Showing posts with label ಸಾವು. Show all posts
Showing posts with label ಸಾವು. Show all posts

Sunday, December 25, 2022

ಮುಕ್ತಕಗಳು - ೮೪

ನಿದ್ದೆಯಲಿ ಕಂಡ ಕನಸಿನ ಹಿಂದೆ ಬೀಳದಿರು

ನಿದ್ದೆ ಕೆಡಿಸುವ ಕನಸು ನನಸಾಗಬೇಕು |

ಒದ್ದೆಯಾಗಿಸು ಕಂಗಳನು ಕನಸ ಬೆನ್ನಟ್ಟೆ

ನಿದ್ದೆ ಬರದಿರುವಂತೆ ~ ಪರಮಾತ್ಮನೆ ||೪೧೬||


ನಾನು ಮಾಡಿದೆಯೆನ್ನದಿರು, ಹಮ್ಮು ತೋರದಿರು

ನೀನಿಲ್ಲಿ ಮಾಡಿದ್ದು ಏನಿಲ್ಲ ಮರುಳೆ! |

ಆನದೇ, ಅವ ನೀಡಿದೇನನೂ ಬಳಸದೆಯೆ

ಏನುಮಾ ಡಿಡಬಲ್ಲೆ ~ ಪರಮಾತ್ಮನೆ ||೪೧೭||


ಧುಮ್ಮಿಕ್ಕುತಿಹ ಕೋರಿಕೆಗಳ ಧಾರೆಗೆ ಬೆದರಿ

ನಮ್ಮಿಂದ ಮರೆಯಾಗಿ ಕಲ್ಲಿನಲಿ ಅಡಗಿ |

ನಮ್ಮ ನಾಟಕಗಳನು ಕದ್ದು ನೋಡುತ್ತಿರುವೆ

ಹೊಮ್ಮಿ ಬುರುತಿದೆಯೆ ನಗು ಪರಮಾತ್ಮನೆ ||೪೧೮||


ಯಾವ ಚಣದಲಿ ಬಹುದೊ ಯಾವ ರೂಪದಿ ಬಹುದೊ

ಯಾವ ಎಡೆಯಲಿ ಬಹುದೊ ತಿಳಿಯದೀ ಮೃತ್ಯು |

ನಾವೆಯನು ಮುಳುಗಿಸುವುದಾವ ಅಲೆಯೋ ಕಾಣೆ

ಜೀವ ಗಾಳಿಯ ಸೊಡರು ~ ಪರಮಾತ್ಮನೆ ||೪೧೯||


ಯಮಭಟರು ಬಂದಾಗ ಪೊರೆಯುವರು ಯಾರಿಹರು,

ನಮ ಮಡದಿ ಮಕ್ಕಳೇ ಗೆಳೆಯರೇ ಯಾರು? |

ಯಮಪಾಶ ಬೀಸಿರಲು ಧನವು ಕಾಯುವುದೇನು?

