Showing posts with label ಕೋಪ. Show all posts
Showing posts with label ಕೋಪ. Show all posts

Monday, July 11, 2022

ಮುಕ್ತಕಗಳು - ೨೬

ಹದ್ದಿರದ  ಹಯಗಳೊಲು ಪಂಚೇಂದ್ರಿ ಯಗಳಿರಲು

ಬಿದ್ದಿಹುದು ಕಡಿವಾಣ ಮನವೆಂಬ ಹಿಡಿತ |

ಬುದ್ಧಿಯೇ ಕಡಿವಾಣ ಹಿಡಿದೊಡೆಯನಲ್ಲವೇ

ಬುದ್ಧಿಗಿಷ್ಟರಿವ ತಾ ಪರಮಾತ್ಮನೆ  ||೧೨೬||


ಅನುದಿನವು ಸಿಗುತಿಹುದು ಹೊಸದೊಂದು ದಿನವೆಮಗೆ

ಚಣಚಣವು ಕರಗುತಿದೆ ದಕ್ಕಿರುವ ದಿನವು |

ಕನಸಿನಲಿ ಕಳೆಯದೆಲೆ ಅತಿಮುಖ್ಯ ಚಣಗಳನು

ಇನಿತಿನಿತು ಕಲಿಯೋಣ ಪರಮಾತ್ಮನೆ ||೧೨೭||


ಸೇವೆಯನು ಮಾಡುತ್ತ ದಾದಿಯರು ಬೆಂದಿಹರು

ಸಾವುನೋವುಗಳ ದಿನನಿತ್ಯ ನೋಡುತಲಿ |

ಜೀವಕ್ಕೆ ಸೋದರಿಯು ವೈದ್ಯರಿಗೆ ಬಲದಕೈ

ನೋವಿರದಿರಲವರಿಗೆ ಪರಮಾತ್ಮನೆ ||೧೨೮||


ಕರಿನೆರಳ ಮುಷ್ಟಿಯಲಿ ನಮ್ಮ ಭೂಲೋಕವಿರೆ

ಬಿರುಗಾಳಿ ಬೀಸಿ ದೇಹಗಳು ಧರೆಗುರುಳೆ

ಗಿರಿಧರನ ಕರುಣೆಯೇ ರಕ್ಷಣೆಗೆ ಸಾಧನವು

ಮೊರೆಯಿಡುವೆ ಕಾಪಾಡು ಪರಮಾತ್ಮನೆ ||೧೨೯||


ಉಕ್ಕಿ ಬಂದರೆ ಕೋಪ ಹಿತಬಯಸುವವರಲ್ಲಿ

ಸೊಕ್ಕು ತೋರದೆ ಬಾಯಿಮುಚ್ಚೆರಡು ಘಳಿಗೆ |

ಸಿಕ್ಕಿ ಬೀಳದಿರು ನೀ ತಾಮಸದ ಬಲೆಯಲ್ಲಿ

ನಕ್ಕುಬಿಡು ಗೆದ್ದೆ ನೀ ಪರಮಾತ್ಮನೆ ||೧೩೦||

ವಾರ್ಧಕ ಷಟ್ಪದಿ

ಯಶವನೇನೆಂಬೆ ಧನ ವಿದ್ಯೆ ಸಿರಿ ಸಂಪತ್ತೆ

ಪಶು ಭೂಮಿಯಧಿಕಾರ ಯೌವ್ವನದ ಬಲಗಳೇ

ದಶಕಂಠ ಹೊಂದಿದ್ದವೆಲ್ಲವೂ ಮಣ್ಣಾಗಿ ಪಶುವಂತೆ ಬಲಿಯಾದನು

ಯಶವ ಕ್ಷಣಿಕದ ಮಿಂಚಂತೆ ಕಂಡರೆಷ್ಟೋ

ನಶಿಸದಾ ಯಶವನ್ನು ಪಡೆದವರು ಕೆಲವರೇ

