Monday, February 24, 2020

ಮನದ ಅಂಗಳದಲ್ಲಿ

ನನ್ನ ಮನದ ಅಂಗಳದಲ್ಲಿ,
ದಿನಕೊಂದು ಹೊಸತು ರಂಗವಲ್ಲಿ.

ಕಹಿಯ ಕಸವನು ಗುಡಿಸಿ,
ನಗೆಯ ನೀರನು ಚೆಲ್ಲಿ, ನಲ್ಲೆ
ಬಿಡಿಸುವಳು ಚೆಲುವ ರಂಗವಲ್ಲಿ,
ದಿನವೂ ಬಣ್ಣದ ಕನಸು ಅಲ್ಲಿ.

ನಡೆಯುತಿದೆ ಪರಿಪಾಠ ದಿನದಿನವೂ ಪ್ರತಿದಿನವೂ,
ತಪ್ಪಿಲ್ಲ, ತಡೆಯಿಲ್ಲ, ಮರೆವಂತು ಇಲ್ಲವೇ ಇಲ್ಲ,
ಬೆಟ್ಟದ ಮೇಲೆ ಬೀಸುವ ಗಾಳಿಯಂತೆ,
ಮುಂಜಾನೆಯ ಮೂಡಣದ ಸೂರ್ಯನಂತೆ.

ಅಂದೊಂದು ದಿನ, ಗುಡುಗಿತ್ತು, ಸಿಡಿಲಿತ್ತು,
ಧೋ ಎಂದು ಸುರಿದಿತ್ತು ದಿನವೆಲ್ಲ.
ಚದುರಿಹೋಗಿತ್ತು ಮುಂಜಾನೆಯ ರಂಗವಲ್ಲಿ,
ಕರಿಗಿಹೋಗಿತ್ತು ಕನಸು, ಮಳೆಯ ನೀರಿನಲ್ಲಿ.

ಮಳೆ ನಿಂತಾಯಿತು, ದಿನ ಹತ್ತಾಯಿತು,
ಬರಲಿಲ್ಲ ಅವಳು ಹಾಕಲು ನಗುವ ರಂಗವಲ್ಲಿ.
ನಗುವಿಲ್ಲ, ನಲಿವಿಲ್ಲ, ತಂಪಿನ ಇಂಪಿಲ್ಲ,
ಬರಡು ಬರಡಾಯಿತು, ಇನ್ನು ಮನಕೆ ಮುದವೆಲ್ಲಿ?

ಹೀಗೇಕೆ ಮಾಡಿದಳು? ಬರಲಿಲ್ಲವೇಕವಳು?
ತಲೆಯೆತ್ತಿ ನೋಡಿದರೆ ಕಾಣಿಸಿತು,
ಮುಚ್ಚಿದ್ದ ಅಂಗಳದ ಬಾಗಿಲು,
ಅದಕೆ ನಾನೇ ಜಡಿದಿದ್ದ ಬೀಗಗಳು!

ಹೊಸಬೆಳಕು

ಉದಯಿಸಿದೆ ಹೊಸಬೆಳಕು,
ಹಳೆಯ ಕತ್ತಲೆಯ ಸೀಳಿ ಬಂದು.
ಮೂಡುತಿವೆ ಕನಸುಗಳು,
ಹೊಸ ಬೆಳಕಿನಲಿ ಮಿಂದು ಇಂದು.

ಮನಮನಗಳ ನಡುವೆ ಗೋಡೆ ಏಕೆ?
ಕೂಪಮಂಡೂಕಗಳ ಗೊಡವೆ ಬೇಕೆ?
ಬರಲಿ, ಹಿತದ ತಂಪನೆಯ ತಂಗಾಳಿ.
ಇರಲಿ, ಜ್ಞಾನದಾಹದ ಬೆಂಕಿಬಿರುಗಾಳಿ.

ಒಡೆದ ವಿಶ್ವದ ಬಿರುಕುಗಳ,
ಮುಚ್ಚಿ ಮರೆಸಲಿ ಸ್ನೇಹದಂಟು.
ಕದಡಿ ಮುದುಡಿದ ಮನಗಳು,
ಚಿಗುರಲಿ, ಸುಖವು ಮುಂದೆ ಉಂಟು.

ಕಾಡದಿರಲಿ ಹಳೆಯ ನೋವುಗಳು,
ಮಧುರ ನೆನಪುಗಳು ಮಾಸದಿರಲಿ.
ತಳಿರು ತೋರಣಗಳು ಇರಲಿ ನಿತ್ಯ,
ಸಾಗುತಿರಲಿ ಕಾಯಕ, ಅದುವೆ ಸತ್ಯ!

