ ಲಕ್ಷ್ಮಿಯು ಸನಿಹದಲ್ಲಿ, 
ಕುಚೇಲನಂತೆ ನಮಿಸಿ ನಾನು, 
ಬದರಿನಾಥನ ಕಂಡೆನು. 

 ಬಿಸಿಯ ನೀರ ಚಿಲುಮೆಯಲ್ಲಿ, 
ಮಿಂದ ಭಕ್ತರು ಭಜಿಸುತಿರಲು, 
ಮನದೆ ದೇವನ ಸ್ತುತಿಸಿಕೊಂಡು, 
ಬದರಿನಾಥನ ಕಂಡೆನು. 

 ಉದಯರವಿಯು ಮೂಡಿಬಂದು, 
ಸ್ವರ್ಣ ಮುಕುಟವ ನೀಡುತಿರಲು, 
ಬಣ್ಣಿಸಲಾಗದ ಭಾವದಲ್ಲಿ, 
ಬದರಿನಾಥನ ಕಂಡೆನು. 

 ದಾರಿ ತೋರಿದೆ ಪಾಂಡವರಿಗೆ, 
ಮುಕ್ತಿ ನೀಡಿದೆ ಭಕ್ತ ಜನರಿಗೆ, 
ನಮಿಸಿದೆನೆಗೆ ಕರುಣೆ ತೋರಿದೆ, 
ಧನ್ಯನಾ ಬದರಿನಾಥನೆ!

Friday, May 29, 2009

ಚುನಾವಣೆ 2009

ಅಂತೂ ಇಂತೂ ಮುಗಿಯಿತು ಎಣಿಕೆ,
ಓಡದ ಕುದುರೆಯ ಕತ್ತಲಿ ಕುಣಿಕೆ.

ತಕ್ಕಡಿಯ ಕಪ್ಪೆಗಳಿಗೆ ಆಯಿತು ದಿಗ್ಭ್ರಮೆ,
ನೆಗೆಯಲು ಬಿದ್ದರು ನೀರಿಲ್ಲದೆ ಭಾವಿಗೆ.
ಆರು ದೋಸೆ, ಮೂರೂ ದೋಸೆ, ಬಯಸಿ ಬಂದವರು,
ಭವತಿ ಭಿಕ್ಷಾಂದೇಹಿ ಎನ್ನುವಂತಾಯಿತು.

ತುಂಡು ವೀರರು, ಬಂಡುಕೋರರು,
ಸುಳಿಗಾಳಿಗೆ ಸಿಕ್ಕ ತರೆಗೆಲೆಗಳಾದರು.
ರಾಣಿಜೇನುಗಳು ಪರಿತಪಿಸಿದರು,
'ಜೀ ಹುಜೂರ್' ಎನ್ನುವರಿಲ್ಲದೆ.

ಕೊನೆಗೂ ಸರಿಯಿತು ಕತ್ತಲ ಪರದೆ,
ಮೂಡಿತು ದೇಶಕೆ ಉದಯದ ಹಣತೆ.
ಗೊಂದಲ ಕಳೆಯಿತು, ನೆಮ್ಮದಿ ಮೂಡಿತು,
ಸ್ಥಿರ ಸರಕಾರಕೆ ಬುನಾದಿ ದೊರಕಿತು!