ವಶವಾಯ್ತು ಯಶವು ಗುಣದಲ್ಲಿ ನಿಂತವಗೆ ಹೆಸರಾಗುವನು ಕೊನೆಯವರೆಗೆ


ಕೋಪವೇ ಬಂದಿರಲಿ ಮನಸುಗಳು ಬೆಂದಿರಲಿ

ತಾಪದಾ ನುಡಿ ಬೇಡ  ಕಾತುರದ ನಡೆ ಬೇಡ

ಜೋಪಡಿಗೆ ಬೆಂಕಿಯನು ಹಚ್ಚಿಕೊಳ್ಳುವರಾರು ಮೊಗದ ಮೇಗಡೆ ಮಸಿಯನು

ಕೋಪವೇ ಸರ್ವನಾಶದ ಬೀಜ ಬಿತ್ತದಿರಿ ಬುವಿಯಲ್ಲಿ

ತಾಪತ್ರಯಗಳು ಬಾಳಿನಲಿ ಸಾಮಾನ್ಯ ವಿಧಿಯಾಟದಲಿ

ಕೋಪತಾಪಗಳಿಗಿದ್ದರಂಕುಶ ಬಾಳುಹಸನಾಗಿರಲು ಜೀವ ತಂಪು

Sunday, July 10, 2022

ಮುಕ್ತಕಗಳು - ೬

ಏಕೆ ರಕ್ಷಿಸಿ ವರಾಹನೆ ಕರಪಿಡಿದೆಯೆನ್ನ  

ಸಾಕಾಯ್ತು ಬವಣೆ ಮನುಜನಿಗೆ ಮನೆಯಾಗಿ |

ಬೇಕು ಬೇಡಗಳು ಬರೆ ಹಾಕುತಿವೆ ದಿನನಿತ್ಯ

ನೂಕಿಬಿಡು ಸಾಗರಕೆ ಪರಮಾತ್ಮನೆ ||೨೬||


ಇಂದು ರಮೆ ಒಲಿದಿರಲು ನಿಶಿತಮತಿಯಾಗಿರಲು

ಹೊಂದುವೆನು ಎಲ್ಲವನು ಎನಬೇಡ  ಬಂಧು |

ಮುಂದೆ ಸುಖ ಪಡೆಯಲಿಕೆ ದಾನವನು ಮಾಡಿದವ

ಮಂದಮತಿ ತಾನಲ್ಲ ಪರಮಾತ್ಮನೆ  ||೨೭||


ಚಿಂತೆಯೇ ಚಿಗುರುವುದು ಬೆಳೆದು ಮರವಾಗುವುದು

ಕುಂತಿರಲು ಸುಮ್ಮನೇ ಸೋಮಾರಿ ಗಂಡು |

ಬಂತು ಮಂಡೆಯಲಿ ಬರೆ ದೆವ್ವಗಳ ಕಾರ್ಖಾನೆ

ಕಂತೆ ಕೆಲಸವ ನೀಡು ಪರಮಾತ್ಮನೆ ||೨೮||


ದೇಹದಣುಗಳ ಹಿಂಪಡೆವೆ ಬದಲಿಸುತ ನಿತ್ಯ 

ಮೋಹಗಳ ಹಿಂಪಡೆದು ಮೋಕ್ಷವನು ನೀಡು |

ದಾಹಗಳ ಹಿಂಪಡೆದು ನಿನ್ನ ದಾಸನ ಮಾಡು

ದೇಹಿ ಎನ್ನುವೆ ತಂದೆ ಪರಮಾತ್ಮನೆ ||೨೯||


ಕೋಪವೇ ಬಂದಿರಲಿ ಮನಸುಗಳು ಬೆಂದಿರಲಿ

ತಾಪದಾ ನುಡಿ ಬೇಡ ಆತುರವು ಬೇಡ

ಜೋಪಡಿಗೆ ಬೆಂಕಿ ಹಚ್ಚುವುದಾವ ಲಾಭಕ್ಕೆ

ಆಪತ್ತು ಬೇಡೆಮಗೆ ಪರಮಾತ್ಮನೆ ||೩೦||