Friday, August 31, 2012

ಅಂದು - ಇಂದು

ಆಟ, ಊಟ, ಓಟ, ಮರ,
ಅಂದಿನ ಒಂದನೆಯ ತರಗತಿಯ ಪಾಠ.
ಆಟ, ಊಟ, ನೋಟ, ಸುತ್ತಾಟ ಎಲ್ಲ,
ಮಾಲುಗಳಲಿ ಇಂದಿನ ಮಕ್ಕಳ ಪರಿಪಾಠ!

ಬಾಳೆಯ ತೋಟದ ಪಕ್ಕದ ಕಾಡೊಳು,
ಅಂದಿನ ಎರಡನೆಯ ತರಗತಿಯ ಪದ್ಯ.
ತೋಟವ ಕಾಣೆನು, ಕಾಡನು ಕಾಣೆನು,
ಬಾಳೆಹಣ್ಣುಗಳಾದರೂ ಕಾಣುತಿವೆ ಇಂದು, ಸಧ್ಯ!

ಬಣ್ಣದ ತಗಡಿನ ತುತ್ತೂರಿ,
ಅಂದು ಊದಿ ಕುಣಿಯುತ್ತಿದ್ದನು ಕಸ್ತೂರಿ,
ಚಿಣ್ಣರ ಪಾಲಿಗೆ ಬಣ್ಣದ ಲೋಕವು,
ಇಂದಿನ ಮೂರ್ಖರ ಪೆಟ್ಟಿಗೆಯ ದಿನಚರಿ!

ಗುಡಿಸುವ ಕೆಲಸ


ಕಾಸು ಬೇಕಾದಾಗ, ಕೈಚಾಚಿದೆ ಅಪ್ಪನ ಮುಂದೆ.
ನಿನ್ನ ಬುದ್ಧಿಯ ನಂಬು, ನಿನ್ನ ರಟ್ಟೆಯ ನಂಬು,
ಅಪ್ಪ ಎಂದರು, ಕಾಣುವುದು ಕಾಸು ನಿನ್ನ ಕಿಸೆಯಲ್ಲೇ!

ಕಣ್ಣೀರು ಜಿನುಗಿದಾಗ, ಹುಡುಕಿದೆ ಆಸೆರೆಯ ಹೆಗಲಿಗಾಗಿ.
ಎಂಥ ನಷ್ಟವೇ ಇರಲಿ, ಎಂಥ ಕಷ್ಟವೇ ಬರಲಿ, ಗೆಳೆಯನೆಂದ,
ನಿನ್ನ ಜೀವನವ ರೂಪಿಸುವ ಶಿಲ್ಪಿ ನೀನೆ ಎಂದ!

ದಾರಿ ಕಾಣದಾದಾಗ, ಹುಡುಕಿದೆ ಕಾಣದ ದೇವರಿಗಾಗಿ.
ಹುಡುಕಿ ಅಲೆಯುವೆಯೇಕೆ ಹುಚ್ಚ, ಗುರುಗಳೆಂದರು,
ದೇವನಿರುವನು ನಿನ್ನಲ್ಲ್ಲೇ, ಕಣ್ಣು ಮುಚ್ಚಿದರೆ ಕಾಣುವನು ಕುಳಿತಲ್ಲೇ!

ಹೇ ದೇವ, ನೀ ಎನಗೆ ಎಲ್ಲವನೂ ಕೊಟ್ಟೆ,
ಕಸವನೂ ಕೊಟ್ಟೆ, ಕಸಬರಿಕೆಯನೂ ಕೊಟ್ಟೆ,
ಗುಡಿಸುವ ಕೆಲಸ ಮಾತ್ರ ನನಗೆ ಬಿಟ್ಟೆ!

ಕನಸಿನ ಆಸೆ

ನಿನ್ನ ನೆನಪಿನ ಲೋಕದಲ್ಲಿ,
ಹೂವು, ಹಣ್ಣುಗಳ ತೋಟದಲ್ಲಿ,

ಕಣ್ಣು ಮುಚ್ಚಿ, ಮೈಯ ಮರೆತೆ,
ಕನಸಿಗಿಲ್ಲ ಏನೂ ಕೊರತೆ,

ಕಣ್ಣು ಬಿಟ್ಟರೆ ಸುತ್ತ ಕಾನು,
ದಟ್ಟ ಅಡವಿಯಲಿ ಒಂಟಿ ನಾನು,

ಹುಲಿ, ಕರಡಿಗಳ ಕಾಟವಿಲ್ಲಿ,
ಕಲ್ಲು ಮುಳ್ಳಿನ ದಾರಿಯಿಲ್ಲಿ,

ಕಣ್ಣು ಮುಚ್ಚಿದೆ ನೋವಿನಿಂದ,
ಮತ್ತೆ ಕನಸಿನ ಆಸೆಯಿಂದ!