ಜಮೆಯು ಕೈಜಾರುವುದು  ~ ಪರಮಾತ್ಮನೆ ||೪೨೦||



Saturday, September 17, 2022

ಮುಕ್ತಕಗಳು - ೬೯

ಹೊಸಬೆಳಕ ಚೆಲ್ಲುವನು ರವಿ ಜಗದ ತುಂಬೆಲ್ಲ

ಫಸಲು ಮೇಟಿಯು ಬೆವರ ಹರಿಸಿದೆಡೆ ಮಾತ್ರ |

ಪಸರಿಸುವ ದೇವ ಕೃಪೆಯನ್ನು ಮಕ್ಕಳಿಗೆಲ್ಲ

ಬಸಿ ಬೆವರ ಪಡೆ ವರವ ~ ಪರಮಾತ್ಮನೆ ||೩೪೧||


ಕಾಲಕ್ರಮೇಣ ಕೆಲ ಜನರ ಮರೆತರೆ ನಾವು

ಕಾಲವನ್ನೇ ಮರೆಸೊ ಸ್ನೇಹಗಳು ಕೆಲವು |

ಕೋಲವಿದು, ಜನುಮಜನುಮಗಳ ಅನುಬಂಧವಿದು

ಬೇಲಿ ಕಟ್ಟುತ ಪೊರೆಯೊ ~ ಪರಮಾತ್ಮನೆ ||೩೪೨||

ಕೋಲ = ಸೊಗಸು


ಮೂರು ದಿನಗಳ ಸಂತೆ ಮುಗಿದುಹೋಗುವ ಮುನ್ನ

ಕೋರು ಸರಕೆಲ್ಲವೂ ಬಿಕರಿಯಾಗಲಿಕೆ |

ಸೇರುವುದು ಹೊಸ ಸರಕು ಮುಂದಿನಾ ಸಂತೆಯಲಿ

ಮಾರಾಟ ಬಲುಕಷ್ಟ ~ ಪರಮಾತ್ಮನೆ ||೩೪೩||


ಸಾವೆಂದು ಬರುವುದೋ ಹೇಗೆ ಕರೆದೊಯ್ವುದೋ

ನಾವಿಂದು ಅರಿಯುವಾ ಸಾಧನವು ಇಲ್ಲ |

ಜೀವನದ ಕೊನೆವರೆಗೆ ಬದುಕುವಾ ರೀತಿಯನು

ನಾವು ನಿರ್ಧರಿಸೋಣ ~ ಪರಮಾತ್ಮನೆ ||೩೪೪||


ಕೃತಿಚೋರನಿವ ಭಾವನೆಗಳನೇ ಕದ್ದಿಹನು

ಅತಿ ಅಧಮನಿವನು ಬರಡಾದ ಮನದವನು |

ಮತಿಗೇಡಿಯಾಗಿಹನು ಹೊಟ್ಟೆ ತುಂಬಿದ ಚೋರ

ಹತಮಾಡು ಸಂತತಿಯ ~ ಪರಮಾತ್ಮನೆ ||೩೪೫||

Monday, July 11, 2022

ಮುಕ್ತಕಗಳು - ೨೨

ಪಿಡುಗು ಕಾಡಿದೆ ವಿಶ್ವದಾದ್ಯಂತ ಎಲ್ಲರನು

ಕುಡಿಕೆ ಹೊನ್ನು ಗಳಿಸುವ ಪಿಡುಗು ಕೆಲವರನು |

ಎಡೆಬಿಡದೆ ಬದುಕುಗಳ ಹೆಣಮಾಡಿ ಧನಗಳಿಸೆ

ತಡೆಯುವಾ ಗಂಡೆಲ್ಲಿ ಪರಮಾತ್ಮನೆ ||೧೦೬||


ಮೆರವಣಿಗೆ ಸಾಗುತಿದೆ ರಸ್ತೆಯಲಿ ಗಾಡಿಗಳ

ಪರಿವೆಯಿಲ್ಲದೆ ವಿಷಾನಿಲವ ಚೆಲ್ಲುತಲಿ

ಹೊರಟಿರುವುದೆಲ್ಲಿಗೆನೆ ಮರಳಿಬಾರದಕಡೆಗೆ

ನೆರೆಯಲ್ಲೆ ಸುಡುಗಾಡು ಪರಮಾತ್ಮನೆ ||೧೦೭||


ಪ್ರಾರ್ಥನೆಗೆ ಮೀರಿರುವುದೇನಾದರುಂಟೇನು

ಆರ್ತನಾ ಬೇಡಿಕೆಯಲಿದೆ ಪೂರ್ಣಶಕ್ತಿ  |

ಧೂರ್ತರಿಗೆ  ನಿಲುಕದದು ಮನದೆ ಕಲ್ಮಶವಿರೆ

