ಮುರಳಿ ಮಾಧವನೆ ಕರುಣ ಸಾಗರನೆ ಚರಣ ತೋರಿಸೆನೆಗೇ|
ವರದ ವೇದಗಳ ಅಸುರ ಬಂಧನವ ಬಿಡಿಸೊ ಮೀನತನುನೀ|
ಸುರರ ಜೋಳಿಗೆಗೆ ಕೊಡಲು ಜೀವಸುಧೆ ಪಡೆದೆ ಕೂರ್ಮಜನುಮಾ|
ಪೊರೆದೆ ಭೂಮಿಯನು ಶರಧಿಯಾಳದಲಿ ಮೆರೆದೆ ಸೂಕರಮುಖಾ|
ಪಡೆದೆ ಸಿಂಹನರ ಜನುಮ ರಕ್ಕಸನ ಉದರ ಸೀಳಿಬಿಡಲೂ|
ನಡೆದೆ ಮೂರಡಿಯ ಬಲಿಯ ಭೂತಳಕೆ ತುಳಿದು ನೂಕಿಬಿಡಲೂ|
ಬಿಡದೆ ಭೂಸುರರ ತರಿದು ಕೊಲ್ಲುತಲಿ ಪರಶು ಬೀಸುತಿರಲೂ|
ನಡೆದೆ ಕಾಡಿನಲಿ ಪಿತನ ಮಾತುಗಳ ಗೌರವ ಕಾಪಿಡುತಲೀ|
ನರರ ಭಾಗ್ಯದಲಿ ಬರೆದೆ ಗೀತೆಯನು ಮೆರೆದೆ ವೇದಗಳನೂ|
ಪರರ ಕಷ್ಟಗಳ ಅಳಿಸಿ ದಮ್ಮವನು ಮೆರೆದೆ ಬದ್ಧತೆಯಲೀ|
ಅರಿವು ಬಿಟ್ಟವರ ತರಿದು ಅಟ್ಟಲಿಕೆ ಯುಗದ ಕಲ್ಕಿಪುರುಷಾ|
ಗುರುವೆ ಉದ್ಧರಿಸು ಕೊಡುತ ಮೋಕ್ಷವನು ಮನುಜ ಜನ್ಮಗಳಿಗೇ|