ಕತ್ತಲ ಪಯಣ

ತಾತ ಕೊಟ್ಟ ಹಣತೆ ಕೈಯಲಿಹುದು,
ಎಣ್ಣೆ, ಬತ್ತಿಗಳಿಲ್ಲದೆ ಕತ್ತಲಿಹುದು.
ಅಪ್ಪ ಕೊಟ್ಟ ಗಂಟು ತಲೆಯ ಮೇಲೆ,
ಅದ ಮಕ್ಕಳಿಗೊಪ್ಪಿಸುವ ಭಾರ ಹೆಗಲ ಮೇಲೆ.

ಕತ್ತಲಲಿ ಎಡವೆಡವಿ ಬಿದ್ದರೂ ಕೂಡ,
ಹಣತೆಯ ಬೆಳಕಿದೆಯೆಂಬ ಭ್ರಮೆಯಿಹುದು ನೋಡ.
ಹೊಸ ಬೆಳಕ ಕಿರಣಗಳ ಸಹಿಸಲಾರದು ಕಣ್ಣು,
ರೂಢಿಯಾಗಿದೆ ನಮಗೆ ಕತ್ತಲಿನ ಹುಣ್ಣು.

ಕತ್ತಲಲ್ಲೇ ನಡೆದು, ಕತ್ತಲಲ್ಲೇ ಬೆಳೆದು,
ಎಡವಿದ ಕಾರಣಕೆ ಅವರಿವರ ಹಳಿದು,
ಕತ್ತಲಿನ ನೆರಳಲ್ಲೇ ಎಲ್ಲವನು ಹುಡುಕಿ,
ಸಿಗದಿದ್ದಕ್ಕೆ ಬೇಗ ಎಲ್ಲರಲೂ ಸಿಡುಕಿ,

ಸವೆದಿದ್ದೇವೆ ನಡೆನಡೆದು ಜೀವಮಾನದ ತನಕ,
ಹಣತೆ, ಗಂಟುಗಳ ಮಕ್ಕಳಿಗೊಪ್ಪಿಸುವ ತವಕ.
ಗಂಟೊಮ್ಮೆ ಬಿಚ್ಚಿದ್ದರೆ ತಿಳಿಯುತ್ತಿತ್ತೇನೋ,
ಎಣ್ಣೆ, ಬತ್ತಿಗಳ ಭರಣಿ ಕಾಣುತಿತ್ತೇನೋ!

ಬೇರೆ ದಾರಿ ಎಲ್ಲಿದೆ?

ಕಣ್ಣು ಅರಳಿದೆ, ಕನಸು ಕಂಡಿದೆ,
ಒಲವ ಸೂಸುತ ಮುಗುಳುನಕ್ಕಿದೆ,
ಏನು ತಾನೆ ಮಾಡಬಲ್ಲದು? ಅಳಿಸಲಾಗದು ನಿನ್ನ ಬಿಂಬ!

ಕಿವಿಯು ನಿಮಿರಿದೆ, ಕಾದು ಕುಳಿತಿದೆ
ಮತ್ತೆ ಮತ್ತಲಿ ಮುಳುಗಲು,
ಏನು ತಾನೆ ಮಾಡಬಲ್ಲದು? ನಿನ್ನ ಸ್ವರದ ಆಸೆ ತುಂಬ!

ಮೂಗು ಬೇಡಿದೆ ಮತ್ತೆ ಮತ್ತೆ,
ನಿನ್ನ ಉಸುರಿನ ಪರಿಮಳ,
ಏನು ತಾನೆ ಮಾಡಬಲ್ಲದು? ಹುಚ್ಚು ಹಿಡಿದ ತುಂಟ ಹುಂಬ!

ತುಟಿಯು ಬೇಡಿದೆ ಮಧುರ ಸ್ಪರ್ಷವ,
ಮತ್ತು ಹಿಡಿಸುವ ಓಷ್ಠಲಾಘವ,
ಏನು ತಾನೆ ಮಾಡಬಲ್ಲದು? ರುಚಿಯ ಕಂಡ ಕಳ್ಳ ಬೆಕ್ಕು!

ನನ್ನ ಹೃದಯವು ಕುಣಿದು ಹಾಡಿದೆ,
ಮಧುರ ತಾಳದಿ ಒಲವ ರಾಗದಿ,
ಏನು ತಾನೆ ಮಾಡಬಲ್ಲದು? ನೀನೆ ಇರಲು ಅದರ ತುಂಬ!

ರಾಜಮಾರ್ಗವೊ, ಅಡ್ಡದಾರಿಯೊ,
ಕಲ್ಲುಮುಳ್ಳಿನ ಕಠಿಣ ಪಥವೊ,
ನಿನ್ನ ಕಡೆಗೆ ನನ್ನ ನಡಿಗೆ, ಬೇರೆ ದಾರಿ ಎಲ್ಲಿದೆ?