ಪ್ರಾರ್ಥನೆಗೊಲಿಯುವೆ ನೀ ಪರಮಾತ್ಮನೆ ||೧೦೮||


ಹೊರಲು ಹೆಗಲುಗಳಿಲ್ಲ ಸುಡಲು ಕಟ್ಟಿಗೆಯಿಲ್ಲ

ಉರುಳುತಿಹ ದೇಹಗಳ ಹೂಳಲೆಡೆಯಿಲ್ಲ |

ಕಿರುಬಗಳು ಕದಿಯುತಿವೆ ದೇಹದಂಗಾಂಗಗಳ

ಸರಿದಾರಿ ತಪ್ಪಿಹೆವು ಪರಮಾತ್ಮನೆ ||೧೦೯||


ವೈರಾಣುವಾಗಿಹನು ಮನುಜನೇ ಭೂರಮೆಗೆ

ತೀರದಾಸೆಗಳಿಂದ ಘಾಸಿಗೊಳಿಸಿಹನು |

ವೈರಾಣು ಕಳಿಸಿಹಳು ದೋಷಿಗಳ ನಾಶಕ್ಕೆ

ಮಾರಕಾಸ್ತ್ರದ ಧಾಳಿ ಪರಮಾತ್ಮನೆ ||೧೧೦||

ಮುಕ್ತಕಗಳು - ೧೮

ಮೂವತ್ತಮೂರು ರೀತಿಯ ಶಕ್ತಿಗಳು ಜಗದಿ

ಮೂವತ್ತಮೂರು ದೇವತೆಗಳೆನೆ ತಪ್ಪೆ |

ಜೀವಿಗಳ ನಿರ್ವಹಿಸೊ ದೇವತೆಗಳಿವರೆಲ್ಲ

ದೇವರಿಗೆ ದೇವ ನೀ ಪರಮಾತ್ಮನೆ ||೮೬||


ಸಾವಿರದ ಮನೆಯಿಲ್ಲದಿರೆ ಸಾಯೆ ಭಯವೇಕೆ

ಸಾವು ನೀಡುವುದು ನಿವೃತ್ತಿ ಜಗದಿಂದ | 

ನೋವು ಕೆಲದಿನ ಮಾತ್ರ  ಜೊತೆ ನಂಟಿರುವವರಿಗೆ

ನೋವಿರದ ಸಾವಿರಲಿ ಪರಮಾತ್ಮನೆ ||೮೭||


ದ್ವೇಷ ಕೋಪಗಳೆನಲು ಬೆಂಕಿಯಾ ಜ್ವಾಲೆಗಳು

ವೇಷವನು ಧರಿಸಿ ಮೋಸವನು ಮಾಡಿಹವು  |       

ದ್ವೇಷ ಸುಡುತಿಹುದಲ್ಲ ನಮ್ಮದೇ ಕಾಯವನು

ದ್ವೇಷವನು ನಿಗ್ರಹಿಸು ಪರಮಾತ್ಮನೆ ||೮೮||


ನನ್ನೆದೆಯ ವೀಣೆಯನು ನುಡಿಸು ಬಾ ಚೆಲುವೆಯೇ

ನಿನ್ನೆದೆಯ ತಾಳಕ್ಕೆ ಕುಣಿಯುವೆನು ನಾನು |

ಚೆನ್ನ ಮೇಳೈಸಲೆಮ್ಮಯ ನಾದನಾಟ್ಯಗಳು

ಜೊನ್ನ ಸುರಿವುದೆದೆಯಲಿ ಪರಮಾತ್ಮನೆ ||೮೯||

 

ಪುಸ್ತಕವನೋದಲದು ಹಚ್ಚುವುದು ಹಣತೆಯನು

ಮಸ್ತಕದ ದೀಪವದು ಬಾಳಿಗೇ ಬೆಳಕು |

ವಿಸ್ತರಿಸಿ ಕೊಳ್ಳಲಿಕೆ ಜ್ಞಾನದಾ ಪರಿಧಿಯನು

ಪುಸ್ತಕವು ಬಹುಮುಖ್ಯ ~ ಪರಮಾತ್ಮನೆ ||೯೦||

Friday, April 24, 2020

ಅಗಲಿಕೆ



ಸಂಗ ತೊರೆದರೂ ನೀವು,
ಸಂಗ ಮರೆಯೆವು ನಾವು.

ಎಲ್ಲಿ ಹೋದಿರಿ ನೀವು,
ಇಲ್ಲೇ ಉಳಿದೆವು ನಾವು.
ನಾಳೆ ಬರುವೆ ಎಂದು,
ಹೇಳಿ ಕಣ್ಮರೆ ಇಂದು!


ಇಂಥ ಅವಸರ ಏಕೆ?
ಬಂಧು, ಮಿತ್ರರು ಸಾಕೇ?
ಮರೆತ ಮಾತುಗಳುಂಟು,
ಮೊಗ್ಗು ಭಾವಗಳುಂಟು.

ಸಾಲು ನಿಂತೆವು ನಾವು,
ಹಾಲು, ಹಣ್ಣಿಗೆ ಎಂದು.
ಸಾಲು ನಿಂತಿರಿ ನೀವು,
ಕಾಲ ದೇವನ ಮುಂದು.

ಏಕೆ ಬಿದ್ದಿರಿ ನೀವು,
ಮಾರಿ ದುಷ್ಟೆಯ ಕಣ್ಗೆ?
ದುಷ್ಟ, ದುರುಳರು ಹೇಗೆ,
ದೌಡು ಸಿಕ್ಕದೆ ಕೈಗೆ?

ಖಾಲಿ ರಸ್ತೆಗಳಿಲ್ಲಿ,
ಕಾಲ ನಿಂತಿದೆ ಇಲ್ಲಿ,
ಕಾಲು ಇಟ್ಟರೆ ಹೊರೆಗೆ,
ಲಾಠಿ ದೂಡಿತು ಒಳಗೆ!

ಸದ್ದು ಇಲ್ಲದೆ ನೀವು,
ಕಾಲು ಕಿತ್ತಿರಿ ಹೇಗೆ?
ಲೋಕ ತೊರೆದಿರಿನೀವು,
ಲಾಠಿ ತಡೆಯದ ಹಾಗೆ!

ಏಕೆ ಅಗಲಿಕೆ ನಮಗೆ?
ಯಾವ ಸಲ್ಲದ ನೆವಕೆ?
ನಾವು ಮಾಡದ ಪಾಪ,
ನೀವು ಮಾಡಿದುದುಂಟೆ?









Thursday, April 23, 2020

ಬೇಡ ಇಂಥ ಸಾವು!




ರಕ್ಕಸಿ ತರುವ ಅನಾಥ ಸಾವು,
ವೈರಿಗೂ ಬೇಡ ಇಂಥ ನೋವು!

ಸುಳಿವು ಕೊಡದೆ, ಕೈಯ ಹಿಡಿದು,
ಎದೆಯ ಗೂಡು ಸೇರಿದವಳು,
ಮಧುರ ಭಾವ ಅರಿಯದವಳು,
ಬಕಾಸುರನ ಹಸಿವಿನವಳು!

ಎದೆಯ ಹತ್ತಿ ಕುಳಿತಳವಳು,
ಶ್ವಾಸಕೋಶ ಬಗೆದಳು!
ಕತ್ತು ಹಿಸುಕಿ ಕೊಂದಳು,
ಮತ್ತೊಬ್ಬರ  ಕೈಯ ಹಿಡಿದಳು!

ಹೊರಲು ಹೆಗಲು ಸಾಲದೇ,
ಹೂಳಲು ಎಡೆಯೇ ಇಲ್ಲದೇ,
ಸುಡಲು ಸೌದೆ ಎಲ್ಲಿದೆ?
ದೇಹಗಳುರುಳಿವೆ ನಿಲ್ಲದೇ!

ಕೊನೆಗೂ ಇಲ್ಲ ದರ್ಶನವು,
ಪ್ರೀತಿಪಾತ್ರ ಬಂಧುಗಳಿಗೆ.
ಸಂಸ್ಕಾರ ಇಲ್ಲ ದೇಹಕೆ,
ಅನಾಥವಾಗಿ ಮಸಣಕೆ.

ಆಸ್ತಿ ಸಿಕ್ಕರೇನು ಬಂತು,
ಸಿಗಲೇ ಇಲ್ಲ ಅಸ್ತಿಯು.
ಕನಸಿನ ಕಥೆಯ ಹಾಗೆ,
ವ್ಯಕ್ತಿ ಮಂಗ ಮಾಯವು!

ಯಾರಿಗೂ ಬೇಡ ಇಂಥ ಗತಿ,
ಬಹುಸಂಕಷ್ಟದ ದುರ್ಗತಿ.
ಬರುವುದೆಂದು ಹತೋಟಿಗೆ?
ಕಾಯುತಿಹೆವು ಬಿಡುಗಡೆಗೆ!